DISCLIMER: ಈ ಲೇಖನದಲ್ಲಿ ಬರುವ ಅನೇಕ ಪಾತ್ರಗಳು ಹಾಗು ಸನ್ನಿವೇಶಗಳು ಕಾಲ್ಪನಿಕ. ಒಂದುವೇಳೆ ಅವು ಯಾವುದೇ ಮೃತ ಅಥವಾ ಜೀವಂತ ವ್ಯಕ್ತಿಗಳನ್ನು ಹೋಲುತ್ತಿದ್ದರೆ ಅದು ಕಾಕತಾಳೀಯ.
ಹಳೆಯ ನೆನಪುಗಳ ಜಾಡಿನಲ್ಲಿ ಅಲೆದಾಡಿ ಬರುವುದು ಎಷ್ಟೋ ಬಾರಿ ಚೇತೋಹಾರಿ, ಹಾಗೆಯೇ ಒಮ್ಮೊಮ್ಮೆ ತಿಳಿಯಾದ ಎದೆಗೊಳವ ರಾಡಿಗೊಳಿಸುವ ಹೆಮ್ಮಾರಿ.
ಹೀಗೊಂದು ಸವಿನೆನಪು ನನ್ನ ಪಟ್ಟಣದ ಮನೆ. “ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಅಂತಾರೆ. ನಾನು ಹುಟ್ಟಿದ ಊರು, ನಾನು ಹುಟ್ಟಿ ಬೆಳೆದ ಮನೆ ನನ್ನೊಲುಮೆಗೆ ಪಾತ್ರವೆಂದುಕೊಳ್ಳುವುದು ನನ್ನ ನಿಹಿತ ಸ್ವಾರ್ಥಗಳ ಪಟ್ಟಿಯಲ್ಲಿ ಮೊದಲನೆಯದು. ಇದರ ಬಗ್ಗೆ ಹೇಳುವಾಗ ಹೇಗೆ ಹೇಗೋ ಆತಾತುರವಾಗಿ ಹೇಳಲಾಗುವುದಿಲ್ಲ. ಮಗು ತನ್ನ ಸುತ್ತ ಆಟಿಕೆಗಳನ್ನು ಹರಡಿಕೊಂಡು ಸಂಭ್ರಮಿಸುವ ಹಾಗೆ ಎಳೆ ಎಳೆಯಾಗಿ ನಿಮ್ಮ ಮುಂದೆ ಬಿಡಿಸಿಡುತ್ತಾ ನಾನೂ ಸವಿದು ಮೆಲುಕುಹಾಕಬೇಕು.
ಪಟ್ಟಣವೆಂದರೆ ಯಾವೂರೆಂದುಕೊಂಡಿರೀ? ಅದೇ ಶ್ರೀರಂಗಪಟ್ಟಣ..ಟಿಪ್ಪೂ ಸುಲ್ತಾನ್, ಐತಿಹಾಸಿಕ ನಗರಿ, ಮಣ್ಣು ಮಸಿ….ನನ್ನ ಪಾಲಿಗೆ …ಉಹೂಂ….ಅದೊಂದು ಅಜೀವ ಜೀವಸೆಲೆ. ಆ ಊರು ತಲುಪುತ್ತಲೇ ಮನಸ್ಸು ಗರಿಗೆದರುತ್ತದೆ. ಊರ ಧೂಳು, ಬಿಸಿ ಮಿಶ್ರಿತ ಬಿಸುಪು ತಂಗಾಳಿ (!) ಬಾಚಿ ತಬ್ಬಿ ತಲೆ ನೇವರಿಸುತ್ತದೆ…ಬೀದಿಗಳುದ್ದಕ್ಕೂ ಹಳೇ ನೆನಪುಗಳು ಮೆರವಣಿಗೆ ಹೊರಟಾಗ ಮನಸ್ಸೇಕೋ ಸುಖಾಸುಮ್ಮನೆ ಉತ್ಸವ ಮೂರ್ತಿ…ಈಗಿನಂತೆ ಆಗ ಆಟೋ ಇರಲಿಲ್ಲ..ಕುದುರೆಗಾಡಿ, ಕಮಾನು, ಕುಚ್ಚು ಟೇಪು, ಮುಂದೆ ಸುರಿದ ಹುಲ್ಲು, ಕುದುರೆ ಲದ್ದಿಯ ವಾಸನೆ, ನಮ್ಮ ಗಾಡಿಗೇ ಬನ್ನಿ ಎಂದು ನನ್ನಂಥಾ ಕಿಡಿಗೇಡಿ ಮಕ್ಕಳ ಕೈಗೆ ಚಾಟಿ ಕೊಟ್ಟು (ಗಾಡಿ ಏರಿದ ನಂತರ ಕಸಿದು) ಮನವೊಲಿಸುವ ಜಟಕಾ ಸಾಬಣ್ಣ. ಗಾಡಿ ಹತ್ತಿ ಕುಳಿತು ಕಣ್ಣುಮುಚ್ಚಿದರೆ ಮನಸ್ಸು ಕಾಮನಬಿಲ್ಲಂತೆ ಬಣ್ಣ ಬಣ್ಣ. ಕೋಟೆ ಬಾಗಿಲು ದಾಟುತ್ತಿದ್ದಂತೆ ನನ್ನ ಕುರುಡು ಅಂದಾಜು ಬಾಲ ಬಿಚ್ಚುತ್ತಿತ್ತು. ಟೊಕ್ ಟೊಕ್ ಟೊಕ್…ಲಾಳ ಬಡಿಸಿಕೊಂಡ ಕುದುರೆಯ ಲಯಬದ್ಧ ಚಲನೆಯಲ್ಲಿ ಈಗ ಫೌಂಟನ್ ದಾಟಿದ್ದೇವೆ, ಮುಂದಕ್ಕೆ ಮೂರು ಮತ್ತೊಂದು ಅಂಕಣವಿರುವ ನಮ್ಮೂರ ರಾಜಮಾರ್ಗ. ಆಹಾ…ಚುರ್ ಅನ್ನುತ್ತೆ…ಕಲ್ಲ ಮೇಲೆ ಗಾಡಿ ಚಕ್ರ ಹತ್ತಿದ್ದಕ್ಕೆ ಕುದುರೆಗೆ ಚಾಟಿ ಪ್ರಹಾರ….ಹೆಹ್ಹೆಯ್..ಬಾಜು ಬಾಜು…ಆ ಕಿರು ಓಣಿಯಂಥಾ ರಾಜಬೀದಿಯಲ್ಲೇ ಎಡಕ್ಕೆ ಮಾಯಣ್ಣ ಡಾಕ್ಟ್ರ ಶಾಪು, ಪಟ್ಟಾಭಿ ರಾಮ ಮಂದಿರ, ಬಲಕ್ಕೆ ಗಣಪತಿ ಅಂಗಡಿ, ವೆಂಕಣ್ಣನ ಅಂಗಡಿ, ಅಲ್ಲೀ..ಅಲ್ಲೇ ಮುಂದಕ್ಕೆ ಮಹಡಿ ಮೇಲೆ ನನ್ನಪ್ಪನ ಲಾಯರ್ ಆಫೀಸು…ಹಾಗೇ ಬಂದು ಎಡಕ್ಕೆ ಅಂಬಾಭವನ್ ಹೋಟ್ಲು ಮತ್ತು ಬಲಕ್ಕೆ ಉಶಾ ಡಾಕ್ಟ್ರ ಶಾಪು….ಹಾಂ….ಹೋಲ್ಡ್ ಆನ್..ಇಲ್ಲೇ ನಾವು ಬಲಕ್ಕೆ ತಿರುಗಬೇಕು…ಬಲ ಮೂಲೆಗೆ ಉಶಾ ಡಾಕ್ಟ್ರ ಶಾಪಾದರೆ ಎಡ ಮೂಲೆಗೆ ಪೇಟೆ ನಾರಾಯಣಸ್ವಾಮಿ ಗುಡಿ…ಈಗ ನಾನು ಕಣ್ಣು ಬಿಡಲೇ ಬೇಕಲ್ಲಾ..ತಲೆ ತಗ್ಗಿಸಿದ ಹಾಗೆ ಮಾಡಿ, ಅರೆಗಣ್ಣು ಮುಚ್ಚಿ, ಕೈಜೋಡಿಸಿ ನಮಸ್ಕಾರ ಮಾಡೊ ಹಾಗೆ ಮಾಡಿದರೂ ಕಳ್ಳಗಣ್ಣು ಅಲ್ಲಿನ ಪ್ರಸಾದದ ಆಸೆಗೆ (ಇದರ ಐತಿಹ್ಯ ಆಮೇಲೆ ಹೇಳ್ತೀನಿ) ದೇವಸ್ಥಾನ ಬಾಗಿಲು ತೆಗೆದಿದ್ಯೊ ಇಲ್ವೊ ಅನ್ನೊದನ್ನೇ ಗಮನಿಸ್ತಿದ್ದಿದ್ದು! ದೊಡ್ಡ ಪ್ರಾಂಗಣದ ಈ ಕಡೆ ಮಧ್ಯಕ್ಕೊಂದು ಬಾವಿಕಟ್ಟೆ. ಸಧ್ಯ! ಅದರ ಆಚೀಚೆ ಬದಿ ಮುಚ್ಚಿಲ್ಲ ಅನ್ನೊ ಅಂಶ ಗೋಚರವಾದರೆ ಸಾಕು..ಅರ್ಧ ಲೋಕ ಗೆದ್ದ ಸಮಾಧಾನ..ಅಮ್ಮನ ಕಣ್ಣು ತಪ್ಪಿಸಿ ಮೋಟುಗೋಡೆ ಹಾರಲು ನನಗಿದ್ದ ಕಳ್ಳಗಿಂಡಿಯದು ಎನ್ನುವ ನಗ್ನ ಸತ್ಯ ನಿಮಗೆ ಮಾತ್ರ ಈಗ ನಾನು ಹೇಳುತ್ತಿರುವುದು. ಅಲ್ಲೇ ಆ ಬದಿಗೆ ಇಡ್ಲಿ ಅತ್ತೆ ಮನೆ, ಈ ಬದಿಗೆ ಜಯಾ ಅತ್ತೆ ಮನೆ (ಆಂಟಿ ಎನ್ನುವುದು “ಆಂಟಿಬಯೋಟಿಕ್” ಗೆ ಮಾತ್ರ ಸೀಮಿತವಾಗಿತ್ತು ನಮ್ಮೂರಲ್ಲಿ)..ಹಾಗೇ ಒಂದು ಮಾರು ಮುಂದೆ ಬಂದರೆ ಎಡಕ್ಕೆ ಎರಡು ಜಗುಲಿ ಕಾಣ್ತಿದೆಯಲ್ಲಾ…ತಗ್ಗಿನ ಮನೆ ಜಗುಲಿಯಲ್ಲ…ಅದು ಕಾಶೀರಾಮು ಮಾವನ ಮನೆ, ಅದಾದಮೇಲೆ ಬಲಕ್ಕೆ ಸೀತಾ-ಸರೋಜ ಮನೆ..ಎಡಕ್ಕೆ ನೋಡಿ..ಅದೇ..ಕರೆಕ್ಟ್..ನೀಲಿ ಬಾಗಿಲು..ಜಗುಲಿಗೆ ಅಂಟಿಕೊಂಡಿರೋ ಪುಟ್ಟ ಪುಟ್ಟ ಕಿಟಕಿ..ಹೊರಗೋಡೆಯ ಮೇಲೆ ಅಣ್ಣನ (ಅಪ್ಪನ್ನ ಅಣ್ಣ ಅಂತಲೇ ನಾನು ಕರೆಯೋದು) ಬೋರ್ಡು, ಬಾಗಿಲ ಹೊರತುದಿ ಗೋಡೆಗೆ ಯಾವತ್ತೂ ಸ್ವರ ಹೊರಡಿಸದ ಕರೆಗಂಟೆಯ ಗುಂಡಿ (ನನ್ನ ಬಾಲಲೀಲೆಗೆ ಬಲಿಪಶುವಾದ್ದು).
ಒಳಗೆ ಕಾಲಿಡುತ್ತಿರುವಂತೆಯೇ ಸ್ವಾಗತಿಸೋದು ವರಾಂಡವಲ್ಲದಂಥಾ ವರಾಂಡದ ಬೆಣಚುಕಲ್ಲು ನೆಲದ ತಂಪು. ಎಡಕ್ಕೆ ಅಣ್ಣನ ಆಫೀಸ್ ರೂಮು, ಬಲಕ್ಕೆ ದೊಡ್ಡಮ್ಮನ ಮಿಷಿನ್ ರೂಮು (ಟೈಲರಿಂಗ್ ಮೆಷೀನ್ ಅಲ್ಲಿತ್ತು). ಹಾಗೆ ಮುಂದಕ್ಕೆ ಎಡವಿ ಮುಗ್ಗರಿಸುವಷ್ಟೆತ್ತರದ ಹೊಸಿಲು ದಾಟುತ್ತಿದ್ದಂತೆ ಚಿಕ್ಕ ಹಾಲು, ಅದರ ಮುಂದಿನದ್ದೇ ದೊಡ್ಡ ಹಾಲು. ಚಿಕ್ಕ ಹಾಲು ಮತ್ತು ದೊಡ್ಡ ಹಾಲನ್ನು ಬೇರ್ಪಡಿಸಿದ್ದುದು ದೊಡ್ಡ ದೊಡ್ಡ ಆಚೀಚೆ ಬದಿಯ ಡೈಮಂಡ್ ಶೇಪಿನ ಮನೆ ಮನೆ ಹೊಂದಿದ್ದ ಕಿಟಕಿಗಳು ಮತ್ತು ಅದಕ್ಕೆ ಕಟ್ಟಿದ್ದ ರುಕ್ಮಿಣೀ ಅತ್ತೆ ಹೆಣೆದಿದ್ದ ಜೋಡಿ-ಗಿಣಿ ತೋರಣ. ಈ ಕಟಾಂಜನಕ್ಕೇ ಒಂದು ಬಲವಾದ ತಂತಿ ಬಿಗಿದು ಇನ್ನೊಂದು ಕೊನೆಯನ್ನು ಫ್ರೀ ಬಿಟ್ಟು ಮನೆಗೆ ಬರುವ ಪತ್ರಗಳನ್ನೆಲ್ಲಾ ಅದರಲ್ಲಿ ಸಿಕ್ಕಿಸಿಡುತ್ತಿದ್ದರು. ಅಲ್ಲೇ ನಾನು ಪತ್ರ ಲೇಖನ, ಒಕ್ಕಣೆ, ಸಂಬೋಧನೆ ಮುಂತಾದುವುಗಳ ಪ್ರಥಮ ಪಾಠ ಕಲಿತದ್ದು. ಅಣ್ಣ ಒಂದು ಹಳೇ ಕಾಲದ ತೊಟ್ಟಿ ಮನೆಯನ್ನು ಕೊಂಡುಕೊಂಡು ರೂಪಾಂತರ ಮಾಡಿಸಿದ್ದ ಮನೆಯಿದು. ಹುಶ್…ಎಲ್ಲೀ…ಕಿವಿ ತನ್ನಿ…ನನ್ನಪ್ಪ, ದೊಡ್ಡಪ್ಪನ ಇತರೆ ಕೆಲಸಗಳು ಏ ವನ್ ಅಂತ ಯಾರು ಬೇಕಾದ್ರು ಒಪ್ಕೋಬಹುದು…ಆದ್ರೆ ಆರ್ಕಿಟೆಕ್ಚರ್ ಭಾಳ ಡಲ್ಲು ಕಣ್ರೀ…ಜೋರಾಗಿ ಹೇಳಿದ್ರೆ ಈಗ ಸ್ವರ್ಗದಿಂದಲೇ ವಾಪಸ್ ಬಂದು ನನ್ನ ಕಥೆ ಮುಗಿಸಿಬಿಟ್ಟಾರು!..ಹಾಗೆ ಹೀಗೆ ಅಂತ ಕೆಡವಿಸಿ, ಕಟ್ಟಿಸಿ ಮನೆಯೆಂಬ ಮನೆನೇ ನನ್ನಜ್ಜಿಯ ಮಾತುಗಳಲ್ಲಿ ಹೇಳೋದಾದ್ರೆ ಕಚ್ಚರಿವೆ ಮಾಡಿಬಿಟ್ಟಿದ್ದರು. ಹಾಂ….ವಿಷಯಕ್ಕೆ ಬರೋಣ…ದೊಡ್ಡ ಹಾಲಲ್ಲಿ ಸುಮಾರು ಆರೇಳು ಅಡಿ ಎತ್ತರಕ್ಕೆ ಒಂದು ತೇಗದ ಹಲಗೆಯ ಬಡು. ಅದರ ಮೇಲೆ ಬುಲ್ಡೋಜರ್ ಗಾತ್ರದ ರೇಡಿಯೋ…ಅದರಲ್ಲೇ “ಸಂಪ್ರತಿ ವಾರ್ತಾಮ್ ಶ್ರುಯಂತಾಮ್, ಪ್ರವಾಚಕಃ…” ಕೇಳಿ ಏದ್ದದ್ದು, ದಸರಾ ಕಾಲದ “ಅರಮನೆ ಸಂಗೀತ” ಕೇಳುತ್ತಾ ಅಮ್ಮನ ಮೆತ್ತನೆಯ ಸೀರೆ ಹೊದ್ದುಕೊಂಡು ಮಲಗಿದ್ದು. ದೊಡ್ಡ ಹಾಲಿನ ಎಡಭಾಗಕ್ಕೆ ಸೇರಿದಂತೆ ಅಡಿಗೆ ಮನೆ ಹಾಗು ಅದರ ಮುಂದಿನ ಊಟದ ಮನೆ. ನಾನು ಅಡಿಗೆ ಮನೇಲೆ ಹುಟ್ಟಿದ್ದಂತೆ. ಅಮ್ಮ ತಟ್ಟೆಗೆ ಉಪ್ಪಿಟ್ಟು ಹಾಕಿಕೊಳ್ಳಲು ಅಡಿಗೆ ಮನೆಗೆ ಹೋಗಿ, ಭಯಂಕರ ಹೆರಿಗೆ ಬೇನೆ ಶುರುವಾಗಿ, ಟಾಂಗ ತರಲು ನಮ್ಮ ದೊಡ್ಡಪ್ಪ ಓಡಿ, ಅಮ್ಮ ಆ ಅಡಿಗೆ ಮನೆ ಹೊಸಿಲು ಕೂಡ ದಾಟಲು ಆಗದ ಹಾಗಾಗಿ, ಉಪ್ಪಿಟ್ಟಿನ ಘಮಕ್ಕೆ ಮೂಗರಳಿಸಿಕೊಂಡೇ ಆತುರಗೇಡಿ ನಾನು ತಟಕ್ಕನೆ ಹುಟ್ಟಿಬಿಟ್ಟೆನಂತೆ. ಬಹುಶಃ ಇದೇ ಕಾರಣಕ್ಕಿರಬಹುದು ಉಪ್ಪಿಟ್ಟು ನನ್ನ ಪಂಚಪ್ರಾಣಗಳಲ್ಲಿ ಮೊದಲನೆಯದು. ಇಂಥಾ ಭವ್ಯ ಇತಿಹಾಸಕ್ಕೆ ಮೂಕ ಸಾಕ್ಷಿಯಾದ ಊಟದ ಮನೇಲಿ ಹತ್ತು ಹದಿನೈದು ಜನ ಧಾರಾಳವಾಗಿ ಚಕ್ಕಳಮಕ್ಕಳ ಹಾಕಿ ಕುಳಿತು ಊಟ ಮಾಡುತ್ತಿದ್ದೆವು. ಅದೇನೋ ಗೊತ್ತಿಲ್ಲ ಮಕ್ಕಳಿಗೆ ಮೊದಲು ಊಟವಾಗಿ ಹೋಗುತ್ತಿತ್ತು. ನಂತರ ದೊಡ್ಡವರೆಲ್ಲಾ ಕೂತು ಹರಟುತ್ತಾ ಊಟ ಮಾಡುತ್ತಿದ್ದರು. ವಿಶೇಷದ ದಿನಗಳಲ್ಲಿ ಮಾತ್ರ ಮಕ್ಕಳಿಗೂ ಸಹಪಂಕ್ತಿ ಭೋಜನದ ಅವಕಾಶವಿತ್ತು. ಅಡಿಗೆ ಮನೆಗೂ ಮತ್ತು ಊಟದ ಮನೆಗೂ ಮಧ್ಯೆಯೂ ಸುಮಾರು ಒಂದುವರೆ ಅಡಿ ಎತ್ತರದ ಹೊಸಿಲು. ತಟ್ಟೆಯಲ್ಲಿ ಉಪ್ಪು, ಉಪ್ಪಿನಕಾಯಿ ಬಡಿಸಿ ಅನ್ನ ತರಲು ದೊಡ್ಡಮ್ಮ ಒಳಗೆ ಹೋಗಿ ಬರುವಷ್ಟರಲ್ಲಿ ಉಪ್ಪು, ಉಪ್ಪಿನಕಾಯೇ ಖಾಲಿಯಾಗಿ ಬಿಟ್ಟಿರುತ್ತಿತ್ತು ನಮ್ಮ ತಟ್ಟೆಗಳಲ್ಲಿ. ಅಂಥಾ ಯಮ ಹಸಿವು ನಮಗೆಲ್ಲಾ…”ರಾಕ್ಷಸ ಮುಂಡೇವು” ಅಂತ ಪ್ರೀತಿಯಿಂದ ಗದರಿಕೊಳ್ಳುತ್ತಲೇ ತಟ್ಟೆಗೆ ದಿನಾ ದೊಡ್ಡಮ್ಮ ಅನ್ನ ಸುರಿಯುತ್ತಿದ್ದುದು. ಸಾರು ತರುವಷ್ಟರಲ್ಲಿ ಅರ್ಧ ಅನ್ನ ಖಾಲಿ ಎಂದು ವಿಶೇಷವಾಗೇನೂ ಹೇಳಬೇಕಿಲ್ಲ ಅಲ್ಲವೆ? ಆ ಊಟದ ಮನೆಯಲ್ಲೇ ಬಲಕ್ಕೆ ಗೋಡೆ ಬದಿಗೆ ಮಡಿ ಬಟ್ಟೆ ಒಣಗಿ ಹಾಕಲು ಸಾಲಾಗಿ ಕಟ್ಟಿದ್ದ ಮೂರು ಸಾಲು ತಂತಿಗಳು, ಮೂಲೆಯಲ್ಲಿ ಬಹೂಪಯೋಗಿ (ಬಟ್ಟೆ ಹರವಲು, ಹಿತ್ತಲಿಗೆ ನುಗ್ಗಿ ಬಂದ ಪುಂಡ ದನಗಳನ್ನಟ್ಟಲು, ನಮ್ಮಂಥಾ ಕೋತಿಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಹಾಗು ಸಮಯ ಬಿದ್ದಾಗ ಸೆಲ್ಫ್ ಸರ್ವೀಸ್ನಲ್ಲಿ ಅಜ್ಜಿ ಬೆನ್ನು ಕೆರೆದುಕೊಳ್ಳಲು) ಮಡಿ ಕೋಲು, ಆಮೇಲೆ ಅಲ್ಲೇ ಹಿಂದೆ ಅಣ್ಣನ ಫೈಲ್ಸ್ ಜೋಡಿಸಿದ್ದ ಕಡತದ ಬೀರುಗಳು. ಇಷ್ಟಕ್ಕೆ ಊಟದ ಮನೆ ಸಿಂಗಾರ ಮುಗಿಯಿತೆಂದುಕೊಳ್ಳಬೇಡಿ. ಕಡತದ ಬೀರುಗಳ ಹಿಂದಕ್ಕೆ ನೆಲದಲ್ಲಿ ನನ್ನ ವಿನಃ ಬೇರಾರಿಗೂ ಅರಿವಿಗೇ ಬಂದಿರದ ಒಂದು ದೊಡ್ಡ ದೊಗರಿದ್ದು ಅದರಲ್ಲಿ ಇಲಿ, ಜಿರಳೆಗಳು ಉಚಿತ ಊಟ ವಸತಿಯೊಂದಿಗೆ ಹಾಯಾಗಿದ್ದವು. ಮನೆಯ ಇತಿಹಾಸ ಹೇಳಲು ಮರೆತೆ. ಮೈಸೂರು ಸಂಸ್ಥಾನದ ಉನ್ನತ ಹುದ್ದೆಯಲ್ಲಿದ್ದ ಪುಟ್ಟಣ್ಣ ಎನ್ನುವವರು ಆ ಮನೆಯ ಮೂಲ ನಿವಾಸಿಗಳಾಗಿದ್ದು ಅಲ್ಲಿ ದಸರಾ ಹಬ್ಬ ವಿಶೇಷವಾಗಿತ್ತಂತೆ. ರಾತ್ರಿಯಲ್ಲಿ ಗೊಂಬೆಗಳು ಮಾತನಾಡುತ್ತಿದ್ದವಂತೆ, ಕಥೆ ಹೇಳುತ್ತಿದ್ದವಂತೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ನನಗೆ ದೊರಕದೇ ಕೊನೆಗೆ ಅಣ್ಣನ ಕಕ್ಷೀದಾರಳಾಗಿದ್ದ ಕನ್ನಂಬಾಡಿ ತಿಮ್ಮಮ್ಮಜ್ಜಿಯನ್ನು ಕೇಳಿ ಅವಳು ಹೇಳಿದ ಬೇರೆಲ್ಲಿಯದೋ ಗೊಂಬೆ ಮಾತಾಡಿದ ಕಥೆ ಕೇಳಿ…”ಅಯ್ಯೋ ಇದು ನಮ್ಮನೆ ಗೊಂಬೆ ಕಥೆಯೇ ಆಗಿದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತಲ್ವಾ” ಅಂದುಕೊಂಡು ಮಮ್ಮಲ ಮರುಗಿದ್ದೆ. ನಿಧಿಯೂ ಅಲ್ಲೋ ಇಲ್ಲೋ ಒಟ್ಟಿನಲ್ಲಿ ಮನೆಯಲ್ಲೆಲ್ಲೋ ಹೂತಿಟ್ಟಿರಬಹುದು ಎಂದು ಅಜ್ಜಿ, ಅತ್ತೆ(ಅಣ್ಣನ ಅಕ್ಕ) ಮಾತನಾಡುತ್ತಿದ್ದುದನ್ನು ನಾನು ಅನೇಕ ಸಾರಿ ಕದ್ದು ಕೇಳಿ ರೋಮಾಂಚನಗೊಂಡಿದ್ದೆ. ನನ್ನ ಪತ್ತೇದಾರಿಕೆಗೆ ಕನ್ನಡಿ ಹಿಡಿಯುವಂಥಾ ವಿಷಯಗಳು ಸಾಕಷ್ಟಿದ್ದವು ಮನೆಯಲ್ಲಿ. ದೊಡ್ಡ ಹಾಲಿನಲ್ಲಿ ಕರೀ ಗಾರೆ ನೆಲ ಅಲ್ಲಲ್ಲಿ ಉಬ್ಬಿ ಬರುತ್ತಿದ್ದು ನನ್ನ ಕುತೂಹಲ ಇಮ್ಮಡಿಗೊಳಿಸುತ್ತಿತ್ತು.
ರಾತ್ರಿ ಊಟವಾದ ನಂತರ ದೊಡ್ಡವರು ಊಟ ಮುಗಿಸುವವರೆಗೂ ಮಕ್ಕಳೆಲ್ಲಾ ದೊಡ್ಡ ಹಾಲಿನ ದೊಡ್ಡ ಚಾಪೆಯ ಮೇಲೆ ಪವಡಿಸಿರುವ ಪದ್ದತಿ ಜಾರಿಯಲ್ಲಿತ್ತು. ನನ್ನ ಹಾಗು ಸುಮಕ್ಕನ ಕಿಸಿ ಕಿಸಿ ಗುಸು ಗುಸು ಮುಗಿದ ನಂತರ ಅವಳು ನಿದ್ರೆಗೆ ಶರಣಾದರೆ ನಾನು ಮುಖದ ಮೇಲೆ ಅಮ್ಮನ ಕಾಟನ್ ಸೀರೆಯ ಮುಸುಕು ಮೇಲೆಳೆದುಕೊಂಡು ಅಂತರ್ಮುಖಿಯಾಗಿಬಿಡುತ್ತಿದ್ದೆ. ಆ ಸೀರೆಯದೂ ಒಂದು ಮಹತ್ತರ ಕಥೆಯಿದೆ. ಸೊಸೈಟಿ (ನ್ಯಾಯಬೆಲೆ ಅಂಗಡಿ) ಯಿಂದ ತಂದಿದ್ದ ಆ ಕಡು ನೀಲಿ ಚೌಕದಲ್ಲಿ ಬಿಳೀ ಬಳ್ಳಿಗಳಿರುವ ಸೀರೆ ನನ್ನ ತೊಟ್ಟಿಲಿನ ಹಾಸಿಗೆಗೆ ಒಂದು ತುಂಡು, ಹೊದಿಕೆಗೆ ಮತ್ತೊಂದು, ಒಗೆದು ಉಪಯೋಗಿಸಲು ಅನುಕೂಲವಾಗುವ ಹಾಗೆ ಒಟ್ಟು ನಾಲ್ಕು ಪೀಸುಗಳಲ್ಲಿ ಕಂಗೊಳಿಸುತ್ತಿದ್ದು ನಾನು ಬೆಳೆದಂತೆಲ್ಲಾ ಹೊದಿಕೆಗೆ ಮಾತ್ರ ಅದರ ಪಾತ್ರ ಸೀಮಿತವಾಯ್ತು. ರಾತ್ರಿ ದೊಡ್ಡ ಹಾಲಿನಲ್ಲಿ ಮಲಗಿ ಮುಸುಕೆಳೆದು ಅಲ್ಲಿ ನಿರ್ಮಿತವಾಗುತ್ತಿದ್ದ ಮಂದ ಬೆಳಕಲ್ಲಿ ಮೀಯುತ್ತಿದ್ದಂತೆಯೇ ನೀಲಿ ಬಿಳಿಯ ಚೌಕ ಬಳ್ಳಿಗಳು ನನ್ನನ್ನು ಕಲ್ಪನಾಲಹರಿಯಲ್ಲಿ ತೇಲಿಸಿ ಮುಳುಗಿಸಲು ಸಮರ್ಥವಾಗುತ್ತಿದ್ದವು. ಅಲ್ಲಲ್ಲಿ ಉಬ್ಬುತ್ತಿದ್ದ ಗಾರೆ ನೆಲದ ಕೆಳಗಿರುವ ಸುರಂಗ ಮಾರ್ಗದಲ್ಲಿ ಮೆಟ್ಟಿಲು ಇಳಿಯುತ್ತಾ ಹೋಗಿ ಕೊನೆಗೆ ನಿಧಿಯನ್ನು ಕಾಯುತ್ತಾ ಕುಳಿತಿರುವ ಹಾವನ್ನು ಹಿಮ್ಮೆಟ್ಟಿಸಿ, ಕೊಪ್ಪರಿಗೆಯ ತುಂಬಾ ಚಿನ್ನದ ನಾಣ್ಯಗಳು, ಒಡವೆಗಳನ್ನು ಹೊರತಂದು, ಕೊನೆಗೆ ಸರ್ಕಾರಕ್ಕೊಪ್ಪಿಸಿ (ಪುಟಾಣಿ ಏಜೆಂಟ್ ೧೨೩ ಯ ಪ್ರಭಾವ), ನನಗೆಂಥಾದ್ದೊ ಪ್ರಶಸ್ತಿ ಸಿಕ್ಕಿ ಲೋಕವೆಲ್ಲಾ ನನ್ನ ಕೊಂಡಾಡಿ…ಹುಶ್…..ಅಷ್ಟರಲ್ಲಿ ನನಗೆ ಸುಖನಿದ್ರೆ ತೂಗಿಬಿಡುತ್ತಿತ್ತು. ದೊಡ್ಡ ಹಾಲಿಗೂ ಹಿತ್ತಲಿಗೂ ನಡುವೆ ಒಂದು ಒರಳುಕಲ್ಲು ಹಜಾರವಿತ್ತು. ಅಲ್ಲಿನ ಒರಳುಕಲ್ಲಿನಲ್ಲಿ ರಾಶಿ ರಾಶಿ ದೋಸೆ, ಇಡ್ಲಿ ಹಿಟ್ಟುಗಳು ತಯಾರಾಗುತ್ತಿದ್ದರೆ ಆಗಾಗ ರುಬ್ಬುತ್ತಿರುವ ಹುದುಗು ತಿನ್ನಲು ನನ್ನ ಪ್ರವೇಶವಾಗುತ್ತಿತ್ತು. ಹದ ನೋಡಲು ನೀರ ಕೈ ಮಾಡಿಕೊಂಡು ಸ್ವಲ್ಪ ಹಿಟ್ಟು ಕೈಗೆತ್ತಿಕೊಂಡು ಮತ್ತೆ ಒರಳು ಕಲ್ಲಿಗೆ ಹಾಕುವಾಗ ಮೂಡುವ “ಟೊಕ್” ಎನ್ನುವ ಸದ್ದು ನನಗೆ ಬಹಳ ಪ್ರಿಯವಾದುದಾಗಿರುತ್ತಿತ್ತು. ಆ ಐತಿಹಾಸಿಕ ಒರಳು ಕಲ್ಲಿನ ಮಗ್ಗುಲಿಗೇ ಇದ್ದಿದ್ದು ಇನ್ನೊಂದು ನಿಗೂಢ ರಹಸ್ಯದ ಅಟ್ಟದ ಮನೆ. ಅದರ ಮರದ ಮೆಟ್ಟಿಲ ಮೇಲೆ ನಡೆಯುವುದೇ ಒಂದು ಸೊಗಸು. ಹಳೇಕಾಲದ ಪಾತ್ರೆ, ಪಡಗ, ಬೇಕಾದ್ದು, ಬೇಡವಾದ್ದು, ಹೆಚ್ಚುವರಿ ಪದಾರ್ಥಗಳ ನೆಲೆವೀಡಾದ ಇದು “ನಾಗವಲ್ಲಿ” ರೂಮಿಗಿಂತಲೂ ರೋಚಕ ಗೊತ್ತಾ? ಇಲ್ಲಿ ಅಮ್ಮ ನನಗೆ ತಿಳಿದಂತೆ ಮೂರು ನಾಲ್ಕು ಸಾರಿ ಚೇಳು ಕಡಿಸಿಕೊಂಡಿದ್ದಿದೆ. ವಾರಕ್ಕೊಮ್ಮೆ ಕಸ ಬಳಿಯಲು ಅಲ್ಲಿಗೆ ನುಗ್ಗುವ ಕಸಮುಸ್ರೆ ಮಾದಮ್ಮಂಗೆ (ಮಾದು ಅನ್ನೋದು ಪ್ರೀತಿಯ ಹೆಸರು) ಮಾತ್ರ ಅದ್ಯಾಕೋ ಒಂದು ಸಾರಿಯೂ ಚೇಳು ಕಡೀಲಿಲ್ಲ. ಆಲ್ಲಿದ್ದ ಚಿತ್ರ ವಿಚಿತ್ರ ಮರದ ಆಕೃತಿಗಳನ್ನು ನೋಡುವುದೇ ಕಣ್ಣಿಗೆ ಸೊಬಗು. ಅರ್ಧ ಕೆತ್ತಿ ಮರೆತಿದ್ದವುಗಳು, ಕೆಲವಕ್ಕೆ ಒಂದು ಕಣ್ಣು ದೊಡ್ಡ ಬಾಯಿ, ಹಲ್ಲು ಕಿರಿದ ಹುಲಿ, ಬಿಂದಿಗೆ ಹೊತ್ತ ನೀರೆ, ನಾಗರಕಲ್ಲನ್ನು ಹೋಲುವ ಕೆಲವು ಮರದ ತುಂಡುಗಳು, ಕರೀ ಕೆಂಪು ಮರದ ಮನುಷ್ಯ ಹಾಗು ಪ್ರಾಣಿಯಾಕೃತಿಗಳು, ಮುರಿದ ತೊಲೆಗಳ ಚಿತ್ತಾಕರ್ಷಕ ಚೂರುಗಳು ಅಟ್ಟದ ರೂಮಿನ ಹಿಂಬದಿಯ ಧೂಳಿನಲ್ಲಿ ಅಟ್ಟಾಡುತ್ತಿರುವುದನ್ನು ಸಹಿಸಲಾರದೆ ಒಂದೆರಡನ್ನು ಒಮ್ಮೆ ಹೊರಲಾರದೆ ತುಸು ಮುಂದೆ ಹೊತ್ತು ತಂದು ಬೀಳಿಸಿ ಅಲ್ಲಿಯೇ ನಿಂತಿದ್ದ ಅತ್ತೆ ಮತ್ತು ಅಜ್ಜಿ ಕಂಡು…”ಏನು ಪಾಪಕರ್ಮ ತಂತೋ ಈ ಶನಿಮುಂಡೆದು…ಹಿಂದಕ್ಕೆ ಬಿಸಾಡು ಮೊದಲು, ಎಲ್ಲಾ ದೆವ್ವದ ಬೊಂಬೆಗಳು” ಎಂದು ಯಥಾ ಶಕ್ತಿ ಚಟಿ ಚಟಿ ಏಟೂ ಕೊಟ್ಟಿದ್ದರು (ಆಗೆಲ್ಲಾ ಮಕ್ಕಳನ್ನು ಮನೆಯಲ್ಲಿನ ದೊಡ್ಡವರು “ಮಕ್ಕಳೆಂದರೆ ಎಲ್ಲಾ ಒಂದೇ” ಎಂಬ ಉದಾತ್ತ ಐಕ್ಯತೆಯ ಭಾವನೆಯಿಂದ ಯಾರು ಬೇಕಾದರೂ ಮನಸೋಇಚ್ಛೆ ಥಳಿಸಬಹುದಾಗಿತ್ತು). ಬಿದ್ದ ಏಟಿನ ನೋವಿನ ಕಣ್ಣೀರಿಗಿಂತಲೂ “ದೆವ್ವದ ಗೊಂಬೆಗಳು” ಎನ್ನುವ ಪದಗಳು “ನನ್ನ ಹುಡುಕಾಟ ಕೊನೆಗೂ ಸಫಲವಾಯ್ತು” ಎನ್ನುವ ದಿವ್ಯಾನುಭೂತಿ ನನ್ನಲ್ಲಿ ಮೂಡಿಸಿ ಆನಂದ ಬಾಷ್ಪವುಕ್ಕಿಸುವಲ್ಲಿ ಸಮರ್ಥವಾಗಿದ್ದವು.
ಇನ್ನೇನು ನನ್ನ ಜೀವನದ ಒಂದು ಅಲ್ಟಿಮೇಟ್ ಗೋಲ್ ನಾನು ತಲುಪಿದಂತೆಯೇ ಎಂದು ಹಿರಿಹಿರಿ ಹಿಗ್ಗಿದೆ. ಅಲ್ಲಾ…ಗೊಂಬೆಗಳ ಮಾತು, ಕಥೆ, ಓಡಾಟ ಎಲ್ಲಾ ನಡೆಯುತ್ತಿದ್ದ ಈ ಮನೆಯಲ್ಲಿ ಏಕಾಏಕಿ ಏನೂ ಕಾಣಬರುತ್ತಿಲ್ಲವೆಂದರೆ ಎಂತಹ ನೀರಸ ಜೀವನವಿದ್ದೀತು ಅವುಗಳದ್ದು ಪಾಪ. ಈಗಂತೂ “ದೆವ್ವದ ಗೊಂಬೆಗಳು” ಎಂದು ಅಜ್ಜಿಯಂಥಾ ಅಜ್ಜಿಯೇ ಹೇಳಿದ ಮೇಲೆ ಅವುಗಳು ಮಾತನಾಡಲಾರವೇ? ಇದುವರೆಗೂ ಅವು ಏಕೆ ಸುಮ್ಮನಿದ್ದವೆಂಬ ಬಿಳಿ ಸತ್ಯ ನನಗೆ ಹೊಳೆದುಬಿಟ್ಟಿತ್ತು. ಜೀವನದಲ್ಲಿ ದೆವ್ವದ ಗೊಂಬೆಗಳಿಗೆ ಜೊತೆಗಾರರ ಕೊರತೆಯಿತ್ತು. ಈಗ ಅವು ನನ್ನ ಸ್ನೇಹ ಸಹವಾಸ ಮಾಡಿದರೆ ಅವಕ್ಕೂ ಒಂದು ಹೊಸ ಬದುಕು ಹಾಗು ನನಗೂ ಗೊಂಬೆಗಳ ಮಾತು, ಕಥೆ, ಓಡಾಟದ ಜೊತೆಗೆ ಒಡನಾಟದ ಭಾಗ್ಯವೂ ಲಭಿಸುತ್ತದೆ ಎನ್ನುವ ಆಲೋಚನೆಯೇ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿತ್ತು. ಅದನ್ನು ಕಾರ್ಯರೂಪಕ್ಕೆ ತರಲು ನಾನು ಹಾಕಿದ ಯೋಜನೆಗಳು ಒಂದೇ ಎರಡೇ. ಮನೆಯಲ್ಲಿ ಯಾರನ್ನು ಜೊತೆಮಾಡಿಕೊಳ್ಳಲಿ ಈ ಕಾರ್ಯಾಚರಣೆಗೆ ಎನ್ನುವ ಯೋಚನೆ ಮುತ್ತಿ ಕಾಡುತ್ತಿತ್ತು. ಸುಮಕ್ಕ…ಉಹೂಂ…ಶಿಸ್ತಿನ ಸಿಪಾಯಿ ಅದು. ಎಲ್ಲದರಲ್ಲೂ ಅಚ್ಚುಕಟ್ಟು. ನನ್ನ ಕೋತಿ ಚೇಷ್ಟೆ ತಪ್ಪಿಸಿಬಿಡುತ್ತಿತ್ತು. ಇನ್ನು ಅವಿ…ಪಾಪ ಅದಕ್ಕಿನ್ನೂ ಮಾತೇ ಸರಿಯಾಗಿ ಬಾರದು. “ಅಜ್ಜಿ”ಗೆ “ಅಂಜಿ” ಅನ್ನುತ್ತೆ, “ಮಗು” ನ “ಮಂಗು” ಅನ್ನುತ್ತೆ. ಆದ್ದರಿಂದ ನಾನು ಹೋರಾಟದಲ್ಲಿ ಒಂಟಿ ಸಲಗ ಎಂದು ತೀರ್ಮಾನವಾದಹಾಗಾಯಿತು. ಅದೇ ಸಮಯಕ್ಕೆ “ಗಂಡಭೇರುಂಡ” ಚಲನ ಚಿತ್ರ ನಮ್ಮೂರಿನ ಜಯಲಕ್ಷ್ಮಿ ಚಿತ್ರಮಂದಿರದಲ್ಲಿ ಬಂದು ನನ್ನ ಸಾಹಸಕ್ಕೆ ಉತ್ತೇಜನ ಕೊಡುವಲ್ಲಿ ಸಹಕಾರಿಯಾಯ್ತು. ಅಟ್ಟದ ಮನೆಗೆ ಹೋಗುವ ಮುಹೂರ್ತವೂ ಒಂದು ದಿನ ರಾತ್ರಿಯೆಂದು ತೀರ್ಮಾನವಾಯಿತು. ಈ ಸಾಹಸ ಕಾರ್ಯಕ್ಕೆ ಹೊರಟಾಗ ಬೇಕಾಗುವ ವಸ್ತುಗಳನ್ನು ಮನಸ್ಸು ಒಂದೊಂದಾಗಿ ಪಟ್ಟಿಮಾಡಿಕೊಳ್ಳತೊಡಗಿತು. ನೀರಿನ ಕ್ಯಾನು (ರುಕ್ಮಿಣಿ ಅತ್ತೆ ಬೆಂಗಳೂರಿಂದ ತಂದುಕೊಟ್ಟಿದ್ದ ಪ್ಲಾಸ್ಟಿಕ್ಕಿನ ಕೆಂಪು ಬಣ್ಣದ ನೀರಿನ ಕ್ಯಾನ್ ಗೆ ನೀರು ತುಂಬಿಸಿ) ರೆಡಿ ಮಾಡಿಕೊಂಡೆ. ದೀಪ ಹಾಕಿದರೆ ಒರಳುಕಲ್ಲಿನ ಹಜಾರದಲ್ಲೇ ಮಲಗಿರುವ ಅಜ್ಜಿಗೆ ಎಚ್ಚರವಾಗಿ ಕೆಲಸ ಕೆಡುವುದಿಲ್ಲವೇ? ಹಾಗಾಗಿ ರೇಡಿಯೋದ ಪಕ್ಕದಲ್ಲಿ ಸದಾ ವಿಜೃಂಭಿಸುತ್ತಿರುವ ಬೃಹದಾಕಾರದ ಬ್ಯಾಟರಿ (ಟಾರ್ಚು) ನನ್ನ ವಶಕ್ಕೆ ತೆಗೆದುಕೊಳ್ಳುವುದು ನನ್ನ ಎರಡನೇ ಸಿದ್ಧತೆ. ಒರಳು ಕಲ್ಲಿನ ಹಜಾರದಿಂದಾಚೆಗೆ ಹಿತ್ತಲಿದ್ದು ಅಲ್ಲಿಯೇ ದನದ ಮನೆಯಿದ್ದಿದ್ದು. ಕೆಲವೊಮ್ಮೆ ರಾತ್ರಿಗಳಲ್ಲಿ ದನಗಳು ವಿಚಿತ್ರವಾಗಿ ಕೂಗುಹಾಕತೊಡಗುತ್ತಿದ್ದವು. ಯಾವುದಾದರೂ ಅತಿಮಾನುಷ ಆಕೃತಿಗಳು ಅವುಗಳ ಕಣ್ಣಿಗೆ ಬಿದ್ದರೆ ಮಾತ್ರ ಅವು ಹೀಗೆ ಕೂಗುವುದು ಎಂದು ಅಜ್ಜಿ ಹೇಳುತ್ತಿದ್ದರು. ಹಾಗೆ ಅವು ಕೂಗಿದಾಗೆಲ್ಲಾ ಅಜ್ಜಿ ಎದ್ದು, ಕಣ್ಣು, ಮೂಗು ಮಾತ್ರ ಕಾಣಿಸುವ ಹಾಗೆ ಕಂಬಳಿ ಗುಬುರು ಹಾಕಿಕೊಂಡು (ಅತಿಮಾನುಷರನ್ನು ಹೆದರಿಸಲು!), ಕೈಯಲ್ಲಿ ಟಾರ್ಚುಹಿಡಿದು ಹಿತ್ತಿಲ ಬಾಗಿಲು ತೆರೆದು ದನಗಳಿಗಿಂತಾ ಜೋರಾಗಿ ಗುಟುರು ಹಾಕುತ್ತಿದ್ದರು. ಅಜ್ಜಿ ಹಿರಿಯ ಪ್ರಾಥಮಿಕ ಪಾಠಶಾಲೆಯ ನಾಲ್ಕನೇ ತರಗತಿಯ ಮೇಡಂ ಆಗಿದ್ದಿದ್ದರಿಂದ ಅವರ ಸ್ವರ ತೀರ ಎಫರ್ಟ್ಲೆಸ್ ಆಗಿ ತಾರಕಕ್ಕೇರುತ್ತಿತ್ತು. ರಾತ್ರಿಯಾದೊಡನೇ ರೇಡಿಯೋ ಪಕ್ಕದಲ್ಲಿರುತ್ತಿದ್ದ ಆ ಟಾರ್ಚು ಅಜ್ಜಿಯ ದಿಂಬಿನ ಎಡಪಕ್ಕಕ್ಕೆ ಗದೆಯಂತೆ ವಾಲಿಕೊಂಡು ಅಜ್ಜಿ “ಕುರುಕ್ಷೇತ್ರಮು” ಸಿನಿಮಾದ ಭೀಮನಂತೆ ಮಲಗುತ್ತಿದ್ದರು. ಅದನ್ನು ನೋಡಿಕೊಂಡಿದ್ದ ನನಗೆ ಟಾರ್ಚನ್ನು ನನ್ನದಾಗಿಸಿಕೊಳ್ಳುವುದು ಯಾವ ಗಿಡದ ತೊಪ್ಪಲು? ಇನ್ನು ಸಾಹಸಿಗಳು ಬೆನ್ನಿಗೆ ಹಾಕಿಕೊಳ್ಳುವ ಬ್ಯಾಗು..ಅದಕ್ಕೆ ನನ್ನ ಸ್ಕೂಲ್ ಬ್ಯಾಗಿಗಿಂತಾ ಬೇಕಾಗಿತ್ತೆ? ಒಟ್ಟಿನಲ್ಲಿ ದೆವ್ವದ ಗೊಂಬೆಗಳ ಸ್ನೇಹಸಂಪಾದನೆಗೆ ಬೇಕಾದ ಎಲ್ಲಾ ಪೂರ್ವಭಾವಿ ಸಿದ್ದತೆಗಳೂ ಹೂವಿನ ಸರ ಎತ್ತಿದಂತೆ ಸುಲಭವಾಗಿ ಜರುಗಿದವು. ಒಂದು ಶುಭ ಮುಹೂರ್ತದಂದು ರಾತ್ರಿಯ ವೇಳೆಯಲ್ಲಿ ನನ್ನ ಕಾರ್ಯಾಚರಣೆ ಪ್ರಾರಂಭಿಸಿಯೇ ಬಿಡುವುದೆಂದು ತೀರ್ಮಾನಿಸಿ ಎಲ್ಲರೂ ಮಲಗಲಿ ಎಂದು ಕಾಯುತ್ತಾ ಅಮ್ಮನ ಸೀರೆಯೊಳಕ್ಕೆ ಸೇರಿ ಕಾಯತೊಡಗಿದೆ. ಆದರೆ ನಾನೊಂದು ಬಗೆದರೆ ದೈವ (ದೆವ್ವ?) ವೊಂದು ಬಗೆದುಬಿಡೋದೇ….ಎಲ್ಲರೂ ಮಲಗಿರಬಹುದೆಂದು ನಾನು ಕಣ್ಣು ಬಿಡುವಷ್ಟರಲ್ಲಿ “ಇಯಂ ಆಕಾಶವಾಣಿ..ಸಂಪ್ರತಿ ವಾರ್ತಾಂ ಶ್ರುಯಂತಾಂ…” ಎಂದು ನಮ್ಮನೆ ಬುಲ್ಡೋಜರ್ ರೇಡಿಯೋ ಒದರುತ್ತಿದ್ದು ಬೆಳ್ಳಗೆ ಬೆಳಗಾಗೇಬಿಟ್ಟಿತ್ತು. ಆಗೆಲ್ಲಾ ಅಲಾರಂ ಗಡಿಯಾರ ನಮ್ಮ ಮನೆಯಲ್ಲಿಲ್ಲದ್ದೇ ಈ ಅನಾಹುತಕ್ಕೆ ಕಾರಣವಾಗಿದ್ದು. ಅಮ್ಮ ಹೇಳುತ್ತಿದ್ದರು. ಒಮ್ಮೆ ಅಣ್ಣನ ಕಕ್ಷೀದಾರರು ಯಾರೋ ಪುಣ್ಯಾತ್ಮರು ಅಣ್ಣನಿಗೊಂದು ಅಲಾರಂ ಗಡಿಯಾರ ಕೊಡಲು ತಂದಿದ್ದರಂತೆ. ಆದರೆ ಅಣ್ಣ “ಮನೆಯಲ್ಲಿ ಐ.ಎ.ಎಸ್. ಓದೋರು ಯಾರಿದ್ದಾರೆ ಸಧ್ಯ? ಬಿಲ್ಕುಲ್ ಇವೆಲ್ಲಾ ಬೇಡ” ಎಂದು ವಾಪಸ್ಸು ಕಳಿಸಿಬಿಟ್ಟರಂತೆ. ಅದೂ ನಿಜ ಬಿಡಿ. ಅವಿ ಶಿಶುವಿಹಾರಕ್ಕೆ ಹೋಗಿ ಬಂದು ಹಾಯಾಗಿರುತ್ತಿತ್ತು. ಸುಮಕ್ಕ ರಾತ್ರಿ ಊಟಕ್ಕೆ ಮುಂಚೆಯೇ ಮನೆಕೆಲಸ (ಹೋಂ ವರ್ಕ್) ಮುಗಿಸಿಬಿಡುತ್ತಿದ್ದಳು. ಇನ್ನು…ಅವಳ ಹಾಗೆ ನಾನು ಚಂದ್ರವಂಶಿಯಲ್ಲ, ಸೂರ್ಯವಂಶಿ…ಬೆಳಗ್ಗೆ ಮಾತ್ರವೇ ನಾನು ಬರೆದು ಸಂತೆ ಹೊತ್ತಿಗೆ ಮೂರು ಮೊಳ ನೈಯ್ದು ಮುಗಿಸುತ್ತಿದ್ದುದು. ಆದರೂ ಅಣ್ಣ…ಛೇ..ಎಂಥಾ ಅರಿವುಗೇಡಿತನವಲ್ಲವೇ….ಮುಂದೆ ಅಲಾರಂ ಗಡಿಯಾರ ನನ್ನಂಥಾ ಸಾಹಸಿ ಮಗಳ ಉಪಯೋಗಕ್ಕೆ ಬಂದೀತೆಂಬ ಮುಂದಾಲೋಚನೆ ಸ್ವಲ್ಪವೂ ಮಾಡಿರಲಿಲ್ಲ ನೋಡಿ.
ನಾನು ಸೂರ್ಯವಂಶಿಯಾಗಲು ಹಲವಾರು ಕಾರಣಗಳಿದ್ದವು. ನಾನು ಶಾಲೆಯಿಂದ ಬಂದನಂತರ ಆಟವಾಡದೆ ಜೀವನ ಎಲ್ಲಾದರೂ ಸಾಗೋದು ಉಂಟೆ? ನಂತರ ಸರಿಯಾಗಿ ೬ ಗಂಟೆ ಸುಮಾರಲ್ಲಿ ಅಜ್ಜಿಯ ಜೊತೆ ವಾಕಿಂಗು. ರಂಗನಾಥನ ಗುಡಿಯ ಲೌಡ್ ಸ್ಪೀಕರಿನಲ್ಲಿ “ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣುವೆ..” ಅಂತ ವಿಷ್ಣುಸಹಸ್ರನಾಮ ಶುರುವಾಗಿರೋದು. ಅದನ್ನು ಗುನುಗುನಿಸುತ್ತಾ ಪೂರ್ಣಯ್ಯನ ಬೀದಿಯುದ್ದಕ್ಕೆ ನಡೆದು ರಂಗನಾಥನ ಗುಡಿಯವರೆಗೂ ಹೋಗಿ ಅದನ್ನು ಬಳಸಿ ಸಿಟಿ ಬಸ್ ಸ್ಟಾಂಡಿನ ಮೂಲಕ ಮಾರಮ್ಮನ ಗುಡಿ ಮುಂದೆ ಬಂದು ಮತ್ತೆ ಎಡಕ್ಕೆ ತಿರುಗಿದರೆ ನಾರಾಯಣ ಸ್ವಾಮಿ ಗುಡಿ ಬೀದಿಯಲ್ಲಿ ಮನೆಗೆ ವಾಪಸ್ಸು. ಹಾಗೆ ಹಿಂತಿರುಗಿದ ಮೇಲೆ ಸ್ವಾಮಿ ಮೇಷ್ಟರ ಮನೆಗೆ ಬಾಯಿಪಾಠಕ್ಕೆ ಓಟ. ನಾನು ಅಲ್ಲಿಗೆ ತಲುಪುವ ವೇಳೆಗಾಗಲೇ..”ಯೂಢಂ ದ್ರುಪದ ಪುತ್ರೇಣ ತವ ಶಿಷ್ಯೇಣ ಧೀಮತಾಂ..” ಭಗವದ್ಗೀತಾ ಪಾಠ ನಡಿತಿರೋದು. ಸ್ವಾಮಿ ಮೇಷ್ಟರ ಮುದ್ದಿನ ಶಿಷ್ಯೆಯಾದ್ದರಿಂದ ದಿನಾ ಮಾಫಿ. ಇದೆಲ್ಲಾ ಬಿಡಿ..ಮುಂದಿನ ಅಂಕವೇ ಗಮ್ಮತ್ತಿನದು. ಸ್ವಾಮಿ ಮೇಷ್ಟರ ಮನೆಯಿಂದ ಸೀದಾ ನಾರಾಯಣ ಸ್ವಾಮಿ ದೇವಸ್ಥಾನಕ್ಕೆ ದೌಡು. ಆಗಾಗ ಮನೆಯ ಹಿರಿಯರು…”ಅಯ್ಯೋ ಪಾಪ ಅವನು ಬಿಡಿ ದೇವರ ಹಾಗೆ, ಯಾವ ತಂಟೆಗೂ ಬರೋಲ್ಲ” ಅಂದು ಕೆಲವರನ್ನು ಕೆಲವಾರು ಸನ್ನಿವೇಶಗಳಲ್ಲಿ ಹೋಲಿಸಿದ್ದರಿಂದ ನಾನು ದೇವರನ್ನು “ದೇವರ ಹಾಗೆ” ಎಂದು ಮಾತ್ರ ತಿಳಿದಿದ್ದೆ ವಿನಃ ಅವನ ಮಹಿಮೆ, ಲೀಲೆಗಳೆಲ್ಲಾ ಅಷ್ಟೊಂದು ತಲೆ ಕೆಡಿಸಿಕೊಳ್ಳುವ ವಿಚಾರ ಮಾಡಿಕೊಂಡಿರಲಿಲ್ಲ. ನಾನು ಅಲ್ಲಿಗೆ ಹೋಗುತ್ತಿದ್ದುದು ಅಲ್ಲಿ ಪ್ರಸಾದವೆಂದು ಕೊಡುತ್ತಿದ್ದ ಪುಟ್ಟ ಪುಟ್ಟ ದೋಸೆಯ ಆಸೆಗೆ! ಅಲ್ಲಿ ಎಲ್ಲರಂತೆ ಕೈಮುಗಿದು, ಗಲ್ಲ ಗಲ್ಲ ಬಡಿದುಕೊಳ್ಳುವವರನ್ನು ವಿಚಿತ್ರವಾಗಿ ನೋಡುತ್ತಾ ಮರುಗುತ್ತಾ ನಿಂತರೂ ದೀರ್ಘದಂಡ ನಮಸ್ಕಾರ ಹಾಕುವುದು ಮಾತ್ರ ನನ್ನ ಪ್ರಿಯವಾದ ಕೆಲಸವಾಗಿತ್ತು. ಆಷ್ಟುಹೊತ್ತಿಗಾಗಲೇ ಅಯ್ಯಂಗಾರ್ ತಾತ (ಅರ್ಚಕರು) ನೈವೇದ್ಯ ಮಾಡಲು ಮುಕ್ಕಾಲು ಮುಚ್ಚಿದ ಪರದೆಯ ಹಿಂದೆ ಮರೆಯಾಗಿರುತ್ತಿದ್ದರು. ನನ್ನ ತಲೆಯ ಅಂಕಿ ಅಂಶದ ಪ್ರಕಾರ ತಾತ ತೆರೆಯ ಹಿಂದೆ ನಿಂತು ದೋಸೆ ಎಣಿಕೆ ಮಾಡುತ್ತಿರುತ್ತಾರೆ. ಅಯ್ಯೋ ಇವತ್ತು ಕಡಿಮೆ ತಂದಿದ್ದು ನನ್ನ ಸರದಿ ಬರುವಷ್ಟರಲ್ಲಿ ದೋಸೆ ಮುಗಿದುಹೋದರೇನು ಗತಿ ಎನ್ನುವುದು ನನ್ನ ಚಿಂತೆಗೆ ಕಾರಣವಾಗಿದ್ದು ದೀರ್ಘದಂಡ ನಮಸ್ಕಾರ ಮಾಡುವ ನೆಪದಲ್ಲಿ ಪರದೆಯಾಚೆ ಇಣುಕಿ ದೇವರ ಪಾದದ ಬುಡದಲ್ಲಿ ದೋಸೆಯ ಪಾತ್ರೆ ಕಂಡು “ಓಹೋ..ಸಧ್ಯ…ಪಾತ್ರೆಯಲ್ಲಿ ಸಾಕಷ್ಟು ದೋಸೆಗಳಿವೆ” ಎನ್ನುವುದನ್ನು ಖಾತ್ರಿಪಡಿಸಿಕೊಂಡು ಹಸನ್ಮುಖಿಯಾಗಿ ಮೇಲೇಳುತ್ತಿದ್ದೆ. ದೋಸೆಯನ್ನು ಮನಃಪೂರ್ತಿಯಾಗಿ ಸವಿದು ಎಲ್ಲರೂ ಹೊರಡುವವರೆಗೂ ಕಾದಿದ್ದು, ತಾತನನ್ನು ಕಂಡು ನಸುನಗೆ ನಕ್ಕು, ಅವರು “ಅರ್ಥವಾಯ್ತು” ಎಂಬಂತೆ ನನಗಿಂತಾ ಜೋರಾಗಿಯೇ ನಕ್ಕು ಅಳಿದುಳಿದ ದೋಸೆ ಚೂರನ್ನು ನನ್ನ ಕೈಲಿಟ್ಟು ಪ್ರೀತಿಯಿಂದ “ಇಪ್ಪು ವಾಷ್ಕಿ ಪೋ ಕಣ್ಣಾ (ಇನ್ನು ಓದ್ಕೊ ಹೋಗು ಕಂದಾ)” ಎನ್ನುತ್ತಿದ್ದರು. ತಕ್ಷಣವೇ ನಾನು “ಓಹೋ..ತಾತ ವಾಷ್ಕಿ ಪೋ ಎಂದಿದ್ದಾರೆ. ಅಂದರೆ ನಾನು ಕೈ ವಾಷ್ ಮಾಡಿಕೊಳ್ಳಬೇಕು” ಎಂದುಕೊಂಡು ನನ್ನ ದೊಡ್ಡ ಜವಾಬ್ದಾರಿ (ದೋಸೆ ತಿನ್ನುವುದು) ಮುಗಿದ ಸಂತೃಪ್ತಿಯಿಂದ ದೇವಾಲಯದ ಹೊರಗಿದ್ದ ನಲ್ಲಿಯಲ್ಲಿ ಅಚ್ಚುಕಟ್ಟಾಗಿ ಕೈತೊಳೆದುಕೊಂಡು ಮನೆಕಡೆಗೆ ಸವಾರಿ ಹೊರಟುಬಿಡುತ್ತಿದ್ದೆ. ಇಷ್ಟೆಲ್ಲಾ ಬಹುಮುಖ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದ ನನಗೆ ದಿನಕ್ಕೆ ೨೪ ಗಂಟೆ ಸಾಕಾಗುತ್ತಿತ್ತೆ? ನೀವೇ ಹೇಳಿ. ಓಹ್..ಕ್ಷಮಿಸಿ, ದೆವ್ವದಿಂದ ದೋಸೆಗೆ ಪಲಾಯನ ಮಾಡಿಬಿಟ್ಟೆ ಅಲ್ಲವೆ? ಸರಿ ಇನ್ನು ದೆವ್ವಕ್ಕೆ ಬರೋಣ.
ನಾನು ಉನ್ನತ ಮಟ್ಟದ ಪೂರ್ವಭಾವಿ ಸಿದ್ಧತೆಗಳೊಂದಿಗೆ ದೆವ್ವದರ್ಶನಕ್ಕೆ ತಯಾರಿದ್ದೆ ಎಂದು ನಿಮಗೆ ಮೊದಲೇ ಹೇಳಿದ್ದೆ. ಆದರೂ ಅದೇನು ನನ್ನ ಗ್ರಹಚಾರವೋ….೨-೩ ದಿನ ಕಳೆದರೂ ಅಪರಾತ್ರಿಯಲ್ಲಿ ಎಚ್ಚರವಾಗಲೇ ಇಲ್ಲ. ದೆವ್ವದ ಮೀಟಿಂಗ್ಗಿಂತಾ ..ಎಚ್ಚರವಾಗುವುದು ಹೇಗೆ ಎನ್ನುವ ವಿಷಯವೇ ಹೆಡ್ ಈಟಿಂಗ್ ವಿಷಯವಾಯಿತು. ಆಗ ಸಹಾಯಕ್ಕೆ ಬಂದವರೇ ದೇವಲೋಕದ ಏಂಜಲ್ ನಮ್ಮ ಗೌರಜ್ಜಿ. ಗೌರಜ್ಜಿ ಎಂದರೆ ನಮ್ಮ ತಾತನ ತಂಗಿ. ಮನೆಯಲ್ಲಿ ತಿಥಿ-ಮತಿಗಳು ನಡೆವಾಗ ಅವರಿಲ್ಲದೇ ಏನೂ ಸಾಗದು. ಹಾಗಂತ ಅವರೇನು ಮಡಿಗೆ ಬರ್ತಾರೆಯೇ ಎನ್ನೋದು ಮನೆಯಲ್ಲಿ ಭಿನ್ನಮತೀಯರ ಅಂಬೋಣವಾದರೆ..ಇಂಥಾ ಅಡ್ಡಾದಿಡ್ಡಿ ಮುಂಡೇವು (ನನ್ನಂಥಾ ಪಾಮರ ಮಕ್ಕಳು) ಗಳನ್ನು ನೋಡ್ಕೊಳ್ಳೊಕ್ಕೆ ಅವರಿಲ್ಲದೇ ಯಾರಿಂದ ಸಾಧ್ಯ ಎನ್ನುವುದು ಸರ್ವಾನುಮತದ ಅಂಗೀಕಾರವಾಗಿಬಿಟ್ಟಿತ್ತು. ಅದು ಸತ್ಯವಾದ ಮಾತು. ಗೌರಜ್ಜಿಯಾದರೇ ಬ್ರಾಹ್ಮಣರ ಊಟವಾಗುವವರೆಗೂ ತಮ್ಮ ನಾನ್ ಸ್ಟಾಪ್ ಕಥೆಗಳಿಂದ ನಮ್ಮಂಥ ಪುಂಡ ಪೋರಕಿಗಳನ್ನು ಹಿಡಿದಿಟ್ಟುಕೊಳ್ಳುವ ಶಕ್ತಿವಂತರು. ದಸರಾ ರಜೆಯ ಷಷ್ಠಿಯಲ್ಲಿ ನಮ್ಮ ತಾತನ ತಿಥಿಯಿದ್ದು ಆ ಸಂದರ್ಭದಲ್ಲಿ ಅವರ ಆಗಮನ ನನ್ನ ಆಲೋಚನೆಯ ದಿಗಂತವನ್ನು ಹಿರಿದಾಗಿಸಿಕೊಳ್ಳಲು ಸಹಾಯವಾಯ್ತು. ಗೌರಜ್ಜಿಯೆಂದರೆ ಕಥೆಗಳ ಆಗರ. ಅವರೇನು ಕಥೆ ಕೇಳಿ, ಓದಿ ಹೇಳಬೇಕಾಗಿರಲಿಲ್ಲವೆಂದು ತೋರುತ್ತದೆ. ನಿರರ್ಗಳವಾಗಿ ಕಥೆ ಹೆಣೆದು ಹೇಳುವ ಸಾಮರ್ಥ್ಯವೂ ಅವರಿಗಿತ್ತು. ಹೀಗೆ ಗೌರಜ್ಜಿ ಹೇಳಿದ ಕಥೆಗಳಲ್ಲಿ ನನ್ನ ಮನ ಸೆಳೆದದ್ದು “ಗಾಜಿನ ಕಂಬದ ರಾಜಕುಮಾರಿಯ ಕಥೆ.” ಇದರ ಸಾರಾಂಶವಿಷ್ಟೆ. ಒಬ್ಬಳು ರಾಜಕುಮಾರಿ ಅರಮನೆಯ ಉದ್ಯಾನದಲ್ಲಿರುವ ಗಾಜಿನ ಕಂಬದಲ್ಲಿ ಸೇರಿಕೊಂಡಿರುತ್ತಾಳೆ. ಅವಳು ಪ್ರತಿ ರಾತ್ರಿ ಅದರಿಂದ ಹೊರಬಂದು ಉದ್ಯಾನದಲ್ಲಿರುವ ದೇವಾಲಯ ಚೊಕ್ಕಟ ಮಾಡಿ, ಪೂಜಿಸಿ, ಹಣ್ಣು-ಹೂಗಳನ್ನು ತಾನೂ ಸ್ವೀಕರಿಸಿ ಮತ್ತೆ ಗಾಜಿನ ಕಂಬಕ್ಕೆ ಮರಳುತ್ತಿರುತ್ತಾಳೆ. ಇದನ್ನು ಕಂಡುಹಿಡಿಯಲೆಂದು ಉದ್ಯಾನವನಕ್ಕೆ ಬರುವ ರಾಜಕುಮಾರನದೂ ಹೆಚ್ಚು ಕಡಿಮೆ ನನ್ನ ಪಾಡೆ! ದಿನಾಲೂ ನಿದ್ರೆಹೋಗಿಬಿಡುತ್ತಿರುತ್ತಾನೆ. ಇದಕ್ಕೆ ಉಪಾಯವಾಗಿ ಒಮ್ಮೆ ಕೈ ಕುಯ್ದುಕೊಂಡು ನಿಂಬೆಹಣ್ಣು ಸಿಕ್ಕಿಸಿಕೊಂಡು ಅದರ ಉರಿಯಿಂದ ಹಾಗೆಯೇ ಎಚ್ಚರಾಗಿದ್ದು ಗಾಜಿನ ಕಂಬದ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗುತ್ತಾನೆ. ಇದನ್ನು ಕೇಳಿದ ನನ್ನ ಬುದ್ಧಿಗೆ ಸಾಣೆ ಹಿಡಿದಹಾಗೆ ಆಯಿತು. ನಾನು ಎಚ್ಚರವಾಗಿರಬೇಕಾದರೆ ಕೈ ಕುಯ್ದುಕೊಂಡು ನಿಂಬೆಹಣ್ಣು ಸಿಕ್ಕಿಸಿಕೊಂಡರಾಯ್ತು ಅದೇನು ಮಹಾ ಎಂದು ತೀರ್ಮಾನಿಸಿಕೊಂಡೆ. ಮರುದಿನ ಕೈ ಕುಯ್ಯುವ ಶಸ್ತ್ರ ಸಂಪಾದೆನೆಯಾಗಬೇಕಲ್ಲಾ..ಅದಕ್ಕಾಗಿ ಅಡಿಗೆ ಮನೆಗೆ ಶತಪಥ ತಿರುಗಿದ್ದೂ ಆಯ್ತು. ಆದರೆ ಉಪಯೋಗವಿಲ್ಲ…ದೊಡ್ಡ ದೊಡ್ಡ ಈಳಿಗೆ ಮಣೆಗಳು ಕೈ ಇರಲಿ ನನ್ನ ಕಾಲನ್ನೇ ಕತ್ತರಿಸುವಷ್ಟು ಭಯಂಕರವಾಗಿದ್ದು ನನ್ನ ಪ್ರಯೋಗಕ್ಕಿರಲಿ, ಸುಮ್ಮನೆ ಮುಟ್ಟಿನೋಡುವುದಕ್ಕೂ ಕೂಡ ದೊಡ್ಡವರು ಯಾರೂ ಅನುಮತಿಸುವ ಲಕ್ಷಣಗಳೇ ಕಾಣಲಿಲ್ಲ. ಹಾಗಂತ ಸೋತೆನೆಂದು ಕೈ ಚೆಲ್ಲಿ ಕುಳಿತುಕೊಳ್ಳುವ ಜಾಯಮಾನದವಳೇ ನಾನು? ಖಂಡಿತಾ ಇಲ್ಲ. ಅದಕ್ಕಾಗಿ ಅಣ್ಣನ ಶೇವಿಂಗ್ ಬ್ಲೇಡ್ ಎಗರಿಸಿಬಿಡುವುದೆಂದು ನಿರ್ಧರಿಸಿದೆ.
ಮರುದಿನದಿಂದ ಅಣ್ಣ ಶೇವ್ ಮಾಡಿಕೊಳ್ಳುವಾಗ ಅವರನ್ನೇ ನೋಡುತ್ತಾ ಅವರ ಬದಿಯಲ್ಲಿ ಕುಳಿತುಕೊಳ್ಳುವುದು ನನ್ನ ದಿನಚರಿಯ ಒಂದು ಭಾಗವಾಯ್ತು. ಗುಂಡಗಿನ ಗೋದ್ರೆಜ್ ಕ್ರೀಮನ್ನು ಬಿಳೀ ಬ್ರಷ್ ನ ಸಹಾಯದಿಂದ ತೆಗೆದು ಮುಖದಲ್ಲೆಲ್ಲಾ ಪುಸುಪುಸು ನೊರೆಯಾಗಿಸುತ್ತಾ ಹುಲಿ ವೇಶದವರಂತೆ ವಿಚಿತ್ರವಾಗಿ ಕಾಣುವ ಅಣ್ಣನನ್ನು ನೋಡುವುದೇ ಸೊಗಸು. ಹತ್ತಿರ ಕುಳಿತಿದ್ದಕ್ಕೆ ಬಹುಮಾನವಾಗಿಯೋ ಅಥವ “ಕಳ್ಳಮುಂಡೇದು ಮೊದಲೇ ಎಡಬಿಡಂಗಿ ಎಲ್ಲಾದರೂ ತಾನೂ ಹೀಗೆಲ್ಲಾ ಶೇವ್ ಮಾಡಿಕೊಂಡುಬಿಟ್ಟೀತು” ಎನ್ನುವ ಭಯದಿಂದಲೋ ಅಣ್ಣ ನನ್ನ ಕೆನ್ನೆಗೂ ಪುಸುಪುಸು ನೊರೆಹಚ್ಚಿ ಸಂತೋಷಪಡಿಸುತ್ತಿದ್ದರು. ನಾಲಿಗೆ ಚಾಚಿ ಅಣಕಿಸಿ ಹೆದರಿಸುತ್ತಲೂ ಇದ್ದರು. ಆದರೆ ಹೆದರುವ ಜೀವ ನಾನಲ್ಲವಲ್ಲಾ. ನಂತರ ಅಣ್ಣ ಪಳಪಳನೆ ಹೊಳೆವ ಅಶೋಕ ಬ್ಲೇಡನ್ನು ತೆಗೆದು ನಾಜೂಕಾಗಿ ರೇಜರ್ ಗೆ ಜೋಡಿಸುತ್ತಿದ್ದರು. ಮುಖ ಮೂತಿ ನೂರಾರು ಕಡೆಗೆ ಕೊಂಕಿಸುತ್ತಾ ಮಳೆ ಮೋಡ ಕಂಡ ನವಿಲಿನ ನರ್ತನದಂತೆ ರೇಜರ್ ರನ್ನು ಅಣ್ಣ ಚರ್ ಚರ್ ಎಂದು ಆಡಿಸುತ್ತಿದ್ದರೆ ತದೇಕಚಿತ್ತದಿಂದ ನನ್ನ ಗಮನವೆಲ್ಲಾ ಅಣ್ಣನ ಶೇವಿಂಗ್ ಕಡೆಗಿರುತ್ತಿತ್ತು. ಶೇವಿಂಗ್ ಮುಗಿದೊಡನೆಯೇ ರೇಜರನ್ನು ಬಿಸಿನೀರಿನ ಸಿಲ್ವಾರ್ (ಅಲ್ಯುಮಿನಿಯಂ) ಲೋಟದೊಳಗೆ ಲೊಟಲೊಟನೆ ಆಡಿಸಿದ ಅಣ್ಣ ಅದರಿಂದ ಬ್ಲೇಡನ್ನು ತೆಗೆದು ಅನಾಮತ್ತಾಗಿ ಕರೀ ಹೊಲಸಿನ ತಿಪ್ಪೆಯೊಳಕ್ಕೆ ಎಸೆದುಬಿಡುತ್ತಿದ್ದರು. ಇದನ್ನು ದಿನಾಲೂ ಕಂಡ ನನ್ನ ಅಸಹಾಯಕತೆ ಮೇರೆಮೀರಿತು. ರೇಜರಿಂದ ತಟಕ್ಕನೆ ಬ್ಲೇಡು ತೆಗೆದು ಬಿಸುಡುವ ಅಣ್ಣ ದೇಹದಿಂದ ಆತ್ಮವನ್ನು ದೂರಮಾಡುವ ದುರುಳನಂತೆ ಕಂಡರು. ಒಂದು ದಿನ ಬಂದ ಕೋಪ, ಅಳು ಮತ್ತು ಅಸಹಾಯಕತೆಯನ್ನು ನುಂಗುತ್ತಾ ಅಣ್ಣ ಹೊರಟುಹೋದಮೇಲೆ ಎಷ್ಟೋ ಹೊತ್ತು ಬ್ಲೇಡನ್ನೇ ನೋಡುತ್ತಾ ನಿಂತಿದ್ದೆ. ಮತ್ತೊಮ್ಮೆ ಇಂಥಾ ಸುವರ್ಣಾವಕಾಶ ಎಂದು ಸಿಕ್ಕುವುದೋ ಎಂದು ಸಂದೇಹಿಸುತ್ತಾ ಎಡಗೈ ಹಾಕಿ ಬ್ಲೇಡನ್ನು ಎತ್ತಿಯೇ ಬಿಟ್ಟೆ. ಇನ್ನು ಗಾಜಿನಕಂಬದ ರಾಜಕುಮಾರಿಯ ಕಥೆಯಂತೆ ನನ್ನ ಕಥೆಯೂ ಸುಖಾಂತವಾಗುವುದರಲ್ಲಿ ಸಂಶಯವೇ ಇಲ್ಲವೆಂದು ಹಿಗ್ಗಿದೆ. ತಿಪ್ಪೆಯಲ್ಲಿಟ್ಟ ಕೈ ಹಾಗು ಬ್ಲೇಡು ತೊಳೆಯಲು ಹಿತ್ತಲಿನ ನಲ್ಲಿಯಡಿ ಕಸರತ್ತು ನಡೆಸುತ್ತಿರುವಾಗಲೇ ಪವಾಡವೊಂದು ಜರುಗಿದಂತೆ ತಾನೇ ತಾನಾಗಿ ನನ್ನ ಕೈ ತೋರು ಬೆರಳು ಕುಯ್ದುಹೋಗಿ ನನ್ನ ಸಂತೋಷ ನೂರ್ಮಡಿಯಾಯಿತು. ಇನ್ನು ನಿಂಬೆಹಣ್ಣಿನ ಸಂಪಾದನೆಗೆ ಅಡಿಗೆ ಮನೆಯೆಲ್ಲಾ ಹುಡುಕಿದೆ. ಎಲ್ಲೂ ಇರಲೇ ಇಲ್ಲ. ಮರುದಿನ ಬುದ್ಧಿ ಇನ್ನೂ ಚುರುಕಾಯ್ತು. ಸಣ್ಣ ಟೊಮ್ಯಾಟೊ ಹಣ್ಣನ್ನು ಸಿಕ್ಕಿಸಿಕೊಂಡರೆ ಹೇಗೆ ಎಂದು ಯೋಚಿಸಿ ರಿಹರ್ಸಲ್ ಮಾಡಲು ಹೋಗಿ ಪಿಚಕ್ಕನೆ ರಸವೆಲ್ಲಾ ಬಟ್ಟೆಯಮೇಲೆ ಬೀಳಿಸಿಕೊಂಡು ಅಮ್ಮನಿಂದ ಬೆನ್ನಿಗೆ ಧಡ ಧಡನೆ ಗುದ್ದಿಸಿಕೊಂಡು ತೆಪ್ಪಗಾದೆ. ಊಟ ಮಾಡುವಾಗ ಬೆರಳಿನ ಗಾಯ ತುಸು ಉರಿಯುತ್ತಿತಾದರೂ ನಿದ್ರೆಗೆಡಿಸುವಷ್ಟಲ್ಲ. ೨-೩ ದಿನಗಳ ನಂತರ ಕೊನೆಗೂ ಸಂತೆಯಿಂದ ನಿಂಬೆಹಣ್ಣನ್ನು ತಂದೇಬಿಟ್ಟರು. ಅದರಲ್ಲಿ ಚಿಕ್ಕಗಾತ್ರದ್ದೊಂದನ್ನು ಕದ್ದೇ ಬಿಟ್ಟೆ. ಕಲ್ಲಲ್ಲಿ ಜಜ್ಜಿ ಅದನ್ನು ಕೆತ್ತಿ ಕೈಗೆ ಸಿಕ್ಕಿಸಿಕೊಳ್ಳಲು ಹೊಂದುತ್ತದೆಯೋ ಇಲ್ಲವೋ ನೋಡೋಣವೆಂದು (ಏಕೆಂದರೆ ರಾತ್ರಿ ಅಭಾಸವಾಗಬಾರದಲ್ಲ?) ಬೆರಳಿಗೆ ಸಿಕ್ಕಿಸಿಕೊಳ್ಳಲು ಹೊರಟು ನೋಡುತ್ತೇನೇ…..ಬೆರಳಿನ ಗಾಯ ವಾಸಿಯಾಗಿ ಹೋಗಿದೆ! ದೌರ್ಭಾಗ್ಯವೆಂದರೆ ಇದೇ ಎನ್ನುವ ಅರಿವು ಚೆನ್ನಾಗಿಯೇ ಆಗಿಬಿಟ್ಟಿತು ನನಗೆ. ಯಾಕೋ ರಾತ್ರಿ ಮಹೂರ್ತವೇ ಚೆನ್ನಾಗಿಲ್ಲ ಎಂದುಕೊಂಡು ಯಾವುದಾದರೂ ಮಧ್ಯಾಹ್ನವೇ ಅಟ್ಟದ ಮನೆಯ ರಹಸ್ಯ ಬೇಧಿಸಿಬಿಡಲು ತೀರ್ಮಾನಿಸಿದೆ. ಅದರಂತೆ ಒಂದು ಮಧ್ಯಾಹ್ನ ಅಮ್ಮ, ದೊಡ್ಡಮ್ಮ, ಸುಮಕ್ಕ ಮತ್ತು ಅವಿ ಎಲ್ಲರೂ ಮಲಗಿದ್ದರು. ಅಜ್ಜಿ ಗೌರಜ್ಜಿಯೊಡನೆ ಪೇಟೆಗೆ ಹೋಗಿದ್ದರು. ಮುಂಬಾಗಿಲು ಭದ್ರವಾಗಿ ಹಾಕಿತ್ತು. ಮಧ್ಯಾನ್ಹದ ವೇಳೆ ಅಮ್ಮ, ದೊಡ್ಡಮ್ಮ ಮಲಗಿರುವಾಗೆಲ್ಲಾ ಅಣ್ಣ, ದೊಡ್ಡಪ್ಪ, ಅಜ್ಜಿ ಹಿತ್ತಿಲ ಬಾಗಿಲಿಂದಲೇ ಒಳಗೆ ಬರುತ್ತಿದ್ದುದು. ಆದ್ದರಿಂದ ನಾನೇನು ಯಾರಿಗಾದರೂ ಮುಂಬಾಗಿಲು ತೆರೆಯಬೇಕಾದೀತು ಎನ್ನುವ ಪ್ರಮೇಯವೂ ಇರಲಿಲ್ಲ. ಇಂಥಾ ಸುಸಂದರ್ಭದಲ್ಲಿ ನಾನು ನನ್ನ ನೀರಿನ ಕ್ಯಾನು ಮತ್ತು ಬ್ಯಾಗಿನೊಡನೆ ಅಟ್ಟದ ಮೆಟ್ಟಿಲು ಹತ್ತಲು ಅನುವಾದೆ. ೨-೩ ಮೆಟ್ಟಿಲು ಹತ್ತುವಷ್ಟರಲ್ಲಿ ಎಲ್ಲಿತ್ತೋ ಅಜ್ಜಿಯರ ಸವಾರಿ ಹಿಂಬಾಗಿಲಿನಿಂದ ಬಂದೇಬಿಟ್ಟಿತು. ನಾನು ಗಾಬರಿಗೊಂಡು ಜರ್ ಎಂದು ಜಾರಿಬಿಟ್ಟೆ. ಅಜ್ಜಿ “ಅಯ್ಯೋ…” ಎನ್ನುತ್ತಾ ಧಾವಿಸಿ ಬಂದವರು ನನ್ನನ್ನು ಏನಾಯಿತೆಂದು ಪ್ರಶ್ನಿಸಲು ನಾನು “ಕ..ಕಾ…ಪ..ಪಾ..” ಎಂದು ಗಾಬರಿಯಿಂದ ಅಟ್ಟದ ಮನೆಯ ಕಡೆ ನೋಡುತ್ತಾ ತೊದಲುತ್ತಿರುವುದು ಕಂಡು, ಓಹೋ…ಕತ್ತಲಲ್ಲಿ ಏನೋ ಕಾಣಬಾರದನ್ನು ಕಂಡಿದೆ ಎಂದು ತೀರ್ಮಾನಿಸಿ…ಅಷ್ಟರಲ್ಲಿ ಕೆಲಸ ಮುಗಿಸಿ ಬಂದ ಅಣ್ಣ ಮತ್ತು ದೊಡ್ಡಪ್ಪನನ್ನು ಸಭೆ ಸೇರಿಸಿ ಚರ್ಚಿಸಿ ಅಟ್ಟದ ಮನೆಗೆ ದಪ್ಪನೆಯ ನವ್ತಾಲ್ ಬೀಗ ಬಿಗಿಸಿಬಿಟ್ಟರು. ಇದರಿಂದ ನಿರಾಶೆ ಹಾಗು ಹತಾಶೆಗೊಂಡ ನಾನು ದಿನವೆಲ್ಲಾ ಮುಳು ಮುಳು ಅಳುತ್ತಿದ್ದುದು ಕಂಡು ನಾನು ಹೆದರಿದ್ದೇನೆಂದು ಬಗೆದು ಮರುದಿನ ಹೊಳೆಯಲ್ಲಿ ಸ್ನಾನ ಮಾಡಿಸಿ ಈಶ್ವರನ ಗುಡಿಯಲ್ಲಿದ್ದ ಚಂಡಿಕೇಶ್ವರನೆದುರು ಬೆಚ್ಚು ನೀರು ಹಾಕಿಸಿ, ಕೈಗೊಂದು ಯಂತ್ರ ಬಿಗಿಸಿ ಕರೆತಂದರು. ನನ್ನ ಗಮನ ಅಟ್ಟದ ಮನೆಯಿಂದ ತಪ್ಪಿಸಲು ದಪ್ಪನೆಯ ಬೀಗ ತುಸುಮಟ್ಟಿಗೆ ನೆರವಾದರೂ ನನ್ನ ಉತ್ಸಾಹವನ್ನಂತೂ ತಪ್ಪಿಸಲು ಅಲ್ಲ
ನನಗೆ ಬೇಕಾದಷ್ಟು ಕೆಲಸಗಳು ಕೈತುಂಬ, ಮನತುಂಬ ಯಾವಾಗಲೂ ಇದ್ದವು. ಕಾಲ ಬದಲಾಗುತ್ತಾ ಹೋಗಿ ಕೆಲವೇ ತಿಂಗಳುಗಳಲ್ಲಿ ಅಣ್ಣ-ಅಮ್ಮ ಕೊಳ್ಳೇಗಾಲಕ್ಕೆ ವಾಸಕ್ಕೆ ತೆರಳಬೇಕಾಗಿ ಬಂತು. ಆಗೆಲ್ಲಾ ನನ್ನ ಮನೆ ಮಾತ್ರವಲ್ಲದೇ ನನ್ನವರೆಲ್ಲರನ್ನೂ ಬಿಟ್ಟು ಹೋಗುವ ನೋವು ಅದೆಷ್ಟೋ ವರ್ಷಾನುಗಟ್ಟಲೆ ಕಾಡಿದ್ದಿದೆ. ಅಲ್ಲಾ….ನಾನು ಮಾತ್ರ ಹೀಗಾ? ಅಥವ ನಿಮ್ಮೆಲ್ಲರಿಗೂ ಹೀಗೇ ಆಗುತ್ತದಾ? ಅಕ್ಕ, ತಮ್ಮ ಎನಿಸಿಕೊಳ್ಳಲು ಒಂದೇ ತಾಯಿಯ ಹೊಟ್ಟೆಯಲ್ಲೇ ಹುಟ್ಟಬೇಕಾ? ಮುಂದೆ ಊರಿಂದ ಊರಿಗೆ ನಡೆದಂತೆಲ್ಲಾ ನನ್ನ ಚಟುವಟಿಕೆಯ ಕೆಂದ್ರಗಳು ಬದಲಾಗುತ್ತಾ ಹೋದವು. ಅಣ್ಣ ಪ್ರಪಂಚ ಬಿಟ್ಟು ನಡೆದೂ ಬಿಟ್ಟರು. ದೊಡ್ಡಪ್ಪ ಇಂದು ಬದುಕಿಲ್ಲ. ಬದುಕಿದ್ದಾಗ ಅವರ ತೊಡೆಗಳ ಮೇಲೆ ಆಡಿ ಬೆಳೆದದ್ದನ್ನು ಮರೆತುಬಿಡಲಾ? ಹಳೆತಾದ ಸೀರೆ ಕತ್ತರಿಸಿ ನನಗೊಂದು ಸುಮಕ್ಕನಿಗೊಂದು ಲಂಗ ಹೊಲೆಯುತ್ತಿದ್ದ ದೊಡ್ಡಮ್ಮ?ಸಂಗಡಿಗರೊಡನೆ ಆಡುವಾಗ, ಉಡುಪು ಬದಲಿಸಿ ತೊಡುವಾಗ, ಯೌವನದ ಆತಂಕಗಳನ್ನು ತೋಡಿಕೊಳ್ಳುವಾಗ ಜೊತೆಗಿದ್ದ ಅದೇ ಸುಮಕ್ಕ? ನಾನು, ನನ್ನ ಅಕ್ಕ, ನನ್ನ ತಮ್ಮ ಕುಣಿದ, ನಲಿದ ಕ್ಷಣಗಳು ಜೀವನದುದ್ದಕ್ಕೂ ನನ್ನ ಜೊತೆಜೊತೆಯೇ ಸಾಗಿದೆ. ನನ್ನ ಕಣ್ಣಲ್ಲಿ ಆಗ ನಮ್ಮೂರಿಗಿದ್ದುದು ನಾಲಕ್ಕೇ ಬೀದಿಗಳು. ಈಗ ಊರ ತುಂಬಾ ಬೀದಿಗಳು. ಮನೆಗಳು, ಮಸೀದಿ, ದೇವಾಲಯಗಳು ಎಲ್ಲಾ ಆಗ ದೊಡ್ಡ ದೊಡ್ಡದಾಗಿ ಕಾಣುತ್ತಿದ್ದವು. ಈಗೆಲ್ಲಾ ಮೊದಲಿಗಿಂತಾ ಕುಬ್ಜವಾಗಿ ಕಾಣುತ್ತವೆ. ಅಂದು ಊರ ತುಂಬಾ ತುಂಬಿದ್ದ ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಮ್ಮ, ದೊಡ್ಡಪ್ಪಂದಿರಲ್ಲಿ ಕೆಲವರು ಇಲ್ಲವೇ ಇಲ್ಲ; ಇರುವ ಕೆಲವೇ ಕೆಲವರು ಆಂಟಿ ಆಂಕಲ್ ಗಳಾಗಿಬಿಟ್ಟಿದ್ದಾರೆ. ಈಗ ನಮ್ಮ ಮನೆಯನ್ನು ಕೊಂಡವರು ಯಾರೋ ಮನೆಯ ರೂಪವನ್ನೇ ಬದಲಿಸಿರಬಹುದು. ಗೋಡೆಯ ಬಣ್ಣ ಬೇರೆಯದೇ ಆಗಿಸಿರಬಹುದು. ನನ್ನ ಮನಸ್ಸಿನ ಗೋಡೆಯ ಬಣ್ಣ ಇನ್ನೂ ಅಚ್ಚಳಿಯದೇ ಹಾಗೇ ಇದೆ. ಮನೆಯ ಗೋಡೆಗಳ ಮೇಲೆ ನನ್ನ ತಮ್ಮ ಅವಿ ಹಾಗು ನಾನು ಜಾಯಿಂಟ್ ವೆಂಚರ್ ನಲ್ಲಿ ಬಿಡಿಸಿದ್ದ ನವಿಲು, ಸೂರ್ಯೋದಯ, ನದಿ, ಮರ, ಮತ್ತು ಅವನನ್ನು ಮಧ್ಯೆ ನಿಲ್ಲಿಸಿಕೊಂಡು ಇಬ್ಬರು ಅಕ್ಕಂದಿರು ನಿಂತಿರುವಂತೆ ಬಿಡಿಸಿದ್ದ ಗೊಂಬೆಗಳ ಚಿತ್ರವಿನ್ನೂ ಚಿತ್ತಾಗದೇ ಉಳಿದಿದೆ. ಅದೇ..ಅವತ್ತಿನದೇ ಮುಗ್ಧಮಗುವಾಗಿ ಮನಸ್ಸು ಇನ್ನೂ ತೊದಲುತ್ತದೆ…ಮರೆತೇನೆಂದರೆ ಮರೆಯಲಿ ಹ್ಯಾಂಗಾ……