[30/12/2015 4:30 AM] S. Bhargav: ಕಗ್ಗ–೯
ಏನು ಭೈರವಲೀಲೆಯೀ ವಿಶ್ವಭ್ರಮಣೆ!
ಏನು ಭೂತಗ್ರಾಮನರ್ತನೋನ್ಮಾದ ! I
ಏನಗ್ನಿ ಗೋಳಗಳು ! ಏನಂತರಾಳಗಳು !
ಏನು ವಿಸ್ಮಯ ಸೃಷ್ಟಿ! – ಮಂಕುತಿಮ್ಮ II
ಭೈರವಲೀಲೆಯೀ = ಭೈರವ+ ಲೀಲೆಯು+ಈ , ಭೂತಗ್ರಾಮನರ್ತನೋನ್ಮಾದ = ಭೂತ+ಗ್ರಾಮ+ನರ್ತನ+ಉನ್ಮಾದ, ಏನಗ್ನಿ= ಏನು+ ಅಗ್ನಿ
ಬೈರವ= ಪರಮ ಶಿವ, ರುದ್ರ, ಉನ್ಮಾದ = ಉದ್ವೇಗ, ಗೋಳ = ಉಂಡೆ, ವಿಸ್ಮಯ= ಆಶ್ಚರ್ಯ.
ಏನಿದು ಭೈರವ ಲೀಲೆ. ಏನಿದು ಇಡೀ ವಿಶ್ವದ ಸುತ್ತಾಟ. ಏನಿದು ಪಂಚ ಮಹಾ ಭೂತಗಳ ಮತ್ತು ಆ ಭೂತಗಳ ವಾಸಸ್ಥಳವಾದ ಆ ಮಹಾ ಚೈತನ್ಯ ಮತ್ತು ಮತ್ತು ಆ ಚೈತನ್ಯದ ಉನ್ಮಾದಭರಿತ ನರ್ತನ. ಏನಿದು ಅಗ್ನಿ ಗೋಳಗಳು ಈ ಸೃಷ್ಟಿಯ ಅಂತರಾಳ. ಆಹಾ ಎಂತಹ ಈ ವಿಸ್ಮಯ ಈ ಸೃಷ್ಟಿ. ಇದು ಈ ಕಗ್ಗದ ಅಂತರ್ಯದ ಭಾವ.
ರುದ್ರ ತಾಂಡವ ಎನ್ನುವ ಅರ್ಥದಲ್ಲಿ ಈ ವಿಶ್ವದ ಸೃಷ್ಟಿಯನ್ನು ವಿಸ್ಮಯವೆಂದು ಕರೆಯುತ್ತಾರೆ ಶ್ರೀ ಗುಂಡಪ್ಪನವರು. ಹೌದು ಇದು ವಿಸ್ಮಯವೇ ಸರಿ. ಆ ಹಿಂದೆಯೇ ವಿವರಿಸಿದಂತೆ ಸೌರವ್ಯೂಹಗಳು, ಕ್ಷೀರಪಥಗಳು, ಆಕಾಶಗಂಗೆಗಳು ಮತ್ತು ಇಡೀ ವಿಶ್ವ. ಈ ವಿಶ್ವದ ಅಂತರ್ಯದಲ್ಲಿ ನಡೆಯುವ ಅಗ್ನಿಸ್ಪೋಟಗಳು, ಹೊಸ ಹೊಸ ನಕ್ಷತ್ರಗಳ, ಗ್ರಹಗಳ ಹುಟ್ಟು, ಸಿಡಿತ, ಒಂದರೊಳಗೆ ಒಂದು ವಿಲೀನವಾಗುವ ಪ್ರಕ್ರಿಯೆ, ಇವೆಲ್ಲವನ್ನೂ ನಾವು ಕಾಣುವುದಿರಲಿ, ಊಹಿಸಲೂ ಅಸಾಧ್ಯವಾದ ರೂಪ. ಅದನ್ನು ಪರಶಿವನ ಅಥವಾ ನಟರಾಜನ ರುದ್ರ ತಾಂಡವಕ್ಕೆ ಹೋಲಿಸುತ್ತಾರೆ. ಈ ಸೃಷ್ಟಿ, ಸೃಷ್ಟಿಯಲ್ಲಿನ ಪಂಚ ಮಹಾಭೂತಗಳು ಮತ್ತು ಅವುಗಳ ಕಾರ್ಯ ವೈಖರಿಯಾವುದೂ ಸಹ, ಊಹಾತೀತ. ಇದೊಂದು ಯಾರಿಗೂ ಅರ್ಥವಾಗದ ವಿಸ್ಮಯವೆನ್ನುತ್ತಾರೆ ಮಾನ್ಯ ಗುಂಡಪ್ಪನವರು.
152 ದಶಲಕ್ಷ ಕಿಲೋ ಮೀಟರ್ ದೂರದಲ್ಲಿರುವ ನಮ್ಮ ಸೌರಮಂಡಲದ ಸೂರ್ಯನಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಬೇಕಾಗುವ ಸಮಯ 8 .28 ನಿಮಿಷಗಳು. ಸೂರ್ಯ ಒಂದು ನಕ್ಷತ್ರ. ನಮಗೆ ಆಕಾಶದಲ್ಲಿ ಕಾಣುವ ಅನ್ಯ ಅನೇಕ ನಕ್ಷತ್ರಗಳಂತೆ. 152 ದಶಲಕ್ಷ ಕಿಲೋ ಮೀಟರ್ ದೂರದಲ್ಲಿದ್ದರೂ ಇಷ್ಟು ಹತ್ತಿರದಲ್ಲಿ ಕಂಡಂತೆ ಕಂಡು ಇಷ್ಟು ಬೆಳಕನ್ನು ಮತ್ತು ಶಾಖವನ್ನು ನೀಡುತ್ತಾನೆ ಈ ನಮ್ಮ ಸೂರ್ಯನೆಂಬ ನಕ್ಷತ್ರ. ಬೇಸಿಗೆ ಕಾಲದಲ್ಲಿ ಅವನ ಶಾಕವನ್ನು ತಡೆಯಲಾರದೆ ಸಾವನ್ನಪ್ಪುವ ಜನರೆಷ್ಟೋ.! ಇದನ್ನೇ ಅಗ್ನಿ ಗೋಳವೆಂದರು ಶ್ರೀ ಗುಂಡಪ್ಪನವರು.
ವಾಚಕರೆ ಯೋಚಿಸಿ, ಇಷ್ಟು ಹತ್ತಿರ ಕಾಣುವ ನಮ್ಮ ಸೂರ್ಯನೇ 152 ದಶಲಕ್ಷ ಕಿಲೋ ಮೀಟರ್ ದೂರದಲ್ಲಿದ್ದಾನೆಂದರೆ, ಇನ್ನು ನಮ್ಮ ಕಣ್ಣಿಗೆ ಬೆಳ್ಳಿ ಚುಕ್ಕಿಯಂತೆ ಕಾಣುವ ಎಷ್ಟೋ ನಕ್ಷತ್ರಗಳು ಎಷ್ಟು ದೂರದಲ್ಲಿರಬೇಕು? ನಮ್ಮ ಸೌರಮಂಡಲದ ಸೂರ್ಯನ ನಂತರ ನಮಗೆ ಹತ್ತಿರದಲ್ಲಿರುವ ನಕ್ಷತ್ರವೆಂದರೆ ಆಲ್ಫಾ ಸೆಂಚ್ಯುರಿ ಅಥವಾ ಮ್ಯಾಗ್ಜಿಮಾ ಸೆಂಚ್ಯುರಿ . ಇದು ನಮಗೆ ಎಷ್ಟು ದೂರದಲ್ಲಿದೆಯೆಂದರೆ, ಅಲ್ಲಿಂದ ಹೊರಟ ಬೆಳಕು ನಮ್ಮ ಭೂಮಿಯನ್ನು ತಲುಪಬೇಕಾದರೆ 4 .7 ವರ್ಷಗಳು ಬೇಕಾಗುತ್ತದೆ. ಇನ್ನೂ ದೂರದಲ್ಲಿರುವ ನಕ್ಷತ್ರಗಳ ದೂರವೆಷ್ಟೋ, ನಮಗೆ ಕಾಣದಿರುವ ನಕ್ಷತ್ರಪುಂಜಗಳೆಷ್ಟೋ!! ಅಂದರೆ ಈಗ ನಾವು ಒಂದು ನಕ್ಷತ್ರವನ್ನು ನೋಡುತ್ತಿದ್ದೇವೆ ಎಂದರೆ ಅಲ್ಲಿಂದ ಎಂದೋ ಹೊರಟ ಬೆಳಕನ್ನು ನಾವು ಇಂದು ನೋಡುತ್ತಿದ್ದೇವೆ. ಹಾಗೆ ನಮಗೆ ಕಾಣುವ ಅತೀ ದೂರದ ನಕ್ಷತ್ರ ನಮಗಿಂತ ಎಷ್ಟು ದೂರದಲ್ಲಿರಬಹುದು. ಕಾಣುವುದೇ ಎಷ್ಟೋ ದೂರದಲ್ಲಿದ್ದರೆ ಕಾಣದ್ದೆಷ್ಟೋ ಯಾರಿಗೆ ಗೊತ್ತು. ಇಂತಹ ವಿಶ್ವ, ನಮ್ಮ ಯೋಚನೆಗೂ ನಿಲುಕದ ಅದ್ಭುತ ಸೃಷ್ಟಿ.
ಈ ಸೃಷ್ಟಿಯ ಗೂಢ ನಿಗೂಢ ವಿಸ್ಮಯಗಳು.ಅಬ್ಬ! ಎಂತಹ ವಿಚಿತ್ರ. ಇದನ್ನೇ ಗುಂಡಪ್ಪನವರು ವಿಸ್ಮಯ ಅಥವಾ ವಿಚಿತ್ರವೆನ್ನುತ್ತಾರೆ. ಈ ಸೃಷ್ಟಿಯನ್ನು ಒಂದು ಸೂತ್ರದಲ್ಲಿ ಹಿಡಿದಿಟ್ಟಿರುವ ಆ ಪರಮ ಶಕ್ತಿ. ಇವುಗಳ ಮುಂದೆ ನಾವೆಷ್ಟರವರು? ನಮ್ಮ ಸಾಮರ್ಥ್ಯದ ಮಿತಿ ಏನು? ನಾವು ಅಹಂಕಾರಪಡಲು ಏನಾದರೂ ಕಾರಣವಿದೆಯೇ? ಯೋಚಿಸಿ ವಾಚಕರೆ.
ಈ ವಿಸ್ಮಯಭರಿತ ಮತ್ತು ವಿಚಿತ್ರವಾದ ವಿಶ್ವ, ಅದರ ನಿಗೂಢತೆ ಮತ್ತು ಇದರ ಸೃಷ್ಟಿಕರ್ತನ ಸಾಮರ್ತ್ಯಗಳ ಬಗ್ಗೆ ಆಲೋಚಿಸುತ್ತಾ ನಾವೆಲ್ಲರೂ ಮುಂದಿನ ಕಗ್ಗಕ್ಕೆ ಹೋಗುವ.
[31/12/2015 5:13 AM] S. Bhargav: ಕಗ್ಗ-೧೦
ಏನು ಪ್ರಪಂಚವಿದು! ಏನು ಧಾಳಾಧಾಳಿI
ಏನದ್ಭುತಾಪಾರಶಕ್ತಿ ನಿರ್ಘಾತ! II
ಮಾನವನ ಗುರಿಯೇನು? ಬೆಲೆಯೇನು?ಮುಗಿವೇನು? I
ಏನರ್ಥವಿದಕೆಲ್ಲ? – ಮಂಕುತಿಮ್ಮ II
ಏನದ್ಭುತಾಪಾರಶಕ್ತಿ ನಿರ್ಘಾತ = ಏನು ಅದ್ಭುತ + ಅಪಾರ+ ಶಕ್ತಿ , ನಿಘಾತ = ಹೊಡೆತ.
ಇಲ್ಲಿಯವರೆಗೆ ಬಂದ ೯ ಕಗ್ಗಗಳಲ್ಲಿ, ಮೊದಲ ಮೂರು ಕಗ್ಗಗಳಲಿ, ಶ್ರೀ ಗುಂಡಪ್ಪನವರು, ಆ ಪರಮಾತ್ಮನೆಂದೆನಿಸಿಕೊಂಡ, ಪರಮಶಕ್ತಿಗೆ ನಮಿಸುತ್ತಾ, ಮುಂದಿನ ಕಗ್ಗಗಳಲ್ಲಿಮನುಷ್ಯನ ಜೀವನದ ಮತ್ತು ಸೃಷ್ಟಿಯ ವಿಚಿತ್ರಗಳನ್ನು ಬರೆದಿದ್ದಾರೆ. ಈ ಸಮಯಕ್ಕೆ ನಾ ಹಿಂದೆ ಹೇಳಿದಂತೆ ಎರಡನೇ ಮಹಾ ಯುದ್ಧ ಆರಂಭವಾಗಿ ಎಲ್ಲೆಲ್ಲೂ ಹಾಹಾಕಾರ ದಾಳಿಗಳು. ಇವಗಳನ್ನು ಕಂಡು ಅಂದಿನ ಸಮಯಕ್ಕೆ ಅವರ ಅನುಭೂತಿ ಏನಿತ್ತು ಎಂಬುದು ಇಂದಿನ ಮತ್ತು ಮುಂದಿನ ಕೆಲವು ಕಗ್ಗಗಳಲ್ಲಿ ಕಾಣಬಹುದು.
ಈ ಪ್ರಪಂಚಕ್ಕೆ ಏನಾಗಿದೆ? ಏಕೆ ಈ ಮುತ್ತಿಗೆಗಳು? ಏನು ಈ ಹೊಡೆತಗಳು ಮತ್ತು ಆ ಹೊಡೆತಗಳ ಹಿಂದಿನ ಅಪಾರ ಶಕ್ತಿ ಏನು ?ಮಾನವನ ಗುರಿಯೇನು? ಇದಕ್ಕೆಲ್ಲ ಬೆಲೆಯೇನು? ಇದಕ್ಕೆಲ್ಲ ಅಂತ್ಯವೇನು? ಮತ್ತು ಇದಕ್ಕೆಲ್ಲ ಏನು ಅರ್ಥ ಎಂಬ ಬಾವಗಳನ್ನು ವ್ಯಕ್ತ ಪಡಿಸುತ್ತಾ ಅಂದು ನಡೆಯುತ್ತಿದ್ದ ಪ್ರಾಪಂಚಿಂಕ ವಿಧ್ಯಮಾನಗಳನೆಲ್ಲ ಒಟ್ಟುಗೂಡಿಸಿ ಹಲವು ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತಾರೆ.
ಯಾರೋ ಒಬ್ಬ ಸರ್ವಾಧಿಕಾರಿಯ ಅಧಿಕಾರ ದಾಹ, ಅಧಿಕಾರವನ್ನು ವಿಸ್ತರಿಸುವ ಮಹತ್ವಾಕಾಂಕ್ಷೆ ಮತ್ತು ಅಹಂಕಾರವನ್ನು ತಣಿಸುವ ಅತೀ ಆಸೆಗೆ ಬಲಿಯಾದದ್ದು ಇಡೀ ವಿಶ್ವ. ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದಮೇಲೆ ದಾಳಿ. ಆ ರಾಷ್ಟ್ರಕ್ಕೆ ಕೆಲವು ಮತ್ತು ಈ ರಾಷ್ಟ್ರಕ್ಕೆ ಕೆಲವು ರಾಷ್ಟ್ರಗಳು ಸಹಾಯಕ್ಕೆ ನಿಲ್ಲುತ್ತವೆ. ಆಗ ಆ ಎರಡು ರಾಷ್ಟ್ರಗಳು ಮತ್ತು ಆ ರಾಷ್ಟ್ರಗಳ ಸಹಾಯಕ್ಕೆ ನಿಂತ ಬೇರೆ ರಾಷ್ಟ್ರಗಳ ಎಲ್ಲ ಸೈನಿಕರೂ ಹೊಡೆದಾಡುತ್ತಾರೆ. ಯಾರೋ ಯಾರ ಮೇಲೋ ದಾಳಿ. ದಾಳಿಗೊಳಗಾದ ರಾಷ್ಟ್ರಕ್ಕಾಗಲೀ ದಾಳಿಮಾಡಿದ ರಾಷ್ಟ್ರಕ್ಕಾಗಲೀ ದಾಳಿಯ ಕಾರಣವೇ ಗೊತ್ತಿಲ್ಲ. ಹೊಡೆದಾಡುವುದು, ಪಾಪ ಮುಗ್ದ ಸೈನಿಕರು. ಕೇವಲ ಜೀವಿಕೆಗಾಗಿ.
ಇದು ಮಾನವನ ಜೀವನದ ಇತಿಹಾಸದಲ್ಲಿ ನಿರಂತಾರವಾಗಿ ನಡೆದಿದೆ. ಕ್ರಿಸ್ತಪೂರ್ವ ಸುಮಾರು ೩೨೫ ವರ್ಷದಲ್ಲಿ ಅಲೆಕ್ಸಾಂಡರನ ವಿಶ್ವ ವಿಜಯ ಯಾತ್ರೆಯಿಂದ ಹಿಡಿದು, ಇಂದಿನವರೆಗೆ ನಡೆದ ಯುದ್ಧಗಳು ಆಯಾಯಾ ರಾಷ್ಟ್ರಗಳ ನಾಯಕರ ಭೌದ್ಧಿಕ ಮತ್ತು ನೈತಿಕ ( intellectual & moral ) ದಿವಾಳಿತನದಿಂದಲೇ ನಡೆದಿದೆ ಅಲ್ಲವೆ.
ಅಂತಹ ಒಂದು ಸ್ಥಿತಿಯೇ ೨ನೆ ಮಹಾಯುದ್ಧದ ಕಾಲದಲ್ಲಿ ಹಿಟ್ಲರನ ತಿಳಿಗೇಡಿತನದಿಂದಾಗಿ ಆರಂಭವಾಗಿ ವಿಶ್ವವೆಲ್ಲ ಹರಡಿ ಹಲಕೆಲವರು ಕೆಲಕೆಲವರ ಪಕ್ಷ ಹಿಡಿದು ಹೋರಾಡಿ, ಇಡೀ ಪ್ರಪಂಚವನ್ನು ವಿನಾಶದಂಚಿಂಗೆ ತಳ್ಳಿದರು ಘನಘೋರ ಯುದ್ಧ, ಅಪಾರ ಶಕ್ತಿಯ ವ್ಯಯ, ಸಾವು ನೋವು. ಪ್ರತಿ ದೇಶಕ್ಕೂ ಯುದ್ಧಕ್ಕಾಗಿ ಅಪಾರ ವೆಚ್ಚ. ಆ ವೆಚ್ಚವನ್ನು ಭರಿಸಲಿಕ್ಕಾಗಿ ಅಧಿಕ ಕರಗಳು ಮತ್ತು ಕರಭಾರದಿಂದ ತತ್ತರಿಸಿದ ಪ್ರಜೆಗಳು. ಯುದ್ಧದಲ್ಲಿ ಸಾವು ನೋವುಗಳು. ಇದು ಸಾಲದೆಂಬಂತೆ ಅಂದು ಇಡೀ ಪ್ರಪಂಚದಲ್ಲೇ ಬರದ ಕರಾಳ ನೃತ್ಯ. ಎಲ್ಲದಕ್ಕೂ ಕೊರತೆ, ಕಾಲರಾ ಪ್ಲೇಗ್ ನಂತಹ ಸೋಂಕು ರೋಗಗಳ ರುದ್ರ ನರ್ತನ. ನೋವು ಮಾತ್ರ ಅಧಿಕ . ಇದನ್ನು ಕಂಡೆ ಗುಂಡಪ್ಪನವರು, “ಮಾನವನ ಗುರಿಯೇನು”? ಎಂದು ಪ್ರಶ್ನಿಸುತ್ತಾರೆ. ಇದಕ್ಕೆಲ್ಲ ಏನು ಅರ್ಥ ಎಂದು ಕೇಳುತ್ತಾರೆ.
ವಾಚಕರೆ, ನಿಮ್ಮಲ್ಲಿ ಬಹಳಷ್ಟು ಜನಗಳಿಗೆ ಗೊತ್ತೋ ಇಲ್ಲವೋ ನನಗೆ ಗೊತ್ತಿಲ್ಲ, ಅಂದು ಅನ್ನಕ್ಕೆ ಬರ.ಬಟ್ಟೆಗೆ ಬರ. ಹಾಲು ನೀರಿಗೂ ಬರ. ಪ್ರತಿ ಊರಿನಲ್ಲೂ ಗಂಜಿ ಕೇಂದ್ರಗಳು. ಪ್ರತಿಯೊಬ್ಬರಿಗೂ ಬೆಳಗ್ಗೆ ಎರಡು ಸೌಟು ಮತ್ತು ಸಂಜೆ ಎರಡು ಸೌಟು. ಬಟ್ಟೆ ಬೇಕಾದರೆ, ಸರ್ಕಾರದಿಂದ ಪರವಾನಗಿ( permit ) ತೆಗೆದುಕೊಂಡು ಗುಟ್ಟಲ್ಲಿ ಖರೀದಿ ಮಾಡಬೇಕಾದ ಪರಿಸ್ಥತಿ.
ಅಂತಹ ಪರಸ್ಥಿತಿಗೆ ಅರ್ಥವೇನು? ಅಂದರೆ ಅರ್ಥಹೀನ ಎಂಬ ರೀತಿ ಗುಂಡಪ್ಪನವರು ಪ್ರಶ್ನಿಸುತ್ತಾರೆ.
ಇಂದು ಕೂಡ ಪರಸ್ಥಿತಿ ಬದಲಾಗಿಲ್ಲ.ಅಂದು ಕೊರತೆಯಿಂದ – ಇಂದು ಆಧಿಕ್ಯದಿಂದ ಮಾನವನಿಗೆ ತೊಂದರೆ. ಅಹಂಕಾರದ, ದ್ವೇಷದ, ಯುದ್ಧಗಳ, ನೋವಿನ, ಕೊರತೆಗಳ ರೂಪ ಬೇರೆ ಅಷ್ಟೇ! ಇಂದು ಕೂಡ ನಾವು ಅಂದು ಅವರು ಕೇಳಿದ ಪ್ರಶ್ನೆಗಳನ್ನೇ ಕೇಳುವ ಸ್ಥತಿ ಇದೆ ಇಲ್ಲವೇ?
[31/12/2015 8:57 PM] S. Bhargav: ಕಗ್ಗ-೧೧
ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ I
ಮೃತ್ಯುಕುಣಿಯುತಲಿಹನು ಕೇಕೆಹಾಕುತಲಿ II
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ I
ಎತ್ತಲಿದಕೆಲ್ಲ ಕಡೆ? – ಮಂಕುತಿಮ್ಮ II
ಮುತ್ತಿರುವುದು ಇಂದು ಭೂಮಿಯನು ಅದೊಂದು ದುರ್ದೈವ
ಮೃತ್ಯು ಕುಣಿಯುತಲಿಹನು ಕೇಕೆ ಹಾಕುತಲಿ.
ಸುತ್ತಿಪುದು ತಲೆಯನು ಅನು ದಿನವು ಲೋಕದ ವಾರ್ತೆ
ಎತ್ತಲಿದಕೆಲ್ಲ ಮಂಕು ತಿಮ್ಮ
ಸುತ್ತಿಪುದು = ಸುತ್ತಿಸುತ್ತದೆ , ಅನುದಿನವು= ಪ್ರತಿನಿತ್ಯವು, ಎತ್ತಲಿದಕೆಲ್ಲ = ಇದಕ್ಕೆಲ್ಲ ಎಲ್ಲಿ.
ಭೂಮಿಕೆ ಅದೇ. ಯುದ್ಧ. ಘೋರ ವಿಶ್ವ ಮಹಾ ಯುದ್ಧ. ಇಡೀ ವಿಶ್ವವೇ ಅಲುಗಾಡುವಂಥ ಯುದ್ಧ. ಎಲ್ಲೆಲ್ಲೂ ರಕ್ತಪಾತ. ಎಲ್ಲೆಲ್ಲೂ ಯುದ್ಧದ ಕೂಗು. ಅದು ಈ ಭೂಮಿಗೆ ಆವರಿಸಿಕೊಂಡ ದುರ್ದೈವವೆಂದು ವ್ಯಾಖ್ಯಾನಿಸುತ್ತಾರೆ, ಮಾನ್ಯ ಗುಂಡಪ್ಪನವರು. ಎಲ್ಲೆಲ್ಲೂ ಮೃತ್ಯುವಿನ ತಾಂಡವ. ಯುದ್ಧದಲ್ಲಿ, ತಂದೆಯನ್ನೂ, ಅಣ್ಣನನ್ನೋ, ಮಗನನ್ನೂ, ಮಿತ್ರನನ್ನೋ, ತಮ್ಮನನ್ನೋ, ಭೂಮಿಯನ್ನೋ, ಹುಟ್ಟಿದೂರಲ್ಲಿ ಬಿಟ್ಟ ಬೇರನ್ನೋ, ಆ ಊರಿನ ಮಣ್ಣಿನ ಋಣವನ್ನೋ, ಕಳೆದುಕೊಂಡವರೆ ಬಹಳ ಜನ. ಕಳೆದುಕೊಂಡವರೆಲ್ಲರಿಗೂ ನೋವು. ಕಳೆದುಕೊಳ್ಳದವರಿಗೂ ಕಳೆದುಕೊಂಡವರ ನೋವಿಗಾಗಿ ಸಂತಾಪ. ಒಟ್ಟಾರೆ ಇಡೀ ಭೂಮಿಗೆ ಸೂತಕದ ಭಾವ. ಎಲ್ಲ ಕಡೆಯಿಂದಲೂ ಸಾವಿನ ನಷ್ಟದ ಸಮಾಚಾರ. ಪ್ರತಿನಿತ್ಯ ಈ ಸಮಾಚಾರಗಳನೆಲ್ಲ ಕೇಳಿ ಕೇಳಿ, ಪತ್ರಿಕೆಗಳಲ್ಲಿ ಓದಿ ಓದಿ ತಲೆ ಸುತ್ತುವಂತಾಗುತ್ತದೆ. ಇದಕ್ಕೆಲ್ಲ ಎಂದಿಗಾದರೂ ಕೊನೆಯುಂಟೆ ಎಂದು ಲೋಕ ಶಾಂತಿಗಾಗಿ ಮರುಗುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಆ ಯುದ್ಧದಲ್ಲಿ ಗೆಲುವು ಯಾರದಾಯಿತು ಎಂದು ಯೋಚಿಸಿದರೆ, ಗೆದ್ದದ್ದು ” ಮೃತ್ಯು” ಮತ್ತೆಲ್ಲರೂ ಸೋತವರೇ. ಆ ಯುದ್ಧದಲ್ಲೇ ಅಲ್ಲ ಯಾವುದೇ ಯುದ್ಧವನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಿದರೆ, ಗೆಲ್ಲುವುದು “ಮೃತ್ಯು” ಮಾತ್ರ. ಮಿಕ್ಕೆಲ್ಲರೂ, ಎಲ್ಲ ದೇಶಗಳೂ ಸೋಲುತ್ತವೆ. ಕೇವಲ ಮೃತ್ಯು ಗೆಲ್ಲುತ್ತದೆ. ಎರಡನೇ ಮಹಾ ಯುದ್ಧದ ಸಮಯದಲ್ಲಿ ಕ್ರೂರತ್ವಕ್ಕೆ ಒಂದು ಅಂತ್ಯವೇ ಇರಲಿಲ್ಲ. ಹಿಟ್ಲರನ ರಕ್ತ ದಾಹಕ್ಕೆ ಕೊನೆಯೇ ಇರಲಿಲ್ಲ. ಅದಕ್ಕೊಂದು ನಿದರ್ಶನವೆಂದರೆ ” ಸಾಬಿಬಾರ್ ” ಎಂಬಲ್ಲಿ ವಿಷಾನಿಲ ಘಟಕಗಳನ್ನು ನಿರ್ಮಿಸಿ, ವೈರಿ ದೇಶದ ಸೈನಿಕರಷ್ಟೇ ಅಲ್ಲ ಸೆರೆಸಿಕ್ಕ ಸಾಮಾನ್ಯ ಪ್ರಜೆಗಳನ್ನೂ ಅಲ್ಲಿಗೆ ತಂದು, ಕೆಲಸಮಾಡಲು ಶಕ್ತಿ ಇರುವವರನ್ನು ಹಲವಾರು ಕೆಲಸಗಳಿಗೆ ಹಚ್ಚಿ, ಕೆಲಸ ಮಾಡಲಾಗದ ಸ್ತ್ರೀಯರು, ವೃದ್ಧರು, ಮಕ್ಕಳು ಹೀಗೆ ಎಲ್ಲರನ್ನೂ ಅಮಾನವೀಯ ಕ್ರೌರ್ಯದಿಂದ ಆ ವಿಷಾನಿಲ ಘಟಕದೊಳಕ್ಕೆ ತಳ್ಳಿ ಕೊಂದು ಬಿಡುವ ಪರಮ ನೀಚತನವನ್ನು ಹಿಟ್ಲರ ತೋರಿಸಿದ್ದ. ಅದು ಕ್ರೌರ್ಯದ ಹಲವಾರು ಮಾರ್ಗಗಳಲ್ಲಿ ಒಂದಾಗಿತ್ತು. ಎಲ್ಲ ದೇಶಗಳೂ ಒಂದಲ್ಲ ಒಂದು ದೇಶದ ಪಕ್ಷವನ್ನು ತೆಗೆದುಕೊಂಡು ಇಡೀ ವಿಶ್ವವನ್ನೇ ವಿನಾಶದ ಅಂಚಿಗೆ ತಳ್ಳುವಂಥಾ ಯುದ್ದವನ್ನು ನಡೆಸಿದರು. ಜಪಾನಿನ ಮೇಲೆ ಬಿದ್ದ ಎರಡು ಅಣು ಬಾಂಬುಗಳು, ಈ ಯುದ್ಧವನ್ನು ಒಂದು ಕೊನೆ ಮುಟ್ಟಿಸಿತು. ಇದು ಚರಿತ್ರೆ.
ಆದರೆ ವರ್ತಮಾನವೇನೂ ಭಿನ್ನವಾಗಿಲ್ಲ. ಇನ್ನೂ ಭೀಕರವಾಗುತ್ತಿದೆ. ಆಗ ಒಂದು ಯುದ್ಧ ನಡೆದರೆ, ಈಗ ಹಲವಾರು ಯುದ್ಧಗಳು. ವೈಜ್ಞಾನಿಕವಾಗಿ, ಆರ್ಥಿಕವಾಗಿ ಮುಂದುವರೆದ ರಾಷ್ಟ್ರಗಳು ಹಿಂದಿರುವ ರಾಷ್ಟ್ರಗಳಮೇಲೆ ಆಧಿಪತ್ಯ, ದಬ್ಬಾಳಿಕೆ. ಷಡ್ಯಂತ್ರ, ಒತ್ತಡ, ಅನವಶ್ಯಕ ಹಸ್ತಕ್ಷೇಪದಿಂದ ಇಂದಿಗೂ ದೇಶದೇಶಗಳ ಮಧ್ಯೆ ದ್ವೇಷದ ಭಾವ ಒಂದಿಷ್ಟೂ ಕಡಿಮೆಯಾಗಿಲ್ಲ. ಜಾತಿ, ಮತ, ಭಾಷೆ, ಎಲ್ಲೆ, ಗಡಿ ಹೀಗೆ ಹೊಡೆದಾಟಕ್ಕೆ ಹಲವಾರು ಕಾರಣಗಳು. ತನ್ನ ಬಲದ ಕಾರಣ ಪರರ ದೇಶಗಳಿಗೆ ಕುಂಟು ನೆಪ ಒಡ್ಡಿ ನುಗ್ಗಿ ಮಾರಣ ಹೋಮ ನಡೆಸಿ ಅಲ್ಲಿರುವ ಸಂಪತ್ತನ್ನು ಲೂಟಿಮಾಡುವ ಪ್ರವೃತ್ತಿ ಸರಿ ಸುಮಾರು ಮೂರು ಸಾವಿರ ವರ್ಷಗಳ ಹಿಂದೆಯೂ ಇತ್ತು. ಇಂದೂ ಇದೆ. ಜನಾಂಗಗಳನ್ನು ಒಂದುಗೂಡಿಸುವುದಕ್ಕೆ ಪೂರಕವಾದ ಜಾತಿ, ಮತ, ಭಾಷೆಗಳೇ ಜನ ಜನರ ಮಧ್ಯೆ, ದೇಶ ದೇಶಗಳ ಮಧ್ಯೆ ವೈರಕ್ಕೆ ಕಾರಣವಾಗಿರುವುದು ಒಂದು ವಿಪರ್ಯಾಸ. ಅಷ್ಟೇ ಅಲ್ಲ, ಅಂದು ಇದ್ದ ಅಸ್ತ್ರ -ಶಶ್ತ್ರಾಸ್ತ್ರ ಗಳಿಗೆ ಹೋಲಿಸಿದರೆ ಇಂದು ಪ್ರಪಂಚದಲ್ಲಿ, ಇಂತಹ ಹತ್ತು ಪ್ರಪಂಚಗಳನ್ನು ನಿಮಿಷದಲ್ಲಿ ಧ್ವಂಸ ಮಾಡಬಲ್ಲ ಮಾರಕಾಸ್ತ್ರಗಳನ್ನು ಹೊಂದಿರುವ ಹಲವಾರು ದೇಶಗಳುಂಟು. ನಮ್ಮಲ್ಲಿ ಬತ್ತಿಯನ್ನು ಕಿತ್ತು ಸಿದ್ಧವಾಗಿರುವ ಅಸ್ತ್ರಗಳುಂಟು. ಬೆಂಕಿ ಕಡ್ಡಿ ಗೀರಬೇಕಷ್ಟೇ. ಸಮಗ್ರವಾಗಿ ಇದನ್ನೆಲ್ಲಾ ಸೇರಿಸಿ ದುರ್ದೈವ ಎಂದರು ಮಾನ್ಯ ಗುಂಡಪ್ಪನವರು.
ಅಂದು ಗುಂಡಪ್ಪನವರು ಖೇದ ವ್ಯಕ್ತಪಡಿಸಿದ ಕಾರಣಗಳು ಇಂದಿಗೂ ಇವೆ. ಅಷ್ಟೇ ಅಲ್ಲ,ಇನ್ನೂ ವಿಕೃತ ರೂಪ ಪಡೆದುಕೊಂಡು ಇಡೀ ಪ್ರಪಂಚವನ್ನೇ ಎತ್ತಕೊಂಡುಹೋಗುತ್ತಿದೆಯೋ ಯಾರು ಬಲ್ಲರು.
ಅಂದು ಅಷ್ಟಕ್ಕೇ ಮರುಗಿದ ಗುಂಡಪ್ಪನವರು ಇಂದು ಈ ಸ್ಥಿತಿಯನ್ನು ನೋಡಿದರೆ ಏನು ಹೇಳಿರಬಹುದೆಂದು ಊಹಿಸಲೂ ಕಷ್ಟ.
ಇಂತಹ ವಿಚಾರಗಳನ್ನು ಮಂಥನಮಾಡುತ್ತ, ಒಂದು ಶಾಂತ ಪ್ರಪಂಚವನ್ನು ನಿರ್ಮಿಸುವ ದಿಕ್ಕಿನಲ್ಲಿ ಪ್ರಯತ್ನಿಸುತ್ತಾ, ನಾವು ಮುಂದಿನ ಕಗ್ಗಕ್ಕೆ ಹೋಗೋಣವೆ?
[02/01 8:25 AM] S. Bhargav: ಕಗ್ಗ-೧೨
ಮಾನವರೋ ದಾನವರೋ ಭೂಮಾತೆಯನು ತಣಿಸೆ
ಶೋಣಿತವನೆರೆಯುವರು ಬಾಷ್ಪಸಲುವುದಿರೆ?
ಏನು ಹಗೆ! ಏನು ಧಗೆ!ಏನು ಹೊಗೆ! ಯೀ ಧರಿಣಿ
ಸೌನಿಕನ ಕಟ್ಟೆಯೇಂ? – ಮಂಕುತಿಮ್ಮ
ಶೋಣಿತವನೆರೆಯುವರು= ಶೋಣಿತವನು+ ಎರೆಯುವರು/ಬಾಷ್ಪಸಲುವುದಿರೆ= ಭಾಷ್ಪ+ಸಲುವುದು+ಇರೆ
ಶೋಣಿತ= ರಕ್ತ, ಭಾಷ್ಪ = ಕಣ್ಣೀರು, ಎರೆಯುವುದು= ಸುರಿಸುವುದು, ಸಲುವುದಿರೆ= ಸುರಿಸಬೇಕಾದರೆ. ಸೌನಿಕ = ಕಟುಕ, /ಕಟ್ಟೆ= ಜಗುಲಿ.
ಇವರೇನು ಮನುಷ್ಯರೋ ಅಥವಾ ರಾಕ್ಷಸರೋ? ಈ ಭೂಮಾತೆಯನು ತಣಿಸಲು ಅಂದರೆ ದಾಹವಿಂಗಿಸಲು ಕಣ್ಣೇರು ಸುರಿಸುವಬದಲು ರಕ್ತವನ್ನು ಸುರಿಸಿಹರಲ್ಲ! ಈ ಪ್ರಪಂಚದಲ್ಲಿನ ಹಗೆ ಮತ್ತು ಹೊಗೆಗಳನ್ನು ನೋಡಿದರೆ ಇಡೀ
ಪ್ರಪಂಚವೇ ಕಟುಕನ ಜಗುಲಿಯಂತಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
ಮತ್ತದೇ ಯುದ್ಧದ ಸನ್ನಿವೇಶವನ್ನು ಈ ಕಗ್ಗದಲ್ಲೂ ಉಲ್ಲೇಖಿಸುತ್ತಾರೆ, ಶ್ರೀ ಗುಂಡಪ್ಪನವರು. ಪಾಪ ಅವರ ಮನ ಎಷ್ಟು ನೊಂದಿತ್ತೋ ಏನೋ? ಇಲ್ಲದಿದ್ದರೆ ಅಂದಿನ ವರ್ತಮಾನ ಸ್ಥಿತಿಗೆ ಇಷ್ಟೊಂದು ಪ್ರತಿಕ್ರಿಯೆ ಬರುತಿತ್ತೆ.
ಇರಲಿ. ಮಾನವರಾದ ನಾವು ಮಾನವರಂತೆ ಇರದೇ ದಾನವರಂತೆ ಏಕೆ ಒಬ್ಬರಿಗೆ ಮತ್ತೊಬ್ಬರ ರಕ್ತದಾಹ. ಬಾಳುವವನು ಮಾನವ ಎನ್ನುತ್ತದೆ ಪರಿಭಾಷೆ. ಬಾಳದೆ ಯುದ್ಧಮಾಡಿ ನಾಶಕ್ಕೆ ಕಾರಣರಾದವರನ್ನು ಮಾನ್ಯ ಗುಂಡಪ್ಪನವರು ದಾನವರೆಂದು ಸೂಕ್ತವಾಗೆ ಹೇಳಿದ್ದರೆ.
ಅಹಂಕಾರದಿಂದ, ಆಸೆಯಿಂದ, ಮದ, ಮತ್ಸರಗಳ ಕಾರಣಗಳಿಂದ ಎಲ್ಲ ಯುದ್ಧಗಳೂ ನಡೆಯುತ್ತವೆ. ನಮ್ಮ ಪುರಾಣಗಳಲ್ಲೂ ಇಂತಹ ಯುದ್ಧಗಳನ್ನು ನೋಡಬಹುದು. ದಾನವರಾಗೆ ಹುಟ್ಟಿದ ಹಿರಣ್ಯಾಕ್ಷ-ಹಿರನ್ಯಕಶಿಪುಗಳೂ ಸಹ ತಮಗೆ ಸಿಕ್ಕ ವಾರಗಳ ಬಲದಿಂದ, ಮದೋನ್ಮತ್ತರಾಗಿ ಭೂಲೋಕವೇನು ದೇವಲೋಕಕ್ಕೂ ಲಗ್ಗೇ ಇಟ್ಟ ಉಲ್ಲೇಖವುಂಟು .ಮಹಾಭಾರತದ ಯುದ್ಧದಲ್ಲೂ ಇಡೀ ಆರ್ಯವರ್ತವೇ ಇಬ್ಬಾಗವಾಗಿ ಕೆಲವರು ಕೌರವರ ಮತ್ತೆ ಕೆಲವರು ಪಾಂಡವರ ಪಕ್ಷ ವಹಿಸಿ ಯುದ್ಧಮಾಡಿ ೧೮ ಅಕ್ಷೋಹಿಣಿ ( ೧.೫೬ ಸಾವಿರ) ಜನರನ್ನು ಬಳಿ ತೆಗೆದುಕೊಂಡಿತಂತೆ. ಅದು ಪುರಾಣ. ಗ್ರೀಕ್ ಪುರಾಣದಲ್ಲಿ ಬರುವ ಟ್ರೋಜನ್ ಯುದ್ಧವೂ ಸಹ ಒಂದು ” ಹೆಲನ್” ಎನ್ನುವ ಹೆಣ್ಣಿಗಾಗಿ ನಡೆದು ಸುಮಾರು ವರ್ಷಗಳಕಾಲ ನಡೆದು ಅಪಾರ ಸಾವು ನೋವುಗಳಿಗೆ ಕಾರಣವಾಯಿತಂತೆ.
ಇನ್ನು ನಮ್ಮ ದೇಶದಲ್ಲಿ ಕ್ರಿಸ್ತ ಪೂರ್ವ ೩೨೩ ರ ಸುಮಾರಿಗೆ ಚಾಣಕ್ಯ ಬರುವವರೆಗೆ, ಸಣ್ಣ ಸಣ್ಣ ರಾಜರು ಮತ್ತು ಕೆಲವು ದೊಡ್ಡ ರಾಜರುಗಳು ಸದಾ ಯುದ್ಧನಿರತರು. ಮಾತ್ರ ಅವರ ದಾನವೀ ಅಹಂಕಾರವನ್ನು ತಣಿಸಲಿಕ್ಕಾಗಿಯೇ ನಡೆದ ಯುದ್ದ್ಧಗಳು. ಕ್ಷುಲ್ಲಕ ಕಾರಣಕ್ಕಾಗಿಯೇ ನಡೆವ ಯುದ್ಧಗಳಲ್ಲೆಲ್ಲ ನಡೆಯುವುದು ಸಾಮಾನ್ಯರ ಮಾರಣ ಹೋಮ. ಅದು ದಾನವೀ ಪ್ರವೃತ್ತಿ. ನಮ್ಮ ದೇಶವನ್ನೇ ತೆಗೆದುಕೊಂಡರೆ, ಮೊದಲು ಯವನರು, ನಂತರ ಮೊಘಲರು ನಂತರ ಬ್ರಿಟಿಷರು. ಹೀಗೆ ಆಕ್ರಮಣಕಾರರ ದಂಡೇ ನಮ್ಮ ದೇಶವನ್ನು ಲೂಟಿಮಾಡಲು ಹಿಂದೂ ಹಿಂಡಾಗಿ ಬಂದವರೇ ಹೆಚ್ಚು. ಇವರು ಸಾಲದೆಂಬಂತೆ,ಬಂದವರು ಡಚ್ಚರು, ಪೋರ್ಚ್ಯುಗೀಸರು , ಎಲ್ಲರೂ ನಮ್ಮ ನಾಡಿನಮೇಲೆ ದಾಳಿಮಾಡಿದರು. ವಾಚಕರೆ ನೋಡಿ ಭಾರತವು ಯಾವುದೇ ಅನ್ಯ ದೇಶದಮೇಲೆ ದಾಳಿ ಮಾಡಿದ್ದನ್ನು ಯಾವುದಾದರೂ ಪುಸ್ತಕದಲ್ಲಿ ಕಂಡಿದ್ದೀರಾ? ಅಖಂಡವಾಗಿದ್ದ ಭಾರತ ೨೦೦ ವರ್ಷಗಳಲ್ಲಿ ತುಂಡು ತುಂಡಾಗಿ ಹರಿದು ಹಂಚಿಹೋಗಿದೆ.
ಹಾಗಾಗಿ ವಾಚಕರೆ, ಅಹಂಕಾರ ದುರಾಸೆ ಈ ಎಲ್ಲ ಯುದ್ಧಗಳಿಗೂ ಕಾರಣವಾಗಿತ್ತು. ಈ ಜಗತ್ತಿನಲ್ಲಿ ಮಾನವರು ಸುಸಂಸ್ಕೃತ ಪ್ರಾಣಿಗಳು. ಅನ್ಯ ಪ್ರಾಣಿಗಳಿಗಿಂತ ಭಿನ್ನ. ಮಾನವತೆಯಿಂದ ತನ್ನ ಜೀವನವನ್ನು ಮತ್ತು ಅನ್ಯರ ಜೀವನವನ್ನೂ ಸಹ ಸುಂದರವಾಗಿ ರೂಪಿಸಿಕೊಳ್ಳಬಲ್ಲ ಶಕ್ತಿ ಅವನಿಗೆ ಇದೆ. ಆದರೆ ಮಾತ್ರ ಅಹಂಕಾರದಿಂದ ತನ್ನ ಬುಡಕ್ಕೆ ತಾನೇ ಕೊಳ್ಳಿ ಇಟ್ಟುಕೊಂಡು ಅನ್ಯರನೂ ಸುಡುವ ಈ ದಾನವೀ ಅಥವಾ ಪೈಶಾಚಿಕ ಪ್ರವೃತ್ತಿ ಏಕೆ?
ದರಣಿ ಸಸ್ಯಶ್ಯಾಮಲವಾಗಿರಬೇಕಾದರೆ, ನೀರು ಮತ್ತು ಶ್ರಮದ ಅವಶ್ಯಕತೆ ಉಂಟು ಅದನ್ನು ಬಿಟ್ಟು ದ್ವೇಷದ ಬೀಜ ಮತ್ತು ರಕ್ತದ ಸಿಂಚನವಾದರೆ, ಬೆಳೆ ಬೆಳೆದೀತೆ? ಹೊಟ್ಟೆ ತುಂಬೀತೆ? ಹಗೆಯ ಹೊಗೆಯಿಂದ ಉಸಿರು ಕಟ್ಟುತ್ತದೆಯೇ ಹೊರತು ಜೀವ ಪೋಷಣೆಯಾಗದು. ಜೀವನದ ನಡೆಯದು. ಈ ಪ್ರಪಂಚದ ಗತಿಯೇನು? ಅದು ಹಾಗಾದರೆ ಇಡೀ ಪ್ರಪಂಚವೇ ಕಟುಕನ ಜಗಲಿಯಂತಾಗುತ್ತದೆ ಅಲ್ಲವೆ? ಅಂಥಹ ಭಾವಗಳನ್ನೇ ಮಾನ್ಯ ಶ್ರೀ ಗುಂಡಪ್ಪನವರು ವ್ಯಕ್ತ ಪಡಿಸುತ್ತಾರೆ ಈ ಕಗ್ಗದಲ್ಲಿ.
ಸಹೃದಯರೇ, ಒಂದು ಸಣ್ಣ ಬೀದಿ ಜಗಳ ದಿಂದ ಹಿಡಿದು ಒಂದು ಮಹಾ ಪ್ರಪಂಚ ಯುದ್ಧಕ್ಕೂ ಮಾನವತೆಯ ಕೊರತೆ ಮತ್ತು ಅಹಂಕಾರಭರಿತ ದಾನವತೆಯೇ ಕಾರಣ. ದ್ವೇಶವೇ ಕಾರಣ ಇದರಿಂದ ನಾಶವೇ ಹೊರತು ಬಾಳು ಇಲ್ಲ ಎಂದು ನಾವೂ ಸಹ ಅರಿತು ನಮ್ಮ ನಮ್ಮಲ್ಲಿ ಇರುವ ಅಂತಹ ವಿನಾಶಕಾರಿ ಭಾವಗಳನ್ನು ತೊಡೆದು, ಈ ಇಡೀ ಜಗತ್ತನ್ನು ಸುಂದರ ತಾಣವನ್ನಾಗಿ ಪರಿವರ್ತಿಸಲು ಪ್ರಯತ್ನಿಸೋಣ.
[03/01 7:56 AM] S. Bhargav: ಕಗ್ಗ-೧೩
ಪುರುಷಸ್ವತಂತ್ರತೆಯ ಪರಮಸಿದ್ಧಿಯದೇನು ?I
ಧರಣಿಗನುದಿನದ ರಕ್ತಾಭಿಷೇಚನೆಯೇ? II
ಕರವಾಲವನು ಪುಷ್ಪಸರವೆಂದು ಸೆಳೆದಾಡೆ I
ಪರಿಮಳವ ಸೂಸುವುದೆ ? – ಮಂಕುತಿಮಾ II
ಪುರುಷ=ಶಕ್ತಿ , ಪರಮ =ಸರ್ವೋಚ್ಚ, ಸಿದ್ಧಿ= ಪ್ರಯೋಜನ, ಧರಣಿ= ಭೂಮಿ, ಅನುದಿನ=ಪ್ರತಿನಿತ್ಯ ,
ಅಭಿಷೇಚನೆ = ಅಭಿಷೇಕ , ಕರವಾಲ=ಕತ್ತಿ, ಸೆಳೆದಾಡೆ = ಎಳೆದಾಡಿದರೆ, ಪರಿಮಳ = ಸುಗಂಧ.
ಪುರುಷ ಸ್ವತಂತ್ರತೆಯು ಪರಮ ಸಿದ್ಧಿಯದೇನು ಧರಣಿಗೆ ಅನುದಿನವೂ ರಕ್ತಾಭಿಷೇಚನೆಯೇ
ಕರವಾಲವನು ಪುಷ್ಪಸರವೆಂದು ಸೆಳೆದಾಡೆ ಪರಿಮಳವ ಸೂಸುವುದೆ-ಮಂಕುತಿಮ್ಮ.
ಆಗ ನಡೆಯುತ್ತಿದ್ದ ಯುದ್ದ, ಯುದ್ದದಿಂದ ಆಗುತ್ತಿದ್ದ ದುಷ್ಪರಿಣಾಮಗಳು, ಇವುಗಳ ಬಗ್ಗೆ ಮನಕರಗಿ ಭಾವುಕರಾದ ಮಾನ್ಯ ಗುಂಡಪ್ಪನವರು ಶಕ್ತಿಯ ಸ್ವಾತಂತ್ರದ ಸರ್ವೋಚ್ಚ ಗುರಿ, ಈ ಭೂಮಿಗೆ ಪ್ರತಿದಿನವೂ ರಕ್ತದ ಅಭಿಷೇಕವೇ, ಒರೆಯಿಂದ ಕತ್ತಿಯನ್ನು ಹೂವಿನ ಮಾಲೆ ಎಂದು ಎಳೆದರೆ ಅದರಿಂದ ಸುಗಂಧ ಬರಬಹುದೇ ಎನ್ನುತ್ತಾರೆ.
ಪುರುಷ ಎಂದರೆ ಗಂಡಸು ಎನ್ನುವ ಅರ್ಥದಲ್ಲಿ ಸಾಮಾನ್ಯ ಬಳಕೆ. ಆದರೆ ವಾಸ್ತವದಲ್ಲಿ ಪುರುಷ ಎಂದರೆ ಶಕ್ತಿ ಎಂದು ಅರ್ಥ ” ಪುರೇ ಶಯತೀತಿ ಪುರುಷಃ ” ಚೇತನ ಎಂದು ಅಸ್ತಿತ್ವವನ್ನು ಸೂಚಿಸುವಾಗ, ಕ್ರಿಯಾಶೀಲತೆಯನ್ನು ಸೂಚಿಸುವಾಗ, ಚೈತನ್ಯ ಎಂದೂ ಕರೆಯಲಾಗುತ್ತದೆ. ಆದ್ದರಿಂದಲೇ ದೇವರನ್ನು ಸೂಚಿಸುವಾಗ ” ಪರಮ ಅಂದರೆ ಸರ್ವೋಚ್ಚ, ಪುರುಷ ಅಂದರೆ ಶಕ್ತಿ ಎಂಬ ಅರ್ಥದಲ್ಲಿ ” ಪರಮ ಪುರುಷ ” ಅಥವಾ ” ಪರಮಾತ್ಮ “ಎಂದು ಕರೆಯುತ್ತಾರೆ. ಒಟ್ಟಾರೆ, ಪುರುಷವೆಂದರೆ ಶಕ್ತಿ. ಈ ಶಕ್ತಿಯ ಉಪಯೋಗ ರಕ್ಷಣೆಗೆ ಮಾತ್ರ. ಹೇಗೆ ಪರಮಪುರುಷನು ತನ್ನ ಸರ್ವೋಚ್ಚ ಶಕ್ತಿಯನ್ನು ಜಗದ್ರಕ್ಷಣೆಗೆ ವಿನಿಯೋಗಿಸುತ್ತಾನೋ ಹಾಗೆಯೇ, ಈ ಜಗತ್ತಿನಲ್ಲಿ ಹೆಚ್ಚು ಶಕ್ತಿ ಇರುವವರು ತಮಗಿಂತ ಕಡಿಮೆ ಶಕ್ತಿ ಇರುವವರನ್ನು ರಕ್ಷಿಸಬೇಕು ಮತ್ತು ಆ ಶಕ್ತಿಯನ್ನು ಕೇವಲ ಆತ್ಮ ರಕ್ಷಣೆ ಮತ್ತು ಇತರರನ್ನು ರಕ್ಷಿಸುವುದಕ್ಕಾಗಿಯೇ ಉಪಯೋಗಿಸಬೇಕು. ಇದು ಧರ್ಮ.
ಇಲ್ಲಿ ಶಕ್ತಿಯೆಂದರೆ ಕೇವಲ, ದೈಹಿಕ ಶಕ್ತಿಯಷ್ಟೇ ಅಲ್ಲ. ಎಲ್ಲ ರೀತಿಯ ಶಕ್ತಿಯೂ ಇದರ ಪರಿಧಿಯೊಳಕ್ಕೆ ಬರುತ್ತದೆ. ದೇಹ ಬಲ, ಧನಬಲ, ಜನಬಲ, ಅಧಿಕಾರ ಬಲ, ಬುದ್ಧಿ ಬಲ, ಇತ್ಯಾದಿ ಇತ್ಯಾದಿ… ಹೀಗೆ ಯಾವುದೇ ರೀತಿಯ ಶಕ್ತಿಯ ಆಧಿಕ್ಯವಿದ್ದರೂ ಅದನ್ನು ಪರರ ರಕ್ಷಣೆಗೆ ಮಾತ್ರ ಉಪಯೋಗಿಸುವುದು ಧರ್ಮ.
ಆದರೆ ಅಂದಿನ ಮತ್ತು ಇಂದಿನ ವಾಸ್ತವತೆಯೇ ಬೇರೆ. ” ಹಿಂದಿಯಲ್ಲಿ ” ಜಿಸ್ಕಿ ಲಾಠಿ ಉಸ್ಕ್ತಿ ಭೈನ್ಸ್” ಎನ್ನುತ್ತಾರೆ. ಅಂದರೆ ಯಾರಕೈಯಲ್ಲಿ ಕೋಲು೦ಟೋ ಅವನದೇ ಎಮ್ಮೆ” ಎಂದು ಯಾರಿಗೆ ಅಧಿಕ ಶಕ್ತಿ ಇದೆಯೋ ಅವನೇ ರಾಜ. ತನಗೆ ಶಕ್ತಿ ಇದೆ. “ನಾನು ಏನನ್ನಾದರೂ ಮಾಡಬಹುದು, ನನ್ನು ಕೇಳುವವರಾರು, ಕೇಳಿದವರನ್ನು ಸದೆಬಡಿದುಬಿಡುತ್ತೇನೆ” ಎನ್ನುವ ದುರಾಚಾರದ ಜನರೇ ಅಧಿಕವಾಗಿದೆ. ಇದು ಅಹಂಕಾರದ ಪರಮಾವಧಿ. ಎಲ್ಲ ಸಂಘರ್ಶಗಳೂ ಈ ಅಹಂಕಾರ ಜನಿತವಾದ ದಬ್ಬಾಳಿಕೆಯಿಂದಲೇ ನಡೆಯುತ್ತವೆ. ಇದು ತಪ್ಪು. ಇದರಿಂದ ಪ್ರತಿನಿತ್ಯದ ರಕ್ತಪಾತ ಸಾವು ನೋವು ಮಾತ್ರ, ಎನ್ನುತ್ತಾರೆ ಶ್ರೀ ಗುಂಡಪ್ಪನವರು. ಅದಕ್ಕೊಂದು ಉಪಮೆಯನ್ನು ಕೊಡುತ್ತಾರೆ. ಹೂವಿನಮಾಲೆ ಎಂದು ಒರೆಯಿಂದ ಕತ್ತಿಯನ್ನು ಎಳೆದರೆ, ಅದು ಸುಗಂಧವನ್ನು ಬೀರುತ್ತದೆಯೇ.
ವಾಚಕೆ ನಮ್ಮಲ್ಲಿ ಶಕ್ತಿ ಇದ್ದರೆ ನಮ್ಮ ಅವಶ್ಯಕತೆಗೆ ಮೀರಿ ಶಕ್ತಿ ಇದ್ದರೆ, ಅದನ್ನು ಪರಹಿತಕ್ಕಾಗಿ ಉಪಯೋಗಿಸಬೇಕು. ಆ ಪರಮಾತ್ಮನ ಕೃಪೆಯಿಂದ ನಮಗೆ ಸಿಕ್ಕ ಅಧಿಕ ಶಕ್ತಿಯನ್ನು ನಮಗಿಂತ ಕಡಿಮೆ ಶಕ್ತಿ ಇರುವವರ ಒಳಿತಿಗಾಗಿ ಉಪಯೋಗಿಸಬೇಕು. ಹಾಗಾದಾಗ ಪರಸ್ಪರ ಪ್ರೀತಿ ವಿಶ್ವಾಸಗಳು ಬೆಳೆದು ಇಡೀ ಸಮಾಜವೇ ವಾಸಿಸಲು ಒಂದು ಸುಂದರ ತಾಣವಾಗುತ್ತದೆ. ಇಂದಿನ ಸ್ವಾರ್ಥಭರಿತ ಸಮಾಜದಲ್ಲಿ ಎಂತೆಂತಹ ವಿಧ್ಯಮಾನಗಳು ನಡೆಯುತ್ತಿವೆ ಎಂದು ವಿಷದಪಡಿಸುವ ಅವಶ್ಯಕತೆಯೇ ಇಲ್ಲ. ಅದು ಸರ್ವರಿಗೂ ಗೊತ್ತಿರುವ ವಿಷಯವೇ. ಅದು ತಪ್ಪು. ಅದು ಸರಿಯಿಲ್ಲ ಎಂಬ ಅರಿವೂ ಎಲ್ಲರಿಗೂ ಇದೆ. ಹಾಗಾಗಿ, ವಾಚಕರೆ, ನಾವೂ ಆ ನಿಟ್ಟಿನಲ್ಲಿ ಯೋಚನೆ ಮಾಡಬೇಕು. ನಮ್ಮ ಶಕ್ತಿಯನ್ನು, ಸ್ವರಕ್ಷಣೆಗೆ ಉಪಯೋಗಿಸುವ, ಪರರ ರಕ್ಷಣೆಗೆ ಉಪಯೋಗಿಸುವ ಆದರೆ ದುರಾಸೆಗೆ ಸ್ವಾರ್ಥಕ್ಕೆ ಪರರ ಭಕ್ಷಣೆಗೆ ಉಪಯೋಗಿಸುವ ಬುದ್ಧಿ ನಮಗೆ ಎಂದೂ ಬರದಿರಲಿ ಎಂದು ಪ್ರಾರ್ಥಿಸುತ್ತ, ನಮ್ಮಲ್ಲಿ ಇರಬಹುದಾದ ಕೊರತೆಗಳನ್ನು ನೀಗಿಸಿಕೊಳ್ಳುವ ಪ್ರಯತ್ನವನ್ನು ಮಾಡೋಣ.
[04/01 5:33 AM] S. Bhargav: ಕಗ್ಗ-೧೪
ಲೋಕಜೀವನ ಮಂಥನ
ಒಂದೇ ಗಗನವ ಕಾಣುತೊಂದೆ ನೆಲವನು ತುಳಿಯು I
ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು II
ಒಂದೇ ಗಾಳಿಯನುಸಿರ್ವ ನರಜಾತಿಯೋಳಗೆಂತು I
ಬಂದುದೀ ವೈಷಮ್ಯ? – ಮಂಕುತಿಮ್ಮ
ಉಣ್ಣು = ತಿನ್ನು, ಉಸಿರ್ವ= ಉಸಿರಾಡುವ , ನರಜಾತಿ = ಮಾನವ ಜನಾಂಗ. ವೈಷಮ್ಯ = ದ್ವೇಷ . ಎಂತು- ಹೇಗೆ.
ಒಂದೇ ಆಕಾಶವ ಕಾಣುತ, ಒಂದೇ ನೆಲವನ್ನು ತುಳಿಯುತ ಒಂದೇ ಧಾನ್ಯವನ್ನು ಉಣ್ಣುತ ಒಂದೇ ಗಾಳಿಯನು ಉಸಿರಾಡುವ ಮಾನವಜಾತಿಯ ಒಳಗೆ ಈ ದ್ವೇಷ ಹೇಗೆ ಬಂತು ಎಂದು ತಮಗೆ ತಾವೇ ಪ್ರಶ್ನಿಸುತ್ತ ಈ ವಿಚಾರವನ್ನು ಓದುಗರ ಮುಂದಿಟ್ಟಿದ್ದಾರೆ, ಶ್ರೀ ಗುಂಡಪ್ಪನವರು.
ಈ ಜಗತ್ತಿನಲ್ಲಿರುವ ಮಾನವರೆಲ್ಲರಿಗೂ, ಮಾನವರಿಗಷ್ಟೇ ಏನು ಸಕಲ ಜೀವಿ ಸಂಕುಲಕ್ಕೂ ತಲೆಯ ಮೇಲಿನ ಆಕಾಶ ಒಂದೇ. ಇರುವ ಭೂಮಿಯೂ ಒಂದೇ, ಎಲ್ಲರೂ ತಿನ್ನುವುದು ಒಂದೇ ರೀತಿಯ ಆಹಾರ, ಕುಡಿಯುವ ನೀರಿಗೂ ಒಂದೇ ಮೂಲ, ಹಾಗಿದ್ದರೂ ಏಕೆ ಈ ವೈಷಮ್ಯ, ಈ ದ್ವೇಷ ಎಂಬ ಪ್ರಶ್ನೆ ಕಾಲಾನುಕಾಲಕ್ಕೆ ಎಲ್ಲ ಚಿಂತಕರ ಮನಗಳಲ್ಲೂ ಸುಳಿದು, ಉತ್ತರ ಕಂಡು ಕೊಳ್ಳಲು ಪ್ರಯತ್ನ ಆಗಿದೆ.
ಆದರೆ ವಿಚಿತ್ರವೇನೆಂದರೆ, ಅನಾದಿ ಕಾಲದಿಂದಲೂ ಮನುಷ್ಯರ ಗುಂಪುಗಳ ನಡುವೆ, ಒಂದು ದೇಶ ಮತ್ತು ಮತ್ತೊಂದು ದೇಶದ ನಡುವೆ, ಅಣ್ಣ ತಮ್ಮಂದಿರ ನಡುವೆ, ಎರಡು ಊರಿನ ನಡುವೆ ಹೀಗೆ ಎರಡು ಗುಂಪುಗಳ ನಡುವೆ ಉದ್ಭವವಾಗುವ ದ್ವೇಷ, ದ್ವೇಷದಿಂದ ಆವೇಶ, ಇವೆರಡರ ಫಲವಾಗಿ ಜಗಳ ಹೊಡೆದಾಟಕ್ಕೆ ಮೂಲ ಕಾರಣವೇ, ಶ್ರೀ ಗುಂಡಪ್ಪನವರು ಉಲ್ಲೇಖಿಸಿದ, ನೀರು ನೆಲಗಳೇ ಅಲ್ಲವೇ? ಇವುಗಳಿಗಾಗಿಯೇ ಜಗತ್ತಿನ ಎಲ್ಲ ಹೋರಾಟಗಳೂ ನಡೆದಿವೆ. ಇಂದು ನಮ್ಮ ದೇಶದ ನ್ಯಾಯಾಲಯಗಳಲ್ಲಿ ಹೂಡಲ್ಪಡುವ ಕಟ್ಟಳೆಗಳಲ್ಲಿ ೯೦ ಪ್ರತಿಶತ ಭೂಮಿಗೆ ಸಂಬಂಧಿಸಿದುವೆ ಆಗಿರುತ್ತೆ.
“ಇಷ್ಟಿದ್ದರೆ ಮತ್ತಷ್ಟರಾಸೆ” ನಮ್ಮ ಜೀವಿಕೆಗೆ ಎಷ್ಟು ಬೇಕೋ ಅಷ್ಟನ್ನು ಪಡೆದು ಹೊಂದಿ ಕಾಯ ಕರ್ಮ ಮಾಡಿ ಜೀವಿಸುವುದು ಸರಿಯಾದ ಕ್ರಮ. ಆದರೆ ಮಾನವನ ಆಸೆಗೆ ಗಗನವೇ ಮಿತಿ. ಅದಕ್ಕೊಂದು ಹಿಂದೆ ನಾ ಕೇಳಿದ ಕಥೆಯನ್ನು ಹೇಳಬೇಕು. ಒಬ್ಬನಿಗೆ ಬಹಳ ಬಹಳ ಭೂಮಿ ಬೇಕೆನ್ನಿಸಿತಂತೆ. ಅವನ ತಪಸ್ಸಿಗೆ ಮೆಚ್ಚಿ ದೇವರು ಏನು ವರಬೇಕೆಂದಾಗ, “ನನಗೆ ಹೆಚ್ಚು ಭೂಮಿ ಬೇಕು” ಎಂದನಂತೆ. ” ನೋಡು ನೀ ನಿಂತಿರುವ ಜಾಗದಿಂದ ಇಂದು ಸಂಜೆಯವರೆಗೆ ಎಷ್ಟುದೂರ ಓಡಿ, ಎಷ್ಟು ಭೂಮಿಯನ್ನು ಕ್ರಮಿಸಿ ಮತ್ತೆ ಸೂರ್ಯಾಸ್ತಮಾನದ ವೇಳೆಗೆ ನೀ ಈಗ ನಿಂತಿರುವ ಜಾಗಕ್ಕೆ ಬಂದು ಸೇರಿದರೆ, ನೀ ಎಷ್ಟು ಭೂಮಿಯನ್ನು ಉಪಕ್ರಮಿಸಿರುತ್ತೀಯೋ ಅದನ್ನೆಲ್ಲ ನಿನಗೆ ಕೊಡುತ್ತೇನೆ” ಎಂದನಂತೆ ಆ ದೇವರು. ಮಾನವರ ಬಲಹೀನತೆ ಆ ದೇವರಿಗೇ ಗೊತ್ತಿಲ್ಲವೇ. ಕೊಟ್ಟದ್ದೂ ಅವನೇ ತಾನೇ? ಸರಿ ಇವ ಓಡಿದ, ಓಡಿದ. ಓಡಿ ಓಡಿ ಇನ್ನೂ ಸ್ವಲ್ಪ ಮುಂದೆ ಹೋಗುವ, ಇನ್ನೂ ಸ್ವಲ್ಪ ಮುಂದೆ ಹೋಗುವ, ಎಂದು ಓಡಿ ಓಡಿ ಮಧ್ಯಾನ್ಹದ ತನಕ ಓಡಿದ. ” ಅಯ್ಯೋ ಹಿಂತಿರುಗಬೇಕಲ್ಲ ಎಂದು ಯೋಚನೆ ಮಾಡಿ ಮತ್ತೆ ಸ್ವಸ್ಥಾನ ಸೇರಲು ಮೊದಲಿಟ್ಟ. ಆರಂಭದ ಹುಮ್ಮಸ್ಸು ಮತ್ತು ಶಕ್ತಿ ಕುಂದಿತ್ತು. ಬರುತ್ತಾ ಬರುತ್ತಾ ಬಹಳ ಸುಸ್ತಾಗಿ ಕುಸಿದ. ಇನ್ನೇನು ತಾ ಶುರುಮಾಡಿದ ಸ್ಥಳ “ಅಗೋ, ಅಲ್ಲಿ ಕಾಣುತ್ತಿದೆ” ಎನ್ನುವಾಗ ಆ ಸೂರ್ಯ ಮುಳುಗಿಯೇ ಬಿಟ್ಟ. ಆ ದೇವರೂ ಮಾಯವಾಗಿಬಿಟ್ಟ. ಇವನಿಗೆ ಉಳಿದಿದ್ದು ಏನು ಬರೀ ಶ್ರಮ. ಪಶ್ಚಾತ್ತಾಪ.
ಹೀಗೆ ನಾವು ಮಾಡುವ ಕೆಲಸ, ವಸ್ತು, ವ್ಯಕ್ತಿ, ವಿಷಯಗಳನ್ನು ಬಯಸುವಾಗ, ನಮ್ಮ ಮಿತಿಗಳನ್ನು ಅರಿತುಕೊಂಡರೆ ಸುಖ ಇಲ್ಲದಿದ್ದರೆ? ಇಲ್ಲದಿದ್ದರೆ, ನಮಗೆ ಸಿಗಲಿಲ್ಲವೆಂದು ಕೋಪ, ನಮಗಿಂತ ಪರರಿಗೆ ಅಧಿಕವಾಗಿ ಸಿಕ್ಕಿದೆ ಎಂದು ಅಸೂಯೆ, ಸಿಕ್ಕರೆ ಮತ್ತಷ್ಟರ ಲೋಭ, ಅಧಿಕವಾಗಿ ಸಿಕ್ಕರೆ ಮದ, ಸಿಕ್ಕದ್ದು ನಾನಲ್ಲೇ ಇರಬೇಕೆನ್ನುವ ಮೋಹ ಹೇಗೆ ಎಲ್ಲವೂ ಅಂಟಿಕೊಳ್ಳುತ್ತದೆ. ಜೀವನವೇ ನರಕವಾಗುತ್ತದೆ .
ಒಂದೇ ಭೂಮಿ ಒಂದೇ ಆಕಾಶ ಈ ಭೂಮ್ಯಾಕಾಶಗಳ ಸಂಬಂಧವನ್ನು ಎಲ್ಲರೂ ಒಂದೇ ರೀತಿಯಲ್ಲಿ ಹೊಂದಿರುವಾಗ ಏಕೆ ಈ ವೈಷಮ್ಯವೆಂದರೆ, ಜಾತಿ, ಮತ, ಭಾಷೆ, ಪ್ರಾಂತ, ದೇಶಗಳ ಎಲ್ಲೆಗಳನ್ನು ಹಾಕಿ ಕೊಂಡು ಮಾನವರು ಅದನ್ನು ದಕ್ಕಿಸಿಕೊಳ್ಳಲು, ಕಾಪಾಡಲು ಮತ್ತು ತಮ್ಮ ಆಧಿಕ್ಯವನ್ನು ಸಾರಲು, ಸ್ಥಿರಪಡಿಸಲು ಮಾಡುವ ನಿರಂತರ ಹೋರಾಟದ ಫಲವೇ ಈ ದ್ವೇಷಾಸೂಯೆಗಳ ವಿಷ ವೃತ್ತ. ತೃಪ್ತಿಗೆ ಒಂದು ಎಲ್ಲೆ ಅಥವಾ ಮಿತಿ ಹಾಕಿಕೊಂಡರೆ ಎಲ್ಲರಿಗೂ ಸುಖ ಇಲ್ಲದಿದ್ದರೆ ಎಲ್ಲರಿಗೂ ಹಿಂಸೆ ಮತ್ತು ಈ ಬಾಳೇ ನರಕ ಸದೃಶ. ಈ ಜಗತ್ತಿನ ಮಾನವರೆಲ್ಲ ಒಂದೇ. ಈ ಎಲ್ಲ ಭೂಮಿ ಆಕಾಶ ನೀರು ಎಲ್ಲವನ್ನೂ ಪರಮಾತ್ಮ ಎಲ್ಲರ ಉಪಯೋಗಕ್ಕಾಗಿ ನಿರ್ಮಿಸಿದ್ದಾನೆ. ಇದು ಯಾವುದೋ ನಮ್ಮ ಸ್ವಂತವಾಗಲು ಸಾಧ್ಯವೇ ಇಲ್ಲ. ಏಕೆಂದರೆ ಈ ಭೂಮಿಯೇ ನಮಗೆ ಸ್ವಂತ, ನಿರಂತರ ಮತ್ತು ಶಾಶ್ವತವಲ್ಲದಿದ್ದಮೇಲೆ, ಈ ಭೂಮಿಯ ಮೇಲಿನ ವಸ್ತುಗಳು ಹೇಗೆ ಸ್ವಂತವಾಗಲು ಸಾಧ್ಯ. ಅಂತಕನೊಬ್ಬ ಬಾಳಿನಂಚಲ್ಲಿ, ಕಾದಿಲ್ಲವೇ ಇದಕ್ಕೆಲ್ಲ ಒಂದು ಅಂತ್ಯ ಹಾಡಲು.
ಇಂತಹ ಪ್ರವೃತ್ತಿಯಿಂದ ನಿರಂತರ ದ್ವೇಷಾಸೂಯಗಳ ವಿಷ ವೃತ್ತದಲ್ಲಿ ನಾವು ಬೀಳುವುದು ಬೇಡ. ಹಾಗೆ ಬಿದ್ದವರನ್ನು ಬಿಡಿಸುವ ಪ್ರಯತ್ನ ಮಾಡುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗೋಣ ಬನ್ನಿ.
[05/01 7:10 AM] S. Bhargav: ಕಗ್ಗ-೧೫
ಹಳೆಯ ಭಕ್ತಿ ಶ್ರದ್ಧೆಯಳಿಸಿಹೋಗಿದೆ ಮಾಸಿ I
ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ II
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ I
ತಳಮಳಿಸುತಿದೆ ಲೋಕ – ಮಂಕುತಿಮ್ಮ II
ಹಳೆಯ ಭಕ್ತಿ ಶ್ರದ್ಧೆಯು ಅಳಿಸಿಹೋಗಿದೆ ಮಾಸಿ. ಸುಳಿದಿಲ್ಲವು ಯಾವ ಹೊಸ ದರ್ಶನದ ಹೊಳಪು
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ ತಳಮಳಿಸುತಿದೆ ಲೋಕ ಮಂಕುತಿಮ್ಮ
ಮಾಸು = ಅಳಿಸು , ದರ್ಶನ=ಸಿದ್ಧಾಂತದ ಹೊಸ ರೂಪ, ತೆರದಿ= ತರಹೆ, ತಳಮಳಿಸು= ಒದ್ದಾಡು, ಪರದಾಡು
ಈಗ್ಗೆ ಎಪ್ಪತ್ತು ವರ್ಷಗಳ ಕೆಳಗೇ ಗುಂಡಪ್ಪನವರಿಗೆ ಹೀಗೆ ಅನ್ನಿಸಿದ್ದರೆ, ಇಂದು ಅವರು ಏನನ್ನುತ್ತಿದ್ದರೋ ಏನೋ!
ಇರಲಿ, ಪುರಾತನ ಕಾಲದಿಂದಲೂ ಅನೂಚಾನವಾಗಿ ಜನಗಳಲ್ಲಿ ಇದ್ದ ದೇವರಲ್ಲಿ ಭಕ್ತಿ ಮತ್ತು ಸಂಪ್ರದಾಯಗಳಲ್ಲಿ ಇದ್ದ ಶ್ರದ್ಧೆ ಈಗ ಅಳಿಸಿ ಹೋಗಿದೆ. ಇಲ್ಲಿ ಸಂಪ್ರದಾಯ ಎಂದರೆ ಹಿಂದಿನಿಂದ ಬಂದಿರುವ ನಡವಳಿಕೆ ಎಂದಷ್ಟೆ ಅರ್ಥ. ಜನರಲ್ಲಿ ಮತ್ತೆ ಈ ಭಕ್ತಿ ಮತ್ತು ಶ್ರದ್ಧೆಗಳನ್ನು ತರಲು ಯಾವ ಹೊಸ ಸಿದ್ಧಾಂತಗಳೂ ಪ್ರತಿಪಾದಿಸಲ್ಪಟ್ಟು ಪ್ರಚಾರಕ್ಕೆ ಬಂದಿಲ್ಲ. ಹಾಗಾಗಿ ಜನರೆಲ್ಲರೂ ಮೊದಲಿನಿಂದ ಬಂದದನ್ನು ಕಳೆದು ಕೊಂಡು ಹೊಸದಿಲ್ಲದೆ ಒಂದು ಅತಂತ್ರ ಸ್ಥಿತಿಯಲ್ಲಿದ್ದಾರೆ. ಯಾರ ಸಹಾಯವೂ ಇಲ್ಲದೆ ಸುಲಭವಾಗಿ ಮತ್ತು ಚೆನ್ನಾಗಿ ಓಡಾಡಲು ಅಭ್ಯಾಸವಾಗಿರುವ ಮನೆ ಕುಸಿದು ಹೋದರೆ, ಆ ಮನೆಯಲ್ಲಿ ವಾಸಿಸುವ ಕುಂಟನಿಗೋ ಕುರುಡನಿಗೋ, ಪಾಪ ತಳಮಳಿಸುವ ಮತ್ತು ಪರದಾಡುವಂತೆ ಆಗುತ್ತದಲ್ಲವೇ? ಹಾಗೆ ಆಗಿದೆ ಇಂದಿನ ಲೋಕದ ಪರಿಸ್ಥಿತಿ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಇಲ್ಲಿ ಭಕ್ತಿ ಎಂದರೆ ಪರಮಾತ್ಮನ ಮೇಲಿರುವ ಭಕ್ತಿ ಎಂದೇ ತಿಳಿಯಬೇಕಿಲ್ಲ. ಆದರೆ ನಾವು ಮಾಡುವ ಎಲ್ಲ ಕೆಲಸಗಳೂ ನಮ್ಮೊಳಗಿರುವ ಪರಮಾತ್ಮ ಸ್ವರೂಪೀ ಜೀವಾತ್ಮನು ತೃಪ್ತನಾಗುವುದಕ್ಕೆಅಂದರೆ ಆತ್ಮ ತೃಪ್ತಿಗೆ , ಎಂದುಕೊಂಡಾಗ, ಆ ಕೆಲಸದಲ್ಲಿ ಭಕ್ತಿ. ಆ ಭಕ್ತಿ ಇದ್ದಾಗ, ಮಾಡುವ ಕೆಲಸದಲ್ಲಿ ಶ್ರದ್ಧೆ ಬರುತ್ತದೆ. ಹಾಗೆ ಭಕ್ತಿ ಮತ್ತು ಶ್ರದ್ಧೆ ಎರಡೂ ಇದ್ದಾಗ, ಮಾಡುವ ಕೆಲಸ ಸಮರ್ಪಕವಾಗಿದ್ದು ಅದರ ಫಲವೂ ಒಳ್ಳೆಯದಾಗಿರುತ್ತದೆ. ” ಹೇಗೆ ಮನವೋ ಹಾಗೆ ಭಾವ . ಹೇಗೆ ಭಾವವೋ ಹಾಗೆ ಕಾರ್ಯ. ಹೇಗೆ ಕಾರ್ಯವೋ ಹಾಗೆ ಫಲ.” ಹಾಗಾಗಿ ಮನಸ್ಸಿನಲ್ಲಿ ಭಕ್ತಿ ಮತ್ತು ಶ್ರದ್ಧೆಗಳು ಬಹಳ ಮುಖ್ಯ. ಆದರೆ ಅದು ಈಗ ಮಾಸಿ ಹೋಗಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
ಹೇಗೆ ಮಾಸಿಹೋಯಿತು? ಹಲವಾರು ಕಾರಣಗಳು. ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತದೆ. ಆದರೆ ನಕಾರಾತ್ಮಕ ಬದಲಾವಣೆಯಾದರೆ ಅದು ಸರಿಯಲ್ಲ. ಆದ್ದರಿಂದಲೇ ಮಾಸಿಹೋದದ್ದು. ಹಿರಿಯರು ಮನೆಗಳಲ್ಲಿ ಕಿರಿಯರಿಗೆ ಮಾರ್ಗ ದರ್ಶನ ಮಾಡಬೇಕು. ಅವರ ಅನುಭವ ಮತ್ತು ಜ್ಞಾನದ ಮೂಸೆಯಿಂದ ಕಿರಿಯರಿಗೆ ಜ್ಞಾನವನ್ನು ಎರಕ ಹೊಯ್ದಂಗೆ ಎರೆಯಬೇಕು. ಆದರೆ ನಮ್ಮಲ್ಲಿ ಕಾಲಕ್ರಮೇಣ ‘ಏನು’ ಮಾಡಬೇಕು ಎನ್ನುವುದನ್ನು ಮಾತ್ರ ಹೇಳುತ್ತಿದ್ದರು. ‘ಹೇಗೆ’ ಮಾಡಬೇಕು ಎನ್ನುವುದನ್ನು ಹೇಳುತ್ತಿದ್ದರು ಆದರೆ ‘ಏಕೆ’ ಮಾಡಬೇಕು ಎಂದು ಕೇಳಿದರೆ ಅದಕ್ಕೆ” ಬಂಡಾಯ” ವೆನ್ನುತ್ತಿದ್ದರು. “ಹೇಳಿದಷ್ಟು ಮಾಡೋ ತಲೆಹರಟೆ ” ಎನ್ನುತ್ತಿದ್ದರು. ಒಂದು ಅವರಿಗೆ ಹೇಳಲು ಗೊತ್ತಿರಲಿಲ್ಲ ಅಥವಾ ಹೇಳಬೇಕಾದ ವಿಷಯವೇ ಗೊತ್ತಿರಲಿಲ್ಲ ಅಥವಾ ಅವರಿಗೆ ಗೊತ್ತಿದ್ದ ವಿಷಯದ ಸಂಪೂರ್ಣ ಜ್ಞಾನವಿರಲಿಲ್ಲ. ಒಂದು ಕೆಲಸ, ಆ ಕೆಲಸ ಮಾಡುವ ರೀತಿ ಮತ್ತು ಅದರ ಅಂತರ್ಯದ ಉದ್ಧ್ಯೇಶ ಇವುಗಳನ್ನು ಅರಿಯುವುದು ಬಹಳ ಮುಖ್ಯ. ಇದು ಎಲ್ಲ ರೀತಿಯ ಕೆಲಸಗಳಿಗೂ ಅನ್ವಯವಾಗುತ್ತದೆ. ಅದನ್ನು ವಿವರಿಸದೆ ಮಾತ್ರ ಕೆಲಸವನ್ನಷ್ಟೇ ವಿವರಿಸಿ ಮಾಡಲು ಬಿಟ್ಟಾಗ, ಆ ಕೆಲಸದಲ್ಲಿ ಅವರಿಗೆ ತಿರಸ್ಕಾರ ಹುಟ್ಟಿ ಮಾಡುವ ಕೆಲಸದಲ್ಲಿ ಶ್ರದ್ಧೆ ಇರುವುದಿಲ್ಲ. ಶ್ರದ್ಧೆ ಇಲ್ಲದಿದ್ದರೆ ಭಕ್ತಿಯೂ ಹುಟ್ಟುವುದಿಲ್ಲ. ಹಿಂದಿನವರು ಮಾಡಿದ ತಪ್ಪು ಅದೇ.
ಅಂತರ್ಯದ ಭಾವ ಹೇಳಿಕೊಡುವುದು ಅಷ್ಟು ಸುಲಭವಲ್ಲ. ಮೊದಲು ಹೇಳಿಕೊಡುವವನಿಗೆ, ಆ ಭಾವ ಸಿದ್ಧಿಯಾಗಿರಬೇಕು. ಹೇಳಿಕೊಡುವ ಮತ್ತು ಎರಕ ಹೊಯ್ಯುವ ಕಲೆ ಸಿದ್ಧಿಯಾಗಿರಬೇಕು, ಮತ್ತು ಹೊಯ್ಯಬೇಕಾದ ಪಾತ್ರದ “ಪಾತ್ರತೆಯ” ಮತ್ತು ” ಯೋಗ್ಯತೆಯ” ಅರಿವು ಅವನಿಗೆ ಇರಬೇಕು. ( transmitter ಮತ್ತು receiver ಎರಡೂ ಸರಿ ಇರಬೇಕು ) ಇಬ್ಬರೂ ಒಬ್ಬರಿಗೊಬ್ಬರು ಸರಿ ಹೋದರೆ ಆಗ ಶುದ್ಧ ಸತ್ವ ಮನದೊಳಕ್ಕೆ ಇಳಿಯುತ್ತೆ. ಭಕ್ತಿ ಬರುತ್ತೆ ಮತ್ತು ಶ್ರದ್ಧೆ ಬೆಳೆಯುತ್ತೆ. ಅದನ್ನು ನಮ್ಮ ಹಳೆಯ ಗುರುಕುಲ ಪದ್ದತಿಯಲ್ಲಿ ಕಾಣ ಸಿಗುತ್ತಿತ್ತು. ಒಟ್ಟಾರೆ ಹೇಳಬೇಕೆಂದರೆ ಇಂದು ಹಾಗೆ ಹೇಳಿಕೊಡುವವರಾಗಲೀ, ಕಲಿಯುವವರಾಗಲೀ ಇಲ್ಲ. ಇದನ್ನೇ ಗುಂಡಪ್ಪನವರು
“ಮಾಸಿ ಹೋಗಿದೆ” ಎನ್ನುತ್ತಾರೆ. ಇದಕ್ಕೆ ಏನು ಪರಿಹಾರವೆಂದು ಎಲ್ಲರೂ ಯೋಚಿಸಬೇಕು.
ಹಾಗೆ ಮಾಸಿಹೋದದ್ದರಿಂದ ಏನಾಗಿದೆ ಎಂದರೆ, ಮೊದಲೇ ನಾವು ಬಲಹೀನರು. ತತ್ವದ ಬಲವಿಲ್ಲದೆ ಸತ್ವಹೀನರು. ಸತ್ಯದ ಬಲವಿಲ್ಲದೆ ಸತ್ವಹೀನರು . ಯಾವುದೋ ಒಂದನ್ನು ಹಿಡಿದುಕೊಂಡು ಹೇಗೋ ಬದುಕುತ್ತಿದ್ದೆವು. ಈಗ ನಾವು ಹಿಡಿದಂತಾ ವಸ್ತುವೇ ಬಲಹೀನವಾಗಿ ನಮ್ಮ ಅಸ್ತಿತ್ವವೇ ಅಲುಗಾಡುತ್ತಿದೆ. ಹಿಡಿದ ಕೊಂಬೆ ಮುರಿದರೆ, ಹಿಡಿಯಲು ಮತ್ತೊಂದು ಕೊಂಬೆ ಇದ್ದರೆ ಹಿಡಿದು ತೂಗಾಡಬಹುದು. ಇಲ್ಲದಿದ್ದರೆ ಬೀಳುವುದೇ ದಾರಿ. ಚೆನ್ನಾಗಿ ಓಡಾಡಲು ಅಭ್ಯಾಸವಾಗಿರುವ ಮನೆ ಕುಸಿದು ಹೋದರೆ, ಆ ಮನೆಯಲ್ಲಿ ವಾಸಿಸುವ ಕುಂಟನಿಗೋ ಕುರುಡನಿಗೋ, ತೊಂದರೆಯಾಗಿ ಅವನು ತಡಬಡಾಯಿಸುವಂತೆ ನಾವೂ ಸಹ ನಮ್ಮ ಭಕ್ತಿ ಶ್ರದ್ಧೆಗಳನ್ನು ಕಳೆದು ಕೊಂಡು ಅತಂತ್ರದ ಸ್ಸ್ಥಿತಿಯಲ್ಲಿದ್ದೇವೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು.
ಹೋಗಲಿ ಹಳೆಯದನ್ನೇನೋ ಕಳೆದು ಕೊಂಡಿದ್ದೇವೆ, ಹೊಸದೇನಾದರೂ ಇದೆಯೋ ಅದನ್ನು ಹಿಡಿದು ಕೊಳ್ಳೋಣವೆಂದರೆ ಅದೂ ಇಲ್ಲ. ನಮ್ಮ ದೇಶದಲ್ಲೇ ಅಲ್ಲ ಇಡೀ ಜಗತ್ತಿನ ಪರಿಸ್ಥಿತಿಯೇ ಹೀಗಿದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯವಾದುದರಿಂದ, ವಾಚಕರೆ, ಇದನ್ನು ಬೇರೆಯಾಗಿಯೇ ವಿಶ್ಲೇಷಣೆ ಮಾಡಿ ಚರ್ಚಿಸುವುದೇ ಒಳ್ಳೆಯದು ಎಂದು ನನಗನಿಸುತ್ತದೆ. ನಮ್ಮ ಭಾರತೀಯ ಸಮಾಜದಲ್ಲಿ ಬೇರೆ ಯಾವ ದೇಶದಲ್ಲೂ ಸಿಗದಂತ ಅತ್ಯಮೂಲ್ಯವಾದ ಸಂಸ್ಕೃತಿ, ಪರಂಪರೆ, ಧರ್ಮಬೋದನೆ , ಎಲ್ಲವೂ ಇದೆ ಅದನ್ನು ಪುನರುಜ್ಜೀವನ ಗೊಳಿಸಿ ಮುಂದಿನ ಪೀಳಿಗೆಗೆ ಎರಕಹೊಯ್ಯಬೇಕಾದ ಉತ್ತರದಾಯತ್ವ ನಮ್ಮೆಲ್ಲರ ಮೇಲಿದೆ. ಕನ್ನಡಿಯ ಮೇಲಿನ ಧೂಳನ್ನು ಒರೆಸಿ, ಶುದ್ಧಿಗೊಳಿಸಿ ಪ್ರತಿಬಿಂಬ ನಿಚ್ಚಳವಾಗಿ ಕಾಣುವಂತೆ ಮಾಡಬೇಕಾಗಿದೆ.
ಇಂತಹ ವಿಷಯಗಳನ್ನು ನಾವು ನಮ್ಮ ವಿಚಾರದ ಓರಗೆ ಹಚ್ಚಿ ನೋಡುತ್ತ ಮುಂದಿನ ಕಗ್ಗಕ್ಕೆ ಹೋಗೋಣವೆ?
[06/01 6:27 AM] S. Bhargav: ಕಗ್ಗ-೧೬
ಇಳೆಯ ಬಿಟ್ಟಿನ್ನುಮೆತ್ತಲುಮೈದದ ಪ್ರೇತ I
ವಲೆವಂತೆ ಲೋಕ ತಲ್ಲಣಿಸಿಹುದಿಂದು II
ಹಳೆಧರ್ಮ ಸತ್ತಿಹುದು ಹೊಸ ಧರ್ಮ ಹುಟ್ಟಿಲ್ಲ II
ತಳಮಳಕೆ ಕಡೆಯೆಂದು – ಮಂಕು ತಿಮ್ಮ II
ಇಳೆಯ ಬಿಟ್ಟಿನ್ನುಮೆತ್ತಲುಮೈದದ = ಇಳೆಯ+ ಬಿಟ್ಟು + ಇನ್ನು+ ಎತ್ತಲುಂ+ಐದದ, ಪ್ರೇತವಲೆವಂತೆ= ಪ್ರೇತವು + ಅಲೆವಂತೆ, ಕಡೆಯಂದು= ಕಡೆ+ ಎಂದು
ಇಳೆ = ಭೂಮಿ, ಎತ್ತಲುಂ= ಯಾವಕಡೆಗೂ, ಐದದ=ಸೇರದ, ಪ್ರೇತ= ಮರಣಾನಂತರದ ಪ್ರಯಾಣದಲ್ಲಿ ಇರುವ ಆತ್ಮದ ಸ್ಥಿತಿ. ತಲ್ಲಣಿಸಿಹುದು + ಒದ್ದಾಡುತ್ತಿದೆ.
ಈ ಭೂಮಿಯನ್ನು ಬಿಟ್ಟು ಎತ್ತಲೂ ಸೇರದ ಪ್ರೇತದಂತೆ ಲೋಕ ತಲ್ಲಣಿಸುತ್ತಿದೆ. ಹಳೆ ಧರ್ಮ ಸತ್ತಿದೆ. ಹೊಸ ಧರ್ಮ ಹುಟ್ಟಿಲ್ಲ ತಳಮಳಕೆ ಕಡೆ ಎಂದು ಮಂಕುತಿಮ್ಮ ಎಂದು ತಮ್ಮನ್ನು ತಾವೇ ಪ್ರಶ್ನಿಸುತ್ತಾ ಅದೇ ಪ್ರಶ್ನೆಯನ್ನು ನಮ್ಮ ಮುಂದಿಡುತ್ತಾರೆ.
ಭಾರತ ದೇಶವು ಅನ್ಯ ದೇಶದವರ ಆಕ್ರಮಣಕ್ಕೆ ಬಲಿಯಾಗಿ, ಹಾಗೆ ಬಂದ ಆಕ್ರಮಣಕಾರರು ಈ ದೇಶದಲ್ಲೇ ನೆಲೆಯೂರಿ ನಿಂತಾಗ, ಅವರ ನಂಬಿಕೆಗಳು ವಿಶ್ವಾಸಗಳು ಅಚಾರ ವಿಚಾರಗಳು ಉಡುಗೆ ತೊಡಿಗೆಗಳ ಶೈಲಿ ಹೀಗೆ ಎಲ್ಲವೂ ನಮ್ಮ ದೇಶದ ಸಂಸ್ಕೃತಿಯ ಮೇಲೆ ತನ್ನ ಪರಿಣಾಮವನ್ನು ಬೀರುತ್ತ, ಕಾಲಕ್ರಮದಲ್ಲಿ ಇಲ್ಲಿನ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ನೆಲೆ ನಿಂತಿತು. ಆಗ ಅದರದು ಬೇರೆಯೇ ರೂಪ. ಆ ರೂಪ ಹಳೆಯದನ್ನು ಬಿಡಲಾಗದೆ, ಹೊಸದನ್ನು ಸಂಪೂರ್ಣ ಅಳವಡಿಸಿಕೊಳ್ಳಲಾಗದೆ ಒಂದು ಹೊಸರೂಪವನ್ನೇ ತಾಳಿತು. ಆದರೆ ಆ ಹೊಸರೂಪದಲ್ಲೂ ಒಂದು ತಳಮಳ, ಒಂದು ಚಡಪಡಿಕೆ ಇತ್ತು. ಅತ್ತ ಹಳೆಯದನ್ನು ಬಿಟ್ಟರೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಭಯ, ಇತ್ತ ಹೊಸದರ ಹೊಸತನದ ಮೋಜು. ಇವೆರಡರ ರೂಪವೇ ಒಂದು ಎಡಬಿಡಂಗಿ ಸ್ವರೂಪ. ಇಂದು ನಾವು ಇರುವುದೇ ಅಂತಹ ಸ್ಥಿತಿಯಲ್ಲಿ. ಇದನ್ನು ಶ್ರೀ ಗುಂಡಪ್ಪನವರು ” ಈ ಭೂಮಿಯನ್ನು ಬಿಟ್ಟು ಎತ್ತಲೂ ಸೇರದ ಪ್ರೇತದಂತೆ ” ಎಂದು ಹೇಳುತ್ತಾರೆ. ಇದು ಒಂದು ಉಪಮೆ ಅಷ್ಟೇ. ಸನಾತನದಲ್ಲಿ ಅಂತಹ ನಂಬಿಕೆ ಉಂಟು. ಅನ್ಯರಲ್ಲೂ ಬೇರೆ ಬೇರೆ ರೂಪದಲ್ಲಿ ಆ ನಂಬಿಕೆ ಉಂಟು. ಆದರೆ ತಮ್ಮನ್ನು ತಾವು ಪ್ರಗತಿಪರರು ಅಥವಾ ಬುದ್ಧಿಜೀವಿಗಳು ಎಂದು ಅಂದುಕೊಂಡಿರುವ ಕೆಲವರು, ಇದರ ಸೂಕ್ತತೆಯನ್ನು ಮತ್ತು ಪ್ರಸ್ತುತತೆಯನ್ನು ಪ್ರಶ್ನಿಸುತ್ತಾರೆ. ಹಾಗೆ ಪ್ರಶ್ನೆ ಮಾಡುವ, ಅಲ್ಲಗೆಳೆಯುವ ಮತ್ತು ಟೀಕಿಸುವ ಹಕ್ಕು ಅವರಿಗೆ ಉಂಟು.
ಹಾಗೆ ಹಳೆಯದನ್ನು ಬಿಟ್ಟೂ ಬಿಡದ ಹಂಗೆ, ಹೊಸದನ್ನು ಹಿಡಿದೂ ಹಿಡಿಯದ ಹಂಗೆ ಇಂದಿನ ಸಮಾಜದಲ್ಲಿ ಎಲ್ಲರೂ ಇದ್ದಾರೆ. ಅದಕ್ಕೆ ಹಲವಾರು ಕಾರಣಗಳು. ವಿಧ್ಯಾಭ್ಯಾಸದ ಕ್ರಮ ಬದಲಾವಣೆ, ಹೊಸ ಹೊಸ ಸಾಧನಗಳು ಮತ್ತು ಮಾಹಿತಿ ತಂತ್ರಜ್ಞಾನದ ಸ್ಫೋಟ, ಜಾಗತೀಕರಣ, ಹೀಗೆ ಹತ್ತು ಹಲವಾರು. ಹಿಂದೆ ಇದ್ದದ್ದು ಇಂದು ಇಲ್ಲ. ಇಂದು ಇರುವುದು ಮುಂದಿರುವುದಿಲ್ಲ. ಅಂತಹ ಸ್ಥಿತಿಯಲ್ಲಿ ಜನರು ಯಾವುದೇ ಒಂದು ನಿರ್ಧಿಷ್ಟತೆಯಲ್ಲಿ ಇರದೇ ಒಂದು ಅತಂತ್ರದ ಸ್ಥಿತಿಯಲ್ಲಿದ್ದಾರೆ ಎಂದು ಮಾನ್ಯ ಗುಂಡಪ್ಪನವರ ಹೇಳುತ್ತಾರೆ. ಭಾಷೆ, ಜೀವನದ ಶೈಲಿ, ಉದ್ಯೋಗ, ಸಂಪಾದನೆ ಎಲ್ಲವೂ ಇಂದಿನ ಜನಾಂಗದ ಮೇಲೆ ಪರಿಣಾಮ ಬೀರಿದೆ. ಇಂದು ನಾವು ಹೊಸದಾಗಿ ಕಾಣುತ್ತಿರುವ ಹೊಸ ವಿಧ್ಯಮಾನವೇನಲ್ಲ. ನಮ್ಮ ಭಾರತೀಯ ಇತಿಹಾಸದಲ್ಲೇ ಬೇರೆ ಬೇರೆ ಸಮಯಗಳಲ್ಲಿ ಇಂತಹ ಅತಂತ್ರ ಸ್ಥಿತಿಗಳನ್ನು ನೋಡಬಹುದು. ಅಂದಿನ ಭೌಗೋಲಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಸ್ಥಿತಿಗಳು ಅಂದಿಗೆ, ಅಂದಿನ ಸ್ಥಿತಿಗೆ ಕಾರಣವಾಗುತ್ತದೆ.
ಚಾಣಕ್ಯನಂತಹ ಮುತ್ಸದ್ಧಿಗಳು ಬಂದಾಗ ಏನೋ ಒಂದು ರೀತಿಯ ಕಲರವ ಉಂಟಾಗಿ ಸ್ವಲ್ಪ ಬದಲಾವಣೆಗಳನ್ನು ಕಾಣಬಹುದು. ಆದರೆ ಸ್ವಾಭಾವಿಕವಾಗಿ ಮಾನ್ಯ ಡಿ.ವಿ.ಜಿ ಯವರು ಹೇಳಿದಂತೆ ಮತ್ತೆ ಅದೇ ಅತಂತ್ರ ಸ್ಥಿತಿಗೆ ಒಗ್ಗಿ ಹೋಗುತ್ತದೆ ಇಡೀ ಸಮಾಜ. ಆದರೆ ಇಂತಹ ಪ್ರತಿಪಾದನೆಗಳಿಗೆ, ಕೆಲವು ವ್ಯಕ್ತಿಗಳು ಅಪವಾದವಾಗಿ ಭಿನ್ನವಾಗಿರಬಹುದು. ಶುದ್ಧ ಸತ್ವದಲ್ಲಿ ಯಾವುದು ಪುರಾತನವೋ ಯಾವುದು ಸನಾತನವೋ ಅದನ್ನು ಪಾಲಿಸುತ್ತಿರಬಹುದು. ಆದರೆ ಒಟ್ಟಾರೆ ಸಮಾಜವನ್ನು ನೋಡಿದಾಗ ಎಲ್ಲೋ ಏನೋ ಸರಿಯಿಲ್ಲ ಎನ್ನುವ ಭಾವನೆ ಬರುತ್ತದೆ. ಅದನ್ನೇ ಡಿ.ವಿ.ಜಿ ಯವರು ” ಲೋಕ ತಲ್ಲಣಿಸಿಹುದಿಂದು” ಎಂದರು.
ಆದರೆ ನಾವು ನೋಡಬೇಕಾದದ್ದು ಏನೆಂದರೆ, ಇದು ಸರಿಯೇ ಎಂದು. ಬದಲಾವಣೆಯೇ ಪ್ರಪಂಚದ ಮೂಲ ಗುಣವಾದ್ದರಿಂದ ಇದು ಸರಿ. ಅಸ್ತಿತ್ವವನ್ನು ಕಳೆದುಕೊಳ್ಳುವುದರಿಂದ ಇದು ಸರಿಯಿಲ್ಲ. ಹಾಗಾಗಿ ಏನು ಮಾಡಬೇಕು. ಡಿ.ವಿ.ಜಿ ಯವರೆ ಮುಂದೆ ಯಾವುದೋ ಕಗ್ಗದಲ್ಲಿ ಹೇಳುತ್ತಾರೆ” ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ಹೊಸ ಯುಕ್ತಿ ಹಳೆ ತತ್ವ…..” ಎಂದು. ಅಂದರೆ ನೈಸರ್ಗಿಕವಾದ ಮತ್ತು ಸ್ವಾಭಾವಿಕವಾದ ಬದಲಾವಣೆ ಬೇಕು ಮತ್ತು ಆಗಬೇಕು. ಆದರೆ ಹೊಸತನ್ನು, ಹಳೆಯ ಮತ್ತು ಕಾಲದಲ್ಲಿ ಪರಿಕಿಸಿ ನಿರೂಪಿಸಲ್ಪಟ್ಟು ಸರ್ವಕಾಲಕ್ಕೂ ಅನ್ವಯವಾಗುವಂತಾ ಸಿದ್ಧಾಂತಗಳ ( theories ) ಆಧಾರದಮೇಲೆ ಹೊಸತು ಪಲ್ಲವಿಸ ಬೇಕು. ಆಗ ಹಳತು ಅಂತರ್ಯದಲ್ಲಿ ಉಳಿದು ಹೊಸತು ಪಲ್ಲವಿಸಿ ಬೆಳೆದು ಹಳೆಯದಕ್ಕೆ ಹೊಳಪ್ಪಿತ್ತಂತೆ ಆಗುತ್ತದೆ. ಹೊಸತು, ಆ ಹೊಳಪಿನ ಬೆಳಕಲ್ಲಿ ಸುಂದರವಾಗಿ ಕಾಣುತ್ತದೆ. ಆಗ ಎರಡೂ ಸಮನ್ವಯಗೊಂಡು ಒಂದು ಹೊಸ ನೆಲೆ ಸಿಕ್ಕಂತಾಗುತ್ತದೆ.
ಆದರೆ ವಿಷಾದವೇನೆಂದರೆ ಇಂದು ಯಾರಿಗೂ ಹಳೆಯದು ಬೇಡ. ಅದರ ಅರ್ಥ ಬೇಡ. ಅದರ ಸತ್ವ ಬೇಡ. ಅದನ್ನು ಗೊಡ್ಡು ಸಂಪ್ರದಾಯ ಎಂದು ಮೂದಲಿಸುವ, ಜರಿಯುವ, ನೇಪಥ್ಯಕ್ಕೆ ಸರಿಸುವ ಇಂದಿನ ಜನಾಂಗವು ಸತ್ಯವಾಗಲೂ ಗುಂಡಪ್ಪನವರು ಹೇಳಿದಂತೆ “ಎತ್ತಲೂ ಸೇರದ ಪ್ರೇತದಂತೆ ಲೋಕ ತಲ್ಲಣಿಸುತ್ತಿದೆ”.ಅಂತರ್ಪಿಶಾಚಿಗಳ ತರಹೆ ಇದ್ದಾರೆ.
ಎಲ್ಲರಲ್ಲೂ ಹಳೆಯ ಸತ್ವಯುತವಾದ ಸಿದ್ಧಾಂತಗಳ, ಸಂಸ್ಕೃತಿಯ, ಸಂಸ್ಕೃತಿಯನ್ನು ಒಳಗೊಂಡ ಭಾಷೆ, ಸಾಹಿತ್ಯ, ಕಲೆ ಮುಂತಾದವುಗಳನ್ನು ಪುರುಜ್ಜೀವನ ಮಾಡಲು ಒಂದು ಪ್ರಾಮಾಣಿಕ ಪ್ರಯತ್ನ ನಡೆಯಬೇಕು. ಅಂತಹ ಪ್ರಯತ್ನ ಎಲ್ಲ ಅಯಾಮಗಳಿಂದಲೂ ಒಂದೇ ಸಲಕ್ಕೆ ಒಂದು ಸ್ಫೋಟದಂತೆ ಆದಾಗ ಒಂದು ಸಕಾರಾತ್ಮಕವಾದ ಬದಲಾವಣೆಯನ್ನು ನಾವು ನೋಡಬಹುದು. ನಮ್ಮ ಭಾರತೀಯತೆಯನ್ನು, ಸಂಸ್ಕೃತಿಯನ್ನು ಉಳಿಸಬೇಕಾದರೆ ಅಂತಹ ಪ್ರಯತ್ನ ಅಗತ್ಯ.
ಬನ್ನಿ ಮಿತ್ರರೇ, ನಾವೂ ಅಂತಹ ಪ್ರಯತ್ನದಲ್ಲಿ ನಮ್ಮನ್ನು ನಾವೇ ತೊಡಗಿಸಿಕೊಳ್ಳೋಣ. ಅಂತಹ ವಿಚಾರಮಾಡುತ್ತಾ ಮುಂದಿನ ಕಗ್ಗಕ್ಕೆ ಹೋಗೋಣ.
[07/01 6:28 AM] S. Bhargav: ಕಗ್ಗ-೧೭
ಲೋಕಜೀವನ ಮಂಥನ
ತಳಮಳವಿದೇನಿಳೆಗೆ? ದೇವದನುಜರ್ ಮಥಿಸೆ
ಜಳಧಿಯೊಳಾದಂತೆ ಸುಧೆಗೆ ಪೀಠಿಕೆಯೇಂ?
ಹಾಲಾಹಲವ ಕುಡಿವ ಗಿರೀಶನಿರ್ದೊಡೀ
ಕಳವಳವದೇತಕೆಲೋ? – ಮಂಕುತಿಮ್ಮ
ತಳಮಳವಿದೇನಿಳೆಗೆ= ತಳಮಳವಿದು + ಏನು + ಇಳೆಗೆ, ದೇವಮನುಜರ್ =ದೇವದ + ಅನುಜರ್
ಜಳಧಿಯೊಳಾದಂತೆ = ಜಲಧಿಯೊಳು + ಆದಂತೆ, ಗಿರೀಶನಿರ್ದೊಡೀ= ಗಿರೀಶನು + ಇರ್ದೊಡೆ,
ಕಳವಳವದೇತಕೆಲೋ = ಕಳವಳವು + ಅದು+ ಏತಕೆ+ ಎಲೋ,
ದೇವದನುಜರ್ = ದೇವಲೋಕದ ಅಣ್ಣ ತಮ್ಮಂದಿರು , ಮಥಿಸೆ= ಕಡೆಯೆ, ಜಲಿಧಿ= ಸಮುದ್ರ, ಸುಧೆ= ಅಮೃತ, ಪೀಠಿಕೆ = ಭೂಮಿಕೆ, ಪ್ರಸ್ತಾವನೆ, ಹಾಲಾಹಲ= ವಿಷ, ಗಿರೀಶ= ಶಿವ
ತಳಮಳವದೇನು ಇಳೆಗೆ ? ದೇವದುಜರು ಮಥಿಸೆ ಜಲಧಿಯೊಳು ಆದಂತೆ, ಸುಧೆಗೆ ಪೀಠಿಕೆಯೇನು,
ಹಲಾಹಲವ ಕುಡಿಯಲು ಗಿರೀಶನಿರುವಾಗ ಕಳವಳವದು ಏತಕೆ ಎಲೋ ಮಂಕುತಿಮ್ಮ.
ಇಲ್ಲಿ ಒಂದು ಆಶಾಭಾವನೆಯನ್ನು ವ್ಯಕ್ತಪಡಿಸುತ್ತಾರೆ, ಶ್ರೀ ಗುಂಡಪ್ಪನವರು. ಆಗ ಎಲ್ಲೆಲ್ಲೂ ಅತಂತ್ರದ ಸ್ಥಿತಿ. ಹಳೆಯ ಭಕ್ತಿ ಶ್ರದ್ಧೆಗಳು ಸಶಿಸಿ ಹೊಸದು ಯಾವುದೋ ಇಲ್ಲದೆ, ಒಂದು ಅತಂತ್ರದ ಸ್ಥಿತಿ ಇದೆ. ಜನರೆಲ್ಲಾ ಕಳವಳ ಗೊಂಡು ತಳಮಳಿಸುತ್ತಿದ್ದಾರೆ. ಅಂತ ಸ್ಥಿತಿಯಲ್ಲಿ ಇವರಿಗೊಂದು ಆಶಾಭಾವನೆ. ಅದನ್ನು ಅವರು ಈ ಕಗ್ಗದಲ್ಲಿ ಸೂಚಿಸುತ್ತಾರೆ.
ಹಿಂದೆ, ದೇವಲೋಕದಲ್ಲಿ ಅಮೃಥವನ್ನು ಪಡೆಯಲು ಸಮುದ್ರ ಮಂಥನ ನಡೆಯಿತು. ಅದನ್ನು ನಡೆಸಿದವರು ದೇವತೆಗಳು ಮತ್ತು ದಾನವರು. ಇವರನ್ನು ಗುಂಡಪ್ಪನವರು ಸೂಕ್ತವಾಗಿ “ದೇವಲೋಕದ ಅನುಜರ್” ಎಂದು ಸಂಬೋಧಿಸುತ್ತಾರೆ. ಏಕೆಂದರೆ ಪುರಾಣದ ಪ್ರಕಾರ ಈ ದೇವತೆಗಳು ಮತ್ತು ದಾನವರು ಇಬ್ಬರೂ ಕಶ್ಯಪ ಬ್ರಹ್ಮನ ಮಕ್ಕಳು. ಹಾಗಾಗಿ ಅವರನ್ನು ಅಣ್ಣ ತಮ್ಮಂದಿರು ಎಂದಿದ್ದಾರೆ. ವಾಚಕರು ಈ ದೇವದಾನವರು ನಡೆಸಿದ ಅಮೃತ ಮಂಥನದ ಕಥೆಯನ್ನು ಬೇರೆಯಾಗಿ ಓದಬೇಕಾಗಿ ವಿನಂತಿ. ಆದರೆ ಆ ಮಂಥನದಲ್ಲಿ ಮೊದಲು ಹಾಲಾಹಲ ಅಂದರೆ ವಿಷದ ಉದ್ಭವವಾಯಿತಂತೆ. ಘನ ಘೋರ ವಿಷವನ್ನು ಲೋಕ ಕಲ್ಯಾಣಕ್ಕಾಗಿ ಗಿರಿಜಾಪತಿ ಪರಮಶಿವನು ಕುಡಿದುಬಿಟ್ಟನಂತೆ. ಅದನ್ನು ಪಾರ್ವತಿ ಕಂಠದಲ್ಲೇ ತಡೆದದ್ದರಿಂದ ಅದು ಅಲ್ಲೇ ನಿಂತು, ಶಿವನು ನೀಲಕಂಠ ಮತ್ತು ವಿಷಕಂಠನಾದನಂತೆ.
ಹಿಂದಿನ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು II ಹಳೆ ಧರ್ಮ ಸತ್ತಿಹುದು ಹೊಸ ಧರ್ಮ ಹುಟ್ಟಿಲ್ಲ – ತಳಮಳಕೆ ಕಡೆಯೆಂದು – ಮಂಕು ತಿಮ್ಮ II ಎಂದು ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಾರೆ. ಆ ಕಳವಳಕ್ಕೆ ಉತ್ತರವೆಂಬಂತೆ ಈ ಕಗ್ಗದಲ್ಲಿ ಈ ರೀತಿಯ ಕಳವಳ, ತಳಮಳಗಳು ಸಹಜ. ಒಂದು ಉತ್ತಮವಾದ ವಸ್ತು ಈ ಪ್ರಪಂಚಕ್ಕೆ ಸಿಗಬೇಕಾದರೆ ಈ ರೀತಿಯ ಮಥನ ವಾಗಬೇಕು. ಇಲ್ಲಿ ದೇವದಾನವರ ಉಲ್ಲೇಖಮಾಡಿ ಮನುಷ್ಯನ ಅಂತರ್ಯದಲ್ಲಿರುವ ” ಒಳ್ಳೆಯ ಮತ್ತು ಕೆಟ್ಟ ” ಗುಣಗಳನ್ನು ಸೂಚ್ಯವಾಗಿಸುತ್ತಾರೆ.
ಮನುಷ್ಯನ ಮನಸ್ಸಿನಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರುತ್ತದೆ. ಪ್ರಮಾಣ ಮತ್ತು ಪರಿಮಾಣಗಳ ವ್ಯತ್ಯಾಸ ಅಷ್ಟೇ. ಯಾವುದು ಅಧಿಕವಾಗಿದ್ದರೆ ಅದರ ಪ್ರಾಬಲ್ಯ. ಆದರೆ ಒಂದು ವ್ಯಕ್ತಿಯಿಂದ ಮಹತ್ತರ ಕಾರ್ಯವಾಗಬೇಕಾದರೆ ಅಂತರ್ಯದಲ್ಲೂ ತಿಕ್ಕಾಟಗಳು ತುಮಲಗಳು ನಿರಂತರ ನಡೆಯಬೇಕು. ಸಮುದ್ರಮಥನದ ರೀತಿ. ನಮ್ಮ ಲೋಕದ ಮಹಾ ಮಹಿಮರೆಲ್ಲರಿಗೂ ಇಂಥಹ ಅನುಭವವಾಗಿದೆ. ಅವರ ಪ್ರಯತ್ನದಲ್ಲಿ ಅವರಿಗೆ ” ವಿಷದ” ರೂಪದಲ್ಲಿ ಬೇಕಾದಷ್ಟು ಕಷ್ಟಗಳು ಬಂದಿವೆ. ಆ ಮಹಾಮಹಿಮರೆಲ್ಲ ಅಂತಹ ಕಷ್ಟಗಳನ್ನೆಲ್ಲ ” ಪರಶಿವನು ಹಾಲಾಹಲವನ್ನು ಕುಡಿದಂತೆ ” ನುಂಗಿ ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ತ್ಯಾಗಮಾಡಿದ್ದಾರೆ. ಉದಾಹರಣೆಗೆ, ನಮ್ಮ ದೇಶಕ್ಕೆ ಚಾಣಕ್ಯ ವಿಷ್ಣು ಶರ್ಮನ ಕೊಡುಗೆ ಅಪಾರ. ಅಷ್ಟೇ ಕಷ್ಟ ನಿಷ್ಟೂರಗಳನ್ನು ಆಭವಿಸಿದ ಅವನು. ಹೀಗೆ, ಶಂಕರರು, ರಾಮಾನುಜರು, ಬಸವಣ್ಣನವರು, ನಮ್ಮ ದೇಶದ ಸ್ವಾತಂತ್ರ ಹೋರಾಟಗಾರರಾದ ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ರಾಜಗುರು, ಬೋಸ್ ಮುಂತಾದ ಅನೇಕ ವೀರರು ಸ್ವಾರ್ಥ ತೊರೆದು ಲೋಕಕಲ್ಯಾಣಕ್ಕಾಗಿ ಕಷ್ಟಗಳೆಂಬ ವಿಷವನ್ನು, ಪರಶಿವನಂತೆ ಕುಡಿದ ದೃಷ್ಟಾಂತಗಳು ನಮಗೆ ಹೇರಳವಾಗಿ ಸಿಗುತ್ತದೆ.
ಅದೇ ರೀತಿ ಇಂದು ಇರುವ ಪರಿಸ್ಥಿತಿಯೂ ಬದಲಾಗಿ ಇಂದಿರುವ ವಿಷ ಮತ್ತ ವಿಷಮ ಪರಿಸ್ಥಿತಿ ಕರಗಿ ಅಮೃತ ಹುಟ್ಟುವುದಕ್ಕೆ ಈ ರೀತಿಯ ತಿಕ್ಕಾಟವೇ, ತುಮುಲಗಳೇ, ತಳಮಳವೇ ಪೀಠಿಕೆಯೋ ಎಂದು ಕೇಳುತ್ತಾರೆ ಶ್ರೀ ಗುಂಡಪ್ಪನವರು. ಅಂದು ಪರ ಶಿವನು ” ವಿಷ”ವನ್ನು ಕುಡಿದು ಲೋಕಕಲ್ಯಾಣವನ್ನು ಮಾಡಿದಹಾಗೆ ಇಂದೂ ಯಾರಾದರೂ ಬರಬಹುದೆಂದು ಅವರ ಆಸೆ. ಅವರ ಅಶಾಭಾವಕ್ಕೆ ಒಂದು ನಮಸ್ಕಾರ.
ಆದರೆ ವಾಚಕರೆ, ವಿಚಾರ ಮಾಡಿ ನೋಡಿ. ಅಂದಿನ ಮಥನದಿಂದ ಅಂದರೆ ಲೋಕದ ದ್ವಂದ್ವಗಳಿಂದ ಮತ್ತು ಆ ದ್ವಂದ್ವಗಳ ತಿಕ್ಕಾಟದಿಂದ, ತೊಳಲಾಟದಿಂದ ಇನ್ನೂ ಅಮೃತ ಬಂದೆ ಇಲ್ಲ. ಎಲ್ಲೆಲ್ಲೂ ವಿಷಮ ಸ್ಥಿತಿಯ ವಿಷದ ಧಾರೆ ಹರಿಯುತ್ತಿದೆ. ದ್ವೇಷಾಸೂಯೆಗಳ, ಭಾಷಾಸೂಯಗಳ, ಅಹಂಕಾರದ, ಜನಬಲದ ಮದ, ಧನಬಲದ ಮದ, ಅಧಿಕಾರ ಮದದ ವಿಷದ ಗಾಳಿ ಎಲ್ಲೆಲ್ಲೂ ಹರಡಿದೆ. ಇಡೀ ಸಮಾಜ ಪ್ರೀತಿ ಕರುಣೆ ವಾತ್ಸಲ್ಯಗಳ ಕೊರತೆಯಿಂದ ಸೊರಗಿದೆ. ಹಳೆಯ ಶ್ರದ್ಧೆ -ಭಕ್ತಿಗಳ ಮತ್ತು ಆಧುನೀಕತೆಯ, ಡಂಬ ತೋರಿಕೆಯ ಜೀವನದ ನಡುವೆಯ ಅಂತರ ಅಗಾಧವಾಗುತ್ತಿದೆ.
ಅಂದು ಅಂದರೆ ಈಗ್ಗೆ ಎಂಬತ್ತು ವರ್ಷಗಳ ಹಿಂದೆ ಡಿ.ವಿ.ಜಿ.ಯವರು ಕಂಡ ಅಮೃತದ ಕನಸು ನನಸಾಗುವ ಕಾಲ ಬಂದೀತೆ ಎಂದರೆ, ನಾವು ಆಶಾಭಾವನೆಯನ್ನು ಎಂದಿಗೂ ಬಿಡಬಾರದು, ಇಂದಿನ ಯುವ ಪೀಳಿಗೆಗೆ ಮತ್ತು ಮುಂದಿನ ಪೀಳಿಗೆಗೆ, ಹಿಂದಿನ ತತ್ವಗಳ ಸತ್ವವನ್ನು ತಿಳಿಸಿಕೊಡಬೇಕು. ಅವುಗಳ ಅರಿವು ಮೂಡಿಸಬೇಕು. ಬಹಳಷ್ಟು ಜನ ಆ ಪ್ರಯತ್ನದಲ್ಲಿ ಇದ್ದರೂ ಇಷ್ಟು ವಿಶಾಲವಾದ ದೇಶದಲ್ಲಿ ಆಧುನೀಕತೆಯ ಪೊಳ್ಳು ಸಂಸ್ಕೃತಿಯ ವ್ಯಾಪ್ತಿಯನ್ನು ಮುಟ್ಟಲು ಇನ್ನೂ ಸಾಧ್ಯವಾಗಿಲ್ಲ. ಶೀಘ್ರವೇ ಫಲ ಬೇಕಾದಲ್ಲಿ, ಸಮರೋಪಾದಿ ಕಾರ್ಯಗಳು ನಡೆದು ನಮ್ಮ ಭಾರತೀಯ ಅಸ್ಮಿತೆಯನ್ನು ಅರಿತುಕೊಳ್ಳಲು ಮತ್ತು ಕಾಪಾಡಲು ಎಲ್ಲರೂ ಪ್ರವೃತ್ತರಾಗಬೇಕು. ಅದಕ್ಕೆ ನಾವು ನೀವು ಎಲ್ಲರೂ ಪ್ರಯತ್ನಪಟ್ಟು ನಮ್ಮ ಸುತ್ತು ಮುತ್ತಲಿನವರನ್ನೂ ಅದಕ್ಕೆ ಪ್ರೇರೇಪಿಸಿದರೆ ಅದು ಸಾಧ್ಯ.
ಅಂಥಹ ಪ್ರಯತ್ನವನ್ನು ಮಾಡುವ ಧೃಢ ಸಂಕಲ್ಪವನ್ನು ಮಾಡುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗುವ.
[08/01 7:48 AM] S. Bhargav: ನದಿಯ ತೆರೆಯವೊಲುರುಳಿ ಹೊರಳುತಿರುವುದು ಜೀವ I
ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲ ವದಕೆ II
ಬದುಕೇನು ಸಾವೇನು ಸೊದೆಯೇನು ವಿಷವೇನು? I
ಉದಕಬುದ್ಬುದವೆಲ್ಲ ! – ಮಂಕುತಿಮ್ಮ II
ತೆರೆಯವೊಲುರುಳಿ = ತೆರೆಯವೊಲು ಉರುಳಿ, ಉದಕಬುದ್ಬುದವೆಲ್ಲ= ಉದಕ ಬುದ್ಬುದವು ಎಲ್ಲ.
ತೆರೆಯವೊಲು=ನದಿಯ ಅಲೆಯಂತೆ , ಮುಗಿವಿಲ್ಲ= ಕೊನೆಯಿಲ್ಲ, ನಿಲುವಿಲ್ಲ = ನಿಲುವು ಅಂದರೆ ಸ್ಥಿರತೆ,. ಸೊದೆಯೇನು= ಅಮೃತವೇನು, ಉದಕ= ನೀರು, ಬುದ್ಬುದ= ಗುಳ್ಳೆ
ನದಿಯ ತೆರೆಯಂತೆ ಉರುಳಿ ಹೊರಳುತಿದೆ ಜೀವ, ಮೊದಲಿಲ್ಲ , ಮುಗಿವಿಲ್ಲ ನಿಲುವಿಲ್ಲ ಅದಕೆ ಬದುಕೇನು ಸಾವೇನು ಸೊದೆಯೇನು ವಿಷವೇನು ಉದಕದ ಬುದ್ಬುದವು ಎಲ್ಲ ಮಂಕುತಿಮ್ಮ.
ವಾಚಕರೆ ಹಿಂದಿನ ಕಗ್ಗದಲ್ಲಿ ಈ ಹಳತು ಹೊಸತನದ ತಿಕ್ಕಾಟವನ್ನು ಅಮೃತಕ್ಕಾಗಿ ನಡೆಯುವ ಸಮುದ್ರ ಮಂಥನಕ್ಕೆ ಹೋಲಿಸಿದರು ಮಾನ್ಯ ಡಿ.ವಿ.ಜಿ ಯವರು.ಆದರೆ ಇಂದಿನ ಕಗ್ಗದಲ್ಲಿ ಒಂದು ವೇದಾಂತದ ಮಾತನ್ನು ಸೂಚಿಸಿದ್ದಾರೆ. ಇಡೀ ಜೀವನವನ್ನು ಅವರು ಒಂದು ನದಿಯ ತೆರೆ ಅಥವಾ ಅಲೆಯಂತೆ ಎಂದಿದ್ದಾರೆ. ಒಂದು ನಿಮಿಷವೂ ಒಂದೇ ತೆರನಾಗಿ ಇರದ ನದಿಯ ತೆರೆಗೆ ಹೋಲಿಸಿದ್ದಾರೆ.
ಹೌದು ಯಾರ ಜೀವನವೂ ಎಂದೂ ಒಂದೇ ತೆರನಾಗಿ ಇರುವುದಿಲ್ಲ. ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ನಾನು ಅದನ್ನು kaleidoscopic ಲೈಫ್ ಎಂದು ಕರೆಯುತ್ತೇನೆ. ಕೆಲಿಡೋಸ್ಕೊಪ್ ಎನ್ನುವುದು ನಾವು ಚಿಕ್ಕಂದಿನಲ್ಲಿ ಮೂರು ಬಿಳಿಯ ಗಾಜಿನ ಪಟ್ಟಿಗಳನ್ನು ತೆಗೆದುಕೊಂಡು ಮೂರನ್ನೂ ತ್ರಿಕೋನಾಕಾರದಲ್ಲಿ ಜೋಡಿಸಿ ಎಲ್ಲ ಬದಿಯಿಂದಲೂ ಬಂಧಿಸಿ ಒಂದು ಕೊನೆಯನ್ನು ಮುಚ್ಚ್ಚಿ ಸುತ್ತಲೂ ಕಾಗದವನ್ನು ಸುತ್ತಿ ಬಿಡುತ್ತಿದ್ದೆವು. ತೆರೆದ ಬದಿಯಿಂದ ಒಡೆದ ಗಾಜಿನ ಬಳೆಯ ಚೂರುಗಳನ್ನು ಹಾಕಿದರೆ ಒಂದು ಚಿತ್ತಾರ (ಡಿಸೈನ್) ಮೂಡುತ್ತಿತ್ತು. ಅದನ್ನು ತಿರುಗಿಸುತ್ತಾ ಹೋದಂತೆಲ್ಲ, ಬೇರೆಬೇರೆ ಚಿತ್ತಾರಗಳು ಮೂಡುತ್ತಿದ್ದವು. ಒಂದು ಬಾರಿ ಮೂಡಿದ ಚಿತ್ತಾರ ಮತ್ತೊಂದು ಬಾರಿಗೆ ಎಂದೂ ಬರುವುದಿಲ್ಲ. ಹಾಗೆಯೇ ನಮ್ಮ ಜೀವನಗಳು ಈಗ ಇದ್ದಂತೆ ಎಲ್ಲವೂ ಮತ್ತೆಂದಿಗೂ ಇರುವುದಿಲ್ಲ. ದಿನಕಳೆದಂತೆ ನಮ್ಮ ವಯಸ್ಸು ಒಂದು ದಿನ ಹೆಚ್ಚಾಗುತ್ತದೆ. ಒಂದು ದಿನ ಇದ್ದ ಮನೋಭಾವ ಮತ್ತೊಂದು ದಿನ ಇರುವುದಿಲ್ಲ, ಒಂದು ಗಳಿಗೆ ಇದ್ದ ನಮ್ಮ ಯೋಚನಾ ವಿಧ ಮತ್ತೊಂದು ಗಳಿಗೆ ಇರುವುದಿಲ್ಲ. ಇದನ್ನೇ ಮಾನ್ಯ ಗುಂಡಪ್ಪನವರು ನಿಲುವಿಲ್ಲ ಎಂದರು.
ಇನ್ನು ನಾವು ಈಗ ಮನುಷ್ಯರಾಗಿ ಹುಟ್ಟಿದ್ದೇವೆ, ಹಿಂದೆ ಏನಾಗಿದ್ದೇವೋ ಮುಂದೆ ಏನಾಗುತ್ತೇವೆಯೋ ಗೊತ್ತಿಲ್ಲ. ನಮ್ಮ ಈ ಜೀವನ ಪ್ರಯಾಣ ಎಂದು ಮೊದಲಾಯಿತೋ ಗೊತ್ತಿಲ್ಲ. ಎಂದು ಮುಗಿಯುವುದೋ ಗೊತ್ತಿಲ್ಲ. ಪ್ರಶ್ನೆಗಳು ಉದ್ಭವವಾಗಬಹುದು. ಉತ್ತರವೂ ಮಾತ್ರ ಸಿಗುವುದಿಲ್ಲ. ಇದಕ್ಕೇ, ಮೊದಲಿಲ್ಲ ಕೊನೆಯಿಲ್ಲ ಎನ್ನುತ್ತಾರೆ ಶ್ರೀ ಗುಂಡಪ್ಪನವರು. ನಮ್ಮ ಸನಾತನ ವೇದಾಂತದ ಪ್ರಕಾರ ಒಂದು ಜೀವಿ ಮಾನವನಾಗಿ ಹುಟ್ಟಬೇಕಾದರೆ ಅದಕ್ಕೆ ಮೊದಲು ೮೪ ಲಕ್ಷ ಬಾರಿ ( ಏಸು ಕಾಯಂಗಳ ಕಳೆದು ೮೪ ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ ಎಂದು ಪುರಂಧರ ದಾಸರ ಪದ. ) ಬೇರೆ ಬೇರೆ ದೇಹಗಳನ್ನು ಹೊಕ್ಕು ಹೊರಗೆ ಬಂದು ಮನುಷ್ಯನಾಗುತ್ತಾನೆ, ಅಂದರೆ ಜೀವ ಈ ಮನುಷ್ಯ ದೇಹವನ್ನು ಹೊಗುತ್ತಾನೆ. ನಾವು ಎಂದು ಈ ಮನುಷ್ಯ ದೇಹವನ್ನು ಹೊಕ್ಕೆವೋ ಇದರಿಂದ ಮುಂದೆ ಏನೋ ಎನ್ನುವುದು ಗೊತ್ತಿಲ್ಲ. ಮತ್ತೆ ಈ ಜನ್ಮದ ನಮ್ಮ ಕರ್ಮಗಳು ಮುಂದಿನ ಜನ್ಮವನ್ನು ನಿರ್ಧರಿಸುತ್ತವೆ ಎಂದೂ ಹೇಳುತ್ತಾರೆ. ಇನ್ನೂ ಕೆಲವರು ಜೀವಿ ತಾನು ಏನಾಗಬೇಕು, ಎಲ್ಲಿಗೆ ಹೋಗಬೇಕು ಎನ್ನುವುದನ್ನು ತಾನೇ ನಿರ್ಧರಿಸುತ್ತಾನೆ ಎನ್ನುತ್ತಾರೆ. ಆ ನಿರ್ಧಾರಗಳು ನಮ್ಮ ಮನಸ್ಸು ಬುದ್ಧಿಗಳಿಗೆ ಗೊತ್ತಾಗುತ್ತವೆಯೋ ಇಲ್ಲವೋ, ಎಲ್ಲವೂ ಅನಿಶ್ಚಯ. ಇದಕ್ಕೆ ಇರುವ ಆದಿಯೂ ಗೊತ್ತಿಲ್ಲ ಅಂತ್ಯವೂ ಗೊತ್ತಿಲ್ಲ. ಇದನ್ನೇ ಗುಂಡಪ್ಪನವರು “ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲ ವದಕೆ” ಎಂದರು.
ಬದುಕಿನ ಅರ್ಥ ಗೊತ್ತಿಲ್ಲ, ಅಥವಾ ನಮಗೆ ಗೊತ್ತಿರುವುದು ನಮ್ಮ ದೃಷ್ಟಿಕೋನವಷ್ಟೇ , ಸಮಗ್ರ ಸತ್ಯವಲ್ಲವಲ್ಲ. ಸಾವಿನ ಅರ್ಥವಂತೂ ಗೊತ್ತಿಲ್ಲ. ಸಾವೆಂದರೆ ನಮಗೆ ಗೊತ್ತಿರುವುದು, ಒಂದು ವ್ಯಕ್ತಿ ಮೂರ್ಥರೂಪದಲ್ಲಿ ಶರೀರದಿಂದ ಇರಲಾಗದ ಸ್ಥಿತಿಯೇ ಸಾವು. ನಾನು ಇದನ್ನು ರೂಪ ಬದಲಾವಣೆ ಎನ್ನುತ್ತೇನೆ. ಹಾಗಾಗಿ ಸಾವಿನ ಬಗ್ಗೆಯೂ ನಿಖರವಾದ ಅಭಿಪ್ರಾಯವಿಲ್ಲ. ಬದುಕೇ ನಿರ್ಧಿಷ್ಟವಲ್ಲ. ಇನ್ನು ಬದುಕಿಗೆ ಸಂಬಂಧಿಸಿದ ಸುಖವೇನು
(ಸೊದೆ=ಅಮೃತ ಅಂದರೆ ಸವಿ.ಆ ಸವಿಯನ್ನೇ ಸುಖ ಎಂದುಕೊಳ್ಳಬೇಕು) ವಿಷ (ದುಃಖ) ವೇನು? ಅದೂ ಅರ್ಥವಾಗುವುದಿಲ್ಲ. ಬದುಕೆಲ್ಲ ಒಂದು ಉದಕಬುದ್ಬುದ,ಅಂದರೆ ನೀರಿನ ಮೇಲಿನ ಗುಳ್ಳೆ ಎಂದು ಹೇಳುತ್ತಾರೆ ಗುಂಡಪ್ಪನವರು. “ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ” ಎಂದು ಪುರಂದರ ದಾಸರು “ಯಾರಿಗೆ ಯಾರುಂಟು ಎರವಿನ ಸಂಸಾರ “ಎಂಬ ಹಾಡಿನಲ್ಲಿ ಬರೆಯುತ್ತಾರೆ. ಯಾವುದೂ ನಿರಂತರವಲ್ಲ, ನಿಶ್ಚಯವಿಲ್ಲ, ನಿಶ್ಚಯವಿದ್ದರೂ ನಮಗೆ ಅದರ ಅರಿವಿಲ್ಲ. ಅಂತಹ ಭಾವಗಳನ್ನೇ ವ್ಯಕ್ತಪಡಿಸುತ್ತಾರೆ ಶ್ರೀ ಗುಂಡಪ್ಪನವರು.
ಇದು ವೇದಾಂತದ ಮಾತು. ಇದು ಸತ್ಯ. ಈ ಸತ್ಯದ ತಳಹದಿಯಲ್ಲೇ ನಮ್ಮ ಜೀವನ ಸಾಗಬೇಕು. ಆದರೆ ನಾವು ” ಅಯ್ಯೋ ಜೀವನವೆಲ್ಲ ನಶ್ವರ, ಯಾವುದೂ ಶಾಶ್ವತವಲ್ಲ ನಾನೇಕೆ ಏನಾದರೂ ಮಾಡಬೇಕು” ಎಂದು ನಿರಾಸೆಯ ಭಾವ ತಳೆಯಬಾರದು. ಅದು ಬದುಕಿಗೆ ಮಾರಕ. ಬದುಕಿಗೆ ಪೂರಕವಾದ ಸದಾಶಾಭಾವನ್ನೇ ಇಟ್ಟುಕೊಂಡು ಜೀವನವನ್ನು ಸಾಗಿಸಬೇಕು. ” ಸದಶಾಭಾವವಷ್ಟೇ” ಇರಬೇಕು. ಎಲ್ಲವೂ ಯಾವುದೋ ಒಂದು ಪರಮ ಶಕ್ತಿಯ ಅಧೀನದಲ್ಲಿ ಮತ್ತು ಅದರ ಇಚ್ಚೆಯಂತೆ ನಡೆಯುತ್ತದೆ. ನಮ್ಮ ಪ್ರಮೇಯವಿದ್ದಂತೆ ಕಂಡರೂ ಇಲ್ಲದ ಮತ್ತು ಅದಕ್ಕೆ ತದ್ವಿರುದ್ಧವಾದ ಅನುಭವಗಳು ನಮಗೆ ಆಗುತ್ತವೆ. ಹಾಗಾಗಿ ನಾವು ಆ ಪರಮ ಶಕ್ತಿಯ ಅಧೀನದಲ್ಲಿರುವುದರಿಂದ ಅದಕ್ಕೆ ಡಿ.ವಿ.ಜಿ.ಯವರು ಹೇಳುವಂತೆ ” ಆ ವಿಚಿತ್ರಕೆ ಶರಣಾಗೋ ” ಎಂಬಂತೆ ಇರಬೇಕು.
ಆದರೆ ಜೀವನದಲ್ಲಿ ಇದ್ದರೂ ಯಾವುದಕ್ಕೂ ಅಂಟದೆ ತಾವರೆ ಎಲೆಯ ಮೇಲಿನ ನೀರ ಹನಿಯಂತೆ ಇರಬೇಕು. ಇದ್ದರೆ ನೆಮ್ಮದಿ, ಸುಖ ಮತ್ತು ಆನಂದ. ಹೇಳುವುದು ಸುಲಭ ಆಚರಣೆ ಬಹಳ ಕಷ್ಟ . ಆದರೆ ಅಸಾಧ್ಯವಲ್ಲವಲ್ಲ. ಪ್ರಯತ್ನ ಪಡೋಣ ಎಂದೋ ಒಂದು ದಿನ ನಮಗೂ ಆ ಆನಂದದ ನೆಲೆ ಸಿಗಬಹುದು.
ಇಂಥಹ ಆಶಯಗಳನ್ನು ಇಟ್ಟುಕೊಂಡು ನಾವು ಮುಂದಿನ ಕಗ್ಗಕ್ಕೆ ಹೋಗೋಣವೆ?
[09/01 6:35 AM] S. Bhargav: ಕಗ್ಗ-19
ಗಾಳಿ ಮಣ್ಣು೦ಡೆಯೊಳಹೊಕ್ಕು ಹೊರಹೊರಳಲದು I
ಆಳೆನಿಪುದಂತಾಗದಿರೆ ಬರಿಯ ಹೆಂಟೆ II
ಬಾಳೇನು ಧೂಳು ಸುಳಿ, ಮರ ತಿಕ್ಕಿದುರಿಯ ಹೊಗೆI
ಕ್ಶ್ವೇಳವೇನಮೃತವೇಂ ? – ಮಂಕುತಿಮ್ಮ II
ಮಣ್ಣು೦ಡೆಯೊಳಹೊಕ್ಕು= ಮಣ್ಣ + ಉಂಡೆ+ಒಳ+ಹೊಕ್ಕು , ಹೊರಹೊರಳಲದು = ಹೊರ+ಹೊರಳಲು +ಅದು
ಆಳೆನಿಪುದಂತಾಗದಿರೆ = ಆಳು+ ಎನಿಪುದು +ಅಂತೆ + ಆಗದಿರೆ, ತಿಕ್ಕಿದುರಿಯ = ತಿಕ್ಕಿದ+ಉರಿಯ, ಕ್ಶ್ವೇಳವೇನಮೃತವೇಂ =ಕ್ಶ್ವೇಳವೇನು +ಅಮೃತವೇನು
ಈ ದೇಹವನ್ನು ಮಣ್ಣು೦ಡೆಗೆ ಹೋಲಿಸಿದ್ದಾರೆ ಮತ್ತು ಈ ದೇಹದಲ್ಲಿ ಆಡುವ ಉಸಿರು ( ಗಾಳಿ ) ಆಡುತ್ತಿದ್ದರೆ ನಾವುಗಳು “ಆಳು” ಎಂದು ಎನ್ನಿಸಿ ಕೊಳ್ಳುತ್ತೇವೆ. ಇಲ್ಲದಿದ್ದರೆ ಈ ದೇಹ ಬರೀ ಮಣ್ಣಿನ ಹೆಂಟೆ ಎಂದು ಒಂದು ಅತ್ಯುತ್ತ್ತಮ ಸತ್ಯವನ್ನು ಪ್ರತಿಪಾದಿಸುತ್ತಾರೆ. ಇಂದು ನಮ್ಮ ಸ್ನೇಹಿತರೊಬ್ಬರು ಇದಕ್ಕೆ ಸರಿಯಾಗಿ” ಬಡಿತ ನಿಂತರೆ ಬಡಿವಾರ ಬಂದ್ ” ಎಂದು ಹಿಂದಿನ ಕಗ್ಗಕ್ಕೆ ಪ್ರತಿಕ್ರಿಯೆ ನೀಡಿ, ಬಹಳ ಸೂಕ್ತವಾಗಿ ಹೇಳಿದರು. ಬಹುಶಃ ಅವರಿಗೆ ಇಂದಿನ ಕಗ್ಗದ ಪರಿಚಯವಿತ್ತೇನೋ ಎಂದು ಅನ್ನಿಸುತ್ತದೆ. ಇರಲಿ ಗುಂಡಪ್ಪನವರು ಈ ಬಾಳನ್ನು ದೂಳ ಸುಳಿ ಎಂದು ಕರೆಯುತ್ತಾರೆ. ಇದು ಬಹಳ ಸೂಕ್ತವಾಗಿದೆ. ಏಕೆಂದರೆ,
ನಾನು ಹಿಂದೆ ಒಮ್ಮೆ ಈ ಬ್ರಹ್ಮಾಂಡದ ವಿವರಣೆಯನ್ನು ಮಾಡುವಾಗ, ಇಡೀ ಬ್ರಹ್ಮಾಂಡವು ಎಷ್ಟು ದೊಡ್ಡದೆಂದರೆ, ಇದರೆದುರು ನಾವು ಒಂದು ದೂಳ ಕಣವೂ ಅಲ್ಲ ಎಂದು ಹೇಳಿದ್ದೆ. ಈಗ ಮಣ್ಣಿಂದ ಆದ, ಮತ್ತು ಈ ಸಮಸ್ತ ಭೂಮಂಡಲವನ್ನು ನಿವಾಸಸ್ಥಾನವನ್ನಾಗಿಸಿಕೊಂಡ ಪ್ರಾಣಿಗಳೆಲ್ಲವೂ ಧೂಳ ಕಣಗಳೇ ಎಂದು ಗುಂಡಪ್ಪನವರು ಹೇಳುತ್ತಾರೆ.
ಮಣ್ಣಿಂದ ಆದ ಜೀವಕಣಗಳು ಮತ್ತು ಈ ಜೀವಕಣಗಳಿಂದಾದ ಈ ದೇಹವೂ ಮಣ್ಣಲ್ಲವೇ? “ಮಣ್ಣಿಂದ ಕಾಯ ಮಣ್ಣಿಂದ” ಎಂದು ನಾವು ಕೇಳಿಲ್ಲವೇ? ಹಾಗೆ ಮಣ್ಣಿಂದ ಆದ ಈ ದೇಹವನ್ನು ಮಣ್ಣ ಉಂಡೆ ಎಂದು ಹೇಳಿದ್ದಾರೆ. ಈ ಮಣ್ಣ ಉಂಡೆಯಲಿ ಗಾಳಿ ಆಡುತ್ತಿದ್ದರೆ ನಾವೂ ಸಹ “ಆಳು” ಅಂದರೆ ಮನುಷ್ಯ ಎಂದು ಕರೆಯಲ್ಪಡುತ್ತೇವೆ. ಇಲ್ಲದಿದ್ದರೆ ಬರೇ ಮಣ್ಣ ಉಂಡೆ. ಆಗ ನಮ್ಮನ್ನು ಹೆಣ ಎನ್ನುತ್ತಾರೆ
ಹಾಗಿದ್ದರೆ ಈ ಬಾಳು ಅಂದರೆ ಜೀವನವು ಏನು? ಎಂದರೆ ಮಣ್ಣ ಕಣಗಳ ತಿಕ್ಕಾಟವೆನ್ನುತ್ತಾರೆ ಶ್ರೀ ಗುಂಡಪ್ಪನವರು. ಈ ತಿಕ್ಕಾಟದಲ್ಲಿ ಬೆಂಕಿ ಉಂಟಾಗುತ್ತದೆ ಮತ್ತು ಹೊಗೆಯಾಡುತ್ತದೆ. ದ್ವೇಷದ ಬೆಂಕಿ, ಅಸೂಯೆಯ ಬೆಂಕಿ ಕೋಪದ ಬೆಂಕಿ ಹೀಗೆ ಹಲವಾರು ವಿಧದಲ್ಲಿ ಮನುಜ ಮನುಜರ ಮಧ್ಯೆ ಉಂಟಾಗುವ ತಿಕ್ಕಾಟ. ಆ ತಿಕ್ಕಾಟದ ಪರಿಣಾಮ ಸಾವು ನೋವುಗಳ ಪರಿಣಾಮ. ಅದೇ ಈ ಬೆಂಕಿಯಿಂದ ಬರುವ ಹೊಗೆ. ಇದರಿಂದ ಕೆಲವರಿಗೆ ಸುಖ ಕೆಲವರಿಗೆ ದುಃಖ. ಇದನ್ನೇ “ಕ್ಶ್ವೇಳ “ಅಂದರೆ ವಿಷವೆಂದು, ಸುಖ ಮತ್ತು ಆನಂದವನ್ನು “ಅಮೃತ”ವೆಂದೂ ಕರೆಯುತ್ತಾರೆ ಗುಂಡಪ್ಪನವರು.
ಪರಮಾತ್ಮನೆಂಬ ಮಹಾಜ್ಜ್ವಾಲೆಯಲ್ಲಿ ಉರಿಯುವ ಬೆಂಕಿಯಿಂದ ಸಿಡಿದ ಕೋಟ್ಯಾಂತರ ಕಿಡಿಗಳೇ, ಈ ಜೀವಿಗಳು. ಈ ಜಗತ್ತಿನಲ್ಲಿ, ಮಣ್ಣಿನ ಉಂಡೆಗಳಂತೆ ಇರುವ ನಾವೂ ಮತ್ತು ಈ ಉಂಡೆಯೊಳಗೆ ಗಾಳಿ ಎಂಬಂತೆ ಇರುವ ಆತ್ಮ ಅಥವಾ ಚೇತನದ ಸಮ್ಮಿಲನದಿಂದ ಉಂಟಾದ ಬದುಕೆಂಬ ತಿಕ್ಕಾಟದಲ್ಲಿ ಬೆಂಕಿಯುಗುಳಿ, ವಿಷಕಾರಿ, ಅಮೃತವ ಸವಿದು ಬಾಳ ಸವೆಸಿ ಮತ್ತದೇ ಚೇತನವನ್ನು ಸೇರುವಾಗ, ಇಲ್ಲಿ ಪಡೆದ ಅಮೃತದ ಬೆಲೆಯೇನು ಕುಡಿದ ಅಥವಾ ಕಕ್ಕಿದ ವಿಷದ ಬೆಲೆಯೇನು ಎಂದು ಕೇಳುತ್ತಾರೆ ಶ್ರೀ ಗುಂಡಪ್ಪನವರು.
ಈ ಕಗ್ಗದ ಒಟ್ಟಾರೆ ಅಂತರ್ಯವೇನೆಂದರೆ, ಮಣ್ಣಿಂದ ಆಗಿ, ಮಣ್ಣಲ್ಲೇ ಇದ್ದು ಮಣ್ಣಲ್ಲೇ ಸೇರುವ ಈ ಮಾನವನ ಬಾಳು ಕೇವಲ ಉಸಿರಿರುವ ತನಕ. ಹೀಗೆ ಬದುಕಿರುವಾಗ ನಾವು ಪಡೆಯುವ ಸುಖ ದುಃಖ ಅನುಭವಿಸುವ , ಕೋಪ ದ್ವೇಷ, ಅಸೂಯ, ಪ್ರೀತಿ, ಪ್ರೇಮ, ಅನುರಾಗ, ಬಂಧನಗಳಂಥಹ ಭಾವಗಳೆಲ್ಲವೂ, ” ಬಡಿತವಿರುವತನಕ ( ಹೃದಯದ)” ಅದು ನಿಂತರೆ ” ಬಡಿವಾರ ಬಂದ್” ಈ ಜೀವನದ ಎಲ್ಲಕ್ಕೂ ಒಂದು ಮಂಗಳವನ್ನು ಹಾಡುವ, ಸಾವನ್ನು ಅಪ್ಪಿ ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗುವಾಗುವಂಥಾ ಈ ಜೀವನದಲ್ಲಿ ಪಡೆದ ಸುಖಕ್ಕೆ ಏನು ಬೆಲೆ, ದುಃಖಕ್ಕೆ ಏನು ಬೆಲೆ. ಎಲ್ಲವೂ ಶೂನ್ಯ.
ಇಂತಹ ಭಾವಗಳನ್ನು ವ್ಯಕ್ತಪಡಿಸುವ ಈ ಕಗ್ಗದ ಅಂತರ್ಯವನ್ನು ವಾಚಕರು ಅವರದೇ ಅನುಭವದ ಮೂಸೆಯಲ್ಲಿ ಹಾಕಿ ನೋಡಿದಾಗ, ಪ್ರತಿಯೊಬ್ಬರಿಗೂ ಅವರವರದೇ ಅನುಭವದ ಭಾವ ಸಿಗುತ್ತದೆ.
ಇವುಗಳನ್ನೇ ಚಿಂತಿಸುತ್ತಾ ವಿಚಾರಮಾಡುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗೋಣ.
[09/01 9:00 PM] S. Bhargav: ಕಗ್ಗ-20
ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು? I
ಚಂಡಚತುರೋಪಾಯದಿಂದಲೇನಹುದು ? II
ತಂಡುಲದ ಹಿಡಿಯೊಂದು ತುಂಡುಬಟ್ಟೆಯದೊಂದು I
ಅಂಡಲೆತವಿದಕೇನೋ? – ಮಂಕುತಿಮ್ಮ II
ಚಂಡ= ಉಗ್ರ, ಚತುರೋಪಾಯ = ನಾಲ್ಕು ವಿಧವಾದ ಉಪಾಯಗಳು, ಮುಗಿದೇನಹುದು = ಮುಗಿದು ಏನು ಅಹುದು= ಮುಗಿದರೆ ಏನಾಗುತ್ತದೆ. ತಂಡುಲ=ಅಕ್ಕಿ, ಅಂಡಲೆತ= ಸುಮ್ಮನೆ ಸುತ್ತಾಟ.
ಅಂದಿನ ಮತ್ತು ಇಂದಿನ ವಾಸ್ತವಿಕ ಚಿತ್ರಣವನ್ನು ನಮಗೆ ಗುಂಡಪ್ಪನವರು ಕೊಟ್ಟಿದ್ದಾರೆ ಈ ಕಗ್ಗದಲ್ಲಿ. ನಮ್ಮಲ್ಲಿ ಅನೇಕ ದೇವರುಗಳು. ಆ ದೇವರುಗಳ ಸಂಖ್ಯೆ ಎಷ್ಟಿದೆಯಂದರೆ ಎಣಿಸಲೂ ಸಾಧ್ಯವಿಲ್ಲ. ಒಂದುಕಡೆ ತಿರುಪತಿ ತಿಮ್ಮಪ್ಪನಾದರೆ, ಇನ್ನೊಂದು ಕಡೆ, ಬದರಿಯ ಬದರೀನಾಥ, ಒಂದುಕಡೆ ಮಧುರೆಯ ಮೀನಾಕ್ಷಿಯಾದರೆ, ಇನ್ನೊಂದುಕಡೆ ಕಾಶಿಯ ವಿಶಾಲಾಕ್ಷಿ, ಒಂದುಕಡೆ ಪೂರಿಯ ಜಗನ್ನಾಥನಾದರೆ ಇನ್ನೊಂದುಕಡೆ ತಿರುವನಂತಪುರದ ಅನಂತಪದ್ಮನಾಭ, ಒಂದುಕಡೆ ವಿನಾಯಕನಾದರೆ, ಇನ್ನೊಂದುಕಡೆ ಷಣ್ಮುಖ, ಹೀಗೇ ಬರೆಯುತ್ತಹೋದರೆ ಪಟ್ಟಿ ಬಹಳ ಉದ್ದ ಆದೀತು. ದೇಶ ಕಾಲ ಸಂಧರ್ಭಕ್ಕನುಗುಣವಾಗಿ ನಮಗೆ ನಾವು ಪೂಜಿಸುವ ದೇವತೆಗಳು ಬದಲಾಗುತ್ತ ಹೋಗುತ್ತಾರೆ. ಇದನ್ನೇ ಗುಂಡಪ್ಪನವರು “ಕಂಡ ದೈವಕ್ಕೆಲ್ಲ” ಎಂದಿರಬೇಕು.
ಆದರೆ ಇದು ಸರಿಯೇ ಅಲ್ಲವೇ ಎಂದು ಸ್ವಲ್ಪ ವಿಶ್ಲೇಷಿಸೋಣವೇ? ಭಾರತೀಯರಾದ ನಮಗೆ ಎಲ್ಲವೂ ದೈವವೇ? ಗಿಡ ಮರ ಬಳ್ಳಿ ನದಿ ಗುಡ್ಡ ಬೆಟ್ಟ, ಆಕಾಶ ಸೂರ್ಯ ಚಂದ್ರ ಎಲ್ಲ ಗ್ರಹಗಳು, ಪಕ್ಷಿ ಮೀನು ಪ್ರಾಣಿಗಳು ಎಲ್ಲವೂ ದೇವರೇ. ಅಷ್ಟೇ ಅಲ್ಲ ಎಲ್ಲದರಲ್ಲೂ ದೈವವನ್ನು ಕಾಣುವ ಸಂಸ್ಕೃತಿ ನಮ್ಮದು. ಅವುಗಳನ್ನೆಲ್ಲ ಕಾಪಾಡುವ ಕಾರಣದಿಂದ ಅವುಗಳಿಗೆಲ್ಲ ದೈವತ್ವವನ್ನು ಆರೋಪಿಸಿದ್ದಾರೆ ನಮ್ಮ ಪೂರ್ವಜರು. ಒಂದು ರೀತಿಯಲ್ಲಿ ಇದು ಒಳ್ಳೆಯದೇ ಅಲ್ಲವೇ ವಾಚಕರೆ? ಆದರೆ ವ್ಯಕ್ತಿ ಆಂತರ್ಯದಲ್ಲಿ ಬೆಲ್ಯುತ್ತಾ ಹೋದಂತೆಲ್ಲ ಅನೇಕದಿಂದ ಏಕಕ್ಕೆ ಬರುವುದೇ ಅಧ್ಯಾತ್ಮಸಾಧನೆಯ ಗುರಿ. ಆಕಾರದಿಂದ ನಿರಾಕಾರಕ್ಕೆ ಬರುವುದೇ ಎಲ್ಲ ಸಾಧನೆಯ ಫಲ.
ಆದರೆ ನಾವು ಏಕೆ ಈ ದೈವಕ್ಕೆ ಕೈ ಮುಗಿಯುತ್ತೇವೆ? ಇದಕ್ಕೆ ನನ್ನ ಅರಿವಿನ ಪರಿಮಿತಿಯಲ್ಲಿ ವಿವರಿಸುತ್ತೇನೆ. ನಮಗೆ ಆಸೆಗಳುಂಟು. ಆಸೆಗಳು ನಾವು ಈ ಬದುಕಿಗೆ ಅಂಟಿಕೊಂಡಿರುವುದರಿಂದ ಉಂಟು. ಈ ಆಸೆಯ ಪಕ್ಕ ಪಕ್ಕದಲ್ಲೇ ಒಂದು ಭಯವೂ ಉಂಟು. ಮಾನವರಿಗೆ ಎರಡು ರೀತಿಯ ಭಯಗಳುಂಟು. ಒಂದು ತನ್ನಲ್ಲಿರುವ ವಸ್ತು, ವಿಷಯ ಅಥವಾ ವ್ಯಕ್ತಿ ಯನ್ನು ಕಳೆದುಕೊಳ್ಳುವ ಭಯ. ಎರಡು, ತಾನು ಆಸೆ ಪಟ್ಟ ವಸ್ತು, ವ್ಯಕ್ತಿ, ವಿಷಯಗಳು ಸಿಗದೆಹೋಗುವ ಭಯ. ಮಾನವನ ಎಲ್ಲ ಭಯಗಳನ್ನೂ ಈ ಎರಡು ಅಂದರೆ ಎರಡೇ ವಿಭಾಗಗಳಲ್ಲಿ ಸೇರಿಸಬಹುದು. ಮೂರನೆಯದು ನನಗೆ ಗೋಚರಿಸುತ್ತಿಲ್ಲ.
ಆದರೆ ಈ ಭಯ ಸಹಜವಾದದ್ದೇ. ಮನುಷ್ಯನಿಗೆ ತನ್ನ ಜೀವನದಲ್ಲಿ ತನಗೆ ಸಂಬಂಧಿಸಿದ ಎಲ್ಲ ವ್ಯಕ್ತಿ, ವಿಷಯ ಮತ್ತು ವಸ್ತುವಿನ ಮೇಲೆ ಮಮಕಾರವಿರುತ್ತದೆ. ಈ ಮಮಕಾರವೇ ಈ ಭಯಕ್ಕೆ ಕಾರಣ. ಈ ವ್ಯಕ್ತಿ, ವಿಷಯ ಮತ್ತು ವಸ್ತುಗಳು ಹಲವಿಧದಲ್ಲಿ ಇರಬಹುದು, ತನ್ನವರು, ಅವರಿಗೆ ಸಂಬಂಧಿಸಿದ ವಿಷಯಗಳಾದ, ಆರೋಗ್ಯ, ವಿದ್ಯೆ, ಪರಸ್ಪರ ಸಬಂಧಗಳು, ವಿವಾಹಕ್ಕೆ, ಪ್ರೇಮಕ್ಕೆ, ಉದ್ಯೋಗ, ಹಣಕಾಸು, ಹೀಗೆ ಹತ್ತು ಹಲವಾರು ವಿಷಯಗಳಿಗೆ ನಾವು ಅಂಟಿಕೊಂಡಿರುತ್ತೇವೆ. ಅವುಗಳಲ್ಲಿ ಇರುವುದು ಕಳೆದು ಹೋಗುವ ಭಯ ಅಥವಾ ಬಯಸಿದ್ದು ಆಗದೆ ಹೋಗಬಹುದಾದ ಭಯ. ಕಳೆದು ಹೋಗುವುದು ಏಕೆ? ಬಯಸಿದ್ದು ಆಗದೆ ಹೋಗುವುದು ಏಕೆ? ಎಂದು ಖಚಿತವಾಗಿ ನಮಗೆ ಅರಿಯದಾದಾಗ ಮತ್ತು ಸಂಶಯಗಳಿದ್ದಾಗ, ನಮಗರಿಯದ ಯಾವುದೋ ಶಕ್ತಿ ಅಥವಾ ನಮ್ಮನ್ನು ಕಾಯುವ
ಯಾವುದೋ ಶಕ್ತಿಗೆ ನಾವು ಕೈಮುಗಿದು, ಬೇಡುವುದೋ ಅಥವಾ ಶರಣಾಗುವುದೋ ಮಾಡುತ್ತೇವೆ. ಅದನ್ನೇ ಗುಂಡಪ್ಪನವರು ” ಆ ವಿಚಿತ್ರಕೆ ಶರಣಾಗೋ ” ಎನ್ನುತ್ತಾರೆ.
ಭಾರತೀಯರಾದ ನಮಗೆ ಎಲ್ಲವೂ ದೇವರೇ ಆದ್ದರಿಂದ, ಇಷ್ಟೊಂದು ಬಗೆಬಗೆಯ ದೇವರುಗಳು ನಮ್ಮಲ್ಲಿ, ಹಣಕ್ಕೊಬ್ಬ, ಗುಣಕ್ಕೊಬ್ಬ, ವಿದ್ಯೆಗೊಬ್ಬ, ಆರೋಗ್ಯಕ್ಕೊಬ್ಬ, ಪಾಪನಾಶನಕ್ಕೊಬ್ಬ, ಪರಮಾರ್ಗಕ್ಕೊಬ್ಬ. ಮತ್ತು ಈ ದೇವತೆಗಳನ್ನು ಒಲಿಸಿಕೊಳ್ಳಲು ಹಲವಾರು ವಿಧಾನಗಳು. ದರ್ಶನ, ಅರ್ಚನೆ, ಅಭಿಷೇಕ, ದಾನ,ಧ್ಯಾನ, ಭಜನೆ, ಆನ್ನ ಸಂತರ್ಪಣೆ, ಸಮಾರಾಧನೆ, ಪರೋಪಕಾರದ ಕೆಲಸಗಳು, ಹೋಮ, ಹವನ, ಯಜ್ಞ, ಯಾಗಾದಿಗಳು, ಹೀಗೆ ನಮಗೆ ತೋಚಿದ್ದು, ಮತ್ತು ಪರರಿಂದ ಸೂಚಿಸಲ್ಪಟ್ಟ, ಸಾಮ, ದಾನ , ಬೇಧ, ದಂಡದಂತ ತುರೋಪಾಯಗಳನ್ನೂ ಉಪಯೋಗಿಸಿ, ನಮ್ಮ ಕಾರ್ಯ ಸಾಧನೆಗೆ ಆ ದೇವರನ್ನು ಸದಾಕಾಲ ಒಲಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಇದು ಒಂದು ಮಾನಸಿಕ ಸ್ವಯಂ ಚಿಕಿತ್ಸೆ. ನಮ್ಮ ಮನಸ್ಸುಗಳಲ್ಲಿ ಉದ್ಭವಿಸುವ ಹಲವಾರು ಪ್ರಶ್ನೆ ಮತ್ತು ಸಂದೇಹಗಳಿಗೆ ನಾವೇ ಕಂಡುಕೊಳ್ಳುವ ಸಮಾದಾನ.
ಇದು ಅಧ್ಯಾತ್ಮ ಪ್ರಯಾಣದ ಒಂದು ಸ್ತರ. ಅವರವರ ಮಟ್ಟಿಗೆ ಸರಿ. ಆದರೆ ಗುಂಡಪ್ಪನವರು ” ತಂಡುಲದ ಹಿಡಿಯೊಂದು ತುಂಡುಬಟ್ಟೆಯದೊಂದು” ಒಂದು ಹಿಡಿ ಅಕ್ಕಿಗಾಗಿ, ಹೊಟ್ಟೆ ತುಂಬಿಸಿಕೊಳ್ಳಲು, ಗೇಣುದ್ದ ಬಟ್ಟೆಗಾಗಿ, ಮೈಮುಚ್ಚಲು ಮನುಷ್ಯ ಇಷ್ಟೆಲ್ಲಾ ಮಾಡಬೇಕೆ, ಎಂಬ ಭಾವದಲ್ಲಿ ಒಂದು ವೈರಾಗ್ಯದ ವಿಷಯವನ್ನು ಪ್ರಸ್ತಾಪ ಮಾಡುತ್ತಾರೆ. ಆದರೆ ವೈರಾಗ್ಯವು ಅನುಭವದಿಂದ ಮಾತ್ರ ಬರಲು ಸಾಧ್ಯ. ಅಂತಹ ಅನುಭವನ್ನ್ನು ಕೊಡುವುದೇ ಜೀವನ. ಅಂತ ಅನುಭವಗಳನ್ನು ಪಡೆದು ಅನುಭವಿಸಿ, ಇಲ್ಲಿ ಯಾವುದರಿಂದಲೂ ಏನೂ ಆಗುವುದಿಲ್ಲ, ನಾನು ಇಲ್ಲಿನವನಲ್ಲ, ನನ್ನ ಮೂಲ ಬೇರೆ ಇದೆ, ” ಅಲ್ಲಿದೆ ನಮ್ಮ ಮನೆ. ನಾನೇಕೆ ಬಂದೆ ಸುಮ್ಮನೆ” ಎಂದು ಪುರಂದರದಾಸರು ಹೇಳುವಹಾಗೆ, ನಮಗೆ ಈ ಪ್ರಪಂಚದಿಂದ ಏನೂ ಆಗಬೇಕಾಗಿಲ್ಲವೆಂಬ “ನಿಜ” ವೈರಾಗ್ಯದ ಭಾವ ಮನದಲ್ಲಿ ಸ್ಥಿರವಾಗಿ ಮೂಡಿದರೆ…………….. ಆದರೆ ಕೆಲವರು ಹೀಗೂ ಯೋಚನೆ ಮಾಡುತ್ತಾರೆ, ಆ ವೈರಾಗ್ಯ ಬೇಕೆ? ಈ ಜೀವನದಾಚಿನದು ಏನೋ ಗೊತ್ತಿಲ್ಲ. ಗೊತ್ತಿಲ್ಲದ ವಿಷಯದಲ್ಲಿ ಆಸಕ್ತಿ ತೋರಿ, ಇರುವುದನ್ನು
ಬಿಡುವುದು ಸರಿಯಲ್ಲ. ಬದುಕಿರುವ ತನಕ ಬದುಕನ್ನು ಅನುಭವಿಸಿ ಬದುಕಬೇಕು, ಎನ್ನುತ್ತಾರೆ.
ಏನಾದರಾಗಲಿ ಒಂದುಕಡೆ ಈ ಜಗತ್ತು ಮತ್ತು ಸಂಸಾರದಲ್ಲಿ ರಕ್ತಿ ಇನ್ನೊಂದುಕಡೆ ವಿರಕ್ತಿ. ಯಾವುದು ಬೇಕೋ ಅದನ್ನು ಆಯ್ದುಕೊಳ್ಳಲು ಎಲ್ಲರಿಗೂ ಸಂಪೂರ್ಣ ಸ್ವಾತಂತ್ರ್ಯ. ನಮ್ಮ ನಮ್ಮ
ವಿಚಾರಗಳು ನಮಗೆ ಸಂತೋಷ ನೀಡಬೇಕು ಅಷ್ಟೇ.
ಇವುಗಳನ್ನೇ ಚಿಂತಿಸುತ್ತಾ ವಿಚಾರಮಾಡುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗೋಣ.
[11/01 5:15 AM] S. Bhargav: ಕಗ್ಗ-21
ಹೊನ್ನೆಂದು ಜಗದಿ ನೀಂ ಕೈಗೆ ಕೊಂಡದನು ವಿಧಿ
ಮಣ್ಣೆನುವನ್, ಅವನವರ ಮಣ್ಣೆನುವೆ ನೀನು
ಬಿನ್ನವಿಂತಿರೆ ವಸ್ತು ಮೌಲ್ಯಗಳ ಗಣನೆಯೀ
ಪಣ್ಯಕ್ಕೆ ಗತಿಯನ್ತೋ? – ಮಂಕುತಿಮ್ಮ
ಹೊನ್ನು ಎಂದು ಜಗದಿ ನೀ೦ ಕೈಗೆ ಕೊಂಡದನು ವಿಧಿ ಮಣ್ಣೆನುವನು, ಅವನ ವರ ಮಣ್ಣೆನುವೆ ನೀನು
ಭಿನ್ನವು ಇಂತಿರೆ ವಸ್ತು ಮೌಲ್ಯಗಳ ಗಣನೆಯು ಈ ಪಣ್ಯಕ್ಕೆ ಗತಿಯೇನೋ ಮಂಕುತಿಮ್ಮ
ಹೊನ್ನು= ಚಿನ್ನ, ಜಗದಿ=ಜಗತ್ತಿನಲ್ಲಿ, ಭಿನ್ನ=ವ್ಯತ್ಯಾಸ, ಪಣ್ಯ= ವ್ಯಾಪಾರ.
ಯಾವುದನ್ನು ನೀನು ಚಿನ್ನ ಎಂದು ಕೈಗೆ ಎತ್ತಿಕೊಳ್ಳುತೀಯೋ, ಅದು ವಾಸ್ತವದಲ್ಲಿ ಚಿನ್ನವಾಗಿರದೆ, ಮಣ್ಣಂತೆ ನಿಷ್ಪ್ರಯೋಜಕವಾಗುತ್ತದೆ. ಆದರೆ ಕೆಲವು ಬಾರಿ ಬಯಸದೆ ಸಂದ ಭಾಗ್ಯವನ್ನು, ಆಪರಮಾತ್ಮನ ಕರುಣೆಯಿಂದ ವರ ರೂಪದಲ್ಲಿ ಸಂದದ್ದು ನಿನಗೆ ನಿಷ್ಪ್ರಯೋಜಕವಾಗಿ ಕಾಣುತ್ತದೆ. ಹೀಗೆ ವಸ್ತುಗಳ ನಿಜರೂಪ ಗುರುತಿಸುವುದರಲ್ಲಿ ನಮಗೆ ವ್ಯತ್ಯಾಸವಾದರೆ ಈ ಜಗತ್ತಿನ ವ್ಯಾಪಾರ ನಡೆಯುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ಮಾನ್ಯ ಗುಂಡಪ್ಪನವರು.
ನಮ್ಮ ಜೀವನಗಳಲ್ಲಿ ಇದು ಬಹಳ ಸತ್ಯವಾದ ಮಾತು. ನಮಗೆ ವಸ್ತುಗಳು ಬೇಕು. ವ್ಯಕ್ತಿಗಳು ಬೇಕು, ವಿಷಯಗಳು ಬೇಕು. ಆದರೆ ಆ ವಸ್ತು, ವ್ಯಕ್ತಿ, ವಿಷಯಗಳು ನಮಗೆ ಒಳಿತೋ ಇಲ್ಲವೋ ನಮಗೆ ಗೊತ್ತಿಲ್ಲ. ಎಷ್ಟೋಬಾರಿ ನಾವು ಇಷ್ಟಪಟ್ಟು ಆಯ್ದುಕೊಂಡದ್ದು ನಮಗೆ ತೊಂದರೆಗಳಿಗೆ, ಮಾನಸಿಕ ಹಿಂಸೆಗೆ, ಕಾರಣವಾಗಬಹುದು. ಹೀಗೆ ಆಗಲಿಕ್ಕೆ ಕಾರಣವೇನು ಎಂದರೆ, ಅದಕ್ಕೆ “ವಿಧಿ”ಯನ್ನು ಕಾರಣರಾಗಿಸುತ್ತಾರೆ ಶ್ರೀ ಗುಂಡಪ್ಪನವರು. ಆದರೆ ಅದು ಹೀಗೂ ಇರಬಹುದು. ನಾವು ಒಂದು ವಸ್ತು,ವ್ಯಕ್ತಿ, ವಿಷಯವನ್ನು ಬೇಕು ಎಂದುಕೊಳ್ಳುವುದೇ ತಪ್ಪಿರಬಹುದು. ಅಥವಾ ನಮ್ಮ ಆಯ್ಕೆಯೇ ತಪ್ಪಾಗಿರಬಹುದು. ಹೊರನೋಟಕ್ಕೆ ಆ ವಸ್ತು, ವ್ಯಕ್ತಿ, ವಿಷಯಗಳು ನಮಗೆ ಹಿತವಾಗಿಯೋ, ಸವಿಯಾಗಿಯೋ ಕಂಡರೂ ನಮ್ಮ ದೈಹಿಕ ಮತ್ತು ಮಾನಸಿಕ ಪ್ರಕೃತಿಗೆವಿರುದ್ಧವಾಗಿರಬಹುದು ಹಾಗಾಗಿ ದೋಷ ನಮ್ಮ ಆಯ್ಕೆಯಲ್ಲಿದೆಯೇ ಹೊರತು ಆ ವಸ್ತು, ವ್ಯಕ್ತಿ, ವಿಷಯದಲ್ಲಿ ಇಲ್ಲ ಅಲ್ಲವೇ?. ಹಾಗಾದಾಗ “ಹೊನ್ನೆಂದು” ನಾವು ವಸ್ತು, ವ್ಯಕ್ತಿ, ವಿಷಯಗಳನ್ನು ಆಯ್ಕೆಮಾಡಿದಾಗ, ಅದು ನಮಗೆ ಹಿತವಾಗಿಲ್ಲದೆ ನಿಶ್ಪ್ರಯೋಜಕವಾಗುವುದು ಎಂಬುದು ಇಲ್ಲಿನ ಅಂತರ್ಯ.
ಇನ್ನು ನಾವು ಬಯಸದೆ ಬಂದ, ಸಂದ ಮತ್ತು ಪಡೆದುಕೊಂಡ ವಸ್ತು, ವ್ಯಕ್ತಿ, ವಿಷಯಗಳು ನಮಗರಿವಿಲ್ಲದಂತೆಯೇ ನಮಗೆ ಹಿತವನ್ನು ಮಾಡುತ್ತಿರಬಹುದು. ಇದರ ಅನುಭವ ನಮಗೆ ಬಹಳ ಬಾರಿ ಆಗಿರುತ್ತದೆ. ಆದರೆ ಅದು ನಾವು ಇಷ್ಟಪಟ್ಟುಪಡೆದುಕೊಂಡಿಲ್ಲವಾದ್ದರಿಂದ ನಮಗೆ ಅದರ ಮಹತ್ವ ಅರ್ಥವಾಗುವುದಿಲ್ಲ. ” ಅವನದೇ ಕಣಪ್ಪ ಅದೃಷ್ಟ. ಹಿಂಗೆ ಅಂದ್ಕೊಂಡೆ ಇರ್ಲಿಲ್ಲ ಕಣಯ್ಯಾ. ಎಂಥ ಚಾನ್ಸು ನೋಡು” ಇಂತಹ ಮಾತುಗಳನ್ನು ನಾವು ಎಷ್ಟೋಬಾರಿ ಕೇಳಿರುತ್ತೇವೆ. ಅದೇ ” ಅವನವರ” ಎಂದು ಶ್ರೀ ಗುಂಡಪ್ಪನವರು ಹೇಳುತ್ತಾರೆ.
ಹಾಗಾದರೆ ನಾವು ಇಷ್ಟಪಟ್ಟದ್ದೆಲ್ಲ ಹಾಗೆ ಆಗುವುದೇ? ಎಂದರೆ ಇಲ್ಲ. ಎಲ್ಲ ಹಾಗಾಗುವುದಿಲ್ಲ. ಆದರೆ ಹೆಚ್ಚಿನ ಮಟ್ಟಿಗೆ ಹಾಗಾಗುತ್ತದೆ. ಮೇಲ್ನೋಟಕ್ಕೆ ಎಲ್ಲ ಸರಿಯಾಗಿದೆ ಎಂದು ನಾವು ಕಂಡರೂ , ಪ್ರತಿವ್ಯಕ್ತಿಯೂ, ತಾನು ಬಯಸಿದ್ದು, ತಾನು ಪಡೆದಿದ್ದು, ಅದರಿಂದ ತಾನು ಅನುಭವಿಸುವ ಕಷ್ಟ, ಸಂಕಟ, ಜಿಗುಪ್ಸೆ, ಇವುಗಳನ್ನು ತೋರ್ಪಡಿಸದೆ, ಅಂತರ್ಯದಲ್ಲಿಅನುಭವಿಸುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಏಕೆಂದರೆ ನಾವು ನೀವು ಎಲ್ಲರೂ ಇದನ್ನು ಅನುಭವಿಸಿಯೇ ಇರುತ್ತೇವೆ. ಹಾಗಾದರೆ ನಾವು ಬಯಸುವುದೇ ಬೇಡವೇ ಎಂದು ವಿಚಾರಮಾಡಿದರೆ ನಮಗೆ ಸಿಗುವ ಉದಾಹರಣೆ ಹೇಗಿದೆ.
ಒಂದು ತಾಯಿ, ತನ್ನ ಮಗುವಿಗೆ ಏನು ಬೇಕು, ಯಾವುದು ಒಳ್ಳೆಯದು, ಯಾವುದರಿಂದ ಆ ಮಗುವಿಗೆ ಹಿತ ಆರೋಗ್ಯಕರ ಎಂದೆಲ್ಲ ಅರಿತು ಸರಿಯಾದ ಸಮಯಕ್ಕೆ ಕೊಡುತ್ತಾಳೆ. ಆದರೆ ಆ ಮಗುವಿಗೆ ಅದು ಅರ್ಥವಾಗದೆ ಕಂಡ ಕಂಡದ್ದಕ್ಕೆಲ್ಲ ರಚ್ಚೆ ಮಾಡಿ, ಹಠಮಾಡುತ್ತದೆ. ನಮ್ಮ ಪರಿಸ್ಥಿತಿಯೂ ಹಾಗೆ ಇದೆ. ನಮಗೆಲ್ಲರಿಗೆ ತಾಯಿಸ್ಥಾನದಲ್ಲಿರುವ ಆ ಪರಮಾತ್ಮ ನಮಗೆ ವಿಧಿ ಪ್ರಕಾರ, ಏನು, ಎಷ್ಟು, ಯಾವಾಗ, ಯಾರ ಮೂಲಕ, ನಮಗೆ ಹಿತವಾದದ್ದನ್ನು ಕೊಡಿಸಬೇಕೋ ಕೊಡಿಸುತ್ತಾನೆ. ಅದ್ದನ್ನರಿಯದೆ ನಾವು ನಾವು ಬಯಸಿದ ವಸ್ತು ಸಿಗದೇ ಹೋದರೆ, ” ಅಯ್ಯೋ ದೇವರೇ ನನಗೇ ಯಾಕೆ ಹೀಗೆ” ಎಂದು ಆ ದೇವರನ್ನು ಬಯ್ಯುತ್ತ, ನಮ್ಮ ” ಹಣೆಬರಹಾನೆ ಇಷ್ಟು’ ಎಂದು ನಮ್ಮನ್ನು ನಾವೇ ಹಳಿದುಕೊಳ್ಳುತ್ತಾ ಬದುಕುತ್ತೀವಿ.
ನೋಡಿ ಒಂದು ವಿಷಯ. ಒಂದು ನೆಮ್ಮದಿಯ ವಿಷಯ. ಆ ಪರಮಾತ್ಮನ ಉಕ್ತಿ” ನೀನು ನನಗೆ ಶರಣಾಗು. ನಾನು ನಿನ್ನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತೇನೆ.” ಎಂದು ಹೇಳಿರುವಾಗ ಮತ್ತೇನು. ಮತ್ತೆ” ನೀ ಏನೂ ಕೇಳಬೇಡ, ಹಾಗೆ ನೀ ಏನು ಕೇಳಿದರೂ ಕೊಡುವೆ. ಆದರೆ ನೀ ಹಾಗೆ ಕೇಳಿ ಪಡೆದುಕೊಂಡ ವಸ್ತುವಿನಿಂದ ಬರುವ ಎಲ್ಲ ನೋವು, ಸಂಕಟ, ಕಷ್ಟ, ಕಾರ್ಪಣ್ಯಗಳನ್ನೆಲ್ಲ ನೀನೇ ಅನುಭವಿಸಬೇಕು. ಆದರೆ ನೀ ನನ್ನನು ಏನೂ ಕೇಳದಿದ್ದರೆ, ನಿನಗೇನೂ ಸೂಕ್ತವೋ ,ಹಿತವೋ, ಅದನ್ನು ನಾನೇ ನಿನಗೆ ಸರಿಯಾದ ಸಮಯಕ್ಕೆ ಕೊಡುವೆ. ಆಯ್ಕೆನಿನ್ನದು” ಎಂದಾಗ. ಮತ್ತೇಕೆ ನಾವು ಕೇಳಬೇಕು?. ಹಾಗೆ ಕೇಳಬೇಕೆಂದರೆ ಆ ಪರಮಾತ್ಮನನ್ನೇ ” ನನ್ನ ಮನಸ್ಸಿಗೆ ನಿರಂತರವಾಗಿ ಬಾ” ಎಂದು ಕೇಳಬೇಕು, ಅಲ್ಲವೆ ವಾಚಕರೆ? .
ಇನ್ನು ಹೀಗೆ ನಮಗೆ ಬೇಡದ ಹಿತವಲ್ಲದ ವಸ್ತು, ವ್ಯಕ್ತಿ, ವಿಷಯಗಳನ್ನು ಬಯಸಿ ಅದರಿಂದ ಪಡಬಾರದ ಕಷ್ಟಗಳನ್ನು ಪಡುವಾಗ, ಆ ವಿಧಿಯಿಂದ ಸಿಕ್ಕ ವಸ್ತುಗಳ ಬೆಲೆ ನಾವು ಅರಿಯದಾದಾಗ ಇಲ್ಲಿ ಜಗದ್ವ್ಯಾಪಾರದಲ್ಲಿ ವ್ಯತ್ಯಯ ಉಂಟಾಗದೇ ಇನ್ನೇನು ಎನ್ನುವ ಅರ್ಥದಲ್ಲಿ ” ಬಿನ್ನವಿಂತಿರೆ ವಸ್ತು ಮೌಲ್ಯಗಳ ಗಣನೆಯೀ ಪಣ್ಯಕ್ಕೆ ಗತಿಯನ್ತೋ ” ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.
ಹಾಗಾಗಿ ವಾಚಕರೆ, ತಾಯಿ ಸ್ವರೂಪದ ಆ ಪರಮಾತ್ಮನಲ್ಲಿ ಶರಣಾಗಿ ನಮ್ಮ ಆಸೆ ಆಕಾಂಕ್ಷೆಗಳನ್ನು ತೀರಿಸಿಕೊಳ್ಳಲು, ನಮ್ಮ ಆಯ್ಕೆಯ ಮೇಲೆ ಅಧಾರಪಡದೆ, ಎಲ್ಲವನ್ನೂ ಆ ಪರಮಾತ್ಮನಿಗೆ ಅರ್ಪಿಸಿ, ನಮಗೆ ಸಿಕ್ಕ ಕೆಲಸವನ್ನು ನಿಷ್ಠೆಯಿಂದ ಮಾಡಿಕೊಂಡು ಹೋದರೆ, ನಮಗೇನು ಹಿತವೋ ಅದನ್ನು ಆ ಪರಮಾತ್ಮ ನೀಡುತ್ತಾನೆ, ಅದೇ ನನಗೆ ಹಿತ ಎಂದು ಅರಿತರೆ, ನಮಗೆ ಹಿತ. ಒಟ್ಟಾರೆ ಹೇಳುವುದಾದರೆ, ” ಅಹಂಕಾರ ” ಬಿಟ್ಟರೆ ಹಿತ ಎನ್ನುವ ಅರ್ಥದಲ್ಲಿದೆ ಈ ಕಗ್ಗದ ಅಂತರ್ಯ.
ಇವುಗಳನ್ನೇ ಚಿಂತಿಸುತ್ತಾ ವಿಚಾರಮಾಡುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗೋಣ.