Monthly Archives: October 2015

ಅಬ್ಬೇಪಾರಿ ಮತ್ತು ಕಳ್ಳಾ ಪುಲಿ (ಗೆಳತಿಗೊಂದು ಪತ್ರ)

images

ನಿಮ್ಮ ಮಗ ಅಥವಾ ಮಗಳು ಮುಂದೆ ಏನಾಗಬೇಕೆಂದು ನೀವು ಬಯಸುತ್ತೀರಿ?

Self -aware parenting ಬಗ್ಗೆ ChicagoNow ನಲ್ಲಿನ ಲೇಖನವೊಂದನ್ನು ಇತ್ತೀಚಿಗೆ ಓದುತ್ತಿರುವಾಗ ಅನೇಕ ವಿಚಾರಗಳು ಕಣ್ಮುಂದೆ ಬಂದವು. ಈ ಲೇಖನದ ಲೇಖಕಿ ಒಬ್ಬ motivational writer . ಇವರಿಗೆ ಪತ್ರ ಬರೆಯುವ ಅನೇಕರು ತಮ್ಮ ಮಕ್ಕಳನ್ನು ಈ ವರ್ಷಕ್ಕಿಂತ ಮುಂದಿನ ವರ್ಷ ತಮ್ಮ ಶಾಲಾ ವಿಷಯಗಳಲ್ಲಿ ಹೇಗೆ ಮುಂದೆ ತರುವುದು, ಅವರ ಅಂಕಗಳನ್ನು ಹೆಚ್ಚಿಸುವ ಬಗೆ ಹೇಗೆ ಎನ್ನುವ ವಿಚಾರಗಳನ್ನೇ ಚರ್ಚಿಸುತ್ತಾರೆ. ಬೇಸಿಗೆ ರಜೆ ಅವಧಿಯಲ್ಲಿ ತಮ್ಮ ಮಕ್ಕಳನ್ನು ಯಾವರೀತಿಯಲ್ಲಿ engage ಮಾಡುವುದು ಎನ್ನುವ ಬಗ್ಗೆಯೂ ಲೇಖಕಿಯ ಅಭಿಪ್ರಾಯ ಕೇಳುತ್ತಾರೆ. ಮುಂದೆ ಓದುತ್ತಾ ಹೋದಂತೆಲ್ಲಾ ಲೇಖಕಿ ಮಕ್ಕಳಿಗೆ ಸಿಗಬೇಕಾದ ಸ್ವಾತಂತ್ರ್ಯ ಮತ್ತು ಅವರನ್ನು ಕಾಡುವ ಅನೇಕ anxiety ಸಮಸ್ಯೆಗಳು ಮತ್ತು ಅದರಿಂದ ಹೊರತರುವ ಬಗ್ಗೆ ಚರ್ಚಿಸುತ್ತಾರೆ. ಈ ನಿಟ್ಟಿನಲ್ಲಿ ಸಾಗುವಾಗ ಒಂದು race to nowhere ಎನ್ನುವ documentary ನೆನಪಿಗೆ ಬರುತ್ತದೆ. ಇದರ ಕರ್ತೃ ವಿಕಿ ಅಬ್ಲೆಸ್  ತನ್ನ ಮಗಳು ಅನುಭವಿಸಿದ ವಿಚಿತ್ರ anxiety ಸಮಸ್ಯೆಗಳು ಮತ್ತು ಶಾಲೆಯ stress ನ ಬಗ್ಗೆ ಅಧ್ಯಯನ ಮಾಡಿ ಬರೆದು ನಿರ್ಮಿಸಿರುವ ಡಾಕ್ಯುಮೆಂಟರಿ ಇದು. ನೀವಿದನ್ನು ನೋಡಿಲ್ಲದಿದ್ದಲ್ಲಿ ಈ URL ನಲ್ಲಿ ವೀಕ್ಷಿಸಬಹುದು.

https://www.youtube.com/watch?v=GAxoSd7BJiY .

ವೀಕ್ಷಿಸಲು ಸೋಮಾರಿತನವಿದ್ದವರಿಗೆ ಇದೋ ಈ ಡಾಕ್ಯುಮೆಂಟರಿಯ Plot summary

RACE TO NOWHERE is a close-up look at the pressures on today’s students, offering an intimate view of lives packed with activities, leaving little room for down-time or family time. Parents today are expected to raise high-achieving children, who are good at everything: academics, sports, the arts, community-service. The film tackles the tragic side of our often achievement-obsessed culture, with interviews that explore the hidden world of over-burdened schedules, student suicide, academic cheating, young people who have checked out. RACE TO NOWHERE asks the question: Are the young people of today prepared to step fully and productively into their future? We hear from students who feel they are being pushed to the brink, educators who worry students aren’t learning anything substantive, and college professors and business leaders, concerned their incoming employees lack the skills needed to succeed in the business world: passion, creativity, and internal motivation.

ಇದನ್ನು ಓದಿದ ಅಥವಾ ನೋಡಿದ ನಂತರ ನಿಮ್ಮಲ್ಲಿ ಕೆಲವರು ಇದನ್ನು ಅತಿಯಾಗಿ ಮೆಚ್ಚಲೂ ಬಹುದು. ಕೆಲವರು ಕೈಲಾಗದವರ ಮೈಪರಚಿಕೊಳ್ಳುವಿಕೆಯಂತಿದೆ ಎಂದು ಸಮರ್ಥನೆಯನ್ನೂ ಕೊಡಬಹುದು. ಇಲ್ಲಿ ಮಧ್ಯೆ ಮಧ್ಯೆ ಇಣುಕುವ ಹದಿಹರೆಯದವರ ಆತ್ಮಹತ್ಯೆ, ಸಮೂಹಮಾಧ್ಯಮಗಳು ಬೀರುತ್ತಿರುವ ಪ್ರಭಾವ, ಪೋಷಕರ ಸಂಪಾದನೆಯಲ್ಲಿರುವ ಏರುಪೇರುಗಳು ಎಲ್ಲವಕ್ಕೂ ಶಿಕ್ಷಣದ ಪದ್ಧತಿಯೇ ಗುರಿಯೇ ಎಂದು ನೀವು ವಾದಿಸಲೂ ಬಹುದು. ಇವೆಲ್ಲಾ ಏನೇ ಇರಲಿ, ನಾವೆಲ್ಲರೂ ನಮ್ಮ ಮಕ್ಕಳು ಮುಂದೆ ಪಠ್ಯ ಹಾಗೂ ಪಠ್ಯೇತರ ವಿಷಯಗಳಲ್ಲೂ ಹಾಗೂ ಸಾಮಾಜಿಕ ವ್ಯಕ್ತಿತ್ವದಲ್ಲೂ ಮೇರು ಸ್ಥಾನ ಗಳಿಸಲಿ ಎಂದು ಖಂಡಿತಾ ಆಶಿಸುತ್ತಿರುತ್ತೇವೆ. ಆದರೆ ಕೆಲವು ಮಕ್ಕಳಿಗೆ ಇದು ಸಾಧ್ಯವಾದರೆ ಮತ್ತೆ ಕೆಲವರಿಗೆ ಸಾಧ್ಯವಾಗುವುದಿಲ್ಲ. ಒಂದೇ ತಂದೆ-ತಾಯಿಯರ ಎರಡು ಮಕ್ಕಳಲ್ಲಿ ಒಂದೇ ಬಗೆಯ ಬುದ್ಧಿಶಕ್ತಿ ಕಾಣಸಿಗುವುದಿಲ್ಲ ಮತ್ತು ಕೆಲವೊಮ್ಮೆ ಇಬ್ಬರೂ ಬುದ್ಧಿವಂತರಾದ ಉದಾಹರಣೆಯೂ ಇರುತ್ತವೆ. ನಮ್ಮ ದೇಶದ ಅಂಕಿ-ಅಂಶಗಳನ್ನೇ ತೆಗೆದುಕೊಂಡರೂ ಅನೇಕ ಕಡಿಮೆ ಸೌಲಭ್ಯ ಹೊಂದಿದ ಗ್ರಾಮೀಣ ಮಕ್ಕಳು ಉನ್ನತ ಸ್ಥಾನಕ್ಕೇರಿರುವ ಉದಾಹರಣೆಗಳಿವೆ. ಎಲ್ಲಾ ಸೌಲಭ್ಯ ಹೊಂದಿರುವ ಮಕ್ಕಳು ಹಿಂದುಳಿವ ಸಾಧ್ಯತೆಗಳೂ ಇವೆ. ಈ ಎಲ್ಲ ವೈವಿಧ್ಯಗಳು ಏಕೆ ಮಕ್ಕಳಲ್ಲಿ ಕಾಣಸಿಗುತ್ತವೆ. ಇವುಗಳ ಕಾರಣಗಳೇನು? 

ಮೊದಲನೆಯಾದಾಗಿ ಸ್ವಾಭಾವಿಕವಾಗಿ ಅನುವಂಶೀಯವಾಗಿ ಬಂದಿರುವ ಬುದ್ಧಿಶಕ್ತಿ, ತಾಯಿಯ ಗರ್ಭಾವಸ್ಥೆಯಲ್ಲಿ ತಗುಲಿರಬಹುದಾದ ಏನಾದರು ಸೋಂಕುಗಳ ಅಥವಾ ದುಶ್ಚಟಗಳ ಪ್ರಭಾವ, ಶಿಶುವಿನ ಜನನಾನಂತರ ಬಂದಿರಬಹುದಾದ ಆರೋಗ್ಯದ ಏರುಪೇರು, ಅಪಘಾತಗಳು (ದೈಹಿಕ-ಮಾನಸಿಕ), ಮತ್ತು ಕೊನೆಯದಾಗಿ stress handling threshold (ಇದಕ್ಕೆ ಪೂರಕವಾಗುವ ಮನೆಯ ವಾತಾವರಣ, ಸಾಮಾಜಿಕ ವಾತಾವರಣ ಹಾಗೂ ತಂದೆತಾಯಿಗಳ ಪ್ರೋತ್ಸಾಹ) ಇವೆಲ್ಲವುಗಳಿಂದ ಒಂದು ಮಗುವಿನ ಜೀವನದ ಗಟ್ಟಿತನ ನಿರ್ಧಾರವಾಗುತ್ತದೆ. ಎಷ್ಟೋಸಾರಿ ತಾಯಿ ಅಥವಾ ತಂದೆ ಅಥವಾ ಇಬ್ಬರೂ ಮಗುವಿಗೆ ಬೇಕಾದ ಭದ್ರತೆ ಕೊಡಲು ಸೋತಿರುತ್ತಾರೆ; ಅಥವಾ ಅನವಶ್ಯಕ ಓವರ್-ಪ್ರೊಟೆಕ್ಷನ್ ಕೊಟ್ಟು ಮಗುವನ್ನು ಸೋಲಿಸುತ್ತಾರೆ. ಇಲ್ಲಿ ಎಲ್ಲಾ ಕಡೆಯಲ್ಲೂ ಶೈಕ್ಷಣಿಕ ಪದ್ಧತಿಯನ್ನೇ ದೂರುವುದು ಸಮಂಜಸವಲ್ಲ. ಜೊತೆಗೆ ತಮ್ಮ ಬದುಕನ್ನು ಮಗುವಿನ ಮೂಲಕ ಬದುಕುವ ಅನೇಕ ತಾಯ್ತಂದೆಗಳ ಧೋರಣೆಯೂ ಸಮಂಜಸವಲ್ಲ. ಬದುಕಿಗೆ ಪುರುಷಾಕಾರ ಪ್ರಧಾನವಾದ ಮಹತ್ವಾಕಾ0ಕ್ಷೆಗಳನ್ನು ಬಿಡುವುದೂ ಅಲ್ಲ. ಪ್ರಯತ್ನ, ಛಲ, ಸಾಧನೆ, ಶ್ರದ್ಧೆಗಳ ಮೊದಲ ಪಾಠ ಮನೆಯಲ್ಲಿ ಆಗಲೇಬೇಕು. ಎಲ್ಲಾ ತಾಯ್ತಂದೆಗಳೂ ಎಲ್ಲದರಲ್ಲೂ ಪರಿಪಕ್ವರಲ್ಲ ಹಾಗೆಯೇ ಅವರವರ ಮಕ್ಕಳೂ ಕೂಡ! ಪ್ರತಿಯೊಬ್ಬರೂ ಮೊದಲನೆಯದಾಗಿ ಮಗುವಿನ ಆರೋಗ್ಯ, ಓದು ಬರಹದ ಜೊತೆಗೆ ಸಮಾಜದಲ್ಲಿ ಅವನು/ಅವಳು ಹೇಗೆ ಹೊಂದಿಕೊಂಡು ಬಾಳುವುದು ಎನ್ನುವುದರ ಅರಿವು ಮಗುವಿನಲ್ಲಿ ಮೂಡಿಸಬೇಕಾಗುತ್ತದೆ. ವೈರುಧ್ಯಗಳ ಜೊತೆ, ವೈಪರೀತ್ಯಗಳ ಜೊತೆ ಹೋರಾಡುವ ಮಾನಸಿಕ ಶಕ್ತಿಯನ್ನೂ ಬೆಳೆಸಿಕೊಳ್ಳುವ ಬಗ್ಗೆ ಜ್ಞಾನ ಕೊಡಬೇಕಾಗುತ್ತದೆ. ಇದೆಲ್ಲಾ ಮಾಡಿದ ನಂತರವೂ ಮಗು ಹಿಂದುಳಿದಿದ್ದೇ ಆದರೆ ವಿಧಿಯನ್ನು ದೂರುವುದೇ?………..

ಖಂಡಿತಾ ಅಲ್ಲ. ಬದುಕು ಎನ್ನುವುದು ಒಂದು ದಿನದ ಆಟವಲ್ಲ, ಇದು ನಿರಂತರ ಬದಲಾವಣೆಗಳ, ಪ್ರಯತ್ನಗಳ, ಪರೀಕ್ಷೆಗಳ ಪ್ರಯೋಗಶಾಲೆ. ಇಲ್ಲಿ ತಂದೆತಾಯ್ಗಳೂ ನಿರಂತರ ಹೋರಾಟ ನಡೆಸಬೇಕಾಗುತ್ತದೆ ಮತ್ತು ಮಕ್ಕಳೂ ಹೋರಾಟಗಾರರಾಗಬೇಕಾಗುತ್ತದೆ. ಕಷ್ಟಕ್ಕೆ ತಕ್ಕ ಫಲ ಸಿಗಲಿಲ್ಲವೆಂದು ಕೂರುವಂತಿಲ್ಲ, ಮರಳಿ ಯತ್ನವ ಮಾಡಿ ಗುರಿಸಾಧಿಸುವ ಛಲ ಬೆಳೆಸಿಕೊಳ್ಳುವ ಆತ್ಮ ಬಲ ಮಕ್ಕಳಲ್ಲಿ ಬೆಳೆಸಬೇಕಾಗುತ್ತದೆ. ಲಕ್ಷಾಂತರ ರೂಪಾಯಿ ಸಂಪಾದಿಸುವ ಎಲ್ಲರೂ ತಮ್ಮ ಕೆಲಸವನ್ನು ಪ್ರೀತಿಸುತ್ತಿರಲಾರರು, ದೊಡ್ಡ ಓದು ಓದಿಕೊಂಡ ಎಲ್ಲರೂ ಸಂತೋಷವಾಗಿರುತ್ತಾರೆಂದುಕೊಂಡರೆ ಅದೂ ಸರಿಯಲ್ಲ. ಇಷ್ಟ ಪಟ್ಟು, ಕಷ್ಟಪಟ್ಟು ಕಲಿತು, ಮಾಡುವ ಕೆಲಸದಲ್ಲಿ ನೆಮ್ಮದಿ ಕಾಣುತ್ತಾ, ಸಾಮಾಜಿಕ ಜವಾಬ್ದಾರಿಗಳನ್ನೂ ಜೊತೆಯಲ್ಲಿ ಕೌಟುಂಬಿಕ ಜವಾಬ್ದಾರಿಗಳನ್ನೂ ಸರಿತೂಗಿಸುವ contentment ಇರುವ ಬದುಕು ಸರ್ವಕಾಲೀನ ಸುಂದರ. ಈ ಹಂತ ತಲುಪುವವರೆಗೂ ಹೋರಾಟ ತಪ್ಪಿದ್ದಲ್ಲ, ಅಲ್ಲವೇ?

ನಿರಂತರ ತಲೆ ಕೆಡಿಸಿಕೊಂಡು ಪೇಚಾಡುವ ನನ್ನ ಆತ್ಮೀಯ ಗೆಳತಿಯೇ ಈ ನಿರಂತರ ಹೋರಾಟದಲ್ಲಿ ತೊಡಗಿರುವ ನಿನಗೂ ಒಂದು ಜೀವನವಿದೆ. ಬದುಕಿನ lighter side ಗೂ ಒಮ್ಮೊಮ್ಮೆ ನೀನು ನಿನ್ನ ಮನಸ್ಸನ್ನು ತಂದು ರಿಫ್ರೆಶ್ ಮಾಡಿಕೊಳ್ಳದಿದ್ದರೆ ನಿರಂತರ ಮನೋರೋಗಿಯಾದೇಯೆ!

 ಒಂದು ವಿಷಯ ಹೇಳೋದಿತ್ತು ನಿನಗೆ! ಮನೆಯಿಂದ ಹೊರಗೆ ನಾನು ಇಣುಕಿ ಮೊನ್ನೆಗೆ ಸರಿಯಾಗಿ 15 ದಿನಗಳಾಗಿತ್ತು. ಕಳೆದ ವಾರ ಬಂದಿದ್ದ ನನ್ನ ಶಾಮಣ್ಣನೆದುರು ‘ಯಾಕೋ ತಲೆ ಒಂಥರಾ ಆಗುತ್ತೆ ಕಣೋ, ಈ viral fever ನ ನಂತರ’ ಎಂದು ಪೇಚಾಡಿಕೊಂಡೆ. ಅದಕ್ಕವನು ಅಯ್ಯೋ ಅಷ್ಟೇ ತಾನೇ ಎನ್ನುವ ಹಾಗೆ “ಮನೆಯಿಂದ ಹೊರಗೇ ಹೋಗುತ್ತಿಲ್ಲ ನೀನು ಅನ್ಸುತ್ತೆ ಕಣೆ. ಹೊರಗೆ ನಾಲ್ಕು ಹೆಜ್ಜೆ ಹಾಕಿಕೊಂಡು ಬಾ, ಎಲ್ಲಾ ಸರಿಹೋಗುತ್ತೆ” ಎಂದು ಸುಲಭೋಪಾಯ ಸೂಚಿಸಿದ. ಅವನು ಹೇಳಿದ್ದು ನಿಜ, ಚಿಕ್ಕ ವಯಸ್ಸಿಂದಲೂ ತಿರುಗಿದ ಜೀವ, ಈಗ ಮನೇಲಿ ಕೂತರೆ ಇಲ್ಲದ ಸಮಸ್ಯೆಗಳು. ಎಷ್ಟಾದರೂ ಜೊತೆಯಲ್ಲಿ ಅಲೆದ ಜೀವಗಳಲ್ಲವೇ, ನಮ್ಮ ನಮ್ಮ ದೇವರ ಸತ್ಯ ನಮಗೆ ಚೆನ್ನಾಗಿ ಗೊತ್ತು, ಹೀಗಾಗಿ ತಲೆ imbalance ನ ಒಳಮರ್ಮ ಅವನಿಗೆ ಗೊತ್ತಾಯಿತು. ಮೊನ್ನೆ ದೊಡ್ಡ ಮನಸ್ಸು ಮಾಡಿ ನಸುಕಿಗೇ ಮನೆಬಿಟ್ಟೆ. ದೊಡ್ಡ ವಾಕ್ ನಿಜಕ್ಕೂ ಚೇತೋಹಾರಿಯಾಗಿತ್ತು. ಮರೆತ ಎಷ್ಟೋ ಸದ್ವಿಚಾರಗಳು ನೆನೆಪಿಗೆ ಬಂದವು; ಬೇಡದ ಎಷ್ಟೋ ಕ್ಲೀಷೆಗಳು ಮರೆವಿಗೆ ಸಂದವು. ಈರುಳ್ಳಿ ಮಾರುವ ಬಸವರಾಜು “ಅಕ್ಕಾ ನನ್ನ ಮಗಳಿಗೆ ಮಗು ಆಯ್ತು, ತಾಯಿ ಮಗಳು ಆರೋಗ್ಯವಾಗಿದ್ದಾರೆ” ಎಂದು ಹೆಮ್ಮೆಯಿಂದ ಹೇಳಿಕೊಂಡ. ಅವನಿಗೆ ಶುಭಾಶಯ ಹೇಳಿದೆ. ಮನೆಗೆ ಮರಳಿ ನನ್ನ ಕೆಲಸಗಳಲ್ಲಿ ತೊಡಗಿಕೊಂಡೆ.  ನಮ್ಮನೆ ರೋಡ್ ನಲ್ಲಿ ಪ್ಬತಿದಿನವೂ ಬೆಳಗ್ಗೆ 8:30 ರ ಸುಮಾರಿಗೆ ‘ಅ.. ಬ್ಬೇ.. ಪಾ… ರೀ …’ ಎನ್ನುವ ಕೂಗು ಘಂಟಾಘೋಷವಾಗಿ ಕೇಳುತ್ತಿರುತ್ತದೆ. ಅದು ನನಗೆ ತೀರಾ ಪರಿಚಿತವೇ ಮತ್ತು ಆ ಧ್ವನಿಯ ಒಡೆಯನೂ ಕೂಡ. ಅಬ್ಬೇಪಾರಿ ಎಂದರೆ irresponsible fellow ಅಂತಿರಬಹುದು ಅರ್ಥ, ಈತ ಹಾಗಲ್ಲ. ಈ ದಿನಗಳಲ್ಲಿ ನಾನು ಆತನನ್ನು ಮಾತೇ ಆಡಿಸಿರಲಿಲ್ಲ, ಪಾಪ! ಇವತ್ತು ನಾನಾಗಿ ನಾನೇ ಮಾತನಾಡಿಸಲು ಹೋದೆ. ಅವನು ತನ್ನ ರಥ ನಿಲ್ಲಿಸಿ ಮಾತಿಗೆ ಬಂದ. ಮಾಮೂಲಿನಂತೆ ‘ಏನಾದ್ರೂ ಐತಕಾ’ ಎಂದ. ಅವನ accent ಟೇ ಹಾಗೆ! ‘ಏನೂ ಇಲ್ಲಪ್ಪ, ಚೆನ್ನಾಗಿದ್ದೀಯ, ಏನು ಸಮಾಚಾರ’ ನಾನು ಕುಶಲೋಪರಿ ವಿಚಾರಿಸಿದೆ. ‘ಊಂ ನಕಾ ..ಈಗ ನೀ ಉಸಾರಾ? ನಮ್ ಅಳಗು ಕು ಮ್ಯಾರೇಜ್ ಸೆಟ್ ಅಯ್ತಕಾ ‘ ಎಂದು ಹಲ್ಲು ಕಿರಿದ. ಎಷ್ಟೊಂದು ದಿನದ ತಪಸ್ಸು ಆತನದು, ಮಗಳ ಮದುವೆ ಆಗಬೇಕೆನ್ನುವುದು!, ಸಧ್ಯ ಸೆಟ್ಲ್ ಆಯಿತಲ್ಲಾ ..ನನಗೂ ಸಂತೋಷವಾಯ್ತು. ‘ಯಾರಪ್ಪ ಹುಡುಗ ?’ ನಾನು ಕುತೂಹಲದಿಂದ ಕೇಳಿದೆ. ‘ಏ ಅದೇಕಾ …ಕಳ್ಳಾಪುಲಿ ಮಗ ಮುರುಗನ್.’ ಅವನ ಧ್ವನಿಯಲ್ಲಿ ನೆಮ್ಮದಿಯ ನಗೆಯಿತ್ತು. ‘ತುಂಬಾ ಸಂತೋಷ ಕಣಪ್ಪ…ಕರ್ಕೊಂಡು ಬಾ ಮಗಳನ್ನ ಯಾವಾಗ್ಲಾದ್ರು ‘ ಎಂದೆ. ‘ಸರೇಕಾ ..’ ಎನ್ನುತ್ತಾ ಅವನು ತನ್ನ ರಥ ಚಾಲೂ ಮಾಡಿ ಮತ್ತಷ್ಟು ಹುಮ್ಮಸ್ಸಿನಿಂದ ಕೂಗುತ್ತಾ ಹೊರಟ, ಆ ಬ್ಬೇ ಪಾ ರೀ …. ನಾವು medical transcriptionist ಗಳಿಗೆ ಒಂದು ವಿಶೇಷ ಚಟ ಅಂಟಿಕೊಂಡಿರುತ್ತದೆ, ಅದೇನೆಂದರೆ ಒಂದು ಪದವನ್ನು ಮೂರು ನಾಲ್ಕು ಥರಾ ಕೇಳಿಸಿಕೊಳ್ಳುವುದು! ಇದು ಎಷ್ಟೋ ಸಾರಿ ಎರ್ರಾಬಿರ್ರಿ ಖುಷಿಯನ್ನು ಸಹಾ ತಂದುಕೊಡಲು ನೆರವಾಗುತ್ತದೆ.  ಈ ಆ.. ಬ್ಬೇ.. ಪಾ.. ರೀ.. ಯಾರೆಂದುಕೊಂಡೇ?  ತಮಿಳು accent ನಲ್ಲಿ ‘ಆ.. ಪೇ..ಪ..ರ್..ರ್ರಿ …’ ಎಂದು ಕೂಗುವ ಹಳೇ ಪೇಪರ್ ಮತ್ತು ಗುಜರಿ ವಸ್ತುಗಳನ್ನು ಕೊಳ್ಳುವವನು.  ಮತ್ತೆ ಆ ಕಳ್ಳಾ-ಪುಲಿ ? ದಿನವೂ ವ್ಯಾಪಾರವಾಗಲೀ- ಬಿಡಲಿ ಕಡಲೆಪುರಿ ಮಾರುತ್ತಾ ಬರುವ ಕರ್ಮಜೀವಿ. ಅಂದಹಾಗೇ ಇವರಿಬ್ಬರೂ ನನ್ನ ತಾಯಿ ಒಂದು ವರ್ಷದ ಹಿಂದೆ ಬಚ್ಚಲಲ್ಲಿ ಕಾಲು ಜಾರಿ ಬಿದ್ದಾಗ ಕರೆದೊಡನೆಯೇ ಬಂದು ಎತ್ತಿ ಕೂರಿಸಿ ನೆರವಾದ ಬಂಧುಗಳು! ಸಂತೋಷದ definition ಒಬ್ಬರಿಂದೊಬ್ಬರಿಗೆ ಬೇರೆ ಬೇರೆಯಾಗಿರುತ್ತವೆ, ಹಾಗೆಯೇ ಬದುಕೂ ಕೂಡ ಅಲ್ವಾ….. ಹೇಗೋ ಬದುಕುವುದನ್ನು ಕಲಿಸಿಯೇ ಬಿಡುತ್ತದೆ!

Leave a comment

Filed under ಲೇಖನಗಳು

ಅಲೆಮಾರಿ ಅಕ್ಕ-ತಂಗಿಯರ ಟ್ರಯಲ್ಗಳು ಮತ್ತು ಟ್ರಾಮಾಗಳು!

imagesಆಗ ನಾನು ಹೈಸ್ಕೂಲಿನಲ್ಲಿದ್ದೆ. ಲಕ್ಷ್ಮಿಯ ಸಿ.ಇ.ಟಿ. ಜಸ್ಟ್ ಮುಗಿದು ಸೀಟಿನ ನಿರೀಕ್ಷೆಯಲ್ಲಿದ್ದಳು. ಲಕ್ಷ್ಮಿ ನನ್ನ ದಾವಣಗೆರೆಯ ಅಕ್ಕ. ಆಗ ಇಬ್ಬರೂ ಲಂಗ-ಬ್ಲೌಸ್ ತೊಡುತ್ತಿದ್ದ ಕಾಲ, ಜೊತೆಗೆ ಇಬ್ಬರಿಗೂ ಶಾಪಿಂಗ್ ಹುಚ್ಚು ಅದು ಹೇಗೋ ಮೈಗಂಟಿಕೊಂಡಿತ್ತು. ನಮ್ಮಿಬ್ಬರಿಗೂ ಪ್ರತ್ಯೇಕವಾಗಿ ಮನೆಯಲ್ಲಿ ಪಾಕೆಟ್ ಮನಿ ಕೊಡುತ್ತಿದ್ದರೆಂದು ನೀವು ಭಾವಿಸಿದರೆ ಮೂರ್ಖರಾದೀರಿ! ಒಂದು ಹತ್ತು ರೂಪಾಯಿ ನಮ್ಮ ಪರ್ಸಿನಲ್ಲಿ ಜಮಾ ಆಗಿದ್ದರೆ ಅದೇ ಇಬ್ಬರಿಗೂ ದೊಡ್ಡ ಮೊತ್ತ. ಆದರೂ ಆಸೆಗಳು ಇಬ್ಬರಿಗೂ ನೂರಾರು, ಅದು ಚೆನ್ನ, ಇದು ಚೆನ್ನ ಎಂದು ಇಬ್ಬರೂ ಮನಸ್ಸಲ್ಲಿ ಮಂಡಿಗೆ ತಿಂದೂ ತಿಂದೂ ಖುಷಿಪಡುತ್ತಿದ್ದೆವು. ಅದೇನೋ ಇಬ್ಬರೂ ವಿಪರೀತ ಮಾತನಾಡುತ್ತಿದ್ದೆವು. ರಾತ್ರಿ, ಬೆಳಗು, ಮಧ್ಯಾಹ್ನ ಸಮಯ ಸಿಕ್ಕಾಗೆಲ್ಲ ವಿಪರೀತ ವಿಷಯಗಳು ಮಾತಾಡಿದ್ದೂ ಆಡಿದ್ದೆ. ಅದೇನೇನು ಎನ್ನುವುದು ದೇವರೇ ಬಲ್ಲ! ತಿರುಗಾಟದ ಹುಚ್ಚು ನಮ್ಮ ಖಾಂದಾನ್-ಖಾಂದಾನಿಗೆ ಇತ್ತು ಒಂದು ವಯಸ್ಸಿನಲ್ಲಿ ಅನ್ನಿಸುತ್ತೆ. ತರಕಾರಿ ತರುವ ನೆಪದಲ್ಲಿ ನಾನೂ ಲಕ್ಷ್ಮಿಯೂ ಬೆಳಗ್ಗೆ ೭ ಕ್ಕೆ ಹೊರಬಿದ್ದರೆ ಪಕ್ಕದ ರೋಡ್ ನಿಂದ ೮ ಕ್ಕೇ ಬರುತ್ತಿದ್ದುದು. ಅದೇನು ಅಷ್ಟೊಂದು ಲೇಟು ಅಂತೀರಾ? ಹೌದು, ನಮ್ಮ ಮರೆತಿದ್ದ ಮಾತುಗಳು ಇದ್ದಕ್ಕಿದ್ದ ಹಾಗೇ ಮನೆಯಿಂದ ಕಾಲ್ತೆಗೆದ ಕೂಡಲೇ ನೆನಪಾಗುತ್ತಿದ್ದವು! ಯಾರ್ಯಾರೋ ನಮ್ಮ ಗೆಳತಿಯರ ಕಸಿನ್ಸು, ಅವರ ಕಷ್ಟ ಸುಖ ಇವೆಲ್ಲಾ…ಈಗಿನ ಕಾಲದ ಹುಡುಗಿಯರೂ ಅಥವಾ ಎಲ್ಲಾ ಹುಡುಗಿಯರೂ ಹೀಗೆನಾ? ಅಥವಾ ನಾವು ಎಕ್ಸೆಪ್ಶನ್ನಾ? ಈ ಥರ ತಲೆ ಹುಳ ನೆಲಕ್ಕೆ ಕೊಡವಿಕೊಳ್ಳುವ ಹುಡುಗಿಯರನ್ನು ಕಂಡು ಅಮ್ಮನಂಥಾ ಅಮ್ಮನೂ ದಂಗಾಗಿದ್ದಳು. ಅವರೇನು ಕಡಿಮೆಯಿರಲಿಲ್ಲ. ಅಕ್ಕ ತಂಗಿಯರೆಲ್ಲ ಒಟ್ಟು ಸೇರಿದಾಗ ರಾತ್ರಿ ಮಾತಿಗೆ ಕೂತರೆ(ಮಲಗಿದರೆ?!) ಬೆಳಕು ಹರಿಸುವಂಥಾ ಗಟ್ಟಿಗರು. ಅವರ ಮಕ್ಕಳಲ್ಲವೇ ನಾವು, ನಾವೂ ಅವರಂತೆಯೇ ತಯಾರಾಗುತ್ತಿದ್ದೆವು. ಉಮ (ಶ್ರೀರಂಗಪಟ್ಟಣದ ಅಕ್ಕ) , ಲಕ್ಷ್ಮಿ ಮತ್ತು ನಾನು ಮೂರೂ ಹುಡುಗಿಯರೂ ಮಾತು ವಿಪರೀತ ಆಡುತ್ತವೆ, ಒಂದರ ಜೊತೆ ಒಂದು ಸೇರಿದರೇ ಎಂದು ಅಮ್ಮ ರಿಸರ್ಚು ಮಾಡಿ ಕಂಡುಕೊಂಡಿದ್ದಳು. ನಾನೂ ಲಕ್ಷ್ಮಿಯಂತೂ ಇತಿಹಾಸವನ್ನೇ ಸೃಷ್ಠಿ ಮಾಡುವಷ್ಟು ಮಾತನಾಡಿ ಅಮ್ಮನ ಕೆಂಗಣ್ಣಿಗೆ ಕಾರಣರಾಗಿದ್ದೆವು. ಹೀಗಿರುವಾಗಿನ ಒಂದು ದಿನವೇ ನಮ್ಮಿಬ್ಬರಿಗೂ ಶಾಪಿಂಗ್ ಹುಚ್ಚು ತಲೆಗಡರಿಕೊಂಡಿದ್ದು! ಇಬ್ಬರ ಹತ್ತಿರವೂ ಹತ್ತು ಹತ್ತು ರೂಪಾಯಿ ಇದ್ದು ಬಸ್ಸ್ ಚಾರ್ಜಿಗೆ ೨-೨ ರೂಪಾಯಿ ಹೋದರೂ ಇನ್ನೂ ೮-೮ ರೂಪಾಯಿಗಳು ಇರುತ್ತವೆ ಎಂದು ನಮ್ಮ ಲೆಕ್ಖಾಚಾರ, ಇದು 1986 ರ ಸುಮಾರಿನ ವರ್ಷದಲ್ಲಿ. ಆಗ ನಮ್ಮ ಮನೆ ರಾಜಾಜಿನಗರ ಎಂಟ್ರೆನ್ಸಿನಲ್ಲಿತ್ತು. ನಮ್ಮ ಶಾಪಿಂಗ್ ಸ್ಪಾಟು ಮೆಜೆಸ್ಟಿಕ್ ಎಂದು ಒಂದು ದಿನ ರಾತ್ರಿಯೇ ರಾತ್ರಿ ಸುತ್ತಿನ ಮಾತುಕತೆಯಲ್ಲಿ ತೀರ್ಮಾನಿಸಿಕೊಂಡು ಬೆಳಗ್ಗೆ ಇಬ್ಬರೂ ಹೆಚ್ಚುಕಡಿಮೆ ಒಂದೇಬಣ್ಣದ ಲಂಗ-ಬ್ಲೌಸ್ ಧರಿಸಿಕೊಂಡು ತಯಾರಾದೆವು. ಮಾಮೂಲಿನಂತೆ ಹತ್ತು ಗಂಟೆಗೆಲ್ಲಾ ಬ್ರಂಚ್ ಮುಗಿಸಿ ಬಸ್ಸು ಹತ್ತಿದೆವು. ಮೆಜೆಸ್ಟಿಕ್ ತಲುಪುವವರೆಗೂ ಮಾತೂ ಮಾತೂ! ತಲುಪಿದಮೇಲಂತೂ ಸ್ವರ್ಗಕ್ಕೆ ರೆಕ್ಕೆ ಹಚ್ಚಿದ ಹಕ್ಕಿಗಳು ನಾವಿಬ್ಬರೂ! ತಿರುಗಾಡದ ಗಲ್ಲಿಗಳೇ ಇಲ್ಲ, ನೋಡದ ವಸ್ತುಗಳೂ ಇಲ್ಲ. ವಿಪರೀತ ಅಲೆದು ಸುಸ್ತಾದರೂ ಕ್ಯಾಂಟೀನಿನಂಥಾ ಕಡೆ ಏನಾದರೂ ಕುಡಿದು ತಿಂದು ಮಾಡಲು ಇಬ್ಬರಿಗೂ ಭಯ; ನೀರು ಕುಡಿಯಲು ಬಿಸ್ಲೇರಿಯೂ ಇಲ್ಲ, ಬಿಸಿಲೇರಿ ಸತ್ತು ಬೀಳುವವರೆಗೂ ಅಲೆದಿದ್ದೇ ಸೌಭಾಗ್ಯ! ಆದರೂ ನಮ್ಮಿಬ್ಬರ ವ್ಯಾಪಾರಕ್ಕೇನೂ ಕೊರತೆಯಿರಲಿಲ್ಲ. ಶಾಂತಲ ಸಿಲ್ಕ್ ಹೌಸಿಗೆ ಹೋಗಿ ನಮ್ಮಕ್ಕನ ಮದುವೆಗೆ ಸೀರೆ ವೆರೈಟೇಸ್ ನೋಡಬೇಕು ಅಂತ ಹತ್ತಾರು ಸಲ ಮಹಡಿ ಹತ್ತಿ-ಇಳಿದು ನೂರಾರು ಸೀರೆಗಳನ್ನು ನೋಡಿದ್ದೇ ನೋಡಿದ್ದು. ನಮ್ಮ ಓಡಾಟದಲ್ಲಿದ್ದ ಸಡಗರ, ಉತ್ಸಾಹ ಬಹುಶಃ ಶಾಂತಲ ಸಿಲ್ಕ್ ಹೌಸ್ನವರನ್ನೂ ದಂಗುಬಡಿಸಿದ್ದೀತು! ಕೊನೆಗೆ ಎಲ್ಲಾ ಸೆಲೆಕ್ಷನ್ ಮಾಡಿ ದೊಡ್ಡವರನ್ನು ಕರೆತರುತ್ತೇವೆ ಎಂದು ಹೇಳಿ ಇಬ್ಬರೂ ಅಲ್ಲಿಂದ ಪರಾರಿಯಾದಾಗ ಅರ್ಧ ಬೆಂಗಳೂರೇ ಗೆದ್ದ ಹಾಗೆ ಬೀಗಿದೆವು. ಅಲ್ಲೇ ಹತ್ತಿರದಲ್ಲಿದ್ದ ಪಾರ್ಕೊಂದರಲ್ಲಿ ಇಬ್ಬರೂ ದಣಿವಾರಿಸಿಕೊಳ್ಳಲು ಕುಳಿತು ಮಾತನಾಡುತ್ತಿರುವಾಗ ಯಾರೋ ದಾರಿಹೋಕ ವೃದ್ಧರೊಬ್ಬರು ‘ನಿಮ್ಮಂಥಾ ಹೆಣ್ಣುಮಕ್ಳು ಬರೋ ಜಾಗ ಅಲ್ಲ ಕಣ್ರಮ್ಮ ಇದು, ಮನೆಗೆ ಹೋಗಿ’ ಎಂದು ಹೊರಗೆ ಕಳುಹಿಸಿದ್ದರು. ಸರಿ, ಅಷ್ಟು ಹೊತ್ತಿಗೆ ನಮ್ಮ ಕಾಲುಗಳು ಮತ್ತೆ ನಡೆಯಲು ತಯಾರಾಗಿದ್ದವು! ನಾವು ಅವತ್ತು ಖರೀದಿ ಮಾಡದಿರುವ ವಸ್ತುಗಳೇ ಕಡಿಮೆ. ಪಾತ್ರೆಗಳು, ಟೊವೆಲ್ಲುಗಳು, ಬೆಡ್ಶೀಟುಗಳು ಇನ್ನೂ ಏನೇನೋ (ನಮ್ಮಕ್ಕನ ಮದುವೆಗೆ ಬೇಕಲ್ಲಾ ಅಹ್ಹಹ್ಹ !!!). ಕೊನೆಗೆ ರಸ್ತೆ ಬದಿಯಲ್ಲಿನ ಟೇಬಲ್ ಕ್ಲಾತ್ಗಳ ಕಡೆಗೆ ನಮ್ಮಿಬ್ಬರ ಗಮನ ನಿಂತಿತು. ೨೦ ರೂಪಾಯಿ ಹೇಳಿದ ಟೇಬಲ್ ಕ್ಲಾತ್ ಗೆ ೬ ರೂಪಾಯಿ ಬೆಲೆಕಟ್ಟಿ ಅವನು ಕೊಡೋದಿಲ್ಲ ಎಂದಾಗ ನಮ್ಮ ಜಾಣ್ಮೆಗೆ ನಾವೇ ಮೆಚ್ಚುತ್ತಾ ಮುಂದೆಸಾಗುತ್ತಿರುವಾಗ ಒಬ್ಬ ವ್ಯಾಪಾರಿಗೆ ಏನನ್ನಿಸಿತೋ ನಮ್ಮ ಬೆಲೆಗೇ ಕೊಡಲು ಮುಂದಾಗಿಬಿಟ್ಟ. ಆಗ ಶುರುವಾಗಿದ್ದು ನಿಜವಾದ ಟೆನ್ಷನ್ನು! ಇಲ್ಲಿಂದ ಮುಂದಕ್ಕೆ “ಟುಡೇ ಇಸ್ ನಾಟ್ ಅವರ್ ಡೇ ” ಅಂತ ನಮ್ಮಿಬ್ಬರ ಅಂತರ್ವಾಣಿ ಹೇಳತೊಡಗಿತು! ‘ಈಗ ಬರುತ್ತೇವೆ, ೫ ನಿಮಿಷ, ನೆಕ್ಸ್ಟ್ ರೋಡ್ ನಲ್ಲಿ ನಮ್ಮಕ್ಕ ಇದ್ದಾಳೆ’ ಅಂತ ಇಬ್ಬರೂ ಲಗುಬಗೆಯಿಂದ ಕಂಬಿ ಕಿತ್ತೆವು. ‘ನಿಜವಾಗಿಯೂ ನೆಕ್ಸ್ಟ್ ರೋಡ್ ನಲ್ಲಿ ನಮ್ಮಕ್ಕ ಇದ್ದಿದ್ದರೆ ನಮ್ಮಿಬ್ಬರಿಗೂ ಕಪಾಳಕ್ಕೆ ಹೊಡೆದು ಹಲ್ಲು ಉದುರಿಸಿ ನೆಲಕಚ್ಚಿಸಿಬಿಡುತ್ತಿದ್ದಳು ಅಲ್ಲವಾ’ ಎಂದು ಇಬ್ಬರೂ ಬಿದ್ದು ಬಿದ್ದು ನಗುತ್ತಾ, ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವಂಥಾ ಅವರ್ಚನೀಯ ಖುಷಿಯಿಂದ ಮನೆಕಡೆಗೆ ಬಸ್ಸು ಹತ್ತಿದೆವು.  ಆಗ ಬೇಸಿಗೆ ರಜೆ ಕಾಲವಾದ್ದರಿಂದ ಬಸ್ಸೆಲ್ಲ ಖಾಲಿ ಖಾಲಿ. ಹಾಗಿದ್ದರೂ ನಾವಿಬ್ಬರೂ ನಿಂತುಕೊಂಡು ಕಿಸಿ ಕಿಸಿಗುಟ್ಟುತ್ತಿರುವುದನ್ನು ಕಂಡ ಕಂಡಕ್ಟರ್ ‘ಕೂತ್ಕೊಳ್ರಮ್ಮ ಸುಮ್ನೆ, ಕೂತ್ಕೊಂಡು ಮಾತಾಡಕ್ಕಾಗಲ್ವ ನಿಮಗೆ’ ಎಂದು ಗದರಿದಾಗಲೇ ನಮಗೆ ಎಚ್ಚರ! ಪಾಪ! ಹಂಚಿಕಡ್ಡಿ ಪರ್ಸನಾಲಿಟಿ ಇದ್ದ ನಾವಿಬ್ಬರೂ ಎಲ್ಲಿ ಮಾತಲ್ಲಿ ಎಚ್ಚರ ತಪ್ಪಿ ಗಾಳಿಯಲ್ಲಿ ಹೊರಗೆ ಹಾರಿ ಬಿಡುತ್ತೇವೆಯೊ ಎಂದು ಅವನ ಕಾಳಜಿ! ಅಂತೂ ನಾವಿಬ್ಬರೂ ೧೦೦ ವ್ಯಾಟ್ ಬಲ್ಬಿನ ಮುಖಗಳೊಂದಿಗೆ ಕ್ಷೇಮವಾಗಿ ಹೋಗಿ ಹಾಗೇ ಮನೆ ಸೇರಿದೆವು. ಮಟ ಮಟ ಮಧ್ಯಾಹ್ನ ೩ ಗಂಟೆಯವರೆಗೂ ಅಮ್ಮ ಔಟ್ ಹೌಸ್ ನಿಂದ ಹೊರಗಿನ ಗೇಟಿನವರೆಗೂ ೧೦ ಸಾರಿ ಶತಪಥ ತಿರುಗಿದ್ದಳು. ಮುಂದಿನ ಮನೆಯ ಓನರ್ ಅಜ್ಜ (ರಿಟೈರ್ಡ್ ಮಿಲಿಟರಿ ಮ್ಯಾನ್) ನಿಗೂ ನಾವಿಬ್ಬರೂ ಇನ್ನೂ ಬಂದಿಲ್ಲದ ಸುದ್ದಿ ತಲುಪಿತ್ತು. ಹಾಗಾಗಿ ಅಜ್ಜನೂ ಅಲ್ಲೇ ಗಸ್ತು ಹೊಡೆಯುತ್ತಿದ್ದರು. ಇದ್ಯಾವುದರ ಪರಿವೆಯೂ ಇಲ್ಲದ ಹುಚ್ಚುಖೋಡಿ ಅಕ್ಕ ತಂಗಿಯರಿಬ್ಬರೂ ಕಿಲ ಕಿಲ ನಗುತ್ತಾ ಗೇಟು ತೆಗೆಯುವುದನ್ನು ಕಂಡ ಅಜ್ಜ ‘ರಾಮ ರಾಮ ಅದೇನು ಮಾತಮ್ಮ ನಿಮ್ಮಿಬ್ಬರದ್ದು; ಮರದ ಬಾಯಾಗಿದ್ದರೆ ಒಡೆದು ಹೋಗಿರುತ್ತಿತ್ತು ಇಷ್ಟು ಹೊತ್ತಿಗೆ’ ಎಂದು ತಲೆತಲೆ ಚೆಚ್ಚಿಕೊಂಡರು. ನಾವಿಬ್ಬರೂ ೧-೨ ನಿಮಿಷ ಮಾತು ನಿಲ್ಲಿಸಿದ ಶಾಸ್ತ್ರ ಮಾಡಿ ಹೊರಗಿನ ನಲ್ಲಿಯಲ್ಲಿ ಕೈಕಾಲು ತೊಳೆದು ಮನೆ ಹೊಕ್ಕೆವು. ಅಮ್ಮ, ‘ಸಧ್ಯ ಬಂದ್ರಲ್ಲ , ಯಾಕ್ರಮ್ಮ ಬಿಸಿಲಲ್ಲಿ ಬೀದಿ ಬೀದಿ ಅಲೆದು ಬಾಳಕದ ಮೆಣಸಿನ ಕಾಯಿ ಥರ ಆಗ್ತೀರಾ, ಆ ದೇವರೇ ನಿಮ್ಮಿಬ್ಬರಿಗೂ ಬುದ್ಧಿ ಕೊಡಬೇಕು ಅಷ್ಟೇ’ ಎನ್ನುತ್ತಾ ನಿಡುಸೊಯ್ದು ಒಂದಿಷ್ಟು ಮೊಸರನ್ನ ಕಲೆಸಿ ತಿನ್ನಲು ಕೊಟ್ಟಳು. ನಾವಿಬ್ಬರೂ ಅದಕ್ಕೂ ನಗುತ್ತಾ ಬೇಗಬೇಗ ತಿಂದು ಬೆಳಗಿನಿಂದ ಅಲ್ಲಿಯವರೆಗಿನ ನಮ್ಮ ದಿಗ್ವಿಜಯದ ವೀರಗಾಥೆಯನ್ನೇ ವಿಷಯವಾಗಿಸಿಕೊಂಡು ಮತ್ತೆ ಮಾತು ಶುರುವಿಟ್ಟುಕೊಂಡೆವು!

Leave a comment

Filed under ಲೇಖನಗಳು