ಎಂಟು ಸಣ್ಣ ಕತೆಗಳು!

images-51. ಅವನ ಬಳಿ ಕೆಲವು ಚಿಲ್ಲರೆ ನಾಣ್ಯಗಳು ಮಾತ್ರ ಇದ್ದವು, ಮಳೆಯಲ್ಲಿ ತೋಯುತ್ತಾ ಆಟವಾಡುತ್ತಾ ತನ್ನನ್ನು ತಾನೇ ಮರೆತ. ಕಿಸೆಯ ತುಂಬಾ ನೋಟುಗಳನ್ನು ತುಂಬಿಸಿಕೊಂಡಿದ್ದವರು ಆಶ್ರಯದಾಣಕ್ಕೆ ಹುಡುಕುತ್ತಾ ತಳಮಳಗೊಂಡು ಅಲೆದು ಮಳೆಯಲ್ಲಿ ನೆಂದರು!

2. ಮನುಷ್ಯ ಮತ್ತು ದೇವರು ಅಚಾನಕ್ಕಾಗಿ ಭೇಟಿಯಾದರು. ಇಬ್ಬರೂ ಆಶ್ಚರ್ಯಕರವಾಗಿ ಒಮ್ಮೆಲೇ ಉದ್ಘರಿಸಿದರು, ಓ..ನನ್ನ ಸೃಷ್ಟಿಕರ್ತಾ !!

3. ಇಬ್ಬರೂ ಒಟ್ಟಿಗೇ ಕೇಳಿದರು, ನೀನು ಹಿಂದುವೋ ಮುಸ್ಲಿಮನೋ? ಉತ್ತರ ಒಟ್ಟಿಗೇ ಬಂತು, ನನಗೆ ಹಸಿವಾಗಿದೆ!

4. ಈ ಮೂರ್ಖನಿಗೆ ಅಸಾಧ್ಯವೆನ್ನುವ ಪದದ ಅರ್ಥ ಗೊತ್ತಿರಲಿಲ್ಲ, ಅದಕ್ಕೇ ಅವನದನ್ನು ಸಾಧಿಸಿಯೇ ಬಿಟ್ಟ!

5. ರಾಂಗ್ ನಂಬರ್, ಉಲಿಯಿತು ಅದೇ ಚಿರಪರಿಚಿತ ಧ್ವನಿ!

6. ನಾವು ಸತ್ತ ನಂತರ ದೇವರು ಕೇಳಿದರೂ ಆಶ್ಚರ್ಯವಿಲ್ಲ, ‘ಹೆಂಗಿತ್ತು ಮಚ್ಚಾ ಸ್ವರ್ಗ ಅಂತ’!

7. ನನಗವರು ಹೇಳಿದ್ದಿದ್ದು ಇಷ್ಟೇ, ಅವಳನ್ನು ಪ್ರೀತಿಯಲ್ಲಿ ಸಿಲುಕಿಸಿಕೊಳ್ಳಲು ಅವಳು ಮನದುಂಬಿ ನಗುವಂತೆ ಮಾಡಬೇಕು; ಆದರೆ ಅವಳು ಹಾಗೆ ನಕ್ಕಾಗಲೆಲ್ಲಾ ನಾನು ಮತ್ತೆ ಮತ್ತೆ ಪ್ರೀತಿಯಲ್ಲಿ ಬೀಳುತ್ತಿದ್ದೆ!

8.  ಇನ್ನು ಮುಂದೆ ನಾವು ಸ್ನೇಹವನ್ನು ಬೆಸೆಯಬೇಕಿಲ್ಲ, ಮನುಷ್ಯರನ್ನು ಸ್ನೇಹಿತರೆಂದು ಕರೆದು ಫೇಸ್ಬುಕ್ ಗುಂಪಿಗೆ ಸೇರಿಸಿಕೊಂಡರಾಯಿತು!

Leave a comment

Filed under ಅನುವಾದಿತ ಕತೆಗಳು

I’m back after a short break!

images-4ಇಷ್ಟೊಂದು ನಿರ್ಲಿಪ್ತತೆ ನನ್ನನ್ನು ಯಾವತ್ತೂ ಆವರಿಸಿರಲಿಲ್ಲ. ಸೋತ ಶರಣಾಗತಿಯದ್ದೋ, ವೀರ ವಿಜಯದ್ದೋ ಹಂಗೂ ಅದಕ್ಕಿರಲಿಲ್ಲ. ಇದೇ ವಾಸ್ತವ, ಇದೇ ನಿನ್ನ ಆಪ್ಯಾಯಮಾನ ಸುಸ್ಥಿತಿ ಎಂದು ಪಿಸುಗುಟ್ಟುವ ಹಾಗೆ ಅವ್ಯಾಹತವಾಗಿ ಅದೆಷ್ಟೋ ನಿಟ್ಟುಸಿರುಗಳು ಹೊರಹೊಮ್ಮುತ್ತಾ ಹೆಪ್ಪುಗಟ್ಟಿದ ಮೋಡ ಹನಿಗಳನ್ನುದುರಿಸಿ ಆಕಾಶವನ್ನು ತೊಳೆದು ಶುಭ್ರ ಮಾಡಿದಂತೆ ಮನದಂಗಳವನ್ನು ಸಾರಿಸುತ್ತಿದ್ದವು.  ಇವತ್ತು ಎಲ್ಲಾ ಹೊಸದು. ಮುಗಿಲೆತ್ತರ ನಿಂತ ಮರಗಳು, ಗೂಡು ಸೇರುತ್ತಿರುವ ಹಕ್ಕಿಗಳು ಎಲ್ಲವೂ ಮತ್ತಷ್ಟು ಮಗದಷ್ಟು confident ಆಗಿ ಕಂಡವು. ದೂರದ watchman shed ನಲ್ಲಿ ರೊಟ್ಟಿ ಸುಡುವ ಪರಿಮಳ ಮಳೆಯ ಕಂಪಿನೊಡನೆ ಸ್ಫರ್ಧೆಗೆ ಬಿದ್ದಂತೆ ಹಿತವಾಗಿತ್ತು. ಎಲ್ಲಾ ಕಡೆ ನಿರಮ್ಮಳ. ಜೀವನದ ಅಡೆತಡೆಗಳನ್ನು ಒಂದೊಂದಾಗಿ ದಾಟುತ್ತಾ ಓಡುತ್ತಾ ಸಾಗುವ life ಎಂಬ ರಿಲೇ ರೇಸಿನಲ್ಲಿ ಯಾವುದಕ್ಕೂ ಆತ್ಮರತಿಗೆ ಅವಕಾಶವಿರಲಿಲ್ಲ. Yes, I am that I am. ಊದಿಯೇ ಊದುವ ಕೊಳಲ ಯಾವನೋ ಮರುಳ, ಕೇಳುತ್ತಾ ಕಳೆಯೋಣ ಹೀಗೆಯೇ ಇರುಳ ಎನ್ನುವ ಪರವಶತೆಯ ಸ್ಥಿತಿ ಅಥವಾ ಅದಕ್ಕೂ ಮೀರಿದ್ದು.

ಸಾವಿನಂಚು ಮುಟ್ಟಿ ವಾಪಸ್ಸಾದವವರ ಮನಸ್ಥಿತಿ ಹೇಗಿರುತ್ತದೆ ಎಂಬುದು ಅನುಭವಿಸಿರುವ ನಮ್ಮಲ್ಲನೇಕರಿಗೆ ಗೊತ್ತು. ಆದರೆ ದಿನಾ ಸಾಯುವ ನಮ್ಮಲ್ಲನೇಕರಿಗೆ ಬದುಕನ್ನು ಮೌಲ್ಯಮಾಪಿಸುವ ಕೆಲವೊಂದು parameters,  shift+delete ಆಗಿ ಹೋಗಿರುತ್ತದೆ. ಇವತ್ತು ಓದಿದ English WhatsApp message ಒಂದರ ಸಾರಾಂಶ ಹೀಗಿದೆ. ಒಬ್ಬ ವ್ಯಕ್ತಿ hi tech ಆಸ್ಪತ್ರೆಯಲ್ಲಿ ಹುಟ್ಟಿ, private school ನಲ್ಲಿ ಓದಿ, ದೊಡ್ಡ ಕಾರು ಪಡೆದು, iPhone 6+ ನಲ್ಲಿ ಈ ಮೆಸೇಜ್ ಓದುತ್ತಿರಬಹುದು. ಮತ್ತೊಬ್ಬ ಮನೆಯಲ್ಲಿ ಹುಟ್ಟಿ, ಸರ್ಕಾರೀ ಶಾಲೆಯಲ್ಲಿ ಓದಿ, ರಸ್ತೆ ಸಾರಿಗೆಯಲ್ಲಿ ಓಡಾಡಿ, ಸಾಧಾರಣ smart phone ನಲ್ಲಿ ಈ ಮೆಸೇಜ್ ಓದುತ್ತಿರಬಹುದು. ಇಲ್ಲಿ ತಳುಕು ಹಾಕಿಕೊಳ್ಳುವ ಒಂದು ಅಂಶವೆಂದರೆ lifestyle ಅನ್ನೋದು competition ಅಲ್ಲದೇ ಅಲ್ಲ, ದಾರಿ ಬೇರೆ ಬೇರೆಯಾದರೂ ಗಮ್ಯ ಒಂದೇ ಎನ್ನುವುದು. ನಮ್ಮ ಮಗ್ಗುಲಿನವನಲ್ಲಿ ದುಬಾರಿ ವಸ್ತುಗಳಿವೆ ಎಂದ ಮಾತ್ರಕ್ಕೆ ನಾವು failures ಅಲ್ಲ. ಸಂತೋಷವೆಂಬುದು ನಾವು ಹೊಂದಿರುವ ದುಬಾರಿ ವಸ್ತುಗಳು ನಮಗೆ ಕೊಡುತ್ತಿರುವ ಹಿರಿಮೆಯಲ್ಲಿಲ್ಲ. ನಮ್ಮಲ್ಲಿರುವ ಸಾಧಾರಣಾತಿಸಾಧಾರಣ ವಸ್ತುಗಳ ಸಮರ್ಪಕ ಬಳಕೆಯಲ್ಲಿದೆ. Happiness is not having what we like, it is liking what we have and learning to make most of it by giving it. Happiness is a state of mind!!!

ಬಿಡಿ, ಇವೆಲ್ಲಾ ನಮಗೆ ಗೊತ್ತಿಲ್ಲದ್ದೇ..?? ಇಂತಹ ಮಾತು-ಕತೇಲಿ ನಾವು SME ಗಳು. ಎಲ್ಲಿ ಕಮಾನ್ practical ಆಗಿ ಅಳವಡಿಸಿಕೋ ನೋಡೋಣ ಎನ್ನುವ ಸವಾಲನ್ನೇ ಎದುರಿಸಲು ಅನವರತ ಹೊರಟು ಸೋತವರು. ಉತ್ತರ ನಮಗೆ ನಿಚ್ಚಳವಾಗಿ ಗೊತ್ತಿದ್ದರೂ ಬರೆಯಲು ಭಯ. ಎಲ್ಲಿ distinction ನಲ್ಲಿ ಪಾಸಾಗಿ ನೆಲಕಚ್ಚಿಬಿಡುತ್ತೇವೋ ಎನ್ನುವ ವಿಚಿತ್ರ ದಿಗಿಲು! ಸಂತೋಷವಾಗಿರಲು ನಮಗೆ ಏನೆಲ್ಲಾ ಬೇಕು ಎನ್ನುವುದರ ಬ್ರಹ್ಮಾಂಡದುದ್ದದ list ನಮ್ಮ ಬಳಿಯಿದೆ. ಒಳ್ಳೆಯ ಗಂಡ/ಹೆಂಡತಿ, ಕಾರು, ಬ್ಯಾಂಕ್ ಬ್ಯಾಲೆನ್ಸ್, gym, healthy food, lifestyle, ಗೆಳೆಯ/ಗೆಳತಿ, ಕೊನೇ…ಗೆ ಆರೋಗ್ಯ, ಸ್ವಾತಂತ್ರ್ಯ…ಹೀಗೇ ಪಟ್ಟಿ endless ಆಗುತ್ತದೆ. ಅಯ್ಯೋ ಹೋಗಮ್ಮ, ಇದೆಲ್ಲಾ ಹೊಟ್ಟೆ ತುಂಬಿದವರ wants, ನಮ್ಮದು ಬೇರೆನೇ ಇದೆ ಅಂತೀರಾ? ಅದಕ್ಕೂ ಬರ್ತೀನಿ ಇರಿ. ಚೈನಾ ದ ಕವಿಯೊಬ್ಬನ ಬಗ್ಗೆ  ಒಂದು ಲೇಖನದಲ್ಲಿ ಓದುತ್ತಿದ್ದೆ. ಅವನ ಹೆಸರು L. ಎಲ್ಲೆಲ್ಲಿ ಹುಡುಕಿದರೂ ಸಿಗೋದೇ ಅಷ್ಟು L! ಅವನ ಕವನಗಳು ಮಾತ್ರ ವಿಪರೀತ ಹರಿತ. ಎಷ್ಟರಮಟ್ಟಿಗೆ ಬರೆಯುತ್ತಾನೆಂದರೆ ಮೊದಮೊದಲು ಕನ್ನಡಿಯಲ್ಲಿ ಕಾಣುತ್ತಿದ್ದ ನನ್ನ ಮುಖ ಈಗ ಕಾಣುತ್ತಿಲ್ಲ, ನನ್ನ boss ನ ಮುಖ ಕಾಣುತ್ತದೆ ಎನ್ನುತ್ತಾನೆ. ಕೊನೆಗೆ ಅದೂ ಇಲ್ಲ ಬರೀ ಡಾಲರುಗಳು ಕಾಣುತ್ತವೆ ಎನ್ನುತ್ತಾನೆ. ನಮಗೂ ಹಾಗೇ ಆಗಿದೆ. ನಮ್ಮ limits ನಮಗೆ ಗೊತ್ತಾದರೂ ಒಪ್ಪಿಕೊಳ್ಳುವ ತಾಕತ್ತು ನಮ್ಮ ಆಂತರ್ಯ ಕಳೆದುಕೊಂಡಿದೆ. ಕನ್ನಡಿಯಲ್ಲಿ ನಮ್ಮ ಮುಖ ನಮಗೆ ಹೇಗೆ ಕಂಡೀತು? ಎಡವನ್ನು ಬಲ ಮಾಡಿ, ಬಲವನ್ನು ಎಡ ಮಾಡಿ ಕನ್ನಡಿಯಂತೂ ತೋರಿಸುವ ಕೆಲಸ ಮಾಡುತ್ತಲೇ ಇದೆ. ಆದರೆ ನಮ್ಮ ಮುಖ ನಮಗೆ ಕಾಣುತ್ತಲೇ ಇಲ್ಲ. ಇಷ್ಟೊಂದು ಹಣೆ ನೆರಿಗೆ, ಈಗಾಗಲೇ ಇಷ್ಟು ದಪ್ಪವೇ, ಕೂದಲು ಬಿಳಿ, ಬೊಕ್ಕ ತಲೆ, ಇಲ್ಲ ಇಲ್ಲ ಇದು ನಾನಲ್ಲ, ನಮ್ಮ (ನಮಗೆ ಬೇಕಾದ) ಮುಖ ನಮಗೆ ಕಾಣಿಸುತ್ತಲೇ ಇಲ್ಲ. ಆದರೆ ವಿಚಿತ್ರ ನೋಡಿ, ನಮ್ಮ ಗಂಡ/ಹೆಂಡತಿ, ಮಕ್ಕಳು, ಮತ್ತು ಸಮಾಜದ ಕಣ್ಣಿಗೆ ನಮ್ಮ ಮುಖ ಕಾಣಿಸುತ್ತಿದೆ. ಪರಿಚಯಸ್ತರೆಲ್ಲಾ ಇದೇನು ಹೀಗಾಗಿ ಹೋದೆ, ಹುಷಾರಿಲ್ಲವೇ? ಎಂದು ಲೊಚಗುಡುತ್ತಾರೆ. ಅಂದರೆ …….ನಾವು ಸತ್ತಿಲ್ಲ, ಬದುಕಿದ್ದೇವೆ! ಬೇರೆಯವರ ದೃಷ್ಟಿಯಿಂದ, ಬೇರೆಯವರಿಗಾಗಿ ಬದುಕಿದ್ದೇವೆ. ಹಾಗಾದರೆ ನಮಗೆ ನಾವು ಯಾವತ್ತೋ ಸತ್ತಾಗಿದೆ, ಹೌದಾ!? ಬದುಕೆಂದರೆ ಇದೇನಾ ಅಥವಾ ಇದೇ ಸಾವಾ? ಬದುಕಿದ್ದರೆ ಸಂತೋಷ ಬೇಕು OK  ಸತ್ತಮೇಲೆ ಅವೆಲ್ಲಾ ಏಕೆ? ಹಾಗಾದರೆ  in reality ನಮಗೆ ಏನು ಬೇಕು? ತುಂಬಾ ತುಂಬಾ ಪ್ರೀತಿನಾ, ಕಾಮನಾ, ಹಣವಾ, ಹೊಗಳಿಕೆ ಯಾ..ಏನು? ಏನು???

ಕುವೆಂಪು ಹೇಳಿದರು,

ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ

ಹರಿವ ತೊರೆಯಡಿಯಲ್ಲಿ ಗುಡಿಸಲೊಂದಿರಲಿ

ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ

ದನಿಯು ದನಕಾಯುವನ ಕೊಳಲೊಡನೆ ಬರಲಿ.

ಬಾಂದಳದಿ ಹಾರಿದರು ಭುವಿಯಲ್ಲಿ ಜಾರುತಿಹ

ರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ.

ಬೈಗಾಗೆ ನಮ್ಮೊಡನೆ ಗೆಳಪಿಯಲೆದದ್ದಾಡೆ

ಗೋಪಾಲನಾಗಿರುವ ತಿಮ್ಮನೆನಗಿರಲಿ.

ನಮಗೂ ಇದೇ ಮತ್ತು ಇಷ್ಟೇ ಬೇಕೇ? ನಾವಿವತ್ತು ಅನುನಯದ ಕೊಳಲನ್ನು ಮೂಲೆಗೆಸೆದು ಅನುರಣದ ಶಂಖವನ್ನು ಕೈಗೆತ್ತಿಕೊಂಡಾಗಿದೆ. ಗೋಕುಲ ಯಾವಾಗಲೋ ಬಿಟ್ಟು ಮಥುರೆಯ permanent ಆಧಾರ್ ಕಾಡ್೯ ಹೋಲ್ಡರ್ ಗಳಾಗಿದ್ದೇವೆ. ಬಿಲಿಯನಿಯರ್ಗಳಾಗಿರುವ ಫಾರಿನ್ ನಲ್ಲಿ settle ಆಗಿರುವ ನಮ್ಮ ಸ್ನೇಹಿತರು, ಅಂಕಲ್, ಆಂಟಿ, ಕಸಿನ್ನು ಆಗಿರುವ ಅಕ್ರೂರರು ಪದೇ ಪದೇ ನಮ್ಮನ್ನು ಭಡಕಾಯಿಸುತ್ತಲೇ ಇದ್ದಾರೆ. ನಮ್ಮೊಳಗೆ ಕೃಷ್ಣ ಬಲರಾಮರಿಬ್ಬರೂ ನಮಗರಿವಿಲ್ಲದೆಯೇ ಒಂದಾಗಿಬಿಟ್ಟಿದ್ದಾರೆ!

ಮೊನ್ನೆ ಮಲ್ಯ ಆಸ್ಪತ್ರೆಯಿಂದ ಮನೆಗೆ ಬರುತ್ತಿದ್ದಾಗ ಬರುತ್ತಿದ್ದ ಭಾವನೆಗಳಿವು. ಹೊರಟಾಗ ನಾನೊಬ್ಬಳೇ. ಗಂಡ, ಮಗ ಯಾರೂ ಊರಿನಲ್ಲಿಲ್ಲ. ಬಾಬು ಆಗಿನ್ನೂ ಎದ್ದಿದ್ದ. ಕರೆಮಾಡಿದಾಗ ಹೇಳಿದ ‘ಈ ಸ್ಥಿತಿಯಲ್ಲಿ ತಡಮಾಡಬೇಡ, ಬೇಗ ಹೊರಡು, ಆಸ್ಪತ್ರೆಗೆ ನಾನು ನೇರವಾಗಿ ಬರುತ್ತೇನೆ.’ Ola ದಲ್ಲಿ ಅರ್ಧ ದಾರಿಯಲ್ಲೇ ಪುಷ್ಪ ಅತ್ತೆಯ ಕರೆ ಬಂತು. ‘ಒಬ್ಬಳೇ ಹೇಗೆ ಹೊರಟೆಯಮ್ಮಾ, ಹತ್ತಿರದ ಆಸ್ಪತ್ರೆಗೆ ಸೇರ್ಕೊಳ್ಳೇ, ‘ ಆತಂಕ ವ್ಯಕ್ತಪಡಿಸಿದರು. Emergency room ಗೆ ದೌಡಾಯಿಸುತ್ತಿರುವ ನನ್ನ ಹಿಂದೆ ola ಹುಡುಗ ಓಡಿ ಬರುತ್ತಿದ್ದಾನೆ. ಅಕ್ಕಾ..ನನ್ನ ಕೈ ಹಿಡ್ಕಳಕ್ಕಾ ಎನ್ನುತ್ತಾನೆ. ಅಲ್ಲಂತೂ ಡಾಕ್ಟರ್ ಗಳು ECG, IV, oxygen mask, injection ಏನೇನೋ ಹಾಕುತ್ತಿದ್ದಾರೆ. ಉಹೂಂ, ನನಗಿವೆಲ್ಲಾ ಬೇಡ! ನನ್ನ ಮುಖ ಇದಲ್ಲವಲ್ಲಾ? ನಾನು ಎದ್ದು ಕೂಡುತ್ತೇನೆ. ನನ್ನನ್ನು patient ರೀತಿ ಮಲಗಿಸಲು ಹರಸಾಹಸ ಮಾಡುತ್ತಿದ್ದಾರೆ. ಉಮಕ್ಕ ಪೋನ್ ಮಾಡುತ್ತಾಳೆ, ಏನೂ ಆಗಿಲ್ಲದವಳಂತೆ ಮುದ್ದುಗರೆಯುತ್ತೇನೆ. ‘ಒಬ್ಬಳೇ ola ಮಾಡ್ಕೊಂಡು ಹೊರಟುಹೋಗ್ತಾರೇನೋ ಕಂದಾ..ದಾರಿಯಲ್ಲಿ ಹೆಚ್ಚು ಕಡಿಮೆ ಆಗಿದ್ರೆ’..ಬಿಕ್ಕಿಬಿಕ್ಕಿ ಅಳ್ತಾಳೆ. ಪ್ರಥಮ ಚಿಕಿತ್ಸೆಯ ತರುವಾಯ ವಾರ್ಡಿಗೆ ಶಿಪ್ಟು ಮಾಡಲು ನನ್ನ ಕಡೆಯ attendant ಬೇಕು.  ನಾನು oxygen mask ತೆಗೆದು ಪ್ರಾಣಾಯಾಮ ಮಾಡುತ್ತೇನೆ, iv ಚುಚ್ಚಿದ ಕೈಗಳಲ್ಲೇ ಅಪಾನವಾಯು ಮುದ್ರ ಹಿಡಿಯುತ್ತೇನೆ. ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೇ..sister ಗಳು doctor ಗಳು ಅಚ್ಚರಿಯ (ಅಸಹಾಯಕ!?) ನಗೆಬೀರುತ್ತಾರೆ. ಅಷ್ಟರಲ್ಲಿ ಬಂದ ಬಾಬು ‘ಧಿಮ್ಮನೆ ರಂಗಾ’ ಎಂದು ಕೂತಿದ್ದ ನನ್ನನ್ನು ಅಪ್ಪಿಕೊಂಡೊಡನೆಯೇ ಎಲ್ಲಿತ್ತೋ ಅಳು ಮುಳು ಮುಳು ಹೊರಬರುತ್ತದೆ. Doctor, my brother has come, you can shift me to ward now, ಸಂತೋಷದಿಂದ ಅಳುತ್ತೇನೆ. ಇದು ಸಂತೋಷವಾ, ದುಃಖವಾ, ನಾನು ಉಳಿಯುತ್ತೇನಾ, ಸಾಯುತ್ತೇನಾ? ಒಂದೂ ಗೊತ್ತಿಲ್ಲ. Wheelchair ಬೇಡ ಎನ್ನುತ್ತೇನೆ. ಇದೆಲ್ಲಾ ಬೇಡ ಕಣೋ lift ನಲ್ಲಿ ಹೋಗೋಣ, ಅಲ್ಲಿಯವರೆಗೂ ನಡೀತಿನಿ ಎಂದು ಬಾಬಣ್ಣನ ಕೈ ಹಿಡಿದು ಅಂಗಲಾಚುತ್ತೇನೆ. ಡಾಕ್ಟರ್ ನಿರಾಕರಿಸುತ್ತಾರೆ. ಬಾಬಣ್ಣ ಅಳಲಾಗದೇ ನಗುತ್ತಾನೆ. ‘ಕೂತ್ಕೊಳೆ ಏನಾಗುಲ್ಲ, ಇದೊಂದು ಥರ ಸನ್ಮಾನ ಕಣೆ ನಿಂಗೆ. ನೋಡು, ಕಲರ್ ಕಲರ್ ಪ್ಯಾಂಟು ಶರಟು, ಮ್ಯಾಚಿಂಗ್ ವಾಚು, ನಾನು ನಿನ್ನ ಜೊತೆಗೆ ಇರ್ತೀನಿ’ ಎನ್ನುತ್ತಾ ತಾನೇ wheelchair ಹಿಡಿದು ನಿಲ್ತಾನೆ. ಸಿಬ್ಬಂದಿ ವರ್ಗದ ಜನರ ಮೇಲೆ ಕೂಗಾಡಿ ಗಾಳಿ ಬೆಳಕು ಇರುವ ರೂಮ್ ವ್ಯವಸ್ಥೆ ಮಾಡ್ತಾನೆ. ಅರ್ಧ ಇಡ್ಲಿ ಬಲವಂತವಾಗಿ ತಿನ್ನುವ ಹಾಗೆ ಮಾಡ್ತಾನೆ. ನನಗೆ ಮಂಪರು ಕವಿಯುತ್ತದೆ.

ಅವತ್ತು TMT positive ಬರುತ್ತದೆ. Angiogram ಗೆ cathlab ಸೇರುತ್ತೇನೆ. ರಾತ್ರಿ ಯಮಯಾತನೆ. ಕಾಲು ಮಡಿಚುವಂತಿಲ್ಲ, ಏಳಲು ಸಾಧ್ಯವಿಲ್ಲ. ನೆನ್ನೆ ಬಾಬಣ್ಣನಿಂದ  ಬೈಯಿಸಿಕೊಂಡಿದ್ದ sister ಅನ್ನು ಅಣ್ಣ ಬಾಗಿಲಲ್ಲಿ ಮೆಲುಧ್ವನಿಯಲ್ಲಿ angiogram results ಕೇಳುತ್ತಾನೆ. ‘ಕೊತ್ತಿಲ್ಲಾ ಸಾರ್, ಟಾಕ್ಟರ್ went off, ಡಿ. ಎಂ. ಡಿ. ವಾಸ್ ಪೋಸಿಟಿವ್ ನೋ’ ಎಂದು ಅಡ್ಡ ಗೋಡೆಯ ಮೇಲೆ ದೀಪ ಇಡುತ್ತಾಳೆ. ಬೋನಲ್ಲಿ ಕೂಡಿಟ್ಟ ಹುಲಿಯಂತಿರುವ ನನ್ನನ್ನು ಬಾಬಣ್ಣ ತರಾವರಿ ತಮಾಷೆ ಮಾಡುತ್ತಾನೆ. ಸೂಜಿ ಕಂಡರೆ ಹೆದರುವ ಮತ್ತು ಅದಕ್ಕಾಗಿ blood tests postpone ಮಾಡಿಕೊಳ್ಳುವ ಬಾಬಣ್ಣ ನನಗೆ ಊಟಮಾಡಿಸಿ sister ಅನ್ನು ಕರೆದು ಈಗ ಏನೇನು injections ಕೊಡ್ತೀರೋ ಕೊಡಿ ಎನ್ನುತ್ತಾನೆ. ಶಾಮೂ ಇದ್ದಿದ್ದರೆ ಇಬ್ಬರೂ ಸೇರಿ ಇಷ್ಟು ಹೊತ್ತಿಗೆ ನಿನ್ನ ಮನೆಗೇ ಕರ್ಕೊಂಡು ಹೋಗಿರ್ತಿದ್ವಿ ಎಂದು ನನ್ನನ್ನೂ ಹನಿಗಣ್ಣಾಗಿಸಿ ತಾನೂ ಗದ್ಗದಿತನಾಗುತ್ತಾನೆ. ‘ಎಲ್ಲಾ normal ಕಣೇ, ಅದಕ್ಕೇ ಡಾಕ್ಟರ್ ಹಾಗೇ ಹೋಗಿರೋದು, ನಾಳೆ ಮನೆಗೆ ಬಾ’ ತಲೆಸವರುತ್ತಾನೆ. ಹೌದು, ಈ ಬಾಬಣ್ಣ ನಿಜಕ್ಕೂ ಕುವೆಂಪು ಹೇಳಿದ ತಿಮ್ಮ. ಅದೇ ಸಮಯದಲ್ಲಿ  ಶಾಮ ಪೋನಾಯಿಸಿ ನನ್ನ ವರಸೆ ಕೇಳಿ ‘ನೀನೇ ಡಾಕ್ಟರ್ ಆಗೋಕ್ಕೆ ಹೋಗಬೇಡ್ವೇ..ನಿನಗೇನಾದ್ರೂ ಆಗೋದಾದ್ರೆ ನಾನು ಅಲ್ಲಿ ಇದ್ದೇ ಇರ್ತಿದ್ದೆ, ನಿನ್ನ heart ಏನೂ ಆಗಿಲ್ಲ, ಊರಿಗೆ ಬಂದ ತಕ್ಷಣ ಬರ್ತೀನಿ, ಚೆನ್ನಾಗಿ ನಿದ್ರೆಮಾಡು, ಧ್ಯಾನ ಮಾಡು’ ಎಂದು  ಪ್ರೀತಿಯಿಂದ ಗದರುತ್ತಾನೆ. ಇವನು ಇನ್ನೊಬ್ಬ ತಿಮ್ಮ!

ಯಾವುದು ಹೇಗೇ ಆಗಲಿ, ವನಮಾಲಿ ಎಂದಿಗೂ ಕೊಳಲ ಗಾನ ನಿಲ್ಲಿಸದಿರಲಿ! ಇಂತಹ ತಿಮ್ಮಂದಿರು ಎಲ್ಲರಿಗೂ ಸಿಗಲಿ!!!

Leave a comment

Filed under ಲೇಖನಗಳು

ಕಗ್ಗ- (೯-೨೧)

[30/12/2015 4:30 AM] S. Bhargav: ಕಗ್ಗ–೯

ಏನು ಭೈರವಲೀಲೆಯೀ ವಿಶ್ವಭ್ರಮಣೆ!

ಏನು ಭೂತಗ್ರಾಮನರ್ತನೋನ್ಮಾದ ! I

ಏನಗ್ನಿ ಗೋಳಗಳು ! ಏನಂತರಾಳಗಳು !

ಏನು ವಿಸ್ಮಯ ಸೃಷ್ಟಿ! – ಮಂಕುತಿಮ್ಮ II

ಭೈರವಲೀಲೆಯೀ = ಭೈರವ+ ಲೀಲೆಯು+ಈ , ಭೂತಗ್ರಾಮನರ್ತನೋನ್ಮಾದ = ಭೂತ+ಗ್ರಾಮ+ನರ್ತನ+ಉನ್ಮಾದ, ಏನಗ್ನಿ= ಏನು+ ಅಗ್ನಿ

ಬೈರವ= ಪರಮ ಶಿವ, ರುದ್ರ, ಉನ್ಮಾದ = ಉದ್ವೇಗ, ಗೋಳ = ಉಂಡೆ, ವಿಸ್ಮಯ= ಆಶ್ಚರ್ಯ.

ಏನಿದು ಭೈರವ ಲೀಲೆ. ಏನಿದು ಇಡೀ ವಿಶ್ವದ ಸುತ್ತಾಟ. ಏನಿದು ಪಂಚ ಮಹಾ ಭೂತಗಳ ಮತ್ತು ಆ ಭೂತಗಳ ವಾಸಸ್ಥಳವಾದ ಆ ಮಹಾ ಚೈತನ್ಯ ಮತ್ತು ಮತ್ತು ಆ ಚೈತನ್ಯದ ಉನ್ಮಾದಭರಿತ ನರ್ತನ. ಏನಿದು ಅಗ್ನಿ ಗೋಳಗಳು ಈ ಸೃಷ್ಟಿಯ ಅಂತರಾಳ. ಆಹಾ ಎಂತಹ ಈ ವಿಸ್ಮಯ ಈ ಸೃಷ್ಟಿ. ಇದು ಈ ಕಗ್ಗದ ಅಂತರ್ಯದ ಭಾವ.

ರುದ್ರ ತಾಂಡವ ಎನ್ನುವ ಅರ್ಥದಲ್ಲಿ ಈ ವಿಶ್ವದ ಸೃಷ್ಟಿಯನ್ನು ವಿಸ್ಮಯವೆಂದು ಕರೆಯುತ್ತಾರೆ ಶ್ರೀ ಗುಂಡಪ್ಪನವರು. ಹೌದು ಇದು ವಿಸ್ಮಯವೇ ಸರಿ. ಆ ಹಿಂದೆಯೇ ವಿವರಿಸಿದಂತೆ ಸೌರವ್ಯೂಹಗಳು, ಕ್ಷೀರಪಥಗಳು, ಆಕಾಶಗಂಗೆಗಳು ಮತ್ತು ಇಡೀ ವಿಶ್ವ. ಈ ವಿಶ್ವದ ಅಂತರ್ಯದಲ್ಲಿ ನಡೆಯುವ ಅಗ್ನಿಸ್ಪೋಟಗಳು, ಹೊಸ ಹೊಸ ನಕ್ಷತ್ರಗಳ, ಗ್ರಹಗಳ ಹುಟ್ಟು, ಸಿಡಿತ, ಒಂದರೊಳಗೆ ಒಂದು ವಿಲೀನವಾಗುವ ಪ್ರಕ್ರಿಯೆ, ಇವೆಲ್ಲವನ್ನೂ ನಾವು ಕಾಣುವುದಿರಲಿ, ಊಹಿಸಲೂ ಅಸಾಧ್ಯವಾದ ರೂಪ. ಅದನ್ನು ಪರಶಿವನ ಅಥವಾ ನಟರಾಜನ ರುದ್ರ ತಾಂಡವಕ್ಕೆ ಹೋಲಿಸುತ್ತಾರೆ. ಈ ಸೃಷ್ಟಿ, ಸೃಷ್ಟಿಯಲ್ಲಿನ ಪಂಚ ಮಹಾಭೂತಗಳು ಮತ್ತು ಅವುಗಳ ಕಾರ್ಯ ವೈಖರಿಯಾವುದೂ ಸಹ, ಊಹಾತೀತ. ಇದೊಂದು ಯಾರಿಗೂ ಅರ್ಥವಾಗದ ವಿಸ್ಮಯವೆನ್ನುತ್ತಾರೆ ಮಾನ್ಯ ಗುಂಡಪ್ಪನವರು.

152 ದಶಲಕ್ಷ ಕಿಲೋ ಮೀಟರ್ ದೂರದಲ್ಲಿರುವ ನಮ್ಮ ಸೌರಮಂಡಲದ ಸೂರ್ಯನಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಬೇಕಾಗುವ ಸಮಯ 8 .28 ನಿಮಿಷಗಳು. ಸೂರ್ಯ ಒಂದು ನಕ್ಷತ್ರ. ನಮಗೆ ಆಕಾಶದಲ್ಲಿ ಕಾಣುವ ಅನ್ಯ ಅನೇಕ ನಕ್ಷತ್ರಗಳಂತೆ. 152 ದಶಲಕ್ಷ ಕಿಲೋ ಮೀಟರ್ ದೂರದಲ್ಲಿದ್ದರೂ ಇಷ್ಟು ಹತ್ತಿರದಲ್ಲಿ ಕಂಡಂತೆ ಕಂಡು ಇಷ್ಟು ಬೆಳಕನ್ನು ಮತ್ತು ಶಾಖವನ್ನು ನೀಡುತ್ತಾನೆ ಈ ನಮ್ಮ ಸೂರ್ಯನೆಂಬ ನಕ್ಷತ್ರ. ಬೇಸಿಗೆ ಕಾಲದಲ್ಲಿ ಅವನ ಶಾಕವನ್ನು ತಡೆಯಲಾರದೆ ಸಾವನ್ನಪ್ಪುವ ಜನರೆಷ್ಟೋ.! ಇದನ್ನೇ ಅಗ್ನಿ ಗೋಳವೆಂದರು ಶ್ರೀ ಗುಂಡಪ್ಪನವರು.

ವಾಚಕರೆ ಯೋಚಿಸಿ, ಇಷ್ಟು ಹತ್ತಿರ ಕಾಣುವ ನಮ್ಮ ಸೂರ್ಯನೇ 152 ದಶಲಕ್ಷ ಕಿಲೋ ಮೀಟರ್ ದೂರದಲ್ಲಿದ್ದಾನೆಂದರೆ, ಇನ್ನು ನಮ್ಮ ಕಣ್ಣಿಗೆ ಬೆಳ್ಳಿ ಚುಕ್ಕಿಯಂತೆ ಕಾಣುವ ಎಷ್ಟೋ ನಕ್ಷತ್ರಗಳು ಎಷ್ಟು ದೂರದಲ್ಲಿರಬೇಕು? ನಮ್ಮ ಸೌರಮಂಡಲದ ಸೂರ್ಯನ ನಂತರ ನಮಗೆ ಹತ್ತಿರದಲ್ಲಿರುವ ನಕ್ಷತ್ರವೆಂದರೆ ಆಲ್ಫಾ ಸೆಂಚ್ಯುರಿ ಅಥವಾ ಮ್ಯಾಗ್ಜಿಮಾ ಸೆಂಚ್ಯುರಿ . ಇದು ನಮಗೆ ಎಷ್ಟು ದೂರದಲ್ಲಿದೆಯೆಂದರೆ, ಅಲ್ಲಿಂದ ಹೊರಟ ಬೆಳಕು ನಮ್ಮ ಭೂಮಿಯನ್ನು ತಲುಪಬೇಕಾದರೆ 4 .7 ವರ್ಷಗಳು ಬೇಕಾಗುತ್ತದೆ. ಇನ್ನೂ ದೂರದಲ್ಲಿರುವ ನಕ್ಷತ್ರಗಳ ದೂರವೆಷ್ಟೋ, ನಮಗೆ ಕಾಣದಿರುವ ನಕ್ಷತ್ರಪುಂಜಗಳೆಷ್ಟೋ!! ಅಂದರೆ ಈಗ ನಾವು ಒಂದು ನಕ್ಷತ್ರವನ್ನು ನೋಡುತ್ತಿದ್ದೇವೆ ಎಂದರೆ ಅಲ್ಲಿಂದ ಎಂದೋ ಹೊರಟ ಬೆಳಕನ್ನು ನಾವು ಇಂದು ನೋಡುತ್ತಿದ್ದೇವೆ. ಹಾಗೆ ನಮಗೆ ಕಾಣುವ ಅತೀ ದೂರದ ನಕ್ಷತ್ರ ನಮಗಿಂತ ಎಷ್ಟು ದೂರದಲ್ಲಿರಬಹುದು. ಕಾಣುವುದೇ ಎಷ್ಟೋ ದೂರದಲ್ಲಿದ್ದರೆ ಕಾಣದ್ದೆಷ್ಟೋ ಯಾರಿಗೆ ಗೊತ್ತು. ಇಂತಹ ವಿಶ್ವ, ನಮ್ಮ ಯೋಚನೆಗೂ ನಿಲುಕದ ಅದ್ಭುತ ಸೃಷ್ಟಿ.

ಈ ಸೃಷ್ಟಿಯ ಗೂಢ ನಿಗೂಢ ವಿಸ್ಮಯಗಳು.ಅಬ್ಬ! ಎಂತಹ ವಿಚಿತ್ರ. ಇದನ್ನೇ ಗುಂಡಪ್ಪನವರು ವಿಸ್ಮಯ ಅಥವಾ ವಿಚಿತ್ರವೆನ್ನುತ್ತಾರೆ. ಈ ಸೃಷ್ಟಿಯನ್ನು ಒಂದು ಸೂತ್ರದಲ್ಲಿ ಹಿಡಿದಿಟ್ಟಿರುವ ಆ ಪರಮ ಶಕ್ತಿ. ಇವುಗಳ ಮುಂದೆ ನಾವೆಷ್ಟರವರು? ನಮ್ಮ ಸಾಮರ್ಥ್ಯದ ಮಿತಿ ಏನು? ನಾವು ಅಹಂಕಾರಪಡಲು ಏನಾದರೂ ಕಾರಣವಿದೆಯೇ? ಯೋಚಿಸಿ ವಾಚಕರೆ.

ಈ ವಿಸ್ಮಯಭರಿತ ಮತ್ತು ವಿಚಿತ್ರವಾದ ವಿಶ್ವ, ಅದರ ನಿಗೂಢತೆ ಮತ್ತು ಇದರ ಸೃಷ್ಟಿಕರ್ತನ ಸಾಮರ್ತ್ಯಗಳ ಬಗ್ಗೆ ಆಲೋಚಿಸುತ್ತಾ ನಾವೆಲ್ಲರೂ ಮುಂದಿನ ಕಗ್ಗಕ್ಕೆ ಹೋಗುವ.
[31/12/2015 5:13 AM] S. Bhargav: ಕಗ್ಗ-೧೦

ಏನು ಪ್ರಪಂಚವಿದು! ಏನು ಧಾಳಾಧಾಳಿI
ಏನದ್ಭುತಾಪಾರಶಕ್ತಿ ನಿರ್ಘಾತ! II
ಮಾನವನ ಗುರಿಯೇನು? ಬೆಲೆಯೇನು?ಮುಗಿವೇನು? I
ಏನರ್ಥವಿದಕೆಲ್ಲ? – ಮಂಕುತಿಮ್ಮ II

ಏನದ್ಭುತಾಪಾರಶಕ್ತಿ ನಿರ್ಘಾತ = ಏನು ಅದ್ಭುತ + ಅಪಾರ+ ಶಕ್ತಿ , ನಿಘಾತ = ಹೊಡೆತ.

ಇಲ್ಲಿಯವರೆಗೆ ಬಂದ ೯ ಕಗ್ಗಗಳಲ್ಲಿ, ಮೊದಲ ಮೂರು ಕಗ್ಗಗಳಲಿ, ಶ್ರೀ ಗುಂಡಪ್ಪನವರು, ಆ ಪರಮಾತ್ಮನೆಂದೆನಿಸಿಕೊಂಡ, ಪರಮಶಕ್ತಿಗೆ ನಮಿಸುತ್ತಾ, ಮುಂದಿನ ಕಗ್ಗಗಳಲ್ಲಿಮನುಷ್ಯನ ಜೀವನದ ಮತ್ತು ಸೃಷ್ಟಿಯ ವಿಚಿತ್ರಗಳನ್ನು ಬರೆದಿದ್ದಾರೆ. ಈ ಸಮಯಕ್ಕೆ ನಾ ಹಿಂದೆ ಹೇಳಿದಂತೆ ಎರಡನೇ ಮಹಾ ಯುದ್ಧ ಆರಂಭವಾಗಿ ಎಲ್ಲೆಲ್ಲೂ ಹಾಹಾಕಾರ ದಾಳಿಗಳು. ಇವಗಳನ್ನು ಕಂಡು ಅಂದಿನ ಸಮಯಕ್ಕೆ ಅವರ ಅನುಭೂತಿ ಏನಿತ್ತು ಎಂಬುದು ಇಂದಿನ ಮತ್ತು ಮುಂದಿನ ಕೆಲವು ಕಗ್ಗಗಳಲ್ಲಿ ಕಾಣಬಹುದು.

ಈ ಪ್ರಪಂಚಕ್ಕೆ ಏನಾಗಿದೆ? ಏಕೆ ಈ ಮುತ್ತಿಗೆಗಳು? ಏನು ಈ ಹೊಡೆತಗಳು ಮತ್ತು ಆ ಹೊಡೆತಗಳ ಹಿಂದಿನ ಅಪಾರ ಶಕ್ತಿ ಏನು ?ಮಾನವನ ಗುರಿಯೇನು? ಇದಕ್ಕೆಲ್ಲ ಬೆಲೆಯೇನು? ಇದಕ್ಕೆಲ್ಲ ಅಂತ್ಯವೇನು? ಮತ್ತು ಇದಕ್ಕೆಲ್ಲ ಏನು ಅರ್ಥ ಎಂಬ ಬಾವಗಳನ್ನು ವ್ಯಕ್ತ ಪಡಿಸುತ್ತಾ ಅಂದು ನಡೆಯುತ್ತಿದ್ದ ಪ್ರಾಪಂಚಿಂಕ ವಿಧ್ಯಮಾನಗಳನೆಲ್ಲ ಒಟ್ಟುಗೂಡಿಸಿ ಹಲವು ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತಾರೆ.

ಯಾರೋ ಒಬ್ಬ ಸರ್ವಾಧಿಕಾರಿಯ ಅಧಿಕಾರ ದಾಹ, ಅಧಿಕಾರವನ್ನು ವಿಸ್ತರಿಸುವ ಮಹತ್ವಾಕಾಂಕ್ಷೆ ಮತ್ತು ಅಹಂಕಾರವನ್ನು ತಣಿಸುವ ಅತೀ ಆಸೆಗೆ ಬಲಿಯಾದದ್ದು ಇಡೀ ವಿಶ್ವ. ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದಮೇಲೆ ದಾಳಿ. ಆ ರಾಷ್ಟ್ರಕ್ಕೆ ಕೆಲವು ಮತ್ತು ಈ ರಾಷ್ಟ್ರಕ್ಕೆ ಕೆಲವು ರಾಷ್ಟ್ರಗಳು ಸಹಾಯಕ್ಕೆ ನಿಲ್ಲುತ್ತವೆ. ಆಗ ಆ ಎರಡು ರಾಷ್ಟ್ರಗಳು ಮತ್ತು ಆ ರಾಷ್ಟ್ರಗಳ ಸಹಾಯಕ್ಕೆ ನಿಂತ ಬೇರೆ ರಾಷ್ಟ್ರಗಳ ಎಲ್ಲ ಸೈನಿಕರೂ ಹೊಡೆದಾಡುತ್ತಾರೆ. ಯಾರೋ ಯಾರ ಮೇಲೋ ದಾಳಿ. ದಾಳಿಗೊಳಗಾದ ರಾಷ್ಟ್ರಕ್ಕಾಗಲೀ ದಾಳಿಮಾಡಿದ ರಾಷ್ಟ್ರಕ್ಕಾಗಲೀ ದಾಳಿಯ ಕಾರಣವೇ ಗೊತ್ತಿಲ್ಲ. ಹೊಡೆದಾಡುವುದು, ಪಾಪ ಮುಗ್ದ ಸೈನಿಕರು. ಕೇವಲ ಜೀವಿಕೆಗಾಗಿ.

ಇದು ಮಾನವನ ಜೀವನದ ಇತಿಹಾಸದಲ್ಲಿ ನಿರಂತಾರವಾಗಿ ನಡೆದಿದೆ. ಕ್ರಿಸ್ತಪೂರ್ವ ಸುಮಾರು ೩೨೫ ವರ್ಷದಲ್ಲಿ ಅಲೆಕ್ಸಾಂಡರನ ವಿಶ್ವ ವಿಜಯ ಯಾತ್ರೆಯಿಂದ ಹಿಡಿದು, ಇಂದಿನವರೆಗೆ ನಡೆದ ಯುದ್ಧಗಳು ಆಯಾಯಾ ರಾಷ್ಟ್ರಗಳ ನಾಯಕರ ಭೌದ್ಧಿಕ ಮತ್ತು ನೈತಿಕ ( intellectual & moral ) ದಿವಾಳಿತನದಿಂದಲೇ ನಡೆದಿದೆ ಅಲ್ಲವೆ.

ಅಂತಹ ಒಂದು ಸ್ಥಿತಿಯೇ ೨ನೆ ಮಹಾಯುದ್ಧದ ಕಾಲದಲ್ಲಿ ಹಿಟ್ಲರನ ತಿಳಿಗೇಡಿತನದಿಂದಾಗಿ ಆರಂಭವಾಗಿ ವಿಶ್ವವೆಲ್ಲ ಹರಡಿ ಹಲಕೆಲವರು ಕೆಲಕೆಲವರ ಪಕ್ಷ ಹಿಡಿದು ಹೋರಾಡಿ, ಇಡೀ ಪ್ರಪಂಚವನ್ನು ವಿನಾಶದಂಚಿಂಗೆ ತಳ್ಳಿದರು ಘನಘೋರ ಯುದ್ಧ, ಅಪಾರ ಶಕ್ತಿಯ ವ್ಯಯ, ಸಾವು ನೋವು. ಪ್ರತಿ ದೇಶಕ್ಕೂ ಯುದ್ಧಕ್ಕಾಗಿ ಅಪಾರ ವೆಚ್ಚ. ಆ ವೆಚ್ಚವನ್ನು ಭರಿಸಲಿಕ್ಕಾಗಿ ಅಧಿಕ ಕರಗಳು ಮತ್ತು ಕರಭಾರದಿಂದ ತತ್ತರಿಸಿದ ಪ್ರಜೆಗಳು. ಯುದ್ಧದಲ್ಲಿ ಸಾವು ನೋವುಗಳು. ಇದು ಸಾಲದೆಂಬಂತೆ ಅಂದು ಇಡೀ ಪ್ರಪಂಚದಲ್ಲೇ ಬರದ ಕರಾಳ ನೃತ್ಯ. ಎಲ್ಲದಕ್ಕೂ ಕೊರತೆ, ಕಾಲರಾ ಪ್ಲೇಗ್ ನಂತಹ ಸೋಂಕು ರೋಗಗಳ ರುದ್ರ ನರ್ತನ. ನೋವು ಮಾತ್ರ ಅಧಿಕ . ಇದನ್ನು ಕಂಡೆ ಗುಂಡಪ್ಪನವರು, “ಮಾನವನ ಗುರಿಯೇನು”? ಎಂದು ಪ್ರಶ್ನಿಸುತ್ತಾರೆ. ಇದಕ್ಕೆಲ್ಲ ಏನು ಅರ್ಥ ಎಂದು ಕೇಳುತ್ತಾರೆ.

ವಾಚಕರೆ, ನಿಮ್ಮಲ್ಲಿ ಬಹಳಷ್ಟು ಜನಗಳಿಗೆ ಗೊತ್ತೋ ಇಲ್ಲವೋ ನನಗೆ ಗೊತ್ತಿಲ್ಲ, ಅಂದು ಅನ್ನಕ್ಕೆ ಬರ.ಬಟ್ಟೆಗೆ ಬರ. ಹಾಲು ನೀರಿಗೂ ಬರ. ಪ್ರತಿ ಊರಿನಲ್ಲೂ ಗಂಜಿ ಕೇಂದ್ರಗಳು. ಪ್ರತಿಯೊಬ್ಬರಿಗೂ ಬೆಳಗ್ಗೆ ಎರಡು ಸೌಟು ಮತ್ತು ಸಂಜೆ ಎರಡು ಸೌಟು. ಬಟ್ಟೆ ಬೇಕಾದರೆ, ಸರ್ಕಾರದಿಂದ ಪರವಾನಗಿ( permit ) ತೆಗೆದುಕೊಂಡು ಗುಟ್ಟಲ್ಲಿ ಖರೀದಿ ಮಾಡಬೇಕಾದ ಪರಿಸ್ಥತಿ.

ಅಂತಹ ಪರಸ್ಥಿತಿಗೆ ಅರ್ಥವೇನು? ಅಂದರೆ ಅರ್ಥಹೀನ ಎಂಬ ರೀತಿ ಗುಂಡಪ್ಪನವರು ಪ್ರಶ್ನಿಸುತ್ತಾರೆ.

ಇಂದು ಕೂಡ ಪರಸ್ಥಿತಿ ಬದಲಾಗಿಲ್ಲ.ಅಂದು ಕೊರತೆಯಿಂದ – ಇಂದು ಆಧಿಕ್ಯದಿಂದ ಮಾನವನಿಗೆ ತೊಂದರೆ. ಅಹಂಕಾರದ, ದ್ವೇಷದ, ಯುದ್ಧಗಳ, ನೋವಿನ, ಕೊರತೆಗಳ ರೂಪ ಬೇರೆ ಅಷ್ಟೇ! ಇಂದು ಕೂಡ ನಾವು ಅಂದು ಅವರು ಕೇಳಿದ ಪ್ರಶ್ನೆಗಳನ್ನೇ ಕೇಳುವ ಸ್ಥತಿ ಇದೆ ಇಲ್ಲವೇ?
[31/12/2015 8:57 PM] S. Bhargav: ಕಗ್ಗ-೧೧

ಮುತ್ತಿರುವುದಿಂದು ಭೂಮಿಯನೊಂದು ದುರ್ದೈವ I
ಮೃತ್ಯುಕುಣಿಯುತಲಿಹನು ಕೇಕೆಹಾಕುತಲಿ II
ಸುತ್ತಿಪುದು ತಲೆಯನನುದಿನದ ಲೋಕದ ವಾರ್ತೆ I
ಎತ್ತಲಿದಕೆಲ್ಲ ಕಡೆ? – ಮಂಕುತಿಮ್ಮ II

ಮುತ್ತಿರುವುದು ಇಂದು ಭೂಮಿಯನು ಅದೊಂದು ದುರ್ದೈವ
ಮೃತ್ಯು ಕುಣಿಯುತಲಿಹನು ಕೇಕೆ ಹಾಕುತಲಿ.
ಸುತ್ತಿಪುದು ತಲೆಯನು ಅನು ದಿನವು ಲೋಕದ ವಾರ್ತೆ
ಎತ್ತಲಿದಕೆಲ್ಲ ಮಂಕು ತಿಮ್ಮ

ಸುತ್ತಿಪುದು = ಸುತ್ತಿಸುತ್ತದೆ , ಅನುದಿನವು= ಪ್ರತಿನಿತ್ಯವು, ಎತ್ತಲಿದಕೆಲ್ಲ = ಇದಕ್ಕೆಲ್ಲ ಎಲ್ಲಿ.

ಭೂಮಿಕೆ ಅದೇ. ಯುದ್ಧ. ಘೋರ ವಿಶ್ವ ಮಹಾ ಯುದ್ಧ. ಇಡೀ ವಿಶ್ವವೇ ಅಲುಗಾಡುವಂಥ ಯುದ್ಧ. ಎಲ್ಲೆಲ್ಲೂ ರಕ್ತಪಾತ. ಎಲ್ಲೆಲ್ಲೂ ಯುದ್ಧದ ಕೂಗು. ಅದು ಈ ಭೂಮಿಗೆ ಆವರಿಸಿಕೊಂಡ ದುರ್ದೈವವೆಂದು ವ್ಯಾಖ್ಯಾನಿಸುತ್ತಾರೆ, ಮಾನ್ಯ ಗುಂಡಪ್ಪನವರು. ಎಲ್ಲೆಲ್ಲೂ ಮೃತ್ಯುವಿನ ತಾಂಡವ. ಯುದ್ಧದಲ್ಲಿ, ತಂದೆಯನ್ನೂ, ಅಣ್ಣನನ್ನೋ, ಮಗನನ್ನೂ, ಮಿತ್ರನನ್ನೋ, ತಮ್ಮನನ್ನೋ, ಭೂಮಿಯನ್ನೋ, ಹುಟ್ಟಿದೂರಲ್ಲಿ ಬಿಟ್ಟ ಬೇರನ್ನೋ, ಆ ಊರಿನ ಮಣ್ಣಿನ ಋಣವನ್ನೋ, ಕಳೆದುಕೊಂಡವರೆ ಬಹಳ ಜನ. ಕಳೆದುಕೊಂಡವರೆಲ್ಲರಿಗೂ ನೋವು. ಕಳೆದುಕೊಳ್ಳದವರಿಗೂ ಕಳೆದುಕೊಂಡವರ ನೋವಿಗಾಗಿ ಸಂತಾಪ. ಒಟ್ಟಾರೆ ಇಡೀ ಭೂಮಿಗೆ ಸೂತಕದ ಭಾವ. ಎಲ್ಲ ಕಡೆಯಿಂದಲೂ ಸಾವಿನ ನಷ್ಟದ ಸಮಾಚಾರ. ಪ್ರತಿನಿತ್ಯ ಈ ಸಮಾಚಾರಗಳನೆಲ್ಲ ಕೇಳಿ ಕೇಳಿ, ಪತ್ರಿಕೆಗಳಲ್ಲಿ ಓದಿ ಓದಿ ತಲೆ ಸುತ್ತುವಂತಾಗುತ್ತದೆ. ಇದಕ್ಕೆಲ್ಲ ಎಂದಿಗಾದರೂ ಕೊನೆಯುಂಟೆ ಎಂದು ಲೋಕ ಶಾಂತಿಗಾಗಿ ಮರುಗುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಆ ಯುದ್ಧದಲ್ಲಿ ಗೆಲುವು ಯಾರದಾಯಿತು ಎಂದು ಯೋಚಿಸಿದರೆ, ಗೆದ್ದದ್ದು ” ಮೃತ್ಯು” ಮತ್ತೆಲ್ಲರೂ ಸೋತವರೇ. ಆ ಯುದ್ಧದಲ್ಲೇ ಅಲ್ಲ ಯಾವುದೇ ಯುದ್ಧವನ್ನು ನಾವು ಸೂಕ್ಷ್ಮವಾಗಿ ಅವಲೋಕಿಸಿದರೆ, ಗೆಲ್ಲುವುದು “ಮೃತ್ಯು” ಮಾತ್ರ. ಮಿಕ್ಕೆಲ್ಲರೂ, ಎಲ್ಲ ದೇಶಗಳೂ ಸೋಲುತ್ತವೆ. ಕೇವಲ ಮೃತ್ಯು ಗೆಲ್ಲುತ್ತದೆ. ಎರಡನೇ ಮಹಾ ಯುದ್ಧದ ಸಮಯದಲ್ಲಿ ಕ್ರೂರತ್ವಕ್ಕೆ ಒಂದು ಅಂತ್ಯವೇ ಇರಲಿಲ್ಲ. ಹಿಟ್ಲರನ ರಕ್ತ ದಾಹಕ್ಕೆ ಕೊನೆಯೇ ಇರಲಿಲ್ಲ. ಅದಕ್ಕೊಂದು ನಿದರ್ಶನವೆಂದರೆ ” ಸಾಬಿಬಾರ್ ” ಎಂಬಲ್ಲಿ ವಿಷಾನಿಲ ಘಟಕಗಳನ್ನು ನಿರ್ಮಿಸಿ, ವೈರಿ ದೇಶದ ಸೈನಿಕರಷ್ಟೇ ಅಲ್ಲ ಸೆರೆಸಿಕ್ಕ ಸಾಮಾನ್ಯ ಪ್ರಜೆಗಳನ್ನೂ ಅಲ್ಲಿಗೆ ತಂದು, ಕೆಲಸಮಾಡಲು ಶಕ್ತಿ ಇರುವವರನ್ನು ಹಲವಾರು ಕೆಲಸಗಳಿಗೆ ಹಚ್ಚಿ, ಕೆಲಸ ಮಾಡಲಾಗದ ಸ್ತ್ರೀಯರು, ವೃದ್ಧರು, ಮಕ್ಕಳು ಹೀಗೆ ಎಲ್ಲರನ್ನೂ ಅಮಾನವೀಯ ಕ್ರೌರ್ಯದಿಂದ ಆ ವಿಷಾನಿಲ ಘಟಕದೊಳಕ್ಕೆ ತಳ್ಳಿ ಕೊಂದು ಬಿಡುವ ಪರಮ ನೀಚತನವನ್ನು ಹಿಟ್ಲರ ತೋರಿಸಿದ್ದ. ಅದು ಕ್ರೌರ್ಯದ ಹಲವಾರು ಮಾರ್ಗಗಳಲ್ಲಿ ಒಂದಾಗಿತ್ತು. ಎಲ್ಲ ದೇಶಗಳೂ ಒಂದಲ್ಲ ಒಂದು ದೇಶದ ಪಕ್ಷವನ್ನು ತೆಗೆದುಕೊಂಡು ಇಡೀ ವಿಶ್ವವನ್ನೇ ವಿನಾಶದ ಅಂಚಿಗೆ ತಳ್ಳುವಂಥಾ ಯುದ್ದವನ್ನು ನಡೆಸಿದರು. ಜಪಾನಿನ ಮೇಲೆ ಬಿದ್ದ ಎರಡು ಅಣು ಬಾಂಬುಗಳು, ಈ ಯುದ್ಧವನ್ನು ಒಂದು ಕೊನೆ ಮುಟ್ಟಿಸಿತು. ಇದು ಚರಿತ್ರೆ.

ಆದರೆ ವರ್ತಮಾನವೇನೂ ಭಿನ್ನವಾಗಿಲ್ಲ. ಇನ್ನೂ ಭೀಕರವಾಗುತ್ತಿದೆ. ಆಗ ಒಂದು ಯುದ್ಧ ನಡೆದರೆ, ಈಗ ಹಲವಾರು ಯುದ್ಧಗಳು. ವೈಜ್ಞಾನಿಕವಾಗಿ, ಆರ್ಥಿಕವಾಗಿ ಮುಂದುವರೆದ ರಾಷ್ಟ್ರಗಳು ಹಿಂದಿರುವ ರಾಷ್ಟ್ರಗಳಮೇಲೆ ಆಧಿಪತ್ಯ, ದಬ್ಬಾಳಿಕೆ. ಷಡ್ಯಂತ್ರ, ಒತ್ತಡ, ಅನವಶ್ಯಕ ಹಸ್ತಕ್ಷೇಪದಿಂದ ಇಂದಿಗೂ ದೇಶದೇಶಗಳ ಮಧ್ಯೆ ದ್ವೇಷದ ಭಾವ ಒಂದಿಷ್ಟೂ ಕಡಿಮೆಯಾಗಿಲ್ಲ. ಜಾತಿ, ಮತ, ಭಾಷೆ, ಎಲ್ಲೆ, ಗಡಿ ಹೀಗೆ ಹೊಡೆದಾಟಕ್ಕೆ ಹಲವಾರು ಕಾರಣಗಳು. ತನ್ನ ಬಲದ ಕಾರಣ ಪರರ ದೇಶಗಳಿಗೆ ಕುಂಟು ನೆಪ ಒಡ್ಡಿ ನುಗ್ಗಿ ಮಾರಣ ಹೋಮ ನಡೆಸಿ ಅಲ್ಲಿರುವ ಸಂಪತ್ತನ್ನು ಲೂಟಿಮಾಡುವ ಪ್ರವೃತ್ತಿ ಸರಿ ಸುಮಾರು ಮೂರು ಸಾವಿರ ವರ್ಷಗಳ ಹಿಂದೆಯೂ ಇತ್ತು. ಇಂದೂ ಇದೆ. ಜನಾಂಗಗಳನ್ನು ಒಂದುಗೂಡಿಸುವುದಕ್ಕೆ ಪೂರಕವಾದ ಜಾತಿ, ಮತ, ಭಾಷೆಗಳೇ ಜನ ಜನರ ಮಧ್ಯೆ, ದೇಶ ದೇಶಗಳ ಮಧ್ಯೆ ವೈರಕ್ಕೆ ಕಾರಣವಾಗಿರುವುದು ಒಂದು ವಿಪರ್ಯಾಸ. ಅಷ್ಟೇ ಅಲ್ಲ, ಅಂದು ಇದ್ದ ಅಸ್ತ್ರ -ಶಶ್ತ್ರಾಸ್ತ್ರ ಗಳಿಗೆ ಹೋಲಿಸಿದರೆ ಇಂದು ಪ್ರಪಂಚದಲ್ಲಿ, ಇಂತಹ ಹತ್ತು ಪ್ರಪಂಚಗಳನ್ನು ನಿಮಿಷದಲ್ಲಿ ಧ್ವಂಸ ಮಾಡಬಲ್ಲ ಮಾರಕಾಸ್ತ್ರಗಳನ್ನು ಹೊಂದಿರುವ ಹಲವಾರು ದೇಶಗಳುಂಟು. ನಮ್ಮಲ್ಲಿ ಬತ್ತಿಯನ್ನು ಕಿತ್ತು ಸಿದ್ಧವಾಗಿರುವ ಅಸ್ತ್ರಗಳುಂಟು. ಬೆಂಕಿ ಕಡ್ಡಿ ಗೀರಬೇಕಷ್ಟೇ. ಸಮಗ್ರವಾಗಿ ಇದನ್ನೆಲ್ಲಾ ಸೇರಿಸಿ ದುರ್ದೈವ ಎಂದರು ಮಾನ್ಯ ಗುಂಡಪ್ಪನವರು.

ಅಂದು ಗುಂಡಪ್ಪನವರು ಖೇದ ವ್ಯಕ್ತಪಡಿಸಿದ ಕಾರಣಗಳು ಇಂದಿಗೂ ಇವೆ. ಅಷ್ಟೇ ಅಲ್ಲ,ಇನ್ನೂ ವಿಕೃತ ರೂಪ ಪಡೆದುಕೊಂಡು ಇಡೀ ಪ್ರಪಂಚವನ್ನೇ ಎತ್ತಕೊಂಡುಹೋಗುತ್ತಿದೆಯೋ ಯಾರು ಬಲ್ಲರು.
ಅಂದು ಅಷ್ಟಕ್ಕೇ ಮರುಗಿದ ಗುಂಡಪ್ಪನವರು ಇಂದು ಈ ಸ್ಥಿತಿಯನ್ನು ನೋಡಿದರೆ ಏನು ಹೇಳಿರಬಹುದೆಂದು ಊಹಿಸಲೂ ಕಷ್ಟ.

ಇಂತಹ ವಿಚಾರಗಳನ್ನು ಮಂಥನಮಾಡುತ್ತ, ಒಂದು ಶಾಂತ ಪ್ರಪಂಚವನ್ನು ನಿರ್ಮಿಸುವ ದಿಕ್ಕಿನಲ್ಲಿ ಪ್ರಯತ್ನಿಸುತ್ತಾ, ನಾವು ಮುಂದಿನ ಕಗ್ಗಕ್ಕೆ ಹೋಗೋಣವೆ?
[02/01 8:25 AM] S. Bhargav: ಕಗ್ಗ-೧೨

ಮಾನವರೋ ದಾನವರೋ ಭೂಮಾತೆಯನು ತಣಿಸೆ
ಶೋಣಿತವನೆರೆಯುವರು ಬಾಷ್ಪಸಲುವುದಿರೆ?
ಏನು ಹಗೆ! ಏನು ಧಗೆ!ಏನು ಹೊಗೆ! ಯೀ ಧರಿಣಿ
ಸೌನಿಕನ ಕಟ್ಟೆಯೇಂ? – ಮಂಕುತಿಮ್ಮ

ಶೋಣಿತವನೆರೆಯುವರು= ಶೋಣಿತವನು+ ಎರೆಯುವರು/ಬಾಷ್ಪಸಲುವುದಿರೆ= ಭಾಷ್ಪ+ಸಲುವುದು+ಇರೆ

ಶೋಣಿತ= ರಕ್ತ, ಭಾಷ್ಪ = ಕಣ್ಣೀರು, ಎರೆಯುವುದು= ಸುರಿಸುವುದು, ಸಲುವುದಿರೆ= ಸುರಿಸಬೇಕಾದರೆ. ಸೌನಿಕ = ಕಟುಕ, /ಕಟ್ಟೆ= ಜಗುಲಿ.

ಇವರೇನು ಮನುಷ್ಯರೋ ಅಥವಾ ರಾಕ್ಷಸರೋ? ಈ ಭೂಮಾತೆಯನು ತಣಿಸಲು ಅಂದರೆ ದಾಹವಿಂಗಿಸಲು ಕಣ್ಣೇರು ಸುರಿಸುವಬದಲು ರಕ್ತವನ್ನು ಸುರಿಸಿಹರಲ್ಲ! ಈ ಪ್ರಪಂಚದಲ್ಲಿನ ಹಗೆ ಮತ್ತು ಹೊಗೆಗಳನ್ನು ನೋಡಿದರೆ ಇಡೀ
ಪ್ರಪಂಚವೇ ಕಟುಕನ ಜಗುಲಿಯಂತಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಮತ್ತದೇ ಯುದ್ಧದ ಸನ್ನಿವೇಶವನ್ನು ಈ ಕಗ್ಗದಲ್ಲೂ ಉಲ್ಲೇಖಿಸುತ್ತಾರೆ, ಶ್ರೀ ಗುಂಡಪ್ಪನವರು. ಪಾಪ ಅವರ ಮನ ಎಷ್ಟು ನೊಂದಿತ್ತೋ ಏನೋ? ಇಲ್ಲದಿದ್ದರೆ ಅಂದಿನ ವರ್ತಮಾನ ಸ್ಥಿತಿಗೆ ಇಷ್ಟೊಂದು ಪ್ರತಿಕ್ರಿಯೆ ಬರುತಿತ್ತೆ.

ಇರಲಿ. ಮಾನವರಾದ ನಾವು ಮಾನವರಂತೆ ಇರದೇ ದಾನವರಂತೆ ಏಕೆ ಒಬ್ಬರಿಗೆ ಮತ್ತೊಬ್ಬರ ರಕ್ತದಾಹ. ಬಾಳುವವನು ಮಾನವ ಎನ್ನುತ್ತದೆ ಪರಿಭಾಷೆ. ಬಾಳದೆ ಯುದ್ಧಮಾಡಿ ನಾಶಕ್ಕೆ ಕಾರಣರಾದವರನ್ನು ಮಾನ್ಯ ಗುಂಡಪ್ಪನವರು ದಾನವರೆಂದು ಸೂಕ್ತವಾಗೆ ಹೇಳಿದ್ದರೆ.

ಅಹಂಕಾರದಿಂದ, ಆಸೆಯಿಂದ, ಮದ, ಮತ್ಸರಗಳ ಕಾರಣಗಳಿಂದ ಎಲ್ಲ ಯುದ್ಧಗಳೂ ನಡೆಯುತ್ತವೆ. ನಮ್ಮ ಪುರಾಣಗಳಲ್ಲೂ ಇಂತಹ ಯುದ್ಧಗಳನ್ನು ನೋಡಬಹುದು. ದಾನವರಾಗೆ ಹುಟ್ಟಿದ ಹಿರಣ್ಯಾಕ್ಷ-ಹಿರನ್ಯಕಶಿಪುಗಳೂ ಸಹ ತಮಗೆ ಸಿಕ್ಕ ವಾರಗಳ ಬಲದಿಂದ, ಮದೋನ್ಮತ್ತರಾಗಿ ಭೂಲೋಕವೇನು ದೇವಲೋಕಕ್ಕೂ ಲಗ್ಗೇ ಇಟ್ಟ ಉಲ್ಲೇಖವುಂಟು .ಮಹಾಭಾರತದ ಯುದ್ಧದಲ್ಲೂ ಇಡೀ ಆರ್ಯವರ್ತವೇ ಇಬ್ಬಾಗವಾಗಿ ಕೆಲವರು ಕೌರವರ ಮತ್ತೆ ಕೆಲವರು ಪಾಂಡವರ ಪಕ್ಷ ವಹಿಸಿ ಯುದ್ಧಮಾಡಿ ೧೮ ಅಕ್ಷೋಹಿಣಿ ( ೧.೫೬ ಸಾವಿರ) ಜನರನ್ನು ಬಳಿ ತೆಗೆದುಕೊಂಡಿತಂತೆ. ಅದು ಪುರಾಣ. ಗ್ರೀಕ್ ಪುರಾಣದಲ್ಲಿ ಬರುವ ಟ್ರೋಜನ್ ಯುದ್ಧವೂ ಸಹ ಒಂದು ” ಹೆಲನ್” ಎನ್ನುವ ಹೆಣ್ಣಿಗಾಗಿ ನಡೆದು ಸುಮಾರು ವರ್ಷಗಳಕಾಲ ನಡೆದು ಅಪಾರ ಸಾವು ನೋವುಗಳಿಗೆ ಕಾರಣವಾಯಿತಂತೆ.

ಇನ್ನು ನಮ್ಮ ದೇಶದಲ್ಲಿ ಕ್ರಿಸ್ತ ಪೂರ್ವ ೩೨೩ ರ ಸುಮಾರಿಗೆ ಚಾಣಕ್ಯ ಬರುವವರೆಗೆ, ಸಣ್ಣ ಸಣ್ಣ ರಾಜರು ಮತ್ತು ಕೆಲವು ದೊಡ್ಡ ರಾಜರುಗಳು ಸದಾ ಯುದ್ಧನಿರತರು. ಮಾತ್ರ ಅವರ ದಾನವೀ ಅಹಂಕಾರವನ್ನು ತಣಿಸಲಿಕ್ಕಾಗಿಯೇ ನಡೆದ ಯುದ್ದ್ಧಗಳು. ಕ್ಷುಲ್ಲಕ ಕಾರಣಕ್ಕಾಗಿಯೇ ನಡೆವ ಯುದ್ಧಗಳಲ್ಲೆಲ್ಲ ನಡೆಯುವುದು ಸಾಮಾನ್ಯರ ಮಾರಣ ಹೋಮ. ಅದು ದಾನವೀ ಪ್ರವೃತ್ತಿ. ನಮ್ಮ ದೇಶವನ್ನೇ ತೆಗೆದುಕೊಂಡರೆ, ಮೊದಲು ಯವನರು, ನಂತರ ಮೊಘಲರು ನಂತರ ಬ್ರಿಟಿಷರು. ಹೀಗೆ ಆಕ್ರಮಣಕಾರರ ದಂಡೇ ನಮ್ಮ ದೇಶವನ್ನು ಲೂಟಿಮಾಡಲು ಹಿಂದೂ ಹಿಂಡಾಗಿ ಬಂದವರೇ ಹೆಚ್ಚು. ಇವರು ಸಾಲದೆಂಬಂತೆ,ಬಂದವರು ಡಚ್ಚರು, ಪೋರ್ಚ್ಯುಗೀಸರು , ಎಲ್ಲರೂ ನಮ್ಮ ನಾಡಿನಮೇಲೆ ದಾಳಿಮಾಡಿದರು. ವಾಚಕರೆ ನೋಡಿ ಭಾರತವು ಯಾವುದೇ ಅನ್ಯ ದೇಶದಮೇಲೆ ದಾಳಿ ಮಾಡಿದ್ದನ್ನು ಯಾವುದಾದರೂ ಪುಸ್ತಕದಲ್ಲಿ ಕಂಡಿದ್ದೀರಾ? ಅಖಂಡವಾಗಿದ್ದ ಭಾರತ ೨೦೦ ವರ್ಷಗಳಲ್ಲಿ ತುಂಡು ತುಂಡಾಗಿ ಹರಿದು ಹಂಚಿಹೋಗಿದೆ.

ಹಾಗಾಗಿ ವಾಚಕರೆ, ಅಹಂಕಾರ ದುರಾಸೆ ಈ ಎಲ್ಲ ಯುದ್ಧಗಳಿಗೂ ಕಾರಣವಾಗಿತ್ತು. ಈ ಜಗತ್ತಿನಲ್ಲಿ ಮಾನವರು ಸುಸಂಸ್ಕೃತ ಪ್ರಾಣಿಗಳು. ಅನ್ಯ ಪ್ರಾಣಿಗಳಿಗಿಂತ ಭಿನ್ನ. ಮಾನವತೆಯಿಂದ ತನ್ನ ಜೀವನವನ್ನು ಮತ್ತು ಅನ್ಯರ ಜೀವನವನ್ನೂ ಸಹ ಸುಂದರವಾಗಿ ರೂಪಿಸಿಕೊಳ್ಳಬಲ್ಲ ಶಕ್ತಿ ಅವನಿಗೆ ಇದೆ. ಆದರೆ ಮಾತ್ರ ಅಹಂಕಾರದಿಂದ ತನ್ನ ಬುಡಕ್ಕೆ ತಾನೇ ಕೊಳ್ಳಿ ಇಟ್ಟುಕೊಂಡು ಅನ್ಯರನೂ ಸುಡುವ ಈ ದಾನವೀ ಅಥವಾ ಪೈಶಾಚಿಕ ಪ್ರವೃತ್ತಿ ಏಕೆ?

ದರಣಿ ಸಸ್ಯಶ್ಯಾಮಲವಾಗಿರಬೇಕಾದರೆ, ನೀರು ಮತ್ತು ಶ್ರಮದ ಅವಶ್ಯಕತೆ ಉಂಟು ಅದನ್ನು ಬಿಟ್ಟು ದ್ವೇಷದ ಬೀಜ ಮತ್ತು ರಕ್ತದ ಸಿಂಚನವಾದರೆ, ಬೆಳೆ ಬೆಳೆದೀತೆ? ಹೊಟ್ಟೆ ತುಂಬೀತೆ? ಹಗೆಯ ಹೊಗೆಯಿಂದ ಉಸಿರು ಕಟ್ಟುತ್ತದೆಯೇ ಹೊರತು ಜೀವ ಪೋಷಣೆಯಾಗದು. ಜೀವನದ ನಡೆಯದು. ಈ ಪ್ರಪಂಚದ ಗತಿಯೇನು? ಅದು ಹಾಗಾದರೆ ಇಡೀ ಪ್ರಪಂಚವೇ ಕಟುಕನ ಜಗಲಿಯಂತಾಗುತ್ತದೆ ಅಲ್ಲವೆ? ಅಂಥಹ ಭಾವಗಳನ್ನೇ ಮಾನ್ಯ ಶ್ರೀ ಗುಂಡಪ್ಪನವರು ವ್ಯಕ್ತ ಪಡಿಸುತ್ತಾರೆ ಈ ಕಗ್ಗದಲ್ಲಿ.

ಸಹೃದಯರೇ, ಒಂದು ಸಣ್ಣ ಬೀದಿ ಜಗಳ ದಿಂದ ಹಿಡಿದು ಒಂದು ಮಹಾ ಪ್ರಪಂಚ ಯುದ್ಧಕ್ಕೂ ಮಾನವತೆಯ ಕೊರತೆ ಮತ್ತು ಅಹಂಕಾರಭರಿತ ದಾನವತೆಯೇ ಕಾರಣ. ದ್ವೇಶವೇ ಕಾರಣ ಇದರಿಂದ ನಾಶವೇ ಹೊರತು ಬಾಳು ಇಲ್ಲ ಎಂದು ನಾವೂ ಸಹ ಅರಿತು ನಮ್ಮ ನಮ್ಮಲ್ಲಿ ಇರುವ ಅಂತಹ ವಿನಾಶಕಾರಿ ಭಾವಗಳನ್ನು ತೊಡೆದು, ಈ ಇಡೀ ಜಗತ್ತನ್ನು ಸುಂದರ ತಾಣವನ್ನಾಗಿ ಪರಿವರ್ತಿಸಲು ಪ್ರಯತ್ನಿಸೋಣ.
[03/01 7:56 AM] S. Bhargav: ಕಗ್ಗ-೧೩

ಪುರುಷಸ್ವತಂತ್ರತೆಯ ಪರಮಸಿದ್ಧಿಯದೇನು ?I
ಧರಣಿಗನುದಿನದ ರಕ್ತಾಭಿಷೇಚನೆಯೇ? II
ಕರವಾಲವನು ಪುಷ್ಪಸರವೆಂದು ಸೆಳೆದಾಡೆ I
ಪರಿಮಳವ ಸೂಸುವುದೆ ? – ಮಂಕುತಿಮಾ II

ಪುರುಷ=ಶಕ್ತಿ , ಪರಮ =ಸರ್ವೋಚ್ಚ, ಸಿದ್ಧಿ= ಪ್ರಯೋಜನ, ಧರಣಿ= ಭೂಮಿ, ಅನುದಿನ=ಪ್ರತಿನಿತ್ಯ ,
ಅಭಿಷೇಚನೆ = ಅಭಿಷೇಕ , ಕರವಾಲ=ಕತ್ತಿ, ಸೆಳೆದಾಡೆ = ಎಳೆದಾಡಿದರೆ, ಪರಿಮಳ = ಸುಗಂಧ.

ಪುರುಷ ಸ್ವತಂತ್ರತೆಯು ಪರಮ ಸಿದ್ಧಿಯದೇನು ಧರಣಿಗೆ ಅನುದಿನವೂ ರಕ್ತಾಭಿಷೇಚನೆಯೇ
ಕರವಾಲವನು ಪುಷ್ಪಸರವೆಂದು ಸೆಳೆದಾಡೆ ಪರಿಮಳವ ಸೂಸುವುದೆ-ಮಂಕುತಿಮ್ಮ.

ಆಗ ನಡೆಯುತ್ತಿದ್ದ ಯುದ್ದ, ಯುದ್ದದಿಂದ ಆಗುತ್ತಿದ್ದ ದುಷ್ಪರಿಣಾಮಗಳು, ಇವುಗಳ ಬಗ್ಗೆ ಮನಕರಗಿ ಭಾವುಕರಾದ ಮಾನ್ಯ ಗುಂಡಪ್ಪನವರು ಶಕ್ತಿಯ ಸ್ವಾತಂತ್ರದ ಸರ್ವೋಚ್ಚ ಗುರಿ, ಈ ಭೂಮಿಗೆ ಪ್ರತಿದಿನವೂ ರಕ್ತದ ಅಭಿಷೇಕವೇ, ಒರೆಯಿಂದ ಕತ್ತಿಯನ್ನು ಹೂವಿನ ಮಾಲೆ ಎಂದು ಎಳೆದರೆ ಅದರಿಂದ ಸುಗಂಧ ಬರಬಹುದೇ ಎನ್ನುತ್ತಾರೆ.

ಪುರುಷ ಎಂದರೆ ಗಂಡಸು ಎನ್ನುವ ಅರ್ಥದಲ್ಲಿ ಸಾಮಾನ್ಯ ಬಳಕೆ. ಆದರೆ ವಾಸ್ತವದಲ್ಲಿ ಪುರುಷ ಎಂದರೆ ಶಕ್ತಿ ಎಂದು ಅರ್ಥ ” ಪುರೇ ಶಯತೀತಿ ಪುರುಷಃ ” ಚೇತನ ಎಂದು ಅಸ್ತಿತ್ವವನ್ನು ಸೂಚಿಸುವಾಗ, ಕ್ರಿಯಾಶೀಲತೆಯನ್ನು ಸೂಚಿಸುವಾಗ, ಚೈತನ್ಯ ಎಂದೂ ಕರೆಯಲಾಗುತ್ತದೆ. ಆದ್ದರಿಂದಲೇ ದೇವರನ್ನು ಸೂಚಿಸುವಾಗ ” ಪರಮ ಅಂದರೆ ಸರ್ವೋಚ್ಚ, ಪುರುಷ ಅಂದರೆ ಶಕ್ತಿ ಎಂಬ ಅರ್ಥದಲ್ಲಿ ” ಪರಮ ಪುರುಷ ” ಅಥವಾ ” ಪರಮಾತ್ಮ “ಎಂದು ಕರೆಯುತ್ತಾರೆ. ಒಟ್ಟಾರೆ, ಪುರುಷವೆಂದರೆ ಶಕ್ತಿ. ಈ ಶಕ್ತಿಯ ಉಪಯೋಗ ರಕ್ಷಣೆಗೆ ಮಾತ್ರ. ಹೇಗೆ ಪರಮಪುರುಷನು ತನ್ನ ಸರ್ವೋಚ್ಚ ಶಕ್ತಿಯನ್ನು ಜಗದ್ರಕ್ಷಣೆಗೆ ವಿನಿಯೋಗಿಸುತ್ತಾನೋ ಹಾಗೆಯೇ, ಈ ಜಗತ್ತಿನಲ್ಲಿ ಹೆಚ್ಚು ಶಕ್ತಿ ಇರುವವರು ತಮಗಿಂತ ಕಡಿಮೆ ಶಕ್ತಿ ಇರುವವರನ್ನು ರಕ್ಷಿಸಬೇಕು ಮತ್ತು ಆ ಶಕ್ತಿಯನ್ನು ಕೇವಲ ಆತ್ಮ ರಕ್ಷಣೆ ಮತ್ತು ಇತರರನ್ನು ರಕ್ಷಿಸುವುದಕ್ಕಾಗಿಯೇ ಉಪಯೋಗಿಸಬೇಕು. ಇದು ಧರ್ಮ.

ಇಲ್ಲಿ ಶಕ್ತಿಯೆಂದರೆ ಕೇವಲ, ದೈಹಿಕ ಶಕ್ತಿಯಷ್ಟೇ ಅಲ್ಲ. ಎಲ್ಲ ರೀತಿಯ ಶಕ್ತಿಯೂ ಇದರ ಪರಿಧಿಯೊಳಕ್ಕೆ ಬರುತ್ತದೆ. ದೇಹ ಬಲ, ಧನಬಲ, ಜನಬಲ, ಅಧಿಕಾರ ಬಲ, ಬುದ್ಧಿ ಬಲ, ಇತ್ಯಾದಿ ಇತ್ಯಾದಿ… ಹೀಗೆ ಯಾವುದೇ ರೀತಿಯ ಶಕ್ತಿಯ ಆಧಿಕ್ಯವಿದ್ದರೂ ಅದನ್ನು ಪರರ ರಕ್ಷಣೆಗೆ ಮಾತ್ರ ಉಪಯೋಗಿಸುವುದು ಧರ್ಮ.

ಆದರೆ ಅಂದಿನ ಮತ್ತು ಇಂದಿನ ವಾಸ್ತವತೆಯೇ ಬೇರೆ. ” ಹಿಂದಿಯಲ್ಲಿ ” ಜಿಸ್ಕಿ ಲಾಠಿ ಉಸ್ಕ್ತಿ ಭೈನ್ಸ್” ಎನ್ನುತ್ತಾರೆ. ಅಂದರೆ ಯಾರಕೈಯಲ್ಲಿ ಕೋಲು೦ಟೋ ಅವನದೇ ಎಮ್ಮೆ” ಎಂದು ಯಾರಿಗೆ ಅಧಿಕ ಶಕ್ತಿ ಇದೆಯೋ ಅವನೇ ರಾಜ. ತನಗೆ ಶಕ್ತಿ ಇದೆ. “ನಾನು ಏನನ್ನಾದರೂ ಮಾಡಬಹುದು, ನನ್ನು ಕೇಳುವವರಾರು, ಕೇಳಿದವರನ್ನು ಸದೆಬಡಿದುಬಿಡುತ್ತೇನೆ” ಎನ್ನುವ ದುರಾಚಾರದ ಜನರೇ ಅಧಿಕವಾಗಿದೆ. ಇದು ಅಹಂಕಾರದ ಪರಮಾವಧಿ. ಎಲ್ಲ ಸಂಘರ್ಶಗಳೂ ಈ ಅಹಂಕಾರ ಜನಿತವಾದ ದಬ್ಬಾಳಿಕೆಯಿಂದಲೇ ನಡೆಯುತ್ತವೆ. ಇದು ತಪ್ಪು. ಇದರಿಂದ ಪ್ರತಿನಿತ್ಯದ ರಕ್ತಪಾತ ಸಾವು ನೋವು ಮಾತ್ರ, ಎನ್ನುತ್ತಾರೆ ಶ್ರೀ ಗುಂಡಪ್ಪನವರು. ಅದಕ್ಕೊಂದು ಉಪಮೆಯನ್ನು ಕೊಡುತ್ತಾರೆ. ಹೂವಿನಮಾಲೆ ಎಂದು ಒರೆಯಿಂದ ಕತ್ತಿಯನ್ನು ಎಳೆದರೆ, ಅದು ಸುಗಂಧವನ್ನು ಬೀರುತ್ತದೆಯೇ.

ವಾಚಕೆ ನಮ್ಮಲ್ಲಿ ಶಕ್ತಿ ಇದ್ದರೆ ನಮ್ಮ ಅವಶ್ಯಕತೆಗೆ ಮೀರಿ ಶಕ್ತಿ ಇದ್ದರೆ, ಅದನ್ನು ಪರಹಿತಕ್ಕಾಗಿ ಉಪಯೋಗಿಸಬೇಕು. ಆ ಪರಮಾತ್ಮನ ಕೃಪೆಯಿಂದ ನಮಗೆ ಸಿಕ್ಕ ಅಧಿಕ ಶಕ್ತಿಯನ್ನು ನಮಗಿಂತ ಕಡಿಮೆ ಶಕ್ತಿ ಇರುವವರ ಒಳಿತಿಗಾಗಿ ಉಪಯೋಗಿಸಬೇಕು. ಹಾಗಾದಾಗ ಪರಸ್ಪರ ಪ್ರೀತಿ ವಿಶ್ವಾಸಗಳು ಬೆಳೆದು ಇಡೀ ಸಮಾಜವೇ ವಾಸಿಸಲು ಒಂದು ಸುಂದರ ತಾಣವಾಗುತ್ತದೆ. ಇಂದಿನ ಸ್ವಾರ್ಥಭರಿತ ಸಮಾಜದಲ್ಲಿ ಎಂತೆಂತಹ ವಿಧ್ಯಮಾನಗಳು ನಡೆಯುತ್ತಿವೆ ಎಂದು ವಿಷದಪಡಿಸುವ ಅವಶ್ಯಕತೆಯೇ ಇಲ್ಲ. ಅದು ಸರ್ವರಿಗೂ ಗೊತ್ತಿರುವ ವಿಷಯವೇ. ಅದು ತಪ್ಪು. ಅದು ಸರಿಯಿಲ್ಲ ಎಂಬ ಅರಿವೂ ಎಲ್ಲರಿಗೂ ಇದೆ. ಹಾಗಾಗಿ, ವಾಚಕರೆ, ನಾವೂ ಆ ನಿಟ್ಟಿನಲ್ಲಿ ಯೋಚನೆ ಮಾಡಬೇಕು. ನಮ್ಮ ಶಕ್ತಿಯನ್ನು, ಸ್ವರಕ್ಷಣೆಗೆ ಉಪಯೋಗಿಸುವ, ಪರರ ರಕ್ಷಣೆಗೆ ಉಪಯೋಗಿಸುವ ಆದರೆ ದುರಾಸೆಗೆ ಸ್ವಾರ್ಥಕ್ಕೆ ಪರರ ಭಕ್ಷಣೆಗೆ ಉಪಯೋಗಿಸುವ ಬುದ್ಧಿ ನಮಗೆ ಎಂದೂ ಬರದಿರಲಿ ಎಂದು ಪ್ರಾರ್ಥಿಸುತ್ತ, ನಮ್ಮಲ್ಲಿ ಇರಬಹುದಾದ ಕೊರತೆಗಳನ್ನು ನೀಗಿಸಿಕೊಳ್ಳುವ ಪ್ರಯತ್ನವನ್ನು ಮಾಡೋಣ.
[04/01 5:33 AM] S. Bhargav: ಕಗ್ಗ-೧೪

ಲೋಕಜೀವನ ಮಂಥನ

ಒಂದೇ ಗಗನವ ಕಾಣುತೊಂದೆ ನೆಲವನು ತುಳಿಯು I
ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು II
ಒಂದೇ ಗಾಳಿಯನುಸಿರ್ವ ನರಜಾತಿಯೋಳಗೆಂತು I
ಬಂದುದೀ ವೈಷಮ್ಯ? – ಮಂಕುತಿಮ್ಮ

ಉಣ್ಣು = ತಿನ್ನು, ಉಸಿರ್ವ= ಉಸಿರಾಡುವ , ನರಜಾತಿ = ಮಾನವ ಜನಾಂಗ. ವೈಷಮ್ಯ = ದ್ವೇಷ . ಎಂತು- ಹೇಗೆ.

ಒಂದೇ ಆಕಾಶವ ಕಾಣುತ, ಒಂದೇ ನೆಲವನ್ನು ತುಳಿಯುತ ಒಂದೇ ಧಾನ್ಯವನ್ನು ಉಣ್ಣುತ ಒಂದೇ ಗಾಳಿಯನು ಉಸಿರಾಡುವ ಮಾನವಜಾತಿಯ ಒಳಗೆ ಈ ದ್ವೇಷ ಹೇಗೆ ಬಂತು ಎಂದು ತಮಗೆ ತಾವೇ ಪ್ರಶ್ನಿಸುತ್ತ ಈ ವಿಚಾರವನ್ನು ಓದುಗರ ಮುಂದಿಟ್ಟಿದ್ದಾರೆ, ಶ್ರೀ ಗುಂಡಪ್ಪನವರು.

ಈ ಜಗತ್ತಿನಲ್ಲಿರುವ ಮಾನವರೆಲ್ಲರಿಗೂ, ಮಾನವರಿಗಷ್ಟೇ ಏನು ಸಕಲ ಜೀವಿ ಸಂಕುಲಕ್ಕೂ ತಲೆಯ ಮೇಲಿನ ಆಕಾಶ ಒಂದೇ. ಇರುವ ಭೂಮಿಯೂ ಒಂದೇ, ಎಲ್ಲರೂ ತಿನ್ನುವುದು ಒಂದೇ ರೀತಿಯ ಆಹಾರ, ಕುಡಿಯುವ ನೀರಿಗೂ ಒಂದೇ ಮೂಲ, ಹಾಗಿದ್ದರೂ ಏಕೆ ಈ ವೈಷಮ್ಯ, ಈ ದ್ವೇಷ ಎಂಬ ಪ್ರಶ್ನೆ ಕಾಲಾನುಕಾಲಕ್ಕೆ ಎಲ್ಲ ಚಿಂತಕರ ಮನಗಳಲ್ಲೂ ಸುಳಿದು, ಉತ್ತರ ಕಂಡು ಕೊಳ್ಳಲು ಪ್ರಯತ್ನ ಆಗಿದೆ.

ಆದರೆ ವಿಚಿತ್ರವೇನೆಂದರೆ, ಅನಾದಿ ಕಾಲದಿಂದಲೂ ಮನುಷ್ಯರ ಗುಂಪುಗಳ ನಡುವೆ, ಒಂದು ದೇಶ ಮತ್ತು ಮತ್ತೊಂದು ದೇಶದ ನಡುವೆ, ಅಣ್ಣ ತಮ್ಮಂದಿರ ನಡುವೆ, ಎರಡು ಊರಿನ ನಡುವೆ ಹೀಗೆ ಎರಡು ಗುಂಪುಗಳ ನಡುವೆ ಉದ್ಭವವಾಗುವ ದ್ವೇಷ, ದ್ವೇಷದಿಂದ ಆವೇಶ, ಇವೆರಡರ ಫಲವಾಗಿ ಜಗಳ ಹೊಡೆದಾಟಕ್ಕೆ ಮೂಲ ಕಾರಣವೇ, ಶ್ರೀ ಗುಂಡಪ್ಪನವರು ಉಲ್ಲೇಖಿಸಿದ, ನೀರು ನೆಲಗಳೇ ಅಲ್ಲವೇ? ಇವುಗಳಿಗಾಗಿಯೇ ಜಗತ್ತಿನ ಎಲ್ಲ ಹೋರಾಟಗಳೂ ನಡೆದಿವೆ. ಇಂದು ನಮ್ಮ ದೇಶದ ನ್ಯಾಯಾಲಯಗಳಲ್ಲಿ ಹೂಡಲ್ಪಡುವ ಕಟ್ಟಳೆಗಳಲ್ಲಿ ೯೦ ಪ್ರತಿಶತ ಭೂಮಿಗೆ ಸಂಬಂಧಿಸಿದುವೆ ಆಗಿರುತ್ತೆ.

“ಇಷ್ಟಿದ್ದರೆ ಮತ್ತಷ್ಟರಾಸೆ” ನಮ್ಮ ಜೀವಿಕೆಗೆ ಎಷ್ಟು ಬೇಕೋ ಅಷ್ಟನ್ನು ಪಡೆದು ಹೊಂದಿ ಕಾಯ ಕರ್ಮ ಮಾಡಿ ಜೀವಿಸುವುದು ಸರಿಯಾದ ಕ್ರಮ. ಆದರೆ ಮಾನವನ ಆಸೆಗೆ ಗಗನವೇ ಮಿತಿ. ಅದಕ್ಕೊಂದು ಹಿಂದೆ ನಾ ಕೇಳಿದ ಕಥೆಯನ್ನು ಹೇಳಬೇಕು. ಒಬ್ಬನಿಗೆ ಬಹಳ ಬಹಳ ಭೂಮಿ ಬೇಕೆನ್ನಿಸಿತಂತೆ. ಅವನ ತಪಸ್ಸಿಗೆ ಮೆಚ್ಚಿ ದೇವರು ಏನು ವರಬೇಕೆಂದಾಗ, “ನನಗೆ ಹೆಚ್ಚು ಭೂಮಿ ಬೇಕು” ಎಂದನಂತೆ. ” ನೋಡು ನೀ ನಿಂತಿರುವ ಜಾಗದಿಂದ ಇಂದು ಸಂಜೆಯವರೆಗೆ ಎಷ್ಟುದೂರ ಓಡಿ, ಎಷ್ಟು ಭೂಮಿಯನ್ನು ಕ್ರಮಿಸಿ ಮತ್ತೆ ಸೂರ್ಯಾಸ್ತಮಾನದ ವೇಳೆಗೆ ನೀ ಈಗ ನಿಂತಿರುವ ಜಾಗಕ್ಕೆ ಬಂದು ಸೇರಿದರೆ, ನೀ ಎಷ್ಟು ಭೂಮಿಯನ್ನು ಉಪಕ್ರಮಿಸಿರುತ್ತೀಯೋ ಅದನ್ನೆಲ್ಲ ನಿನಗೆ ಕೊಡುತ್ತೇನೆ” ಎಂದನಂತೆ ಆ ದೇವರು. ಮಾನವರ ಬಲಹೀನತೆ ಆ ದೇವರಿಗೇ ಗೊತ್ತಿಲ್ಲವೇ. ಕೊಟ್ಟದ್ದೂ ಅವನೇ ತಾನೇ? ಸರಿ ಇವ ಓಡಿದ, ಓಡಿದ. ಓಡಿ ಓಡಿ ಇನ್ನೂ ಸ್ವಲ್ಪ ಮುಂದೆ ಹೋಗುವ, ಇನ್ನೂ ಸ್ವಲ್ಪ ಮುಂದೆ ಹೋಗುವ, ಎಂದು ಓಡಿ ಓಡಿ ಮಧ್ಯಾನ್ಹದ ತನಕ ಓಡಿದ. ” ಅಯ್ಯೋ ಹಿಂತಿರುಗಬೇಕಲ್ಲ ಎಂದು ಯೋಚನೆ ಮಾಡಿ ಮತ್ತೆ ಸ್ವಸ್ಥಾನ ಸೇರಲು ಮೊದಲಿಟ್ಟ. ಆರಂಭದ ಹುಮ್ಮಸ್ಸು ಮತ್ತು ಶಕ್ತಿ ಕುಂದಿತ್ತು. ಬರುತ್ತಾ ಬರುತ್ತಾ ಬಹಳ ಸುಸ್ತಾಗಿ ಕುಸಿದ. ಇನ್ನೇನು ತಾ ಶುರುಮಾಡಿದ ಸ್ಥಳ “ಅಗೋ, ಅಲ್ಲಿ ಕಾಣುತ್ತಿದೆ” ಎನ್ನುವಾಗ ಆ ಸೂರ್ಯ ಮುಳುಗಿಯೇ ಬಿಟ್ಟ. ಆ ದೇವರೂ ಮಾಯವಾಗಿಬಿಟ್ಟ. ಇವನಿಗೆ ಉಳಿದಿದ್ದು ಏನು ಬರೀ ಶ್ರಮ. ಪಶ್ಚಾತ್ತಾಪ.

ಹೀಗೆ ನಾವು ಮಾಡುವ ಕೆಲಸ, ವಸ್ತು, ವ್ಯಕ್ತಿ, ವಿಷಯಗಳನ್ನು ಬಯಸುವಾಗ, ನಮ್ಮ ಮಿತಿಗಳನ್ನು ಅರಿತುಕೊಂಡರೆ ಸುಖ ಇಲ್ಲದಿದ್ದರೆ? ಇಲ್ಲದಿದ್ದರೆ, ನಮಗೆ ಸಿಗಲಿಲ್ಲವೆಂದು ಕೋಪ, ನಮಗಿಂತ ಪರರಿಗೆ ಅಧಿಕವಾಗಿ ಸಿಕ್ಕಿದೆ ಎಂದು ಅಸೂಯೆ, ಸಿಕ್ಕರೆ ಮತ್ತಷ್ಟರ ಲೋಭ, ಅಧಿಕವಾಗಿ ಸಿಕ್ಕರೆ ಮದ, ಸಿಕ್ಕದ್ದು ನಾನಲ್ಲೇ ಇರಬೇಕೆನ್ನುವ ಮೋಹ ಹೇಗೆ ಎಲ್ಲವೂ ಅಂಟಿಕೊಳ್ಳುತ್ತದೆ. ಜೀವನವೇ ನರಕವಾಗುತ್ತದೆ .

ಒಂದೇ ಭೂಮಿ ಒಂದೇ ಆಕಾಶ ಈ ಭೂಮ್ಯಾಕಾಶಗಳ ಸಂಬಂಧವನ್ನು ಎಲ್ಲರೂ ಒಂದೇ ರೀತಿಯಲ್ಲಿ ಹೊಂದಿರುವಾಗ ಏಕೆ ಈ ವೈಷಮ್ಯವೆಂದರೆ, ಜಾತಿ, ಮತ, ಭಾಷೆ, ಪ್ರಾಂತ, ದೇಶಗಳ ಎಲ್ಲೆಗಳನ್ನು ಹಾಕಿ ಕೊಂಡು ಮಾನವರು ಅದನ್ನು ದಕ್ಕಿಸಿಕೊಳ್ಳಲು, ಕಾಪಾಡಲು ಮತ್ತು ತಮ್ಮ ಆಧಿಕ್ಯವನ್ನು ಸಾರಲು, ಸ್ಥಿರಪಡಿಸಲು ಮಾಡುವ ನಿರಂತರ ಹೋರಾಟದ ಫಲವೇ ಈ ದ್ವೇಷಾಸೂಯೆಗಳ ವಿಷ ವೃತ್ತ. ತೃಪ್ತಿಗೆ ಒಂದು ಎಲ್ಲೆ ಅಥವಾ ಮಿತಿ ಹಾಕಿಕೊಂಡರೆ ಎಲ್ಲರಿಗೂ ಸುಖ ಇಲ್ಲದಿದ್ದರೆ ಎಲ್ಲರಿಗೂ ಹಿಂಸೆ ಮತ್ತು ಈ ಬಾಳೇ ನರಕ ಸದೃಶ. ಈ ಜಗತ್ತಿನ ಮಾನವರೆಲ್ಲ ಒಂದೇ. ಈ ಎಲ್ಲ ಭೂಮಿ ಆಕಾಶ ನೀರು ಎಲ್ಲವನ್ನೂ ಪರಮಾತ್ಮ ಎಲ್ಲರ ಉಪಯೋಗಕ್ಕಾಗಿ ನಿರ್ಮಿಸಿದ್ದಾನೆ. ಇದು ಯಾವುದೋ ನಮ್ಮ ಸ್ವಂತವಾಗಲು ಸಾಧ್ಯವೇ ಇಲ್ಲ. ಏಕೆಂದರೆ ಈ ಭೂಮಿಯೇ ನಮಗೆ ಸ್ವಂತ, ನಿರಂತರ ಮತ್ತು ಶಾಶ್ವತವಲ್ಲದಿದ್ದಮೇಲೆ, ಈ ಭೂಮಿಯ ಮೇಲಿನ ವಸ್ತುಗಳು ಹೇಗೆ ಸ್ವಂತವಾಗಲು ಸಾಧ್ಯ. ಅಂತಕನೊಬ್ಬ ಬಾಳಿನಂಚಲ್ಲಿ, ಕಾದಿಲ್ಲವೇ ಇದಕ್ಕೆಲ್ಲ ಒಂದು ಅಂತ್ಯ ಹಾಡಲು.

ಇಂತಹ ಪ್ರವೃತ್ತಿಯಿಂದ ನಿರಂತರ ದ್ವೇಷಾಸೂಯಗಳ ವಿಷ ವೃತ್ತದಲ್ಲಿ ನಾವು ಬೀಳುವುದು ಬೇಡ. ಹಾಗೆ ಬಿದ್ದವರನ್ನು ಬಿಡಿಸುವ ಪ್ರಯತ್ನ ಮಾಡುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗೋಣ ಬನ್ನಿ.
[05/01 7:10 AM] S. Bhargav: ಕಗ್ಗ-೧೫

ಹಳೆಯ ಭಕ್ತಿ ಶ್ರದ್ಧೆಯಳಿಸಿಹೋಗಿದೆ ಮಾಸಿ I
ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ II
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ I
ತಳಮಳಿಸುತಿದೆ ಲೋಕ – ಮಂಕುತಿಮ್ಮ II

ಹಳೆಯ ಭಕ್ತಿ ಶ್ರದ್ಧೆಯು ಅಳಿಸಿಹೋಗಿದೆ ಮಾಸಿ. ಸುಳಿದಿಲ್ಲವು ಯಾವ ಹೊಸ ದರ್ಶನದ ಹೊಳಪು
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ ತಳಮಳಿಸುತಿದೆ ಲೋಕ ಮಂಕುತಿಮ್ಮ

ಮಾಸು = ಅಳಿಸು , ದರ್ಶನ=ಸಿದ್ಧಾಂತದ ಹೊಸ ರೂಪ, ತೆರದಿ= ತರಹೆ, ತಳಮಳಿಸು= ಒದ್ದಾಡು, ಪರದಾಡು

ಈಗ್ಗೆ ಎಪ್ಪತ್ತು ವರ್ಷಗಳ ಕೆಳಗೇ ಗುಂಡಪ್ಪನವರಿಗೆ ಹೀಗೆ ಅನ್ನಿಸಿದ್ದರೆ, ಇಂದು ಅವರು ಏನನ್ನುತ್ತಿದ್ದರೋ ಏನೋ!

ಇರಲಿ, ಪುರಾತನ ಕಾಲದಿಂದಲೂ ಅನೂಚಾನವಾಗಿ ಜನಗಳಲ್ಲಿ ಇದ್ದ ದೇವರಲ್ಲಿ ಭಕ್ತಿ ಮತ್ತು ಸಂಪ್ರದಾಯಗಳಲ್ಲಿ ಇದ್ದ ಶ್ರದ್ಧೆ ಈಗ ಅಳಿಸಿ ಹೋಗಿದೆ. ಇಲ್ಲಿ ಸಂಪ್ರದಾಯ ಎಂದರೆ ಹಿಂದಿನಿಂದ ಬಂದಿರುವ ನಡವಳಿಕೆ ಎಂದಷ್ಟೆ ಅರ್ಥ. ಜನರಲ್ಲಿ ಮತ್ತೆ ಈ ಭಕ್ತಿ ಮತ್ತು ಶ್ರದ್ಧೆಗಳನ್ನು ತರಲು ಯಾವ ಹೊಸ ಸಿದ್ಧಾಂತಗಳೂ ಪ್ರತಿಪಾದಿಸಲ್ಪಟ್ಟು ಪ್ರಚಾರಕ್ಕೆ ಬಂದಿಲ್ಲ. ಹಾಗಾಗಿ ಜನರೆಲ್ಲರೂ ಮೊದಲಿನಿಂದ ಬಂದದನ್ನು ಕಳೆದು ಕೊಂಡು ಹೊಸದಿಲ್ಲದೆ ಒಂದು ಅತಂತ್ರ ಸ್ಥಿತಿಯಲ್ಲಿದ್ದಾರೆ. ಯಾರ ಸಹಾಯವೂ ಇಲ್ಲದೆ ಸುಲಭವಾಗಿ ಮತ್ತು ಚೆನ್ನಾಗಿ ಓಡಾಡಲು ಅಭ್ಯಾಸವಾಗಿರುವ ಮನೆ ಕುಸಿದು ಹೋದರೆ, ಆ ಮನೆಯಲ್ಲಿ ವಾಸಿಸುವ ಕುಂಟನಿಗೋ ಕುರುಡನಿಗೋ, ಪಾಪ ತಳಮಳಿಸುವ ಮತ್ತು ಪರದಾಡುವಂತೆ ಆಗುತ್ತದಲ್ಲವೇ? ಹಾಗೆ ಆಗಿದೆ ಇಂದಿನ ಲೋಕದ ಪರಿಸ್ಥಿತಿ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಇಲ್ಲಿ ಭಕ್ತಿ ಎಂದರೆ ಪರಮಾತ್ಮನ ಮೇಲಿರುವ ಭಕ್ತಿ ಎಂದೇ ತಿಳಿಯಬೇಕಿಲ್ಲ. ಆದರೆ ನಾವು ಮಾಡುವ ಎಲ್ಲ ಕೆಲಸಗಳೂ ನಮ್ಮೊಳಗಿರುವ ಪರಮಾತ್ಮ ಸ್ವರೂಪೀ ಜೀವಾತ್ಮನು ತೃಪ್ತನಾಗುವುದಕ್ಕೆಅಂದರೆ ಆತ್ಮ ತೃಪ್ತಿಗೆ , ಎಂದುಕೊಂಡಾಗ, ಆ ಕೆಲಸದಲ್ಲಿ ಭಕ್ತಿ. ಆ ಭಕ್ತಿ ಇದ್ದಾಗ, ಮಾಡುವ ಕೆಲಸದಲ್ಲಿ ಶ್ರದ್ಧೆ ಬರುತ್ತದೆ. ಹಾಗೆ ಭಕ್ತಿ ಮತ್ತು ಶ್ರದ್ಧೆ ಎರಡೂ ಇದ್ದಾಗ, ಮಾಡುವ ಕೆಲಸ ಸಮರ್ಪಕವಾಗಿದ್ದು ಅದರ ಫಲವೂ ಒಳ್ಳೆಯದಾಗಿರುತ್ತದೆ. ” ಹೇಗೆ ಮನವೋ ಹಾಗೆ ಭಾವ . ಹೇಗೆ ಭಾವವೋ ಹಾಗೆ ಕಾರ್ಯ. ಹೇಗೆ ಕಾರ್ಯವೋ ಹಾಗೆ ಫಲ.” ಹಾಗಾಗಿ ಮನಸ್ಸಿನಲ್ಲಿ ಭಕ್ತಿ ಮತ್ತು ಶ್ರದ್ಧೆಗಳು ಬಹಳ ಮುಖ್ಯ. ಆದರೆ ಅದು ಈಗ ಮಾಸಿ ಹೋಗಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಹೇಗೆ ಮಾಸಿಹೋಯಿತು? ಹಲವಾರು ಕಾರಣಗಳು. ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತದೆ. ಆದರೆ ನಕಾರಾತ್ಮಕ ಬದಲಾವಣೆಯಾದರೆ ಅದು ಸರಿಯಲ್ಲ. ಆದ್ದರಿಂದಲೇ ಮಾಸಿಹೋದದ್ದು. ಹಿರಿಯರು ಮನೆಗಳಲ್ಲಿ ಕಿರಿಯರಿಗೆ ಮಾರ್ಗ ದರ್ಶನ ಮಾಡಬೇಕು. ಅವರ ಅನುಭವ ಮತ್ತು ಜ್ಞಾನದ ಮೂಸೆಯಿಂದ ಕಿರಿಯರಿಗೆ ಜ್ಞಾನವನ್ನು ಎರಕ ಹೊಯ್ದಂಗೆ ಎರೆಯಬೇಕು. ಆದರೆ ನಮ್ಮಲ್ಲಿ ಕಾಲಕ್ರಮೇಣ ‘ಏನು’ ಮಾಡಬೇಕು ಎನ್ನುವುದನ್ನು ಮಾತ್ರ ಹೇಳುತ್ತಿದ್ದರು. ‘ಹೇಗೆ’ ಮಾಡಬೇಕು ಎನ್ನುವುದನ್ನು ಹೇಳುತ್ತಿದ್ದರು ಆದರೆ ‘ಏಕೆ’ ಮಾಡಬೇಕು ಎಂದು ಕೇಳಿದರೆ ಅದಕ್ಕೆ” ಬಂಡಾಯ” ವೆನ್ನುತ್ತಿದ್ದರು. “ಹೇಳಿದಷ್ಟು ಮಾಡೋ ತಲೆಹರಟೆ ” ಎನ್ನುತ್ತಿದ್ದರು. ಒಂದು ಅವರಿಗೆ ಹೇಳಲು ಗೊತ್ತಿರಲಿಲ್ಲ ಅಥವಾ ಹೇಳಬೇಕಾದ ವಿಷಯವೇ ಗೊತ್ತಿರಲಿಲ್ಲ ಅಥವಾ ಅವರಿಗೆ ಗೊತ್ತಿದ್ದ ವಿಷಯದ ಸಂಪೂರ್ಣ ಜ್ಞಾನವಿರಲಿಲ್ಲ. ಒಂದು ಕೆಲಸ, ಆ ಕೆಲಸ ಮಾಡುವ ರೀತಿ ಮತ್ತು ಅದರ ಅಂತರ್ಯದ ಉದ್ಧ್ಯೇಶ ಇವುಗಳನ್ನು ಅರಿಯುವುದು ಬಹಳ ಮುಖ್ಯ. ಇದು ಎಲ್ಲ ರೀತಿಯ ಕೆಲಸಗಳಿಗೂ ಅನ್ವಯವಾಗುತ್ತದೆ. ಅದನ್ನು ವಿವರಿಸದೆ ಮಾತ್ರ ಕೆಲಸವನ್ನಷ್ಟೇ ವಿವರಿಸಿ ಮಾಡಲು ಬಿಟ್ಟಾಗ, ಆ ಕೆಲಸದಲ್ಲಿ ಅವರಿಗೆ ತಿರಸ್ಕಾರ ಹುಟ್ಟಿ ಮಾಡುವ ಕೆಲಸದಲ್ಲಿ ಶ್ರದ್ಧೆ ಇರುವುದಿಲ್ಲ. ಶ್ರದ್ಧೆ ಇಲ್ಲದಿದ್ದರೆ ಭಕ್ತಿಯೂ ಹುಟ್ಟುವುದಿಲ್ಲ. ಹಿಂದಿನವರು ಮಾಡಿದ ತಪ್ಪು ಅದೇ.

ಅಂತರ್ಯದ ಭಾವ ಹೇಳಿಕೊಡುವುದು ಅಷ್ಟು ಸುಲಭವಲ್ಲ. ಮೊದಲು ಹೇಳಿಕೊಡುವವನಿಗೆ, ಆ ಭಾವ ಸಿದ್ಧಿಯಾಗಿರಬೇಕು. ಹೇಳಿಕೊಡುವ ಮತ್ತು ಎರಕ ಹೊಯ್ಯುವ ಕಲೆ ಸಿದ್ಧಿಯಾಗಿರಬೇಕು, ಮತ್ತು ಹೊಯ್ಯಬೇಕಾದ ಪಾತ್ರದ “ಪಾತ್ರತೆಯ” ಮತ್ತು ” ಯೋಗ್ಯತೆಯ” ಅರಿವು ಅವನಿಗೆ ಇರಬೇಕು. ( transmitter ಮತ್ತು receiver ಎರಡೂ ಸರಿ ಇರಬೇಕು ) ಇಬ್ಬರೂ ಒಬ್ಬರಿಗೊಬ್ಬರು ಸರಿ ಹೋದರೆ ಆಗ ಶುದ್ಧ ಸತ್ವ ಮನದೊಳಕ್ಕೆ ಇಳಿಯುತ್ತೆ. ಭಕ್ತಿ ಬರುತ್ತೆ ಮತ್ತು ಶ್ರದ್ಧೆ ಬೆಳೆಯುತ್ತೆ. ಅದನ್ನು ನಮ್ಮ ಹಳೆಯ ಗುರುಕುಲ ಪದ್ದತಿಯಲ್ಲಿ ಕಾಣ ಸಿಗುತ್ತಿತ್ತು. ಒಟ್ಟಾರೆ ಹೇಳಬೇಕೆಂದರೆ ಇಂದು ಹಾಗೆ ಹೇಳಿಕೊಡುವವರಾಗಲೀ, ಕಲಿಯುವವರಾಗಲೀ ಇಲ್ಲ. ಇದನ್ನೇ ಗುಂಡಪ್ಪನವರು
“ಮಾಸಿ ಹೋಗಿದೆ” ಎನ್ನುತ್ತಾರೆ. ಇದಕ್ಕೆ ಏನು ಪರಿಹಾರವೆಂದು ಎಲ್ಲರೂ ಯೋಚಿಸಬೇಕು.

ಹಾಗೆ ಮಾಸಿಹೋದದ್ದರಿಂದ ಏನಾಗಿದೆ ಎಂದರೆ, ಮೊದಲೇ ನಾವು ಬಲಹೀನರು. ತತ್ವದ ಬಲವಿಲ್ಲದೆ ಸತ್ವಹೀನರು. ಸತ್ಯದ ಬಲವಿಲ್ಲದೆ ಸತ್ವಹೀನರು . ಯಾವುದೋ ಒಂದನ್ನು ಹಿಡಿದುಕೊಂಡು ಹೇಗೋ ಬದುಕುತ್ತಿದ್ದೆವು. ಈಗ ನಾವು ಹಿಡಿದಂತಾ ವಸ್ತುವೇ ಬಲಹೀನವಾಗಿ ನಮ್ಮ ಅಸ್ತಿತ್ವವೇ ಅಲುಗಾಡುತ್ತಿದೆ. ಹಿಡಿದ ಕೊಂಬೆ ಮುರಿದರೆ, ಹಿಡಿಯಲು ಮತ್ತೊಂದು ಕೊಂಬೆ ಇದ್ದರೆ ಹಿಡಿದು ತೂಗಾಡಬಹುದು. ಇಲ್ಲದಿದ್ದರೆ ಬೀಳುವುದೇ ದಾರಿ. ಚೆನ್ನಾಗಿ ಓಡಾಡಲು ಅಭ್ಯಾಸವಾಗಿರುವ ಮನೆ ಕುಸಿದು ಹೋದರೆ, ಆ ಮನೆಯಲ್ಲಿ ವಾಸಿಸುವ ಕುಂಟನಿಗೋ ಕುರುಡನಿಗೋ, ತೊಂದರೆಯಾಗಿ ಅವನು ತಡಬಡಾಯಿಸುವಂತೆ ನಾವೂ ಸಹ ನಮ್ಮ ಭಕ್ತಿ ಶ್ರದ್ಧೆಗಳನ್ನು ಕಳೆದು ಕೊಂಡು ಅತಂತ್ರದ ಸ್ಸ್ಥಿತಿಯಲ್ಲಿದ್ದೇವೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು.

ಹೋಗಲಿ ಹಳೆಯದನ್ನೇನೋ ಕಳೆದು ಕೊಂಡಿದ್ದೇವೆ, ಹೊಸದೇನಾದರೂ ಇದೆಯೋ ಅದನ್ನು ಹಿಡಿದು ಕೊಳ್ಳೋಣವೆಂದರೆ ಅದೂ ಇಲ್ಲ. ನಮ್ಮ ದೇಶದಲ್ಲೇ ಅಲ್ಲ ಇಡೀ ಜಗತ್ತಿನ ಪರಿಸ್ಥಿತಿಯೇ ಹೀಗಿದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯವಾದುದರಿಂದ, ವಾಚಕರೆ, ಇದನ್ನು ಬೇರೆಯಾಗಿಯೇ ವಿಶ್ಲೇಷಣೆ ಮಾಡಿ ಚರ್ಚಿಸುವುದೇ ಒಳ್ಳೆಯದು ಎಂದು ನನಗನಿಸುತ್ತದೆ. ನಮ್ಮ ಭಾರತೀಯ ಸಮಾಜದಲ್ಲಿ ಬೇರೆ ಯಾವ ದೇಶದಲ್ಲೂ ಸಿಗದಂತ ಅತ್ಯಮೂಲ್ಯವಾದ ಸಂಸ್ಕೃತಿ, ಪರಂಪರೆ, ಧರ್ಮಬೋದನೆ , ಎಲ್ಲವೂ ಇದೆ ಅದನ್ನು ಪುನರುಜ್ಜೀವನ ಗೊಳಿಸಿ ಮುಂದಿನ ಪೀಳಿಗೆಗೆ ಎರಕಹೊಯ್ಯಬೇಕಾದ ಉತ್ತರದಾಯತ್ವ ನಮ್ಮೆಲ್ಲರ ಮೇಲಿದೆ. ಕನ್ನಡಿಯ ಮೇಲಿನ ಧೂಳನ್ನು ಒರೆಸಿ, ಶುದ್ಧಿಗೊಳಿಸಿ ಪ್ರತಿಬಿಂಬ ನಿಚ್ಚಳವಾಗಿ ಕಾಣುವಂತೆ ಮಾಡಬೇಕಾಗಿದೆ.

ಇಂತಹ ವಿಷಯಗಳನ್ನು ನಾವು ನಮ್ಮ ವಿಚಾರದ ಓರಗೆ ಹಚ್ಚಿ ನೋಡುತ್ತ ಮುಂದಿನ ಕಗ್ಗಕ್ಕೆ ಹೋಗೋಣವೆ?
[06/01 6:27 AM] S. Bhargav: ಕಗ್ಗ-೧೬

ಇಳೆಯ ಬಿಟ್ಟಿನ್ನುಮೆತ್ತಲುಮೈದದ ಪ್ರೇತ I
ವಲೆವಂತೆ ಲೋಕ ತಲ್ಲಣಿಸಿಹುದಿಂದು II
ಹಳೆಧರ್ಮ ಸತ್ತಿಹುದು ಹೊಸ ಧರ್ಮ ಹುಟ್ಟಿಲ್ಲ II
ತಳಮಳಕೆ ಕಡೆಯೆಂದು – ಮಂಕು ತಿಮ್ಮ II

ಇಳೆಯ ಬಿಟ್ಟಿನ್ನುಮೆತ್ತಲುಮೈದದ = ಇಳೆಯ+ ಬಿಟ್ಟು + ಇನ್ನು+ ಎತ್ತಲುಂ+ಐದದ, ಪ್ರೇತವಲೆವಂತೆ= ಪ್ರೇತವು + ಅಲೆವಂತೆ, ಕಡೆಯಂದು= ಕಡೆ+ ಎಂದು

ಇಳೆ = ಭೂಮಿ, ಎತ್ತಲುಂ= ಯಾವಕಡೆಗೂ, ಐದದ=ಸೇರದ, ಪ್ರೇತ= ಮರಣಾನಂತರದ ಪ್ರಯಾಣದಲ್ಲಿ ಇರುವ ಆತ್ಮದ ಸ್ಥಿತಿ. ತಲ್ಲಣಿಸಿಹುದು + ಒದ್ದಾಡುತ್ತಿದೆ.

ಈ ಭೂಮಿಯನ್ನು ಬಿಟ್ಟು ಎತ್ತಲೂ ಸೇರದ ಪ್ರೇತದಂತೆ ಲೋಕ ತಲ್ಲಣಿಸುತ್ತಿದೆ. ಹಳೆ ಧರ್ಮ ಸತ್ತಿದೆ. ಹೊಸ ಧರ್ಮ ಹುಟ್ಟಿಲ್ಲ ತಳಮಳಕೆ ಕಡೆ ಎಂದು ಮಂಕುತಿಮ್ಮ ಎಂದು ತಮ್ಮನ್ನು ತಾವೇ ಪ್ರಶ್ನಿಸುತ್ತಾ ಅದೇ ಪ್ರಶ್ನೆಯನ್ನು ನಮ್ಮ ಮುಂದಿಡುತ್ತಾರೆ.

ಭಾರತ ದೇಶವು ಅನ್ಯ ದೇಶದವರ ಆಕ್ರಮಣಕ್ಕೆ ಬಲಿಯಾಗಿ, ಹಾಗೆ ಬಂದ ಆಕ್ರಮಣಕಾರರು ಈ ದೇಶದಲ್ಲೇ ನೆಲೆಯೂರಿ ನಿಂತಾಗ, ಅವರ ನಂಬಿಕೆಗಳು ವಿಶ್ವಾಸಗಳು ಅಚಾರ ವಿಚಾರಗಳು ಉಡುಗೆ ತೊಡಿಗೆಗಳ ಶೈಲಿ ಹೀಗೆ ಎಲ್ಲವೂ ನಮ್ಮ ದೇಶದ ಸಂಸ್ಕೃತಿಯ ಮೇಲೆ ತನ್ನ ಪರಿಣಾಮವನ್ನು ಬೀರುತ್ತ, ಕಾಲಕ್ರಮದಲ್ಲಿ ಇಲ್ಲಿನ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ನೆಲೆ ನಿಂತಿತು. ಆಗ ಅದರದು ಬೇರೆಯೇ ರೂಪ. ಆ ರೂಪ ಹಳೆಯದನ್ನು ಬಿಡಲಾಗದೆ, ಹೊಸದನ್ನು ಸಂಪೂರ್ಣ ಅಳವಡಿಸಿಕೊಳ್ಳಲಾಗದೆ ಒಂದು ಹೊಸರೂಪವನ್ನೇ ತಾಳಿತು. ಆದರೆ ಆ ಹೊಸರೂಪದಲ್ಲೂ ಒಂದು ತಳಮಳ, ಒಂದು ಚಡಪಡಿಕೆ ಇತ್ತು. ಅತ್ತ ಹಳೆಯದನ್ನು ಬಿಟ್ಟರೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಭಯ, ಇತ್ತ ಹೊಸದರ ಹೊಸತನದ ಮೋಜು. ಇವೆರಡರ ರೂಪವೇ ಒಂದು ಎಡಬಿಡಂಗಿ ಸ್ವರೂಪ. ಇಂದು ನಾವು ಇರುವುದೇ ಅಂತಹ ಸ್ಥಿತಿಯಲ್ಲಿ. ಇದನ್ನು ಶ್ರೀ ಗುಂಡಪ್ಪನವರು ” ಈ ಭೂಮಿಯನ್ನು ಬಿಟ್ಟು ಎತ್ತಲೂ ಸೇರದ ಪ್ರೇತದಂತೆ ” ಎಂದು ಹೇಳುತ್ತಾರೆ. ಇದು ಒಂದು ಉಪಮೆ ಅಷ್ಟೇ. ಸನಾತನದಲ್ಲಿ ಅಂತಹ ನಂಬಿಕೆ ಉಂಟು. ಅನ್ಯರಲ್ಲೂ ಬೇರೆ ಬೇರೆ ರೂಪದಲ್ಲಿ ಆ ನಂಬಿಕೆ ಉಂಟು. ಆದರೆ ತಮ್ಮನ್ನು ತಾವು ಪ್ರಗತಿಪರರು ಅಥವಾ ಬುದ್ಧಿಜೀವಿಗಳು ಎಂದು ಅಂದುಕೊಂಡಿರುವ ಕೆಲವರು, ಇದರ ಸೂಕ್ತತೆಯನ್ನು ಮತ್ತು ಪ್ರಸ್ತುತತೆಯನ್ನು ಪ್ರಶ್ನಿಸುತ್ತಾರೆ. ಹಾಗೆ ಪ್ರಶ್ನೆ ಮಾಡುವ, ಅಲ್ಲಗೆಳೆಯುವ ಮತ್ತು ಟೀಕಿಸುವ ಹಕ್ಕು ಅವರಿಗೆ ಉಂಟು.

ಹಾಗೆ ಹಳೆಯದನ್ನು ಬಿಟ್ಟೂ ಬಿಡದ ಹಂಗೆ, ಹೊಸದನ್ನು ಹಿಡಿದೂ ಹಿಡಿಯದ ಹಂಗೆ ಇಂದಿನ ಸಮಾಜದಲ್ಲಿ ಎಲ್ಲರೂ ಇದ್ದಾರೆ. ಅದಕ್ಕೆ ಹಲವಾರು ಕಾರಣಗಳು. ವಿಧ್ಯಾಭ್ಯಾಸದ ಕ್ರಮ ಬದಲಾವಣೆ, ಹೊಸ ಹೊಸ ಸಾಧನಗಳು ಮತ್ತು ಮಾಹಿತಿ ತಂತ್ರಜ್ಞಾನದ ಸ್ಫೋಟ, ಜಾಗತೀಕರಣ, ಹೀಗೆ ಹತ್ತು ಹಲವಾರು. ಹಿಂದೆ ಇದ್ದದ್ದು ಇಂದು ಇಲ್ಲ. ಇಂದು ಇರುವುದು ಮುಂದಿರುವುದಿಲ್ಲ. ಅಂತಹ ಸ್ಥಿತಿಯಲ್ಲಿ ಜನರು ಯಾವುದೇ ಒಂದು ನಿರ್ಧಿಷ್ಟತೆಯಲ್ಲಿ ಇರದೇ ಒಂದು ಅತಂತ್ರದ ಸ್ಥಿತಿಯಲ್ಲಿದ್ದಾರೆ ಎಂದು ಮಾನ್ಯ ಗುಂಡಪ್ಪನವರ ಹೇಳುತ್ತಾರೆ. ಭಾಷೆ, ಜೀವನದ ಶೈಲಿ, ಉದ್ಯೋಗ, ಸಂಪಾದನೆ ಎಲ್ಲವೂ ಇಂದಿನ ಜನಾಂಗದ ಮೇಲೆ ಪರಿಣಾಮ ಬೀರಿದೆ. ಇಂದು ನಾವು ಹೊಸದಾಗಿ ಕಾಣುತ್ತಿರುವ ಹೊಸ ವಿಧ್ಯಮಾನವೇನಲ್ಲ. ನಮ್ಮ ಭಾರತೀಯ ಇತಿಹಾಸದಲ್ಲೇ ಬೇರೆ ಬೇರೆ ಸಮಯಗಳಲ್ಲಿ ಇಂತಹ ಅತಂತ್ರ ಸ್ಥಿತಿಗಳನ್ನು ನೋಡಬಹುದು. ಅಂದಿನ ಭೌಗೋಲಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಸ್ಥಿತಿಗಳು ಅಂದಿಗೆ, ಅಂದಿನ ಸ್ಥಿತಿಗೆ ಕಾರಣವಾಗುತ್ತದೆ.

ಚಾಣಕ್ಯನಂತಹ ಮುತ್ಸದ್ಧಿಗಳು ಬಂದಾಗ ಏನೋ ಒಂದು ರೀತಿಯ ಕಲರವ ಉಂಟಾಗಿ ಸ್ವಲ್ಪ ಬದಲಾವಣೆಗಳನ್ನು ಕಾಣಬಹುದು. ಆದರೆ ಸ್ವಾಭಾವಿಕವಾಗಿ ಮಾನ್ಯ ಡಿ.ವಿ.ಜಿ ಯವರು ಹೇಳಿದಂತೆ ಮತ್ತೆ ಅದೇ ಅತಂತ್ರ ಸ್ಥಿತಿಗೆ ಒಗ್ಗಿ ಹೋಗುತ್ತದೆ ಇಡೀ ಸಮಾಜ. ಆದರೆ ಇಂತಹ ಪ್ರತಿಪಾದನೆಗಳಿಗೆ, ಕೆಲವು ವ್ಯಕ್ತಿಗಳು ಅಪವಾದವಾಗಿ ಭಿನ್ನವಾಗಿರಬಹುದು. ಶುದ್ಧ ಸತ್ವದಲ್ಲಿ ಯಾವುದು ಪುರಾತನವೋ ಯಾವುದು ಸನಾತನವೋ ಅದನ್ನು ಪಾಲಿಸುತ್ತಿರಬಹುದು. ಆದರೆ ಒಟ್ಟಾರೆ ಸಮಾಜವನ್ನು ನೋಡಿದಾಗ ಎಲ್ಲೋ ಏನೋ ಸರಿಯಿಲ್ಲ ಎನ್ನುವ ಭಾವನೆ ಬರುತ್ತದೆ. ಅದನ್ನೇ ಡಿ.ವಿ.ಜಿ ಯವರು ” ಲೋಕ ತಲ್ಲಣಿಸಿಹುದಿಂದು” ಎಂದರು.

ಆದರೆ ನಾವು ನೋಡಬೇಕಾದದ್ದು ಏನೆಂದರೆ, ಇದು ಸರಿಯೇ ಎಂದು. ಬದಲಾವಣೆಯೇ ಪ್ರಪಂಚದ ಮೂಲ ಗುಣವಾದ್ದರಿಂದ ಇದು ಸರಿ. ಅಸ್ತಿತ್ವವನ್ನು ಕಳೆದುಕೊಳ್ಳುವುದರಿಂದ ಇದು ಸರಿಯಿಲ್ಲ. ಹಾಗಾಗಿ ಏನು ಮಾಡಬೇಕು. ಡಿ.ವಿ.ಜಿ ಯವರೆ ಮುಂದೆ ಯಾವುದೋ ಕಗ್ಗದಲ್ಲಿ ಹೇಳುತ್ತಾರೆ” ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ಹೊಸ ಯುಕ್ತಿ ಹಳೆ ತತ್ವ…..” ಎಂದು. ಅಂದರೆ ನೈಸರ್ಗಿಕವಾದ ಮತ್ತು ಸ್ವಾಭಾವಿಕವಾದ ಬದಲಾವಣೆ ಬೇಕು ಮತ್ತು ಆಗಬೇಕು. ಆದರೆ ಹೊಸತನ್ನು, ಹಳೆಯ ಮತ್ತು ಕಾಲದಲ್ಲಿ ಪರಿಕಿಸಿ ನಿರೂಪಿಸಲ್ಪಟ್ಟು ಸರ್ವಕಾಲಕ್ಕೂ ಅನ್ವಯವಾಗುವಂತಾ ಸಿದ್ಧಾಂತಗಳ ( theories ) ಆಧಾರದಮೇಲೆ ಹೊಸತು ಪಲ್ಲವಿಸ ಬೇಕು. ಆಗ ಹಳತು ಅಂತರ್ಯದಲ್ಲಿ ಉಳಿದು ಹೊಸತು ಪಲ್ಲವಿಸಿ ಬೆಳೆದು ಹಳೆಯದಕ್ಕೆ ಹೊಳಪ್ಪಿತ್ತಂತೆ ಆಗುತ್ತದೆ. ಹೊಸತು, ಆ ಹೊಳಪಿನ ಬೆಳಕಲ್ಲಿ ಸುಂದರವಾಗಿ ಕಾಣುತ್ತದೆ. ಆಗ ಎರಡೂ ಸಮನ್ವಯಗೊಂಡು ಒಂದು ಹೊಸ ನೆಲೆ ಸಿಕ್ಕಂತಾಗುತ್ತದೆ.

ಆದರೆ ವಿಷಾದವೇನೆಂದರೆ ಇಂದು ಯಾರಿಗೂ ಹಳೆಯದು ಬೇಡ. ಅದರ ಅರ್ಥ ಬೇಡ. ಅದರ ಸತ್ವ ಬೇಡ. ಅದನ್ನು ಗೊಡ್ಡು ಸಂಪ್ರದಾಯ ಎಂದು ಮೂದಲಿಸುವ, ಜರಿಯುವ, ನೇಪಥ್ಯಕ್ಕೆ ಸರಿಸುವ ಇಂದಿನ ಜನಾಂಗವು ಸತ್ಯವಾಗಲೂ ಗುಂಡಪ್ಪನವರು ಹೇಳಿದಂತೆ “ಎತ್ತಲೂ ಸೇರದ ಪ್ರೇತದಂತೆ ಲೋಕ ತಲ್ಲಣಿಸುತ್ತಿದೆ”.ಅಂತರ್ಪಿಶಾಚಿಗಳ ತರಹೆ ಇದ್ದಾರೆ.

ಎಲ್ಲರಲ್ಲೂ ಹಳೆಯ ಸತ್ವಯುತವಾದ ಸಿದ್ಧಾಂತಗಳ, ಸಂಸ್ಕೃತಿಯ, ಸಂಸ್ಕೃತಿಯನ್ನು ಒಳಗೊಂಡ ಭಾಷೆ, ಸಾಹಿತ್ಯ, ಕಲೆ ಮುಂತಾದವುಗಳನ್ನು ಪುರುಜ್ಜೀವನ ಮಾಡಲು ಒಂದು ಪ್ರಾಮಾಣಿಕ ಪ್ರಯತ್ನ ನಡೆಯಬೇಕು. ಅಂತಹ ಪ್ರಯತ್ನ ಎಲ್ಲ ಅಯಾಮಗಳಿಂದಲೂ ಒಂದೇ ಸಲಕ್ಕೆ ಒಂದು ಸ್ಫೋಟದಂತೆ ಆದಾಗ ಒಂದು ಸಕಾರಾತ್ಮಕವಾದ ಬದಲಾವಣೆಯನ್ನು ನಾವು ನೋಡಬಹುದು. ನಮ್ಮ ಭಾರತೀಯತೆಯನ್ನು, ಸಂಸ್ಕೃತಿಯನ್ನು ಉಳಿಸಬೇಕಾದರೆ ಅಂತಹ ಪ್ರಯತ್ನ ಅಗತ್ಯ.

ಬನ್ನಿ ಮಿತ್ರರೇ, ನಾವೂ ಅಂತಹ ಪ್ರಯತ್ನದಲ್ಲಿ ನಮ್ಮನ್ನು ನಾವೇ ತೊಡಗಿಸಿಕೊಳ್ಳೋಣ. ಅಂತಹ ವಿಚಾರಮಾಡುತ್ತಾ ಮುಂದಿನ ಕಗ್ಗಕ್ಕೆ ಹೋಗೋಣ.
[07/01 6:28 AM] S. Bhargav: ಕಗ್ಗ-೧೭

ಲೋಕಜೀವನ ಮಂಥನ

ತಳಮಳವಿದೇನಿಳೆಗೆ? ದೇವದನುಜರ್ ಮಥಿಸೆ
ಜಳಧಿಯೊಳಾದಂತೆ ಸುಧೆಗೆ ಪೀಠಿಕೆಯೇಂ?
ಹಾಲಾಹಲವ ಕುಡಿವ ಗಿರೀಶನಿರ್ದೊಡೀ
ಕಳವಳವದೇತಕೆಲೋ? – ಮಂಕುತಿಮ್ಮ

ತಳಮಳವಿದೇನಿಳೆಗೆ= ತಳಮಳವಿದು + ಏನು + ಇಳೆಗೆ, ದೇವಮನುಜರ್ =ದೇವದ + ಅನುಜರ್

ಜಳಧಿಯೊಳಾದಂತೆ = ಜಲಧಿಯೊಳು + ಆದಂತೆ, ಗಿರೀಶನಿರ್ದೊಡೀ= ಗಿರೀಶನು + ಇರ್ದೊಡೆ,

ಕಳವಳವದೇತಕೆಲೋ = ಕಳವಳವು + ಅದು+ ಏತಕೆ+ ಎಲೋ,

ದೇವದನುಜರ್ = ದೇವಲೋಕದ ಅಣ್ಣ ತಮ್ಮಂದಿರು , ಮಥಿಸೆ= ಕಡೆಯೆ, ಜಲಿಧಿ= ಸಮುದ್ರ, ಸುಧೆ= ಅಮೃತ, ಪೀಠಿಕೆ = ಭೂಮಿಕೆ, ಪ್ರಸ್ತಾವನೆ, ಹಾಲಾಹಲ= ವಿಷ, ಗಿರೀಶ= ಶಿವ

ತಳಮಳವದೇನು ಇಳೆಗೆ ? ದೇವದುಜರು ಮಥಿಸೆ ಜಲಧಿಯೊಳು ಆದಂತೆ, ಸುಧೆಗೆ ಪೀಠಿಕೆಯೇನು,
ಹಲಾಹಲವ ಕುಡಿಯಲು ಗಿರೀಶನಿರುವಾಗ ಕಳವಳವದು ಏತಕೆ ಎಲೋ ಮಂಕುತಿಮ್ಮ.

ಇಲ್ಲಿ ಒಂದು ಆಶಾಭಾವನೆಯನ್ನು ವ್ಯಕ್ತಪಡಿಸುತ್ತಾರೆ, ಶ್ರೀ ಗುಂಡಪ್ಪನವರು. ಆಗ ಎಲ್ಲೆಲ್ಲೂ ಅತಂತ್ರದ ಸ್ಥಿತಿ. ಹಳೆಯ ಭಕ್ತಿ ಶ್ರದ್ಧೆಗಳು ಸಶಿಸಿ ಹೊಸದು ಯಾವುದೋ ಇಲ್ಲದೆ, ಒಂದು ಅತಂತ್ರದ ಸ್ಥಿತಿ ಇದೆ. ಜನರೆಲ್ಲಾ ಕಳವಳ ಗೊಂಡು ತಳಮಳಿಸುತ್ತಿದ್ದಾರೆ. ಅಂತ ಸ್ಥಿತಿಯಲ್ಲಿ ಇವರಿಗೊಂದು ಆಶಾಭಾವನೆ. ಅದನ್ನು ಅವರು ಈ ಕಗ್ಗದಲ್ಲಿ ಸೂಚಿಸುತ್ತಾರೆ.

ಹಿಂದೆ, ದೇವಲೋಕದಲ್ಲಿ ಅಮೃಥವನ್ನು ಪಡೆಯಲು ಸಮುದ್ರ ಮಂಥನ ನಡೆಯಿತು. ಅದನ್ನು ನಡೆಸಿದವರು ದೇವತೆಗಳು ಮತ್ತು ದಾನವರು. ಇವರನ್ನು ಗುಂಡಪ್ಪನವರು ಸೂಕ್ತವಾಗಿ “ದೇವಲೋಕದ ಅನುಜರ್” ಎಂದು ಸಂಬೋಧಿಸುತ್ತಾರೆ. ಏಕೆಂದರೆ ಪುರಾಣದ ಪ್ರಕಾರ ಈ ದೇವತೆಗಳು ಮತ್ತು ದಾನವರು ಇಬ್ಬರೂ ಕಶ್ಯಪ ಬ್ರಹ್ಮನ ಮಕ್ಕಳು. ಹಾಗಾಗಿ ಅವರನ್ನು ಅಣ್ಣ ತಮ್ಮಂದಿರು ಎಂದಿದ್ದಾರೆ. ವಾಚಕರು ಈ ದೇವದಾನವರು ನಡೆಸಿದ ಅಮೃತ ಮಂಥನದ ಕಥೆಯನ್ನು ಬೇರೆಯಾಗಿ ಓದಬೇಕಾಗಿ ವಿನಂತಿ. ಆದರೆ ಆ ಮಂಥನದಲ್ಲಿ ಮೊದಲು ಹಾಲಾಹಲ ಅಂದರೆ ವಿಷದ ಉದ್ಭವವಾಯಿತಂತೆ. ಘನ ಘೋರ ವಿಷವನ್ನು ಲೋಕ ಕಲ್ಯಾಣಕ್ಕಾಗಿ ಗಿರಿಜಾಪತಿ ಪರಮಶಿವನು ಕುಡಿದುಬಿಟ್ಟನಂತೆ. ಅದನ್ನು ಪಾರ್ವತಿ ಕಂಠದಲ್ಲೇ ತಡೆದದ್ದರಿಂದ ಅದು ಅಲ್ಲೇ ನಿಂತು, ಶಿವನು ನೀಲಕಂಠ ಮತ್ತು ವಿಷಕಂಠನಾದನಂತೆ.

ಹಿಂದಿನ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು II ಹಳೆ ಧರ್ಮ ಸತ್ತಿಹುದು ಹೊಸ ಧರ್ಮ ಹುಟ್ಟಿಲ್ಲ – ತಳಮಳಕೆ ಕಡೆಯೆಂದು – ಮಂಕು ತಿಮ್ಮ II ಎಂದು ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಾರೆ. ಆ ಕಳವಳಕ್ಕೆ ಉತ್ತರವೆಂಬಂತೆ ಈ ಕಗ್ಗದಲ್ಲಿ ಈ ರೀತಿಯ ಕಳವಳ, ತಳಮಳಗಳು ಸಹಜ. ಒಂದು ಉತ್ತಮವಾದ ವಸ್ತು ಈ ಪ್ರಪಂಚಕ್ಕೆ ಸಿಗಬೇಕಾದರೆ ಈ ರೀತಿಯ ಮಥನ ವಾಗಬೇಕು. ಇಲ್ಲಿ ದೇವದಾನವರ ಉಲ್ಲೇಖಮಾಡಿ ಮನುಷ್ಯನ ಅಂತರ್ಯದಲ್ಲಿರುವ ” ಒಳ್ಳೆಯ ಮತ್ತು ಕೆಟ್ಟ ” ಗುಣಗಳನ್ನು ಸೂಚ್ಯವಾಗಿಸುತ್ತಾರೆ.

ಮನುಷ್ಯನ ಮನಸ್ಸಿನಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರುತ್ತದೆ. ಪ್ರಮಾಣ ಮತ್ತು ಪರಿಮಾಣಗಳ ವ್ಯತ್ಯಾಸ ಅಷ್ಟೇ. ಯಾವುದು ಅಧಿಕವಾಗಿದ್ದರೆ ಅದರ ಪ್ರಾಬಲ್ಯ. ಆದರೆ ಒಂದು ವ್ಯಕ್ತಿಯಿಂದ ಮಹತ್ತರ ಕಾರ್ಯವಾಗಬೇಕಾದರೆ ಅಂತರ್ಯದಲ್ಲೂ ತಿಕ್ಕಾಟಗಳು ತುಮಲಗಳು ನಿರಂತರ ನಡೆಯಬೇಕು. ಸಮುದ್ರಮಥನದ ರೀತಿ. ನಮ್ಮ ಲೋಕದ ಮಹಾ ಮಹಿಮರೆಲ್ಲರಿಗೂ ಇಂಥಹ ಅನುಭವವಾಗಿದೆ. ಅವರ ಪ್ರಯತ್ನದಲ್ಲಿ ಅವರಿಗೆ ” ವಿಷದ” ರೂಪದಲ್ಲಿ ಬೇಕಾದಷ್ಟು ಕಷ್ಟಗಳು ಬಂದಿವೆ. ಆ ಮಹಾಮಹಿಮರೆಲ್ಲ ಅಂತಹ ಕಷ್ಟಗಳನ್ನೆಲ್ಲ ” ಪರಶಿವನು ಹಾಲಾಹಲವನ್ನು ಕುಡಿದಂತೆ ” ನುಂಗಿ ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ತ್ಯಾಗಮಾಡಿದ್ದಾರೆ. ಉದಾಹರಣೆಗೆ, ನಮ್ಮ ದೇಶಕ್ಕೆ ಚಾಣಕ್ಯ ವಿಷ್ಣು ಶರ್ಮನ ಕೊಡುಗೆ ಅಪಾರ. ಅಷ್ಟೇ ಕಷ್ಟ ನಿಷ್ಟೂರಗಳನ್ನು ಆಭವಿಸಿದ ಅವನು. ಹೀಗೆ, ಶಂಕರರು, ರಾಮಾನುಜರು, ಬಸವಣ್ಣನವರು, ನಮ್ಮ ದೇಶದ ಸ್ವಾತಂತ್ರ ಹೋರಾಟಗಾರರಾದ ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ರಾಜಗುರು, ಬೋಸ್ ಮುಂತಾದ ಅನೇಕ ವೀರರು ಸ್ವಾರ್ಥ ತೊರೆದು ಲೋಕಕಲ್ಯಾಣಕ್ಕಾಗಿ ಕಷ್ಟಗಳೆಂಬ ವಿಷವನ್ನು, ಪರಶಿವನಂತೆ ಕುಡಿದ ದೃಷ್ಟಾಂತಗಳು ನಮಗೆ ಹೇರಳವಾಗಿ ಸಿಗುತ್ತದೆ.

ಅದೇ ರೀತಿ ಇಂದು ಇರುವ ಪರಿಸ್ಥಿತಿಯೂ ಬದಲಾಗಿ ಇಂದಿರುವ ವಿಷ ಮತ್ತ ವಿಷಮ ಪರಿಸ್ಥಿತಿ ಕರಗಿ ಅಮೃತ ಹುಟ್ಟುವುದಕ್ಕೆ ಈ ರೀತಿಯ ತಿಕ್ಕಾಟವೇ, ತುಮುಲಗಳೇ, ತಳಮಳವೇ ಪೀಠಿಕೆಯೋ ಎಂದು ಕೇಳುತ್ತಾರೆ ಶ್ರೀ ಗುಂಡಪ್ಪನವರು. ಅಂದು ಪರ ಶಿವನು ” ವಿಷ”ವನ್ನು ಕುಡಿದು ಲೋಕಕಲ್ಯಾಣವನ್ನು ಮಾಡಿದಹಾಗೆ ಇಂದೂ ಯಾರಾದರೂ ಬರಬಹುದೆಂದು ಅವರ ಆಸೆ. ಅವರ ಅಶಾಭಾವಕ್ಕೆ ಒಂದು ನಮಸ್ಕಾರ.

ಆದರೆ ವಾಚಕರೆ, ವಿಚಾರ ಮಾಡಿ ನೋಡಿ. ಅಂದಿನ ಮಥನದಿಂದ ಅಂದರೆ ಲೋಕದ ದ್ವಂದ್ವಗಳಿಂದ ಮತ್ತು ಆ ದ್ವಂದ್ವಗಳ ತಿಕ್ಕಾಟದಿಂದ, ತೊಳಲಾಟದಿಂದ ಇನ್ನೂ ಅಮೃತ ಬಂದೆ ಇಲ್ಲ. ಎಲ್ಲೆಲ್ಲೂ ವಿಷಮ ಸ್ಥಿತಿಯ ವಿಷದ ಧಾರೆ ಹರಿಯುತ್ತಿದೆ. ದ್ವೇಷಾಸೂಯೆಗಳ, ಭಾಷಾಸೂಯಗಳ, ಅಹಂಕಾರದ, ಜನಬಲದ ಮದ, ಧನಬಲದ ಮದ, ಅಧಿಕಾರ ಮದದ ವಿಷದ ಗಾಳಿ ಎಲ್ಲೆಲ್ಲೂ ಹರಡಿದೆ. ಇಡೀ ಸಮಾಜ ಪ್ರೀತಿ ಕರುಣೆ ವಾತ್ಸಲ್ಯಗಳ ಕೊರತೆಯಿಂದ ಸೊರಗಿದೆ. ಹಳೆಯ ಶ್ರದ್ಧೆ -ಭಕ್ತಿಗಳ ಮತ್ತು ಆಧುನೀಕತೆಯ, ಡಂಬ ತೋರಿಕೆಯ ಜೀವನದ ನಡುವೆಯ ಅಂತರ ಅಗಾಧವಾಗುತ್ತಿದೆ.

ಅಂದು ಅಂದರೆ ಈಗ್ಗೆ ಎಂಬತ್ತು ವರ್ಷಗಳ ಹಿಂದೆ ಡಿ.ವಿ.ಜಿ.ಯವರು ಕಂಡ ಅಮೃತದ ಕನಸು ನನಸಾಗುವ ಕಾಲ ಬಂದೀತೆ ಎಂದರೆ, ನಾವು ಆಶಾಭಾವನೆಯನ್ನು ಎಂದಿಗೂ ಬಿಡಬಾರದು, ಇಂದಿನ ಯುವ ಪೀಳಿಗೆಗೆ ಮತ್ತು ಮುಂದಿನ ಪೀಳಿಗೆಗೆ, ಹಿಂದಿನ ತತ್ವಗಳ ಸತ್ವವನ್ನು ತಿಳಿಸಿಕೊಡಬೇಕು. ಅವುಗಳ ಅರಿವು ಮೂಡಿಸಬೇಕು. ಬಹಳಷ್ಟು ಜನ ಆ ಪ್ರಯತ್ನದಲ್ಲಿ ಇದ್ದರೂ ಇಷ್ಟು ವಿಶಾಲವಾದ ದೇಶದಲ್ಲಿ ಆಧುನೀಕತೆಯ ಪೊಳ್ಳು ಸಂಸ್ಕೃತಿಯ ವ್ಯಾಪ್ತಿಯನ್ನು ಮುಟ್ಟಲು ಇನ್ನೂ ಸಾಧ್ಯವಾಗಿಲ್ಲ. ಶೀಘ್ರವೇ ಫಲ ಬೇಕಾದಲ್ಲಿ, ಸಮರೋಪಾದಿ ಕಾರ್ಯಗಳು ನಡೆದು ನಮ್ಮ ಭಾರತೀಯ ಅಸ್ಮಿತೆಯನ್ನು ಅರಿತುಕೊಳ್ಳಲು ಮತ್ತು ಕಾಪಾಡಲು ಎಲ್ಲರೂ ಪ್ರವೃತ್ತರಾಗಬೇಕು. ಅದಕ್ಕೆ ನಾವು ನೀವು ಎಲ್ಲರೂ ಪ್ರಯತ್ನಪಟ್ಟು ನಮ್ಮ ಸುತ್ತು ಮುತ್ತಲಿನವರನ್ನೂ ಅದಕ್ಕೆ ಪ್ರೇರೇಪಿಸಿದರೆ ಅದು ಸಾಧ್ಯ.

ಅಂಥಹ ಪ್ರಯತ್ನವನ್ನು ಮಾಡುವ ಧೃಢ ಸಂಕಲ್ಪವನ್ನು ಮಾಡುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗುವ.
[08/01 7:48 AM] S. Bhargav: ನದಿಯ ತೆರೆಯವೊಲುರುಳಿ ಹೊರಳುತಿರುವುದು ಜೀವ I
ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲ ವದಕೆ II
ಬದುಕೇನು ಸಾವೇನು ಸೊದೆಯೇನು ವಿಷವೇನು? I
ಉದಕಬುದ್ಬುದವೆಲ್ಲ ! – ಮಂಕುತಿಮ್ಮ II

ತೆರೆಯವೊಲುರುಳಿ = ತೆರೆಯವೊಲು ಉರುಳಿ, ಉದಕಬುದ್ಬುದವೆಲ್ಲ= ಉದಕ ಬುದ್ಬುದವು ಎಲ್ಲ.

ತೆರೆಯವೊಲು=ನದಿಯ ಅಲೆಯಂತೆ , ಮುಗಿವಿಲ್ಲ= ಕೊನೆಯಿಲ್ಲ, ನಿಲುವಿಲ್ಲ = ನಿಲುವು ಅಂದರೆ ಸ್ಥಿರತೆ,. ಸೊದೆಯೇನು= ಅಮೃತವೇನು, ಉದಕ= ನೀರು, ಬುದ್ಬುದ= ಗುಳ್ಳೆ

ನದಿಯ ತೆರೆಯಂತೆ ಉರುಳಿ ಹೊರಳುತಿದೆ ಜೀವ, ಮೊದಲಿಲ್ಲ , ಮುಗಿವಿಲ್ಲ ನಿಲುವಿಲ್ಲ ಅದಕೆ ಬದುಕೇನು ಸಾವೇನು ಸೊದೆಯೇನು ವಿಷವೇನು ಉದಕದ ಬುದ್ಬುದವು ಎಲ್ಲ ಮಂಕುತಿಮ್ಮ.

ವಾಚಕರೆ ಹಿಂದಿನ ಕಗ್ಗದಲ್ಲಿ ಈ ಹಳತು ಹೊಸತನದ ತಿಕ್ಕಾಟವನ್ನು ಅಮೃತಕ್ಕಾಗಿ ನಡೆಯುವ ಸಮುದ್ರ ಮಂಥನಕ್ಕೆ ಹೋಲಿಸಿದರು ಮಾನ್ಯ ಡಿ.ವಿ.ಜಿ ಯವರು.ಆದರೆ ಇಂದಿನ ಕಗ್ಗದಲ್ಲಿ ಒಂದು ವೇದಾಂತದ ಮಾತನ್ನು ಸೂಚಿಸಿದ್ದಾರೆ. ಇಡೀ ಜೀವನವನ್ನು ಅವರು ಒಂದು ನದಿಯ ತೆರೆ ಅಥವಾ ಅಲೆಯಂತೆ ಎಂದಿದ್ದಾರೆ. ಒಂದು ನಿಮಿಷವೂ ಒಂದೇ ತೆರನಾಗಿ ಇರದ ನದಿಯ ತೆರೆಗೆ ಹೋಲಿಸಿದ್ದಾರೆ.

ಹೌದು ಯಾರ ಜೀವನವೂ ಎಂದೂ ಒಂದೇ ತೆರನಾಗಿ ಇರುವುದಿಲ್ಲ. ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ನಾನು ಅದನ್ನು kaleidoscopic ಲೈಫ್ ಎಂದು ಕರೆಯುತ್ತೇನೆ. ಕೆಲಿಡೋಸ್ಕೊಪ್ ಎನ್ನುವುದು ನಾವು ಚಿಕ್ಕಂದಿನಲ್ಲಿ ಮೂರು ಬಿಳಿಯ ಗಾಜಿನ ಪಟ್ಟಿಗಳನ್ನು ತೆಗೆದುಕೊಂಡು ಮೂರನ್ನೂ ತ್ರಿಕೋನಾಕಾರದಲ್ಲಿ ಜೋಡಿಸಿ ಎಲ್ಲ ಬದಿಯಿಂದಲೂ ಬಂಧಿಸಿ ಒಂದು ಕೊನೆಯನ್ನು ಮುಚ್ಚ್ಚಿ ಸುತ್ತಲೂ ಕಾಗದವನ್ನು ಸುತ್ತಿ ಬಿಡುತ್ತಿದ್ದೆವು. ತೆರೆದ ಬದಿಯಿಂದ ಒಡೆದ ಗಾಜಿನ ಬಳೆಯ ಚೂರುಗಳನ್ನು ಹಾಕಿದರೆ ಒಂದು ಚಿತ್ತಾರ (ಡಿಸೈನ್) ಮೂಡುತ್ತಿತ್ತು. ಅದನ್ನು ತಿರುಗಿಸುತ್ತಾ ಹೋದಂತೆಲ್ಲ, ಬೇರೆಬೇರೆ ಚಿತ್ತಾರಗಳು ಮೂಡುತ್ತಿದ್ದವು. ಒಂದು ಬಾರಿ ಮೂಡಿದ ಚಿತ್ತಾರ ಮತ್ತೊಂದು ಬಾರಿಗೆ ಎಂದೂ ಬರುವುದಿಲ್ಲ. ಹಾಗೆಯೇ ನಮ್ಮ ಜೀವನಗಳು ಈಗ ಇದ್ದಂತೆ ಎಲ್ಲವೂ ಮತ್ತೆಂದಿಗೂ ಇರುವುದಿಲ್ಲ. ದಿನಕಳೆದಂತೆ ನಮ್ಮ ವಯಸ್ಸು ಒಂದು ದಿನ ಹೆಚ್ಚಾಗುತ್ತದೆ. ಒಂದು ದಿನ ಇದ್ದ ಮನೋಭಾವ ಮತ್ತೊಂದು ದಿನ ಇರುವುದಿಲ್ಲ, ಒಂದು ಗಳಿಗೆ ಇದ್ದ ನಮ್ಮ ಯೋಚನಾ ವಿಧ ಮತ್ತೊಂದು ಗಳಿಗೆ ಇರುವುದಿಲ್ಲ. ಇದನ್ನೇ ಮಾನ್ಯ ಗುಂಡಪ್ಪನವರು ನಿಲುವಿಲ್ಲ ಎಂದರು.

ಇನ್ನು ನಾವು ಈಗ ಮನುಷ್ಯರಾಗಿ ಹುಟ್ಟಿದ್ದೇವೆ, ಹಿಂದೆ ಏನಾಗಿದ್ದೇವೋ ಮುಂದೆ ಏನಾಗುತ್ತೇವೆಯೋ ಗೊತ್ತಿಲ್ಲ. ನಮ್ಮ ಈ ಜೀವನ ಪ್ರಯಾಣ ಎಂದು ಮೊದಲಾಯಿತೋ ಗೊತ್ತಿಲ್ಲ. ಎಂದು ಮುಗಿಯುವುದೋ ಗೊತ್ತಿಲ್ಲ. ಪ್ರಶ್ನೆಗಳು ಉದ್ಭವವಾಗಬಹುದು. ಉತ್ತರವೂ ಮಾತ್ರ ಸಿಗುವುದಿಲ್ಲ. ಇದಕ್ಕೇ, ಮೊದಲಿಲ್ಲ ಕೊನೆಯಿಲ್ಲ ಎನ್ನುತ್ತಾರೆ ಶ್ರೀ ಗುಂಡಪ್ಪನವರು. ನಮ್ಮ ಸನಾತನ ವೇದಾಂತದ ಪ್ರಕಾರ ಒಂದು ಜೀವಿ ಮಾನವನಾಗಿ ಹುಟ್ಟಬೇಕಾದರೆ ಅದಕ್ಕೆ ಮೊದಲು ೮೪ ಲಕ್ಷ ಬಾರಿ ( ಏಸು ಕಾಯಂಗಳ ಕಳೆದು ೮೪ ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ ಎಂದು ಪುರಂಧರ ದಾಸರ ಪದ. ) ಬೇರೆ ಬೇರೆ ದೇಹಗಳನ್ನು ಹೊಕ್ಕು ಹೊರಗೆ ಬಂದು ಮನುಷ್ಯನಾಗುತ್ತಾನೆ, ಅಂದರೆ ಜೀವ ಈ ಮನುಷ್ಯ ದೇಹವನ್ನು ಹೊಗುತ್ತಾನೆ. ನಾವು ಎಂದು ಈ ಮನುಷ್ಯ ದೇಹವನ್ನು ಹೊಕ್ಕೆವೋ ಇದರಿಂದ ಮುಂದೆ ಏನೋ ಎನ್ನುವುದು ಗೊತ್ತಿಲ್ಲ. ಮತ್ತೆ ಈ ಜನ್ಮದ ನಮ್ಮ ಕರ್ಮಗಳು ಮುಂದಿನ ಜನ್ಮವನ್ನು ನಿರ್ಧರಿಸುತ್ತವೆ ಎಂದೂ ಹೇಳುತ್ತಾರೆ. ಇನ್ನೂ ಕೆಲವರು ಜೀವಿ ತಾನು ಏನಾಗಬೇಕು, ಎಲ್ಲಿಗೆ ಹೋಗಬೇಕು ಎನ್ನುವುದನ್ನು ತಾನೇ ನಿರ್ಧರಿಸುತ್ತಾನೆ ಎನ್ನುತ್ತಾರೆ. ಆ ನಿರ್ಧಾರಗಳು ನಮ್ಮ ಮನಸ್ಸು ಬುದ್ಧಿಗಳಿಗೆ ಗೊತ್ತಾಗುತ್ತವೆಯೋ ಇಲ್ಲವೋ, ಎಲ್ಲವೂ ಅನಿಶ್ಚಯ. ಇದಕ್ಕೆ ಇರುವ ಆದಿಯೂ ಗೊತ್ತಿಲ್ಲ ಅಂತ್ಯವೂ ಗೊತ್ತಿಲ್ಲ. ಇದನ್ನೇ ಗುಂಡಪ್ಪನವರು “ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲ ವದಕೆ” ಎಂದರು.

ಬದುಕಿನ ಅರ್ಥ ಗೊತ್ತಿಲ್ಲ, ಅಥವಾ ನಮಗೆ ಗೊತ್ತಿರುವುದು ನಮ್ಮ ದೃಷ್ಟಿಕೋನವಷ್ಟೇ , ಸಮಗ್ರ ಸತ್ಯವಲ್ಲವಲ್ಲ. ಸಾವಿನ ಅರ್ಥವಂತೂ ಗೊತ್ತಿಲ್ಲ. ಸಾವೆಂದರೆ ನಮಗೆ ಗೊತ್ತಿರುವುದು, ಒಂದು ವ್ಯಕ್ತಿ ಮೂರ್ಥರೂಪದಲ್ಲಿ ಶರೀರದಿಂದ ಇರಲಾಗದ ಸ್ಥಿತಿಯೇ ಸಾವು. ನಾನು ಇದನ್ನು ರೂಪ ಬದಲಾವಣೆ ಎನ್ನುತ್ತೇನೆ. ಹಾಗಾಗಿ ಸಾವಿನ ಬಗ್ಗೆಯೂ ನಿಖರವಾದ ಅಭಿಪ್ರಾಯವಿಲ್ಲ. ಬದುಕೇ ನಿರ್ಧಿಷ್ಟವಲ್ಲ. ಇನ್ನು ಬದುಕಿಗೆ ಸಂಬಂಧಿಸಿದ ಸುಖವೇನು
(ಸೊದೆ=ಅಮೃತ ಅಂದರೆ ಸವಿ.ಆ ಸವಿಯನ್ನೇ ಸುಖ ಎಂದುಕೊಳ್ಳಬೇಕು) ವಿಷ (ದುಃಖ) ವೇನು? ಅದೂ ಅರ್ಥವಾಗುವುದಿಲ್ಲ. ಬದುಕೆಲ್ಲ ಒಂದು ಉದಕಬುದ್ಬುದ,ಅಂದರೆ ನೀರಿನ ಮೇಲಿನ ಗುಳ್ಳೆ ಎಂದು ಹೇಳುತ್ತಾರೆ ಗುಂಡಪ್ಪನವರು. “ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ” ಎಂದು ಪುರಂದರ ದಾಸರು “ಯಾರಿಗೆ ಯಾರುಂಟು ಎರವಿನ ಸಂಸಾರ “ಎಂಬ ಹಾಡಿನಲ್ಲಿ ಬರೆಯುತ್ತಾರೆ. ಯಾವುದೂ ನಿರಂತರವಲ್ಲ, ನಿಶ್ಚಯವಿಲ್ಲ, ನಿಶ್ಚಯವಿದ್ದರೂ ನಮಗೆ ಅದರ ಅರಿವಿಲ್ಲ. ಅಂತಹ ಭಾವಗಳನ್ನೇ ವ್ಯಕ್ತಪಡಿಸುತ್ತಾರೆ ಶ್ರೀ ಗುಂಡಪ್ಪನವರು.

ಇದು ವೇದಾಂತದ ಮಾತು. ಇದು ಸತ್ಯ. ಈ ಸತ್ಯದ ತಳಹದಿಯಲ್ಲೇ ನಮ್ಮ ಜೀವನ ಸಾಗಬೇಕು. ಆದರೆ ನಾವು ” ಅಯ್ಯೋ ಜೀವನವೆಲ್ಲ ನಶ್ವರ, ಯಾವುದೂ ಶಾಶ್ವತವಲ್ಲ ನಾನೇಕೆ ಏನಾದರೂ ಮಾಡಬೇಕು” ಎಂದು ನಿರಾಸೆಯ ಭಾವ ತಳೆಯಬಾರದು. ಅದು ಬದುಕಿಗೆ ಮಾರಕ. ಬದುಕಿಗೆ ಪೂರಕವಾದ ಸದಾಶಾಭಾವನ್ನೇ ಇಟ್ಟುಕೊಂಡು ಜೀವನವನ್ನು ಸಾಗಿಸಬೇಕು. ” ಸದಶಾಭಾವವಷ್ಟೇ” ಇರಬೇಕು. ಎಲ್ಲವೂ ಯಾವುದೋ ಒಂದು ಪರಮ ಶಕ್ತಿಯ ಅಧೀನದಲ್ಲಿ ಮತ್ತು ಅದರ ಇಚ್ಚೆಯಂತೆ ನಡೆಯುತ್ತದೆ. ನಮ್ಮ ಪ್ರಮೇಯವಿದ್ದಂತೆ ಕಂಡರೂ ಇಲ್ಲದ ಮತ್ತು ಅದಕ್ಕೆ ತದ್ವಿರುದ್ಧವಾದ ಅನುಭವಗಳು ನಮಗೆ ಆಗುತ್ತವೆ. ಹಾಗಾಗಿ ನಾವು ಆ ಪರಮ ಶಕ್ತಿಯ ಅಧೀನದಲ್ಲಿರುವುದರಿಂದ ಅದಕ್ಕೆ ಡಿ.ವಿ.ಜಿ.ಯವರು ಹೇಳುವಂತೆ ” ಆ ವಿಚಿತ್ರಕೆ ಶರಣಾಗೋ ” ಎಂಬಂತೆ ಇರಬೇಕು.

ಆದರೆ ಜೀವನದಲ್ಲಿ ಇದ್ದರೂ ಯಾವುದಕ್ಕೂ ಅಂಟದೆ ತಾವರೆ ಎಲೆಯ ಮೇಲಿನ ನೀರ ಹನಿಯಂತೆ ಇರಬೇಕು. ಇದ್ದರೆ ನೆಮ್ಮದಿ, ಸುಖ ಮತ್ತು ಆನಂದ. ಹೇಳುವುದು ಸುಲಭ ಆಚರಣೆ ಬಹಳ ಕಷ್ಟ . ಆದರೆ ಅಸಾಧ್ಯವಲ್ಲವಲ್ಲ. ಪ್ರಯತ್ನ ಪಡೋಣ ಎಂದೋ ಒಂದು ದಿನ ನಮಗೂ ಆ ಆನಂದದ ನೆಲೆ ಸಿಗಬಹುದು.

ಇಂಥಹ ಆಶಯಗಳನ್ನು ಇಟ್ಟುಕೊಂಡು ನಾವು ಮುಂದಿನ ಕಗ್ಗಕ್ಕೆ ಹೋಗೋಣವೆ?
[09/01 6:35 AM] S. Bhargav: ಕಗ್ಗ-19

ಗಾಳಿ ಮಣ್ಣು೦ಡೆಯೊಳಹೊಕ್ಕು ಹೊರಹೊರಳಲದು I

ಆಳೆನಿಪುದಂತಾಗದಿರೆ ಬರಿಯ ಹೆಂಟೆ II

ಬಾಳೇನು ಧೂಳು ಸುಳಿ, ಮರ ತಿಕ್ಕಿದುರಿಯ ಹೊಗೆI

ಕ್ಶ್ವೇಳವೇನಮೃತವೇಂ ? – ಮಂಕುತಿಮ್ಮ II

ಮಣ್ಣು೦ಡೆಯೊಳಹೊಕ್ಕು= ಮಣ್ಣ + ಉಂಡೆ+ಒಳ+ಹೊಕ್ಕು , ಹೊರಹೊರಳಲದು = ಹೊರ+ಹೊರಳಲು +ಅದು
ಆಳೆನಿಪುದಂತಾಗದಿರೆ = ಆಳು+ ಎನಿಪುದು +ಅಂತೆ + ಆಗದಿರೆ, ತಿಕ್ಕಿದುರಿಯ = ತಿಕ್ಕಿದ+ಉರಿಯ, ಕ್ಶ್ವೇಳವೇನಮೃತವೇಂ =ಕ್ಶ್ವೇಳವೇನು +ಅಮೃತವೇನು

ಈ ದೇಹವನ್ನು ಮಣ್ಣು೦ಡೆಗೆ ಹೋಲಿಸಿದ್ದಾರೆ ಮತ್ತು ಈ ದೇಹದಲ್ಲಿ ಆಡುವ ಉಸಿರು ( ಗಾಳಿ ) ಆಡುತ್ತಿದ್ದರೆ ನಾವುಗಳು “ಆಳು” ಎಂದು ಎನ್ನಿಸಿ ಕೊಳ್ಳುತ್ತೇವೆ. ಇಲ್ಲದಿದ್ದರೆ ಈ ದೇಹ ಬರೀ ಮಣ್ಣಿನ ಹೆಂಟೆ ಎಂದು ಒಂದು ಅತ್ಯುತ್ತ್ತಮ ಸತ್ಯವನ್ನು ಪ್ರತಿಪಾದಿಸುತ್ತಾರೆ. ಇಂದು ನಮ್ಮ ಸ್ನೇಹಿತರೊಬ್ಬರು ಇದಕ್ಕೆ ಸರಿಯಾಗಿ” ಬಡಿತ ನಿಂತರೆ ಬಡಿವಾರ ಬಂದ್ ” ಎಂದು ಹಿಂದಿನ ಕಗ್ಗಕ್ಕೆ ಪ್ರತಿಕ್ರಿಯೆ ನೀಡಿ, ಬಹಳ ಸೂಕ್ತವಾಗಿ ಹೇಳಿದರು. ಬಹುಶಃ ಅವರಿಗೆ ಇಂದಿನ ಕಗ್ಗದ ಪರಿಚಯವಿತ್ತೇನೋ ಎಂದು ಅನ್ನಿಸುತ್ತದೆ. ಇರಲಿ ಗುಂಡಪ್ಪನವರು ಈ ಬಾಳನ್ನು ದೂಳ ಸುಳಿ ಎಂದು ಕರೆಯುತ್ತಾರೆ. ಇದು ಬಹಳ ಸೂಕ್ತವಾಗಿದೆ. ಏಕೆಂದರೆ,

ನಾನು ಹಿಂದೆ ಒಮ್ಮೆ ಈ ಬ್ರಹ್ಮಾಂಡದ ವಿವರಣೆಯನ್ನು ಮಾಡುವಾಗ, ಇಡೀ ಬ್ರಹ್ಮಾಂಡವು ಎಷ್ಟು ದೊಡ್ಡದೆಂದರೆ, ಇದರೆದುರು ನಾವು ಒಂದು ದೂಳ ಕಣವೂ ಅಲ್ಲ ಎಂದು ಹೇಳಿದ್ದೆ. ಈಗ ಮಣ್ಣಿಂದ ಆದ, ಮತ್ತು ಈ ಸಮಸ್ತ ಭೂಮಂಡಲವನ್ನು ನಿವಾಸಸ್ಥಾನವನ್ನಾಗಿಸಿಕೊಂಡ ಪ್ರಾಣಿಗಳೆಲ್ಲವೂ ಧೂಳ ಕಣಗಳೇ ಎಂದು ಗುಂಡಪ್ಪನವರು ಹೇಳುತ್ತಾರೆ.

ಮಣ್ಣಿಂದ ಆದ ಜೀವಕಣಗಳು ಮತ್ತು ಈ ಜೀವಕಣಗಳಿಂದಾದ ಈ ದೇಹವೂ ಮಣ್ಣಲ್ಲವೇ? “ಮಣ್ಣಿಂದ ಕಾಯ ಮಣ್ಣಿಂದ” ಎಂದು ನಾವು ಕೇಳಿಲ್ಲವೇ? ಹಾಗೆ ಮಣ್ಣಿಂದ ಆದ ಈ ದೇಹವನ್ನು ಮಣ್ಣ ಉಂಡೆ ಎಂದು ಹೇಳಿದ್ದಾರೆ. ಈ ಮಣ್ಣ ಉಂಡೆಯಲಿ ಗಾಳಿ ಆಡುತ್ತಿದ್ದರೆ ನಾವೂ ಸಹ “ಆಳು” ಅಂದರೆ ಮನುಷ್ಯ ಎಂದು ಕರೆಯಲ್ಪಡುತ್ತೇವೆ. ಇಲ್ಲದಿದ್ದರೆ ಬರೇ ಮಣ್ಣ ಉಂಡೆ. ಆಗ ನಮ್ಮನ್ನು ಹೆಣ ಎನ್ನುತ್ತಾರೆ

ಹಾಗಿದ್ದರೆ ಈ ಬಾಳು ಅಂದರೆ ಜೀವನವು ಏನು? ಎಂದರೆ ಮಣ್ಣ ಕಣಗಳ ತಿಕ್ಕಾಟವೆನ್ನುತ್ತಾರೆ ಶ್ರೀ ಗುಂಡಪ್ಪನವರು. ಈ ತಿಕ್ಕಾಟದಲ್ಲಿ ಬೆಂಕಿ ಉಂಟಾಗುತ್ತದೆ ಮತ್ತು ಹೊಗೆಯಾಡುತ್ತದೆ. ದ್ವೇಷದ ಬೆಂಕಿ, ಅಸೂಯೆಯ ಬೆಂಕಿ ಕೋಪದ ಬೆಂಕಿ ಹೀಗೆ ಹಲವಾರು ವಿಧದಲ್ಲಿ ಮನುಜ ಮನುಜರ ಮಧ್ಯೆ ಉಂಟಾಗುವ ತಿಕ್ಕಾಟ. ಆ ತಿಕ್ಕಾಟದ ಪರಿಣಾಮ ಸಾವು ನೋವುಗಳ ಪರಿಣಾಮ. ಅದೇ ಈ ಬೆಂಕಿಯಿಂದ ಬರುವ ಹೊಗೆ. ಇದರಿಂದ ಕೆಲವರಿಗೆ ಸುಖ ಕೆಲವರಿಗೆ ದುಃಖ. ಇದನ್ನೇ “ಕ್ಶ್ವೇಳ “ಅಂದರೆ ವಿಷವೆಂದು, ಸುಖ ಮತ್ತು ಆನಂದವನ್ನು “ಅಮೃತ”ವೆಂದೂ ಕರೆಯುತ್ತಾರೆ ಗುಂಡಪ್ಪನವರು.

ಪರಮಾತ್ಮನೆಂಬ ಮಹಾಜ್ಜ್ವಾಲೆಯಲ್ಲಿ ಉರಿಯುವ ಬೆಂಕಿಯಿಂದ ಸಿಡಿದ ಕೋಟ್ಯಾಂತರ ಕಿಡಿಗಳೇ, ಈ ಜೀವಿಗಳು. ಈ ಜಗತ್ತಿನಲ್ಲಿ, ಮಣ್ಣಿನ ಉಂಡೆಗಳಂತೆ ಇರುವ ನಾವೂ ಮತ್ತು ಈ ಉಂಡೆಯೊಳಗೆ ಗಾಳಿ ಎಂಬಂತೆ ಇರುವ ಆತ್ಮ ಅಥವಾ ಚೇತನದ ಸಮ್ಮಿಲನದಿಂದ ಉಂಟಾದ ಬದುಕೆಂಬ ತಿಕ್ಕಾಟದಲ್ಲಿ ಬೆಂಕಿಯುಗುಳಿ, ವಿಷಕಾರಿ, ಅಮೃತವ ಸವಿದು ಬಾಳ ಸವೆಸಿ ಮತ್ತದೇ ಚೇತನವನ್ನು ಸೇರುವಾಗ, ಇಲ್ಲಿ ಪಡೆದ ಅಮೃತದ ಬೆಲೆಯೇನು ಕುಡಿದ ಅಥವಾ ಕಕ್ಕಿದ ವಿಷದ ಬೆಲೆಯೇನು ಎಂದು ಕೇಳುತ್ತಾರೆ ಶ್ರೀ ಗುಂಡಪ್ಪನವರು.

ಈ ಕಗ್ಗದ ಒಟ್ಟಾರೆ ಅಂತರ್ಯವೇನೆಂದರೆ, ಮಣ್ಣಿಂದ ಆಗಿ, ಮಣ್ಣಲ್ಲೇ ಇದ್ದು ಮಣ್ಣಲ್ಲೇ ಸೇರುವ ಈ ಮಾನವನ ಬಾಳು ಕೇವಲ ಉಸಿರಿರುವ ತನಕ. ಹೀಗೆ ಬದುಕಿರುವಾಗ ನಾವು ಪಡೆಯುವ ಸುಖ ದುಃಖ ಅನುಭವಿಸುವ , ಕೋಪ ದ್ವೇಷ, ಅಸೂಯ, ಪ್ರೀತಿ, ಪ್ರೇಮ, ಅನುರಾಗ, ಬಂಧನಗಳಂಥಹ ಭಾವಗಳೆಲ್ಲವೂ, ” ಬಡಿತವಿರುವತನಕ ( ಹೃದಯದ)” ಅದು ನಿಂತರೆ ” ಬಡಿವಾರ ಬಂದ್” ಈ ಜೀವನದ ಎಲ್ಲಕ್ಕೂ ಒಂದು ಮಂಗಳವನ್ನು ಹಾಡುವ, ಸಾವನ್ನು ಅಪ್ಪಿ ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗುವಾಗುವಂಥಾ ಈ ಜೀವನದಲ್ಲಿ ಪಡೆದ ಸುಖಕ್ಕೆ ಏನು ಬೆಲೆ, ದುಃಖಕ್ಕೆ ಏನು ಬೆಲೆ. ಎಲ್ಲವೂ ಶೂನ್ಯ.

ಇಂತಹ ಭಾವಗಳನ್ನು ವ್ಯಕ್ತಪಡಿಸುವ ಈ ಕಗ್ಗದ ಅಂತರ್ಯವನ್ನು ವಾಚಕರು ಅವರದೇ ಅನುಭವದ ಮೂಸೆಯಲ್ಲಿ ಹಾಕಿ ನೋಡಿದಾಗ, ಪ್ರತಿಯೊಬ್ಬರಿಗೂ ಅವರವರದೇ ಅನುಭವದ ಭಾವ ಸಿಗುತ್ತದೆ.

ಇವುಗಳನ್ನೇ ಚಿಂತಿಸುತ್ತಾ ವಿಚಾರಮಾಡುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗೋಣ.
[09/01 9:00 PM] S. Bhargav: ಕಗ್ಗ-20

ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು? I

ಚಂಡಚತುರೋಪಾಯದಿಂದಲೇನಹುದು ? II

ತಂಡುಲದ ಹಿಡಿಯೊಂದು ತುಂಡುಬಟ್ಟೆಯದೊಂದು I

ಅಂಡಲೆತವಿದಕೇನೋ? – ಮಂಕುತಿಮ್ಮ II

ಚಂಡ= ಉಗ್ರ, ಚತುರೋಪಾಯ = ನಾಲ್ಕು ವಿಧವಾದ ಉಪಾಯಗಳು, ಮುಗಿದೇನಹುದು = ಮುಗಿದು ಏನು ಅಹುದು= ಮುಗಿದರೆ ಏನಾಗುತ್ತದೆ. ತಂಡುಲ=ಅಕ್ಕಿ, ಅಂಡಲೆತ= ಸುಮ್ಮನೆ ಸುತ್ತಾಟ.

ಅಂದಿನ ಮತ್ತು ಇಂದಿನ ವಾಸ್ತವಿಕ ಚಿತ್ರಣವನ್ನು ನಮಗೆ ಗುಂಡಪ್ಪನವರು ಕೊಟ್ಟಿದ್ದಾರೆ ಈ ಕಗ್ಗದಲ್ಲಿ. ನಮ್ಮಲ್ಲಿ ಅನೇಕ ದೇವರುಗಳು. ಆ ದೇವರುಗಳ ಸಂಖ್ಯೆ ಎಷ್ಟಿದೆಯಂದರೆ ಎಣಿಸಲೂ ಸಾಧ್ಯವಿಲ್ಲ. ಒಂದುಕಡೆ ತಿರುಪತಿ ತಿಮ್ಮಪ್ಪನಾದರೆ, ಇನ್ನೊಂದು ಕಡೆ, ಬದರಿಯ ಬದರೀನಾಥ, ಒಂದುಕಡೆ ಮಧುರೆಯ ಮೀನಾಕ್ಷಿಯಾದರೆ, ಇನ್ನೊಂದುಕಡೆ ಕಾಶಿಯ ವಿಶಾಲಾಕ್ಷಿ, ಒಂದುಕಡೆ ಪೂರಿಯ ಜಗನ್ನಾಥನಾದರೆ ಇನ್ನೊಂದುಕಡೆ ತಿರುವನಂತಪುರದ ಅನಂತಪದ್ಮನಾಭ, ಒಂದುಕಡೆ ವಿನಾಯಕನಾದರೆ, ಇನ್ನೊಂದುಕಡೆ ಷಣ್ಮುಖ, ಹೀಗೇ ಬರೆಯುತ್ತಹೋದರೆ ಪಟ್ಟಿ ಬಹಳ ಉದ್ದ ಆದೀತು. ದೇಶ ಕಾಲ ಸಂಧರ್ಭಕ್ಕನುಗುಣವಾಗಿ ನಮಗೆ ನಾವು ಪೂಜಿಸುವ ದೇವತೆಗಳು ಬದಲಾಗುತ್ತ ಹೋಗುತ್ತಾರೆ. ಇದನ್ನೇ ಗುಂಡಪ್ಪನವರು “ಕಂಡ ದೈವಕ್ಕೆಲ್ಲ” ಎಂದಿರಬೇಕು.

ಆದರೆ ಇದು ಸರಿಯೇ ಅಲ್ಲವೇ ಎಂದು ಸ್ವಲ್ಪ ವಿಶ್ಲೇಷಿಸೋಣವೇ? ಭಾರತೀಯರಾದ ನಮಗೆ ಎಲ್ಲವೂ ದೈವವೇ? ಗಿಡ ಮರ ಬಳ್ಳಿ ನದಿ ಗುಡ್ಡ ಬೆಟ್ಟ, ಆಕಾಶ ಸೂರ್ಯ ಚಂದ್ರ ಎಲ್ಲ ಗ್ರಹಗಳು, ಪಕ್ಷಿ ಮೀನು ಪ್ರಾಣಿಗಳು ಎಲ್ಲವೂ ದೇವರೇ. ಅಷ್ಟೇ ಅಲ್ಲ ಎಲ್ಲದರಲ್ಲೂ ದೈವವನ್ನು ಕಾಣುವ ಸಂಸ್ಕೃತಿ ನಮ್ಮದು. ಅವುಗಳನ್ನೆಲ್ಲ ಕಾಪಾಡುವ ಕಾರಣದಿಂದ ಅವುಗಳಿಗೆಲ್ಲ ದೈವತ್ವವನ್ನು ಆರೋಪಿಸಿದ್ದಾರೆ ನಮ್ಮ ಪೂರ್ವಜರು. ಒಂದು ರೀತಿಯಲ್ಲಿ ಇದು ಒಳ್ಳೆಯದೇ ಅಲ್ಲವೇ ವಾಚಕರೆ? ಆದರೆ ವ್ಯಕ್ತಿ ಆಂತರ್ಯದಲ್ಲಿ ಬೆಲ್ಯುತ್ತಾ ಹೋದಂತೆಲ್ಲ ಅನೇಕದಿಂದ ಏಕಕ್ಕೆ ಬರುವುದೇ ಅಧ್ಯಾತ್ಮಸಾಧನೆಯ ಗುರಿ. ಆಕಾರದಿಂದ ನಿರಾಕಾರಕ್ಕೆ ಬರುವುದೇ ಎಲ್ಲ ಸಾಧನೆಯ ಫಲ.

ಆದರೆ ನಾವು ಏಕೆ ಈ ದೈವಕ್ಕೆ ಕೈ ಮುಗಿಯುತ್ತೇವೆ? ಇದಕ್ಕೆ ನನ್ನ ಅರಿವಿನ ಪರಿಮಿತಿಯಲ್ಲಿ ವಿವರಿಸುತ್ತೇನೆ. ನಮಗೆ ಆಸೆಗಳುಂಟು. ಆಸೆಗಳು ನಾವು ಈ ಬದುಕಿಗೆ ಅಂಟಿಕೊಂಡಿರುವುದರಿಂದ ಉಂಟು. ಈ ಆಸೆಯ ಪಕ್ಕ ಪಕ್ಕದಲ್ಲೇ ಒಂದು ಭಯವೂ ಉಂಟು. ಮಾನವರಿಗೆ ಎರಡು ರೀತಿಯ ಭಯಗಳುಂಟು. ಒಂದು ತನ್ನಲ್ಲಿರುವ ವಸ್ತು, ವಿಷಯ ಅಥವಾ ವ್ಯಕ್ತಿ ಯನ್ನು ಕಳೆದುಕೊಳ್ಳುವ ಭಯ. ಎರಡು, ತಾನು ಆಸೆ ಪಟ್ಟ ವಸ್ತು, ವ್ಯಕ್ತಿ, ವಿಷಯಗಳು ಸಿಗದೆಹೋಗುವ ಭಯ. ಮಾನವನ ಎಲ್ಲ ಭಯಗಳನ್ನೂ ಈ ಎರಡು ಅಂದರೆ ಎರಡೇ ವಿಭಾಗಗಳಲ್ಲಿ ಸೇರಿಸಬಹುದು. ಮೂರನೆಯದು ನನಗೆ ಗೋಚರಿಸುತ್ತಿಲ್ಲ.

ಆದರೆ ಈ ಭಯ ಸಹಜವಾದದ್ದೇ. ಮನುಷ್ಯನಿಗೆ ತನ್ನ ಜೀವನದಲ್ಲಿ ತನಗೆ ಸಂಬಂಧಿಸಿದ ಎಲ್ಲ ವ್ಯಕ್ತಿ, ವಿಷಯ ಮತ್ತು ವಸ್ತುವಿನ ಮೇಲೆ ಮಮಕಾರವಿರುತ್ತದೆ. ಈ ಮಮಕಾರವೇ ಈ ಭಯಕ್ಕೆ ಕಾರಣ. ಈ ವ್ಯಕ್ತಿ, ವಿಷಯ ಮತ್ತು ವಸ್ತುಗಳು ಹಲವಿಧದಲ್ಲಿ ಇರಬಹುದು, ತನ್ನವರು, ಅವರಿಗೆ ಸಂಬಂಧಿಸಿದ ವಿಷಯಗಳಾದ, ಆರೋಗ್ಯ, ವಿದ್ಯೆ, ಪರಸ್ಪರ ಸಬಂಧಗಳು, ವಿವಾಹಕ್ಕೆ, ಪ್ರೇಮಕ್ಕೆ, ಉದ್ಯೋಗ, ಹಣಕಾಸು, ಹೀಗೆ ಹತ್ತು ಹಲವಾರು ವಿಷಯಗಳಿಗೆ ನಾವು ಅಂಟಿಕೊಂಡಿರುತ್ತೇವೆ. ಅವುಗಳಲ್ಲಿ ಇರುವುದು ಕಳೆದು ಹೋಗುವ ಭಯ ಅಥವಾ ಬಯಸಿದ್ದು ಆಗದೆ ಹೋಗಬಹುದಾದ ಭಯ. ಕಳೆದು ಹೋಗುವುದು ಏಕೆ? ಬಯಸಿದ್ದು ಆಗದೆ ಹೋಗುವುದು ಏಕೆ? ಎಂದು ಖಚಿತವಾಗಿ ನಮಗೆ ಅರಿಯದಾದಾಗ ಮತ್ತು ಸಂಶಯಗಳಿದ್ದಾಗ, ನಮಗರಿಯದ ಯಾವುದೋ ಶಕ್ತಿ ಅಥವಾ ನಮ್ಮನ್ನು ಕಾಯುವ
ಯಾವುದೋ ಶಕ್ತಿಗೆ ನಾವು ಕೈಮುಗಿದು, ಬೇಡುವುದೋ ಅಥವಾ ಶರಣಾಗುವುದೋ ಮಾಡುತ್ತೇವೆ. ಅದನ್ನೇ ಗುಂಡಪ್ಪನವರು ” ಆ ವಿಚಿತ್ರಕೆ ಶರಣಾಗೋ ” ಎನ್ನುತ್ತಾರೆ.

ಭಾರತೀಯರಾದ ನಮಗೆ ಎಲ್ಲವೂ ದೇವರೇ ಆದ್ದರಿಂದ, ಇಷ್ಟೊಂದು ಬಗೆಬಗೆಯ ದೇವರುಗಳು ನಮ್ಮಲ್ಲಿ, ಹಣಕ್ಕೊಬ್ಬ, ಗುಣಕ್ಕೊಬ್ಬ, ವಿದ್ಯೆಗೊಬ್ಬ, ಆರೋಗ್ಯಕ್ಕೊಬ್ಬ, ಪಾಪನಾಶನಕ್ಕೊಬ್ಬ, ಪರಮಾರ್ಗಕ್ಕೊಬ್ಬ. ಮತ್ತು ಈ ದೇವತೆಗಳನ್ನು ಒಲಿಸಿಕೊಳ್ಳಲು ಹಲವಾರು ವಿಧಾನಗಳು. ದರ್ಶನ, ಅರ್ಚನೆ, ಅಭಿಷೇಕ, ದಾನ,ಧ್ಯಾನ, ಭಜನೆ, ಆನ್ನ ಸಂತರ್ಪಣೆ, ಸಮಾರಾಧನೆ, ಪರೋಪಕಾರದ ಕೆಲಸಗಳು, ಹೋಮ, ಹವನ, ಯಜ್ಞ, ಯಾಗಾದಿಗಳು, ಹೀಗೆ ನಮಗೆ ತೋಚಿದ್ದು, ಮತ್ತು ಪರರಿಂದ ಸೂಚಿಸಲ್ಪಟ್ಟ, ಸಾಮ, ದಾನ , ಬೇಧ, ದಂಡದಂತ ತುರೋಪಾಯಗಳನ್ನೂ ಉಪಯೋಗಿಸಿ, ನಮ್ಮ ಕಾರ್ಯ ಸಾಧನೆಗೆ ಆ ದೇವರನ್ನು ಸದಾಕಾಲ ಒಲಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಇದು ಒಂದು ಮಾನಸಿಕ ಸ್ವಯಂ ಚಿಕಿತ್ಸೆ. ನಮ್ಮ ಮನಸ್ಸುಗಳಲ್ಲಿ ಉದ್ಭವಿಸುವ ಹಲವಾರು ಪ್ರಶ್ನೆ ಮತ್ತು ಸಂದೇಹಗಳಿಗೆ ನಾವೇ ಕಂಡುಕೊಳ್ಳುವ ಸಮಾದಾನ.

ಇದು ಅಧ್ಯಾತ್ಮ ಪ್ರಯಾಣದ ಒಂದು ಸ್ತರ. ಅವರವರ ಮಟ್ಟಿಗೆ ಸರಿ. ಆದರೆ ಗುಂಡಪ್ಪನವರು ” ತಂಡುಲದ ಹಿಡಿಯೊಂದು ತುಂಡುಬಟ್ಟೆಯದೊಂದು” ಒಂದು ಹಿಡಿ ಅಕ್ಕಿಗಾಗಿ, ಹೊಟ್ಟೆ ತುಂಬಿಸಿಕೊಳ್ಳಲು, ಗೇಣುದ್ದ ಬಟ್ಟೆಗಾಗಿ, ಮೈಮುಚ್ಚಲು ಮನುಷ್ಯ ಇಷ್ಟೆಲ್ಲಾ ಮಾಡಬೇಕೆ, ಎಂಬ ಭಾವದಲ್ಲಿ ಒಂದು ವೈರಾಗ್ಯದ ವಿಷಯವನ್ನು ಪ್ರಸ್ತಾಪ ಮಾಡುತ್ತಾರೆ. ಆದರೆ ವೈರಾಗ್ಯವು ಅನುಭವದಿಂದ ಮಾತ್ರ ಬರಲು ಸಾಧ್ಯ. ಅಂತಹ ಅನುಭವನ್ನ್ನು ಕೊಡುವುದೇ ಜೀವನ. ಅಂತ ಅನುಭವಗಳನ್ನು ಪಡೆದು ಅನುಭವಿಸಿ, ಇಲ್ಲಿ ಯಾವುದರಿಂದಲೂ ಏನೂ ಆಗುವುದಿಲ್ಲ, ನಾನು ಇಲ್ಲಿನವನಲ್ಲ, ನನ್ನ ಮೂಲ ಬೇರೆ ಇದೆ, ” ಅಲ್ಲಿದೆ ನಮ್ಮ ಮನೆ. ನಾನೇಕೆ ಬಂದೆ ಸುಮ್ಮನೆ” ಎಂದು ಪುರಂದರದಾಸರು ಹೇಳುವಹಾಗೆ, ನಮಗೆ ಈ ಪ್ರಪಂಚದಿಂದ ಏನೂ ಆಗಬೇಕಾಗಿಲ್ಲವೆಂಬ “ನಿಜ” ವೈರಾಗ್ಯದ ಭಾವ ಮನದಲ್ಲಿ ಸ್ಥಿರವಾಗಿ ಮೂಡಿದರೆ…………….. ಆದರೆ ಕೆಲವರು ಹೀಗೂ ಯೋಚನೆ ಮಾಡುತ್ತಾರೆ, ಆ ವೈರಾಗ್ಯ ಬೇಕೆ? ಈ ಜೀವನದಾಚಿನದು ಏನೋ ಗೊತ್ತಿಲ್ಲ. ಗೊತ್ತಿಲ್ಲದ ವಿಷಯದಲ್ಲಿ ಆಸಕ್ತಿ ತೋರಿ, ಇರುವುದನ್ನು
ಬಿಡುವುದು ಸರಿಯಲ್ಲ. ಬದುಕಿರುವ ತನಕ ಬದುಕನ್ನು ಅನುಭವಿಸಿ ಬದುಕಬೇಕು, ಎನ್ನುತ್ತಾರೆ.

ಏನಾದರಾಗಲಿ ಒಂದುಕಡೆ ಈ ಜಗತ್ತು ಮತ್ತು ಸಂಸಾರದಲ್ಲಿ ರಕ್ತಿ ಇನ್ನೊಂದುಕಡೆ ವಿರಕ್ತಿ. ಯಾವುದು ಬೇಕೋ ಅದನ್ನು ಆಯ್ದುಕೊಳ್ಳಲು ಎಲ್ಲರಿಗೂ ಸಂಪೂರ್ಣ ಸ್ವಾತಂತ್ರ್ಯ. ನಮ್ಮ ನಮ್ಮ
ವಿಚಾರಗಳು ನಮಗೆ ಸಂತೋಷ ನೀಡಬೇಕು ಅಷ್ಟೇ.

ಇವುಗಳನ್ನೇ ಚಿಂತಿಸುತ್ತಾ ವಿಚಾರಮಾಡುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗೋಣ.
[11/01 5:15 AM] S. Bhargav: ಕಗ್ಗ-21

ಹೊನ್ನೆಂದು ಜಗದಿ ನೀಂ ಕೈಗೆ ಕೊಂಡದನು ವಿಧಿ
ಮಣ್ಣೆನುವನ್, ಅವನವರ ಮಣ್ಣೆನುವೆ ನೀನು
ಬಿನ್ನವಿಂತಿರೆ ವಸ್ತು ಮೌಲ್ಯಗಳ ಗಣನೆಯೀ
ಪಣ್ಯಕ್ಕೆ ಗತಿಯನ್ತೋ? – ಮಂಕುತಿಮ್ಮ

ಹೊನ್ನು ಎಂದು ಜಗದಿ ನೀ೦ ಕೈಗೆ ಕೊಂಡದನು ವಿಧಿ ಮಣ್ಣೆನುವನು, ಅವನ ವರ ಮಣ್ಣೆನುವೆ ನೀನು

ಭಿನ್ನವು ಇಂತಿರೆ ವಸ್ತು ಮೌಲ್ಯಗಳ ಗಣನೆಯು ಈ ಪಣ್ಯಕ್ಕೆ ಗತಿಯೇನೋ ಮಂಕುತಿಮ್ಮ

ಹೊನ್ನು= ಚಿನ್ನ, ಜಗದಿ=ಜಗತ್ತಿನಲ್ಲಿ, ಭಿನ್ನ=ವ್ಯತ್ಯಾಸ, ಪಣ್ಯ= ವ್ಯಾಪಾರ.

ಯಾವುದನ್ನು ನೀನು ಚಿನ್ನ ಎಂದು ಕೈಗೆ ಎತ್ತಿಕೊಳ್ಳುತೀಯೋ, ಅದು ವಾಸ್ತವದಲ್ಲಿ ಚಿನ್ನವಾಗಿರದೆ, ಮಣ್ಣಂತೆ ನಿಷ್ಪ್ರಯೋಜಕವಾಗುತ್ತದೆ. ಆದರೆ ಕೆಲವು ಬಾರಿ ಬಯಸದೆ ಸಂದ ಭಾಗ್ಯವನ್ನು, ಆಪರಮಾತ್ಮನ ಕರುಣೆಯಿಂದ ವರ ರೂಪದಲ್ಲಿ ಸಂದದ್ದು ನಿನಗೆ ನಿಷ್ಪ್ರಯೋಜಕವಾಗಿ ಕಾಣುತ್ತದೆ. ಹೀಗೆ ವಸ್ತುಗಳ ನಿಜರೂಪ ಗುರುತಿಸುವುದರಲ್ಲಿ ನಮಗೆ ವ್ಯತ್ಯಾಸವಾದರೆ ಈ ಜಗತ್ತಿನ ವ್ಯಾಪಾರ ನಡೆಯುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ಮಾನ್ಯ ಗುಂಡಪ್ಪನವರು.

ನಮ್ಮ ಜೀವನಗಳಲ್ಲಿ ಇದು ಬಹಳ ಸತ್ಯವಾದ ಮಾತು. ನಮಗೆ ವಸ್ತುಗಳು ಬೇಕು. ವ್ಯಕ್ತಿಗಳು ಬೇಕು, ವಿಷಯಗಳು ಬೇಕು. ಆದರೆ ಆ ವಸ್ತು, ವ್ಯಕ್ತಿ, ವಿಷಯಗಳು ನಮಗೆ ಒಳಿತೋ ಇಲ್ಲವೋ ನಮಗೆ ಗೊತ್ತಿಲ್ಲ. ಎಷ್ಟೋಬಾರಿ ನಾವು ಇಷ್ಟಪಟ್ಟು ಆಯ್ದುಕೊಂಡದ್ದು ನಮಗೆ ತೊಂದರೆಗಳಿಗೆ, ಮಾನಸಿಕ ಹಿಂಸೆಗೆ, ಕಾರಣವಾಗಬಹುದು. ಹೀಗೆ ಆಗಲಿಕ್ಕೆ ಕಾರಣವೇನು ಎಂದರೆ, ಅದಕ್ಕೆ “ವಿಧಿ”ಯನ್ನು ಕಾರಣರಾಗಿಸುತ್ತಾರೆ ಶ್ರೀ ಗುಂಡಪ್ಪನವರು. ಆದರೆ ಅದು ಹೀಗೂ ಇರಬಹುದು. ನಾವು ಒಂದು ವಸ್ತು,ವ್ಯಕ್ತಿ, ವಿಷಯವನ್ನು ಬೇಕು ಎಂದುಕೊಳ್ಳುವುದೇ ತಪ್ಪಿರಬಹುದು. ಅಥವಾ ನಮ್ಮ ಆಯ್ಕೆಯೇ ತಪ್ಪಾಗಿರಬಹುದು. ಹೊರನೋಟಕ್ಕೆ ಆ ವಸ್ತು, ವ್ಯಕ್ತಿ, ವಿಷಯಗಳು ನಮಗೆ ಹಿತವಾಗಿಯೋ, ಸವಿಯಾಗಿಯೋ ಕಂಡರೂ ನಮ್ಮ ದೈಹಿಕ ಮತ್ತು ಮಾನಸಿಕ ಪ್ರಕೃತಿಗೆವಿರುದ್ಧವಾಗಿರಬಹುದು ಹಾಗಾಗಿ ದೋಷ ನಮ್ಮ ಆಯ್ಕೆಯಲ್ಲಿದೆಯೇ ಹೊರತು ಆ ವಸ್ತು, ವ್ಯಕ್ತಿ, ವಿಷಯದಲ್ಲಿ ಇಲ್ಲ ಅಲ್ಲವೇ?. ಹಾಗಾದಾಗ “ಹೊನ್ನೆಂದು” ನಾವು ವಸ್ತು, ವ್ಯಕ್ತಿ, ವಿಷಯಗಳನ್ನು ಆಯ್ಕೆಮಾಡಿದಾಗ, ಅದು ನಮಗೆ ಹಿತವಾಗಿಲ್ಲದೆ ನಿಶ್ಪ್ರಯೋಜಕವಾಗುವುದು ಎಂಬುದು ಇಲ್ಲಿನ ಅಂತರ್ಯ.

ಇನ್ನು ನಾವು ಬಯಸದೆ ಬಂದ, ಸಂದ ಮತ್ತು ಪಡೆದುಕೊಂಡ ವಸ್ತು, ವ್ಯಕ್ತಿ, ವಿಷಯಗಳು ನಮಗರಿವಿಲ್ಲದಂತೆಯೇ ನಮಗೆ ಹಿತವನ್ನು ಮಾಡುತ್ತಿರಬಹುದು. ಇದರ ಅನುಭವ ನಮಗೆ ಬಹಳ ಬಾರಿ ಆಗಿರುತ್ತದೆ. ಆದರೆ ಅದು ನಾವು ಇಷ್ಟಪಟ್ಟುಪಡೆದುಕೊಂಡಿಲ್ಲವಾದ್ದರಿಂದ ನಮಗೆ ಅದರ ಮಹತ್ವ ಅರ್ಥವಾಗುವುದಿಲ್ಲ. ” ಅವನದೇ ಕಣಪ್ಪ ಅದೃಷ್ಟ. ಹಿಂಗೆ ಅಂದ್ಕೊಂಡೆ ಇರ್ಲಿಲ್ಲ ಕಣಯ್ಯಾ. ಎಂಥ ಚಾನ್ಸು ನೋಡು” ಇಂತಹ ಮಾತುಗಳನ್ನು ನಾವು ಎಷ್ಟೋಬಾರಿ ಕೇಳಿರುತ್ತೇವೆ. ಅದೇ ” ಅವನವರ” ಎಂದು ಶ್ರೀ ಗುಂಡಪ್ಪನವರು ಹೇಳುತ್ತಾರೆ.

ಹಾಗಾದರೆ ನಾವು ಇಷ್ಟಪಟ್ಟದ್ದೆಲ್ಲ ಹಾಗೆ ಆಗುವುದೇ? ಎಂದರೆ ಇಲ್ಲ. ಎಲ್ಲ ಹಾಗಾಗುವುದಿಲ್ಲ. ಆದರೆ ಹೆಚ್ಚಿನ ಮಟ್ಟಿಗೆ ಹಾಗಾಗುತ್ತದೆ. ಮೇಲ್ನೋಟಕ್ಕೆ ಎಲ್ಲ ಸರಿಯಾಗಿದೆ ಎಂದು ನಾವು ಕಂಡರೂ , ಪ್ರತಿವ್ಯಕ್ತಿಯೂ, ತಾನು ಬಯಸಿದ್ದು, ತಾನು ಪಡೆದಿದ್ದು, ಅದರಿಂದ ತಾನು ಅನುಭವಿಸುವ ಕಷ್ಟ, ಸಂಕಟ, ಜಿಗುಪ್ಸೆ, ಇವುಗಳನ್ನು ತೋರ್ಪಡಿಸದೆ, ಅಂತರ್ಯದಲ್ಲಿಅನುಭವಿಸುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಏಕೆಂದರೆ ನಾವು ನೀವು ಎಲ್ಲರೂ ಇದನ್ನು ಅನುಭವಿಸಿಯೇ ಇರುತ್ತೇವೆ. ಹಾಗಾದರೆ ನಾವು ಬಯಸುವುದೇ ಬೇಡವೇ ಎಂದು ವಿಚಾರಮಾಡಿದರೆ ನಮಗೆ ಸಿಗುವ ಉದಾಹರಣೆ ಹೇಗಿದೆ.

ಒಂದು ತಾಯಿ, ತನ್ನ ಮಗುವಿಗೆ ಏನು ಬೇಕು, ಯಾವುದು ಒಳ್ಳೆಯದು, ಯಾವುದರಿಂದ ಆ ಮಗುವಿಗೆ ಹಿತ ಆರೋಗ್ಯಕರ ಎಂದೆಲ್ಲ ಅರಿತು ಸರಿಯಾದ ಸಮಯಕ್ಕೆ ಕೊಡುತ್ತಾಳೆ. ಆದರೆ ಆ ಮಗುವಿಗೆ ಅದು ಅರ್ಥವಾಗದೆ ಕಂಡ ಕಂಡದ್ದಕ್ಕೆಲ್ಲ ರಚ್ಚೆ ಮಾಡಿ, ಹಠಮಾಡುತ್ತದೆ. ನಮ್ಮ ಪರಿಸ್ಥಿತಿಯೂ ಹಾಗೆ ಇದೆ. ನಮಗೆಲ್ಲರಿಗೆ ತಾಯಿಸ್ಥಾನದಲ್ಲಿರುವ ಆ ಪರಮಾತ್ಮ ನಮಗೆ ವಿಧಿ ಪ್ರಕಾರ, ಏನು, ಎಷ್ಟು, ಯಾವಾಗ, ಯಾರ ಮೂಲಕ, ನಮಗೆ ಹಿತವಾದದ್ದನ್ನು ಕೊಡಿಸಬೇಕೋ ಕೊಡಿಸುತ್ತಾನೆ. ಅದ್ದನ್ನರಿಯದೆ ನಾವು ನಾವು ಬಯಸಿದ ವಸ್ತು ಸಿಗದೇ ಹೋದರೆ, ” ಅಯ್ಯೋ ದೇವರೇ ನನಗೇ ಯಾಕೆ ಹೀಗೆ” ಎಂದು ಆ ದೇವರನ್ನು ಬಯ್ಯುತ್ತ, ನಮ್ಮ ” ಹಣೆಬರಹಾನೆ ಇಷ್ಟು’ ಎಂದು ನಮ್ಮನ್ನು ನಾವೇ ಹಳಿದುಕೊಳ್ಳುತ್ತಾ ಬದುಕುತ್ತೀವಿ.

ನೋಡಿ ಒಂದು ವಿಷಯ. ಒಂದು ನೆಮ್ಮದಿಯ ವಿಷಯ. ಆ ಪರಮಾತ್ಮನ ಉಕ್ತಿ” ನೀನು ನನಗೆ ಶರಣಾಗು. ನಾನು ನಿನ್ನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತೇನೆ.” ಎಂದು ಹೇಳಿರುವಾಗ ಮತ್ತೇನು. ಮತ್ತೆ” ನೀ ಏನೂ ಕೇಳಬೇಡ, ಹಾಗೆ ನೀ ಏನು ಕೇಳಿದರೂ ಕೊಡುವೆ. ಆದರೆ ನೀ ಹಾಗೆ ಕೇಳಿ ಪಡೆದುಕೊಂಡ ವಸ್ತುವಿನಿಂದ ಬರುವ ಎಲ್ಲ ನೋವು, ಸಂಕಟ, ಕಷ್ಟ, ಕಾರ್ಪಣ್ಯಗಳನ್ನೆಲ್ಲ ನೀನೇ ಅನುಭವಿಸಬೇಕು. ಆದರೆ ನೀ ನನ್ನನು ಏನೂ ಕೇಳದಿದ್ದರೆ, ನಿನಗೇನೂ ಸೂಕ್ತವೋ ,ಹಿತವೋ, ಅದನ್ನು ನಾನೇ ನಿನಗೆ ಸರಿಯಾದ ಸಮಯಕ್ಕೆ ಕೊಡುವೆ. ಆಯ್ಕೆನಿನ್ನದು” ಎಂದಾಗ. ಮತ್ತೇಕೆ ನಾವು ಕೇಳಬೇಕು?. ಹಾಗೆ ಕೇಳಬೇಕೆಂದರೆ ಆ ಪರಮಾತ್ಮನನ್ನೇ ” ನನ್ನ ಮನಸ್ಸಿಗೆ ನಿರಂತರವಾಗಿ ಬಾ” ಎಂದು ಕೇಳಬೇಕು, ಅಲ್ಲವೆ ವಾಚಕರೆ? .

ಇನ್ನು ಹೀಗೆ ನಮಗೆ ಬೇಡದ ಹಿತವಲ್ಲದ ವಸ್ತು, ವ್ಯಕ್ತಿ, ವಿಷಯಗಳನ್ನು ಬಯಸಿ ಅದರಿಂದ ಪಡಬಾರದ ಕಷ್ಟಗಳನ್ನು ಪಡುವಾಗ, ಆ ವಿಧಿಯಿಂದ ಸಿಕ್ಕ ವಸ್ತುಗಳ ಬೆಲೆ ನಾವು ಅರಿಯದಾದಾಗ ಇಲ್ಲಿ ಜಗದ್ವ್ಯಾಪಾರದಲ್ಲಿ ವ್ಯತ್ಯಯ ಉಂಟಾಗದೇ ಇನ್ನೇನು ಎನ್ನುವ ಅರ್ಥದಲ್ಲಿ ” ಬಿನ್ನವಿಂತಿರೆ ವಸ್ತು ಮೌಲ್ಯಗಳ ಗಣನೆಯೀ ಪಣ್ಯಕ್ಕೆ ಗತಿಯನ್ತೋ ” ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಹಾಗಾಗಿ ವಾಚಕರೆ, ತಾಯಿ ಸ್ವರೂಪದ ಆ ಪರಮಾತ್ಮನಲ್ಲಿ ಶರಣಾಗಿ ನಮ್ಮ ಆಸೆ ಆಕಾಂಕ್ಷೆಗಳನ್ನು ತೀರಿಸಿಕೊಳ್ಳಲು, ನಮ್ಮ ಆಯ್ಕೆಯ ಮೇಲೆ ಅಧಾರಪಡದೆ, ಎಲ್ಲವನ್ನೂ ಆ ಪರಮಾತ್ಮನಿಗೆ ಅರ್ಪಿಸಿ, ನಮಗೆ ಸಿಕ್ಕ ಕೆಲಸವನ್ನು ನಿಷ್ಠೆಯಿಂದ ಮಾಡಿಕೊಂಡು ಹೋದರೆ, ನಮಗೇನು ಹಿತವೋ ಅದನ್ನು ಆ ಪರಮಾತ್ಮ ನೀಡುತ್ತಾನೆ, ಅದೇ ನನಗೆ ಹಿತ ಎಂದು ಅರಿತರೆ, ನಮಗೆ ಹಿತ. ಒಟ್ಟಾರೆ ಹೇಳುವುದಾದರೆ, ” ಅಹಂಕಾರ ” ಬಿಟ್ಟರೆ ಹಿತ ಎನ್ನುವ ಅರ್ಥದಲ್ಲಿದೆ ಈ ಕಗ್ಗದ ಅಂತರ್ಯ.

ಇವುಗಳನ್ನೇ ಚಿಂತಿಸುತ್ತಾ ವಿಚಾರಮಾಡುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗೋಣ.

Leave a comment

Filed under ಕಗ್ಗದ ಹುಗ್ಗಿ

ಶ್ರೀ ಗುರು ಚರಿತ್ರೆ ಅಧ್ಯಾಯ 5-17

[29/12/2015 12:47 PM] S. Bhargav: |ಶ್ರೀ ಗುರು ಚರಿತ್ರೆ – ಸಿದ್ಧನಾಮಧಾರಕ ಸಂವಾದೇ ಪೀಠಾಪುರೇ ಶ್ರೀಪಾದಾವತಾರೋ ನಾಮ ಪಂಚಮೋಧ್ಯಾಯಃ||

ಸಿದ್ಧಮುನಿಯು “ಪರಮೇಶ್ವರನೇ ತನ್ನ ಮಾನವ ಭಕ್ತರನ್ನು ಉದ್ಧರಿಸಲು ಅವತಾರ ಮಾಡುತ್ತಿರುತ್ತಾನೆ. ಭಗವಂತನು ನಾನಾರೂಪನು. ಅಂಬರೀಷನನ್ನು ರಕ್ಷಿಸಲು ದಶ ಅವತಾರಗಳನ್ನು ಧರಿಸಿದನು. ಮತ್ಸ್ಯ, ಕೂರ್ಮ, ನರಸಿಂಹಾವತಾರಗಳನ್ನು, ಕುಬ್ಜಯಾಚಕನಾಗಿ ವಾಮನಾವತಾರವನ್ನು, ವಿಪ್ರನಾದರೂ ಕ್ಷತ್ರಿಯಾಂತಕನಾದ ಪರಶುರಾಮಾವತಾರವನ್ನು, ದಶರಥಪುತ್ರನಾಗಿ, ರಾಜಭೂಷಣನಾಗಿ ರಾಮಾವತಾರವನ್ನು, ರಾಜನಾಗಿ ಜನಿಸಿದರೂ ಗೋಪಗೃಹದಲ್ಲಿ ಗೋರಕ್ಷಕನಾಗಿ ಕೃಷ್ಣಾವತಾರವನ್ನು, ವಸ್ತ್ರವಿಹೀನನಾಗಿ ಬುದ್ಧಧರ್ಮವನ್ನು ಪ್ರಸರಿಸಿದ ಬುದ್ಧಾವತಾರವನ್ನು ಧರಿಸಿದನು. ಮುಂದೆ ಯುಗಾಂತರದಲ್ಲಿ ಅಶ್ವವಾಹನ, ಮ್ಲೇಚ್ಛಹಂತಕನಾಗಿ ಕಲ್ಕ್ಯಾವತಾರವನ್ನು ಧರಿಸುತ್ತಾನೆ. ಇದೆಲ್ಲದರ ಜೊತೆಗೆ ಇನ್ನೂ ಅನೇಕ ವೇಷಗಳನ್ನು ಯುಗಯುಗಗಳಲ್ಲೂ ಧರಿಸಿ ಹೃಷೀಕೇಶನು ಸಾಧುಜನ ರಕ್ಷಣೆ, ದುಷ್ಟಜನ ಸಂಹಾರಕ್ಕಾಗಿ ಅವತರಿಸುತ್ತಲೇ ಇರುತ್ತಾನೆ.

ದ್ವಾಪರಾಂತ್ಯದಲ್ಲಿ ಕಲಿವ್ಯಾಪ್ತಿಯಾಗಲು ವಿಪ್ರರು ಅಜ್ಞಾನದಿಂದ ತುಂಬಿ, ದುರಾಚಾರಿಗಳಾಗಿ, ಕಲಿದೋಷದೂಷಿತರಾಗಿರಲು, ಭೂತಲದಲ್ಲಿ ಭಕ್ತ ರಕ್ಷಣೆಗಾಗಿ ಗುರುನಾಥನವತರಿಸಿದನು. ಭಗೀರಥನು ಪಿತೃಜನೋದ್ಧಾರಕ್ಕಾಗಿ ಗಂಗೆಯನ್ನು ಭೂಮಿಗೆ ತಂದಹಾಗೆ, ವಿಪ್ರಸ್ತ್ರೀಯ ಭಕ್ತಿಯಿಂದ ದತ್ತಾವತಾರವಾಯಿತು. ಆಕೆಗೆ ದತ್ತಾತ್ತ್ರೇಯನು ಮಗನಾಗಿ ಜನಿಸಿದನು. ಅದೂ ಒಂದು ವಿಚಿತ್ರವೇ!

ಪೂರ್ವದೇಶದಲ್ಲಿ ಪೀಠಾಪುರ ಎಂಬ ಊರಿನಲ್ಲಿ ಕುಲೀನನಾದ ಬ್ರಾಹ್ಮಣನೊಬ್ಬನಿದ್ದನು. ಆಪಸ್ಥಂಭಶಾಖೀಯನಾದ ಅವನು ರಾಜು ಎಂಬ ನಾಮಾಂಕಿತದಿಂದ ತನ್ನ ಧರ್ಮಕರ್ಮಗಳನ್ನು ತಪ್ಪದೇ ಆಚರಿಸುತ್ತಿದ್ದನು. ಆತನ ಭಾರ್ಯೆ ಸುಮತಿ. ಸದಾಚಾರ ತತ್ಪರಳಾದ ಪತಿವ್ರತೆ. ಅತಿಥಿಅಭ್ಯಾಗತರನ್ನು ಪ್ರತಿದಿನವೂ ಸತ್ಪ್ರವರ್ತನೆಯಿಂದ ಅರ್ಚಿಸುತ್ತಾ, ಸುಶೀಲಗುಣಸಂಪನ್ನೆಯಾಗಿ, ಪತಿಸೇವಪರಾಯಣಳಾಗಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದಳು.

ಹೀಗಿರುವಾಗ ಒಂದುದಿನ, ದತ್ತಾತ್ತ್ರೇಯಸ್ವಾಮಿ ಅತಿಥಿರೂಪದಲ್ಲಿ ಆ ಪತಿವ್ರತೆಯಾದ ಸುಮತಿಯ ಮನೆಗೆ ಬಂದನು. ಅಂದು ಅವರ ಮನೆಯಲ್ಲಿ ಪಿತೃಶ್ರಾದ್ಧ. ಪಿತೃಸ್ಥಾನೀಯನಾದ ವಿಪ್ರಭೋಜನಕ್ಕೆ ಮುಂಚೆಯೇ ಆ ಸತೀಮಣಿ ಅತಿಥಿ ರೂಪದಲ್ಲಿ ಬಂದಿದ್ದ ದತ್ತನಿಗೆ ಭಿಕ್ಷೆಯಿತ್ತಳು. ಭಕ್ತಪ್ರಿಯನಾದ ದತ್ತನು, ಅದರಿಂದ ಪ್ರಸನ್ನನಾಗಿ, ಆಕೆಗೆ ತ್ರಿಗುಣಾತ್ಮಕವಾದ ತನ್ನ ತಾರಕ ಸ್ವರೂಪವನ್ನು ತೋರಿಸಿದನು. ಅದರಿಂದ ಪುಳಕಿತಗೊಂಡ ಸುಮತಿಯು ವಿನಯ ವಿಧೇಯತೆಗಳಿಂದ ತುಂಬಿ ಭಕ್ತಿಯಿಂದ ದತ್ತನ ಪಾದಗಳಿಗೆ ನಮಸ್ಕರಿಸಿ ಅವನಲ್ಲಿ ಶರಣಾದಳು. ಆಕೆಯ ಚರ್ಯೆಯಿಂದ ಸಂಪ್ರೀತನಾದ ದತ್ತಾತ್ತ್ರೇಯಸ್ವಾಮಿ ಆಕೆಯನ್ನು ವರ ಕೇಳಿಕೊಳ್ಳುವಂತೆ ಅನುಜ್ಞೆ ಕೊಟ್ಟನು. ಆ ಬ್ರಾಹ್ಮಣ ಪತ್ನಿ ಮತ್ತೆ ದತ್ತನಿಗೆ ನಮಸ್ಕರಿಸಿ, ವಿನಮ್ರಳಾಗಿ, ಜಗದೀಶ್ವರನನ್ನು ಈ ರೀತಿ ಪ್ರಾರ್ಥಿಸಿದಳು. “ಹೇ ಜಗನ್ನಾಥ, ಅನಂತ, ನೀನೇ ವಿಶ್ವೇಶ್ವರ. ವಿಶ್ವಕರ್ತ. ಭವತಾರಕ. ನೀನು ನನ್ನಲ್ಲಿ ಪ್ರಸನ್ನನಾಗಿ ನನ್ನ ಅಭೀಷ್ಟವನ್ನು ನೆರವೇರಿಸು. ಹೇ ಕೃಪಾಳು, ಎಲ್ಲದರಲ್ಲೂ ನೀನೇ ಇದ್ದೀಯೆಂದು ಪುರಾಣಾದಿಗಳಲ್ಲಿ ಪ್ರಸಿದ್ಧವಾಗಿದೆ. ದಯಾಭ್ಧಿ, ಭಕ್ತವತ್ಸಲ, ನಿನ್ನ ಕೀರ್ತಿಯನ್ನು ಬಣ್ಣಿಸಲು ಯಾರಿಗೆ ಸಾಧ್ಯ? ನಿನ್ನ ಮಾತುಗಳು ಎಂದಿಗೂ ವೃಥಾ ಆಗುವುದಿಲ್ಲ. ಧೃವನಿಗೆ ಅಚಂಚಲ ಶಾಶ್ವತ ಪದವಿಯನ್ನು ಕೊಟ್ಟ ದೇವದೇವನು ನೀನು. ವಿಭೀಷಣನಿಗೆ ಆಚಂದ್ರಾರ್ಕವಾದ ರಾಜ್ಯವನ್ನು ದಯಪಾಲಿಸಿದವನು ನೀನು. ಭಕ್ತರನ್ನು ಕಾಪಾಡಲು ಸದಾ ಭೂಮಿಯಲ್ಲಿ ಅವತರಿಸುತ್ತಿರುತ್ತೀಯೆ. ಚತುರ್ದಶ ಭುವನಗಳಲ್ಲೂ ನಿನ್ನ ಬಿರುದಾವಳಿಗಳು ಪ್ರಸರಿಸಿವೆ. ಹೇ ದೇವರಾಜ, ಕೃಪಾನಿಧಿ, ವಾಸನೆಗಳೆಂಬ ಕಾನನವನ್ನು ದಹಿಸುವವನು ನೀನು. ಹೇ ನಾರಾಯಣ, ಅನಾಥನಾಥ, ನನಗೆ ವರವನ್ನು ಕೊಡುವುದಾದರೆ ನನ್ನ ಮನೋವಾಸನೆಗಳನ್ನು ಸದಾ ನಿನ್ನ ನಾಮವೇ ಆವರಿಸಿರಲಿ. ಜಗತ್ತಿಗೇ ಜೀವಾಧಾರ ನೀನು. ನಿನ್ನನ್ನೆ ನಂಬಿ ನಿನ್ನ ಚರಣಗಳನ್ನು ಹಿಡಿದಿದ್ದೇನೆ.” ಎಂದು ಅವನ ಪಾದಗಳಲ್ಲಿ ಶಿರವನ್ನಿಟ್ಟಳು.

ಆ ಪತಿವ್ರತೆಯ ಸ್ತೋತ್ರವನ್ನು ಆಲಿಸಿ ಸಂತುಷ್ಟನಾದ ಅತ್ರಿತನಯನಾದ ದತ್ತಾತ್ತ್ರೇಯನು ದಯಾಪೂರ್ಣನಾಗಿ, ಆಕೆಯ ಭುಜಗಳನ್ನು ಹಿಡಿದು ಮೇಲಕ್ಕೆಬ್ಬಿಸಿ, “ಅಮ್ಮಾ” ಎಂದು ಕರೆದನು. ಆ ಕರೆಯನ್ನು ಕೇಳಿದ ಆ ಸಾಧ್ವಿ, “ದೇವ, ನೀನು ನನ್ನನ್ನು “ಅಮ್ಮಾ” ಎಂದು ಕರೆದ ಮಾತು ನನ್ನಲ್ಲಿ ಸಿದ್ಧಿಯಾಗಲಿ. ನನಗೆ ಅನೇಕ ಪುತ್ರರು ಜನಿಸಿದರೂ, ಇಬ್ಬರು ಮಾತ್ರವೇ ಉಳಿದಿದ್ದಾರೆ. ಅವರಲ್ಲೊಬ್ಬ ಕುರುಡ, ಇನ್ನೊಬ್ಬ ಕುಂಟನಾಗಿ, ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ಯೋಗ್ಯನಾದ ಮಗನೊಬ್ಬ ಹುಟ್ಟಲಿಲ್ಲವೆಂಬ ಕೊರಗು ಕಾಡುತ್ತಿದೆ. ಸತ್ಪುತ್ರನಿಲ್ಲದ ಜನ್ಮ ನಿಷ್ಫಲವೇ ಎಂದುಕೊಳ್ಳುತ್ತೇನೆ. ಆಯುಷ್ಮಂತ, ಜ್ಞಾನವಂತ, ಶ್ರೀಮಂತ, ಜಗದ್ವಂದ್ಯನಾದ ನಿನ್ನಂತಹ ಪುತ್ರನೊಬ್ಬನಾದರೂ ನನ್ನ ಜನ್ಮ ಸಾಫಲ್ಯವಾಗುತ್ತದೆ.” ಎಂಂದು ಬೇಡಿಕೊಂಡ ಸುಮತಿಯ ಮಾತುಗಳನ್ನು ಕೇಳಿದ ಭಗವಂತನಾದ ದತ್ತಾತ್ತ್ರೇಯನು ಪ್ರಸನ್ನನಾಗಿ, ” ಅಮ್ಮಾ, ಸಾಧ್ವಿ, ನಿನಗೆ ನನ್ನ ಸದೃಶನಾದ ಪುತ್ರ ನಿನ್ನ ಕುಲದಲ್ಲಿ ಹುಟ್ಟಿ ಕುಲೋದ್ಧಾರಮಾಡಿ, ಜಗದ್ವಿಖ್ಯಾತನಾಗುತ್ತಾನೆ. ಆದರೆ ಅವನ ಮಾತುಗಳನ್ನು ನೀನು ಪರಿಪಾಲಿಸಬೇಕು. ಇಲ್ಲದಿದ್ದರೆ ಅವನು ನಿಮ್ಮ ಹತ್ತಿರ ನಿಲ್ಲುವುದಿಲ್ಲ. ಜ್ಞಾನ ಮಾರ್ಗ ಬೋಧಿಸಿ ನಿಮ್ಮ ದೈನ್ಯ ತಾಪಗಳನ್ನು ಪರಿಹರಿಸುತ್ತಾನೆ. ” ಎಂದು ಹೇಳಿ ದತ್ತ ಸ್ವಾಮಿಯು ಅಂತರ್ಧಾನನಾದನು.

ಆ ಸ್ವಾಮಿಯ ರೂಪವನ್ನು ಮತ್ತೆ ಮತ್ತೆ ಸ್ಮರಿಸುತ್ತಾ, ಆಶ್ಚರ್ಯಚಕಿತಳಾದ ಸುಮತಿ, ಒಳಗೆ ಬಂದು ತನ್ನ ಗಂಡನಿಗೆ ನಡೆದ ವಿಷಯವನ್ನೆಲ್ಲಾ, ತಾನು ಅವನನ್ನು ಕೇಳದೆ ಬಿಕ್ಷೆಯನ್ನು ನೀಡಿದ್ದನ್ನೂ, ವಿಸ್ತಾರವಾಗಿ ನಿವೇದಿಸಿದಳು. ಅದನ್ನು ಕೇಳಿ ಬಹು ಸಂತುಷ್ಟನಾದ ಅವನು, ಬಂದಿದ್ದ ಅತಿಥಿ ದತ್ತಸ್ವಾಮಿಯೆಂಬುದನ್ನು ಅರಿತು, “ಮಧ್ಯಾಹ್ನ ಸಮಯದಲ್ಲಿ ದ್ವಿಜಗೃಹಕ್ಕೆ ದತ್ತಸ್ವಾಮಿ ಅತಿಥಿಯಾಗಿ ಬರುತ್ತಾನೆ. ಬಹುಮುಖನಾಗಿ ಬರುವ ಆ ದತ್ತಸ್ವಾಮಿಗೆ ವಿಮುಖರಾಗದೆ ಭಿಕ್ಷೆ ನೀಡಬೇಕು. ಮಾಹುರ, ಕರವೀರ, ಪಾಂಚಾಲೇಶ್ವರಗಳು ದತ್ತ ದೇವನ ವಾಸಸ್ಥಾನಗಳು. ಆತ ಭಿಕ್ಷು ರೂಪದಲ್ಲಿ ಪ್ರತಿದಿನವೂ ಸಂಚರಿಸುತ್ತಿರುತ್ತಾನೆ. ನಾನಾ ರೂಪಗಳಲ್ಲಿ ಪರ್ಯಟನೆ ಮಾಡುತ್ತಿರುತ್ತಾನೆ. ನನ್ನನ್ನು ಕೇಳದೆಯೇ ನೀನು ಭಿಕ್ಷೆ ನೀಡಿದ್ದು ಬಹಳ ಒಳ್ಳೆಯದಾಯಿತು.” ಎಂದನು. ಮತ್ತೆ ಸುಮತಿ, “ನಾಥ, ನನ್ನ ಅಪರಾಧವನ್ನು ಮನ್ನಿಸಿ. ನಾನು ಭಗವಂತನಿಗೆ ಶ್ರಾದ್ಧೀಯಾನ್ನವನ್ನು ಶ್ರಾದ್ಧಕ್ಕೆ ಮುಂಚೆಯೇ ನೀಡಿದೆ.” ಎಂದಳು. ಅವಳ ಮಾತನ್ನು ಕೇಳಿದ ರಾಜು ನೀನು ಬಹಳ ಒಳ್ಳೆಯ ಕೆಲಸವನ್ನೇ ಮಾಡಿದೆ. ನಮ್ಮ ಪಿತೃಗಳೆಲ್ಲಾ ತೃಪ್ತರಾದರು. ಅದರಲ್ಲಿ ಸಂದೇಹವೇ ಇಲ್ಲ. ಪಿತೃಗಳನ್ನುದ್ದೇಶಿಸಿ ಕರ್ಮಗಳನ್ನು ಮಾಡಿ, ಶ್ರೀ ವಿಷ್ಣುವಿಗೆ ಶ್ರಾದ್ಧೀಯಾನ್ನವನ್ನು ಸಮರ್ಪಿಸುತ್ತೇವೆ. ಆ ವಿಷ್ಣುವೇ ದತ್ತ ರೂಪದಲ್ಲಿ ಸಾಕ್ಷಾತ್ಕರಿಸಿ ಭಿಕ್ಷೆಯಾಗಿ ಗ್ರಹಿಸಿದ್ದಾನೆ. ಅದರಿಂದ ನಮ್ಮ ಪಿತೃಗಳು ಕೃತಾರ್ಥರಾಗಿ, ತೃಪ್ತರಾದ ಅವರು ಸ್ವರ್ಗದಲ್ಲಿ ಬಹಳ ಕಾಲ ಇರುತ್ತಾರೆ. ನೀನು ಸಾಕ್ಷಾತ್ಭಗವಂತನ ತ್ರಿಮೂರ್ತಿರೂಪನಾದ ದತ್ತಸ್ವಾಮಿಯನ್ನು ಅರ್ಚಿಸಿದ್ದೀಯೆ. ನಿನಗೆ ಇಂತಹ ವರವು ಲಭಿಸಿದ್ದರಿಂದ ನಿನ್ನ ಮಾತಾಪಿತರು ಧನ್ಯರಾದರು. ನಿನಗೆ ದತ್ತ ಸದೃಶನಾದ ಪುತ್ರನು ಸಂಭವಿಸುವುದರಲ್ಲಿ ಯಾವ ಸಂದೇಹವೂ ಇಲ್ಲ.” ಎಂದು ಸುಮತಿಗೆ ಹೇಳಿದನು.

ಇಂತಹ ನಿಶ್ಚಲಮನಸ್ಸಿನಿಂದ ಆ ದಂಪತಿಗಳು ಇರುತ್ತಿರಲು, ಆ ಸಾಧ್ವಿ ಗರ್ಭವತಿಯಾದಳು. ನವಮಾಸಗಳು ತುಂಬಿದಮೇಲೆ ಒಂದು ಶುಭ ಮುಹೂರ್ತದಲ್ಲಿ ಆಕೆ ಗಂಡುಮಗುವಿಗೆ ಜನ್ಮಕೊಟ್ಟಳು. ಆನಂದ ಭರಿತನಾದ ಆಕೆಯ ಗಂಡ ರಾಜು, ಸ್ನಾನಾದಿಗಳನ್ನು ಮುಗಿಸಿಕೊಂಡು, ಜಾತಕರ್ಮಾದಿಗಳನ್ನು ಮಾಡಿದನು. ಜ್ಯೋತಿಷ್ಯ ನಿಪುಣರು ಬಂದು ಆ ಬಾಲಕನ ಜನ್ಮ ಲಗ್ನವನ್ನು ಪರಿಶೀಲಿಸಿ, ಅವನು ಬಹುಮಾನ್ಯನಾದ ತಪಸ್ವಿಯಾಗಿ, ದೀಕ್ಷಾದಾತನಾದ ಜಗದ್ಗುರುವಾಗುತ್ತಾನೆ ಎಂದು ನುಡಿದರು. ತಂದೆತಾಯಿಗಳು “ಶ್ರೀಗುರುವಿನ ವರಪ್ರಸಾದದಿಂದ ಈ ಫಲ ಲಭ್ಯವಾಯಿತು. ನಮ್ಮ ಪಿತೃಗಳು ಉದ್ಧಾರವಾದರು” ಎಂದು ಸಂತಸಗೊಂಡರು.

ಬಾಲಕನ ಪಾದಗಳಲ್ಲಿ ಶ್ರೀ ಚಿಹ್ನೆಗಳಿದ್ದುದರಿಂದ ಹನ್ನೆರಡನೆಯ ದಿನ ನಾಮಕರಣ ಮಾಡಿ ’ಶ್ರೀಪಾದ’ನೆಂದು ಹೆಸರಿಟ್ಟರು. ಆ ಬಾಲಕ ಭಕ್ತೋದ್ಧಾರನಾದ ತ್ರಿಮೂರ್ತಿಯೇ! ಅವನು ವಿದ್ಯೆಗಳಲ್ಲಿ, ಸುಗುಣಗಳಲ್ಲಿ, ಬುದ್ಧಿಯಲ್ಲಿ ಸಮಸಮನಾಗಿ ಬೆಳೆಯುತ್ತಿದ್ದನು. ಎಂಟನೆಯ ವರ್ಷವಾಗುತ್ತಲೂ ತಂದೆ ಅವನಿಗೆ ಉಪನಯನ ಮಾಡಿದನು. ಬ್ರಹ್ಮಚರ್ಯ ವಿಧಾನದಂತೆ ಯಥಾವಿದಿಯಾಗಿ, ವಟುವಾದ ಆ ಬಾಲಕ, ಸಾಂಗೋಪಾಂಗವಾಗಿ, ವೇದಗಳನ್ನೂ, ಸರ್ವಶಾಸ್ತ್ರಗಳನ್ನೂ, ಸ್ವೀಕರಿಸಿದನು. ಆ ವಟುವಿಗಿದ್ದ ಗ್ರಹಣ ಶಕ್ತಿಯನ್ನು ಕಂಡು ಸೇರಿದ್ದವರೆಲ್ಲರೂ ಆಶ್ಚರ್ಯಗೊಂಡು ಅವನು ಸಾಕ್ಷಾತ್ ಪರಮೇಶ್ವರನೇ ಎಂದು ನುಡಿದರು. ಆಚಾರ ವ್ಯವಹಾರಗಳು, ಯತಾರ್ಥವಾಗಿ ಮಾಡಬೇಕಾದ ಪ್ರಾಯಶ್ಚಿತ್ತಗಳು, ವೇದಾಂತ ಭಾಷ್ಯಾರ್ಥ, ವೇದಾರ್ಥಗಳನ್ನು ಶ್ರೀಗುರುವು ಭ್ರಮೆ ಪ್ರಮಾದಗಳಿಲ್ಲದಂತೆ ಹೇಳುತ್ತಿದ್ದನು. ಹೀಗೆ ಲೀಲಾ ಮಾನುಷವಿಗ್ರಹನಾಗಿ ಸರ್ವವಿದ್ಯಾಪರಾಯಣನಾದ ಬಾಲಕನಿಗೆ ವಿವಾಹ ವಯಸ್ಸು ಬಂತು. ಅವನಿಗೆ ವಿವಾಹ ಮಾಡಬೇಕೆಂದು ಅವನ ಮಾತಾಪಿತರು ಯೋಚಿಸಿದರು. ಅವರನ್ನು ವಾರಿಸುತ್ತಾ, ಶ್ರೀಪಾದನು “ಮಾನುಷ ಸ್ತ್ರೀಯ ಉದ್ವಾಹನೆಗೆ ನನ್ನ ಮನಸ್ಸು ಒಪ್ಪಿಕೊಳ್ಳುತ್ತಿಲ್ಲ. ವೈರಾಗ್ಯವೇ ನನ್ನ ಹೆಂಡತಿ. ಆಕೆಯೊಡನೆ ನಾನು ವಿವಾಹವಾಗಬೇಕೆಂದು ನಿಶ್ಚಯಿಸಿಕೊಂಡಿದ್ದೇನೆ. ಬೇರೆ ಯಾವ ಸ್ತ್ರೀಯೂ ನನಗೆ ಸರಿಹೋಗುವುದಿಲ್ಲ. ಸೌಂದರ್ಯವತಿಯಾದ ಯೋಗಶ್ರೀಯನ್ನು ನಾನು ವರಿಸಬೇಕು. ಆಕೆಯನ್ನು ಬಿಟ್ಟು ಮಿಕ್ಕ ಸ್ತ್ರೀಯರೆಲ್ಲರೂ ನನಗೆ ಮಾತೃಸಮಾನರು. ನಾನು ತಾಪಸಿ. ಬ್ರಹ್ಮಚಾರಿ. ಪ್ರವೃತ್ತಿಮುಖಕ್ಕೆ ವಿಮುಖನು. ಯೋಗಶ್ರೀಯನ್ನಲ್ಲದೆ ನಾನು ಇನ್ನಾರನ್ನೂ ಮನಸ್ಸಿನಲ್ಲೂ ಆಸೆಪಡುವುದಿಲ್ಲ. ನಾನು ಶ್ರೀವಲ್ಲಭನು. ಶ್ರೀಪಾದನು. ತತ್ತ್ವವೇತ್ತನಾಗಿ ಕೃತಾರ್ಥನಾದೆ. ನಿವೃತ್ತಿ ಮಾರ್ಗದಲ್ಲೇ ನಡೆಯತಕ್ಕವನು.” ಎಂದು ಜ್ಞಾನೋಪದೇಶ ಮಾಡಿದನು.

ಅತ್ರಿಪುತ್ರನಾದ ದತ್ತಾತ್ತ್ರೇಯನ ಮಾತುಗಳನ್ನು ಸ್ಮರಿಸಿಕೊಂಡು, ಶ್ರೀಪಾದನ ಹೃದಯವನ್ನು ಅರಿತು, ಶ್ರೀಪಾದನ ಮಾತುಗಳ ಉಲ್ಲಂಘನೆ ಮಾಡಿದರೆ ಮಹಾ ವಿಪತ್ತು ಉಂಟಾಗಬಹುದೆಂದು ಭಾವಿಸಿದ ಆ ತಂದೆತಾಯಿಗಳು, ತಮ್ಮ ದುಃಖವನ್ನು ಶ್ರೀಪಾದನಲ್ಲಿ ಬಿನ್ನವಿಸಿಕೊಂಡರು. “ನಿನ್ನ ಮನಸ್ಸಿಗೆ ಅದೇ ಸಂತೋಷವಾದರೆ ಹಾಗೇ ಆಗಲಿ. ಎಂದು ಸಾದರವಾಗಿ ಹೇಳಿ, “ಈ ಶ್ರೀದತ್ತನು ನಮ್ಮ ಮಗನಲ್ಲ. ಪರಮಪುರುಷನಾದ ಆ ದತ್ತನೇ!” ಎಂದು ನಿಶ್ಚಯಿಸಿಕೊಂಡರು. ನಂತರದಲ್ಲಿ ಅವನ ತಾಯಿ ಮಗನ ಮುಂದೆ ನಿಂತು, “ಕುಮಾರ, ನಮ್ಮ ಆಸೆಯನ್ನು ನಿಷ್ಫಲಮಾಡಬೇಡ. ನೀನೇ ನಮ್ಮ ಪಾಲಕ.” ಎಂದು ಹೇಳುತ್ತಾ, ವ್ಯಾಕುಲಳಾಗಿ ಕಣ್ಣಿರು ಸುರಿಸುತ್ತಾ, ಪುತ್ರ ಸ್ನೇಹದಿಂದ ಕೂಡಿ, ಗಾಳಿಯ ಹೊಡೆತಕ್ಕೆ ಸಿಕ್ಕಿದ ಬಾಳೆಯಗಿಡದಂತೆ ಮೂರ್ಛಿತಳಾಗಿ ಕೆಳಗೆ ಬಿದ್ದಳು. ಹಾಗೆ ಬಿದ್ದ ತಾಯಿಯನ್ನು ಶ್ರೀಪಾದ ಹಿಡಿದೆತ್ತಿ, ಸಮಾಧಾನಪಡಿಸಿ, ಕಣ್ಣಿರೊರೆಸಿ ಹೇಳಿದನು.. “ಅಮ್ಮಾ, ಚಿಂತಿಸಬೇಡ. ನಿನಗಿಷ್ಟವಾದ ವರವನ್ನು ಕೇಳಿಕೋ. ಕೊಡುತ್ತೇನೆ. ಸ್ಥಿರಚಿತ್ತಳಾಗಿ ಸುಖವಾಗಿರು.” ಅವನ ಮಾತನ್ನು ಕೇಳಿದ ಸುಮತಿ, “ತಂದೆ, ನಿನ್ನನ್ನು ನೋಡುತ್ತಾ ನನ್ನ ಸರ್ವದುಃಖಗಳನ್ನು ಮರೆತಿದ್ದೆ. ವೃದ್ಧಾಪ್ಯದಲ್ಲಿ ದೈನ್ಯವನ್ನು ಪರಿಹರಿಸಿ ನಮ್ಮನ್ನು ರಕ್ಷಿಸುತ್ತೀಯೆ ಎಂದುಕೊಂಡಿದ್ದೆ. ನಾವಿಬ್ಬರೂ ವೃದ್ಧರು. ಇರುವ ಇಬ್ಬರು ಮಕ್ಕಳಲ್ಲಿ ಒಬ್ಬ ಕುರುಡ. ಇನ್ನೊಬ್ಬ ಕುಂಟ. ನೀನು ಸನ್ಯಾಸಿಯಾದರೆ ನಮ್ಮನ್ನು ರಕ್ಷಿಸುವವರು ಯಾರು?” ಎಂದಳು. ಅದನ್ನು ಕೇಳಿದ ಶ್ರೀಪಾದ ತನ್ನ ಇಬ್ಬರು ಅಣ್ಣಂದಿರ ಕಡೆ ತನ್ನ ಅಮೃತದೃಷ್ಟಿಯನ್ನು ಹರಿಸಿದನು. ತಕ್ಷಣವೇ ಅವರಿಬ್ಬರೂ ಸಂಪೂರ್ಣ ಸ್ವಸ್ಥರಾಗಿ, ಕುಂಟು ಕುರುಡುಗಳನ್ನು ಕಳೆದುಕೊಂಡು ಆರೋಗ್ಯವಂತರಾದರು. ಚಿಂತಾಮಣಿಯ ಸ್ಪರ್ಶದಿಂದ ಕಬ್ಬಿಣವು ಬಂಗಾರವಾದಂತೆ, ಆ ಮಹಾತ್ಮನ ದೃಷ್ಟಿ ತಾಕುತ್ತಲೇ ಅವರಿಬ್ಬರೂ ವೇದಶಾಸ್ತ್ರಗಳಲ್ಲಿ ಪ್ರವೀಣರಾಗಿ, ಯೋಗ್ಯವಂತರಾದರು. ಶ್ರೀಪಾದರ ಅನುಗ್ರಹದಿಂದ ಕೃತಾರ್ಥರಾದೆವೆಂದು ಅವನಲ್ಲಿ ಬಿನ್ನವಿಸಿಕೊಂಡರು.

ಆ ಸೋದರರಿಬ್ಬರನ್ನೂ ಆದರದಿಂದ ನೋಡಿ ಶ್ರೀಪಾದರು, “ನನ್ನ ಅನುಗ್ರಹದಿಂದ ಇವರು ಪುತ್ರಪೌತ್ರವಂತರಾಗಿ, ಧನಧಾನ್ಯಗಳಿಂದ ಕೂಡಿ, ವರ್ಧಮಾನರಾಗಿ,. ಜನನಿಜನಕರಿಗೆ ಇಹಪರಸೌಖ್ಯಗಳನ್ನು ಪ್ರಾಪ್ತಿಮಾಡಿಕೊಟ್ಟು, ಕೃತಾರ್ಥರಾಗಿ, ಕೈವಲ್ಯವನ್ನು ಪಡೆಯುತ್ತಾರೆ,” ಎಂದು ತಾಯಿಯ ಕಡೆ ನೋಡಿ ಹೇಳಿದರು. ಮತ್ತೆ ತಾಯಿಗೆ, “ಅಮ್ಮಾ, ಈಪುತ್ರರಿಬ್ಬರೊಡನೆ ಕೂಡಿ ಉತ್ತಮ ಸುಖಗಳನ್ನು ಅನುಭವಿಸು. ಇವರಿಬ್ಬರೂ ಶತಾಯುಷಿಗಳಾಗಿ, ಪುತ್ರಪೌತ್ರರಿಂದ ಕೂಡಿರುವುದನ್ನು ನೀನು ನಿನ್ನ ಕಣ್ಣಾರ ನೋಡುತ್ತೀಯೆ. ಚಿಂತಿಸಬೇಡ. ಇವರ ವಂಶದವರಲ್ಲಿ ಸಂಪತ್ತು ಅಚಂಚಲವಾಗಿ, ಶಾಶ್ವತವಾಗಿ ಇರುತ್ತದೆ. ವೇದ ವೇದಾಂಗ ಶಾಸ್ತ್ರ ಪರಿಣತರು ಇವರ ವಂಶದಲ್ಲಿ ಜನಿಸುತ್ತಾರೆ. ಅದರಿಂದ, ಅಮ್ಮಾ, ನೀನು ನನ್ನನ್ನು ಆದರಿಸಿ ನನಗೆ ಅನುಜ್ಞೆ ಕೊಡು. ನನ್ನ ಮಾತನ್ನು ತಿರಸ್ಕರಿಸಬೇಡ. ಸಾಧುಪುರುಷರಿಗೆ ದೀಕ್ಷೆ ಕೊಡಲು ನಾನು ನಿವೃತ್ತಿಮಾರ್ಗದಲ್ಲಿ ಸಂಚರಿಸಬೇಕಾಗಿದೆ.” ಎಂದು ಹೇಳಿ, ಶ್ರೀಪಾದರು ತಾಯಿಗೆ ನಮಸ್ಕರಿಸಿದರು.

ತಾಯಿಯ ಅನುಮತಿ ಪಡೆದು ತಕ್ಷಣವೇ ಭಕ್ತಿಭಾವಗಳಿಂದಕೂಡಿದ ಶ್ರೀಪಾದರು ಅದೃಶ್ಯರಾಗಿ ಕಾಶಿನಗರವನ್ನು ಸೇರಿದರು. ಆ ಲೀಲಾ ವಿಹಾರಿಯಾದ ಭಗವಂತನು ಅಲ್ಲಿಂದ ಬದರಿಕಾಶ್ರಮವನ್ನು ಸೇರಿ, ಅಲ್ಲಿ ನಾರಾಯಣ ಅಂಶನಾದ ನರನನ್ನು ದರ್ಶಿಸಿದರು. ಕಾರಣಜನ್ಮನಾದ ಶ್ರೀಗುರುವು, ಸ್ವಭಕ್ತರಿಗೆ ದೀಕ್ಷೆಕೊಡಲು, ಅಲ್ಲಿಂದ ಹೊರಟು, ಪರ್ಯಟನ ಮಾಡುತ್ತಾ ಗೋಕರ್ಣ ಕ್ಷೇತ್ರವನ್ನು ಸೇರಿದರು.

||ಇತಿ ಶ್ರೀಗುರುಚರಿತ್ರ ಪರಮಕಥಾಕಲ್ಪತರೌ ಶ್ರೀ ನೃಸಿಂಹಸರಸ್ವತ್ಯುಪಾಖ್ಯಾನೇ ಜ್ಞಾನಕಾಂಡೇ ಸಿದ್ಧನಾಮಧಾರಕ ಸಂವಾದೇ ಪೀಠಾಪುರೇ ಶ್ರೀಪಾದಾವತಾರೋ ನಾಮ ಪಂಚಮೋಧ್ಯಾಯಃ ಸಂಪೂರ್ಣಂ||
[31/12/2015 5:11 AM] S. Bhargav: ||ಶ್ರೀ ಗುರು ಚರಿತ್ರೆ – ಆರನೆಯ ಅಧ್ಯಾಯ||

“ಅಜ್ಞಾನ ತಿಮಿರವನ್ನು ಹೊಡೆದೋಡಿಸುವ ಗುರುಸತ್ತಮ, ಸಿದ್ಧಪುರುಷ, ಆರಂಭದಿಂದ ಗುರುಪೀಠವನ್ನು ಕುರಿತು ಹೇಳಿದೆ. ಈ ಪೀಠದಲ್ಲಿ ಅವತರಿಸಿದ ತ್ರಿಮೂರ್ತಿಸ್ವರೂಪನು ಭೂಮಿಯೆಲ್ಲವನ್ನೂ ಏಕೆ ಪರ್ಯಟನೆ ಮಾಡಿದನು? ವಿಶೇಷವಾಗಿ ಗೋಕರ್ಣಕ್ಷೇತ್ರವನ್ನು ಸೇರಿದ್ದೇಕೆ? ಪವಿತ್ರವಾದ ಅನೇಕ ತೀರ್ಥಪ್ರದೇಶಗಳಿದ್ದರೂ, ಅವೆಲ್ಲವನ್ನೂ ಬಿಟ್ಟು ಶ್ರೀಪಾದ ಶ್ರೀವಲ್ಲಭರು ಗೋಕರ್ಣ ಕ್ಷೇತ್ರವನ್ನೇಕೆ ಆರಿಸಿಕೊಂಡರು? ಎಂಬುದನ್ನು ವಿವರವಾಗಿ ತಿಳಿಸಿ.” ಎಂದು ನಾಮಧಾರಕನು ವಿನಯವಾಗಿ ಕೇಳಿಕೊಂಡನು.

ಅದಕ್ಕೆ ಸಿದ್ಧರು ಹೇಳಿದರು. “ನಾಮಧಾರಕ, ಆನಂದಕರವಾದ ಶ್ರೀ ಗುರುಚರಿತ್ರೆಯನ್ನು ಕೇಳು. ಅದನ್ನು ಹೇಳುವುದರಿಂದ ನನಗೂ ಸಹ ಆ ಸ್ವಾಮಿಯ ಲೀಲಾಸ್ಫೂರ್ತಿ ಲಾಭವು ದೊರೆಯುತ್ತದೆ. ಆ ಪ್ರಭುವು ತಾನೇ ತ್ರಿಮೂರ್ತಿಸ್ವರೂಪನಾದರೂ, ತೀರ್ಥಕ್ಷೇತ್ರಗಳ ಮಾಹಾತ್ಮ್ಯೆಯನ್ನು ಪ್ರಕಟಿಸುವುದಕ್ಕೆ ತೀರ್ಥಸ್ಥಳಗಳ ಪರ್ಯಟನೆ ಮಾಡಿದನು. ಭಕ್ತೋದ್ಧರಣಕ್ಕಾಗಿ, ವಿಶೇಷವಾಗಿ ಶಂಕರರೂಪದಲ್ಲಿ ಭಕ್ತರಿಗೆ ಉಪದೇಶನೀಡುತ್ತಾ, ಯಾತ್ರೆಮಾಡುತ್ತಾ ಗೋಕರ್ಣ ಕ್ಷೇತ್ರವನ್ನು ಸೇರಿದನು. ಗೋಕರ್ಣ ಮಹಿಮೆ ಲೋಕದಲ್ಲಿ ಸಾಟಿಯಿಲ್ಲದ್ದು. ಅದನ್ನು ಹೇಳುತ್ತೇನೆ. ಸಾವಧಾನಚಿತ್ತನಾಗಿ ಕೇಳು.

ಗೋಕರ್ಣಕ್ಷೇತ್ರದಲ್ಲಿ ಬಹಳಜನ ಭಕ್ತರು ವರಗಳನ್ನು ಹೊಂದಿದವರಾದರು. ಅಲ್ಲಿ ಸದಾಶಿವನೇ ಸಾಕ್ಷಾತ್ತಾಗಿ ನೆಲಸಿದ್ದಾನಾಗಿ ಅದು ಬಹಳ ಅಪೂರ್ವವಾದ ಸ್ಥಳ. ಮಹಾಬಲೇಶ್ವರ ಲಿಂಗವು ಸ್ವಯಂಭುವಾದ ಶಿವನೇ! ಗಣಪತಿಯು ಶ್ರೀ ಮಹಾವಿಷ್ಣುವಿನ ಆಜ್ಞೆಯಂತೆ ಅದನ್ನು ಪ್ರತಿಷ್ಠಾಪಿಸಿದನು. ಆ ಮಹಾಬಲೇಶ್ವರನು ಸರ್ವಕಾಮದನು. ಪುಲಸ್ತ್ಯ ಬ್ರಹ್ಮನ ಮಗಳಾದ ಕೈಕಸಿ ಭಕ್ತಪರಾಯಣೆಯಾಗಿ ಸದಾ ಶಿವಪೂಜಾ ತತ್ಪರಳಾಗಿದ್ದಳು. ಶಿವಲಿಂಗಾರ್ಚನೆ ಮಾಡದೆ ಆಕೆ ಅನ್ನವನ್ನು ಮುಟ್ಟುತ್ತಿರಲಿಲ್ಲ. ಒಂದು ದಿನ ಅಕೆಗೆ ಶಿವಾರ್ಚನೆಗೆ ಶಿವಲಿಂಗವು ಸಿಕ್ಕಲಿಲ್ಲ. ತನ್ನ ದಿನನಿತ್ಯದ ವ್ರತ ಭಂಗವಾಗಬಾರದೆಂದು ಆಕೆ ಮೃತ್ತಿಕಾ ಲಿಂಗವನ್ನು ಮಾಡಿ ಏಕಾಗ್ರಮನಸ್ಕಳಾಗಿ, ಪರಮಭಕ್ತಿಯಿಂದ ಆ ಲಿಂಗವನ್ನು ಆರಾಧಿಸುತ್ತಿದ್ದಳು. ಆ ಸಮಯದಲ್ಲಿ ಆಕೆಯ ಮಗ ಲೋಕಕಂಟಕನಾದ ರಾವಣನು ತಾಯಿಯನ್ನು ಕಾಣಲು ಬಂದನು. ಅವನು ಅತಿಕೄರನಾದ ದಶಾನನನು. ಶಿವಲಿಂಗಾಪೂಜಾತತ್ಪರಳಾದ ತಾಯಿಯನ್ನು ಕಂಡು, ಪ್ರಣಾಮಮಾಡಿ, “ಅಮ್ಮಾ ನೀನು ಮಾಡುತ್ತಿರುವುದೇನು? ಸರ್ವಸಿದ್ಧಿಗಳು ನನ್ನ ಕೈವಶವಾಗಿರುವಾಗ ಈ ಮೃತ್ತಿಕಾಲಿಂಗವನ್ನು ಪೂಜಿಸುತ್ತಿರುವುದು ನನ್ನ ದೌರ್ಭಾಗ್ಯ. ಆದರೂ ಈ ಪೂಜೆಯಿಂದ ಬರುವ ಫಲವಾದರೂ ಏನು?” ಎಂದು ಕೇಳಿದನು. ಅದಕ್ಕೆ ಆಕೆ, “ತಂದೆ, ಈ ಪೂಜೆಯಿಂದ ಕೈಲಾಸಪದವಿ ದೊರೆಯುತ್ತದೆ.” ಎಂದಳು. ಅದಕ್ಕೆ ರಾವಣನು ” ನಿನ್ನ ಪ್ರಯಾಸವೆಲ್ಲ ವ್ಯರ್ಥ. ಕ್ಷಣ ಮಾತ್ರದಲ್ಲಿ ನಿನಗೆ ಕೈಲಾಸವನ್ನೇ ತಂದುಕೊಡುತ್ತೇನೆ. ಲಂಕಾಪುರಿಯಲ್ಲೇ ಶಿವ-ಪಾರ್ವತಿ ಸಹಿತವಾದ ಕೈಲಾಸವನ್ನು ಪ್ರತಿಷ್ಠಾಪಿಸುತ್ತೇನೆ. ನನ್ನ ಮಾತು ಸುಳ್ಳಲ್ಲ. ಶೀಘ್ರದಲ್ಲೇ ನೀನು ದಿನವೂ ಇಲ್ಲೇ ಶಿವನ ಪೂಜೆ ಮಾಡಿಕೊಳ್ಳಬಹುದು. ಈ ಮೃತ್ತಿಕಾಲಿಂಗವೇಕೆ?” ಎಂದು ಹೇಳಿ ಅಲ್ಲಿಂದ ಹೊರಟನು.

ಅತಿವೇಗದಿಂದ ರಾವಣನು ಕೈಲಾಸವನ್ನು ಸೇರಿ ತನ್ನ ಇಪ್ಪತ್ತು ಕೈಗಳಿಂದ ಆ ಧವಳಗಿರಿಯನ್ನು ಎತ್ತಲುಪಕ್ರಮಿಸಿದನು. ಆ ಮಹಾಬಲನು ಕೈಲಾಸವನ್ನು ಸಡಲಿಸಿ, ಗಿರಿಯ ಕೆಳಗೆ ತನ್ನ ಹತ್ತು ತಲೆಗಳನ್ನೂ ಇಟ್ಟು, ಕೈಗಳನ್ನು ತೊಡೆಯಮೇಲೆ ಊರಿ, ಗಿರಿಯನ್ನು ಎತ್ತುತ್ತಿರಲು, ಅವನ ಆ ಪ್ರಯತ್ನದಿಂದ ಕ್ಷಣಕಾಲದಲ್ಲಿ ಸಪ್ತ ಪಾತಾಳಗಳೂ ಕಂಪಿಸಿಹೋದವು. ಶೇಷನು ಚಕಿತನಾದನು. ಅಕಸ್ಮಾತ್ತಾಗಿ ಉಂಟಾದ ಚಲನದಿಂದ ಆದಿಕೂರ್ಮಕ್ಕೆ ಸಂದೇಹವುಂಟಾಯಿತು. ದೇವಗಣಗಳೆಲ್ಲಾ ಭಯಭೀತರಾದರು. ಅಮರಾವತಿ ಅಲ್ಲಾಡಿಹೋಯಿತು. ಸಪ್ತ ಊರ್ಧ್ವಲೋಕಗಳೂ, ಗಿರಿಕಾನನಗಳಿಂದ ಕೂಡಿದ ಭೂಮಂಡಲವೂ, ಮೇರು ಪರ್ವತಗಳೂ, ಪ್ರಳಯ ಬಂದಿತೇನೋ ಎಂದು ಭೀತಗೊಂಡವು. ಕೈಲಾಸದಲ್ಲಿ ಶಿವಗಣಗಳು ಭಯಪೀಡಿತರಾದರು. ಭಯಕಂಪಿತಳಾದ ಪಾರ್ವತಿ ಶಂಕರನಿಗೆ ಶರಣಾಗಿ, ಅವನನ್ನು ಆಲಂಗಿಸಿ, “ಕೈಲಾಸವು ಬಿದ್ದುಹೋಗುತ್ತಿದೆಯೇನೋ ಎನ್ನಿಸುತ್ತಿದೆ. ಆಕಸ್ಮಿಕವಾಗಿ ಸಭಾಗೃಹಗಳೆಲ್ಲವೂ ಕಂಪಿಸುತ್ತಿರುವುದಕ್ಕೆ ಕಾರಣವೇನು? ಸರ್ವವೂ ಅಲ್ಲಾಡಿಹೋಗುತ್ತಿರುವಾಗ ನೀವು ಮಾತ್ರ ನಿಶ್ಚಲರಾಗಿ ಹೇಗೆ ಕೂತಿದ್ದೀರಿ? ಇದಕ್ಕೆ ಏನೂ ಪ್ರತಿಕ್ರಿಯೆ ಮಾಡುವುದಿಲ್ಲವೇ?” ಎಂದು ಅವನ ಪಾದಗಳನ್ನು ಹಿಡಿದಳು.

ಶಂಕರನು ಆಕೆಯನ್ನು ನೋಡಿ, “ಗಿರಿಜಾ, ನನ್ನ ಭಕ್ತ ರಾವಣನ ಕ್ರೀಡೆಯಿದು. ಚಿಂತಿಸಬೇಕಾದ ಅವಶ್ಯಕತೆಯಿಲ್ಲ.” ಎಂದು ಹೇಳಲು, ಪಾರ್ವತಿ, “ಹೇ ಪ್ರಭು, ಸುರಗಣಗಳನ್ನು ರಕ್ಷಿಸಿ.” ಎಂದು ಮೊರೆಯಿಟ್ಟಳು. ಶಂಕರನು, ತನ್ನ ಎಡಕೈಯಿಂದ, ರಾವಣನೆತ್ತುತ್ತಿದ್ದ ಕೈಲಾಸವನ್ನು ಒತ್ತಿಹಿಡಿದನು. ಕೈಲಾಸದ ಕೆಳಗಿದ್ದ ರಾವಣನು ಆರ್ತನಾಗಿ, “ಶರಣಾಗತ ರಕ್ಷಕ, ಪಿನಾಕಪಾಣಿ, ಶರಣು ಬಂದಿದ್ದೇನೆ. ಶರಣಾಗತನಾದವನ ಸಾವು ನಿನಗೆ ಸಮ್ಮತವೇ?” ಎಂದು ಸ್ತುತಿಪೂರ್ವಕವಾಗಿ ಬೇಡಿಕೊಳ್ಳಲು, ಭಕ್ತವತ್ಸಲನಾದ ಶಂಕರನು, ಅಧೋಗತನಾಗಿದ್ದ ಆ ರಾವಣನನ್ನು ದಯಾಹೃದಯನಾಗಿ ಬಿಡುಗಡೆ ಮಾಡಿದನು. ಹಾಗೆ ಬಿಡುಗಡೆ ಹೊಂದಿದ ರಾವಣ, ಸುಸ್ವರದಿಂದ, ರಾಗಯುಕ್ತವಾಗಿ, ಶಂಕರನನ್ನು ಕುರಿತು ಗಾನಮಾಡಿದನು. ಅವನ ಭಕ್ತಿಗಾನಕ್ಕೆ ಪ್ರಸನ್ನನಾದ ಶಿವನು, ತನ್ನ ನಿಜರೂಪದಿಂದ ಆ ರಾಕ್ಷಸನಿಗೆ ಪ್ರತ್ಯಕ್ಷನಾಗಿ, “ನಿನ್ನ ಗಾನಕ್ಕೆ ನಾನು ಪ್ರಸನ್ನನಾಗಿದ್ದೇನೆ. ನಿನಗೆ ಬೇಕಾದ ವರವನ್ನು ಕೇಳಿಕೊ. ಕೊಡುತ್ತೇನೆ.” ಎಂದನು. ಅದಕ್ಕೆ ರಾವಣನು, “ಸ್ವಾಮಿ, ಲಕ್ಷ್ಮಿ ನನ್ನ ಮನೆಯಲ್ಲಿ ದಾಸಿಯಾಗಿರುವಾಗ ನಾನು ನಿನ್ನನ್ನು ಪ್ರಾರ್ಥಿಸಿಕೊಳ್ಳುವುದಾದರೂ ಏನಿದೆ? ಅಷ್ಟಸಿದ್ಧಿಗಳು ನನ್ನ ಅಪ್ಪಣೆಗಾಗಿ ಕಾಯುತ್ತಾ ನಿಂತಿದ್ದಾರೆ. ನವ ನಿಧಿಗಳು ನನ್ನ ಮನೆಯಲ್ಲಿ ಬಿದ್ದಿವೆ. ಹೇ ಸದಾಶಿವ, ಚತುರಾನನು ನನ್ನ ವಶವರ್ತಿಯಾಗಿದ್ದಾನೆ. ಮೂವ್ವತ್ತು ಕೋಟಿ ಬೃಂದಾರಕರೂ ನನ್ನ ಸೇವಕರೇ ಅಲ್ಲವೆ? ಆಶ್ರಯವನ್ನೇ ನಾಶಮಾಡುವ ವಹ್ನಿ ನನ್ನಲ್ಲಿ ವಸ್ತ್ರಕ್ಷಾಳನ ಮಾಡಲು ನಿಯುಕ್ತನಾಗಿದ್ದಾನೆ. ಯಮರಾಜನೂ ನನ್ನ ಮಾತಿನಂತೆಯೇ ತನ್ನ ಕಾರ್ಯವನ್ನು ನಿರ್ವಹಿಸುತ್ತಾನೆ. ನನ್ನ ಸೋದರ ಕುಂಭಕರ್ಣ. ನನ್ನ ಕುಮಾರ ಇಂದ್ರನನ್ನೇ ಗೆದ್ದವನು. ನನ್ನ ನಿವಾಸ ಸುರರಿಗೆ ದುರ್ಗಮವಾದ ಅಂಬುಧಿಯಲ್ಲಿದೆ. ಕಾಮಧೇನು ನನ್ನ ಮನೆಯಲ್ಲಿ ನೆಲೆಗೊಂಡಿದೆ. ಸಹಸ್ರ ಕೋಟಿ ವರ್ಷಗಳ ಆಯುಸ್ಸುಳ್ಳ ನನ್ನಂತಹವನು ಇನ್ನಾರಿದ್ದಾರೆ? ಈಶ್ವರ ನಿನಗೆ ಇದೆಲ್ಲವೂ ತಿಳಿದೇ ಇದೆ. ಕೊಡುವುದಾದರೆ ನಿನ್ನ ಕೈಲಾಸವನ್ನು ಕೊಡು. ನನ್ನ ತಾಯಿ ನಿತ್ಯವೂ ನಿನ್ನನ್ನು ಪೂಜಿಸುವ ವ್ರತವನ್ನು ಮಾಡುತ್ತಿದ್ದಾಳೆ. ಹೇ, ದಾತಾ, ನನ್ನ ಮನೋರಥವನ್ನು ನೆರವೇರಿಸು.” ಎಂದನು.

ಅದಕ್ಕೆ ಶಿವನು, “ಅಯ್ಯಾ, ಕೈಲಾಸದಿಂದ ನಿನಗೆ ಅಗಬೇಕಾದ್ದೇನು? ದುರ್ಲಭವಾದ ನನ್ನ ಆತ್ಮಲಿಂಗವನ್ನೇ ಕೊಡುತ್ತೇನೆ. ನನ್ನ ಪ್ರಾಣಲಿಂಗಾರ್ಚನೆಯಿಂದ ನಿನ್ನ ಯಾವುದೇ ಮನೋವಾಂಛನೆಗಳೂ ತಕ್ಷಣವೇ ಪೂರಯಿಸಲ್ಪಡುತ್ತವೆ. ರುದ್ರಾಭಿಷೇಕಪೂರ್ವಕವಾಗಿ ತ್ರಿಸಂಧ್ಯೆಗಳಲ್ಲೂ ನನ್ನ ಪೂಜೆಮಾಡಬೇಕು. ಷಡಕ್ಷರ ಮಂತ್ರದಿಂದ ಅಷ್ಟೋತ್ತರ ಜಪ ಮಾಡಬೇಕು. ಹೀಗೆ ಮೂರು ವರ್ಷಗಳು ಪೂಜೆಮಾಡಿದರೆ ಸರ್ವಕಾಮಗಳೂ ನೆರವೇರಿ, ನನ್ನ ಸ್ವರೂಪವನ್ನೇ ಪಡೆಯುತ್ತೀಯೆ. ಈ ಪ್ರಾಣಲಿಂಗಸನ್ನಿಧಿಯಲ್ಲಿರುವವನಿಗೆ ಮೃತ್ಯುಭಯವಿರುವುದಿಲ್ಲ. ಆತ್ಮಲಿಂಗ ದರ್ಶನದಿಂದಲೇ ಸರ್ವ ದೋಷಗಳೂ ನಿವಾರಣೆಯಾಗುವುವು. ಇದನ್ನು ತೆಗೆದುಕೋ. ಆದರೆ ಲಂಕೆಯನ್ನು ಸೇರುವವರೆಗೂ ಇದನ್ನು ಭೂಮಿಯಮೇಲೆ ಇಡಬಾರದು. ಮೂರು ವರ್ಷಗಳು ನಾನು ಹೇಳಿದ ರೀತಿಯಲ್ಲಿ ತಪ್ಪದೇ ಪೂಜಿಸುವುದರಿಂದ ನೀನೇ ಈಶ್ವರನಾಗುತ್ತೀಯೆ. ನಿನ್ನ ಪುರವೇ ಕೈಲಾಸವಾಗುತ್ತದೆ.” ಎಂದು ಹೇಳಿ, ಅ ಪರಮಶಿವನು ತನ್ನ ಆತ್ಮಲಿಂಗವನ್ನು ಕೊಟ್ಟು ಅನುಗ್ರಹಿಸಿದನು. ರಾವಣನು ಆ ಲಿಂಗವನ್ನು ಪಡೆದು, ಶಂಕರನಿಗೆ ಸಾಷ್ಟಾಂಗ ಪ್ರಣಾಮವನ್ನು ಮಾಡಿ, ಲಂಕಾಗಮನೋದ್ಯುಕ್ತನಾದನು.

ಈ ಸಂಗತಿಯನ್ನೆಲ್ಲಾ ತಿಳಿದ ನಾರದ ಮಹರ್ಷಿ ಇದೆಲ್ಲವೂ ಅಸಮಂಜಸವೆಂದರಿತು, ತಕ್ಷಣವೇ ದೇವೇಂದ್ರನ ಬಳಿಗೆ ಹೋಗಿ, ದೇವೇಂದ್ರನನ್ನು ಕಂಡು, “ದೇವರಾಜ, ಇದೇನು ಸುಮ್ಮನೇ ಕುಳಿತಿದ್ದೀಯೆ? ನಿನ್ನ ಅಮರತ್ವ ಸಂಪದಗಳನ್ನೆಲ್ಲಾ ರಾವಣನು ಅಪಹರಿಸಿಕೊಂಡು ಹೋದನು. ಪರಮೇಶ್ವರನ ಪ್ರಾಣಲಿಂಗವನ್ನು ಪಡೆದು, ಲಂಕೇಶ್ವರನು ಚಿರಾಯುವಾಗುವುದೇ ಅಲ್ಲದೆ, ಪರಮಶಿವನಿಗೆ ಸಮಾನನಾಗುತ್ತಾನೆ. ಮೂರುವರ್ಷಗಳ ಆತ್ಮಲಿಂಗಪೂಜೆಯಿಂದ ನನ್ನ ಸಮಾನನೇ ಆಗಬಲ್ಲೆ ಎಂದು ಶಂಕರನು ರಾವಣನನ್ನು ಅನುಗ್ರಹಿಸಿದನು. ಅಷ್ಟೇಅಲ್ಲ. ಲಂಕೆಯೇ ಕೈಲಾಸವಾಗುತ್ತದೆ ಎಂದೂ ಹೇಳಿದ್ದಾನೆ. ರಾವಣನಿಗೆ ಮೃತ್ಯುಭಯವಿರುವುದಿಲ್ಲವಂತೆ! ಹೀಗೆ ಶಂಭುವರಲಬ್ಧನಾಗಿ ರಾವಣನು ಲಂಕೆಗೆ ಹೊರಟಿದ್ದಾನೆ. ಹೀಗಾದರೆ ಲಂಕೆಯಲ್ಲಿ ನೀವೆಲ್ಲರೂ ರಾವಣನ ಸೇವೆಯಲ್ಲಿ ಸದಾ ನಿರತರಾಗಿರಬೇಕಾದದ್ದೇ! ರಂಭೆ ಊರ್ವಶಿಯೇ ಮುಂತಾದ ಅಪ್ಸರಸೆಯರೂ ಅವನ ಸೇವೆಮಾಡಿಕೊಂಡಿರಬೇಕಾದದ್ದೇ!” ಎಂದು ಹೇಳಿದನು.

ನಾರದನ ಮಾತುಗಳನು ಕೇಳಿ ಇಂದ್ರನೊಡನೆ ದೇವತೆಗಳೂ ನಡುಗಿಹೋದರು. ಇಂದ್ರನು ನಾರದನಿಗೆ ನಮಸ್ಕರಿಸಿ “ಈಗ ಏನು ಮಾಡಬೇಕು?” ಎಂದು ಪ್ರಶ್ನಿಸಿದನು. ಅದಕ್ಕೆ ನಾರದ, “ಬ್ರಹ್ಮನಿಗೆ ಶರಣಾಗು. ಆತನು ಏನಾದರೂ ಉಪಾಯವನ್ನು ಸೂಚಿಸುತ್ತಾನೆ. ಆತನೇ ಸೃಷ್ಟಿಕರ್ತನಲ್ಲವೇ?” ಎಂದನು. ನಾರದನ ಸಲಹೆಯಂತೆ ನಾರದನೊಡನೆ, ದೇವತೆಗಳನ್ನು ಹಿಂದಿಟ್ಟುಕೊಂಡು, ತಕ್ಷಣವೇ ಬ್ರಹ್ಮನ ಬಳಿಗೆ ಹೋಗಿ, ನಾರದನು ಹೇಳಿದ ವಿಷಯವನ್ನೆಲ್ಲಾ, ಬಿನ್ನವಿಸಿಕೊಂಡನು. ಬ್ರಹ್ಮ, “ತಕ್ಷಣವೇ ನೀನು ವೈಕುಂಠಕ್ಕೆ ಹೋಗಿ ದೈತ್ಯಾರಿಯನ್ನು ಕಾಣು. ಅವನು ಏನಾದರೂ ಉಪಾಯವನ್ನು ಮಾಡಿಯೇ ಮಾಡುತ್ತಾನೆ. ತಡಮಾಡಬೇಡ.” ಎಂದು ಹೇಳಿ, ತಾನೇ ದೇವೇಂದ್ರನ ಜೊತೆಯಲ್ಲಿ ಹೊರಟು, ಮಹಾವಿಷ್ಣುವನ್ನು ಸೇರಿ, ತಮಗೆ ಬಂದಿರುವ ಆಪತ್ತನ್ನು ವಿವರಿಸಿ, “ಹೇನಾರಾಯಣ, ತಕ್ಷಣವೇ ಇದಕ್ಕೇನಾದರೂ ಪ್ರತೀಕಾರ ಮಾಡಬೇಕು. ಇಲ್ಲದಿದ್ದರೆ ಆ ಮಹಾ ಸಂಕಟ ನಮ್ಮೆಲ್ಲರಿಗೂ ತಟ್ಟುತ್ತದೆ. ಮುವ್ವತ್ತುಮೂರು ಕೋಟಿ ದೇವತೆಗಳೂ ರಾವಣನ ಬಂಧನದಲ್ಲಿರಬೇಕಾಗುತ್ತದೆ. ಅವರನ್ನು ಬಿಡಿಸಲು ನೀನು ಭೂಮಿಯಲ್ಲಿ ಮತ್ತೆ ಅವತರಿಸಬೇಕಾಗುತ್ತದೆ. ಆ ದುಷ್ಟ, ಈಶ್ವರನ ಪ್ರಾಣಲಿಂಗವನ್ನು ತೆಗೆದುಕೊಂಡುಹೋಗಿದ್ದಾನೆ. ಪ್ರಾಣಲಿಂಗಾರ್ಚನೆಯಿಂದ ಅವನೇ ಈಶ್ವರನಾಗುತ್ತಾನೆ! ಹೇ ಶ್ರೀಹರಿ, ತಕ್ಷಣವೆ ಇದಕ್ಕೇನಾದರೂ ಪ್ರತಿಚರ್ಯೆ ನಡೆಸದಿದ್ದಲ್ಲಿ ಆ ರಾಕ್ಷಸನ ಸಂಹಾರ ದುಸ್ತರವಾಗುತ್ತದೆ.” ಎಂದನು.

ಬ್ರಹ್ಮನ ಮಾತುಗಳನ್ನು ಕೇಳಿ ವಿಷ್ಣುವು ಕ್ರೋಧಗೊಂಡು, ತಕ್ಷಣವೇ ಕೈಲಾಸಕ್ಕೆ ಹೋಗಿ, ಶಂಕರನನ್ನು ಕಂಡು, “ಆ ದುರುಳನಿಗೆ ನಿನ್ನ ಪ್ರಾಣಲಿಂಗವನ್ನೇಕೆ ಕೊಟ್ಟೆ? ಅವನು ಬಲವಂತನಾಗಿ ದೇವತೆಗಳನ್ನೆಲ್ಲ ಬಂಧನದಲ್ಲಿಟ್ಟು ತನ್ನ ಸೇವಕರನ್ನಾಗಿ ಮಾಡಿಕೊಳ್ಳುತ್ತಾನೆ. ಅಲ್ಲಿಂದ ದೇವತೆಗಳಿಗೆ ಮುಕ್ತಿಯೆಲ್ಲಿಯದು? ಹಾವಿಗೆ ಹಾಲೆರೆದಂತೆ ಆ ದುರಾಚಾರಿಗೆ ನೀನು ವರವನ್ನು ಕೊಟ್ಟೆ. ಅವನು ಅಸುರತ್ವದಿಂದ ಅಮರತ್ವ ಪಡೆದು ದೇವತೆಗಳ ಸ್ವರ್ಗಭಾಗ್ಯವನ್ನು ಕಸಿದುಕೊಳ್ಳುತ್ತಾನೆ.” ಎಂದನು. ಅದಕ್ಕೆ ಶಂಕರನು, “ಅಯ್ಯಾ, ವಿಷ್ಣು, ಅವನ ಭಕ್ತಿಗೆ ಮೋಹಗೊಂಡು ಸಂತುಷ್ಟನಾಗಿ ಅವನಿಗೆ ಪ್ರಾಣಲಿಂಗವನ್ನು ಕೊಟ್ಟೆ. ಅವನು ತನ್ನ ಶಿರಸ್ಸನ್ನು ಛೇದಿಸಿ, ವೀಣೆಯನ್ನು ಮಾಡಿ, ನನ್ನ ಸ್ತುತಿ ಮಾಡಿದನು. ಆ ಸುಸ್ವರ ಸ್ತೋತ್ರಗಾನವು ಬಹುಹಿತವಾಗಿ, ಸಾಮಗಾನದಂತೆ ಕಿವಿಗೆ ಮಂಜುಲವಾಗಿತ್ತು. ಅವನ ಗಾನದಿಂದ ಮೋಹಾವಿಷ್ಟನಾದ ನಾನು ಅವನು ಪಾರ್ವತಿಯನ್ನು ಕೇಳಿದ್ದರೆ ಅವಳನ್ನೇ ಕೊಟ್ಟುಬಿಡುತ್ತಿದ್ದೆ.” ಎಂದನು. “ಹೇ ಉಮಾಕಾಂತ, ನೀನು ಹೀಗೆ ಇಂತಹ ದುರ್ಲಭವಾದ ವರಗಳನ್ನು ಯೋಚನೆಯಿಲ್ಲದೆ ಕೊಟ್ಟುಬಿಡುತ್ತೀಯೆ. ವರವನ್ನು ಪಡೆದವರು ಅದರಿಂದ ಮತ್ತರಾಗಿ, ಇನ್ನೂ ದುಷ್ಟರಾಗಿ, ದುರ್ದರ್ಷರಾಗಿ ದೇವ ಬ್ರಾಹ್ಮಣರನ್ನು ಪೀಡಿಸುತ್ತಾರೆ. ಅವರನ್ನು ಸಂಹರಿಸಲು ನಾನು ಮತ್ತೆ ಮತ್ತೆ ಅವತರಿಸಬೇಕಾಗುತ್ತದೆ. ನೀನು ಅ ರಾವಣನಿಗೆ ಪ್ರಾಣಲಿಂಗವನ್ನು ಕೊಟ್ಟು ಎಷ್ಟು ಹೊತ್ತಾಯಿತು? ಅವನು ಈ ವೇಳೆಗೆ ಲಂಕೆಯನ್ನು ಸೇರಿರುವ ಸಾಧ್ಯತೆಯಿದೆಯೇ?” ಎಂದು ಕೇಳಿದನು. ಅದಕ್ಕೆ ಶಂಕರನು, “ಪಂಚನಾಡಿಮಿಡಿತ ಸಮಯವಾಗಿದೆ.” ಎಂದುತ್ತರಕೊಟ್ಟನು.

ಶಿವನ ಮಾತನ್ನು ಕೇಳಿದ ವಿಷ್ಣುವು, ತಕ್ಷಣವೇ ಸೂರ್ಯನಿಗೆ ಭೂಲೋಕದಿಂದ ಮರೆಯಾಗುವಂತೆ ಕಟ್ಟುಮಾಡಿ, ನಾರದನನ್ನು ಕರೆದು, “ದೇವರ್ಷಿ, ಇನ್ನೂ ಅವನು ತನ್ನ ಮನೆಗೆ ಸೇರಿರುವುದಿಲ್ಲವೆಂದುಕೊಂಡಿದ್ದೇನೆ. ತಕ್ಷಣವೇ ನೀನು ಮನೋವೇಗದಲ್ಲಿ ಹೊರಟು ರಾವಣನು ಪ್ರಾಣಲಿಂಗವನ್ನು ಲಂಕೆಗೆ ಸೇರಿಸದಂತೆ ಮಾರ್ಗದಲ್ಲಿ ಅವನ ಗಮನಕ್ಕೆ ತಡೆಯನ್ನುಂಟುಮಾಡು. ಸೂರ್ಯನು ಅದೃಶ್ಯನಾಗಿರುವುದರಿಂದ ರಾವಣನು ತನ್ನ ಸಂಧ್ಯಾವಂದನೆಯನ್ನು ಪ್ರಾರಂಭಿಸಬೇಕು. ಆ ಸಮಯದಲ್ಲಿ ಅವನಿಗೆ ವಿಘ್ನವುಂಟಾಗುವಂತೆ ಮಾಡಬೇಕು.” ಎಂದನು. ಅದನ್ನು ಕೇಳಿದ ನಾರದ, ವಿಷ್ಣುವಿನ ಆಜ್ಞೆಯಂತೆ, ಮನೋವೇಗದಲ್ಲಿ ಹೊರಟು ಲಂಕಾಪುರಿಯ ಮಾರ್ಗದಲ್ಲಿ ಹೊರಟಿದ್ದ ರಾವಣನನ್ನು ಸೇರಿಕೊಂಡನು.

ವಿಷ್ಣುವು ವಿಘ್ನನಾಯಕನನ್ನು ಸ್ಮರಿಸಲು, ಗಣಪತಿ ಅಲ್ಲಿಗೆ ಬಂದನು. ಅವನನ್ನು ಕಂಡು ವಿಷ್ಣುವು, “ಗಣಪತಿ, ರಾವಣನು ನಿನ್ನನ್ನು ಉಪೇಕ್ಷಿಸಿದ್ದಾನೆ. ನಿನಗೆ ಸುರರೂ ನಮಸ್ಕರಿಸುತ್ತಾರೆ. ಅವರ ಮನೋರಥಗಳು ನೆರವೇರುತ್ತವೆ. ಆದರೆ ನಿನಗೆ ನಿವೇದನೆಮಾಡದೆಯೇ ರಾವಣನು ಶಿವನನ್ನು ಮೋಹಗೊಳ್ಳುವಂತೆ ಮಾಡಿ ಅವನ ಪ್ರಾಣಲಿಂಗವನ್ನು ಅಪಹರಿಸಿದ್ದಾನೆ. ಅದರಿಂದ ನೀನು ರಾವಣನನ್ನು ವಂಚಿಸಬೇಕು. ಬಾಲವೇಷಧಾರಿಯಾಗಿ ಹೋಗಿ ಅವನನ್ನು ಯಾವುದಾದರೊಂದು ರೀತಿಯಲ್ಲಿ ವಂಚಿಸು. ಆ ರಾವಣನು ಸೂರ್ಯಾಸ್ತಸಮಯದಲ್ಲಿ ತಪ್ಪದೇ ಸಂಧ್ಯೆಯನ್ನು ಆಚರಿಸುತ್ತಾನೆ. ನಾರದಮುನಿ ಈಗಾಗಲೇ ಅವನನ್ನು ಕಾಣಲು ಹೊರಟಿದ್ದಾನೆ. ಶಿವಾಜ್ಞೆಯಂತೆ ರಾವಣನು ಪ್ರಾಣಲಿಂಗವನ್ನು ಯಾವುದೇ ಕಾರಣಕ್ಕೂ ನೆಲದಮೇಲೆ ಇಡುವುದಿಲ್ಲ. ನೀನು ಬಾಲಕನಾಗಿ ಅಲ್ಲಿಗೆ ಹೋಗಿ, ಅವನ ಶಿಷ್ಯನಂತೆ ನಟಿಸಿ, ಅವನ ವಿಶ್ವಾಸ ಗಳಿಸಿ, ಸಂಧ್ಯಾಸಮಯದಲ್ಲಿ ನಿನ್ನಲ್ಲಿ ವಿಶ್ವಾಸವಿಟ್ಟು ಅವನು ಪ್ರಾಣಲಿಂಗವನ್ನು ನಿನ್ನ ಕೈಲಿಡುವಂತೆ ಮಾಡು. ಅವನು ಲಿಂಗವನ್ನು ನಿನ್ನ ಕೈಲಿಟ್ಟ ತಕ್ಷಣವೇ ಅದನ್ನು ಭೂಮಿಯ ಮೇಲೆ ಇಟ್ಟುಬಿಡು. ಅದು ಅಲ್ಲಿಯೇ ಶಾಶ್ವತವಾಗಿ ನೆಲೆಯಾಗುವುದು. ಇದೆಲ್ಲವನ್ನೂ ಕಪಟದಿಂದಲೇ ಸಾಧಿಸಬೇಕು. ದುಷ್ಟರನ್ನು, ಕಪಟಿಗಳನ್ನು ಕಪಟದಿಂದಲೇ ಜಯಿಸಬೇಕಲ್ಲವೇ?” ಎಂದು ಆದೇಶ ಕೊಟ್ಟನು. ವಿಘ್ನೇಶ್ವರನು, “ನನಗೆ ಮಾರ್ಗದಲ್ಲಿ ತಿನ್ನಲು ಏನಾದರೂ ಬೇಕು.” ಏಂದು ಕೇಳಲು, ವಿಷ್ಣುವು ಐದು ಕಡುಬು, ಹಾಲು, ತೆಂಗಿನಕಾಯಿ, ಕಬ್ಬಿನ ಜಲ್ಲೆಗಳು, ದಾಳಿಂಬರೆ ಹಣ್ಣು, ತುಪ್ಪದ ಲಾಡು, ಬೇಯಿಸಿದ ಕಳ್ಳೆಕಾಯಿ, ಸಕ್ಕರೆ ಮುಂತಾದವುಗಳನ್ನು ಭಕ್ಷ್ಯಗಳಾಗಿ ವಿನಾಯಕನಿಗೆ ಕೊಟ್ಟು, ತಕ್ಷಣವೇ ಹೊರಡುವಂತೆ ಹೇಳಲು, ಅವನು ವಟುವೇಷಧಾರಿಯಾಗಿ ಮಾರ್ಗದಲ್ಲಿ ತನಗೆ ಕೊಟ್ಟಿದ್ದ ಭಕ್ಷ್ಯಗಳನ್ನು ತಿನ್ನುತ್ತಾ ಹೊರಟನು.

ಅಷ್ಟರಲ್ಲಿ ನಾರದನು ಮನೋವೇಗದಲ್ಲಿ ಹೊರಟು ರಾವಣನಿಗಿಂತ ಮುಂದೆ ಹೋಗಿ, ಹಿಂತಿರುಗಿ ಬರುತ್ತಾ ಅವನಿಗೆ ಎದುರಾದನು. ದಶಮುಖನು ನಾರದನನ್ನು ಕಂಡು, “ಬ್ರಹ್ಮರ್ಷಿ, ಕೈಲಾಸಪರ್ವತಕ್ಕೆ ಹೋಗಿದ್ದೆ. ಪರಮಶಿವನು ನನ್ನಲ್ಲಿ ಪ್ರಸನ್ನನಾಗಿ ನನಗೆ ತನ್ನ ಆತ್ಮಲಿಂಗವನ್ನೇ ಪ್ರಸಾದಿಸಿದನು. ಅದು ನನಗೆ ಕಾಮಪ್ರದವು. ಅದರ ಜೊತೆಗೆ ನನಗೆ ಇನ್ನೂ ವರಗಳನ್ನು ಕೊಟ್ಟನು.” ಎಂದು ಹೇಳಿದನು. ಕಲಹಪ್ರಿಯನಾದ ನಾರದ, “ಲಂಕೇಶ್ವರ, ನಿನಗೆ ದೈವದೊಲುಮೆ ಆಯಿತು. ನೀನು ಸಂಪಾದಿಸಿದ ಆತ್ಮಲಿಂಗವು ಮೃತ್ಯುಂಜಯವಾದದ್ದು. ಅದನ್ನು ಇದಕ್ಕೆ ಮುಂಚೆ ನಾನು ನೋಡಿದ್ದೆ. ಅದನ್ನು ತೋರಿಸು. ಅದನ್ನು ಪರೀಕ್ಷೆಮಾಡಿ ಅದರ ಲಕ್ಷಣಗಳನ್ನು ನಿನಗೆ ವಿವರಿಸುತ್ತೇನೆ.” ಎಂದನು. ನಾರದನ ಮಾತುಗಳಿಂದ ಸಂದೇಹಗೊಂಡ ರಾವಣನು, ಅದಕ್ಕೆ ಮುಚ್ಚಿದ್ದ ಬಟ್ಟೆಯನ್ನು ಪಕ್ಕಕ್ಕೆ ಸರಿಸಿ, ದೂರದಿಂದಲೇ ಅದನ್ನು ನಾರದನಿಗೆ ತೋರಿಸಿದನು. ರಾವಣನ ಸಂದೇಹವನ್ನು ಅರಿತ ನಾರದ, ಮೆಲ್ಲಗೆ ರಾವಣನನ್ನು ಕುಳಿತುಕೊಳ್ಳುವಂತೆ ಮಾಡಿ, “ಲಿಂಗಮಹಿಮೆಯನ್ನು ಹೇಳುತ್ತೇನೆ. ಕಿವಿಗೊಟ್ಟು ಕೇಳು.” ಎಂದು ಹೀಗೆ ಹೇಳಿದನು.

ಪ್ರಾಣಲಿಂಗ ಮಹಿಮೆ

ಒಂದಾನೊಂದುಸಲ ಕಾಲಾಗ್ನಿ ಸದೃಶವಾದ ಮೃಗವೊಂದು ಮಹಿಷಮುಖವುಳ್ಳ ಮೃಗಗಳನ್ನೆಲ್ಲಾ ಭಕ್ಷಿಸುತ್ತಾ ವನದಲ್ಲಿ ಓಡಾಡುತ್ತಿತ್ತು. ಬ್ರಹ್ಮ, ವಿಷ್ಣು, ಮಹೇಶ್ವರರು ಆ ವನದಲ್ಲಿ, ಅದೇಸಮಯದಲ್ಲಿ ಬೇಟೆಗೆಂದು ಬಂದಿದ್ದರು. ತ್ರಿಮೂರ್ತಿಗಳು ಆ ಮೃಗವನ್ನು ಬೇಟೆಯಾಡಿ ವಧಿಸಿ, ಅದರ ಮಾಂಸವನ್ನು ಭಕ್ಷಿಸಿದರು. ಆ ಮೃಗಕ್ಕೆ ಮೂರು ಕೊಂಬುಗಳಿದ್ದವು. ಆ ಕೊಂಬುಗಳ ಮೂಲದಲ್ಲಿ ಮೂರು ಲಿಂಗಗಳಿದ್ದವು. ಆ ಲಿಂಗಗಳು ಪ್ರಾಣಲಿಂಗಗಳು. ಒಬ್ಬೊಬ್ಬರು ಒಂದೊಂದರ ಹಾಗೆ, ಆ ಮೂವರೂ, ಆ ಲಿಂಗಗಳನ್ನು ಹಂಚಿಕೊಂಡರು. ರಾವಣ, ಆ ಲಿಂಗಗಳ ಮಹಿಮೆಯನ್ನು ಕೇಳು. ಮೂರು ವರ್ಷಗಳು ಏಕಾಗ್ರಚಿತ್ತನಾಗಿ ಆ ಲಿಂಗವನ್ನು ಪೂಜಿಸಿದವನಿಗೆ ಶಿವನು ವರದಾತನಾಗುತ್ತಾನೆ. ಆ ಲಿಂಗವಿರುವೆಡೆಯಲ್ಲೇ ಕೈಲಾಸವಿರುವುದು ಎಂಬುದರಲ್ಲಿ ಸಂದೇಹವೇ ಇಲ್ಲ. ತ್ರಿಮೂರ್ತಿಗಳು ಆ ಲಿಂಗ ಧಾರಣದಿಂದಲೇ ಮಹಿಮಾನ್ವಿತರಾಗಿದ್ದಾರೆ. ಅಷ್ಟೇಅಲ್ಲ. ಅದರ ಮಹಿಮೆ ಇನ್ನೂ ಬಹಳವಿದೆ. ಸಾವಧಾನಚಿತ್ತನಾಗಿ ಕೇಳು.” ಎಂದು ನಾರದ ಹೇಳುತ್ತಿರುವಾಗ, ರಾವಣನು, “ನನಗೆ ಈಗ ಅದನ್ನು ಕೇಳಲು ವೇಳೆಯಿಲ್ಲ. ತ್ವರೆಯಾಗಿ ನಾನು ಲಂಕೆಯನ್ನು ಸೇರಿಕೊಳ್ಳಬೇಕು.” ಎಂದನು. ಅದಕ್ಕೆ ನಾರದ, “ಅಯ್ಯಾ, ಬ್ರಾಹ್ಮಣರಿಗೆ ಸಂಧ್ಯಾವಂದನೆಯ ಕಾಲ ಸಮೀಪಿಸಿದೆ. ನೀನು ವೇದಪಾರಂಗತನು. ಸತ್ಕರ್ಮಗಳ ವೇಳಾತಿಕ್ರಮವನ್ನು ಹೇಗೆ ಮಾಡಬಲ್ಲೆ? ಮಾರ್ಗ ಮಧ್ಯದಲ್ಲಿ ಸಂಧ್ಯಾಕಾಲ ಬಂದರೆ ಸಂಧ್ಯಾವಂದನೆ ಆಚರಿಸದಿದ್ದರೆ ಕರ್ತವ್ಯಲೋಪವಾಗುತ್ತದೆಯಲ್ಲವೇ? ನಾನು ಸಂಧ್ಯೆಯನ್ನು ಆಚರಿಸಲೆಂದೇ ಇಲ್ಲಿ ನಿಂತೆ.” ಎಂದು ಹೇಳಿ, ನಾರದನು ಅವನನ್ನು ನದೀ ತೀರಕ್ಕೆ ಕರೆದುಕೊಂಡು ಹೋದನು.

ಬ್ರಹ್ಮಚಾರಿಯ ವೇಷ ಧರಿಸಿದ್ದ ಗಣೇಶ, ಅಲ್ಲಿ ಸಮಿತ್ತುಗಳನ್ನು ಕತ್ತರಿಸುತ್ತಾ ನಿಂತಿದ್ದನು. “ಸಂಧ್ಯೆಯನ್ನು ಆಚರಿಸದಿದ್ದರೆ ವ್ರತಭಂಗವಾಗುವುದು. ಆದರೆ ಸಂಧ್ಯೆ ಆಚರಿಸುವ ಕಾಲದಲ್ಲಿ ಲಿಂಗವನ್ನು ಕೈಲಿ ಹಿಡಿದಿರಲು ಸಾಧ್ಯವಿಲ್ಲ. ಈ ಲಿಂಗವನ್ನು ಭೂಮಿಯಮೇಲೆ ಇಡುವಹಾಗಿಲ್ಲ. ಹಾಗಾದರೆ ಸಂಧ್ಯಾಚರಣೆಯ ಕಾಲದಲ್ಲಿ ಏನು ಮಾಡಬೇಕು?” ಎಂಬ ತೊಳಲಾಟದಲ್ಲಿ ಸಿಕ್ಕಿಬಿದ್ದಿದ್ದ ರಾವಣ, ಸಮೀಪದಲ್ಲಿ ಸಮಿತ್ತುಗಳನ್ನು ಕತ್ತರಿಸುತ್ತಾ ನಿಂತಿದ್ದ, ಕಪಟ ಬ್ರಹ್ಮಚಾರಿಯಾದ ಗಣಪತಿಯನ್ನು ಕಂಡನು. ಅವನನ್ನು ಕಂಡ ರಾವಣ, “ಈ ಬಾಲಬ್ರಹ್ಮಚಾರಿ ಸುಂದರನು. ಅವನನ್ನು ಕೇಳಿ ನೋಡೋಣ. ಅವನು ವಟುವಲ್ಲವೇ? ವಿಶ್ವಾಸಘಾತುಕನಾಗಿರಲಾರ. ಅವನ ಕೈಯಲ್ಲಿ ಈ ಲಿಂಗವನ್ನಿಟ್ಟು ಸಂಧ್ಯೆಯನ್ನು ಆಚರಿಸುತ್ತೇನೆ.” ಎಂದು ಯೋಚಿಸಿ, ಆ ವಟುವಿನ ಸಮೀಪಕ್ಕೆ ಹೋದನು.

ಆ ಕಪಟ ಬ್ರಹ್ಮಚಾರಿ, ರಾವಣನನ್ನು ಕಂಡು ಹೆದರಿದವನಂತೆ ನಟಿಸುತ್ತಾ, ಅಲ್ಲಿಂದ ಓಡಿಹೋಗಲು ಯತ್ನಿಸಿದನು. ರಾವಣ ಅವನಿಗೆ ಅಭಯ ಕೊಟ್ಟು, “ನೀನಾರು? ನಿನ್ನ ತಂದೆತಾಯಿಗಳು ಯಾರು? ನಿನ್ನ ವಂಶ ಯಾವುದು?” ಎಂದು ಪ್ರಶ್ನೆ ಮಾಡಿದನು. ಆ ಬ್ರಹ್ಮಚಾರಿ, “ನೀನೇಕೆ ಇವನ್ನೆಲ್ಲಾ ಕೇಳುತ್ತಿದ್ದೀಯೆ ಎಂಬುದನ್ನು ಮೊದಲು ಹೇಳು. ನನ್ನ ತಾಯಿತಂದೆಗಳು ಯಾರಾದರೆ ನಿನಗೇನು? ಅವರೇನು ನಿನಗೆ ಋಣಗ್ರಸ್ತರೇ?” ಎಂದು ಮರು ಪ್ರಶ್ನೆ ಮಾಡಿದನು. ರಾವಣನು, ನಗುತ್ತಾ, ಸ್ನೇಹದಿಂದ ಅವನ ಕೈಹಿಡಿದು, ” ಮಗು, ನಿನ್ನಲ್ಲಿ ಪ್ರೇಮದಿಂದ ಕೇಳುತ್ತಿದ್ದೇನೆ. ಹೇಳುವುದಿಲ್ಲವೇ?” ಎಂದು ಲಾಲಿಸಿ ಕೇಳಲು, ಆ ವಟುವು, “ನನ್ನ ತಂದೆ ಒಬ್ಬ ಮಹಾತ್ಮ. ರುದ್ರಾಕ್ಷ ಭೂಷಿತ, ಭಸ್ಮಲಿಪ್ತ ದೇಹದಿಂದ ಕೂಡಿದ ಜಟಾಧಾರಿ. ಅವನನ್ನು ಶಂಕರ ಎನ್ನುತ್ತಾರೆ. ಭಿಕ್ಷೆಗಾಗಿ ಅವನು ಹಗಲುರಾತ್ರಿ ಭೂಮಿಯಮೇಲೆ ಸಂಚರಿಸುತ್ತಿರುತ್ತಾನೆ. ನನ್ನ ತಾಯಿ ಉಮಾದೇವಿಯೆಂದು ಪ್ರಸಿದ್ಧಳಾದವಳು. ನಾನೊಬ್ಬ ಸಣ್ಣ ಬಾಲಕ. ನಿನ್ನನ್ನು ಕಂಡರೆ ನನಗೆ ಭಯವಾಗುತ್ತಿದೆ. ನನಗೆ ಧೈರ್ಯವಿಲ್ಲ. ನನ್ನ ಕೈಬಿಡು. ನಾನು ಹೋಗಬೇಕು.” ಎಂದು ನುಡಿದ ಗಣೇಶನ ಮಾತುಗಳನ್ನು ಕೇಳಿ ರಾವಣ, ಅವನೊಬ್ಬ ದರಿದ್ರ ಬ್ರಾಹ್ಮಣನ ಮಗ ಎಂದುಕೊಂಡು, “ನಿನ್ನ ತಂದೆ ದರಿದ್ರನಲ್ಲವೆ? ನಿನಗೇನು ಸುಖವಿದೆ? ನನ್ನ ಲಂಕಾಪುರಿ ಚಿನ್ನದಿಂದ ಮಾಡಲ್ಪಟ್ಟಿದೆ. ಅಲ್ಲಿ ನೀನು ದೇವತಾರ್ಚನೆ ಮಾಡಿಕೊಂಡಿರು. ನೀನು ಕೇಳಿದ್ದೆಲ್ಲವನ್ನೂ ಕೊಡುತ್ತೇನೆ. ನನ್ನೊಡನೆ ಬಂದು ಅಲ್ಲಿ ಸುಖವಾಗಿರಬಹುದು.” ಎಂದನು. ಅದಕ್ಕೆ ವಿಘ್ನೇಶ್ವರ, “ಅಯ್ಯಯ್ಯೋ! ನಾನು ಲಂಕೆಗೆ ಬರುವುದಿಲ್ಲ. ಅಲ್ಲಿ ಮನುಷ್ಯ ಭಕ್ಷಕರಾದ ರಾಕ್ಷಸರಿದ್ದಾರೆ. ಅವರು ನನ್ನನ್ನು ತಿಂದುಹಾಕುತ್ತಾರೆ. ನನ್ನ ಕೈಬಿಡು. ನನಗೆ ಹಸಿವೆಯಾಗುತ್ತಿದೆ. ನಾನು ಮನೆಗೆ ಹೋಗುತ್ತೇನೆ.” ಎಂದು ಅಳುಮುಖ ಮಾಡಿಕೊಂಡು ಹೇಳಿದನು. ಆದರೂ, ರಾವಣ ಅವನನ್ನು ಹೇಗೋ ಮಾಡಿ ಒಪ್ಪಿಸಿ, “ನಾನು ಸಂಧ್ಯೆಯಾಚರಿಸಿ ಬರುತ್ತೇನೆ. ಅಲ್ಲಿಯವರೆಗೂ ಈ ಲಿಂಗವನ್ನು ಕೈಯಲ್ಲಿ ಹಿಡಿದುಕೊಂಡಿರು.” ಎಂದು ಪ್ರಾರ್ಥಿಸಿಕೊಂಡನು. ಅದಕ್ಕೆ ಆ ವಟು, “ನಾನು ಸಣ್ಣವನು. ಈ ಭಾರವಾದ ಲಿಂಗವನ್ನು ನನಗೆ ಹೊರುವ ಶಕ್ತಿಯಿಲ್ಲ. ಈ ಲಿಂಗವನ್ನು ನಾನು ಹಿಡಿಯುವುದಿಲ್ಲ. ನನ್ನ ಕೈಬಿಡು. ನಾನು ಹೋಗುತ್ತೇನೆ.” ಎಂದು ಮತ್ತೆ ಮತ್ತೆ ಹೇಳಿದನು. ರಾವಣನು ಇನ್ನೊಮ್ಮೆ ಮತ್ತೊಮ್ಮೆ ಆ ಕಪಟವಟುವನ್ನು ಪ್ರಾರ್ಥಿಸಿಕೊಂಡು, ಅವನ ಕೈಲಿ ಆ ಪ್ರಾಣಲಿಂಗವನ್ನಿಟ್ಟು, ಸಂಧ್ಯೆಯಾಚರಿಸಲು ಹೊರಟನು. ಆಗ ಮತ್ತೆ ಆ ವಟುವು, ” ಅಯ್ಯಾ, ನನ್ನ ಕೈಲಿ ಇದನ್ನು ಹೊರಲು ಶಕ್ತಿಯಿರುವವರೆಗೂ ನಾನು ಇಟ್ಟುಕೊಂಡಿರುತ್ತೇನೆ. ನನ್ನ ಕೈಯಲ್ಲಿ ಇನ್ನು ಸಾಧ್ಯವಿಲ್ಲ ಎಂದಾದರೆ ನಿನ್ನನ್ನು ಮೂರು ಸಲ ಕರೆಯುತ್ತೇನೆ. ನೀನು ಅಷ್ಟರಲ್ಲಿ ಬರದಿದ್ದರೆ ಇದನ್ನು ನಾನು ಭೂಮಿಯ ಮೇಲೆ ಇಟ್ಟುಬಿಡುತ್ತೇನೆ.” ಎಂದು ಎಚ್ಚರಿಕೆ ಹೇಳಿ ಆ ಪ್ರಾಣಲಿಂಗವನ್ನು ತೆಗೆದುಕೊಂಡು ಅದನ್ನು ಕೈಯಲ್ಲಿ ಹಿಡಿದು ನಿಂತನು. ಅದೇ ಸಮಯಕ್ಕೆ ದೇವತೆಗಳೆಲ್ಲರೂ ಆಕಾಶದಲ್ಲಿ ಮುಂದಾಗುವುದನ್ನು ನೋಡಲು ಬಂದು ನಿಂತರು. ಆ ವಟುವೇಷಧಾರಿ ಗಣಪತಿಯು, ರಾವಣನು ಅರ್ಘ್ಯ ಕೊಡುತ್ತಿರುವ ಸಮಯವನ್ನು ಕಾದುಕೊಂಡಿದ್ದು, ಆ ಸಮಯಕ್ಕೆ ಸರಿಯಾಗಿ, “ಇನ್ನು ಈ ಲಿಂಗವನ್ನು ನನ್ನ ಕೈಯಲ್ಲಿ ಹಿಡಿದುಕೊಂಡಿರಲು ಸಾಧ್ಯವಿಲ್ಲ. ಬೇಗ ಬಾ.” ಎಂದು ರಾವಣನನ್ನು ಕರೆದನು. ರಾವಣನು ಕೈಸನ್ನೆಯಿಂದ ಅವನಿಗೆ “ಅರ್ಘ್ಯವನ್ನು ಮುಗಿಸಿ ಇನ್ನೊಂದು ಕ್ಷಣದಲ್ಲೇ ಬಂದು ಬಿಡುತ್ತೇನೆ. ಸ್ವಲ್ಪ ತಾಳು.” ಎಂದು ಸೂಚಿಸಿದನು. ಇನ್ನೊಂದು ಕ್ಷಣದಲ್ಲಿ ಗಣಪತಿಯು, ಅವನನ್ನು ಮೂರುಸಲ ಕರೆದು, “ಭಾರ ಸಹಿಸಲಾಗುತ್ತಿಲ್ಲ. ಬೇಗ ಬಾ.” ಎಂದು ಮತ್ತೆ ಕರೆದನು. ಮೂರುಸಲ ಹಾಗೆ ಕರೆದರೂ ರಾವಣ ಬರಲಿಲ್ಲವಾಗಿ, ಆಕಾಶದಲ್ಲಿ ದೇವತೆಗಳೆಲ್ಲರೂ ಸಾಕ್ಷಿಗಳಾಗಿ ನೋಡುತ್ತಿರುವಂತೆಯೇ, ವಿಘ್ನೇಶ್ವರ, ಮಹಾವಿಷ್ಣುವನ್ನು ಸ್ಮರಿಸಿಕೊಳ್ಳುತ್ತಾ, ಆ ಲಿಂಗವನ್ನು ಭೂಮಿಯಮೇಲೆ ಇಟ್ಟುಬಿಟ್ಟನು. ಅದನ್ನು ಕಂಡ ದೇವತೆಗಳೆಲ್ಲರೂ ಬಹಳ ಸಂತುಷ್ಟರಾಗಿ ಪುಷ್ಪವೃಷ್ಟಿ ಮಾಡಿದರು. ಅರ್ಘ್ಯಪ್ರದಾನ ಮುಗಿಸಿ ದಶಮುಖನು ತ್ವರೆಯಾಗಿ ಅಲ್ಲಿಗೆ ಬಂದು, ಆ ಬಾಲಕನು ಪ್ರಾಣಲಿಂಗವನ್ನು ಭೂಮಿಯಮೇಲೆ ಇಟ್ಟುಬಿಟ್ಟಿರುವುದನ್ನು ಕಂಡು ಕ್ರುದ್ಧನಾಗಿ, ಆ ಮಾಯಾ ಬಾಲಕನನ್ನು ಕುರಿತು, “ಹೇ ವಿಶ್ವಾಸಘಾತುಕ, ಡಾಂಭಿಕ, ಕಪಟಿ, ವಂಚಕ, ಮೂರ್ಖ. ಬುದ್ಧಿಪೂರ್ವಕವಾಗಿಯೇ ನೀನು ಈ ಲಿಂಗವನ್ನು ಭೂಮಿಯಮೇಲೆ ಇಟ್ಟಿದ್ದೀಯೆ.” ಎಂದು ಬೈಯುತ್ತಾ, ಅವನನ್ನು ಹೊಡೆದನು. ಆ ವೇಷಧಾರಿ ಬಾಲಕ ಅಳುವವನಂತೆ ನಟಿಸುತ್ತಾ, “ನಾನು ನಿರಪರಾಧಿ. ಅಶಕ್ತ. ನನ್ನನ್ನು ಹೊಡೆದಿದ್ದೀಯೆ. ನಮ್ಮ ತಂದೆಗೆ ಹೇಳುತ್ತೇನೆ.” ಎನ್ನುತ್ತಾ ಅಲ್ಲಿಂದ ಹೊರಟು ಹೋದನು.

ರಾವಣನು ಭೂಮಿಯಮೇಲಿದ್ದ ಆ ಲಿಂಗವನ್ನು ತನ್ನ ಕೈಗಳಿಂದ ಎತ್ತಲು ಪ್ರಯತ್ನಿಸಿದನು. ಆದರೆ ತನ್ನ ಬಲವನ್ನೆಲ್ಲಾ ಉಪಯೋಗಿಸಿ ಪ್ರಯತ್ನ ಮಾಡಿದರೂ, ಅವನಿಗೆ ಆ ಲಿಂಗವನ್ನು ಕದಲಿಸಲಾಗಲಿಲ್ಲ. ಅವನ ಪ್ರಯತ್ನಗಳಿಂದ ಭೂಮಿ ಅಲ್ಲಾಡಿತೇ ಹೊರತು ಆ ಲಿಂಗ ಮಾತ್ರ ಸ್ವಲ್ಪವೂ ಅಲ್ಲಾಡಲಿಲ್ಲ. ರಾವಣ ಕ್ಷೀಣಬಲನಾಗಿ, ಲಿಂಗ ಮಹಾಬಲವಾಯಿತು. ಅದರಿಂದಲೇ ಆ ಲಿಂಗಕ್ಕೆ ಮಹಾಬಲೇಶ್ವರ ಎಂಬ ಹೆಸರಾಯಿತು. ಲಿಂಗವನ್ನು ರಾವಣ ಹಿಡಿದು ಅಲುಗಾಡಿಸುವಾಗ ಅದು ಗೋಕರ್ಣದ ಆಕಾರವನ್ನು ಪಡೆಯಿತು. ಅದರಿಂದ ಆ ಕ್ಷೇತ್ರಕ್ಕೆ ಗೋಕರ್ಣ ಎಂಬ ಹೆಸರು ಬಂತು. ಮುಂದೆ ಲಂಕಾಧೀಶ್ವರ ಅಲ್ಲಿಯೆ ತಪಸ್ಸು ಮಾಡಿ ವರಗಳನ್ನು ಪಡೆದನು. ಅಂದಿನಿಂದ ಸಕಲ ದೇವತೆಗಳಿಗೂ ಅದು ವಾಸಸ್ಥಾನವಾಯಿತು.

ಸ್ಕಾಂದ ಪುರಾಣದಲ್ಲಿ ಗೋಕರ್ಣ ಕ್ಷೇತ್ರ ಅದ್ಭುತ ಮಹಿಮೆಯುಳ್ಳದ್ದು ಎಂದು ಹೇಳಲ್ಪಟ್ಟಿದೆ.

ಇಲ್ಲಿಗೆ ಆರನೆಯ ಅಧ್ಯಾಯ ಮುಗಿಯಿತು.
[31/12/2015 9:03 PM] S. Bhargav: ಶ್ರೀ ಗುರು ಚರಿತ್ರೆ – ಏಳನೆಯ ಅಧ್ಯಾಯ||

ಗೋಕರ್ಣ ಕ್ಷೇತ್ರ ವೃತ್ತಾಂತವನ್ನು ಕೇಳಿ, ನಾಮಧಾರಕ ಸಿದ್ಧಪುರುಷನಿಗೆ, ಆ ಕ್ಷೇತ್ರ ಮಹಿಮೆಯನ್ನು ಇನ್ನಷ್ಟು ವಿವರಿಸಿ ಹೇಳಬೇಕೆಂದು ಬಿನ್ನವಿಸಿಕೊಂಡನು. “ಸರ್ವ ತೀರ್ಥಗಳನ್ನೂ ಬಿಟ್ಟು ಶ್ರೀಪಾದ ಶ್ರೀವಲ್ಲಭರು ಅಲ್ಲಿಯೇ ನಿಲ್ಲಲು ಕಾರಣವೇನು? ಆ ಕ್ಷೇತ್ರದಲ್ಲಿ ಯಾರು ಯಾರು ವರಗಳನ್ನು ಪಡೆದರು? ಸದ್ಗುರುವಿನಲ್ಲಿ ಪ್ರೀತಿಯಿಟ್ಟವರಿಗೆ ಆ ತೀರ್ಥ ಮಹಿಮೆಯನ್ನು ಕೇಳಬೇಕೆಂಬ ಕೋರಿಕೆಯು ಸಹಜವಲ್ಲವೇ? ಹೇ ಕೃಪಾಮೂರ್ತಿ, ಜ್ಞಾನಸಿಂಧು, ನನಗೆ ಅಂತಹ ಕಥೆಗಳನ್ನು ವಿಸ್ತರಿಸಿ ಹೇಳಿ.” ಎಂದು ಸಿದ್ಧರನ್ನು ಪ್ರಾರ್ಥಿಸಿಕೊಂಡನು. ಅವನ ಪ್ರಾರ್ಥನೆಯನ್ನು ಕೇಳಿ ಸಿದ್ಧಮುನಿಯು ಹೇಳಿದರು. “ನಾಮಧಾರಕ, ಗೋಕರ್ಣ ಮಹಿಮೆಯನ್ನು ವಿಸ್ತಾರವಾಗಿ ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು. ಹಿಂದೆ ಇಕ್ಷ್ವಾಕು ವಂಶದಲ್ಲಿ ಮಿತ್ರಸಹನೆಂಬ ರಾಜನಿದ್ದನು. ಧರ್ಮಾನುಚರನಾದ ಆ ರಾಜ ಕ್ಷತ್ರಿಯರಲ್ಲೇ ಬಹು ಪ್ರತಾಪಿಯಾದವನು. ಸಕಲ ಧರ್ಮಗಳನ್ನೂ ಬಲ್ಲವನು. ವೇದ ಧರ್ಮಗಳನ್ನು ತಿಳಿದವನು. ವಿವೇಕಿ. ಕುಲಾಭಿಮಾನಿ. ಬಲಾಢ್ಯ. ದಯಾನಿಧಿ. ಪ್ರಯತ್ನಶಾಲಿ.

ಒಂದುಸಲ ಅವನು ಬೇಟೆಗೆಂದು ಹೊರಟು, ಅನೇಕ ವನ್ಯಮೃಗಗಳುಳ್ಳ ಅರಣ್ಯವನ್ನು ಪ್ರವೇಶಮಾಡಿದನು. ನಿರ್ಮಾನುಷ್ಯವಾದ ಆ ಅರಣ್ಯದಲ್ಲಿ ಮೃಗಗಳನ್ನನ್ನ್ವೇಷಿಸುತ್ತಾ ಹೊರಟ ಅವನು, ದಾರಿಯಲ್ಲಿ, ಅಗ್ನಿಯಂತೆ ಜ್ವಾಲಾಕಾರವಾಗಿ ಭಯಾನಕವಾಗಿ ಕಾಣುತ್ತಿದ್ದ ಒಬ್ಬ ರಾಕ್ಷಸನನ್ನು ನೋಡಿದನು. ಆ ರಾಕ್ಷಸನನ್ನು ಕಂಡ ಆ ರಾಜ ಕ್ರುದ್ಧನಾಗಿ ಅವನಮೇಲೆ ಶರ ವರ್ಷವನ್ನು ಕುರಿಸಿದನು. ಶರಘಾತದಿಂದ ಆ ರಾಕ್ಷಸ ಮೂರ್ಛೆಗೊಂಡು ಭೂಶಾಯಿಯಾದನು. ಸಾಯುತ್ತಾ ಬಿದ್ದಿರುವ ಅವನನ್ನು ಕಂಡು ಬಹು ದುಃಖಿತನಾದ ಅವನ ಸಹೋದರ, ಶೋಕತಪ್ತನಾಗಿ ಅಳುತ್ತಾ ಅವನ ಬಳಿಯೇ ಕುಳಿತನು. ಸಾಯುತ್ತಿದ್ದ ಆ ರಾಕ್ಷಸ, ಸರ್ವ ಪ್ರಯತ್ನದಿಂದಲೂ ತನ್ನ ಸಾವಿಗೆ ಕಾರಣನಾದ ಆ ರಾಜನನ್ನು ಕೊಲ್ಲಬೇಕೆಂದು ತನ್ನ ಸಹೋದರನಿಗೆ ಆಣತಿಕೊಟ್ಟು, ಪ್ರಾಣಬಿಟ್ಟನು.

ಸಮಯಕಾದು, ಮಾಯಾವಿಯಾದ ಆ ರಾಕ್ಷಸನ ಸಹೋದರ, ಮಾನವರೂಪದಲ್ಲಿ, ರಾಜನ ಬಳಿಗೆ ಬಂದು ಮೃದುವಾಕ್ಯಗಳಿಂದ ರಾಜನನ್ನು ಒಲಿಸಿಕೊಂಡು, ನಮ್ರತೆಯನ್ನು ನಟಿಸುತ್ತಾ, ರಾಜನ ಸೇವೆಯಲ್ಲಿ ನಿಂತನು. ಆ ಕಪಟಿ, ತನ್ನ ಸ್ವಾಮಿಯದ ರಾಜನ ಮನೋಗತಗಳನ್ನರಿತು, ಅವನಿಗೆ ಅನುಕೂಲನಾಗಿ, ಅವನ ಸೇವೆ ಮಾಡುತ್ತಾ, ಅವನನ್ನು ಸಂತುಷ್ಟನನ್ನಾಗಿ ಮಾಡಿ, ಅವನ ನಂಬಿಕೆಗೆ ಪಾತ್ರನಾದನು. ಒಂದುಸಲ ಪಿತೃಶ್ರಾದ್ಧ ಬರಲು, ರಾಜನು ವಸಿಷ್ಠಾದಿ ಮುನಿಗಳನ್ನು ಅಹ್ವಾನಿಸಿದನು. ಆ ದಿವಸ, ಕಪಟವನ್ನರಿಯದ ರಾಜನು ಆ ಕಪಟಿ ಸೇವಕನನ್ನು ಅಡಿಗೆಯ ಮೇಲ್ವಿಚಾರಕ್ಕೆ ನೇಮಿಸಿ, “ನೀನು ಪಾಕಶಾಲೆಯಲ್ಲಿದ್ದುಕೊಂಡು, ಅಡಿಗೆಗೆ ಬೇಕಾದ ಪದಾರ್ಥಗಳನ್ನು ತಂದುಕೊಟ್ಟು, ಅಡಿಗೆಯವನಿಗೆ ಸಹಾಯಕನಾಗಿ ನಿಂತು ಎಲ್ಲವನ್ನು ಸಿದ್ಧಪಡಿಸು.” ಎಂದು ಆಜ್ಞೆ ಮಾಡಿದನು. ರಾಜಾಜ್ಞೆಯನ್ನಂಗೀಕರಿಸಿ, ಆ ಕಪಟಸೇವಕ, ಅಡಿಗೆಯ ಪದಾರ್ಥಗಳನ್ನು ತಂದುಕೊಡುವಾಗ ಯಾರಿಗೂ ತಿಳಿಯದಂತೆ ನರಮಾಂಸವನ್ನು ಜೊತೆಗೆ ಸೇರಿಸಿ ತಂದು ಕೊಟ್ಟನು. ನಿಜವನ್ನರಿಯದ ಅಡಿಗೆಯವನು ಕಪಟಿ ತಂದುಕೊಟ್ಟಿದ್ದ ಪದಾರ್ಥಗಳನ್ನು ಉಪಯೋಗಿಸಿ ಅಡಿಗೆ ಸಿದ್ಧಪಡಿಸಿದನು.

ಭೋಜನಸಮಯದಲ್ಲಿ ತನ್ನ ದಿವ್ಯ ದೃಷ್ಟಿಯಿಂದ ಅಡಿಗೆಯಲ್ಲಿ ನರಮಾಂಸ ಬೆರೆತಿರುವುದನ್ನು ಅರಿತ ವಸಿಷ್ಠಮುನಿ, ಕ್ರೋಧಗೊಂಡು, “ಹೇ ರಾಜನ್, ಅಸ್ಪರ್ಶವಾದ ನರಮಾಂಸವನ್ನು ಉಪಯೋಗಿಸಿ ನಮಗೆ ಭೋಜನವನ್ನು ಸಿದ್ಧಪಡಿಸಿದ್ದೀಯೆ. ನೀನು ಮಾಡಿದ ಈ ಪಾಪದಿಂದ ಬ್ರಹ್ಮರಾಕ್ಷಸನಾಗು.” ಎಂದು ಶಾಪ ಕೊಟ್ಟನು. ಅದನ್ನು ಕೇಳಿದ ಆ ರಾಜ, ಪ್ರತಿಶಾಪ ಕೊಡಲು ಸಿದ್ಧನಾಗಿ, “ಮಹರ್ಷಿ, ಅಡಿಗೆಯಲ್ಲಿ ಯಾವ ಮಾಂಸವಿದೆ ಎಂಬುದರ ಅರಿವು ನನಗಿಲ್ಲ. ನನ್ನ ಆಜ್ಞೆಯಂತೆ ಅಡಿಗೆಯವನು ಅಡಿಗೆ ಮಾಡಿದ್ದಾನೆ. ಅದರಲ್ಲಿ ಏನಿದೆ ಎಂಬುದು ನನಗೆ ತಿಳಿಯದು. ಅದರಿಂದಲೇ ನೀನು ಕೊಟ್ಟ ಶಾಪ ವ್ಯರ್ಥವು. ತಿಳಿಯದೇ ಆದ ಪಾಪಕ್ಕೆ ನೀನು ಅನಾವಶ್ಯಕವಾಗಿ ಶಾಪ ಕೊಟ್ಟೆ. ಈಗ ನಿನಗೆ ನಾನು ಪ್ರತಿಶಾಪ ಕೊಡುತ್ತೇನೆ.” ಎಂದು ಹೇಳಿ, ಕೈಯಲ್ಲಿ ನೀರು ತೆಗೆದುಕೊಂಡು ಶಾಪಕೊಡಲುದ್ಯುಕ್ತನಾದನು. ಅಷ್ಟರಲ್ಲಿ, ರಾಜನ ಪತ್ನಿ, ಮದಯಂತಿ ಅಡ್ಡಬಂದು, ರಾಜನನ್ನು ತಡೆದು, “ರಾಜಗುರುವನ್ನು ಶಪಿಸುವುದರಿಂದ ಮಹಾ ದೋಷವುಂಟಾಗುತ್ತದೆ. ಗುರುವಚನವು ವೃಥಾ ಅಗುವುದಿಲ್ಲ. ಅದರಿಂದ ಅವರ ಪಾದಗಳನ್ನು ಆಶ್ರಯಿಸಿಯೇ ಉದ್ಧಾರವಾಗಬೇಕು.” ಎಂದು ಅವನನ್ನು ತಡೆದಳು. ರಾಣಿಯ ಮಾತುಗಳನ್ನು ಕೇಳಿ ರಾಜ, ಕೈಯಲ್ಲಿ ಹಿಡಿದಿದ್ದ ನೀರನ್ನು ಕೆಳಕ್ಕೆ ಬಿಟ್ಟನು. ಆ ಕಲ್ಮಷವಾದ ನೀರು ಅವನ ಪಾದಗಳ ಮೇಲೆ ಬಿತ್ತು. ಅದರಿಂದ ಆ ರಾಜ ಕಲ್ಮಷಪಾದನೆಂದು ಹೆಸರುಗೊಂಡು, ಬ್ರಹ್ಮರಾಕ್ಷಸನಾದನು. ರಾಜಪತ್ನಿ, ಮದಯಂತಿ, ಮಹರ್ಷಿಯ ಪಾದಗಳಮೇಲೆ ಬಿದ್ದು, “ಹೇ ಮಹರ್ಷಿವರ್ಯ, ನಿನ್ನ ಕೋಪವನ್ನು ಉಪಸಂಹರಿಸಿಕೊಂಡು, ತಿಳಿಯದೆ ಮಾಡಿದ ಪಾಪದಿಂದ ನನ್ನ ಗಂಡನನ್ನು ಕಾಪಾಡು.” ಎಂದು ಬೇಡಿಕೊಂಡಳು. ಶಾಂತನಾದ ವಸಿಷ್ಠಮುನಿ, ಎಲ್ಲವನ್ನು ಅರಿತವನಾಗಿ, ಶಾಪಕಾಲವನ್ನು ತಗ್ಗಿಸಿ, ಹನ್ನೆರಡು ವರ್ಷಗಳು ಶಾಪವನ್ನನುಭವಿಸಿ ಯಥಾಪೂರ್ವದಂತೆ ಮಹಾರಾಜನಾಗಿ ಬಾಳುವಂತೆ ಅವನಿಗೆ ಶಾಪ ಉಪಸಂಹಾರವನ್ನು ಹೇಳಿ, ತನ್ನ ಆಶ್ರಮಕ್ಕೆ ಹೊರಟುಹೋದನು.

ಮಿತ್ರಸಹನು ಕಲ್ಮಾಷಪಾದನೆಂಬ ಬ್ರಹ್ಮರಾಕ್ಷಸನಾಗಿ ಅರಣ್ಯದಲ್ಲಿ ಮನುಷ್ಯರನ್ನೂ, ಮೃಗಗಳನ್ನು ಭಕ್ಷಿಸುತ್ತಾ ಅಲೆದಾಡುತ್ತಿದ್ದನು. ಹೀಗಿರಲು, ಒಂದು ದಿನ, ದೈವಯೋಗದಿಂದ ವಿಪ್ರ ದಂಪತಿಗಳು ಆ ದಾರಿಯಲ್ಲಿ ಪಯಣಿಸುತ್ತ ಬಂದರು. ಅವರನ್ನು ಕಂಡ ಬ್ರಹ್ಮರಾಕ್ಷಸ ಅವರನ್ನು ತಿನ್ನಲು ಅಲ್ಲಿಗೆ ಬಂದು, ಆ ಬ್ರಾಹ್ಮಣನನ್ನು ಹಿಡಿದು ತಿನ್ನಬೇಕೆಂದುಕೊಳ್ಳುವಷ್ಟರಲ್ಲಿ ಅವನ ಹೆಂಡತಿ, ಶೋಕಗ್ರಸ್ತಳಾಗಿ, ಆ ಬ್ರಹ್ಮರಾಕ್ಷಸನನ್ನು ಕುರಿತು, “ಅಯ್ಯಾ, ರಾಕ್ಷಸ, ನನ್ನ ಸೌಭಾಗ್ಯವನ್ನು ಹಾಳುಮಾಡಬೇಡ. ನನ್ನ ಗಂಡನನ್ನು ಹಿಂಸಿಸಬೇಡ. ಅವನನ್ನು ಬಿಟ್ಟುಬಿಡು. ನನ್ನನ್ನು ಬೇಕಾದರೆ ತಿನ್ನು. ಗಂಡನಿಲ್ಲದ ಸ್ತ್ರೀ ಪಾಷಾಣಕ್ಕೆ ಸಮಾನ. ನನ್ನನ್ನು ಮೊದಲು ತಿಂದು ಅನಂತರ ಬೇಕಾದರೆ ಅವನನ್ನು ತಿನ್ನು. ಸುಂದರ ಯುವಕನಾದ ನನ್ನ ಪತಿ ವೇದಶಾಸ್ತ್ರ ವಿದ್ವಾಂಸನು. ಅವನನ್ನು ರಕ್ಷಿಸಿದರೆ ನಿನಗೆ ಜಗತ್ತನ್ನೇ ರಕ್ಷಿಸಿದ ಪುಣ್ಯ ಬರುವುದು. ನೀನು ದಯೆಮಾಡಿ ನನ್ನ ಮಾತು ನಡೆಸಿಕೊಟ್ಟರೆ ನಾನು ನಿನಗೆ ಮಗಳಾಗಿ ಹುಟ್ಟುತ್ತೇನೆ. ಅಥವಾ ನನಗೆ ಪುತ್ರಸಂತಾನವಾದರೆ ಅವನಿಗೆ ನಿನ್ನ ಹೆಸರನ್ನೇ ಇಡುತ್ತೇನೆ.” ಎಂದು ನಾನಾವಿಧವಾಗಿ ಆ ರಾಕ್ಷಸನನ್ನು ಬೇಡಿಕೊಂಡಳು. ಆದರೂ ಆ ರಾಕ್ಷಸ ಅವಳ ಮಾತಿಗೆ ಬೆಲೆ ಕೊಡದೆ ಆ ಬ್ರಾಹ್ಮಣನನ್ನು ತಿಂದುಬಿಟ್ಟನು. ಅದರಿಂದ ಕ್ರುದ್ಧಳಾದ ಆ ಹೆಂಗಸು, “ಎಲೈ ಪಾಪಿ, ನಾನು ಇಷ್ಟು ಬೇಡಿಕೊಂಡರೂ ನೀನು ನನ್ನ ಮಾತಿಗೆ ಬೆಲೆಕೊಡದೆ ನನ್ನ ಗಂಡನನ್ನು ತಿಂದುಹಾಕಿದೆ. ಇದೋ, ನನ್ನ ಶಾಪವನ್ನು ಕೇಳು. ನೀನು ಸೂರ್ಯವಂಶೀಯನಾದ ರಾಜನಾಗಿದ್ದೂ ಕೂಡ ಶಾಪಗ್ರಸ್ತನಾಗಿ ಬ್ರಹ್ಮರಾಕ್ಷಸನಾದೆ. ಹನ್ನೆರಡು ವರ್ಷಗಳು ಕಳೆದು ನೀನು ಮತ್ತೆ ರಾಜನಾದಾಗ, ನೀನು ನಿನ್ನ ರಾಣಿಯೊಡನೆ ಕೂಡಿದರೆ ಸಾಯುತ್ತೀಯೆ. ದುರಾತ್ಮ, ಅನಾಥ ವಿಪ್ರ ಭಕ್ಷಣೆಯ ಫಲವನ್ನು ಅನುಭವಿಸು.” ಎಂದು ಶಪಿಸಿ, ತನ್ನ ಗಂಡನ ಅಸ್ತಿಗಳನ್ನು ಕೂಡಿಸಿ ಅದರೊಡನೆ ಆ ಬ್ರಾಹ್ಮಣ ಸ್ತ್ರೀ ಅಗ್ನಿಪ್ರವೇಶಮಾಡಿದಳು.

ಶಾಪ ವಿಮೋಚನೆಯಾದ ಮೇಲೆ ಮತ್ತೆ ರಾಜನಾದ ಕಲ್ಮಷಪಾದನು ರಾಜಧಾನಿಗೆ ಹಿಂತಿರುಗಿದನು. ಸಂತೋಷಗೊಂದ ರಾಣಿ, ಅವನನ್ನು ಕಂಡು ಅವನೊಡನೆ ಸೇರಲು ಬಂದಳು. ರಾಜ ಅವಳನ್ನು ತಡೆದು, ತನಗುಂಟಾದ ಬ್ರಾಹ್ಮಣ ಸ್ತ್ರೀ ಶಾಪವನ್ನು ಕುರಿತು ಹೇಳಿದನು. ರಾಣಿ, ಮದಯಂತಿ, ಗಂಡನ ಮಾತು ಕೇಳಿ, ಬಹು ದುಃಖಿತಳಾಗಿ, ಪ್ರಾಣತ್ಯಾಗ ಮಾಡಲು ಉದ್ಯುಕ್ತಳಾದಳು. ಅದರಿಂದ ದುಃಖಿತನಾದ ರಾಜನನ್ನು ಕಂಡು, ಅವಳು, “ಪ್ರಾಣನಾಥ, ಹನ್ನೆರಡು ವರ್ಷಗಳು ನಿನಗಾಗಿ ಕಷ್ಟದಿಂದ ಕಾದಿದ್ದು, ನಿನ್ನ ಬರುವನ್ನೇ ಎದುರು ನೋಡುತ್ತಿದ್ದೆ. ಈಗ ಹೀಗಾಯಿತು. ಹೋಗಲಿ ಬಿಡು. ಸಂತಾನವಿಲ್ಲದಿದ್ದರೂ ನಷ್ಟವಿಲ್ಲ. ನಾವಿಬ್ಬರೂ ಒಟ್ಟಿಗೇ ಇರಬಹುದು.” ಏಂದು ಹೇಳಿದಳು. ಅವಳ ಮಾತನ್ನು ಕೇಳಿ ರಾಜ, ದುಃಖದಿಂದ ಕಣ್ಣೀರು ಸುರಿಸುತ್ತಾ, “ಏನು ಮಾಡಲು ಸಾಧ್ಯ? ವಿಧಿ ಬಲವತ್ತರವಾದದ್ದು.” ಎಂದು ನಿಟ್ಟುಸಿರುಬಿಟ್ಟ.

ಮತ್ತೆ ಆ ರಾಜ, ವೃದ್ಧರೂ, ಮತಿವಂತರೂ ಆದ ಪುರೋಹಿತರನ್ನೂ, ಮಂತ್ರಿವರ್ಗದವರನ್ನು ಕರೆಸಿ, ತನಗುಂಟಾದ ಅವಗಢವನ್ನು, ಬ್ರಹ್ಮಹತ್ಯಾಪಾಪವೂ ಸೇರಿದಂತೆ, ಎಲ್ಲವನ್ನೂ ವಿವರಿಸಿ ಹೇಳಿ, ಅದರಿಂದ ಪಾರಾಗುವ ಉಪಾಯವನ್ನು ಹೇಳಿ ಎಂದು ಬಿನ್ನವಿಸಿಕೊಂಡ. ಅವರು ಹೇಳಿದಂತೆ ಪಾಪವಿಮೋಚನಾರ್ಥವಾಗಿ ತೀರ್ಥಯಾತ್ರೆಗಳನ್ನು ಮಾಡುತ್ತಾ, ಹೋದಕಡೆಗಳಲ್ಲೆಲ್ಲ ಸ್ನಾನ, ಪೂಜಾರ್ಚನಾದಿಗಳನ್ನು ನಡೆಸಿ, ಬ್ರಾಹ್ಮಣರಿಗೆ ವಸ್ತ್ರ, ಧನ, ಅನ್ನ ದಾನಗಳನ್ನು ಮಾಡುತ್ತಾ, ದೇವಾದಿಗಳಿಗೆ ತರ್ಪಣಗಳನ್ನು ನೀಡುತ್ತಾ, ಇದ್ದನು. ಆದರೂ, ಶ್ರದ್ಧಾಭಕ್ತಿಗಳಿಂದ ಎಲ್ಲವನ್ನೂ ಮಾಡಿದರೂ, ಬ್ರಹ್ಮಹತ್ಯಾಪಾಪವು ಅವನನ್ನು ಬಿಡದೆ, ಅವನ ಬೆನ್ನಂಟಿ ಬರುತ್ತಲೇ ಇತ್ತು. ಆ ರಾಜ, ಅನೇಕ ಕಷ್ಟಗಳನ್ನು ಅನುಭವಿಸುತ್ತಾ, ಚಿಂತಾಕುಲನಾಗಿ, ವಿರಕ್ತಮನಸ್ಕನಾಗಿ, ದೈವಯೋಗದಿಂದಲೋ ಎಂಬಂತೆ ಮಿಥಿಲಾಪುರಕ್ಕೆ ಬಂದನು. ಅಲ್ಲಿ ಚಿಂತಾಗ್ರಸ್ತನಾಗಿ ಒಂದು ಮರದ ನೆರಳಿನಲ್ಲಿ ಕುಳಿತಿದ್ದಾಗ, ಆ ಮಾರ್ಗದಲ್ಲಿ ಋಷೀಶ್ವರೊಡನೆ ಕೂಡಿ, ಮಹಾರುದ್ರನಂತೆ ಪ್ರಕಾಶಿಸುತ್ತಿದ್ದ, ಗೌತಮ ಮಹರ್ಷಿ ಬಂದನು. ಅವನನ್ನು ಕಂಡ ರಾಜ ಅವನ ಪಾದಗಳಲ್ಲಿ ಬಿದ್ದು, ಭಕ್ತಿಯಿಂದ ನಮಸ್ಕರಿಸಿದನು. ಅದರಿಂದ ಸಂತುಷ್ಟನಾದ ಆ ಮುನಿಯು, ಕರುಣಾರ್ದ್ರಹೃದಯನಾಗಿ, ದುಃಖಿತನಾದ ಆ ರಾಜನನ್ನು ಆದರಿಸಿ, ಅವನಾರೆಂದು ವಿಚಾರಿಸಿದನು. ಅವನು ರಾಜನೆಂದರಿತು, “ಹೇ ರಾಜ, ನಿನ್ನ ರಾಜ್ಯವಾವುದು? ಅದನ್ನು ಯಾರು ವಶಪಡಿಸಿಕೊಂಡರು? ನಿನ್ನ ಈ ವನವಾಸಕ್ಕೆ ಕಾರಣವೇನು? ಚಿಂತಾಗ್ರಸ್ತನಾಗಿ ಹೀಗೇಕೆ ಕಾಡಿನಲ್ಲಿ ಅಲೆಯುತ್ತಿದ್ದೀಯೆ? ನಿನ್ನನ್ನು ಕಾಡುತ್ತಿರುವ ಚಿಂತೆಯೇನು?” ಎಂದು ವಿಚಾರಿಸಿದನು. ಅದಕ್ಕೆ ಆ ರಾಜ, “ಹೇ ಮುನಿವರ್ಯ, ವಿಧಿವಶದಿಂದ ಬ್ರಾಹ್ಮಣ ಶಾಪವು ಬ್ರಹ್ಮಹತ್ಯಾರೂಪದಲ್ಲಿ ನನ್ನ ಬೆನ್ನು ಹತ್ತಿದೆ. ಯಜ್ಞಾದಿಗಳನ್ನು ಮಾಡಿದರೂ, ಪ್ರಾಯಶ್ಚಿತ್ತಗಳನ್ನು ಮಾಡಿಕೊಂಡರೂ, ತೀರ್ಥಯಾತ್ರೆಗಳನ್ನು ಮಾಡುತ್ತಾ ದಾನ ಧರ್ಮಗಳಲ್ಲಿ ನಿರತನಾದರೂ, ನನ್ನ ಪಾಪಗಳು ಕಳೆಯುತ್ತಿಲ್ಲ. ಘೋರವಾದ ಬ್ರಹ್ಮಹತ್ಯಾಪಾಪವು ನನ್ನ ಬೆನ್ನಂಟಿ ಬರುತ್ತಲೇ ಇದೆ. ಇಂದು ನಿಮ್ಮ ಚರಣಗಳ ದರ್ಶನದಿಂದ ನನ್ನ ಜನ್ಮ ಸಾಫಲ್ಯವಾಯಿತು. ಇನ್ನು ನನ್ನ ಕಷ್ಟಗಳೆಲ್ಲಾ ತೀರಿದಂತೆಯೇ!” ಎಂದು ಹೇಳುತ್ತಾ ರಾಜ ಮತ್ತೆ ಆ ಗೌತಮ ಮಹರ್ಷಿಯ ಚರಣಗಳಲ್ಲಿ ತಲೆಯಿಟ್ಟನು.

ರಾಜನ ಮಾತುಗಳನ್ನು ಆಲಿಸಿದ ಆ ಮಹಾಮುನಿ, ದಯಾಪೂರಿತನಾಗಿ, ಅವನನ್ನು ಕರುಣೆಯಿಂದ ನೋಡುತ್ತಾ, “ರಾಜ, ಭಯಪಡಬೇಡ. ಮೃತ್ಯುಂಜಯನಾದ ಶಂಕರನು ನಿನಗೆ ಅಭಯವಿತ್ತು ರಕ್ಷಿಸುತ್ತಾನೆ. ನಿನ್ನ ಪಾಪಗಳನ್ನೆಲ್ಲ ತೊಲಗಿಸುವ ಕ್ಷೇತ್ರವೊಂದನ್ನು ಹೇಳುತ್ತೇನೆ. ಗೋಕರ್ಣಕ್ಷೇತ್ರ ಪವಿತ್ರವಾದದ್ದು. ಮಹಾಪಾಪಹರವಾದದ್ದು. ಗೋಕರ್ಣ ಸ್ಮರಣೆಯಿಂದಲೇ ಬ್ರಹ್ಮಹತ್ಯಾದಿ ಪಾಪಗಳು ನಶಿಸಿಹೋಗುತ್ತವೆ. ಅಲ್ಲಿ ಶಿವನು ಮೃತ್ಯುಂಜಯನಾಗಿ ಕೂತಿದ್ದಾನೆ. ಕೈಲಾಸಪರ್ವತದಂತೆ, ಸುಂದರಕಂದರನೂ, ಕರ್ಪೂರಗೌರನೂ ಆದ ಶಿವನ ವಾಸಸ್ಥಾನ ಗೋಕರ್ಣ. ರಾತ್ರಿಯ ಸಮಯದಲ್ಲಿ ಚಂದ್ರನಾಗಲೀ, ವಹ್ನಿಯಾಗಲೀ ಸಂಪೂರ್ಣವಾಗಿ ತಮಸ್ಸನ್ನು ತೊಲಗಿಸುವುದಿಲ್ಲ. ಸೂರ್ಯೋದಯದಿಂದಲೇ ಕತ್ತಲು ಸಂಪೂರ್ಣವಾಗಿ ಕಳೆಯುತ್ತದೆ. ಅದರಂತೆಯೇ, ಇತರ ತೀರ್ಥಕ್ಷೇತ್ರಗಳು ಸಂಪೂರ್ಣವಾಗಿ ಪಾಪವನ್ನು ನಾಶಪಡಿಸಲಾರವು. ಗೋಕರ್ಣ ದರ್ಶನ ಮಾತ್ರದಿಂದಲೇ ಸಕಲ ಪಾತಕಗಳೂ ನಿವಾರಿಸಲ್ಪಡುತ್ತವೆ. ಒಂದುಸಲ ಗೋಕರ್ಣ ಕ್ಷೇತ್ರವನ್ನು ದರ್ಶಿಸಿದರೂ ಸಾಕು, ಸಹಸ್ರ ಬ್ರಹ್ಮಹತ್ಯಾಪಾಪಗಳು ನಶಿಸಿಹೋಗುತ್ತವೆ. ಗೋಕರ್ಣ ಸ್ಮರಣೆಯಿಂದಲೇ ಮನುಷ್ಯರು ಪುಣ್ಯಾತ್ಮರಾಗುತ್ತಾರೆ. ಇಂದ್ರೋಪೇಂದ್ರವಿರಂಚಿ ಪ್ರಭೃತಿಗಳು ಸಿದ್ಧಿಹೊಂದಿದ ಇತರ ದೇವತೆಗಳೂ, ಎಲ್ಲರೂ ಅಲ್ಲಿ ತಪಸ್ಸು ಮಾಡಿಯೇ ತಮ್ಮ ತಮ್ಮ ಮನೋರಥಗಳನ್ನು ಈಡೇರಿಸಿಕೊಂಡರು. ಗೋಕರ್ಣಕ್ಕೆ ಹೋಗಿ ಅಲ್ಲಿ ತಪಸ್ಸು ಮಾಡಿದ ಜ್ಞಾನಿಗಳಿಗೆ ಕ್ಷೇತ್ರ ಪ್ರಭಾವದಿಂದ ಅವರೆಣಿಸಿದ್ದಕ್ಕಿಂತ ಅತಿಹೆಚ್ಚಾದ ಫಲ ಲಭಿಸುತ್ತದೆ. ಅಲ್ಲಿ ನಿವಸಿಸಿದ ಮಾತ್ರಕ್ಕೇ ಬ್ರಹ್ಮವಿಷ್ಣುದೇವೇಂದ್ರಾದಿಗಳು ಸಿದ್ಧಿ ಪಡೆದರು. ಅದಕ್ಕಿಂತ ಇನ್ನು ಹೆಚ್ಚು ಹೇಳಬೇಕಾದದ್ದೇನಿದೆ? ಗೋಕರ್ಣವೇ ಕೈಲಾಸವೆಂದೂ, ಮಹಾಬಲೇಶ್ವರನೇ ಸಾಕ್ಷಾತ್ಪರಮೇಶ್ವರನೆಂದೂ ತಿಳಿ. ಶ್ರೀ ಮಹಾವಿಷ್ಣುವಿನ ಆಜ್ಞೆಯಿಂದ ವಿಘ್ನೇಶ್ವರ ಅಲ್ಲಿ ಮಹಾಬಲೇಶ್ವರನನ್ನು ಸ್ಥಾಪಿಸಿದ. ಗೋಕರ್ಣ ಪುಣ್ಯಕ್ಷೇತ್ರದಲ್ಲಿ ಸಮಸ್ತ ದೇವತೆಗಳೂ, ಬ್ರಹ್ಮ, ವಿಷ್ಣು, ಇಂದ್ರ, ವಿಶ್ವೇದೇವತೆಗಳು, ಮರುದ್ಗಣಗಳು, ಸೂರ್ಯ, ಚಂದ್ರ, ಅಷ್ಟವಸುಗಳು ನೆಲಸಿದ್ದಾರೆ. ಅವರೆಲ್ಲರೂ ಪ್ರತಿದಿನವೂ ಭಕ್ತಿಯುಕ್ತರಾಗಿ, ಮಹಾಬಲೇಶ್ವರನ ಪೂಜೆ ಮಾಡುತ್ತಾರೆ. ಯಮ, ಅಗ್ನಿ, ಚಿತ್ರಗುಪ್ತ, ರುದ್ರ, ಪಿತೃಗಣಗಳು, ದಕ್ಷಿಣದ್ವಾರವನ್ನು ಆಶ್ರಯಿಸಿದ್ದಾರೆ. ವರುಣಮುಖ್ಯರಾದ ದೇವತೆಗಳು ಪಶ್ಚಿಮದ್ವಾರವನ್ನು ಆಶ್ರಯಿಸಿದ್ದಾರೆ. ಕುಬೇರ, ಭದ್ರಕಾಳಿ, ವಾಯು ಸಪ್ತಮಾತೃಕೆಯರು, ಉತ್ತರದ್ವಾರವನ್ನು ಆಶ್ರಯಿಸಿದ್ದಾರೆ. ಇವರೆಲ್ಲರೂ ಪ್ರತಿದಿನವೂ ಭಕ್ತಿಶ್ರದ್ಧೆಗಳಿಂದ ಕೂಡಿ, ಪ್ರೀತ್ಯಾದರಗಳಿಂದ ಆ ಮಹಾಬಲೇಶ್ವರನನ್ನು ಉಪಾಸನೆ ಮಾಡುತ್ತಾರೆ. ವಿಶ್ವಾವಸು, ಚಿತ್ರರಥ, ಚಿತ್ರಸೇನಾದಿ ಗಂಧರ್ವರು ತಮ್ಮ ಗಾನದಿಂದ ಆ ಶಂಕರನನ್ನು ಸೇವಿಸುತ್ತಾರೆ. ಕಶ್ಯಪ, ಅತ್ರಿ, ವಸಿಷ್ಠ, ಕಣ್ವಾದಿ ನಿರ್ಮಲ ಮುನಿಶ್ರೇಷ್ಠರೆಲ್ಲರೂ ಗೋಕರ್ಣ ಕ್ಷೇತ್ರವನ್ನಾಶ್ರಯಿಸಿ ತಪಸ್ಸು ಮಾಡಿ ಪರಮೇಶ್ವರನ ಆರಾಧನೆ ಮಾಡುತ್ತಾರೆ. ಊರ್ವಶಿ, ತಿಲೋತ್ತಮೆ, ರಂಭೆ, ಘೃತಾಚಿ, ಮೇನಕಾದಿ ಅಪ್ಸರಸೆಯರು ಮಹಾಬಲೇಶ್ವರನಿಗೆ, ತಮ್ಮ ನಾಟ್ಯದಿಂದ ಸೇವೆ ಮಾಡುತ್ತಾರೆ.

ಕೃತಯುಗದಲ್ಲಿ ವಿಶ್ವಾಮಿತ್ರ ಪ್ರಮುಖರಾದ ಮಹರ್ಷಿಗಳು, ಜಾಬಾಲಿ, ಜೈಮಿನಿ, ಭಾರದ್ವಾಜಾದಿ ಮುನಿಗಳು, ಸನಕಾದಿಗಳೇ ಮೊದಲಾದ ಬಾಲತಪಸ್ವಿಗಳು, ನಾರದಾದಿ ಮಹರ್ಷಿಗಳು, ಮರೀಚ್ಯಾದಿ ಬ್ರಹ್ಮಮಾನಸಪುತ್ರರು, ಉಪನಿಷದ್ವೇತ್ತರು, ಸಿದ್ಧರು, ಸಾಧ್ಯರು, ಸನ್ಯಾಸಿಗಳು, ಬ್ರಹ್ಮಚಾರಿಗಳು, ಅಜಿನಧಾರಿಗಳಾದ ನಿರ್ಗುಣೋಪಾಸಕರು, ಮುಂತಾದವರೆಲ್ಲರೂ ಗೋಕರ್ಣದಲ್ಲಿ ಶಂಭುವಿನ ಉಪಾಸನೆ ಮಾಡುತ್ತಾರೆ. ತ್ವಗಸ್ಥಿ ಮಾತ್ರವೇ ಉಳಿದ ಶರೀರಗಳಿಂದ ಕೂಡಿದ ತಾಪಸರೂ ಭಕ್ತಿಯಿಂದ ಅಲ್ಲಿ ಚಂದ್ರಮೌಳಿಯನ್ನು ಅರ್ಚನೆ ಮಾಡುತ್ತಾರೆ. ಗಂಧರ್ವರು, ಪಿತೃಗಳು, ಸಿದ್ಧರು, ಅಷ್ಟವಸುಗಳು, ವಿದ್ಯಾಧರರು, ಕಿನ್ನರರು, ಆಗಿಂದಾಗ್ಗೆ ಗೋಕರ್ಣಕ್ಕೆ ಶಿವ ದರ್ಶನಕ್ಕೆ ಬರುತ್ತಲೇ ಇರುತ್ತಾರೆ. ಗುಹ್ಯಕರು, ಕಿಂಪುರುಷರು, ಶೇಷನಾಗತಕ್ಷಕರು, ಭೂತ ಭೇತಾಳ ಪಿಶಾಚಗಳೂ ಕೂಡ ಈಶ್ವರನ ದರ್ಶನಕ್ಕೆಂದು ಗೋಕರ್ಣಕ್ಕೆ ಬರುತ್ತಿರುತ್ತಾರೆ. ಅಲಂಕಾರಯುಕ್ತರಾದ ದೇವ ದೇವಿಯರೂ ಸ್ವರ್ಗದಿಂದ ವಿಮಾನ ಆರೋಹಣರಾಗಿ ಶಿವದರ್ಶನಕಾತುರರಾಗಿ ಹಗಲು ಹೊತ್ತಿನಲ್ಲಿ ಬರುತ್ತಿರುತ್ತಾರೆ. ಕೆಲವರು ಶಿವನ ಸ್ತೋತ್ರ ಮಾಡುತ್ತಾರೆ. ಕೆಲವರು ಅವನನ್ನು ಕುರಿತು ದಾನಾದಿಗಳನ್ನು ಮಾಡುತ್ತಾರೆ. ಮತ್ತೆ ಕೆಲವರು ಅವನ ಪ್ರೀತಿಗಾಗಿ ಅವನನ್ನು ನಾಟ್ಯದಿಂದ ಆರಾಧಿಸುತ್ತಾರೆ. ಇನ್ನೂ ಕೆಲವರು ಶಿವನಿಗೆ ಪೂಜಾರ್ಚನೆಗಳನ್ನು ಮಾಡಿ ನಮಸ್ಕರಿಸುತ್ತಾರೆ.

ಹೇ ರಾಜ, ಪ್ರಾಣಿಗಳ ಮಾನಸಿಕ ವಾಸನೆಗಳೂ ಇಲ್ಲಿ ನೆರವೇರಿಸಲ್ಪಡುತ್ತವೆ. ಈ ಕ್ಷೇತ್ರ ಸದೃಶವಾದ ಕ್ಷೇತ್ರ ಮತ್ತೊಂದಿಲ್ಲ. ಅಗಸ್ತ್ಯಮುಖ್ಯರಾದ ಮಹರ್ಷಿಗಳು, ಕಂದರ್ಪ ಅಗ್ನಿ ಮೊದಲಾದ ದಿವ್ಯರು, ಪ್ರಿಯವ್ರತಾದಿಗಳಾದ ರಾಜರು, ಈ ಕ್ಷೇತ್ರದಲ್ಲಿ ವರಗಳನ್ನು ಪಡೆದರು. ಶಿಂಶುಮಾರ, ಭದ್ರಕಾಳಿಯರು ದಿನವೂ ಮೂರುಸಲ ಇಲ್ಲಿ ಪ್ರಾಣಲಿಂಗವನ್ನು ಅರ್ಚಿಸುತ್ತಾರೆ. ರಾವಣ ಕುಂಭಕರ್ಣರು, ರಾಕ್ಷಸಪ್ರಮುಖರನೇಕರು, ವಿಭೀಷಣನೂ ಸಹ ಇಲ್ಲಿ ಧೂರ್ಜಟಿಯನ್ನು ಪೂಜಿಸಿ, ವರಗಳನ್ನು ಪಡೆದರು. ಹೀಗೆ ಸಮಸ್ತ ದೇವಲೋಕ, ಸಿದ್ಧದಾನವ ಮಂಡಲಗಳು ಪರಮೇಶ್ವರನನ್ನು ಆರಾಧಿಸಿ ಕೃತಕೃತ್ಯರಾದರು. ಕೆಲವರು ತಮ್ಮ ತಮ್ಮ ಹೆಸರಿನಲ್ಲಿ ಇಲ್ಲಿ ಲಿಂಗಗಳನ್ನು ಪ್ರತಿಷ್ಠಾಪಿಸಿ, ಚತುರ್ವಿಧ ಪಲಪುರುಷಾರ್ಥಗಳನ್ನು ಪಡೆದರು. ಬ್ರಹ್ಮ, ವಿಷ್ಣು, ಕುಮಾರಸ್ವಾಮಿ, ವಿನಾಯಕ ಮೊದಲಾದವರು ಯಮ, ಕ್ಷೇತ್ರಪತಿ ದುರ್ಗಾದೇವಿ, ಶಕ್ತಿ ಕೂಡಾ ಇಲ್ಲಿ ತಮ್ಮ ತಮ್ಮ ಹೆಸರಿನಲ್ಲಿ ಲಿಂಗಗಳನ್ನು ಸ್ಥಾಪಿಸಿದರು.

ಗೋಕರ್ಣವು ಒಂದು ಬಹು ಉತ್ತಮವಾದ ಕ್ಷೇತ್ರ. ಇಲ್ಲಿ ಹೆಜ್ಜೆ ಹೆಜ್ಜೆಗೂ ಅಸಂಖ್ಯಾತವಾದ ಲಿಂಗಗಳಿವೆ. ಕೃತಯುಗದಲ್ಲಿ ಬಿಳಿಯ ಲಿಂಗ, ತ್ರೇತಾಯುಗದಲ್ಲಿ ಲೋಹಿತ ಲಿಂಗ, ದ್ವಾಪರದಲ್ಲಿ ಪೀತ ಲಿಂಗ, ಕಲಿಯುಗದಲ್ಲಿ ಕೃಷ್ಣವರ್ಣದ ಲಿಂಗ ಇಲ್ಲಿರುತ್ತದೆ. ಸಪ್ತಪಾತಾಲಗಳವರೆಗೂ ವ್ಯಾಪಿಸಿರುವ ಮಹೋನ್ನತ ಲಿಂಗವು ಕಲಿಯುಗದಲ್ಲಿ ಮೃದುವಾಗಿ ಸೂಕ್ಷ್ಮವಾಗಿರಬಹುದು.

ಪಶ್ಚಿಮ ಸಮುದ್ರ ತೀರದಲ್ಲಿ ಗೋಕರ್ಣ ಕ್ಷೇತ್ರವಿದೆ. ಅದು ಬ್ರಹ್ಮಹತ್ಯವೇ ಮುಂತಾದ ಪಾಪಗಳನ್ನು ಹೋಗಲಾಡಿಸುವಂತಹುದು. ಪರಸ್ತ್ರೀಗಮನದಂತಹ ದುರಾಚಾರಗಳಿಂದುಂಟಾದ ಮಹಾಪಾಪಗಳೂ ಕೂಡ ಆ ಕ್ಷೇತ್ರ ದರ್ಶನಮಾತ್ರದಿಂದಲೇ ನಾಶವಾಗುವುವು. ಗೋಕರ್ಣಲಿಂಗ ದರ್ಶನಮಾತ್ರದಿಂದಲೇ ಸರ್ವಕಾಮಗಳೂ ಸಿದ್ಧಿಯಾಗಿ, ಮಾನವ ಮೋಕ್ಷವನ್ನು ಪಡೆಯುತ್ತಾನೆ. ಹೇ ರಾಜ, ಅಲ್ಲಿಯೇ ನೆಲೆಸಿ, ಪುಣ್ಯ ದಿನಗಳಲ್ಲಿ ಭಕ್ತಿಯಿಂದ ಆ ಲಿಂಗಕ್ಕೆ ಅರ್ಚನಪೂಜಾದಿಗಳನ್ನು ಮಾಡಿದವನು ರುದ್ರಲೋಕವನ್ನು ಸೇರುವುದರಲ್ಲಿ ಸಂದೇಹವೇ ಇಲ್ಲ! ದೈವಯೋಗದಿಂದ ಗೋಕರ್ಣವನ್ನು ಸೇರಿ ಅಲ್ಲಿ ಮಹೇಶನನ್ನು ಶ್ರದ್ಧಾ ಭಕ್ತಿಗಳಿಂದ ಅರ್ಚಿಸುವ ನರನು ಬ್ರಹ್ಮಲೋಕವನ್ನು ಪಡೆಯುತ್ತಾನೆ. ಭಾನು, ಸೋಮ, ಬುಧವಾರಗಳಂದು, ಹುಣ್ಣಿಮೆ ಮೊದಲಾದ ಪರ್ವದಿನಗಳಂದು, ಈ ಕ್ಷೇತ್ರದಲ್ಲಿ ಸಮುದ್ರಸ್ನಾನಮಾಡಿ ದಾನಾದಿಗಳನ್ನು ಕೊಟ್ಟು, ಶಿವಪೂಜಾವ್ರತಹೋಮಜಪಾದಿಗಳನ್ನೂ, ತರ್ಪಣಾದಿಗಳನ್ನೂ ಸ್ವಲ್ಪವೇ ಮಾಡಿದರೂ ಅದರಿಂದ ಅನಂತಫಲ ಲಭಿಸುತ್ತದೆ. ಗ್ರಹಪೀಡೆಗಳ ಸಮಯದಲ್ಲಿ, ಸೂರ್ಯಸಂಕ್ರಮಣದಲ್ಲಿ, ಶಿವರಾತ್ರಿಯಂದು ಆ ಕ್ಷೇತ್ರದಲ್ಲಿ ಪೂಜಾದಿಗಳನ್ನು ಮಾಡುವವರಿಗೆ ಉತ್ತಮೋತ್ತಮವಾದ ಪುಣ್ಯ ಲಭ್ಯವಾಗುತ್ತದೆ. ಆ ಕ್ಷೇತ್ರ ಮಹಿಮೆಯನ್ನು ಯಾರು ತಾನೇ ವರ್ಣಿಸಬಲ್ಲರು? ಭಕ್ತವತ್ಸಲನಾದ ಶಿವನು ಬರಿಯ ಪುಷ್ಪಾರ್ಚನೆಯಿಂದಲೇ ಸಂತುಷ್ಟನಾಗುತ್ತಾನೆ. ಅನೇಕರು ಅಲ್ಲಿ ಅನೇಕ ರೀತಿಯ ಪೂಜೆಗಳನ್ನು ಮಾಡಿ ವರಗಳನ್ನು ಪಡೆದಿದ್ದಾರೆ.

ಮಾಘ ಬಹುಳ ಶಿವರಾತ್ರಿಯ ದಿನ ಅಲ್ಲಿ ಬಿಲ್ವಪತ್ರೆಯನ್ನು ಅರ್ಪಿಸಿದರೆ ತ್ರೈಲೋಕ್ಯದುರ್ಲಭವಾದ ಫಲ ಲಭಿಸುತ್ತದೆ. ಅಂತಹ ಸಾಟಿಯಿಲ್ಲದ ಕ್ಷೇತ್ರದರ್ಶನ ಮಾಡದವರು ದೌರ್ಭಾಗ್ಯರೇ ಸರಿ! ಆ ಕ್ಷೇತ್ರದ ಬಗ್ಗೆ ಕೇಳದ ಮೂಢರು ಕಿವುಡರೇ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಗೋಕರ್ಣಕ್ಷೇತ್ರ ಮಹಿಮೆ ಚತುರ್ವಿಧ ಪುರುಷಾರ್ಥಪ್ರದವು. ಗೋಕರ್ಣದಲ್ಲಿನ ಮುಖ್ಯ ತೀರ್ಥಗಳಲ್ಲಿ ಸ್ನಾನಮಾಡಿ, ಮುಕ್ತಿಯನ್ನು ನೀಡುವ ಮಹಾಬಲೇಶ್ವರ ಲಿಂಗವನ್ನು ಭಕ್ತಿಯಿಂದ ಅರ್ಚಿಸಿದ ನರನ ಪಾಪಕ್ಷಾಳನವಾಗುತ್ತದೆ.” ಎಂದು ಗೋಕರ್ಣಮಾಹಾತ್ಮ್ಯೆಯನ್ನು ಗೌತಮ ಮುನಿ ವಿವರವಾಗಿ ತಿಳಿಸಿದನು. ಅದನ್ನು ಕೇಳಿ ರಾಜ ಮಿತ್ರಸಹ ಬಹು ಸಂತೋಷಗೊಂಡವನಾಗಿ, “ಹೇ ಮಹರ್ಷಿ, ಗೋಕರ್ಣ ಮಾಹಾತ್ಮ್ಯೆಯನ್ನು ವಿಸ್ತಾರವಾಗಿ ತಿಳಿಸಿದ್ದೀರಿ. ಅಲ್ಲಿ ಮಹಾಪಾಪದಿಂದ ಮುಕ್ತಿಗೊಂಡವರೊಬ್ಬರ ನಿದರ್ಶನವೊಂದನ್ನು ಹೇಳುವ ಕೃಪೆ ಮಾಡಿ.” ಎಂದು ಕೋರಿದನು.

ಅದಕ್ಕೆ ಗೌತಮಮುನಿಯು, “ಮಹೀಪತಿ, ಸಾವಿರಾರು ಜನ ಮಹಾಪಾಪಿಗಳು ಆ ಕ್ಷೇತ್ರದಲ್ಲಿ ಮುಕ್ತರಾದದ್ದನ್ನು ನಾನು ಬಲ್ಲೆ. ಅದರಲ್ಲೊಂದನ್ನು ಹೇಳುತ್ತೇನೆ ಕೇಳು. ಒಂದುಸಲ ಮಾಘ ಕೃಷ್ಣ ಪಕ್ಷ ಶಿವರಾತ್ರಿಯ ದಿನ ನಾನು ಗೋಕರ್ಣ ಕ್ಷೇತ್ರದಲ್ಲಿದ್ದೆ. ಆಗ ಅಲ್ಲಿ ಅನೇಕ ಯಾತ್ರಿಕರು ಸೇರಿದ್ದರು. ಮಧ್ಯಾಹ್ನ ಸಮಯದಲ್ಲಿ ಒಂದು ಗಿಡದ ನೆರಳಿನಲ್ಲಿ ಕುಳಿತಿದ್ದೆ. ಅಲ್ಲಿಗೆ ರೋಗಪೀಡಿತಳಾದ ಚಂಡಾಲಿಯೊಬ್ಬಳು ಬರುತ್ತಿರುವ ಹಾಗೆ ಕಾಣಿಸಿತು. ಅವಳು ವೃದ್ಧೆ. ಬಾಡಿದ ಮುಖ. ಹಸಿದಿದ್ದಳು. ಮೈಯೆಲ್ಲಾ ವ್ರಣಗಳಾಗಿ, ಅದರಿಂದ ಕೀವು ರಕ್ತ ಸೋರುತ್ತಿತ್ತು. ದುರ್ವಾಸನೆ ಬರುತ್ತಿದ್ದ ಅವುಗಳ ಮೇಲೆ ನೊಣಗಳು ತುಂಬಿ ಕೂತಿದ್ದವು. ಗಂಡಮಾಲೆ ರೋಗವೂ ಆಕೆಯ ದೇಹದಲ್ಲಿ ವ್ಯಾಪಿಸಿತ್ತು. ಹಲ್ಲುಗಳು ಬಿದ್ದುಹೋಗಿದ್ದವು. ಕಫ ಪೀಡಿತಳಾದ ಅವಳು ದಿಗಂಬರೆಯಾಗಿ ಮರಣದೆಶೆಯಲ್ಲಿದ್ದಳು. ಸೂರ್ಯಕಿರಣಗಳು ತಾಕಿದರೂ ಸಾಯುವವಳೇನೋ ಎಂಬಂತಹ ಸ್ಥಿತಿಯಲ್ಲಿದ್ದಳು. ಸರ್ವಾಯವಗಳೂ ಬಾಧಾಪೀಡಿತವಾಗಿರುವಂತೆ ಕಾಣುತ್ತಿದ್ದ ಆ ವಿಧವೆಗೆ ತಲೆಯಲ್ಲಿ ಕೂದಲೂ ಉದುರಿಹೋಗಿತ್ತು. ಹೆಜ್ಜೆಹೆಜ್ಜೆಗೂ ಒದ್ದಾಡುತ್ತಾ ಮರದ ನೆರಳಿಗೆ ಬಂದಳು. ನೋಡಲು ಅವಳು ಇನ್ನೇನು ಸಾಯುತ್ತಾಳೆ ಎಂಬ ಸ್ಥಿತಿಯಲ್ಲಿದ್ದಳು. ಮೆಲ್ಲಮೆಲ್ಲಗೆ ನಡೆಯುತ್ತಾಅ ಮರದ ನೆರಳಿಗೆ ಬಂದು ಅಲ್ಲಿ ಕುಸಿದು ಬಿದ್ದಳು. ಹಾಗೆ ಬಿದ್ದ ಅವಳು ನಾನು ನೋಡುತ್ತಿರುವಂತೆಯೇ ಪ್ರಾಣ ಬಿಟ್ಟಳು. ಅಷ್ಟರಲ್ಲಿಯೇ ಆಕಸ್ಮಿಕವೋ ಎಂಬಂತೆ ವಿಮಾನವೊಂದು ಸೂರ್ಯನಂತೆ ಬೆಳಗುತ್ತಾ ಬಂದು ನನ್ನ ಸಮೀಪದಲ್ಲೇ ಇಳಿಯಿತು. ಕೈಲಾಸದಿಂದ ಬಂದ ಆ ವಿಮಾನದಿಂದ ಶೂಲಖಟ್ವಾಂಗ ಧಾರಿಗಳಾದ ನಾಲ್ವರು ದೂತರು ಇಳಿದರು. ಅವರೆಲ್ಲರೂ ಶೈವರು. ಕಿರೀಟಧಾರಿಗಳು. ದಿವ್ಯರೂಪರು. ಆ ದೂತರನ್ನು ನೀವು ಏತಕ್ಕೆ ಬಂದಿದ್ದೀರಿ ಎಂದು ಕೇಳಿದೆ. ಅದಕ್ಕೆ ಅವರು ಈ ಚಂಡಾಲಿಯನ್ನು ಕೈಲಾಸಕ್ಕೆ ಕರೆದುಕೊಂಡು ಹೋಗಲು ಬಂದಿದ್ದೇವೆ ಎಂದು ಹೇಳಿದರು. ಸೂರ್ಯಪ್ರಕಾಶದಂತೆ ಬೆಳಗುತ್ತಿದ್ದ ಆ ದಿವ್ಯ ವಿಮಾನ ಆ ಸತ್ತುಬಿದ್ದಿದ್ದ ಚಂಡಾಲಿಯನ್ನು ಕೈಲಾಸಕ್ಕೆ ಕರೆದುಕೊಂಡುಹೋಗಲು ಬಂದಿರುವುದನ್ನು ಕಂಡು ನಾನು ಆಶ್ಚರ್ಯಚಕಿತನಾಗಿಹೋದೆ. ಮಹದಾಶ್ಚರ್ಯಗೊಂಡ ನಾನು, ’ಇಂತಹ ಚಂಡಾಲಿ ದಿವ್ಯವಿಮಾನಕ್ಕೆ ಅರ್ಹಳೇ? ನಾಯಿಯನ್ನು ದಿವ್ಯಸಿಂಹಾಸನದಮೇಲೆ ಕೂಡಿಸಬಹುದೇ? ಇವಳು ಹುಟ್ಟಿದಾಗಿನಿಂದಲೇ ಮಹಾಪಾಪಗಳನ್ನು ಸೇರಿಸಿಕೊಂಡು ಬಂದಿದ್ದಾಳೆ. ಅಂತಹ ಈ ಪಾಪರೂಪಿಣಿ ಕೈಲಾಸಕ್ಕೆ ಹೇಗೆ ಸೇರಬಲ್ಲಳು? ಪಶುಮಾಂಸವನ್ನು ಆಹಾರವಾಗಿ ತಿಂದು ಇವಳು ವೃದ್ಧೆಯಾದಳು. ಜೀವಹಿಂಸಾ ಪರಾಯಣೆಯಾಗಿ, ಕುಷ್ಠುರೋಗ ಪೀಡಿತಳಾಗಿ, ಪಾಪಿನಿಯಾದ ಈ ಚಂಡಾಲಿ ಕೈಲಾಸಕ್ಕೆ ಹೇಗೆ ಅರ್ಹಳಾದಳು? ಇವಳಿಗೆ ಶಿವಜ್ಞಾನವಿಲ್ಲ. ತಪಸ್ಸು ಎಂದರೇನು ಎಂದು ತಿಳಿಯದು. ದಯೆ ಸತ್ಯಗಳು ಎನ್ನುವುವು ಇವಳಲ್ಲಿ ಇಲ್ಲವೇ ಇಲ್ಲ. ಶಿವಪೂಜೆಯನ್ನು ಎಂದೂ ಮಾಡಲಿಲ್ಲ. ಪಂಚಾಕ್ಷರಿ ಜಪ ಮಾಡಿಲ್ಲ. ದಾನ ಮಾಡಲಿಲ್ಲ. ತೀರ್ಥಗಳ ವಿಷಯ ಏನೂ ತಿಳಿಯದು. ಪರ್ವದಿನಗಳಲ್ಲಿ ಸ್ನಾನಮಾಡಲಿಲ್ಲ. ಯಾವ ವ್ರತವನ್ನೂ ಮಾಡಲಿಲ್ಲ. ಇವಳ ಪಾಪಗಳಿಂದಾಗಿ ಇವಳ ಶರೀರವೆಲ್ಲ ವ್ರಣಗಳಾಗಿ ದುರ್ಗಂಧದಿಂದ ಕೂಡಿದೆ. ವ್ರಣಗಳು ಸೋರುತ್ತಿವೆ. ದುಶ್ಚರಿತೆಯಾದ ಈ ಚಂಡಾಲಿಯ ಮುಖದಲ್ಲಾಗಿರುವ ವ್ರಣಗಳಿಂದ ಇವಳ ಪಾಪಫಲವಾಗಿ ಹುಳುಗಳು ಬೀಳುತ್ತಿವೆ. ಇವಳಿಗೆ ಗಳತ್ಕುಷ್ಠ ಎನ್ನುವ ಮಹಾ ರೋಗ ಪ್ರಾಪ್ತಿಯಾಗಿದೆ. ಚರಾಚರಗಳಲ್ಲೇ ನಿಂದ್ಯವಾದ ಇಂತಹ ಪಾಪಿಯನ್ನು ಶಿವಾಲಯಕ್ಕೆ ಸೇರಿಸಲು ಬಂದಿದ್ದೀರೇಕೆ? ಅದಕ್ಕೆ ಕಾರಣವನ್ನು ತಿಳಿಸಿ.’ ಎಂದು ಆ ಶಿವದೂತರನ್ನು ಪ್ರಶ್ನಿಸಿದೆ.

ಅದಕ್ಕೆ ಆ ಶಿವದೂತರು ಹೇಳಿದರು. “ಈ ಚಂಡಾಲಿಯ ಪೂರ್ವಜನ್ಮ ವೃತ್ತಾಂತವನ್ನು ಹೇಳುತ್ತೇವೆ ಕೇಳಿ. ಇವಳು ಪೂರ್ವದಲ್ಲಿ ಬ್ರಾಹ್ಮಣ ವಂಶದಲ್ಲಿ ಜನಿಸಿದಳು. ಈ ಚಂದ್ರಮುಖಿಯ ಹೆಸರು ಸೌದಾಮಿನಿ. ಆ ಬಾಲಸುಂದರಿಯನ್ನು ಅವಳ ತಂದೆ ಅವಳಿಗೆ ಅನುರೂಪನಾದ ವರನಿಗಾಗಿ ಹುಡುಕಿ ಎಲ್ಲಿಯೂ ತಗುನಾದ ವರನು ದೊರಕದೇ ಇದ್ದುದರಿಂದ, ಚಿಂತಾಪರನಾಗಿ, ವಿವಾಹಕಾಲ ಮೀರಿಹೋಗುವುದು ಎಂಬ ಕಾರಣಕ್ಕಾಗಿ, ಕೊನೆಗೆ ಇವಳನ್ನು ಅತಿಸಾಮಾನ್ಯನಾದ ಒಬ್ಬ ಬ್ರಾಹ್ಮಣನನ್ನು ಕರೆತಂದು ಅವನಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಟ್ಟ. ವಿವಾಹವಾದ ನಂತರ ಇವಳು ತನ್ನ ಗಂಡನ ಮನೆಗೆ ಹೋದಳು. ಅನತಿಕಾಲದಲ್ಲೇ ಇವಳ ಗಂಡ ಸತ್ತುಹೋದನು. ದುರದೃಷ್ಟದಿಂದ ಆ ಸುಂದರಿಯಾದ ಬಾಲಕಿ ಬಾಲ್ಯದಲ್ಲೇ ವಿಧವೆಯಾಗಿ ತೌರುಮನೆಗೆ ಹಿಂತಿರುಗಿದಳು. ಪತಿವಿರಹದಿಂದ ಖಿನ್ನಳಾಗಿ, ಕಾಮ ಪೀಡಿತಳಾಗಿದ್ದ ಆ ಸುಂದರ ಯುವತಿಗೆ, ಯುವಕರನ್ನು ಕಂಡಾಗಲೆಲ್ಲಾ ಮನಸ್ಸು ಚಂಚಲವಾಗುತ್ತಿತ್ತು. ಅದನ್ನು ತಡೆಯಲಾರದೆ ಕೊನೆಗೆ ಇವಳು ಕಾಮಾರ್ತೆಯಾಗಿ ರಹಸ್ಯವಾಗಿ ಯುವಕನೊಬ್ಬನನ್ನು ಸೇರಿ ಜಾರಿಣಿಯಾದಳು. ಇಂತಹ ರಹಸ್ಯಗಳು ಬಹಳಕಾಲ ಗುಪ್ತವಾಗಿರಲು ಸಾಧ್ಯವಿಲ್ಲವಲ್ಲವೇ? ಕಾಲಕಳೆದಂತೆ ಇವಳ ಪಾಪ ಪ್ರಕಟಗೊಂಡಿತು. ವಯಸ್ಸಿನಲ್ಲಿದ್ದ ಸುಂದರ ವಿಧವೆ. ವಿಷಯಾನ್ವಿತವಾದ ಮನಸ್ಸಿನಿಂದ ಕೂಡಿ ಚಂಚಲೆಯಾಗಿ ಜಾರಿಣಿಯಾದಳು. ಹಾಗೆ ದುಷ್ಟಾಚಾರಿಯೂ, ವ್ಯಭಿಚಾರಿಣಿಯೂ ಆದ ಇವಳನ್ನು ತಂದೆ ತಾಯಿಗಳು ಮನೆಯಿಂದ ಹೊರಕ್ಕೆ ಹಾಕಿದರು. ಬಂಧುಭಾಂದವರಿಂದಲೂ ಬಹಿಷ್ಕರಿಸಲ್ಪಟ್ಟಳು. ದೂಷಿತಳಾದ ಇವಳನ್ನು ಮನೆಯಿಂದ ಹೊರಕ್ಕೆ ಹಾಕಿ ತಂದೆತಾಯಿಗಳು ತಕ್ಕ ಪ್ರಾಯಶ್ಚಿತ್ತವನ್ನು ಮಾಡಿಕೊಂಡು, ಇವಳ ಸಂಪರ್ಕವನ್ನು ಕಳೆದುಕೊಂಡು, ಇವಳಿಂದುಂಟಾದ ದೋಷದಿಂದ ಮುಕ್ತರಾದರು.

ಬಂಧುಭಾಂದವರಿಂದ ಪರಿತ್ಯಕ್ತಳಾದ ಸೌದಾಮಿನಿ ಸ್ವತಂತ್ರಳಾಗಿ, ಆ ಊರಿನಲ್ಲೆ ಮನೆಮಾಡಿಕೊಂಡು ತನಗಿಷ್ಟಬಂದವರೊಡನೆ ಸುಖವನ್ನನುಭವಿಸುತ್ತಾ, ಜೀವಿಸತೊಡಗಿದಳು. ತನ್ನ ಕುಲಕ್ಕೇ ಶತ್ರುವಾದ ಇವಳು, ಒಬ್ಬ ಬಹುಸುಂದರನಾದ ವೈಶ್ಯನನ್ನು ಮೋಹಿಸಿ ಅವನೊಡನೆ ಗೃಹಿಣಿಯಂತೆ ವಾಸಮಾಡಲಾರಂಭಿಸಿದಳು. ಸ್ತ್ರೀಯರು ಕಾಮದಿಂದ, ಬ್ರಾಹ್ಮಣರು ಹೀನರ ಸೇವೆಯಿಂದ, ರಾಜರು ಬ್ರಾಹ್ಮಣರನ್ನು ದಂಡಿಸುವುದರಿಂದ, ಯತಿಗಳು ಭೋಗಸಂಗ್ರಹದಿಂದ ನಾಶವಾಗುತ್ತಾರೆಯಲ್ಲವೆ? ವೈಶ್ಯ ಯುವಕನೊಡನೆ ಕೂಡಿಯಾಡುತ್ತಿದ್ದ ಇವಳಿಗೆ ಮಕ್ಕಳೂ ಆದರು. ಮಾಂಸಾಹಾರಿಯಾಗಿ, ಮದ್ಯಪಾನಾಸಕ್ತಳಾಗಿ, ವೈಶ್ಯನ ಹೆಂಡತಿಯಾಗಿ ತನ್ನ ಆಯುಷ್ಯವನ್ನು ಕಳೆಯಬೇಕೆಂದುಕೊಂಡಿದ್ದ ಇವಳು, ಒಂದುದಿನ, ಹಸುವಿನ ಕರುವೊಂದನ್ನು ಮೇಕೆಯೆಂದುಕೊಂಡು ಸಾಯಿಸಿ ಅದರ ತಲೆಯನ್ನು ಮುಚ್ಚಿಟ್ಟು, ಮಿಕ್ಕ ಮಾಂಸವನ್ನು ತಿಂದಳು. ಮದ್ಯಪಾನ ಮತ್ತಳಾಗಿ ಅಂತಹ ಅಕಾರ್ಯವನ್ನು ಮಾಡಿ, ಸುಖವಾಗಿ ನಿದ್ರಿಸಿದಳು. ಮರುದಿನ ಬೆಳಗ್ಗೆದ್ದು, ತಾನು ರಾತ್ರಿ ಮಾಡಿದ್ದ ಅಕಾರ್ಯವನ್ನು ಅರಿತು, ಭ್ರಾಂತಳಾಗಿ, ಮನೆಯೊಳಕ್ಕೆ ಬಂದು ಮುಚ್ಚಿಟ್ಟಿದ್ದ ಕರುವಿನ ತಲೆಯನ್ನು ನೋಡಿ ಭಯಪಟ್ಟಳು. ’ಅಯ್ಯೋ! ಅಜ್ಞಾನದಿಂದ, ದುರಾತ್ಮಳಾದ ನಾನು ಎಂತಹ ಪಾಪ ಮಾಡಿದೆ. ಇದು ನನ್ನ ಗಂಡನಿಗೆ ತಿಳಿದರೆ ಅವನು ನನ್ನ ಮೇಲೆ ಕೋಪಗೊಳ್ಳುತ್ತಾನೆ.’ ಎಂಬ ಹೆದರಿಕೆಯಿಂದ, ಆ ಕರುವಿನ ಅಸ್ಥಿಮಾಂಸಗಳನ್ನೂ, ತಲೆಯನ್ನೂ ಹಳ್ಳದೊಳಕ್ಕೆ ಬಿಸುಟು, ಮನೆಗೆ ಬಂದು, ಗಂಡನಿಗೆ ನಿಜವನ್ನು ಮುಚ್ಚಿಟ್ಟು, ಕರುವನ್ನು ಹುಲಿ ತಿಂದುಹಾಕಿತು ಎಂದು ಸುಳ್ಳು ಹೇಳಿದಳು.

ಇಂತಹ ದುರ್ಬುದ್ಧಿಯುಳ್ಳ ಈ ಸೌದಾಮಿನಿ, ಇನ್ನೂ ಅನೇಕ ಪಾಪಗಳನ್ನು ಮಾಡಿ ಮರಣಿಸಿದಳು. ಸತ್ತಮೇಲೆ, ನರಕಕ್ಕೆ ಹೋಗಿ, ಅನೇಕ ದುಸ್ತರವಾದ ಯಾತನೆಗಳನ್ನನುಭವಿಸಿ, ಈ ಜನ್ಮದಲ್ಲಿ ಚಂಡಾಲಿಯಾಗಿ ಜನ್ಮಿಸಿದಳು. ನೋಡಿ ಪರಿಶೀಲಿಸದೆ ಗೋಹತ್ಯೆ ಮಾಡಿದ ಪಾಪದಿಂದ ಇವಳು ನೇತ್ರಹೀನಳಾದಳು. ಉಪಪತಿಯೊಡನೆ ಇದ್ದುದರಿಂದ ಗಳತ್ಕುಷ್ಠುರೋಗ ಪೀಡಿತಳಾದಳು. ಬಾಲ್ಯದಲ್ಲೇ ತಂದೆತಾಯಿಗಳನ್ನು ಕಳೆದುಕೊಂಡು ಅನಾಥಳಾಗಿದ್ದ ಇವಳು, ಬೆಳೆದು ದೊಡ್ಡವಳಾಗುತ್ತಾ ಬಂದಂತೆಲ್ಲ ಇವಳ ವ್ರಣಗಳೂ ದೊಡ್ಡದಾದವು. ದೀನಳಾಗಿ, ಕುಷ್ಠುರೋಗ ಪೀಡಿತಳಾಗಿ, ದುರ್ಗಂಧಪೂರಿತಳಾಗಿದ್ದ ಇವಳನ್ನು ಇವಳ ಸಹೋದರರೂ ಕೈಬಿಟ್ಟರು. ದಿನವೂ ಯಾಚನೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರೂ, ಅದು ಸಾಕಾಗದೆ ಹಸಿವು ಬಾಯಾರಿಕೆಗಳಿಂದ ಒದ್ದಾಡುತ್ತಿದ್ದ, ರೋಗಪೀಡಿತಳಾದ ಇವಳು, ಬೆಳೆದು ವೃದ್ಧೆಯಾದಳು. ಹೀಗೆ ತನ್ನ ಪೂರ್ವದುಷ್ಕರ್ಮ ಫಲಗಳನ್ನು ಅನುಭವಿಸುತ್ತಾ, ಇವಳು ದರಿದ್ರಳಾಗಿ, ಉಡಲು ಸರಿಯಾದ ಬಟ್ಟೆಯೂ ಇಲ್ಲದೆ, ದಾರಿಯಲ್ಲಿ ಕಂಡಕಂಡವರನ್ನೆಲ್ಲಾ ಬೇಡುತ್ತಾ ತಿರುಗುತಿದ್ದಳು. ಆದರೂ ಆಕೆಯ ಹಸಿವು ತೀರಲಿಲ್ಲ. ವ್ಯಾಧಿಗ್ರಸ್ತವಾದ ಶರೀರವು, ಸೊರಗಿ, ಹಸಿವು ತಾಳಲಾರದೆ, ರೋಗವು ಅತಿಯಾಗಿ ಭಾದಿಸುತ್ತಿರಲು, ತನ್ನ ಕರ್ಮಗಳನ್ನು ನಿಂದಿಸಿಕೊಳ್ಳುತ್ತಾ ಕಾಲಕಳೆಯುತ್ತಿದ್ದಳು.

ಹೀಗಿರುತ್ತಿರಲು ಒಂದುಸಲ ಮಾಘಮಾಸ ಬಂತು. ಅವಳಿದ್ದ ಊರಿನ ಜನರೆಲ್ಲರು, ಆಬಾಲಸ್ತ್ರೀವೃದ್ಧರಾದಿಯಾಗಿ ಗೋಕರ್ಣಕ್ಕೆ ಹೊರಟಿದ್ದರು. ಶಿವರಾತ್ರಿಗೆ, ಶಿವದರ್ಶನಕ್ಕೆಂದು ನಾನಾ ಕಡೆಗಳಿಂದ ಅನೇಕ ಜನ ಸಮೂಹಗಳು ಸೇರಿ ಹೊರಟಿದ್ದರು. ಇವಳೂ ಅವರ ಜೊತೆಯಲ್ಲಿ ಹೊರಟಳು. ಆ ಜನರಲ್ಲಿ, ಕೆಲವರು ಆನೆಗಳ ಮೇಲೆ ಕುಳಿತು, ಕೆಲವರು ಕುದುರೆಗಳ ಮೇಲೆ, ಕೆಲವರು ರಥಗಳಲ್ಲಿ, ಕೆಲವರು ಪಾದಚಾರಿಗಳಾಗಿ, ಅಲಂಕಾರ ಭೂಷಿತರಾಗಿ, ಹೀಗೆ ಅನೇಕ ರೀತಿಗಳಲ್ಲಿ, ಸಂತೋಷ ಸಂಭ್ರಮಗಳಿಂದ ಎಲ್ಲರೂ ಮಹಾಬಲೇಶ್ವರನ ದರ್ಶನಕ್ಕಾಗಿ ಹೊರಟಿದ್ದರು. ಎಲ್ಲ ವರ್ಗದ ಜನರೂ, ತಮತಮಗೆ ತೋಚಿದಂತೆ ಶಿವಸ್ಮರಣೆ ಮಾಡುತ್ತಾ ಹೊರಟಿದ್ದರು. ಅವರೊಡನೆ ಹೊರಟ ಚಂಡಾಲಿಯೂ, ಶಿವನಾಮೋಚ್ಚರಣೆಯೆಂಬ ಪುಣ್ಯದಿಂದ ಗೋಕರ್ಣ ಕ್ಷೇತ್ರವನ್ನು ಸೇರುವಂತಾಯಿತು. ಗೋಕರ್ಣವನ್ನು ಸೇರಿ ಅಲ್ಲಿ ಭಿಕ್ಷೆ ಮಾಡುತ್ತಿದ್ದಳು. “ಪೂರ್ವಜನ್ಮದಲ್ಲಿ ಮಾಡಿದ ಪಾಪಗಳಿಂದ ಪೀಡಿಸಲ್ಪಡುತ್ತಿರುವ ಈ ಪಾಪಿಗೆ ಸ್ವಲ್ಪ ಅನ್ನವನ್ನು ನೀಡಿ. ರೋಗಪೀಡಿತಳಾಗಿ, ತಿಂಡಿ ಊಟಗಳಿಲ್ಲದೆ, ಬಟ್ಟೆಯೂ ಇಲ್ಲದೆ ಇರುವ ನನ್ನನ್ನು ಛಳಿ ಬಾಧಿಸುತ್ತಿದೆ. ಈ ಕುರುಡಿಯ ಹಸಿವನ್ನು ಹೋಗಲಾಡಿಸಿ. ಸಜ್ಜನರು ಧರ್ಮ ಮಾಡಿ. ಬಹಳ ದಿನಗಳಿಂದ ಸಹಿಸುತ್ತಿರುವ ಕ್ಷುಧ್ಭಾಧೆಯಿಂದ ನನ್ನನ್ನು ಮುಕ್ತಗೊಳಿಸಿ. ನಾನು ನನ್ನ ಹಿಂದಿನ ಜನ್ಮಗಳಲ್ಲಿ ಪುಣ್ಯ ಮಾಡಿಲ್ಲದಿರುವುದರಿಂದಲೇ ಇಷ್ಟು ಕಷ್ಟಪಡುತ್ತಿದ್ದೇನೆ. ಅಯ್ಯಾ ಸಜ್ಜನರೇ ದಯವಿಟ್ಟು ಧರ್ಮ ಮಾಡಿ.” ಎಂದು ಅನೇಕ ರೀತಿಗಳಲ್ಲಿ, ದೀನಳಾಗಿ, ಬೇಡಿಕೊಳ್ಳುತ್ತಾ ಆ ಜನರ ಹಿಂದೆ ಓಡಾಡುತ್ತಿದ್ದಳು.

ಅಂದು ಶಿವರಾತ್ರಿಯಾದದ್ದರಿಂದ ಯಾರೂ ಅವಳಿಗೆ ಅನ್ನ ನೀಡಲಿಲ್ಲ. ಕೆಲವರು ನಗುತ್ತಾ, “ಇಂದು ಶಿವರಾತ್ರಿ. ಉಪವಾಸವಾದದ್ದರಿಂದ ಅನ್ನವಿಲ್ಲ.” ಎಂದು ತಮ್ಮ ಕೈಯಲ್ಲಿದ್ದ ಬಿಲ್ವದಳಗಳನ್ನು ಅವಳ ಕೈಯಲ್ಲಿ ಹಾಕಿದರು. ಅವಳು ಅದನ್ನು ಮೂಸಿನೋಡಿ ಅದು ತಿನ್ನುವುದಲ್ಲ ಎಂಬುದನ್ನು ತಿಳಿದು ಕೋಪದಿಂದ ಬಿಸುಟಳು. ಹಾಗೆ ಅವಳು ಬಿಸಾಡಿದ ಬಿಲ್ವದಳ ಶಿವಲಿಂಗದ ತಲೆಯಮೇಲೆ ಬಿತ್ತು. ದೈವಯೋಗದಿಂದ ಅದು ಅವಳಿಗೆ ಶಿವಪೂಜೆಯ ಪುಣ್ಯವನ್ನು ತಂದಿತು. ಯಾರೂ ಅನ್ನ ಕೊಡಲಿಲ್ಲವಾಗಿ ಅವಳಿಗೆ ಉಪವಾಸವಾಯಿತು. ಅದರಿಂದ ಅವಳಿಗೆ ಉಪವಾಸ ಮಾಡಿದ ಪುಣ್ಯ ಲಭಿಸಿತು. ಹಸಿವಿನಿಂದಾಗಿ ಅವಳಿಗೆ ರಾತ್ರಿಯೆಲ್ಲಾ ನಿದ್ರೆ ಬರಲಿಲ್ಲ. ಅದರಿಂದ ಅವಳು ಜಾಗರಣೆ ಮಾಡಿದಂತಾಗಿ ಅವಳಿಗೆ ಜಾಗರಣೆಮಾಡಿದ ಪುಣ್ಯ ಲಭಿಸಿತು. ಆ ರೀತಿಯಲ್ಲಿ, ಅವಳಿಗೆ ಅರಿವಿಲ್ಲದೆಯೇ, ಅವಳ ವ್ರತ ಸಾಂಗವಾಗಿ ಮುಗಿದಂತಾಯಿತು. ಅವಳ ಪ್ರಯತ್ನವಿಲ್ಲದೆಯೇ ಅವಳಿಗೆ ವ್ರತ ಪುಣ್ಯವು ಲಭಿಸಿ, ಶಿವನು ಸಂತುಷ್ಟನಾಗಿ, ಅವಳಿಗೆ ಭವಾರ್ಣವ ತಾರಕನಾದನು. ಈ ವಿಧದಲ್ಲಿ, ರೋಗೋಪವಾಸಗಳಿಂದ ಶ್ರಾಂತಳಾಗುವ ಮಾರ್ಗವನ್ನರಿಯದ, ಹೆಜ್ಜೆ ಇಡಲೂ ಶಕ್ತಿಯಿಲ್ಲದ, ಈ ಚಂಡಾಲಿಗೆ ಮಹಾವ್ರತಫಲ ದೊರೆತು, ಪೂರ್ವ ಕರ್ಮಗಳಿಂದ ಮುಕ್ತಿ ದೊರೆತು, ಈ ಗಿಡದ ನೆರಳಿಗೆ ಬಂದು ಪ್ರಾಣ ಬಿಟ್ಟಳು. ಅದರಿಂದ ಶಿವನ ಆದೇಶದಂತೆ ನಾವು ಇಲ್ಲಿಗೆ ಬಂದೆವು. ಶಿವರಾತ್ರಿಯ ಬಿಲ್ವಾರ್ಚನೆ, ಉಪವಾಸ ಜಾಗರಣೆಗಳಿಂದ ದೊರೆತ ಪುಣ್ಯದಿಂದ ಇವಳ ಪಾಪಗಳೆಲ್ಲಾ ನಾಶವಾದವು. ನೂರು ಜನ್ಮಗಳಲ್ಲಿ ಸಂಪಾದಿಸಿದ್ದ ಪಾಪಗಳೆಲ್ಲಾ ಕ್ಷಯವಾಗಲು, ಇವಳು ಶಿವನಿಗೆ ಪ್ರೀತಿಪಾತ್ರಳಾದಳು.” ಎಂದು ಹೇಳಿ ಆ ಶಿವದೂತರು ಸೌದಾಮಿನಿಯ ಮೇಲೆ ಅಮೃತವನ್ನು ಚುಮುಕಿಸಿದರು. ತಕ್ಷಣವೇ ಅವಳು ದಿವ್ಯದೇಹಧಾರಿಯಾಗಿ, ಅವರ ಹಿಂದೆ ವಿಮಾನದಲ್ಲಿ ಹೊರಟಳು. ” ಎಂದು ಗೌತಮ ಮುನಿಯು ಕಥೆಯನ್ನು ಹೇಳಿ, ” ಹೇ ರಾಜ, ಇದನ್ನು ನಾನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಗೋಕರ್ಣ ಮಾಹಾತ್ಮ್ಯೆ ಅಷ್ಟು ದೊಡ್ಡದು. ಲೋಕಪಾವನವಾದದ್ದು. ಜ್ಞಾನ ಹೀನಳಾದರೂ ಚಂಡಾಲಿಗೆ ಮುಕ್ತಿ ದೊರಕಿತು. ಅದರಿಂದ, ರಾಜ, ನೀನು ಅಲ್ಲಿಗೆ ಹೋಗು. ಅಲ್ಲಿ ನೀನು ಶುದ್ಧನಾಗಿ, ಇಹಪರಗಳೆರಡರಲ್ಲೂ ಒಳ್ಳೆಯದನ್ನು ಪಡೆಯಬಲ್ಲೆ.” ಎಂದನು.

ಹೀಗೆ ಗೌತಮ ಮುನಿಯು ಹೇಳಲಾಗಿ ಆ ರಾಜನು ತಡಮಾಡದೆ ಗೋಕರ್ಣ ಕ್ಷೇತ್ರವನ್ನು ಸೇರಿ, ಅಲ್ಲಿ ಮಹಾಬಲೇಶ್ವರನ ಪೂಜಾರ್ಚನೆಗಳನ್ನು ಮಾಡಿ, ಪಾಪ ವಿಮುಕ್ತನಾದನು. ಆದ್ದರಿಂದ ನಾಮಧಾರಕ, ಗೋಕರ್ಣ ಕ್ಷೇತ್ರವು, ಪವಿತ್ರವಾದದ್ದರಿಂದಲೇ, ಶ್ರೀಪಾದ ಗುರುವು ಅಲ್ಲಿ ನಿಂತರು. ಆ ಕ್ಷೇತ್ರದಲ್ಲಿ, ತಿಳಿಯದೆ ನಿವಾಸ ಮಾಡಿದ ದುರ್ಮಾರ್ಗಿಗಳಿಗೂ ಸತ್ಫಲವು ದೊರೆಯುವುದು. ಇನ್ನು
ವಿದ್ವಾಂಸರಿಗೆ/ಜ್ಞಾನಿಗಳಿಗೆ ದೊರೆಯುವ ಫಲವನ್ನು ಕುರಿತು ಹೇಳಬೇಕಾದ್ದೇನಿದೆ?

ಇಲ್ಲಿಗೆ ಏಳನೆಯ ಅಧ್ಯಾಯ ಮುಗಿಯಿತು.
[02/01 8:23 AM] S. Bhargav: ||ಶ್ರೀ ಗುರು ಚರಿತ್ರೆ – ಎಂಟನೆಯ ಅಧ್ಯಾಯ||

ಸಿದ್ಧರು ಹೇಳಿದ ಗೋಕರ್ಣ ಕ್ಷೇತ್ರದ ಮಹಿಮೆಯನ್ನು ಕೇಳಿದ ನಾಮಧಾರಕ, “ಸ್ವಾಮಿ, ಶ್ರೀಪಾದರು ಗೋಕರ್ಣದಲ್ಲಿ ಎಷ್ಟುಕಾಲ ಇದ್ದರು? ಅವರ ಚರಿತ್ರೆಯನ್ನು ಕೇಳುವುದು ಆನಂದಕರವಾಗಿದೆ.” ಎಂದು ಕೇಳಿದನು. ಆಗ ಸಿದ್ಧರು ಮತ್ತೆ ಹೇಳಿದರು.
ಗೋಕರ್ಣ ಕ್ಷೇತ್ರದಲ್ಲಿ ಶ್ರೀಪಾದ ಶ್ರೀವಲ್ಲಭರು ಮೂರು ವರ್ಷಗಳಿದ್ದರು. ಮತ್ತೆ ಲೋಕಾನುಗ್ರಹಕ್ಕಾಗಿ ಅವರು ಅಲ್ಲಿಂದ ಹೊರಟು ಶ್ರೀಶೈಲಕ್ಷೇತ್ರವನ್ನು ಸೇರಿದರು. ಶ್ರೀಪಾದರ ಚರಣ ದರ್ಶನದಿಂದ ಜನಸಾಮಾನ್ಯರಿಗೆ ಸರ್ವತೀರ್ಥ ದರ್ಶನ ಫಲ ದೊರೆಯುತ್ತದೆ. “ಚರಣಂ ಪವಿತ್ರಂ ವಿತತಂ” ಎಂದು ಶೃತಿ ಅವರ ಚರಣ ಮಹಿಮೆಯನ್ನು ವಿವರಿಸುತ್ತದೆ. ಅವರ ಪಾದಗಳಲ್ಲಿ ಸರ್ವ ತೀರ್ಥಗಳೂ ನೆಲೆಸಿವೆ. ಮಹಾತ್ಮರು ಪರ್ಯಟನೆಮಾಡುವುದು ಲೋಕಾನುಗ್ರಹಕ್ಕಾಗಿಯೇ!

ಶ್ರೀಶೈಲ ಪರ್ವತವನ್ನು ಸೇರಿದ ಶ್ರೀಪಾದರು, ಅಲ್ಲಿ ನಾಲ್ಕು ತಿಂಗಳಿದ್ದು, ಭಕ್ತರಿಗೆ ತಮ್ಮ ದರ್ಶನಭಾಗ್ಯವನ್ನೊದಗಿಸಿ, ನಿವೃತ್ತಿಸಂಗಮದಲ್ಲಿ ಸ್ನಾನವಾಚರಿಸಿ ಕುರುಪುರವನ್ನು ಸೇರಿದರು. ಅಲ್ಲಿ ಕೃಷ್ಣಾನದಿ ವೇಣಿನದಿಯೊಡನೆ ಕಲೆತು ಹರಿಯುತ್ತದೆ. ಭೂತಲದಲ್ಲಿ ಅದರಂತಹ ಇನ್ನೊಂದು ಮಹಿಮಾನ್ವಿತ ಪ್ರದೇಶ ದುರ್ಲಭ. ಆ ಮಹಿಮೆಯನ್ನು ವರ್ಣಿಸಬೇಕೆಂದರೆ ಗ್ರಂಥಬಾಹುಳ್ಯವಾಗುತ್ತದೆ. ಅದರಿಂದ ಸ್ವಲ್ಪವಾಗಿ ತಿಳಿಸುತ್ತೇನೆ. ಭೂಮಿಯಮೇಲೆ ಶ್ರೀಪಾದಶ್ರೀವಲ್ಲಭರಿಗೆ ಅಧಿಷ್ಠಾನ ಸ್ಥಾನವಾಗಿ ಖ್ಯಾತಿಗೊಂಡ ’ಕುರುಗಡ್ಡ’ ಎನ್ನುವ ಪ್ರದೇಶ, ಈಗಲೂ ಇದೆ. ಅಲ್ಲಿ ಶ್ರೀಪಾದರನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಿ ಅರ್ಚಿಸಿ ಭಜಿಸಿದವರು ಪುತ್ರಪೌತ್ರಾದಿಯಾದ ಸಕಲ ಸಂಪತ್ತುಗಳನ್ನು ಪಡೆಯುವರು. ಶ್ರೀಪಾದರ ಮಹಿಮೆ ಅಶೇಷವಾದದ್ದರಿಂದ ಅದನ್ನು ವಿಸ್ತಾರವಾಗಿ ಹೇಳಲು ಸಾಧ್ಯವಿಲ್ಲ. ಸಂಕ್ಷಿಪ್ತವಾಗಿ ತಿಳಿಸುತ್ತೇನೆ. ಶ್ರೀಪಾದಶ್ರೀವಲ್ಲಭರು ಕುರುಪುರದಲ್ಲಿ ರಹಸ್ಯವಾಗಿದ್ದುಕೊಂಡು ತಮ್ಮ ಎರಡನೆಯ ಅವತಾರವೆತ್ತಲು ಉದ್ಯುಕ್ತರಾದರು.

ಕುರುಗಡ್ದ ಗ್ರಾಮದಲ್ಲಿ ವೇದಶಾಸ್ತ್ರಪಾರಂಗತನಾದ ಬ್ರಾಹ್ಮಣನೊಬ್ಬನಿದ್ದನು. ಅವನ ಹೆಂಡತಿ ಅಂಬಿಕ. ಪತಿಯೇ ದೈವವೆಂದು ತಿಳಿದ, ಆ ಸದಾಚಾರ ತತ್ಪರಳಾದ ಪತಿವ್ರತೆ, ಸುಶೀಲೆ. ಪತಿಸೇವಾಪರಾಯಣಳು. ಆಕೆಗೆ ಅನೇಕ ಮಕ್ಕಳಾಗಿ ಎಲ್ಲರೂ ಅತ್ಯಲ್ಪ ವಯಸ್ಸಿನಲ್ಲೇ ಮರಣಿಸಿದರು. ಆಕೆ ಅನೇಕ ತೀರ್ಥಗಳನ್ನು ದರ್ಶಿಸುತ್ತಾ, ಅಲ್ಲಿನ ದೇವರುಗಳ ಸೇವೆಮಾಡುತ್ತಾ, ಕೊನೆಗೆ ದೈವ ಕೃಪೆಯಿಂದ ಒಬ್ಬ ಮಗನನ್ನು ಪಡೆದಳು. ದುರದೃಷ್ಟದಿಂದ ಅವನು ಮಂದಮತಿಯಾದನು. ಅನೇಕ ಮಕ್ಕಳನ್ನು ಹೆತ್ತು, ಎಲ್ಲರನ್ನೂ ಕಳೆದುಕೊಂಡು, ಉಳಿದವನು ಇವನೊಬ್ಬನೇ ಎಂಬ ಅತಿಶಯ ಪ್ರೀತಿಯಿಂದ ಅವನನ್ನು ಬೆಳೆಸಿದಳು. ಅವನು ಬೆಳೆದು ಉಪನಯನದ ವಯಸ್ಸು ಬಂತು. ತಂದೆ ಅವನಿಗೆ ಉಪನಯನ ಮಾಡಿದರೂ, ಮೂಢನಾಗಿದ್ದುದರಿಂದ ಅವನಿಗೆ ಉಪದೇಶಮಾಡಿದ ಯಾವ ಮಂತ್ರವೂ ಕೈಗೂಡಲಿಲ್ಲ. ಅದರಿಂದ ಚಿಂತಾಕುಲನಾಗಿ, ಶ್ರೋತ್ರೀಯನಾದ ಅವನ ತಂದೆ ಬಹು ದುಃಖಿತನಾದನು. “ದೈವಾರಾಧನೆಯಿಂದ ಹುಟ್ಟಿದ ಇವನು ಹೀಗೆ ಮತಿಹೀನನಾಗಿ ಕುಲನಾಶಕನಾದನು. ಹಿಂದೆ ಮಾಡಿದ ಕರ್ಮಫಲವು ತಪ್ಪುವುದಿಲ್ಲವಲ್ಲ!” ಎಂದು ಯೋಚಿಸುತ್ತಾ, ಆ ಬ್ರಾಹ್ಮಣ ತನ್ನ ಮಗನನ್ನು ಹೊಡೆಯುತ್ತಿದ್ದನು. ಹಾಗೆ ಹೊಡೆಯುತ್ತಿದ್ದ ಗಂಡನನ್ನು, ದುಃಖಿತಳಾದ ಅಂಬಿಕ ಒಂದುಸಲ ತಡೆದು, “ಸ್ವಾಮಿ, ಅವನನ್ನು ಹೊಡೆಯಬೇಡ. ದಯೆಯಿಂದ ಕಾಣು. ಮಹಾಕಷ್ಟಗಳನ್ನನುಭವಿಸಿದ ನಮಗೆ ಕೊನೆಗೆ ಉಳಿದವನು ಈ ಮಗನೊಬ್ಬನೇ! ಅವನಿಗೆ ವಿದ್ಯೆ ಬರುವುದಿಲ್ಲ. ಹುಟ್ಟಿಸಿದ ಆ ದೈವವೇ ಇವನನ್ನು ಕಾಪಾಡುವುದು. ಅವನ ಹಿಂದಿನ ಕರ್ಮಗಳನ್ನು ನಾವು ಹೇಗೆ ತಪ್ಪಿಸಬಲ್ಲೆವು? ಇಷ್ಟಾದರೂ ನೀನು ಅವನನ್ನು ಹೊಡೆದರೆ ನಾನು ನಿನ್ನ ಮುಂದೆಯೇ ಪ್ರಾಣಕಳೆದುಕೊಳ್ಳುತ್ತೇನೆ” ಎಂದು ನಿಶ್ಚಿತವಾಗಿ ಹೇಳಿದಳು. ಅವಳ ಮಾತುಗಳನ್ನು ಕೇಳಿದ ಆ ಬ್ರಾಹ್ಮಣ, ’ನನ್ನ ಅದೃಷ್ಟವೇ ಹೀನವಾದರೆ ನಾನಾದರೂ ಮಾಡುವುದೇನು? ಆದದ್ದಾಗಲಿ’ ಎಂದು ಉದಾಸೀನನಾಗಿ ಸುಮ್ಮನಾದನು.

ಸ್ವಲ್ಪಕಾಲದಲ್ಲೇ ಆ ಬ್ರಾಹ್ಮಣ, ಆ ದುಃಖದಿಂದಲೇ ಮರಣಿಸಿದನು. ವಿಧವೆಯಾದ ಅಂಬಿಕ ತನ್ನ ಮೂರ್ಖ ಮಗನೊಡನೆ ದುಃಖದಿಂದ ಜೀವಿಸುತ್ತಿದ್ದಳು. ವಿವಾಹವಯಸ್ಕನಾದರೂ ಆ ಮತಿಹೀನನಿಗೆ ಯಾರೂ ಹೆಣ್ಣು ಕೊಡದೆ, “ತಾಯಿ ತಂದ ಭಿಕ್ಷೆ ತಿಂದು ಬದುಕುತ್ತಿದ್ದಾನೆ” ಎಂದು ಹೀಯಾಳಿಸುತ್ತಿದ್ದರು. ಕೆಲವರು ಅವನನ್ನು, ” ಮೂರ್ಖ ಶಿಖಾಮಣಿ, ತಲೆಯಮೇಲೆ ಮಡಕೆಯನ್ನಿಟ್ಟುಕೊಂಡು ಮನೆಗಳಿಗೆ ನದಿಯಿಂದ ನೀರು ತಂದುಹಾಕು. ಕಲ್ಲಿನಂತೆ ನಿನ್ನ ಜನ್ಮವೂ ವ್ಯರ್ಥ. ಕುಲಕಂಟಕ. ನಿನ್ನ ಜನ್ಮದಿಂದ ಕುಲಕ್ಕೇ ಕಲಂಕ ತಂದೆ. ನಿನ್ನ ತಂದೆ ಶಾಸ್ತ್ರಜ್ಞನಾಗಿ, ಸದಾಚಾರ ಪ್ರವೃತ್ತನಾಗಿ ಪ್ರಸಿದ್ಧಿಯಾಗಿದ್ದವನು. ನಿನ್ನ ಹುಟ್ಟಿನಿಂದ ಅವನು ಕಲಂಕಿತನಾದನು. ನೀನು ನಿನ್ನ ತಾಯಿ ಭಿಕ್ಷೆ ಬೇಡಿ ತಂದ ಅನ್ನದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೀಯೆ. ನಾಚಿಕೆಯಾಗುವುದಿಲ್ಲವೇ? ನಿನ್ನಿಂದಾಗಿ ನಿನ್ನ ಪಿತೃದೇವತೆಗಳೂ ಅಧೋಗತಿಗೆ ಹೋಗಿದ್ದಾರೆ. ಪಶುಪ್ರಾಯನಾದ ನಿನಗೆ ಈ ವ್ಯರ್ಥಜನ್ಮವೇತಕ್ಕೆ? ಹೋಗಿ ನದಿಯಲ್ಲಿ ಮುಳುಗಿ ಸಾಯಬಾರದೇ? ” ಎಂದು ಅನೇಕ ರೀತಿಗಳಲ್ಲಿ ಅವನನ್ನು ನಿಂದಿಸುತ್ತಿದ್ದರು.

ಜನರ ಮಾತುಗಳನ್ನು ಕೇಳಿದ ಅ ಹುಡುಗ ಬಹು ದುಃಖಪಟ್ಟು, “ಅಮ್ಮ, ಎಲ್ಲರೂ ನನ್ನನ್ನು ಮೂರ್ಖ, ಮೂಢ ಎಂದು ಹೀಯಾಳಿಸುತ್ತಿದ್ದಾರೆ. ಇನ್ನು ನಾನು ಅಂತಹ ಮಾತುಗಳನ್ನು ಕೇಳಲಾರೆ. ನನ್ನನ್ನು ಪೋಷಿಸಲು ನೀನು ಕಷ್ಟಪಡುತ್ತಿದ್ದೀಯೆ. ಇಂತಹ ಈ ಜನ್ಮದಿಂದ ಪ್ರಯೋಜನವಾದರೂ ಏನು? ಅದರಿಂದ ನಾನು ಪ್ರಾಣ ಬಿಡಲು ನಿರ್ಧರಿಸಿ ಹೋಗುತ್ತಿದ್ದೇನೆ.” ಎಂದು ಹೇಳಿದನು. ಅವನ ಮಾತುಗಳನ್ನು ಕೇಳಿದ ಅಂಬಿಕ, ಅತಿದುಃಖಿತಳಾಗಿ, ಕಣ್ಣೀರು ಕೋಡಿ ಹರಿಸುತ್ತಾ, ಅವನ ಜೊತೆಯಲ್ಲಿಯೇ ತಾನೂ ಕೃಷ್ಣಾ ನದಿಯಲ್ಲಿ ಮುಳುಗಿ ಸಾಯಲು ಹೊರಟಳು. ಅವರು ನದಿಯ ತೀರಕ್ಕೆ ಬಂದಾಗ, ಅಲ್ಲಿಗೆ ಸರ್ವಾಪತ್ತುಗಳನ್ನು ಹರಿಸುವ, ಸ್ನಾನಕ್ಕೆಂದು ಬಂದ, ಶ್ರೀಪಾದ ಶ್ರೀವಲ್ಲಭರನ್ನು ಕಂಡರು. ಆ ತಾಯಿ, ಮಗ ಇಬ್ಬರೂ ಶ್ರೀಪಾದರನ್ನು ಕಂಡು ಅವರ ಚರಣಗಳಿಗೆ ನಮಸ್ಕರಿಸಿ, “ನಾವು ಆತ್ಮಹತ್ಯೆ ಮಾಡಿಕೊಳ್ಳಲು ಇಲ್ಲಿಗೆ ಬಂದಿದ್ದೇವೆ. ನಮಗೆ ನಿಮ್ಮ ಅನುಜ್ಞೆ ಕೊಡಿ. ಆತ್ಮಹತ್ಯೆ ಎನ್ನುವುದು ಮಹಾಪಾಪವಾದದ್ದು. ನಿಮ್ಮ ಅಪ್ಪಣೆ ಬೇಡುತ್ತಿದ್ದೇವೆ. ಅದರಿಂದ ನಮಗೆ ಸದ್ಗತಿಯಾಗುವುದು” ಎಂದು ಬೇಡಿಕೊಂಡರು.

ದಯಾರ್ದ್ರಹೃದಯರಾದ ಶ್ರೀಪಾದರು, ಅವರ ಪ್ರಾರ್ಥನೆಯನ್ನು ಆಲಿಸಿ, ” ನಿಮಗೆ ಪ್ರಾಣತ್ಯಾಗ ಮಾಡುವಂತಹ ಆಪತ್ತೇನು ಬಂದಿದೆ?” ಎಂದು ಕೇಳಲು, ಆ ಬ್ರಾಹ್ಮಣ ಸ್ತ್ರೀ, ತಮಗೆ ಉಂಟಾಗಿರುವ ದುಃಖವನ್ನೆಲ್ಲಾ ಅವರೊಡನೆ ಹೇಳಿಕೊಂಡು, “ಹೇ ಭಕ್ತವತ್ಸಲ, ನಮ್ಮನ್ನು ಈ ಕಷ್ಟದಿಂದ ಪಾರುಮಾಡು. ಅನೇಕ ತೀರ್ಥಯಾತ್ರೆಗಳನ್ನೂ, ಉಪವಾಸ ವ್ರತಗಳನ್ನೂ, ದೇವತಾರ್ಚನೆಗಳನ್ನೂ ಮಾಡಿದ ಮೇಲೆ ಹುಟ್ಟಿದ ಈ ಮಗನೊಬ್ಬನು ಬದುಕುಳಿದ. ಆದರೆ ಇವನು ಮಂದಮತಿಯಾಗಿ ಜನರ ನಿಂದೆಗೆ ಗುರಿಯಾಗಿದ್ದಾನೆ. ನನ್ನ ಗಂಡ ವೇದಶಾಸ್ತ್ರಪಾರಂಗತನಾದ ಬ್ರಾಹ್ಮಣೋತ್ತಮನಾಗಿದ್ದವನು. ಆದರೆ ನಮಗೆ ಇಂತಹ ಮೂರ್ಖ ಮಗನಾಗಿ ಹುಟ್ಟಿದ. ಹೇ ಸ್ವಾಮಿ, ಇಂತಹ ಮಗ ಜನ್ಮಜನ್ಮಾಂತರಗಳಲ್ಲೂ ಬೇಡ. ಹಾಗಾಗುವಂತೆ ಏನಾದರೂ ಉಪಾಯವನ್ನು ಸೂಚಿಸು. ಹೇ ದಯಾಸಮುದ್ರ. ದೈನ್ಯಹರ. ನಿಮ್ಮ ಚರಣಗಳಲ್ಲಿ ಬಿದ್ದಿದ್ದೇನೆ. ನನ್ನನ್ನು ಅನುಗ್ರಹಿಸು. ನನ್ನ ಸೌಭಾಗ್ಯದಿಂದಲೇ ನಿಮ್ಮ ದರ್ಶನವಾಯಿತು. ಶರಣಾಗತರನ್ನು ನಿಮ್ಮ ಚರಣಗಳೇ ರಕ್ಷಿಸುತ್ತವೆ. ಈ ಜನ್ಮದಲ್ಲಿ ಹುಟ್ಟಿ ನಾನು ಬಹು ಕಷ್ಟಗಳನ್ನು ಅನುಭವಿಸಿದೆ. ಈ ಮೂರ್ಖನಿಂದ ನನ್ನ ಕಷ್ಟಗಳು ಇನ್ನೂ ಹೆಚ್ಚಿವೆ. ಅಜಾಗಳಸ್ತನನಂತೆ ಇವನು ಇನ್ನೂ ಬದುಕಿದ್ದಾನೆ. ಇವನ ಜನ್ಮ ವ್ಯರ್ಥ. ಗುರುವೇ ನನ್ನ ಬೇಡಿಕೆಯನ್ನು ಕೇಳು. ಮುಂದಿನ ಜನ್ಮದಲ್ಲಾದರೂ ನನಗೆ ನಿನ್ನಂತಹ ಪುತ್ರ ಹುಟ್ಟುವಂತೆ ಆಶೀರ್ವದಿಸು. ಎಲ್ಲರಿಂದ ಪಾದಾಭಿವಂದನೆಗಳನ್ನು ಪಡೆಯುವಂತಹ ಪುತ್ರನಾಗಲೆಂದು ನನ್ನನ್ನು ಹರಸು” ಎಂದು ಆರ್ತಳಾಗಿ ಪ್ರಾರ್ಥಿಸುತ್ತಾ, ಶ್ರೀಪಾದರ ಚರಣಗಳಲ್ಲಿ ಬಿದ್ದಳು. “ಹೇ ಕರುಣಾಸಿಂಧು, ಮುಂದಿನ ಜನ್ಮದಲ್ಲಿ ನನಗಾಗುವ ಪುತ್ರನಿಂದ ನಮಗೆ ಜನ್ಮರಾಹಿತ್ಯವೂ, ಅವನ ಪಿತೃದೇವತೆಗಳಿಗೆ ಶಾಶ್ವತ ಸ್ವರ್ಗಲೋಕ ವಾಸವೂ, ಆಗುವಂತೆ ಅನುಗ್ರಹಿಸು” ಎಂದು ಮತ್ತೆ ಮತ್ತೆ ಬೇಡಿಕೊಂಡಳು. “ಯುವಕನಾಗಿರುವಾಗಲೇ ಅವನು ಬ್ರಹ್ಮಜ್ಞಾನಿಯಾಗಿ, ನಿಮ್ಮಂತೆ ಸರ್ವತ್ರ ಪೂಜನೀಯನಾಗುವ ಪುತ್ರನನ್ನು ಪ್ರಸಾದಿಸು” ಎಂದು ಇನ್ನೊಮ್ಮೆ ಕೇಳಿಕೊಂಡಳು. ಆ ಸ್ತ್ರೀಯ ಮಾತನ್ನು ಕೇಳಿದ ಶ್ರೀಪಾದರು, “ಈಶ್ವರಾರಾಧನೆ ಮಾಡು. ಶ್ರೀಹರಿಯಂತಹ ಪುತ್ರ ನಿನಗೆ ಜನಿಸುತ್ತಾನೆ. ಹಿಂದೆ ಗೋಪಿಕಾವ್ರತ ಮಾಡಿದ್ದರಿಂದಲೇ ಗೋಪಗೃಹದಲ್ಲಿ ಕೃಷ್ಣನು ದಯಾಕರಿಸಿದನು. ಹಾಗೆ ನೀನು ಶಿವಾರಾಧನೆ ಮಾಡುವುದರಿಂದ ನಿನಗೆ ಸುಪುತ್ರನು ಜನಿಸುತ್ತಾನೆ. ನಿನ್ನ ಮುಂದಿನ ಜನ್ಮದಲ್ಲಿ ಶಿವಪ್ರಸಾದದಿಂದ ಪ್ರಾಜ್ಞನಾದ ಪುತ್ರನಾಗುತ್ತಾನೆ” ಎಂದು ಅಭಯಕೊಟ್ಟರು.

ಶ್ರೀಪಾದರ ಆದೇಶವನ್ನು ಕೇಳಿದ ಆ ಬ್ರಾಹ್ಮಣ ಸ್ತ್ರೀ, “ಸ್ವಾಮಿ, ಗೋಪಿಕ ಯಾವ ವ್ರತವನ್ನು ಆಚರಿಸಿದಳು. ಚಂದ್ರಮೌಳಿಯನ್ನು ಹೇಗೆ ಪೂಜಿಸಿದಳು ಎಂಬುದನ್ನು ವಿವರಿಸಿ ಹೇಳಿ. ಅದರಂತೆ ನಾನು ವ್ರತಾಚರಣೆ ಮಾಡುತ್ತೇನೆ” ಎಂದು ಪ್ರಾರ್ಥಿಸಿದಳು. ಅದಕ್ಕೆ ಆ ಕೃಪಾಮೂರ್ತಿ ಶ್ರೀಪಾದರು, “ಶನಿವಾರದಂದು ಭಕ್ತಿಪುರಸ್ಸರವಾಗಿಮಾಡುತ್ತಿದ್ದ ಪೂಜೆಯನ್ನು ಗೋಪಿಕೆ ವೀಕ್ಷಿಸಿದಳು” ಎಂದು ಸ್ಕಾಂದಪುರಾಣದಲ್ಲಿ ಸ್ಪಷ್ಟವಾಗಿ ಹೇಳಿರುವ ಸಗುಣರೂಪನಾದ ಶಿವನ ಕಥೆಯನ್ನು ಅಂಬಿಕೆಗೆ ಹೇಳಿದರು. ಶ್ರೀಗುರುವಿನ ಮಾತುಗಳನ್ನು ಕೇಳಿ ಸಂತುಷ್ಟಳಾದ ಅಂಬಿಕ ಗುರುಚರಣಗಳಿಗೆ ನಮಸ್ಕರಿಸಿ, “ಹೇ ಗುರುವೇ, ರಮ್ಯವಾದ ಕಥೆಯನ್ನು ಹೇಳಿದಿರಿ. ಪ್ರದೋಷಸಮಯದಲ್ಲಿ ಈಶ್ವರಾರ್ಚನೆಯನ್ನು ನೋಡಿದ ಮಾತ್ರಕ್ಕೇ ಕೃಷ್ಣನನ್ನು ಮಗನಾಗಿ ಪಡೆದ ಗೋಪಿಯ ಜನ್ಮ ಧನ್ಯ. ಅಂತಹ ಶಿವಪೂಜಾ ವಿಶೇಷಗಳನ್ನು ತಿಳಿಸಿ” ಎಂದು ಮತ್ತೆ ಕೇಳಿಕೊಂಡಳು. ಶ್ರೀಪಾದರು ಹೇಳಿದರು. “ಅದೂ ಸ್ಕಾಂದಪುರಾಣದಲ್ಲಿರುವ ಕಥೆಯೇ! ಉಜ್ಜಯಿನಿ ಎಂಬ ಸುಂದರವಾದ ನಗರವೊಂದಿತ್ತು. ಅಲ್ಲಿ ಬಹು ಧಾರ್ಮಿಕನಾದ ಚಿತ್ರಸೇನನೆಂಬುವ ರಾಜನಿದ್ದನು. ಅವನಿಗೆ ಮಣಿಭದ್ರನೆಂಬ, ಈಶ್ವರ ಭಕ್ತಿಸಂಪನ್ನನಾದ ಮಿತ್ರನಿದ್ದನು. ಮಣಿಭದ್ರ ಈಶ್ವರ ಪೂಜಾಪರಾಯಣನು. ಶಿವನನ್ನು ಪ್ರಸನ್ನಮಾಡಿಕೊಂಡ ಅವನಿಗೆ ಈಶ್ವರ, ಚಿಂತಾಮಣಿಯೆಂಬ ರತ್ನವೊಂದನ್ನು ಕೊಟ್ಟಿದ್ದನು. ಆ ಮಣಿ, ಕೋಟಿಸೂರ್ಯಪ್ರಭೆಯಿಂದ ಮೆರೆಯುತ್ತಿತ್ತು. ಮಣಿಭದ್ರನು ಅದನ್ನು ಸದಾಕಾಲ ಧರಿಸಿರುತ್ತಿದ್ದನು. ಅ ಮಣಿಯ ತೇಜಸ್ಸು ತಗುಲಿದ ಲೋಹಗಳು ಚಿನ್ನವಾಗಿ ಪರಿವರ್ತಿತವಾಗುತ್ತಿದ್ದವು. ಆ ಮಣಿಯನ್ನು ಹಿಡಿದು ಸ್ಮರಿಸಿದ ಮಾತ್ರಕ್ಕೇ ಕೋರಿದವರಿಗೆ ಕೋರಿದ ವಸ್ತು ದೊರೆಯುತ್ತಿತ್ತು. ಆ ಮಣಿಯ ಖ್ಯಾತಿಯನ್ನು ಕೇಳಿದ ಅನೇಕ ರಾಜಮಹಾರಾಜರು ಅದನ್ನು ಪಡೆಯಬೇಕೆಂಬ ಆಸೆಯಿಂದ ಬಲಾನ್ವಿತರಾಗಿ ಉಜ್ಜಯನಿಯನ್ನು ಸುತ್ತುಗಟ್ಟಿದರು. ಒಂದು ತ್ರಯೋದಶಿ ಶನಿವಾರ ಪ್ರದೋಷದಲ್ಲಿ ರಾಜನು ಶಾಸ್ತ್ರೋಕ್ತವಾಗಿ ಶಿವಪೂಜೆಮಾಡಲು ಕುಳಿತಿದ್ದನು. ಅವನು ಪೂಜೆ ಮಾಡುತ್ತಿದ್ದ ಸಮಯದಲ್ಲಿ ಕೆಲವರು ಗೋಪಬಾಲಕರು ಅಲ್ಲಿಗೆ ಬಂದು ರಾಜನ ಪೂಜಾವಿಧಾನವನ್ನು ನೋಡಿದರು. ತಾವೂ ಲಿಂಗಪೂಜೆ ಮಾಡಬೇಕೆಂಬ ಮನಸ್ಸಿನಿಂದ, ತಮ್ಮ ತಮ್ಮ ಮನೆಗಳಿಗೆ ಹೋಗಿ ಅಲ್ಲಿ ಲಿಂಗವೊಂದನ್ನು ಮಾಡಿ, ಅದನ್ನು ಭಕ್ತಿಶ್ರದ್ಧೆಗಳಿಂದ, ತಮಗೆ ದೊರೆತ ಪತ್ರಪುಷ್ಪಗಳನ್ನು ತಂದು ಕಲ್ಪಿತೋಪಚಾರಗಳಿಂದ ಅರ್ಚಿಸಿದರು. ಅವರು ಪೂಜೆ ಮಾಡುತ್ತಿದ್ದ ಸಮಯದಲ್ಲಿ, ಗೋಪಸ್ತ್ರೀಯರು ಅಲ್ಲಿಗೆ ಬಂದು ತಮ್ಮ ಮಕ್ಕಳನ್ನು ಊಟಕ್ಕೆಂದು ಕರೆದುಕೊಂಡು ಹೋದರು. ಒಬ್ಬ ಹುಡುಗ ಮಾತ್ರ ಪೂಜೆಯಲ್ಲಿ ಬಹಳ ಆಸಕ್ತನಾಗಿ ಮನೆಗೆ ಹೋಗಲು ಇಷ್ಟಪಡಲಿಲ್ಲ. ಅವನ ತಾಯಿ ಅವನನ್ನು ಹೊಡೆಯುತ್ತಾ, “ಇದು ಊಟದ ಸಮಯ. ರಾತ್ರಿ ಕತ್ತಲಿನಲ್ಲಿ ನೀನೇನು ಮಾಡುತ್ತಿದ್ದೀಯೆ?” ಎಂದು ಕೇಳಲು, ಆ ಹುಡುಗ ಏನೂ ಉತ್ತರ ಕೊಡಲಿಲ್ಲ. ಅದರಿಂದ ಕೋಪಗೊಂಡ ಗೋಪಿಕ, ಅಲ್ಲಿ ನಡೆಯುತ್ತಿದ್ದ ಪೂಜೆಯನ್ನೆಲ್ಲಾ ಹಾಳುಮಾಡಿ ಆ ಲಿಂಗವನ್ನು ತೆಗೆದು ಬಿಸುಟು, ಮನೆಗೆ ಹೊರಟು ಹೋದಳು. ತನ್ನ ಪೂಜೆ ಹಾಳಾಗಿದ್ದಕ್ಕೆ ಬಹಳ ದುಃಖಿತನಾಗಿ, ಮನಸ್ಸಿನಲ್ಲೇ ಲಿಂಗ ಧ್ಯಾನವನ್ನು ಮಾಡುತ್ತಾ ಪ್ರಾಣ ಬಿಡಲು ಉದ್ಯುಕ್ತನಾದ ಆ ಹುಡುಗನಿಗೆ ಸದಾಶಿವನು ಪ್ರತ್ಯಕ್ಷನಾದನು.

ಆ ಪೂಜಾಸ್ಥಳವೇ ಶಿವಾಲಯವಾಯಿತು. ಅ ಲಿಂಗ ರತ್ನಮಯವಾಗಿ, ಸೂರ್ಯತೇಜಸ್ಸನ್ನು ಪಡೆದು ಪ್ರಕಾಶಿಸಿತು. ಎಚ್ಚೆತ್ತ ಬಾಲಕನನ್ನು ಪಾರ್ವತಿಪತಿಯು ಮೇಲೆತ್ತಿ, “ನಿನ್ನ ಅಭೀಷ್ಟವೇನು ಕೇಳಿಕೋ” ಎಂದನು. ಅದಕ್ಕೆ ಆ ಬಾಲಕ, “ಶಂಭೋ, ನನ್ನ ತಾಯಿ ಪೂಜೆಯನ್ನು ಹಾಳುಮಾಡಿದಳು. ಅವಳನ್ನು ಕ್ಷಮಿಸಿ ದಯೆತೋರು” ಎಂದು ಕೇಳಲು, ದಯಾಮೂರ್ತಿಯಾದ ಆ ಸಾಂಬಶಿವನು ಪ್ರೀತಿಯಿಂದ, “ಪ್ರದೋಷ ಸಮಯದಲ್ಲಿ ಅವಳು ನನ್ನ ಪೂಜೆಯನ್ನು ನೋಡಿದ್ದಾಳೆ. ಆದ್ದರಿಂದ ಅವಳು ದೇವಮಾತೆಯಾಗುತ್ತಾಳೆ. ಜನ್ಮಾಂತರದಲ್ಲಿ ಆಕೆಗೆ ವಿಷ್ಣುವು ಕುಮಾರನಾಗಿ, ಕೃಷ್ಣನಾಗಿ, ಬರುತ್ತಾನೆ” ಎಂದು ಹೇಳಿ, ಮತ್ತೆ “ಹೇ ಬಾಲಕ ನೀನು ಕೋರಿದ್ದೆಲ್ಲವೂ ನಿನಗೆ ಲಭಿಸುತ್ತದೆ. ಸರ್ವ ಸುಖಗಳನ್ನೂ ಅನುಭವಿಸುತ್ತೀಯೆ. ನಿನ್ನ ವಂಶವೆಲ್ಲವೂ ನಿನ್ನಂತೆಯೇ ಆಗುತ್ತದೆ” ಎಂದು ಆ ಬಾಲಕನಿಗೆ ವರಗಳನ್ನನುಗ್ರಹಿಸಿ ಅವನು ತನ್ನ ಚರಣಗಳಲ್ಲಿ ನಮಸ್ಕರಿಸುತ್ತಿದ್ದಂತೆಯೇ ಅಂತರ್ಧಾನನಾದನು.

ಆ ಬಾಲನು ಸ್ಥಾಪಿಸಿದ್ದ ಲಿಂಗವು ರತ್ನಮಯವಾಗಿ ಕೋಟಿಸೂರ್ಯಪ್ರಭೆಯಿಂದ ಬೆಳಗುತ್ತಿತ್ತು. ಜನರೆಲ್ಲರೂ ಅಲ್ಲಿ ಸೂರ್ಯನೇ ಉದಯಿಸಿದ್ದಾನೆ ಎಂದುಕೊಂಡರು. ಯುದ್ಧಸಿದ್ಧರಾಗಿ ಬಂದಿದ್ದ ರಾಜರೆಲ್ಲರೂ, ಸಂದೇಹಗ್ರಸ್ತರಾಗಿ, “ಇಲ್ಲಿನ ರಾಜ ಪವಿತ್ರನು. ಈ ನಗರದಲ್ಲಿ ರಾತ್ರಿವೇಳೆಯೂ ಸೂರ್ಯ ಉದಯಿಸುತ್ತಾನೆ. ಇಂತಹ ರಾಜನ ಮೇಲೆ ದ್ವೇಷದಿಂದ ಯುದ್ಧಮಾಡುವುದು ತರವಲ್ಲ. ಅವನೊಡನೆ ದ್ವೇಷ ಮಾಡಬಾರದು. ಬದಲಾಗಿ ಅವನಲ್ಲಿ ಸ್ನೇಹವಿರಬೇಕು” ಎಂದು ಯೋಚಿಸುತ್ತಾ ಅವರೆಲ್ಲರೂ ರಾಜನನ್ನು ಕಾಣಲು ಹೋಗಿ, ರಾಜನ ದರ್ಶನ ಮಾಡಲು ಬಂದೆವೆಂದು ಹೇಳಿಕಳುಹಿಸಿದರು. ಅದರಿಂದ ಸಂತೋಷಗೊಂಡ ರಾಜನು ತಾನೇ ಸ್ವತಃ ಬಂದು ಅವರೆಲ್ಲರನ್ನೂ ಒಳಕ್ಕೆ ಕರೆದೊಯ್ದನು. ಅವರು ಆ ರಾಜನನ್ನು, “ನಿಮ್ಮ ರಾಜ್ಯದಲ್ಲಿ ರಾತ್ರಿಯೂ ಸೂರ್ಯ ಹೇಗೆ ಉದಯಿಸುತ್ತಾನೆ?” ಎಂದು ಕೇಳಲಾಗಿ, ರಾಜನು ಆಶ್ಚರ್ಯಗೊಂಡು, ಅವರೊಡನೆ ರತ್ನಮಯವಾಗಿದ್ದ ಲಿಂಗವಿದ್ದ ಶಿವಾಲಯಕ್ಕೆ ಹೋದನು. ಅಲ್ಲಿದ್ದ ಹುಡುಗನಿಂದ ನಡೆದ ಕಥೆಯನ್ನೆಲ್ಲ ಕೇಳಿ, ಬಹು ಸಂತೋಷಪಟ್ಟು, ಅ ಹುಡುಗನಿಗೆ ಗೋಪಾಲಕ ಆಧಿಪತ್ಯವನ್ನೂ, ಸಂಪತ್ತನ್ನೂ ಕೊಟ್ಟರು. ನಂತರ ಅಲ್ಲಿಗೆ ಬಂದು ಸೇರಿದ್ದ ರಾಜರೆಲ್ಲರೂ ತಮ್ಮ ತಮ್ಮ ದೇಶಗಳಿಗೆ ಹಿಂತಿರುಗಿದರು. ಆ ರೀತಿಯಲ್ಲಿ ಚಿತ್ರಸೇನನಿಗೆ ಬಂದಿದ್ದ ಯುದ್ಧದ ಭಯ ನಿವಾರಣೆಯಾಯಿತು.

ಶನಿಪ್ರದೋಷ ವೇಳೆಯಲ್ಲಿ ಮಾಡಿದ ಶಿವಪೂಜಾ ಫಲವಂತಹುದು. ಶಿವಾರಾಧಕನಾದ ಆ ಬಾಲಕ ತನ್ನ ಮನೆಗೆ ಹಿಂತಿರುಗಿ, “ಪ್ರದೋಷ ಸಮಯದಲ್ಲಿ ನೀನು ಶಿವನ ಪೂಜೆಯನ್ನು ನೋಡಿದ್ದರಿಂದ ಶಿವನು ನಿನ್ನಲ್ಲಿ ಪ್ರಸನ್ನನಾದನು. ಸಂತುಷ್ಟನಾದ ಸದಾಶಿವನು, ಜನ್ಮಾಂತರದಲ್ಲಿ ನೀನು ವಿಷ್ಣುವಿಗೆ ತಾಯಿಯಾಗುತ್ತೀಯೆ, ಎಂಬ ವರವನ್ನು ನಿನಗೆ ದಯಪಾಲಿಸಿದನು. ಶಿವಪೂಜೆಗೆ ಅಡ್ಡಮಾಡಿದ ನಿನ್ನನ್ನು ಕ್ಷಮಿಸುವಂತೆ ನಾನು ಶಿವನನ್ನು ಬೇಡಿಕೊಂಡೆನು. ಆ ಪರಮೇಶ್ವರನು ನಿನ್ನನ್ನು ಕ್ಷಮಿಸಿ, ನನಗೂ ವರಗಳನ್ನು ಕೊಟ್ಟನು” ಎಂದು ತನ್ನ ತಾಯಿಗೆ ನಡೆದ ವೃತ್ತಾಂತವೆಲ್ಲವನ್ನೂ ಹೇಳಿದನು. ಈಶ್ವರನು ಪ್ರಸನ್ನನಾದರೆ ಯಾರಿಗೆ ಯಾವುದು ದುರ್ಲಭ?

“ಅಂಬಿಕ, ನಿನ್ನ ಮನಸ್ಸಿನಲ್ಲಿ ಸತ್ಪುತ್ರನಾಗಬೇಕೆಂಬ ಆಸೆಯಿದೆ. ಆದ್ದರಿಂದ ನೀನು ಪ್ರದೋಷ ಸಮಯದಲ್ಲಿ ಶಿವನ ಪೂಜೆಯನ್ನು ಶ್ರದ್ಧಾಭಕ್ತಿಗಳಿಂದ ಮಾಡು. ನಿಶ್ಚಯವಾಗಿಯೂ ನಿನಗೆ ಜನ್ಮಾಂತರದಲ್ಲಿ ನನ್ನಂತಹ ಪುತ್ರನೇ ಜನಿಸುತ್ತಾನೆ” ಎಂದು ಶ್ರೀಪಾದರು ಅಂಬಿಕೆಗೆ ಅಭಯ ಕೊಟ್ಟರು. ಆದರೂ ಅವಳ ದುಃಖ ತೀರಲಿಲ್ಲವೆಂಬುದನ್ನು ಗಮನಿಸಿದ ಭಕ್ತವತ್ಸಲನಾದ ಶ್ರೀಗುರುವು, ಅವಳ ಮಗನನ್ನು ಕರೆದು, ಅವನ ತಲೆಯಮೇಲೆ ಕೈಯಿಟ್ಟು ಅವನನ್ನು ಆಶೀರ್ವದಿಸಿದರು. ತಕ್ಷಣವೇ ಆ ಹುಡುಗ ಜ್ಞಾನಿಯಾಗಿ, ಮೂರುವೇದಗಳನ್ನು ಬಲ್ಲವನಾದನು. ಅಲ್ಲಿಯವರೆಗೂ ಮತಿಹೀನನಾಗಿದ್ದ ಅವನು ಆ ಕ್ಷಣದಲ್ಲಿ ವೇದಶಾಸ್ತ್ರಪಾರಂಗತನಾಗಿ, ವೇದಪಠನ ಮಾಡುವುದನ್ನು ಕಂಡ ಆ ತಾಯಿ, ಆಶ್ಚರ್ಯಚಕಿತಳಾದಳು.

ಅದರಿಂದಲೇ ಶ್ರೀಪಾದರು ನಿಸ್ಸಂದೇಹವಾಗಿ ಈಶ್ವರನೇ! ಲೋಕ ಕಾರ್ಯಾರ್ಥವಾಗಿ ಮಾನವರೂಪದಲ್ಲಿ ಅವತರಿಸಿದ್ದಾರೆ. ತನ್ನ ಪೂರ್ವಕೃತ ಪುಣ್ಯಫಲವಾಗಿ ಅಂಬಿಕ, ಆ ಗುರುನಾಥನನ್ನು ಕಾಣಬಲ್ಲವಳಾದೆನೆಂದು ಅತ್ಯಂತ ಸಂತೋಷಪಟ್ಟವಳಾಗಿ, ಮತ್ತೆ ಮತ್ತೆ ಶ್ರೀಗುರುವಿನ ಚರಣಗಳಲ್ಲಿ ನಮಸ್ಕರಿಸುತ್ತಾ, “ಸ್ವಾಮಿ, ನೀವೇ ಶಿವ. ಪ್ರದೋಷದಲ್ಲಿ ನಿಮ್ಮನ್ನೇ ಅರ್ಚಿಸುತ್ತೇನೆ. ನಿಮ್ಮ ಮಾತು ಎಂದಿಗೂ ಸುಳ್ಳಾಗುವುದಿಲ್ಲ. ನನಗೆ ನಿಮ್ಮಂತಹ ಮಗನೇ ಹುಟ್ಟುತ್ತಾನೆ” ಎಂದು ಅವರನ್ನು ಪೂಜಿಸಿ ತನ್ನ ಊರಿಗೆ ಹಿಂತಿರುಗಿದಳು. ಅಂದಿನಿಂದ ತಪ್ಪದೇ ಅವಳು ಶಿವಪ್ರದೋಷ ಪೂಜೆ ಮಾಡಲಾರಂಭಿಸಿದಳು. ಶ್ರೀಗುರುವಿನಿಂದ ಅನುಗ್ರಹೀತನಾದ ಅವಳ ಮಗ, ವೇದಶಾಸ್ತ್ರ, ಪುರಾಣ, ಪಾರಂಗತನಾಗಿ, ವಿನಯವಂತನಾಗಿ, ಎಲ್ಲರಿಂದಲೂ, ಎಲ್ಲೆಡೆಯಲ್ಲಿಯೂ ಪೂಜೆಗೊಳ್ಳುವವನಾಗಿ, ಸ್ವಾಮಿಯ ಅನುಗ್ರಹದಿಂದ ವಿವಾಹಿತನಾಗಿ ಪುತ್ರಪೌತ್ರಾದಿಗಳಿಂದ ಕೂಡಿ, ಸ್ವಗ್ರಾಮದಲ್ಲಿ ಸಂತೋಷದಿಂದ ಬಾಳಿದನು.

ಗುರುಕೃಪೆ ಭಕ್ತಜನರಿಗೆ ಸರ್ವಾರ್ಥಗಳನ್ನು ತಂದುಕೊಡಬಲ್ಲದು. ಕೃಪಾಸಿಂಧುವಾದ ಶ್ರೀಗುರುವು ಭಕ್ತರಿಗೆ ಸದಾನಂದಕಾರಕನಾಗಿ, ಸುಖ ಸಂಪತ್ತುಗಳನ್ನು ನೀಡುವನು” ಎಂದು ಸಿದ್ಧಮುನಿಯು ನಾಮಧಾರಕನಿಗೆ ಹೇಳಿದರು.

ಇಲ್ಲಿಗೆ ಎಂಟನೆಯ ಅಧ್ಯಾಯ ಮುಗಿಯಿತು.
[03/01 7:54 AM] S. Bhargav: ||ಶ್ರೀ ಗುರು ಚರಿತ್ರೆ – ಒಂಭತ್ತನೆಯ ಅಧ್ಯಾಯ||

ನಾಮಧಾರಕನು ಮತ್ತೆ ಪ್ರಣಾಮ ಮಾಡಿ, ಸಿದ್ಧಮುನಿಯನ್ನು, “ಶ್ರೀಪಾದರು ಕುರುವರಪುರದಲ್ಲಿದ್ದಾಗ ನಡೆದ ಕಥೆಯೊಂದನ್ನು ವಿಸ್ತಾರವಾಗಿ ಕೇಳಬೇಕೆಂದಿದ್ದೇನೆ” ಎನ್ನಲು, ಸಿದ್ಧರು ಹೇಳಿದರು. “ನಾಮಧಾರಕ, ಶ್ರೀಪಾದರು ಕುರುವರಪುರದಲ್ಲಿದ್ದಾಗ ನಡೆದ ಕಥೆಯೊಂದನ್ನು ಹೇಳುತ್ತೇನೆ. ಕೇಳು.

ಕುರುವರಪುರದಲ್ಲಿ ರಜಕನೊಬ್ಬನಿದ್ದನು. ಶ್ರೀಪಾದರ ಸೇವಕನಾಗಿದ್ದ ಅವನು ತ್ರಿಕಾಲದಲ್ಲೂ ಭಕ್ತಿಯಿಂದ ಶ್ರೀಪಾದರಿಗೆ ನಮಸ್ಕಾರ ಮಾಡುತ್ತಿದ್ದನು. ಮನೋವಾಕ್ಕಾಯಗಳಲ್ಲಿ ಶ್ರದ್ಧೆಭಕ್ತಿ ತುಂಬಿ ಅವನು ಮಾಡುತ್ತಿದ್ದ ಸೇವೆ ಬಹಳಕಾಲದಿಂದ ನಡೆಯುತ್ತಿತ್ತು. ಕೃತಾರ್ಥರಾಗಿದ್ದರೂ, ಲೋಕಾನುಗ್ರಹಕ್ಕಾಗಿ ಶ್ರೀಪಾದರು ಪ್ರತಿದಿನವೂ ಕೃಷ್ಣಾನದಿಗೆ ಸ್ನಾನಕ್ಕೆ ಹೋಗುತ್ತಿದ್ದರು. ಒಂದು ದಿನ ಶ್ರೀಪಾದರು ಸ್ನಾನಮಾಡುತ್ತಿದ್ದಾಗ ಆ ರಜಕನು ಅಲ್ಲಿ ಬಟ್ಟೆ ಒಗೆಯುತ್ತಿದ್ದನು. ಅವನಲ್ಲಿ ಪ್ರಸನ್ನರಾಗಿದ್ದ ಶ್ರೀಪಾದರು, “ಅಯ್ಯಾ ರಜಕ, ಪ್ರತಿದಿನವೂ ನೀನು ನನಗೆ ನಮಸ್ಕಾರ ಮಾಡಿಕೊಳ್ಳುತ್ತಿದ್ದೀಯೆ. ಅದರಿಂದ ನನಗೆ ಸಂತೋಷವಾಗಿದೆ. ಅದರಿಂದ ನಿನಗೆ ರಾಜ್ಯವನ್ನು ದಯಪಾಲಿಸುತ್ತಿದ್ದೇನೆ” ಎಂದರು. ಅವರ ಮಾತಿನಿಂದ ಚಕಿತನಾದ ಆ ರಜಕ, ಮುಸಿನಕ್ಕು, ಕೈಜೋಡಿಸಿ, “ಸ್ವಾಮಿ, ನೀವು ಈಶ್ವರನು. ಸತ್ಸಂಕಲ್ಪರು” ಎಂದು ಉತ್ತರ ಕೊಟ್ಟ. ಅಂದಿನಿಂದ ಅವನಿಗೆ ಸಂಸಾರ ಚಿಂತೆ ಬಿಟ್ಟುಹೋಗಿ ಶ್ರೀಪಾದರ ಸೇವೆಯಲ್ಲೇ ನಿರತನಾಗಿ ಹೋದ. ಪ್ರತಿದಿನವೂ ಗುರುವಿನ ಗುಡಿಸಿಲಿನ ಮುಂದೆ ಗುಡಿಸಿ, ನೀರು ಚೆಲ್ಲಿ, ಶುದ್ಧಿಮಾಡುತ್ತಿದ್ದನು. ಹೀಗೇ ಬಹಳಕಾಲ ಕಳೆಯಿತು.

ಒಂದು ಸಲ ವಸಂತ ಋತು, ವೈಶಾಖಮಾಸದಲ್ಲಿ, ಒಬ್ಬ ಯವನರಾಜ, ಸರ್ವಾಭರಣಾಲಂಕೃತನಾಗಿ, ತನ್ನ ಸಖೀಜನರೊಡನೆ, ನದಿಗೆ ಜಲಕ್ರೀಡೆಗೆಂದು ಬಂದನು. ಆ ರಾಜ, ನೌಕೆಯೊಂದರಲ್ಲಿ ತನ್ನ ಸ್ತ್ರೀಜನರೊಡನೆ, ವಾದ್ಯವೃಂದಗಳು ಸುಶ್ರಾವ್ಯವಾಗಿ ನುಡಿಯುತ್ತಿರಲು, ಸಂತೋಷದಿಂದ, ಉನ್ಮತ್ತನಾಗಿ ವಿಹರಿಸುತ್ತಿದ್ದನು. ಅವನನ್ನು ರಕ್ಷಿಸಲು ನದಿಯ ಎರಡೂ ತೀರಗಳಲ್ಲಿ ಅವನ ಸೈನಿಕರು ಕಾವಲು ಕಾಯುತ್ತಿದ್ದರು. ಅದನ್ನು ಕಂಡ ರಜಕ, ತಾನು ಸತತವಾಗಿ ಮಾಡಿಕೊಳ್ಳುತ್ತಿದ್ದ ಶ್ರೀಗುರುವಿನ ನಾಮಜಪವನ್ನೂ ಮರೆತು, ಆ ವಿಹಾರ ಲೀಲೆಯನ್ನು ನೋಡುತ್ತಾ ನಿಂತನು. “ಈ ಸಂಸಾರದಲ್ಲಿ ಜನಿಸಿ ಇಂತಹ ವೈಭವ ಸುಖಗಳನ್ನು ಪಡೆಯದಿದ್ದರೆ ಜನ್ಮವೇ ವ್ಯರ್ಥ. ಅಲಂಕಾರ ಶೋಭಿತರಾದ ಆ ಸ್ತ್ರೀಜನರು ಅವನ ಸೇವೆಯನ್ನು ಮಾಡುತ್ತಿದ್ದಾರೆ. ಆಹಾ! ಆ ರಾಜ ಅದೆಂತಹ ಪುಣ್ಯ ಮಾಡಿದ್ದನೋ! ಅವನು ಗುರುಸೇವೆಯನ್ನು ಹೇಗೆ ಮಾಡಿದ್ದನೋ! ಇಂತಹ ಮಹಾದೆಶೆ ಅವನಿಗೆ ಹೇಗೆ ಉಂಟಾಯಿತೋ!” ಎಂದು ಮನಸ್ಸಿನಲ್ಲಿ ಚಿಂತಿಸುತ್ತಾ, ಹಿಂದಿರುಗಿ ಬಂದು ತನ್ನ ಗುರುವನ್ನು ಕಂಡು ದಂಡ ಪ್ರಣಾಮ ಮಾಡಿ ಅವರೆದುರಿಗೆ ನಿಂತನು. ಅವನ ಮನಸ್ಸಿನ ಆಸೆಯನ್ನರಿತ ಶ್ರೀಪಾದರು, ಅವನನ್ನು ಕರೆದು,”ಏನು ಯೋಚನೆಮಾಡುತ್ತಿದ್ದೀಯೆ?” ಎಂದು ಕೇಳಿದರು. ಅದಕ್ಕೆ ಅವನು, “ಸ್ವಾಮಿ, ಆ ರಾಜನ ವೈಭವವನ್ನು ನೋಡಿದೆ. ಆ ರಾಜ ಶ್ರೀಗುರುವಿಗೆ ದಾಸನಾಗಿ, ಗುರುಸೇವೆಯನ್ನು ಏಕಾಗ್ರಚಿತ್ತನಾಗಿ ಮಾಡಿ ಇಂತಹ ಮಹಾದೆಶೆಯನ್ನು ಪಡೆದಿದ್ದಾನೆ ಎಂದು ಮನಸ್ಸಿಗೆ ತೋಚಿ, ಬಹಳ ಸಂತೋಷವಾಯಿತು” ಎಂದು ವಿನಮ್ರನಾಗಿ ಹೇಳಿದನು. ಮತ್ತೆ ಅವನೇ, “ಹೇ ಗುರುವರ, ಅವಿದ್ಯಾವಶದಿಂದ ಇಂತಹ ವಾಸನೆಗಳು ಹುಟ್ಟುತ್ತವೆ. ಈ ಇಂದ್ರಿಯ ಸುಖಗಳು ನನಗೆ ಬೇಕಾಗಿಲ್ಲ. ನಿಮ್ಮ ಪಾದಗಳಲ್ಲಿಯೇ ನನಗೆ ಹೆಚ್ಚಿನ ಸುಖವಿದೆ ಎಂದು ನನಗೆ ಈಗ ತೋರುತ್ತಿದೆ” ಎಂದು ಹೇಳಿದನು. ಅದಕ್ಕೆ ಶ್ರೀಗುರುವು, “ಜನ್ಮಾರಭ್ಯ ನೀನು ಕಷ್ಟದಲ್ಲೇ ಜೀವಿಸುತ್ತಿದ್ದೀಯೆ. ಅದರಿಂದಲೇ ನಿನಗೆ ರಾಜ್ಯಭೋಗದಲ್ಲಿ ಆಸೆಯುಂಟಾಗಿದೆ. ಇಂದ್ರಿಯಗಳು ತೃಪ್ತಿಹೊಂದದೆ ಮನಸ್ಸು ನಿರ್ಮಲವಾಗುವುದಿಲ್ಲ. ವಾಸನೆಗಳು ತೀರದಿದ್ದರೆ ಜನ್ಮಾಂತರಗಳಲ್ಲಿ ಅವು ನಿನ್ನನ್ನು ಕಷ್ಟಕ್ಕೀಡು ಮಾಡಬಲ್ಲವು” ಎಂದು ಶ್ರೀಪಾದರು ಹೇಳಿದರು. ಅದಕ್ಕೆ ಆ ರಜಕನು ಕೈಜೋಡಿಸಿ, “ಸ್ವಾಮಿ, ದಯಾನಿಧಿ, ದಯೆತೋರಿಸಿ. ನನ್ನನ್ನು ಉಪೇಕ್ಷಿಸಬೇಡಿ” ಎಂದು ಕೇಳಿಕೊಂಡನು. “ನಿನಗೆ ರಾಜ್ಯಭೋಗಗಳಲ್ಲಿ ಕಾಂಕ್ಷೆಯುಂಟಾಗಿದೆ. ಆದ್ದರಿಂದ ಇಂದ್ರಿಯ ತೃಪ್ತಿಗೋಸ್ಕರ ತ್ವರೆಯಲ್ಲೇ ನೀನು ಮ್ಲೇಚ್ಛನಾಗಿ ಜನಿಸಿ ರಾಜನಾಗುತ್ತೀಯೆ. ಆದರೆ, ಅಯ್ಯಾ ರಜಕ, ನಿನ್ನ ಆಸೆಯನ್ನು ಈ ಜನ್ಮದಲ್ಲೇ ತೀರಿಸಿಕೊಳ್ಳಲು ಇಷ್ಟಪಡುತ್ತೀಯೋ, ಇಲ್ಲ ಮತ್ತೊಂದು ಜನ್ಮದಲ್ಲಿ ಇದನ್ನು ಅನುಭವಿಸುತ್ತೀಯೋ ಹೇಳು” ಎಂದು ಕೇಳಿದರು. ಅದಕ್ಕೆ ರಜಕನು, “ಗುರುವೇ, ಈಗ ನಾನು ವೃದ್ಧನಾದೆ. ಶರೀರವು ಶಿಥಿಲವಾಗಿದೆ. ಇಂತಹ ಭೊಗಗಳನ್ನು ಈಗ ಅನುಭವಿಸಲಾರೆ. ಇನ್ನೊಂದು ಜನ್ಮದಲ್ಲಿ ಅವುಗಳನ್ನು ಅನುಭವಿಸುತ್ತೇನೆ” ಎಂದು ಬಿನ್ನವಿಸಿಕೊಂಡನು. ಅದಕ್ಕೆ ಶ್ರೀಪಾದರು, “ಹಾಗಾದರೆ ಶೀಘ್ರದಲ್ಲೇ ಮತ್ತೊಂದು ಜನ್ಮವೆತ್ತಿ ನಿಷ್ಕಂಟಕವಾಗಿ ರಾಜ್ಯಸುಖಗಳನ್ನು ಅನುಭವಿಸು” ಎಂದು ಹೇಳಿದರು. ಅದಕ್ಕೆ ಆ ರಜಕನು, “ಸ್ವಾಮಿ, ನಿಮ್ಮ ಚರಣ ವಿಯೋಗ ಸಹಿಸಲಸಾಧ್ಯವಾದದ್ದು. ನಿಮ್ಮ ಪುನರ್ದರ್ಶನವಾಗುವಂತೆ ಅನುಗ್ರಹಿಸಿ” ಎಂದು ಬೇಡಿಕೊಂಡನು. ಅದಕ್ಕೆ ಶ್ರೀಪಾದರು, “ನೀನು ವೈಡೂರ್ಯನಗರದಲ್ಲಿ ರಾಜನಾಗಿ ಜನಿಸುತ್ತೀಯೆ. ಅಂತ್ಯಕಾಲದಲ್ಲಿ ನಿನಗೆ ಮತ್ತೆ ನಮ್ಮ ದರ್ಶನವಾಗಿ, ನಿನಗೆ ಜ್ಞಾನೋದಯವಾಗುತ್ತದೆ. ಚಿಂತಿಸಬೇಡ. ನಾನು ಆಗ ನೃಸಿಂಹ ಸರಸ್ವತಿ ಎಂಬ ಹೆಸರಿನಿಂದ ಯತಿಯಾಗಿ ಅವತರಿಸಿರುತ್ತೇನೆ” ಎಂದು ಹೇಳಿದರು. ಗುರುವಿನ ಅನುಗ್ರಹ ಪಡೆದು ಹೊರಟ ರಜಕನು ಸ್ವಲ್ಪ ದೂರಹೋಗುವುದರಲ್ಲಿಯೇ ಕೆಳಗೆ ಬಿದ್ದು ಮರಣ ಹೊಂದಿದನು.

ನಾಮಧಾರಕ, ಆ ರಜಕನ ಕಥೆ ವಿಚಿತ್ರವಾದದ್ದು. ಮುಂದೆ ಪ್ರಸಂಗವಶಾತ್ ಆ ಕಥೆಯನ್ನು ವಿಸ್ತರಿಸಿ ಹೇಳುತ್ತೇನೆ. ಶ್ರಿಗುರುವು ಕುರುವರಪುರದಲ್ಲಿ ಶ್ರೀಪಾದ ಮಹಿಮೆಯನ್ನು ಲೋಕದಲ್ಲಿ ಪ್ರಸರಿಸಲೋ ಎಂಬಂತೆ ಸ್ವಲ್ಪಕಾಲ ಪ್ರತ್ಯಕ್ಷವಾಗಿ ನೆಲೆಸಿದ್ದರು. ಅವರ ಎಲ್ಲ ಮಹಿಮೆಗಳನ್ನೂ ಹೇಳಬೇಕೆಂದರೆ ಗ್ರಂಥ ಬಹಳ ದೊಡ್ಡದಾಗುತ್ತದೆ. ಅದರಿಂದ ಶ್ರೀಪಾದರ ಅವತಾರವನ್ನು ಸಂಕ್ಷೇಪವಾಗಿ ಹೇಳುತ್ತೇನೆ. ಅಮೃತದೃಷ್ಟಿಯ ಆ ಸ್ವಾಮಿ ನೆಲೆಯಾಗಿದ್ದ ಆ ಸ್ಥಾನದ ಮಹಿಮೆ ಯಾರು ತಾನೇ ವರ್ಣಿಸಬಲ್ಲರು? ಅಲ್ಲಿ ಅವರು ನೆಲಸಿದ್ದರು ಎನ್ನುವುದರಿಂದಲೇ, ಅವರ ಭಕ್ತವಾತ್ಸಲ್ಯಕ್ಕೆ ಗುರುತಾಗಿ, ಈಗಲೂ ಜನರ ಸರ್ವ ಕಾಮನೆಗಳೂ ತ್ವರೆಯಾಗಿ ನೆರವೇರುತ್ತವೆ.

ಶ್ರೀಪಾದರು ಕುರುವರಪುರದಲ್ಲಿ ಸ್ವಲ್ಪಕಾಲವಿದ್ದು, ಲೋಕಾನುಗ್ರಹದೃಷ್ಟಿಯಿಂದ ಇನ್ನೊಂದೆಡೆಯಲ್ಲಿ ಅವತರಿಸಲು ನಿರ್ಧರಿಸಿ, ಆಶ್ವಯುಜ, ಕೃಷ್ಣ ದ್ವಾದಶಿಯಂದು, ಹಸ್ತಾನಕ್ಷತ್ರದಲ್ಲಿ ಕೃಷ್ಣಾನದಿಯಲ್ಲಿ ಮುಳುಗಿ ಅಂತರ್ಧಾನರಾದರು. ಅವರು ಈಗ ಅಲ್ಲಿ ಪ್ರತ್ಯಕ್ಷವಾಗಿ ಇಲ್ಲದಿದ್ದರೂ, ಇಂದಿಗೂ ಭಕ್ತರ ವಾಂಚಿತಾರ್ಥಗಳನ್ನು ಪೂರಯಿಸುತ್ತಾ ಅದೃಶ್ಯರಾಗಿ ನೆಲಸಿದ್ದಾರೆ. ಅವರು ಅಲ್ಲಿ ಹಾಗೆ ಅಪ್ರತ್ಯಕ್ಷವಾಗಿ ಇದ್ದಾರೆ ಎಂಬುದಕ್ಕೆ ನಿದರ್ಶನಗಳು ಬಹಳವಾಗಿವೆ. ಭಕ್ತಿಯಿಂದ ಅಲ್ಲಿಗೆ ಹೋಗಿ ಅವರನ್ನು ಧ್ಯಾನಿಸಿದವರಿಗೆ ಅವರು ತಪ್ಪದೇ ಪ್ರತ್ಯಕ್ಷರಾಗುತ್ತಾರೆ. ಅದರಿಂದಲೇ ಕುರುವರಪುರ ಭೂತಲದಲ್ಲಿ ಪ್ರಸಿದ್ಧಿಯಾಗಿದೆ.

ಇಲ್ಲಿಗೆ ಒಂಭತ್ತನೆಯ ಅಧ್ಯಾಯ ಮುಗಿಯಿತು.
[04/01 5:35 AM] S. Bhargav: ||ಶ್ರೀ ಗುರು ಚರಿತ್ರೆ – ಹತ್ತನೆಯ ಅಧ್ಯಾಯ||

ನಾಮಧಾರಕನು, “ಸ್ವಾಮಿ ಕುರುವರಪುರದಲ್ಲಿ ಶ್ರೀಪಾದರು ಮತ್ತೊಂದು ಅವತಾರವೆತ್ತಲುದ್ಯುಕ್ತರಾದರು ಎಂದು ಹೇಳಿದಿರಿ. ಹಾಗಿದ್ದರೆ ಅವರು ಈಗ ಕುರವರಪುರದಲ್ಲಿ ಇಲ್ಲವೇ? ಅವರ ಮತ್ತೊಂದು ಅವತಾರವು ಎಲ್ಲಿ, ಹೇಗಾಯಿತು? ಎಂಬುದನ್ನು ವಿಸ್ತರಿಸಿ ಹೇಳುವ ಕೃಪೆಮಾಡಿ ” ಎಂದು ಕೇಳಿದನು. ಅದಕ್ಕೆ ಶ್ರೀಪಾದರು ಹೇಳಿದರು. “ಅಯ್ಯಾ, ನಾಮಧಾರಕ, ಶ್ರೀಪಾದರ ಮಹಿಮೆಯನ್ನು ಹೇಗೆ ತಾನೇ ವರ್ಣಿಸಬಲ್ಲೆ? ಅವರು ವಿಶ್ವವ್ಯಾಪಿ. ಪರಮಾತ್ಮ ಸ್ವರೂಪರು. ನಾನಾ ರೂಪ ಧರಿಸಿದ ನಾರಾಯಣನೇ ಅವರು. ಕಾರ್ಯಾರ್ಥವಾಗಿ ಬೇರೆಡೆ ಅವತರಿಸಿದರೂ, ಅವರು ಕುರುವರಪುರದಲ್ಲಿ ಗುಪ್ತವಾಗಿದ್ದುಕೊಂಡು ಭಕ್ತರ ಅಭೀಷ್ಟಗಳನ್ನು ನಡೆಸಿಕೊಡುತ್ತಿದ್ದಾರೆ. ಭಾರ್ಗವ ರಾಮನು ಚಿರಂಜೀವಿಯಾಗಿ ಈಗಲೂ ಇದ್ದಾನೆ ಎಂದು ಕೇಳಿದ್ದೀಯಲ್ಲವೆ? ಅದೇ ರೀತಿಯಲ್ಲಿ ಶ್ರೀಪಾದರು ಅಲ್ಲಿ ಈಗಲೂ ಇದ್ದಾರೆ.

ಕುರುವರಪುರ ತ್ರಿಮೂರ್ತಿ ನಿವಾಸ ಸ್ಥಾನ. ಆ ಕ್ಷೇತ್ರದರ್ಶನ ಮಾಡುವುದರಿಂದ ಮಾನವರ ಚಿಂತೆಗಳೆಲ್ಲ ತೀರಿಹೋಗುತ್ತವೆ. ಶ್ರೀಗುರುವಿನ ವಾಸಸ್ಥಾನವೇ ಕಾಮಧೇನು! ಅಂತಹ ವಾಸಸ್ಥಾನ ಮಹಿಮೆಯನ್ನು ವರ್ಣಿಸಲು ಯಾರಿಗೂ ಸಾಧ್ಯವಿಲ್ಲ. ನೀನು ಗುರುವಿನಲ್ಲಿ ಧೃಢಭಕ್ತಿಯುಳ್ಳವನು. ಋಜುಮಾರ್ಗವನ್ನು ತೋರಿಸಿ ಎಂದು ಕೇಳುತ್ತಿದ್ದೀಯೆ. ನಿನ್ನಂತಹ ಭಕ್ತರನ್ನು ಉಪೇಕ್ಷಿಸಬಾರದು. ಧೃಢಭಕ್ತಿಯುಳ್ಳವನು ಇಹದಲ್ಲಿ ಸುಖವನ್ನನುಭವಿಸಿ, ಪರದಲ್ಲೂ ಉದ್ಧರಿಸಲ್ಪಡುತ್ತಾನೆ” ಎಂದರು. ಅದಕ್ಕೆ ನಾಮಧಾರಕ, “ಸ್ವಾಮಿ, ಅವರು ಈಗಲೂ ಕುರುವರಪುರದಲ್ಲಿ ಇದ್ದಾರೆ ಎಂಬುದಕ್ಕೆ ನಿದರ್ಶನಗಳಿವೆಯೇ?” ಎಂದು ಕೇಳಿದನು.

ಅದಕ್ಕೆ ಸಿದ್ಧಮುನಿ, “ಇದಕ್ಕೊಂದು ನಿದರ್ಶನವಾಗಿ ಅಲ್ಲಿ ನಡೆದ ಘಟನೆಯೊಂದನ್ನು ಹೇಳುತ್ತೇನೆ. ಸಾವಧಾನವಾಗಿ ಕೇಳು. ಕಾಶ್ಯಪಗೋತ್ರಕ್ಕೆಸೇರಿದ, ಆಚಾರವಂತ, ಸುಶೀಲ, ವಲ್ಲಭೇಶನೆಂಬ ಬ್ರಾಹ್ಮಣೊಬ್ಬನಿದ್ದನು. ವ್ಯಾಪಾರವನ್ನು ವೃತ್ತಿಯಾಗಿ ಅವಲಂಬಿಸಿದ್ದ ಆ ಬ್ರಾಹ್ಮಣ, ಪ್ರತಿವರ್ಷವೂ ಶ್ರೀಪಾದರು ಅಂತರ್ಧಾನರಾದಮೇಲೂ, ಅವರ ದರ್ಶನಕ್ಕೆ ಕುರುವರಪುರಕ್ಕೆ ಬರುತ್ತಿದ್ದನು. ಒಂದುಸಲ ಅವನು ವ್ಯಾಪಾರಕ್ಕೆ ಹೊರಡುವ ಮುಂಚೆ, ತನ್ನ ಕಾರ್ಯ ಸಿದ್ಧಿಯಾದರೆ ಕುರುವರಪುರಕ್ಕೆ ಬಂದು ಒಂದು ಸಾವಿರ ಬ್ರಾಹ್ಮಣರಿಗೆ ಊಟವಿಡುತ್ತೇನೆ ಎಂದು ಸಂಕಲ್ಪಮಾಡಿಕೊಂಡು ವ್ಯಾಪಾರಕ್ಕಾಗಿ ಹೊರಟನು. ಶ್ರೀಪಾದಶ್ರೀವಲ್ಲಭರ ಧ್ಯಾನಮಾಡುತ್ತಾ ಅವನು ಹೋದಕಡೆಯಲ್ಲೆಲ್ಲಾ ಅವನಿಗೆ ಬಹಳ ಲಾಭವಾಯಿತು. ತನ್ನ ಊಹೆಗೂ ಮೀರಿ, ಅವನೆಂದುಕೊಂಡದ್ದಕ್ಕಿಂತ ಹೆಚ್ಚಾದ ಲಾಭ ದೊರೆಯಿತು. ಊರಿಗೆ ಹಿಂತಿರುಗಿದಮೇಲೆ, ತಾನು ಮುಂಚೆ ಸಂಕಲ್ಪಮಾಡಿಕೊಂಡಿದ್ದಂತೆ ಅವನು ಬ್ರಾಹ್ಮಣ ಭೋಜನಕ್ಕೆ ಬೇಕಾದ ಹಣವನ್ನು ತೆಗೆದುಕೊಂಡು ಕುರುವರಪುರಕ್ಕೆ ಹೊರಟನು.

ದಾರಿಯಲ್ಲಿ, ಅವನ ಹತ್ತಿರ ಬಹಳ ಹಣವಿದೆಯೆಂಬುದನ್ನು ಹೇಗೋ ಅರಿತುಕೊಂಡ ಕೆಲವರು ಕಳ್ಳರು, ತಾವೂ ಕುರುವರಪುರಕ್ಕೆ ಹೋಗುತ್ತಿದ್ದೇವೆ ಎಂದು ಹೇಳಿ, ಅವನ ಸ್ನೇಹ ಸಂಪಾದಿಸಿ, ಅವನ ಜೊತೆಗಾರರಾದರು. ಅವರ ಮಾತುಗಳನ್ನು ನಂಬಿದ ವಲ್ಲಭೇಶ ಅವರೊಡನೆ ಪ್ರಯಾಣ ಮುಂದುವರೆಸಿದ. ಸ್ವಲ್ಪ ಕಾಲ ಹಾಗೆ ಪ್ರಯಾಣಮಾಡುತ್ತಾ, ಅವನಲ್ಲಿ ನಂಬಿಕೆ ಹುಟ್ಟಿಸಿದ ಆ ಕಳ್ಳರು, ದಾರಿಯಲ್ಲಿ ನಿರ್ಜನಪ್ರದೇಶವೊಂದನ್ನು ಸೇರಿದಾಗ, ಅವನ ತಲೆಕಡಿದು ಅವನಲ್ಲಿದ್ದ ಹಣವನ್ನೆಲ್ಲಾ ಅಪಹರಿಸಿದರು. ವಲ್ಲಭೇಶ ಸಾಯುವುದಕ್ಕೆ ಮುಂಚೆ, ಶರಣ್ಯರಕ್ಷಕನೂ, ಭಕ್ತವತ್ಸಲನೂ ಆದ ಶ್ರೀಪಾದರನ್ನು ನೆನಸಿಕೊಂಡನು. ಆ ಪ್ರಭುವು ತಕ್ಷಣವೇ ಅಲ್ಲಿ ತ್ರಿಶೂಲ ಖಡ್ಗ ಧಾರಿಯಾಗಿ ಕಾಣಿಸಿಕೊಂಡು, ಆ ಕಳ್ಳರನ್ನು ಸಂಹರಿಸಿದನು. ಅವರಲ್ಲಿ ಒಬ್ಬ, ಭಕ್ತರಕ್ಷಕನಾದ ಶ್ರೀಪಾದರ ಪಾದಗಳನ್ನು ಹಿಡಿದು, ಅವರಿಗೆ ಶರಣಾಗಿ, “ಸ್ವಾಮಿ, ನಾನು ನಿರಪರಾಧಿ. ನನಗೆ ಕಳ್ಳತನವೆಂದರೇನು ಎಂದು ತಿಳಿಯದು. ಅಜ್ಞಾನದಿಂದಾಗಿ ನಾನು ಈ ಕಳ್ಳರ ಜೊತೆ ಸೇರಿದೆ. ನನ್ನನ್ನು ಮನ್ನಿಸಿ” ಎಂದು ಬೇಡಿಕೊಂಡ. ಶ್ರೀಪಾದರು ಅವನಿಗೆ ಅಭಯನೀಡಿ, “ಈ ಭಸ್ಮವನ್ನು ತೆಗೆದುಕೊಂಡು ಆ ಸತ್ತ ಬ್ರಾಹ್ಮಣನ ಮೇಲೆ ಚುಮುಕಿಸಿ, ಅವನ ಶಿರವನ್ನು ಶರೀರಕ್ಕೆ ಜೋಡಿಸು” ಎಂದು ಆಜ್ಞಾಪಿಸಿದರು. ಅವನು ಶ್ರೀಪಾದರು ಹೇಳಿದಂತೆ ಮಾಡಲು, ಅವರು ಆ ಮೃತದೇಹವನ್ನು ಒಮ್ಮೆ ತಮ್ಮ ಅಮೃತದೃಷ್ಟಿಯಿಂದ ನೋಡಿ, ಅಂತರ್ಧಾನರಾದರು. ಅವರ ದೃಷ್ಟಿ ತಾಕುತ್ತಲೇ ವಲ್ಲಭೇಶನು ಪುನರ್ಜೀವಿತನಾದನು.

ಇಷ್ಟೆಲ್ಲಾ ಆಗುವುದರಲ್ಲಿ ಸೂರ್ಯೋದಯವಾಯಿತು. ಕಳ್ಳರಲ್ಲಿ ಉಳಿದಿದ್ದವನೊಬ್ಬನು ಮಾತ್ರ ಅಲ್ಲಿದ್ದನು. ನಿದ್ರೆಯಿಂದೆದ್ದವನಂತೆ ಎಚ್ಚೆತ್ತು ಕುಳಿತ ವಲ್ಲಭೇಶನು, ಸುತ್ತಲೂ ನೋಡಿ, ಅಲ್ಲಿದ್ದ ಆ ಉಳಿದವನನ್ನು, “ಅಯ್ಯಾ, ಇವರನ್ನು ಯಾರು ಕೊಂದರು? ನೀನು ನನ್ನನ್ನೇಕೆ ಕಾಪಾಡುತ್ತಿದ್ದೀಯೆ?” ಎಂದು ಕೇಳಲು, ಆವನು “ಅಯ್ಯಾ, ಬ್ರಾಹ್ಮಣೋತ್ತಮ, ಈಗ ಇಲ್ಲೊಂದು ವಿಚಿತ್ರ ಘಟನೆ ನಡೆಯಿತು. ನಮ್ಮ ಜೊತೆಯಲ್ಲಿ ಬಂದ ಇವರೆಲ್ಲರೂ ಕಳ್ಳರು. ನಿನ್ನನ್ನು ಕೊಂದು ನಿನ್ನ ಹಣವನ್ನು ಅಪಹರಿಸಿದರು. ಅಷ್ಟರಲ್ಲಿ ಒಬ್ಬ ತಪಸ್ವಿ ಬಂದು ಆ ಕಳ್ಳರನ್ನು ತನ್ನ ತ್ರಿಶೂಲದಿಂದ ತಿವಿದು ಕೊಂದನು. ಆ ತಪಸ್ವಿ ಯಾರೋ ಗೊತ್ತಿಲ್ಲ. ಅವನು ನಿನ್ನನ್ನು ಮಂತ್ರ ಭಸ್ಮದಿಂದ ಜೀವಿಸುವಂತೆ ಮಾಡಿ, ನನ್ನನ್ನು ನಿನಗೆ ಕಾವಲಾಗಿಟ್ಟು ಹೋದನು. ಇದುವರೆಗೂ ಇಲ್ಲೇ ಇದ್ದ ಆತ ಈಗತಾನೇ ಅದೃಶ್ಯನಾದನು. ಆ ತಪಸ್ವಿ ತ್ರಿಪುರಾಂತಕನಾದ ಪರಮೇಶ್ವರನೇ ಇರಬೇಕು. ನಿನ್ನ ಪ್ರಾಣ ರಕ್ಷಣೆ ಮಾಡಲು, ಜಟಾಧಾರಿಯಾಗಿ, ಭಸ್ಮಲಿಪ್ತನಾಗಿ, ತ್ರಿಶೂಲ ಹಿಡಿದು ಬಂದನು. ನೀನು ಮಹಾಭಕ್ತನೆಂದು ತೋರುತ್ತಿದೆ” ಎಂದು ಹೇಳಿದನು.

ಅವನ ಮಾತುಗಳನ್ನು ಕೇಳಿದ ವಲ್ಲಭೇಶ, ಬಹು ಖಿನ್ನನಾಗಿ, ಶ್ರೀಪಾದರ ದರ್ಶನ ಭಾಗ್ಯ ತನಗಾಗಲಿಲ್ಲವೆಂದು ಬಹು ದುಃಖಪಟ್ಟನು. ಕಳ್ಳರು ಅಪಹರಿಸಿದ್ದ ಹಣವನ್ನೆಲ್ಲಾ ತೆಗೆದುಕೊಂಡು, ಗುರುಸ್ಥಾನವಾದ ಕುರುವರಪುರಕ್ಕೆ ಹೊರಟನು. ಅಲ್ಲಿ ವಲ್ಲಭೇಶ, ಶ್ರೀಪಾದರ ಪಾದುಕೆಗಳಿಗೆ ನಾನಾವಿಧವಾದ ಪೂಜೋಪಚಾರಗಳನ್ನು ಮಾಡಿ, ತಾನು ಸಂಕಲ್ಪಿಸಿದ್ದ ಸಾವಿರ ಬ್ರಾಹ್ಮಣರಿಗೆ ಬದಲಾಗಿ ನಾಲ್ಕು ಸಾವಿರ ಬ್ರಾಹ್ಮಣರಿಗೆ ಭೋಜನವಿತ್ತನು.

ಅದೇ ರೀತಿಯಲ್ಲಿ ಕುರುವರಪುರದಲ್ಲಿ ಅನೇಕ ಸದ್ಭಕ್ತರು ಶ್ರೀಪಾದರ ಪಾದುಕೆಗಳಿಗೆ ಪೂಜಾರ್ಚನೆಗಳನ್ನು ಮಾಡಿ ಸಿದ್ಧ ಸಂಕಲ್ಪರಾದರು. ಕುರುವರಪುರದಲ್ಲಿ ಶ್ರೀಪಾದರ ಕೀರ್ತಿ ಈ ರೀತಿಯಲ್ಲಿ ಪ್ರಖ್ಯಾತವಾಯಿತು. ನಾಮಧಾರಕ, ಅದೃಶ್ಯರೂಪದಲ್ಲಿ ಶ್ರೀಪಾದರು, ಅಲ್ಲಿ ನೆಲೆಸಿದ್ದಾರೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆ ಸರ್ವಾಂತರ್ಯಾಮಿಯಾದ ನಾರಾಯಣ, ಇಲ್ಲಿದ್ದುಕೊಂಡೂ, ಬೇರೆಡೆಯಲ್ಲಿ ಅವತರಿಸಬಲ್ಲನು. ಶ್ರೀಪಾದರು, ಕುರುವರಪುರದಲ್ಲಿ ಲೋಕರ ದೃಷ್ಟಿಗೆ ಕಾಣದೇ ಹೋದರೂ, ಗುಪ್ತರೂಪದಲ್ಲಿ ಅಲ್ಲಿ ಸರ್ವಕಾಲದಲ್ಲೂ ಇದ್ದಾರೆ. ಇರುತ್ತಾರೆ. ಅವರ ನಂತರದ ಅವತಾರವೇ ಶ್ರೀ ನೃಸಿಂಹ ಸರಸ್ವತಿ ಯತಿಗಳು”

ಇಲ್ಲಿಗೆ ಹತ್ತನೆಯ ಅಧ್ಯಾಯ ಮುಗಿಯಿತು.
[05/01 7:12 AM] S. Bhargav: ||ಶ್ರೀ ಗುರು ಚರಿತ್ರೆ – ಹನ್ನೊಂದನೆಯ ಅಧ್ಯಾಯ||

“ಸ್ವಾಮಿ, ಶ್ರೀಪಾದರು ತಮ್ಮ ಮುಂದಿನ ಅವತಾರ ಎಲ್ಲಿ ಮಾಡಿದರು? ಆ ಅವತಾರದ ವಿಶೇಷಗಳೇನು? ಆ ಅವತಾರದಲ್ಲಿ ಅವರೇನು ಮಾಡಿದರು? ಎಂಬುದನ್ನು ದಯವಿಟ್ಟು ವಿಸ್ತಾರವಾಗಿ ತಿಳಿಸಿ” ಎಂದು ನಾಮಧಾರಕನು ಕೇಳಲು, ಸಿದ್ಧಮುನಿ ಹೇಳಿದರು. “ಮಗು, ಶ್ರೀಪಾದರು, ಹಿಂದೆ, ತಾವು ಅಂಬಿಕೆಗೆ ವರಕೊಟ್ಟಿದ್ದಂತೆ ಅವಳ ಮರುಜನ್ಮದಲ್ಲಿ ಅವಳಿಗೆ ಮಗನಾಗಿ ಜನಿಸಿದರು. ಅಂಬಿಕ, ಗುರೂಪದೇಶವನ್ನು ಪಾಲಿಸುತ್ತಾ, ಶ್ರದ್ಧಾಭಕ್ತಿಗಳಿಂದ ಮಾಡಿದ ಪ್ರದೋಷಪೂಜೆಗಳಿಂದ ವಿಶ್ವೇಶ್ವರನನ್ನು ಅರ್ಚಿಸುತ್ತಾ, ಮರಣಹೊಂದಿದವಳಾಗಿ, ತನ್ನ ಮರುಜನ್ಮದಲ್ಲಿ ಉತ್ತರದೇಶದಲ್ಲಿ ಕಾರಂಜಿನಗರದಲ್ಲಿ, ವಾಜಸನೇಯ ಬ್ರಾಹ್ಮಣನೊಬ್ಬನಿಗೆ ಮಗಳಾಗಿ ಜನಿಸಿದಳು. ಅವಳ ತಂದೆ ಅವಳಿಗೆ ವಿಧ್ಯುಕ್ತವಾಗಿ ಜಾತಕರ್ಮಗಳನ್ನು ಮಾಡಿ, ಅಂಬ ಎಂಬ ಹೆಸರಿಟ್ಟನು. ತಂದೆತಾಯಿಗಳ ಪ್ರೀತಿಪಾತ್ರಳಾಗಿ ದೊಡ್ಡವಳಾದ ಆಕೆಯನ್ನು, ಅವಳ ತಂದೆ, ಶಿವಪೂಜಾನಿರತನಾದ ಮಾಧವ ಎಂಬ ಬ್ರಾಹ್ಮಣನಿಗೆ, ಶಾಸ್ತ್ರೋಕ್ತವಾಗಿ ಮದುವೆ ಮಾಡಿಕೊಟ್ಟನು. ಅವಳ ಗಂಡನ ಮನೆಯಲ್ಲಿ ಕೂಡಾ ಎಲ್ಲರೂ ಸದಾಚಾರಸಂಪನ್ನರು. ಆ ಸಾಧ್ವಿ, ತನ್ನ ಪೂರ್ವಜನ್ಮ ಸಂಸ್ಕಾರಗಳಿಂದ, ಈ ಜನ್ಮದಲ್ಲೂ ಈಶ್ವರೋಪಾಸನೆಯಲ್ಲಿ ನಿರತಳಾಗಿದ್ದಳು. ಆ ದಂಪತಿಗಳು ಪ್ರದೋಷಕಾಲದಲ್ಲಿ ಶ್ರದ್ಧಾಭಕ್ತಿಗಳಿಂದ, ನಿಯಮಬದ್ಧರಾಗಿ, ನಿರಂತರವಾಗಿ ಶಿವಪೂಜೆಯನ್ನು ಮಾಡುತ್ತಿದ್ದರು. ಶನಿತ್ರಯೋದಶಿಯ ದಿನ ಶಿವನನ್ನು ವಿಶೇಷಪೂಜೆಗಳಿಂದ ಅರ್ಚಿಸುತ್ತಿದ್ದರು.

ಹೀಗೆ ೧೬ವರ್ಷಗಳು ಕಳೆದ ಬಳಿಕ ಅಂಬ ಗರ್ಭಧರಿಸಿದಳು. ಪುಂಸವನಾದಿಗಳನ್ನು ಯಥಾಕಾಲದಲ್ಲಿ ನಡೆಸಿದ ಅವಳ ಗಂಡ ಮಾಧವ, ಅವಳ ಲಕ್ಷಣಗಳನ್ನು ಈಕ್ಷಿಸಿ, ಅವಳಿಗೆ ಜ್ಞಾನೋಪದೇಶಮಾಡಿದ. ಸೀಮಂತಕಾಲದಲ್ಲಿ ಅವಳು ಕೊಟ್ಟ ಬಾಗಿನಗಳನ್ನು ಸ್ವೀಕರಿಸಿದ ಸುವಾಸಿನಿಯರು ಆಕೆಗೆ ಆರತಿ ಮಾಡಿ ಅಶೀರ್ವದಿಸಿದರು. ಒಂಭತ್ತು ತಿಂಗಳು ತುಂಬಿದ ಅಂಬ ಒಂದು ಶುಭ ಮುಹೂರ್ತದಲ್ಲಿ, ಗಂಡು ಮಗುವೊಂದಕ್ಕೆ ಜನ್ಮ ನೀಡಿದಳು. ಮಗನನ್ನು ಕಂಡ ಮಾಧವನ ಮನಸ್ಸು ಸಂತಸಗೊಂಡಿತು. ತನ್ನ ಅವತಾರವನ್ನು ಗುರುತಿಸುವುದಕ್ಕೋ ಎಂಬಂತೆ ಆ ಮಗುವು ಹುಟ್ಟುತ್ತಲೇ ಅಳುವುದಕ್ಕೆ ಬದಲು ಪ್ರಣವೋಚ್ಚಾರಣೆ ಮಾಡಿತು. ಅದನ್ನು ಕಂಡವರೂ, ಕೇಳಿದವರೂ ಆಶ್ಚರ್ಯಪಟ್ಟರು. ಜಾತಕರ್ಮಾದಿಗಳನ್ನು ಮಾಡಿದ ಮೇಲೆ, ಜ್ಯೋತಿಷ್ಕರು ಅವನ ಜನ್ಮಕುಂಡಲಿಯನ್ನು ನೋಡಿ, “ಈ ಹುಡುಗನ ಜಾತಕ ಬಹಳ ವಿಶೇಷವಾಗಿದೆ. ಇವನು ಗುರುಗಳಿಗೆ ಗುರುವಾಗುತ್ತಾನೆ. ಇವನ ಅನುಗ್ರಹ ಪಡೆದವನು ವಿಶ್ವವಂದ್ಯನಾಗುತ್ತಾನೆ. ಇವನ ಮಾತು ವೇದವಾಕ್ಯವಾಗುತ್ತದೆ. ಇವನ ಪಾದವು ಚಿಂತಾಮಣಿ ಸದೃಶವಾದದ್ದು. ಇವನ ಇರುವಿಕೆಯಿಂದ ದೇಶದಲ್ಲಿ ಸಮೃದ್ಧಿಯಿರುತ್ತದೆ. ಅಯ್ಯಾ, ಮಾಧವ, ಇವನು ನೆಲೆಸಿರುವ ಮನೆಯಲ್ಲಿ ನವನಿಧಿಗಳೂ ಲಾಸ್ಯವಾಡುತ್ತವೆ. ಇವನು ಗೃಹಸ್ಥನಾಗುವುದಿಲ್ಲ. ತ್ರಿಭುವನ ಪೂಜಿತನಾಗಿ ತನ್ನ ದೃಷ್ಟಿಯಿಂದಲೇ ಪತಿತರನ್ನು ಪುನೀತರನ್ನಾಗಿ ಮಾಡುತ್ತಾನೆ. ಇವನು ನಿಶ್ಚಯವಾಗಿಯೂ ಪರಮೇಶ್ವರನ ಅವತಾರವೇ!” ಎಂದು ಭವಿಷ್ಯ ನುಡಿದರು. ಅವರು ಮುಂದುವರೆದು, “ಅಷ್ಟೇಅಲ್ಲ. ಈತನ ಅನುಗ್ರಹದಿಂದ ಕಲಿಕಾಲಭಯಗಳೂ ಉಪಸಂಹರಿಸಲ್ಪಡುತ್ತವೆ. ನಿಮ್ಮ ಕೋರಿಕೆಗಳೆಲ್ಲವೂ ಅಪ್ರಯತ್ನವಾಗಿ ಸಿದ್ಧಿಯಾಗುತ್ತವೆ. ಮನೆಗೆ ಬಂದಿರುವ ಈ ಸುಪುತ್ರನನ್ನು ಜಾಗ್ರತೆಯಿಂದ ಬೆಳೆಸು” ಎಂದೂ ಹೇಳಿದರು. ಅದನ್ನು ಕೇಳಿದ ಆ ಬಾಲಕನ ಮಾತಾಪಿತೃಗಳು ಅತ್ಯಂತ ಸಂತೋಷಗೊಂಡು ಅಂತಹ ಭವಿಷ್ಯವನ್ನು ನುಡಿದ ಬ್ರಾಹ್ಮಣೋತ್ತಮರಿಗೆ ಯೋಗ್ಯವಾದ ಸತ್ಕಾರವನ್ನು ಮಾಡಿದರು. ಅವರೆಲ್ಲರೂ ಆ ಮಗುವಿಗೆ ಅಶೀರ್ವಾದಗಳನ್ನು ಮಾಡಿ ಹೊರಟು ಹೋದರು.

ಆ ದಂಪತಿಗಳು, ಮಗುವನ್ನು ಬಹು ಜಾಗ್ರತೆಯಿಂದ ಕಾಪಾಡುತ್ತಿದ್ದರು. ಹುಟ್ಟುತ್ತಲೇ ಪ್ರಣವೋಚ್ಚಾರಣೆ ಮಾಡಿತು ಎಂಬ ವಾರ್ತೆ ಊರೆಲ್ಲಾ ಹರಡಿ, ಆ ಮಗುವನ್ನು ನೋಡಲು ಜನ ಗುಂಪುಗುಂಪಾಗಿ ಮಾಧವನ ಮನೆಗೆ ಬರುತ್ತಿದ್ದರು. ಜನರ ದೃಷ್ಟಿ ತಗುಲಿ ಆ ಮಗುವಿಗೆ ತೊಂದರೆಯಾಗುವುದೇನೋ ಎಂದು, ಅಂಬ ಮಗುವನ್ನು ಯಾರಿಗೂ ತೋರಿಸುತ್ತಿರಲಿಲ್ಲ. ಆದರೂ ಅಂಬ ಮಗುವಿಗೆ ಆಗಾಗ ದೃಷ್ಟಿ ನಿವಾರಣೆ ಮಾಡುತ್ತಿದ್ದಳು. ಮಂತ್ರಿಸಿದ ತಾಯಿತವನ್ನು ಕಟ್ಟಿದರು. ಪರಮಾತ್ಮನ ಅವತಾರವಾದ ಆ ಮಗುವಿಗೆ ದೃಷ್ಟಿ ತಗುಲುವುದೆಂದರೇನು? ಆದರೂ ಆ ತಾಯಿತಂದೆಗಳು ಲೋಕರೀತಿಯನ್ನನುಸರಿಸಿ ಮಗುವನ್ನು ಹಾಗೆ ಕಾಪಾಡುತ್ತಿದ್ದರು. ಸಕಾಲದಲ್ಲಿ ಮಾಧವನು ನಾಮಕರಣ ಮಾಡಿ, ಜನರ ತಾಪ ದೈನ್ಯಗಳನ್ನು ಹರಿಸುವವನಾಗಲಿ ಎಂಬ ಇಚ್ಛೆಯಿಂದ, ಆ ಮಗುವಿಗೆ “ನರಹರಿ” ಎಂದು ಹೆಸರಿಟ್ಟನು.

ಮಹಾಪ್ರೀತಿಯಿಂದ ಮಗುವನ್ನು ಸಾಕುತ್ತಿದ್ದ ಅಂಬ, ಮಗುವಿಗೆ ಸ್ತನ್ಯ ಸಾಕಾಗುವುದಿಲ್ಲವೇನೊ ಎಂದು ಸಂದೇಹಪಟ್ಟು, ದಾದಿಯೊಬ್ಬಳನ್ನು ನೇಮಿಸಬೇಕೆಂದು ಮಾಧವನನ್ನು ಕೋರಿದಳು. ಆ ಮಾತು ಕೇಳಿಸಿಕೊಂಡ ಆ ಶಿಶುವು, ತನ್ನ ಚಿನ್ನಾರಿ ಕೈಗಳಿಂದ ತಾಯಿಯ ಸ್ತನಗಳನ್ನು ಸ್ಪರ್ಶಿಸಿದನು. ಆ ಸ್ಪರ್ಶಮಾತ್ರದಿಂದಲೇ ತಾಯಿಯ ಸ್ತನಗಳಿಂದ ಹನ್ನೆರಡು ಧಾರೆಗಳಲ್ಲಿ ಮಧುವಿನಂತಹ ಕ್ಷೀರ ಸುರಿಯಲು ಆರಂಭವಾಯಿತು. ಆ ಹಾಲು ಭೂಮಿಯಮೇಲೆ ಬೀಳುತ್ತಿದ್ದಂತೆಯೇ ಆ ತಾಯಿ ದೃಷ್ಟಿದೋಷದ ಭಯದಿಂದ, ಮಗುವನ್ನು ಉಡಿಯಲ್ಲಿ ತೆಗೆದುಕೊಂಡು ಅದಕ್ಕೆ ಹಾಲೂಡಿಸಲು ಪ್ರಾರಂಭಿಸಿದಳು. ಆ ಮಗುವು ತಾಯಿಯ ತೊಡೆಯ ಮೇಲೆ ಮಲಗದೆ ಸದಾ ನೆಲದಮೇಲೆ ಮಲಗಿ ಆಡುತ್ತಿತ್ತು. ಹೀಗೆ ಬೆಳೆಯುತ್ತಿದ್ದ ಆ ಮಗು, ಮಾತನಾಡುವ ವಯಸ್ಸು ಬಂದರೂ, ಓಂಕಾರವೊಂದನ್ನು ಬಿಟ್ಟು ಮತ್ತಾವ ಮಾತನ್ನೂ ಆಡಲಿಲ್ಲ. ತಂದೆತಾಯಿಗಳು ಇದರಿಂದ ಬಹಳ ಖಿನ್ನರಾಗಿ ಎಷ್ಟೇ ಪ್ರಯತ್ನಮಾಡಿದರೂ ಆ ಮಗುವು, ಅವರ ಮಾತುಗಳನ್ನು ಕೇಳಿಸಿಕೊಂಡು ಓಂಕಾರವನ್ನು ಹೇಳುತ್ತಿತ್ತೇ ಹೊರತು, ಮತ್ತಾವ ಮಾತನ್ನೂ ಆಡುತ್ತಿರಲಿಲ್ಲ. ಇವನು ಮೂಗನಾಗಿಹೋಗುತ್ತಾನೇನೋ ಎಂಬ ಭಯ ತಂದೆತಾಯಿಗಳನ್ನು ಕಾಡಿತು. ಇದಕ್ಕೆ ಕಾರಣವೇನಿರಬಹುದೆಂದು ಜ್ಯೋತಿಷಿಗಳನ್ನು ಕೇಳಲು ಅವರು, “ಕುಲದೇವತೆಯ ಪೂಜೆ ಮಾಡಿ, ಶನಿವಾರ ಭಾನುವಾರಗಳಲ್ಲಿ ಅಶ್ವತ್ಥದ ಎಲೆಯಮೇಲೆ ಊಟ ಮಾಡಿಸಿ” ಎಂದರು. ಕೆಲವರು ಅವನನ್ನು ಹೆಸರಿಟ್ಟು ಕರೆದು ಮಾತನಾಡಿಸಿ ಎಂದರು. ಯಾರು ಏನು ಹೇಳಿದರೂ ಆ ತಂದೆತಾಯಿಗಳು ಅದನ್ನೆಲ್ಲಾ ಮಾಡುತ್ತಿದ್ದರು. ಅದೆಲ್ಲವನ್ನೂ ಕೇಳಿಸಿಕೊಂಡ ನರಹರಿ ಮಾತ್ರ ಏನೂ ಹೇಳದೆ ಪ್ರಣವೋಚ್ಚಾರ ಮಾಡುತ್ತಿದ್ದನು. ಅದನ್ನು ಕೇಳಿದವರೆಲ್ಲ ಆಶ್ಚರ್ಯಪಟ್ಟು, “ಇವನು ಕಿವುಡನಲ್ಲ. ಎಲ್ಲರೂ ಹೇಳಿದ್ದನ್ನು ಕೇಳಿಸಿಕೊಂಡರೂ ಮಾತನಾಡುತ್ತಿಲ್ಲ. ಅದಕ್ಕೆ ಕಾರಣವೇನೋ ತಿಳಿಯುತ್ತಿಲ್ಲ” ಎಂದರು. ಈ ರೀತಿಯಲ್ಲಿ ಆ ಹುಡುಗನಿಗೆ ಏಳು ವರ್ಷವಾಯಿತು. ಆದರೂ ಮಾತನಾಡದೇ ಇದ್ದ ಆ ಬಾಲಕನನ್ನು ಕಂಡು ಆ ಜನನಿಜನಕರು, “ಇದು ನಮ್ಮ ದುರದೃಷ್ಟ. ಈ ಮೂಕ ಬಾಲಕ ಉಪನಯನಯೋಗ್ಯನಾಗಿದ್ದಾನೆ. ಆದರೆ ಅವನಿಗೆ ಹೇಗೆ ಮುಂಜಿಮಾಡುವುದು?” ಎಂದು ಯೋಚಿಸುತ್ತಾ, ಬ್ರಾಹ್ಮಣ ಪಂಡಿತರನ್ನು ಕೇಳಿದರು. ಅವರು ಬ್ರಾಹ್ಮಣ ಕುಲದಲ್ಲಿ ಹುಟ್ಟಿದ್ದಾನಾದ್ದರಿಂದ ಎಂಟುವರ್ಷವಾದ ಮೇಲೆ ಮುಂಜಿಮಾಡಿ ಎಂದು ಹೇಳಿದರು. ಈ ಮೂಕ ಬಾಲಕನಿಗೆ ಬ್ರಹ್ಮೋಪದೇಶ ಮಾಡುವುದು ಹೇಗೆ ಎಂದು ಅಂಬ ಮಾಧವರು ಚಿಂತಿಸುತ್ತಿದ್ದರು. “ಮಹಾದೇವನನ್ನು ಆರಾಧಿಸಿದೆವು. ವಿಶೇಷವಾಗಿ ತ್ರಯೋದಶಿಯಂದು ಶಿವಪೂಜಾವ್ರತ ಮಾಡಿದೆವು. ಅವೆಲ್ಲವೂ ವ್ಯರ್ಥವಾಯಿತೇ? ಸುಗುಣನಾದ ಮಗನಾಗುತ್ತಾನೆಂದು ಶಿವ ಅನುಗ್ರಹಿಸಿದ್ದನು. ಆದರೆ ಈ ಬಾಲಕ ಮಾತೇ ಆಡುವುದಿಲ್ಲ. ಈಗೇನು ಮಾಡಬೇಕು? ನಾವು ಈ ಬಾಲಕನೊಬ್ಬನೇ ನಮಗೆ ಆಸರೆ ಎಂದು ನಂಬಿ, ಬೇರೆ ಏನನ್ನೂ ಕಾಣಲಿಲ್ಲ. ಇವನು ನಮ್ಮನ್ನು ವೃದ್ಧಾಪ್ಯದಲ್ಲಿ ಹೇಗೆ ರಕ್ಷಿಸುತ್ತಾನೆ? ಇವನು ಹೀಗಾಗಿರುವುದರಿಂದ ನಮ್ಮ ಕೋರಿಕೆಗಳು ತೀರಲಿಲ್ಲ. ಶನಿತ್ರಯೋದಶಿಯಂದು ಅರ್ಚಿಸಲ್ಪಟ್ಟ ಆ ಶಿವ ನಮಗೆ ಇಂತಹ ವರವನ್ನು ಕೊಟ್ಟನೇ?” ಎಂದು ನಾನಾಪ್ರಕಾರವಾಗಿ ದುಃಖಿಸುತ್ತಿದ್ದ, ಆ ತಂದೆತಾಯಿಗಳನ್ನು ಆ ಪಶುಬಾಲಕ ಸಮೀಪಿಸಿ, ಅವರನ್ನು ಸಂಜ್ಞೆಗಳಿಂದ ಸಮಾಧಾನಪಡಿಸಿದನು. ಆದರೂ ತಾಯಿಯಾದ ಅಂಬ ಇನ್ನೂ ದುಃಖಿಸುತ್ತಿರಲು, ಆ ಬಾಲಕ ಒಂದು ಲೋಹದ ತುಂಡನ್ನು ತಂದು ಅದನ್ನು ಸ್ಪರ್ಶಮಾತ್ರದಿಂದಲೇ ಚಿನ್ನವನ್ನಾಗಿ ಮಾಡಿ, ತಾಯಿಗೆ ಕೊಟ್ಟ. ಅದನ್ನು ಕಂಡ ಅಂಬ ಆಶ್ಚರ್ಯಪಟ್ಟು, ತನ್ನ ಗಂಡನನ್ನು ಕರೆದು ಆ ಚಿನ್ನದ ತುಂಡನ್ನು ತೋರಿಸಿದಳು. ಅವರು ಇನ್ನೊಂದು ಚೂರು ಲೋಹವನ್ನು ತಂದು ಅವನ ಕೈಲಿಟ್ಟರು. ಅದು ಕೂಡಾ ಚಿನ್ನವಾಯಿತು. ಹೀಗೆ ಮನೆಯಲ್ಲಿ ಸ್ವರ್ಣಾಭಿವೃದ್ಧಿಯನ್ನು ಕಂಡ ಅವರು, ಆ ಬಾಲಕ ಅವತಾರಪುರುಷನೆಂದು ಅವನಲ್ಲಿ ಹೆಚ್ಚಿನ ವಿಶ್ವಾಸ ತೋರಿದರು. ಆ ಬಾಲಕನನ್ನು ತಬ್ಬಿಕೊಂಡು ಅಂಬ, “ತಂದೆ, ನರಹರಿ, ನೀನು ದಯಾಳು. ಕುಲದೀಪಕ. ನಮಗೆ ಸಕಲ ಸುಖಗಳನ್ನೂ ಕೊಟ್ಟಿದ್ದೀಯೆ. ಆದರೂ ನಿನ್ನ ಈ ಮೌನಕ್ಕೆ ಕಾರಣವೇನು? ಮಾಯಾಮೋಹಿತರಾಗಿ, ಅಜ್ಞಾನವೆಂಬ ಕತ್ತಲೆಯಲ್ಲಿ ಬಿದ್ದಿರುವ ನಮ್ಮ ಕೋರಿಕೆಯನ್ನು ಮನ್ನಿಸಿ, ನಿನ್ನ ಅಮೃತತುಲ್ಯವಾದ ಮಾತುಗಳಿಂದ ನಮ್ಮನ್ನು ಸಂತೋಷಗೊಳಿಸು” ಎಂದು ಪ್ರಾರ್ಥಿಸಿದಳು. ಅದಕ್ಕೆ ನರಹರಿ, “ಮೌಂಜಿ ಬಂಧನ ಉಪವೀತಧಾರಣೆಗಳಾದ ಮೇಲೆ ನಿನ್ನೊಡನೆಯೇ ಮೊದಲ ಮಾತು ಆಡುತ್ತೇನೆ” ಎಂದು ತಾಯಿಗೆ ಸಂಜ್ಞಾಪೂರ್ವಕವಾಗಿ ತಿಳಿಸಿದನು.

ತಕ್ಷಣವೇ ಮಾಧವ ವಿದ್ವಾಂಸರಾದ ಜ್ಯೋತಿಷ್ಕರನ್ನು ಕರೆಸಿ, ಆ ಹುಡುಗನ ಉಪನಯನ ಮುಹೂರ್ತವನ್ನು ನಿಶ್ಚಯಮಾಡಿದನು. ಎಲ್ಲ ಏರ್ಪಾಡುಗಳನ್ನೂ ಮಾಡಿಕೊಂಡು, ಬಂಧುಬಾಂಧವರನ್ನೆಲ್ಲಾ ಆಹ್ವಾನಿಸಿ, ಬ್ರಾಹ್ಮಣೋತ್ತರಮನ್ನು ಕರೆಸಿ, ಮಂಟಪಾದಿಗಳನ್ನು ನಿರ್ಮಿಸಿ, ಎಲ್ಲವನ್ನೂ ಸಿದ್ಧಪಡಿಸಿದನು. ನೆಂಟರಿಷ್ಟರೆಲ್ಲರೂ ಸೇರಿದರು. ಮಾಡಿದ್ದ ಏರ್ಪಾಡುಗಳನ್ನು ಕಂಡು ಎಲ್ಲರೂ ಸಂತೋಷಗೊಂಡರು. ಅಷ್ಟೊಂದು ಅದ್ಧೂರಿಯಾಗಿ ಎಲ್ಲವನ್ನೂ ಮಾಡುತ್ತಿರುವ ಮಾಧವನನ್ನು ಕಂಡ ಆ ಊರಿನ ಜನ, “ಹುಡುಗ ಮೂಕನಲ್ಲವೇ? ಅವನ ತಂದೆ ಭ್ರಾಂತಿಯಿಂದ ಇಷ್ಟೆಲ್ಲಾ ಖರ್ಚು ವ್ಯರ್ಥವಾಗಿ ಮಾಡುತ್ತಿದ್ದಾನೆ. ಅವನ ಮಗ ಬ್ರಹ್ಮೋಪದೇಶವನ್ನು ಹೇಗೆ ಪಡೆಯಬಲ್ಲ? ಅವನ ತಂದೆ ಅವನಿಗೆ ಸಾವಿತ್ರಿ ಮಂತ್ರವನ್ನು ಹೇಗೆ ಉಪದೇಶಿಸಬಲ್ಲ?” ಎಂದು ನಾನಾವಿಧವಾಗಿ ಮಾತನಾಡಿಕೊಳ್ಳುತ್ತಿದ್ದರು. ಕೆಲವರು, “ಅವನಿಗೆ ಮಂತ್ರೋಪದೇಶವಾದರೆಷ್ಟು ಬಿಟ್ಟರೆಷ್ಟು? ಅದರಿಂದ ನಮಗೇನಾಗಬೇಕಾಗಿದೆ? ನಮಗೆ ಮೃಷ್ಟಾನ್ನ ಭೋಜನ, ದಾನ ದಕ್ಷಿಣೆಗಳು ಹೇರಳವಾಗಿ ಸಿಕ್ಕುವುದಲ್ಲವೇ? ಅಷ್ಟೇ ಸಾಕು” ಎನ್ನುತ್ತಿದ್ದರು. ಹೀಗೆ ಅಲ್ಲಿ ಸೇರಿದ್ದ ಅನೇಕರು ಅನೇಕ ರೀತಿಯಾಗಿ ಮಾತನಾಡಿಕೊಳ್ಳುತ್ತಿದ್ದರು. ಆದರೆ, “ಈ ಬಾಲಕ ದೈವಾಂಶಸಂಭೂತನು” ಎಂಬ ಸದ್ಬುದ್ಧಿಯಿಂದ ಅವನ ತಂದೆ ತಾಯಿಗಳು, ಶಾಸ್ತ್ರೋಕ್ತವಾಗಿ ಎಲ್ಲ ವಿಧಿಗಳನ್ನೂ ಮುಗಿಸಿದರು. ನಂತರ, ಅವನ ತಂದೆ ವಟುವನ್ನು, ತಾಯಿಯೊಡನೆ ಭೋಜನ ಮಾಡೆಂದು ಹೇಳಿದನು. ತಂದೆಯ ಮಾತಿನಂತೆ, ವಟುವು ತಾಯಿಯೊಡನೆ ಭೋಜನ ಮುಗಿಸಿ, ತಾಯಿಯ ಆಣತಿಯಂತೆ ಮೌಂಜಿಧಾರಣೆ ಮಾಡಿ, ಮತ್ತೆ ತಂದೆಯ ಬಳಿಗೆ ಬಳಿಗೆ ಬಂದನು. ಸುಮುಹೂರ್ತದಲ್ಲಿ ಯಥಾವಿಧಿಯಾಗಿ ಉಪವೀತ ಧಾರಣೆ ಮಾಡಿ, ಮಂತ್ರೋಪದೇಶದ ಮೂಲಕ ಮೌಂಜಿಯನ್ನು ಕಟಿಯಲ್ಲಿ ಬಂಧಿಸಿದನು. ವಟುವು ಗಾಯತ್ರಿ ಉಪದೇಶವನ್ನು ಪಡೆದರೂ, ಮಂತ್ರವನ್ನು ಮೌನವಾಗಿ ಜಪಿಸಿದನೇ ಹೊರತು, ಒಂದು ಮಾತೂ ಅವನ ಬಾಯಿಂದ ಈಚೆಗೆ ಬರಲಿಲ್ಲ.

ತಾಯಿ, ಭಿಕ್ಷೆಯೊಡನೆ ಬಂದು, ಮಗನ ಮಾತುಗಳನ್ನು ಕೇಳುವ ಆಸೆಯಿಂದ, ಅವನನ್ನು ಅಶೀರ್ವದಿಸಿ, ಮೊದಲ ಭಿಕ್ಷೆಯನ್ನು ನೀಡಿದಳು. ಅದನ್ನು ಸ್ವೀಕರಿಸಿ, ವಟುವು, “ಅಗ್ನಿಮೀಳೇ….ಎಂದು ಪ್ರಾರಂಭಿಸಿ, ಋಗ್ವೇದವನ್ನು ಹೇಳಿದನು. ಮತ್ತೆ ತಾಯಿ ಎರಡನೆಯ ಭಿಕ್ಷೆ ನೀಡುತ್ತಲೂ, ಅವನು “ಇಷೇತ್ವಾ…..ಎಂದು ಪ್ರಾರಂಭಿಸಿ, ಯಜುರ್ವೇದವನ್ನು ಹೇಳಿದನು. ಅದನ್ನು ಕೇಳಿ ಜನರೆಲ್ಲಾ ಬೆರಗಾಗಿಹೋದರು. ತಾಯಿ ಮೂರನೆಯ ಭಿಕ್ಷೆ ಕೊಡಲು, ಅವನು “ಅಗ್ನ ಆಯಾಹಿ….ಎಂದು ಪ್ರಾರಂಭಿಸಿ ವೇದಪ್ರವರ್ತಕನಂತೆ ಸಾಮವೇದ ಗಾನಮಾಡಿದನು. ಆ ಸಮಾರಂಭದಲ್ಲಿ ನೆರೆದಿದ್ದ ಜನರೆಲ್ಲಾ, ಮೂಕವಿಸ್ಮಿತರಾಗಿ, “ಈ ಮೂಗ ಹೇಗೆ ವೇದಗಳನ್ನು ಹೇಳಿದನು?” ಎಂದು ದಂಗಾಗಿ ಹೋದರು.”ಇವನು ನಿಜವಾಗಿಯೂ ಪರಮಾತ್ಮನೇ! ದೇವರ ಅವತಾರವೇ! ನರನಲ್ಲ. ಜಗದ್ಗುರುವು” ಎಂದು ಭಾವಿಸಿ, ಎಲ್ಲರೂ ಅವನಿಗೆ ನಮಸ್ಕರಿಸಿದರು. ಮಾಧವನು ಬಹಳ ಸಂತುಷ್ಟನಾದನು.

ವಟುವಾದ ನರಹರಿ ತಾಯಿಯ ಬಳಿಗೆ ಹೋಗಿ, ’ಅಮ್ಮ, ನೀನು ನನಗೆ ಭಿಕ್ಷೆಯನ್ನು ಗ್ರಹಿಸು ಎಂದು ಆಜ್ಞೆ ಕೊಟ್ಟೆ. ನಿನ್ನಮಾತು ಅಸತ್ಯವಾಗಬಾರದು. ನನಗೆ ಅನುಮತಿ ಕೊಡು. ನಾನು ಭಿಕ್ಷುವಾಗಿ, ಬ್ರಹ್ಮಚಾರಿಯಾಗಿ, ಗೃಹಸ್ಥರ ಮನೆಗಳಲ್ಲಿ ಭಿಕ್ಷೆಯೆತ್ತುತ್ತಾ, ವೇದಾಂತನಿರತನಾಗಿ ಲೋಕಾನುಗ್ರಹಕ್ಕಾಗಿ ಲೋಕಸಂಚಾರ ಮಾಡುತ್ತೇನೆ” ಎಂದನು. ಅದನ್ನು ಕೇಳಿದ ಅಂಬ, ದುಃಖದಿಂದ ಮೂರ್ಛಿತಳಾಗಿ ಕೆಳಗೆ ಬಿದ್ದಳು. ಒಂದುಕ್ಷಣಕಾಲ ಮೃತಪ್ರಾಯಳಾಗಿ ಕಂಡ ಅವಳು ಎದ್ದು, ಬಹು ದುಃಖದಿಂದ ಕಣ್ಣೀರು ಸುರಿಸುತ್ತಾ, ಮಗನನ್ನು ಮತ್ತೆ ಮತ್ತೆ ನೋಡುತ್ತಾ, “ಮಗು, ನೀನು ವೃದ್ಧಾಪ್ಯದಲ್ಲಿ ನಮ್ಮನ್ನು ರಕ್ಷಿಸುತ್ತೀಯೆ ಎಂದು ಬಹಳ ಆಸೆಯಿಂದಿದ್ದ ನಮ್ಮ ಆಸೆಯಲ್ಲ ಚೂರುಚೂರಾಗಿ ಹೋಯಿತು. ನೀನು ನಿನ್ನ ಶೈಶವದಲ್ಲಿ ಮೌನಿಯಾಗಿ ಒಂದು ಮಾತೂ ಆಡಲಿಲ್ಲ. ಇದುವರೆಗೂ ನಿನ್ನ ಮಾತುಗಳನ್ನೇ ಕೇಳಿರಲಿಲ್ಲ. ಈಗ ಮಾತನಾಡಿ ನಮಗೆ ಅಮೃತವನ್ನು ಕುಡಿಸಿದೆ. ನನ್ನ ಈಶ್ವರಪೂಜೆಯೆಲ್ಲಾ ಸಫಲವಾಯಿತು ಎಂದುಕೊಳ್ಳುತ್ತಿರುವಾಗಲೇ ನಿನ್ನಿಂದ ನಾನು ಕೇಳುತ್ತಿರುವುದೇನು?” ಎಂದು ಮುಂತಾಗಿ ಪ್ರಲಾಪಿಸುತ್ತಾ ಕೇಳಿದಳು.

ಆಗ ನರಹರಿ ತನ್ನ ತಾಯಿಯನ್ನು ಸಮಾಧಾನಗೊಳಿಸಲು, “ಅಮ್ಮಾ, ನನ್ನ ಮಾತು ಕೇಳು. ಬ್ರಹ್ಮಜ್ಞಾನಿಯಾದ ನೀನು ಹೀಗೆ ದುಃಖಿಸಬಾರದು. ಧರ್ಮ ರಕ್ಷಣೆಗಾಗಿ ನಾನು ಭೂಮಿಯಲ್ಲಿ ಅವತರಿಸಿದ್ದೇನೆ. ನಿನಗೆ ಇನ್ನೂ ನಾಲ್ಕು ಪುತ್ರರು ಜನಿಸುತ್ತಾರೆ. ಅವರೆಲ್ಲರೂ ನಿಮ್ಮ ಸೇವೆಯಲ್ಲಿರುತ್ತಾರೆ. ಹಿಂದಿನ ಜನ್ಮದಲ್ಲಿ ನೀನು ಶ್ರದ್ಧಾಭಕ್ತಿಗಳಿಂದ ಶಿವಪೂಜೆಯನ್ನು ಮಾಡಿದ್ದೀಯೆ” ಎಂದು ಆಕೆಯ ತಲೆಯಮೇಲೆ ಕೈಯಿಟ್ಟನು. ಆ ಕರಸ್ಪರ್ಶದಿಂದ ಆಕೆಗೆ ಪೂರ್ವಜನ್ಮ ಸ್ಮೃತಿಗೆ ಬಂದು, ಆ ಜನ್ಮದಲ್ಲಿ ನಡೆದ ವಿಷಯವೆಲ್ಲಾ ಗೋಚರವಾಯಿತು. ತನ್ನ ಮಗನೇ ಹಿಂದಿನ ಶ್ರೀಪಾದ ಶ್ರೀವಲ್ಲಭರೆಂದು ಆಕೆ ಗುರುತಿಸಿ, ಅವನ ಪಾದಾಭಿವಂದನೆ ಮಾಡಿದಳು. ನರಹರಿ ತಾಯಿಯನ್ನು ಹಿಡಿದು ಮೇಲಕ್ಕೆಬ್ಬಿಸಿ, “ಅಮ್ಮಾ ನನ್ನ ಮಾತು ಕೇಳು. ಈ ವಿಷಯವನ್ನು ರಹಸ್ಯವಾಗಿಡು. ನಾನು ಈ ಸಂಸಾರದಲ್ಲಿ ಇರುವುದಿಲ್ಲ. ನನ್ನನ್ನು ಸನ್ಯಾಸಿಯೆಂದು ತಿಳಿದುಕೋ. ಆದ್ದರಿಂದ ನಾನು ತೀರ್ಥಯಾತ್ರೆಗೆ ಹೋಗಲು ಅನುಮತಿ ಕೊಡು” ಎಂದು ಹೇಳಿದನು.

ಸ್ವಲ್ಪಕಾಲ ಮೌನವಾಗಿದ್ದ ಅಂಬ, “ನೀನು ನಮ್ಮನ್ನು ಬಿಟ್ಟು ಹೊರಟುಹೋದರೆ ನಾನು ಮಗನಿಲ್ಲದವಳಾಗುತ್ತೇನೆ. ಮಗನಿಲ್ಲದೆ ನಾನು ಹೇಗೆ ಜೀವಿಸಲಿ? ನಿನಗಿದು ಧರ್ಮವಲ್ಲ. ಬಾಲ್ಯದಿಂದಲೇ ತಪೋವೃತ್ತಿ ಧರ್ಮವೆಂದು ಹೇಗೆ ಹೇಳುತ್ತೀಯೆ? ಗುರುಕುಲದಲ್ಲಿ ಬ್ರಹ್ಮಚರ್ಯೆ ಮಾಡುವುದೇ ನಿನ್ನ ಧರ್ಮ. ಹನ್ನೆರಡು ವರ್ಷ ಬ್ರಹ್ಮಚಾರಿಯಾಗಿದ್ದು ಆ ನಂತರ ಗೃಹಸ್ಥನಾಗಿ, ಪುಣ್ಯಕಾರ್ಯಗಳನ್ನೆಸಗಬೇಕು. ಗೃಹಸ್ಥಾಶ್ರಮವು ಬಹಳ ಮುಖ್ಯವಾದದ್ದು. ಅದರ ಆಚರಣೆಯಿಂದಲೇ ನರನು ಮುಂದಿನ ಆಶ್ರಮಗಳಿಗೆ ಸಮರ್ಥನಾಗುತ್ತಾನೆ. ಅದಾದನಂತರ ಈಷಣತ್ರಯಗಳನ್ನು ಬಿಟ್ಟು ಪರಿವ್ರಾಜಕನಾಗಬೇಕು. ಅದು ಧರ್ಮ. ಋಷಿಋಣ ತೀರಿಸಲು ವೇದಾಧ್ಯಯನ. ಆಮೇಲೆ ಅನುರೂಪಳಾದ ಕನ್ಯೆಯನ್ನು ವಿವಾಹವಾಗಿ. ಗೃಹಸ್ಥನಾಗಿ, ಪುತ್ರವಂತನಾಗಿ, ಪಿತೃಋಣವನ್ನು ತೀರಿಸಿ, ಯಜ್ಞ ಯಾಗಾದಿಗಳನ್ನು ಮಾಡಿ ಸನ್ಯಾಸಿಯಾಗಬೇಕು. ಬುದ್ಧಿವಂತನಾದವನು ಹಾಗೆ ಮಾಡದೆ ಮೊದಲೇ ಸನ್ಯಾಸಿಯಾದರೆ ಪತನವಾಗುತ್ತಾನೆ. ಇಂದ್ರಿಯವಾಸನೆಗಳು ತೃಪ್ತಿಗೊಂಡಮೇಲೆ ಸನ್ಯಾಸಿಯಾಗಬೇಕು” ಎಂದು ಹೇಳಿದಳು. ಅದನ್ನು ಕೇಳಿ ಶ್ರೀಗುರುವು ನಗುತ್ತಾ ಅವಳಿಗೆ ತತ್ತ್ವೋಪದೇಶ ಮಾಡಿದನು.

ಇಲ್ಲಿಗೆ ಹನ್ನೊಂದನೆಯ ಅಧ್ಯಾಯ ಮುಗಿಯಿತು.
[06/01 6:29 AM] S. Bhargav: ||ಶ್ರೀ ಗುರು ಚರಿತ್ರೆ – ಹನ್ನೆರಡನೆಯ ಅಧ್ಯಾಯ||

“ನಾಮಧಾರಕ, ಶ್ರೀಗುರುವು ತನ್ನ ತಾಯಿಗೆ ತಿಳಿಸಿದ ತತ್ತ್ವವನ್ನು ಹೇಳುತ್ತೇನೆ ಕೇಳು. ಶ್ರೀ ಗುರುವು ಹೇಳಿದರು.”ಅಮ್ಮಾ, ನೀನು ಹೀಗೆ ಆಣತಿ ಮಾಡುತ್ತಿದ್ದೀಯೆ. ಆದರೆ ದೇಹವು ಅನಿತ್ಯವಾದುದು. ಈ ಭೌತಿಕ ಶರೀರದ ಜೀವಿತಕಾಲ ಕ್ಷಣಭಂಗುರವಾದದ್ದು. ವೈಭವಗಳು ಶಾಶ್ವತವಲ್ಲ. ಮೃತ್ಯುವು ನಿತ್ಯವೂ ಹತ್ತಿರವಾಗುತ್ತಲೇ ಇದೆ. ಎಲ್ಲಿಯಾದರೂ ಯಾರಾದರೂ ಚಿರಂಜೀವಿಯಾಗಿದ್ದರೆ ಅವನಿಗೆ ನಿನ್ನ ಉಪದೇಶವನ್ನು ಕೊಡು. ಹಗಲು ರಾತ್ರಿಗಳೆನ್ನದೆ ಆಯುಸ್ಸು ಕ್ಷೀಣವಾಗುತ್ತಲೇ ಇರುತ್ತದೆ. ಅದರಿಂದಲೇ ಸಣ್ಣವನಾಗಿರುವಾಗಲಿಂದಲೇ ಧರ್ಮಾಚರಣೆಯನ್ನು ಮಾಡಲುಪಕ್ರಮಿಸಬೇಕು. ಸ್ವಲ್ಪವೇ ಆದ ನೀರಿನಲ್ಲಿ ಮೀನುಗಳು ಕಷ್ಟಪಡುವಂತೆ, ಮಾನವನು ಅಲ್ಪಾಯುಷಿಯಾಗಿ ಕಷ್ಟಪಡುತ್ತಿರುತ್ತಾನೆ. ಆದ್ದರಿಂದ ಮನುಷ್ಯನಿಗೆ ಧರ್ಮ ಸಂಗ್ರಹಣವು ಆದ್ಯ ಕರ್ತವ್ಯ. ಸೂರ್ಯರಥವು ಧಾವಿಸುತ್ತಾ, ಒಂದು ನಿಮಿಷಕಾಲದಲ್ಲಿ ನೂರಾರು ಯೋಜನೆಗಳನ್ನು ದಾಟುವಂತೆ, ಮನುಷ್ಯನ ಆಯುಸ್ಸು ಧಾವಿಸುತ್ತಿರುತ್ತದೆ. ಆದ್ದರಿಂದ ಕ್ಷಣಭಂಗುರವಾದ ಈ ದೇಹ ಇನ್ನೂ ಧೃಢವಾಗಿರುವಾಗಲೇ ಪುಣ್ಯವನ್ನು ಆಚರಿಸಬೇಕು. ವೃಕ್ಷದ ಕೊನೆಯಲ್ಲಿರುವ ಎಲೆಯಮೇಲೆ ಬಿದ್ದ ನೀರಿನ ಹನಿ ಜಾರಿ ಕೆಳಗೆ ಬೀಳುವಂತೆ, ಈ ಶರೀರವು ಪತನವಾಗುವುದು. ಆಕಸ್ಮಿಕವಾಗಿ ಮರಣವು ಆಸನ್ನವಾಗುತ್ತದೆ. ಬಾಲ್ಯ, ಯೌವನ, ವೃದ್ಧಾಪ್ಯಗಳಲ್ಲಿ ಎಂದಾದರೂ ಮರಣ ಉಂಟಾಗಿ, ಈ ಶರೀರ ನಾಶವಾಗಬಹುದು. ಅದರಿಂದಲೇ ಈ ನಶ್ವರವಾದ ಶರೀರವನ್ನು ನಂಬಬಾರದು. ಮೃತ್ಯುವು ಮಾನವನ ಬೆನ್ನಂಟಿಯೇ ಇರುತ್ತದೆ. ಅದರಿಂದ ಧರ್ಮವನ್ನು ಸಣ್ಣತನದಿಂದಲೇ ಆಚರಿಸಬೇಕು. ಒಣಗಿದ ಎಲೆ ಗಿಡದಿಂದ ಉದುರಿಹೋಗುವಂತೆ ಈ ದೇಹವು ಎಂದು ಬಿದ್ದುಹೋಗುವುದೋ ತಿಳಿಯದು. ಸಾಲವನ್ನು ಕೊಟ್ಟವನು ಸದಾ ಹೇಗೆ ದಿನಗಳನ್ನೆಣಿಸುತ್ತಿರುತ್ತಾನೋ ಹಾಗೆ ಮೃತ್ಯುವು ಮಾನವನ ಆಯುಸ್ಸಿನ ಲೆಕ್ಕ ಮಾಡುತ್ತಿರುತ್ತಾನೆ. ನದಿಗಳು ನೀರು ಹೊತ್ತು ಸಮುದ್ರವನ್ನು ಸೇರಿದಮೇಲೆ ಹೇಗೆ ಹಿಂದಿರುಗಲಾರವೋ, ಹಾಗೆ ಮನುಷ್ಯನ ಆಯುಸ್ಸು ಹಿಂತಿರುಗಿ ಬರುವುದಿಲ್ಲ. ಆಯುಸ್ಸನ್ನು ಹಿಂದೆ ಹಾಕಿ, ಹಗಲು ರಾತ್ರಿಗಳು ಮುಂದುಮುಂದಕ್ಕೆ ಓಡುತ್ತಿರುತ್ತವೆಯೇ ಹೊರತು, ಹಿಂತಿರುಗಿ ನೋಡುವುದಿಲ್ಲ. ಆದ್ದರಿಂದ ಜೀವಿತಕಾಲದಲ್ಲಿ ಪುಣ್ಯವನ್ನಾಚರಿಸದವನು ಪಶು ಸಮಾನನೇ! ಪುಣ್ಯಮಾಡದ ದಿನಗಳು ವ್ಯರ್ಥವಾದಂತೆಯೇ! ಯಮನಿಗೆ ದಯೆಯಿಲ್ಲ. ಆದ್ದರಿಂದ, ಈಗಲೇ, ಇಲ್ಲೇ, ಪುಣ್ಯಮಾಡಬೇಕು. ಹೆಂಡತಿ, ಮಕ್ಕಳು, ಮನೆ, ಸಂಪತ್ತು ಆಯುಸ್ಸು ಎಲ್ಲವೂ ಶಾಶ್ವತ ಎಂದು ನಂಬಿದವನು ಪಶುವಿಗೆ ಸಮಾನನು! ದುಸ್ತರವಾದ ಈ ಸಂಸಾರದಲ್ಲಿ ಮುದಿತನ, ಮೊಸಳೆಗಳಂತೆ ಕಾದು ಕೂತಿದೆ. ಅದರಿಂದ ಯೌವನದಲ್ಲಿಯೇ ಪುಣ್ಯಾರ್ಜನೆಯ ಕಾರ್ಯಗಳನ್ನು ಮಾಡಬೇಕು”.

ಹೀಗೆ ಶ್ರೀಗುರುವು ತಾಯಿಗೆ ಉಪದೇಶಕೊಟ್ಟು, “ಅಮ್ಮಾ, ನನ್ನನ್ನು ತಡೆಯಬೇಡ. ಶಠ, ಅಮರ್ತ್ಯ, ಇಲ್ಲವೇ ಯಮನ ಶಿಷ್ಯನಾದವನು ಮಾತ್ರವೇ ಧರ್ಮಾಚರಣೆಯನ್ನು ಮುಂದೆಂದಾದರೂ ಮಾಡೋಣ ಎಂದು ಆಲಸ್ಯ ಮಾಡುವವನು. ಈ ಸಂಸಾರ ಸಾರವಿಲ್ಲದ್ದು. ಜೀವನವೆಲ್ಲಾ ಸ್ವಪ್ನದಂತೆ. ಮಾಲತಿ ಪುಷ್ಪ ಬಹಳ ಬೇಗ ಬಾಡಿಹೋಗುವಂತೆ, ಈ ಜನ್ಮವೂ ಬಹು ಬೇಗ ಅಂತರಿಸಿಹೋಗುವುದು. ಮಿಂಚು ಕ್ಷಣಕಾಲ ಮೆರೆದು ಮರೆಯಾಗುವಂತೆ, ನೋಡುತ್ತಿರುವಂತೆಯೇ ಮರೆಯಾಗಿ ಹೋಗುವ ಈ ದೇಹವೂ ಸ್ಥಿರವಲ್ಲ” ಎಂದು ಅನೇಕ ವಿಧಗಳಲ್ಲಿ ಶ್ರೀಗುರುವು ತನ್ನ ತಾಯಿಗೆ ಉಪದೇಶಮಾಡಿದರೂ, ಆಕೆ ಆತನ ಉಪದೇಶಾಮೃತವನ್ನು ಕೇಳಿ, “ಪ್ರಭು, ನೀನು ಅನೇಕ ರೀತಿಗಳಲ್ಲಿ ಜ್ಞಾನೋಪದೇಶಮಾಡಿದೆ. ಆದರೂ ನನ್ನ ಬಿನ್ನಪವನ್ನು ಕೇಳು. ನೀನು ಹೇಳಿದ್ದೆಲ್ಲವೂ ಒಳ್ಳೆಯದೇ. ಆದರೂ, ನನಗೆ ಇನ್ನೂ ಮಕ್ಕಳು ಜನಿಸುತ್ತಾರೆ ಎಂದು ನೀನು ಹೇಳಿದೆ. ನನಗೆ ಇನ್ನೊಂದು ಮಗುವಾಗುವವರೆಗೂ ನೀನು ನಮ್ಮೊಡನೆ ಇರಬೇಕು. ನಂತರ ನಾನು ನಿನಗೆ ಅನುಮತಿ ಕೊಡುತ್ತೇನೆ. ಇದು ನನ್ನ ಬಿನ್ನಪ. ನನ್ನ ಮಾತನ್ನು ಮೀರಿ ನೀನು ಹೊರಟು ಹೋದರೆ, ನಾನು ಆ ಕ್ಷಣದಲ್ಲೆ ಪ್ರಾಣ ತ್ಯಜಿಸುತ್ತೇನೆ. ನೀನು ಕೇವಲ ನನ್ನ ಮಗ ಮಾತ್ರವಲ್ಲ. ನಮ್ಮ ಕುಲದೀಪಕನು. ರಕ್ಷಕನು” ಎಂದ ತಾಯಿಯ ಮಾತುಗಳನ್ನು ಕೇಳಿ ಶ್ರೀಗುರುವು, ನಗುತ್ತಾ, “ಅಮ್ಮಾ, ನನ್ನ ಮಾತುಗಳು ಸತ್ಯವಾದವು. ನೀನೂ ನಿನ್ನ ಮಾತನ್ನು ಸತ್ಯಮಾಡು. ನಾನು ಇನ್ನೊಂದು ವರ್ಷ ಈ ಮನೆಯಲ್ಲಿ ಇರುತ್ತೇನೆ. ಅಷ್ಟರಲ್ಲಿ ನಿನಗೆ ಇಬ್ಬರು ಮಕ್ಕಳಾಗುತ್ತಾರೆ. ಆ ಇಬ್ಬರು ಮಕ್ಕಳನ್ನು ಕಂಡು ನೀನು ನನಗೆ ಸಂತೋಷದಿಂದ ಹೊರಡಲು ಅನುಮತಿ ಕೊಡಬೇಕು. ನಿನ್ನ ಮಾತನ್ನು ನಿಲ್ಲಿಸಿಕೋ. ನಾನು ಆ ನಂತರ ಈ ಮನೆಯಲ್ಲಿರುವುದಿಲ್ಲ” ಎಂದು ಹೇಳಿದರು.

ತಮ್ಮ ಮಾತಿನಂತೆ ಶ್ರೀಗುರುವು, ಶಿಷ್ಯರಿಗೆ ವೇದೋಪದೇಶಮಾಡುತ್ತಾ ಮನೆಯಲ್ಲಿಯೇ ನಿಂತರು. ಊರಿನ ಜನರು ಕುತೂಹಲಿಗಳಾಗಿ ಅವರು ಪಾಠ ಹೇಳುತ್ತಿದ್ದಲ್ಲಿಗೆ ಬಂದು, ಅವರು ಹೇಳುತ್ತಿದ್ದ ಪಾಠಪ್ರವಚನಗಳನ್ನು ಕೇಳಿ, “ಆಹಾ, ಈ ಪಂಡಿತನು ಶಿಷ್ಯರಿಗೆ ಸಾಂಗೋಪಾಂಗವಾಗಿ ಚತುರ್ವೇದಗಳನ್ನೂ ಉಪದೇಶಿಸುತ್ತಿದ್ದಾನೆ” ಎಂದು ಆಶ್ಚರ್ಯಪಟ್ಟರು. ವಿದ್ವಾಂಸರು, ತ್ರಿವೇದಿಗಳು, ಷಟ್ಶಾಸ್ತ್ರನಿಪುಣರೂ ಕೂಡಾ ಶ್ರೀಗುರುವಿನ ಬಳಿಗೆ ವಿದ್ಯಾರ್ಥಿಗಳಾಗಿ ಬಂದು ವಿದ್ಯಾರ್ಜನೆ ಮಾಡಿದರು. ತಾಯಿತಂದೆಗಳನ್ನು ಸಂತೋಷಪಡಿಸುತ್ತಾ ಶ್ರೀಗುರುವು ಗೃಹನಿವಾಸಿಯಾಗಿ ಒಂದು ವರ್ಷ ಕಳೆದರು. ತನ್ನ ಮಾತಿನಂತೆ ಮನೆಯಲ್ಲಿದ್ದ ಮಗನನ್ನು ದೇವಭಾವದಿಂದ ಅರ್ಚಿಸುತ್ತಾ, ಸಂತೋಷದಿಂದಿದ್ದ ಅಂಬ ಆ ಸಮಯದಲ್ಲಿ ಗರ್ಭ ಧರಿಸಿದಳು. ನವಮಾಸ ತುಂಬಿದಮೇಲೆ ಆಕೆ ಅವಳಿ ಮಕ್ಕಳಿಗೆ ಜನ್ಮವಿತ್ತಳು. ಸುಂದರರಾಗಿದ್ದ ಆ ಮಕ್ಕಳನ್ನು ಕಂಡು ಮಾತಾಪಿತರು ಸಂತಸಗೊಂಡರು. ಶ್ರೀಗುರುವಿನ ಆಶೀರ್ವಾದ ವ್ಯರ್ಥವಾಗುವುದಾದರೂ ಹೇಗೆ? ತಾಯಿಯ ಪಾಲನೆಯಲ್ಲಿ ಆ ಮಕ್ಕಳು ಬೆಳೆದು, ಮೂರುತಿಂಗಳು ತುಂಬಿದವರಾದರು. ಆಗ ಶ್ರೀಗುರುವು ತಾಯಿಗೆ, “ಅಮ್ಮ, ನಿನ್ನ ಕೋರಿಕೆ ನೆರವೇರಿತಲ್ಲವೇ? ಈ ಮಕ್ಕಳಿಬ್ಬರೂ ಪೂರ್ಣಾಯುಷಿಗಳಾಗಿ ಸುಖ ಸಂಪತ್ತುಗಳನ್ನು ಪಡೆಯುತ್ತಾರೆ. ನಿನಗಿನ್ನೂ ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗಳು ಕೂಡಾ ಹುಟ್ಟುತ್ತಾರೆ. ನೆರವೇರಿದ ಕೋರಿಕೆಯುಳ್ಳವಳಾಗಿ ನೀನು ಸಂತೋಷದಿಂದಿರು. ನಾನು ನನ್ನ ಮಾತನ್ನು ನಿಲ್ಲಿಸಿಕೊಂಡಿದ್ದೇನೆ. ಇನ್ನು ನನಗೆ ನಿನ್ನ ಅನುಮತಿ ಕೊಡು. ನಾನು ಹೊರಡುತ್ತೇನೆ. ಸಂತೋಷದಿಂದ ನನ್ನನ್ನು ಕಳುಹಿಸಿಕೊಡು” ಎಂದು ಹೇಳಿದರು. ಅದನ್ನು ಕೇಳಿ ತಾಯಿತಂದೆಗಳು, ಅವರಿಗೆ ನಮಸ್ಕಾರಮಾಡಿ, “ಸ್ವಾಮಿ, ನೀನು ನಮ್ಮ ಕುಲದೈವ. ನಾವು ನಿನಗೆ ಹೇಳುವುದೇನಿದೆ? ಮಾಯಾಮೋಹ ಬದ್ಧರಾದ ನಾವು, ನಿನ್ನ ಮಹಿಮೆಯನ್ನು ಹೇಗೆ ತಾನೇ ತಿಳಿಯಬಲ್ಲೆವು? ನೀನು ನಮ್ಮ ಮಗನೆಂದು ಭ್ರಮಿತರಾಗಿದ್ದ ನಾವು, ನಿನ್ನೊಡನೆ ಏನಾದರೂ ನಿಷ್ಠುರ ಮಾತುಗಳನ್ನಾಡಿದ್ದರೆ ಅದೆಲ್ಲವನ್ನು ಕ್ಷಮಿಸು. ನಮ್ಮಿಂದ ನಿನಗೆ ಊಟೋಪಚಾರಗಳಲ್ಲಿ ಕೊರತೆಯುಂಟಾಗಿರಬಹುದು. ನಿನ್ನನ್ನು ಎತ್ತಿ, ಆಡಿಸಿ, ಲಾಲಿಸಿ, ಪಾಲಿಸಲಿಲ್ಲ. ನಾವು ಏನೇ ಪಾಪಗಳನ್ನು ಮಾಡಿದ್ದರೂ ಅದೆಲ್ಲವನ್ನೂ ಕ್ಷಮಿಸಿ ನಮ್ಮನ್ನನುಗ್ರಹಿಸು. ನೀನು ನಮ್ಮ ವಂಶೋದ್ಧಾರಕನಾಗಿ ಅವತರಿಸಿದ್ದೀಯೆ. ನಮ್ಮ ಪ್ರದೋಷ ಪೂಜೆಗಳು ನಿಸ್ಸಂಶಯವಾಗಿ ಫಲಕೊಟ್ಟಿವೆ. ಇನ್ನು ಮುಂದೆ ನಮ್ಮ ಗತಿಯೇನು? ನಮ್ಮನ್ನು ಈ ಜನನ ಮರಣ ದುಃಖಗಳಿಂದ ದೂರಮಾಡು. ನಾವು, ನಮ್ಮ ಎರಡೂ ವಂಶಗಳೂ, ನೀನು ನಮಗೆ ಮಗನಾಗಿ ಬಂದಿದ್ದರಿಂದ, ಪಾವನವಾದವು. ಸ್ವಾಮಿ, ಈ ದುಸ್ತರವಾದ ಸಂಸಾರದಲ್ಲಿ ನಮ್ಮನ್ನು ಇನ್ನೂ ಏಕೆ ನಿಲ್ಲಿಸಿದ್ದೀಯೆ? ನಿನ್ನ ದರ್ಶನವಿಲ್ಲದೆ ನಾವು ಹೇಗೆತಾನೇ ಜೀವಿಸಿರಬಲ್ಲೆವು?” ಎಂದು ಮುಂತಾಗಿ ಕಳಕಳಿಯಿಂದ ಮೊರೆಯಿಟ್ಟರು.

ಅವರ ಮಾತುಗಳನ್ನು ಕೇಳಿ ಶ್ರೀಗುರುವು, ನಗುತ್ತಾ, “ನಿಮಗೆ ನನ್ನ ದರ್ಶನವಾಗಬೇಕೆಂಬ ಇಚ್ಛೆಯಾದರೆ, ನನ್ನನ್ನು ಸ್ಮರಿಸಿ. ತಕ್ಷಣವೇ ನಾನು ನಿಮಗೆ ದರ್ಶನ ಕೊಡುತ್ತೇನೆ. ಚಿಂತಿಸಬೇಡಿ. ನಿಮ್ಮ ಮನೆಯಲ್ಲಿ ಇನ್ನು ಮೇಲೆ ದೈನ್ಯವೆಂಬುದು ಎಂದಿಗೂ ಇರುವುದಿಲ್ಲ. ಪ್ರತಿದಿನವೂ ಲಕ್ಷ್ಮಿ ಈ ಮನೆಯಲ್ಲಿ ಕಲಕಲವಾಡುತ್ತಾ ಓಡಾಡುತ್ತಾಳೆ. ಹಿಂದಿನ ಜನ್ಮದಲ್ಲಿ ನೀವು ಮಾಡಿದ ಪ್ರದೋಷ ಪೂಜೆಯ ಫಲವಿದು. ನಿಮ್ಮ ವಂಶವೂ ಶ್ರೀಮಂತಗೊಳ್ಳುತ್ತದೆ. ಇಹದಲ್ಲಿ ಸೌಖ್ಯ, ದೇಹಾಂತದಲ್ಲಿ ಪರಲೋಕಗಳನ್ನು ಪಡೆದು ನೀವು ಪುನರ್ಜನ್ಮ ರಹಿತರಾಗುತ್ತೀರಿ. ಅಮ್ಮಾ, ನೀನು ಶಂಕರನನ್ನಾರಾಧಿಸಿ ನನ್ನನ್ನು ಅವತರಿಸಿಕೊಂಡು, ಪೂರ್ಣಕಾಮಳಾದೆ. ಇನ್ನು ನನಗೆ ಅನುಮತಿ ಕೊಟ್ಟರೆ ನಾನು ಹೊರಡುತ್ತೇನೆ. ಮುವ್ವತ್ತು ವರ್ಷಗಳ ನಂತರ ಮತ್ತೆ ನಿಮಗೆ ನನ್ನ ದರ್ಶನವಾಗುತ್ತದೆ. ಬದರಿವನಕ್ಕೆ ಹೊರಡುತ್ತಿದ್ದೇನೆ” ಎಂದು ಹೇಳಿ ಶ್ರೀಗುರುವು ಪಯಣಕ್ಕೆ ಸಿದ್ಧರಾದರು.

ಹಾಗೆ ಹೊರಟ ಶ್ರೀಗುರುವಿನ ಹಿಂದೆ ಗುಂಪುಗುಂಪಾಗಿ ಜನ ಹೊರಟರು. “ಈ ಬ್ರಹ್ಮಚಾರಿ ತಪಸ್ಸು ಮಾಡಲು ಹೊರಟಿದ್ದಾನೆ. ಇವನು ಮಾನವನಂತೆ ಕಂಡರೂ, ಪುರಾಣ ಪುರುಷನೇ!’ ಎಂದು ಕೆಲವರು ಹೇಳುತ್ತಿದ್ದರು. “ಈ ವಿಚಿತ್ರವನ್ನು ನೋಡು. ಈ ಸಣ್ಣ ಬಾಲಕ ತಪಸ್ಸಿಗೆಂದು ಹೊರಡುತ್ತಿದ್ದರೆ ಅವನ ತಂದೆತಾಯಿಗಳು ಅವನನ್ನು ಸಂತೋಷದಿಂದ ಕಳುಹಿಸಿಕೊಡುತ್ತಿದ್ದಾರೆ” ಎಂದು ಇನ್ನು ಕೆಲವರು ಹೇಳುತ್ತಿದ್ದರು. “ಅವರ ಹೃದಯ ಕಲ್ಲಾಗಿರಬೇಕು. ಅಷ್ಟು ಸಣ್ಣ ಮಗನನ್ನು ಸನ್ಯಾಸಿಯಾಗಲು ಕಳುಹಿಸಿಕೊಡುವವರೂ ಇದ್ದಾರೆಯೇ?” ಎಂದು ಮತ್ತೆ ಕೆಲವರು ಹೇಳುತ್ತಿದ್ದರು. “ಇವನು ಪರಮಾತ್ಮನೇ! ಹೀಗೆ ಅವತರಿಸಿದ್ದಾನೆ. ಅದರಲ್ಲಿ ಸಂಶಯವೇ ಇಲ್ಲ. ಸಕಲ ವೇದಗಳನ್ನೂ ಅಧ್ಯಯನಮಾಡಿರುವ ಈ ಏಳು ವರ್ಷದ ಬಾಲಕ, ಅಶೇಷವಾಗಿ ವೇದಗಳನ್ನು ಪಠಿಸಿರುವ ಇವನು, ಸಾಮಾನ್ಯ ಮನುಷ್ಯನಾಗಿರಲು ಹೇಗೆ ಸಾಧ್ಯ?” ಎಂದು ಇನ್ನೂ ಕೆಲವರು ಹೇಳುತ್ತಿದ್ದರು. ಹೀಗೆ ಅನೇಕರು, ಅನೇಕ ರೀತಿಗಳಲ್ಲಿ ಮಾತನಾಡುತ್ತಾ ಶ್ರೀಗುರುವಿಗೆ ಪ್ರಣಾಮಗಳನ್ನು ಅರ್ಪಿಸಿ, ಅವರ ಸ್ತೋತ್ರಮಾಡಿದರು. ಹಾಗೆ ಶ್ರೀಗುರುವಿನ ಸ್ತೋತ್ರ ಮಾಡುತಿದ್ದ ಜನರನ್ನು ಅಲ್ಲಿಯೇ ತಟಸ್ಥಿಸಿ, ಗುರುವು ಮುಂದಕ್ಕೆ ಪ್ರಯಾಣ ಮಾಡಿದರು. ಜನರೆಲ್ಲರೂ ಹೊರಟುಹೋದಮೇಲೆ, ತಂದೆತಾಯಿಗಳು ಇನ್ನೂ ಸ್ವಲ್ಪದೂರ ಶ್ರೀಗುರುವಿನ ಜೊತೆಯಲ್ಲಿ ಮುಂದುವರೆದರು. ಆಗ ಶ್ರೀಗುರುವು, ಅವರಿಗೆ ತ್ರಿಮೂರ್ತಿಸ್ವರೂಪದಲ್ಲಿ ತನ್ನ ದರ್ಶನ ದಯಪಾಲಿಸಿದರು. ಏಂದರೆ, ದತ್ತಾತ್ತ್ರೇಯರೇ ಅವರಿಗೆ ಶ್ರೀಪಾದ ಶ್ರೀವಲ್ಲಭರಾಗಿ ಕಾಣಿಸಿಕೊಂಡರು. ನಿಜರೂಪದಿಂದ ಕಂಡ, ಕರ್ಪೂರಗೌರನಾದ ನರಹರಿಯನ್ನು ನೋಡಿದ ಅವರು, ಸಾಷ್ಟಾಂಗ ನಮಸ್ಕಾರಮಾಡಿ, ಅವರ ಸ್ತೋತ್ರಮಾಡಿದರು. “ಹೇ ತ್ರಿಮೂರ್ತಿ, ನಿನಗೆ ಜಯವಾಗಲಿ. ಜಯವಾಗಲಿ. ಜಗದ್ಗುರು ನಿನ್ನ ದರ್ಶನದಿಂದ ನಮಗಿಂದು ಮಹಾಪುಣ್ಯ ಲಭ್ಯವಾಯಿತು. ಹೇ ವಿಶ್ವೋದ್ಧಾರಕ, ನಮ್ಮನ್ನು ಈ ಭವಾರ್ಣವದಿಂದ ಪಾರುಮಾಡಿದೆ. ಮತ್ತೆ ನಮಗೆ ನಿನ್ನ ದರ್ಶನ ಕೊಡು” ಎಂದು ಕಳಕಳಿಯಿಂದ ಬೇಡಿಕೊಳ್ಳುತ್ತಾ ಶ್ರೀಗುರುವಿನ ಪಾದಗಳಲ್ಲಿ ತಲೆಯಿಟ್ಟು ನಮಸ್ಕರಿಸಿದರು. ಗುರುನಾಥನು ಅವರನ್ನು ಪ್ರೇಮದಿಂದ ಹಿಡಿದು ಮೇಲಕ್ಕೆತ್ತಿ, ಆಲಂಗಿಸಿ, ಸಂತುಷ್ಟನಾಗಿ, “ನಿಮಗೆ ತಪ್ಪದೇ ಮತ್ತೆ ದರ್ಶನ ಕೊಡುತ್ತೇನೆ” ಎಂದು ಮಾತು ಕೊಟ್ಟು, ಅವರನ್ನು ಹಿಂತಿರುಗುವಂತೆ ಹೇಳಿ, ತಾವು ಮುಂದಕ್ಕೆ ಹೊರಟರು. ಆ ಮಾತಾಪಿತರು ಶ್ರೀಗುರುವು ಹೋದ ದಾರಿಯನ್ನೇ ಮತ್ತೆ ಮತ್ತೆ ನೋಡುತ್ತಾ ತಮ್ಮ ಮನೆಗೆ ಹಿಂದಿರುಗಿದರು.

ಅಲ್ಲಿಂದ ಹೊರಟ ಶ್ರೀಗುರುವು, ಬದರಿನಾಥ, ಆನಂದ ಕಾನನವಾದ ಕಾಶಿಕ್ಷೇತ್ರವನ್ನು ದರ್ಶಿಸಿದರು. ವಾರಣಾಸಿಯಲ್ಲಿ ವಿಶ್ವೇಶ್ವರನು ಸ್ವಯಂ ನೆಲೆಸಿದ್ದಾನೆ. ಅದರಿಂದಲೇ ಅದು ತ್ರಿಲೋಕಗಳಲ್ಲೂ ಸಾಟಿಯಿಲ್ಲದ್ದು. ಶ್ರೀಗುರುವು ತ್ರಿಕಾಲದಲ್ಲೂ ಅನುಷ್ಠಾನ ಮಾಡಿಕೊಳ್ಳುತ್ತಾ, ವಿಶ್ವೇಶ್ವರನ ದರ್ಶನ ಮಾಡುತ್ತಾ ಕಾಶಿಯಲ್ಲಿ ಸ್ವಲ್ಪಕಾಲ ನಿಂತರು. ಅಲ್ಲಿ ಅಷ್ಟಾಂಗ ಯೋಗದಿಂದ ತಪಸ್ಸನ್ನಾಚರಿಸಿದರು. ಕಾಶಿಯಲ್ಲಿ ಬಹಳ ಜನ ತಪಸ್ವಿಗಳಿದ್ದರು. ಕೆಲವರು ಸನ್ಯಾಸಿಗಳು. ಕೆಲವರು ಅವಧೂತರು. ಅವರೆಲ್ಲರೂ ತಪೋನಿರತರೇ! ಯೊಗಾಭ್ಯಾಸ ನಿರತನಾದ ಈ ಬ್ರಹ್ಮಚಾರಿಯೇ ನಮಗಿಂತ ಉತ್ತಮ ಎಂದು ಭಾವಿಸಿದ ಅವರೆಲ್ಲರೂ, “ಈ ಬ್ರಹ್ಮಚಾರಿ ನಮ್ಮೆಲ್ಲರಿಗಿಂತ ದುಷ್ಕರವಾದ ತಪಸ್ಸನ್ನು ಆಚರಿಸುತ್ತಿದ್ದಾನೆ. ಇವನ ವೈರಾಗ್ಯವು ಅದ್ಭುತವಾಗಿದೆ. ದೇಹಾಭಿಮಾನವಿಲ್ಲದವನು. ಯೋಗ್ಯ, ಉತ್ತಮ ಸನ್ಯಾಸಿ. ತ್ರಿಕಾಲದಲ್ಲೂ ಮಣಿಕರ್ಣಿಕೆಯಲ್ಲಿ ಸ್ನಾನವಾಚರಿಸುತ್ತಾನೆ” ಎಂದು ಮಾತನಾಡಿಕೊಳ್ಳುತ್ತಿದ್ದರು.

ಅಲ್ಲಿದ್ದವರೆಲ್ಲರಲ್ಲಿ, ಮಹಾಮತಿಯಾದ ಕೃಷ್ಣ ಸರಸ್ವತಿ ಎನ್ನುವವರು ಬ್ರಹ್ಮಜ್ಞಾನಿ. ವೃದ್ಧ ತಪಸ್ವಿ. ಮಹಾಮುನಿ. ಆ ಯತಿವರ್ಯರು, ಶ್ರೀಗುರುವನ್ನು, ಸದಾ ಪ್ರೀತಿವಿಶ್ವಾಸಗಳಿಂದ ಕಾಣುತ್ತಾ, ಅವರಲ್ಲಿ ಭಕ್ತಿತತ್ಪರರಾದರು. ಕೃಷ್ಣ ಸರಸ್ವತಿ ಒಂದುಸಲ ಅಲ್ಲಿದ್ದ ಇತರ ಯತಿಗಳಿಗೆ, “ನೀವು ಈ ಬ್ರಹ್ಮಚಾರಿಯನ್ನು ಮಾನವ ಮಾತ್ರನೆಂದು ತಿಳಿಯಬೇಡಿ. ಈ ಪುರುಷ ಆ ವಿಶ್ವವಂದ್ಯನ ಅವತಾರವೇ! ವಯಸ್ಸಿನಲ್ಲಿ ಸಣ್ಣವನಾದರೂ, ಇವನಿಗೆ ನೀವು ಭಕ್ತಿಯಿಂದ ನಮಸ್ಕರಿಸಿಕೊಳ್ಳಬೇಕು. ತ್ರಿಭುವನ ವಂದ್ಯರಾದ ತ್ರಿಮೂರ್ತಿಗಳ ಅವತಾರವೇ ಇವನು. ವಯೋಜ್ಯೇಷ್ಠರು ಕನಿಷ್ಠರಿಗೆ ನಮಸ್ಕರಿಸಬಾರದು ಎಂಬುದು ಮೂರ್ಖ ದೃಷ್ಟಿ. ವಿದ್ವಾಂಸರಿಗೆ, ಇವನು ವಿಶ್ವವಂದ್ಯನೆಂಬ ಅರಿವಿದೆ. ಸನ್ಯಾಸವನ್ನು ಮತ್ತೆ ಸ್ಥಾಪಿಸುವುದರಿಂದ ನಮ್ಮ ಭಕ್ತಿ ಸ್ಥಿರವಾಗುವುದು. ಶರೀರಧಾರಿಗಳೆಲ್ಲರಿಗೂ ಅನುಗ್ರಹ ಮಾಡಲು ಇವನೇ ಸಮರ್ಥ. ಈ ಗುರುವಿನ ದರ್ಶನ ಮಾತ್ರದಿಂದಲೇ ಪತಿತನೂ ಪವಿತ್ರನಾಗುತ್ತಾನೆ. ಆದ್ದರಿಂದ ಈ ಬಾಲಕನನ್ನು ನಾವು ಪ್ರಾರ್ಥಿಸಿಕೊಳ್ಳೋಣ. ಇವನಿಗೆ ಸನ್ಯಾಸ ಕೊಟ್ಟು ನಾವು ಕೃತಾರ್ಥರಾಗೋಣ” ಎಂದು ಹೇಳಿದರು. ಯತಿಗಳೆಲ್ಲರೂ ಅವರು ಹೇಳಿದಂತೆ, ಆ ಬಾಲಬ್ರಹ್ಮಚಾರಿಯ ಬಳಿಗೆ ಹೋಗಿ, “ಹೇ ತಾಪಸ ಶ್ರೇಷ್ಠ, ನಮ್ಮ ಪ್ರಾರ್ಥನೆಯನ್ನು ಆಲಿಸಿ, ನೀನು ಲೋಕಾನುಗ್ರಹಾರ್ಥವಾಗಿ ಸನ್ಯಾಸ ಸ್ವೀಕಾರಮಾಡು. ನಮ್ಮ ಪೂಜಾದಿಗಳನ್ನು ಕೈಕೊಂಡು ನಮ್ಮನ್ನು ಉದ್ಧರಿಸು. ಈ ಕಲಿಯುಗದಲ್ಲಿ ಜನರು ಸನ್ಯಾಸಾಶ್ರಮವನ್ನು ನಿಂದಿಸುತ್ತಾರೆ. ಭೂಮಿಯಲ್ಲಿ ಸನ್ಯಾಸಮಾರ್ಗವನ್ನು ಸ್ಥಾಪಿಸುವಂತಹ ಸಮರ್ಥರು ಯಾರೂ ಇಲ್ಲ. ಅಗ್ನಿಹೋತ್ರ, ಗೋವಧೆ, ಸನ್ಯಾಸ, ಮಾಂಸಶ್ರಾದ್ಧ, ಮೈದುನನಿಂದ ಸಂತಾನೋತ್ಪತ್ತಿ, ಎನ್ನುವ ಐದನ್ನು ವಿಸರ್ಜಿಸಬೇಕೆಂಬುದನ್ನು ಶ್ರುತಿವಚನವಾಗಿ ಗ್ರಹಿಸಿ, ಕಲಿಯುಗದಲ್ಲಿ, ಜನರು ಸನ್ಯಾಸವನ್ನು ನಿಷೇಧಿಸುತ್ತಿದ್ದಾರೆ. ಆದರೆ ವೇದಗಳಲ್ಲಿ ಸನ್ಯಾಸವೆಂಬುದು ಪ್ರಸಿದ್ಧಾವಾಗಿದೆ. ಹಿಂದೆ ಅದನ್ನು ನಿಷೇಧಮಾಡಿದ್ದುದು ದುರ್ಬಲರಿಗೆ ಮಾತ್ರ. ವರ್ಣ ಬೇಧಗಳಿರುವವರೆಗೂ, ವೇದಗಳು ಆಚಾರದಲ್ಲಿರುವವರೆಗೂ, ಕಲಿಯುಗದಲ್ಲೂ ಸಹ ಅಗ್ನಿಹೋತ್ರ ಸನ್ಯಾಸಗಳನ್ನು ಪರಿತ್ಯಜಿಸಬಾರದು ಎಂದು ಶಂಕರಾಚಾರ್ಯರು ಸನಾತನ ಮತಸ್ಥಾಪನೆ ಮಾಡಿದರು. ಅಂದಿನಿಂದ ಇಂದಿನವರೆಗೂ ಸನ್ಯಾಸಾಶ್ರಮ ಮುಂದುವರೆಯುತ್ತಲೇ ಇದೆ. ಆದರೆ ಈ ಕಲಿಕಾಲದಲ್ಲಿ, ಪಾಮರರು ಅದನ್ನು ನಿಂದಿಸುತ್ತಿದ್ದಾರೆ. ಈ ಸನ್ಯಾಸಾಶ್ರಮವನ್ನು ಉದ್ಧರಿಸಿ, ಜನರಿಗೆ ಉಪಕಾರ ಮಾಡು. ಹೇ ಮುನೀಶ್ವರ, ನೀನು ಕೃಪಾಸಾಗರನು. ನಮ್ಮನ್ನು ಈ ಸಂಸಾರ ಕೂಪದಿಂದ ಉದ್ಧರಿಸು” ಏಂದು ಪ್ರಾರ್ಥಿಸಿದರು. ಅವರ ಮಾತನ್ನು ಕೇಳಿದ ಶ್ರೀಗುರುವು ಸನ್ಯಾಸವನ್ನು ಸ್ವೀಕರಿಸಲು ನಿಶ್ಚಯಿಸಿ, ವೃದ್ಧರಾದ ಕೃಷ್ಣ ಸರಸ್ವತಿ ಅವರಿಂದ ಶಾಸ್ತ್ರೋಕ್ತವಾಗಿ ಸನ್ಯಾಸ ದೀಕ್ಷೆ ಪಡೆದರು.

ಸಿದ್ಧಮುನಿಯ ಈ ಮಾತುಗಳನ್ನು ಕೇಳಿದ ನಾಮಧಾರಕ, “ಸ್ವಾಮಿ, ಜಗತ್ತಿಗೇ ಗುರುವಾದ ಅವರಿಗೆ ಇನ್ನೊಬ್ಬರು ಹೇಗೆ ಗುರುವಾಗುತ್ತಾರೆ? ತ್ರಿಮೂರ್ತ್ಯವತಾರವಾದ ಶ್ರೀಗುರುವಿಗೆ ಮತ್ತೊಬ್ಬ ಗುರುವಿನ ಅವಶ್ಯಕತೆಯಾದರೂ ಏನು?” ಎಂದು ತನ್ನ ಸಂದೇಹವನ್ನು ವ್ಯಕ್ತಪಡಿಸಿದನು. ಅದಕ್ಕೆ ಸಿದ್ಧರು, “ಹಿಂದೆ ಶ್ರೀರಾಮ ವಸಿಷ್ಠರನ್ನು ಗುರುವಾಗಿ ಸ್ವೀಕರಿಸಿದ್ದನಲ್ಲವೆ? ಭಗವಂತನು, ತನ್ನ ಎಂಟನೆಯ ಅವತಾರದಲ್ಲಿ ಶ್ರೀ ಕೃಷ್ಣನಾಗಿ, ಸಾಂದೀಪನಿ ಮುನಿಯನ್ನು ಗುರುವಾಗಿ, ಮಾನವ ಧರ್ಮಾನುಸಾರವಾಗಿ, ಸ್ವೀಕರಿಸಿದ್ದನಲ್ಲವೆ? ಅದೇ ರೀತಿಯಲ್ಲಿ ಶ್ರೀಗುರುವು ಕೂಡ ಜ್ಞಾನವೃದ್ಧರಾದ ಕೃಷ್ಣ ಸರಸ್ವತಿಯನ್ನು ಗುರುವಾಗಿ ಸ್ವೀಕರಿಸಿದರು” ಎಂದು ಹೇಳಿದರು. ಅದಕ್ಕೆ ನಾಮಧಾರಕ, “ಅಲ್ಲಿ ಬಹಳ ಜನ ಯತೀಶ್ವರರಿದ್ದರೂ, ಶ್ರೀಗುರುವು ಕೃಷ್ಣ ಸರಸ್ವತಿಯನ್ನೇ ಗುರುವಾಗಿ ಆರಿಸಿಕೊಳ್ಳಲು ಕಾರಣವೇನು? ಅದನ್ನು ನನಗೆ ವಿಸ್ತಾರವಾಗಿ ಹೇಳಿ” ಎಂದು ಕೇಳಲು, ಸಿದ್ಧಮುನಿ ಮೂಲದಿಂದ ಆರಂಭಿಸಿ, ಗುರು ಪರಂಪರೆಯನ್ನು ಹೇಳಿದರು. “ಗುರು ಪರಂಪರೆಗೆ ಮೂಲವಾದವನು ಶಂಕರ. ಶಂಕರನ ಶಿಷ್ಯ ವಿಷ್ಣು. ವಿಷ್ಣುವಿಗೆ ಬ್ರಹ್ಮ ಶಿಷ್ಯ. ಬ್ರಹ್ಮನಿಗೆ ವಸಿಷ್ಠ, ವಸಿಷ್ಠರಿಗೆ ಶಕ್ತಿ, ಶಕ್ತಿಗೆ ಪರಾಶರ, ಪರಾಶರರೇ ಸ್ವಯಂ ನಾರಾಯಣನಾದ ವ್ಯಾಸ, ವ್ಯಾಸರಿಗೆ ಶುಕ, ಶುಕರಿಗೆ ಗೌಡಪಾದ, ಗೌಡಪಾದರಿಗೆ ಗೋವಿಂದಾಚಾರ್ಯ, ಅವರಿಗೆ ಶಂಕರಾಚಾರ್ಯ, ಶಂಕರಾಚಾರ್ಯರಿಗೆ ಬೋಧಜ್ಞಾನಗಿರಿ, ಅವರಿಗೆ ಸಿಂಹಗಿರಿ, ಸಿಂಹಗಿರಿಗೆ ಈಶ್ವರತೀರ್ಥ, ಅವರಿಗೆ ನೃಸಿಂಹತೀರ್ಥ ಹಾಗೂ ಸರ್ವವಿದ್ಯಾ ವಿಶಾರದರಾದ ವಿದ್ಯಾರಣ್ಯ, ಅವರಿಗೆ ಮಲಯಾನಂದ, ಅವರಿಗೆ ದೈವತೀರ್ಥ, ಅವರಿಗೆ ಯಾದವೇಂದ್ರ ಸರಸ್ವತಿ, ಅವರ ಶಿಷ್ಯ ಈ ಕೃಷ್ಣ ಸರಸ್ವತಿ. ಹೀಗೆ, ಈ ಗುರು ಪರಂಪರೆ ಶ್ರೀಗುರುವಿಗೆ ಸಮ್ಮತವಾದದ್ದರಿಂದ ಅವರು ಕೃಷ್ಣ ಸರಸ್ವತಿಯನ್ನು ತಮ್ಮ ಗುರುವಾಗಿ ಅಂಗೀಕರಿಸಿದರು. ಅವರ ಸನ್ಯಾಸಾಶ್ರಮದ ಹೆಸರು ನೃಸಿಂಹ ಸರಸ್ವತಿ ಎಂದಾಯಿತು” ಎಂದು ಗುರುಪರಂಪರೆಯನ್ನು ವಿಸ್ತರವಾಗಿ ತಿಳಿಸಿದರು.

ಹೀಗೆ ಸನ್ಯಾಸಮಾರ್ಗ ಸ್ಥಾಪನೆಗೆಂದು, ತಾವು ಸನ್ಯಾಸವನ್ನು ಸ್ವೀಕರಿಸಿ, ಶ್ರೀ ಗುರುವು ಗುರುನಾಥನಾಗಿ ಕಾಶಿಯಲ್ಲಿ ಶಿಷ್ಯರಿಗೆ ವೇದೋಪದೇಶಮಾಡಿದರು. ವಯಸ್ಸಿನಲ್ಲಿ ಸಣ್ಣವರಾದರೂ, ಕಾಶಿಯಲ್ಲಿ ಇವರನ್ನು ಎಲ್ಲರೂ ಪೂಜಿಸಿದರು. ವಿಶೇಷವಾಗಿ, ಕಾಶಿಯಲ್ಲಿದ್ದ ಎಲ್ಲ ವಿದ್ವಾಂಸರೂ, ಯತಿಗಳೂ, ಶ್ರೀ ನೃಸಿಂಹ ಸರಸ್ವತಿಯವರನ್ನು ಆರಾಧಿಸುತ್ತಿದ್ದರು. ಶ್ರೀಗುರುವು ಕಾಶಿಯಲ್ಲಿ ಅನೇಕ ಶಿಷ್ಯರನ್ನು ಸೇರಿಸಿ, ಅಲ್ಲಿಂದ ಬದರಿಕಾವನವೇ ಮೊದಲಾದ ಅನೇಕ ತೀರ್ಥಗಳನ್ನು ಸಂದರ್ಶಿಸುತ್ತಾ, ಲೋಕಾನುಗ್ರಹಕ್ಕಾಗಿ ಪರ್ಯಟನೆ ಮಾಡುತ್ತಾ, ಮೇರು ಪರ್ವತವನ್ನು ಸೇರಿದರು. ಆ ಪರ್ವತಕ್ಕೆ ಪ್ರದಕ್ಷಿಣೆ ಮಾಡಿ, ಶಿಷ್ಯರೊಡನೆ ಸರ್ವ ತೀರ್ಥಗಳ ದರ್ಶನ ಮಾಡುತ್ತಾ, ಭೂಪ್ರದಕ್ಷಿಣೆ ಮಾಡಿ, ಗಂಗಾಸಾಗರ ಸಂಗಮ ಪ್ರದೇಶಕ್ಕೆ ಬಂದರು. ಪರ್ಯಟನಕಾಲದಲ್ಲಿ ಅವರು ನೆರವೇರಿಸಿದ ಲೋಕೋದ್ಧಾರ ಕಾರ್ಯಗಳನ್ನೆಲ್ಲ ತಿಳಿದವರು ಯಾರೂ ಇಲ್ಲ. ಅಲ್ಲದೆ ಶ್ರೀಗುರುವಿನ ಲೀಲೆಗಳನ್ನೆಲ್ಲ ವಿವರಿಸುತಾ ಹೋದರೆ ಗ್ರಂಥ ಬಹಳ ದೊಡ್ಡದಾಗುವುದು. ಆದ್ದರಿಂದ ಹೇ ನಾಮಧಾರಕ, ನನಗೆ ತಿಳಿದಮಟ್ಟಿಗೆ ಮಾತ್ರ ನಾನು ಎಲ್ಲವನ್ನೂ ತಿಳಿಸುತ್ತೇನೆ. ಗಂಗಾತೀರ್ಥ ಪರ್ಯಟನೆ ಮಾಡಿ, ಅವರು ಪ್ರಯಾಗವನ್ನು ಸೇರಿದರು. ಅಲ್ಲಿ ಮಾಧವನೆಂಬ ಬ್ರಾಹ್ಮಣ ಶ್ರೇಷ್ಠನೊಬ್ಬನು, ಗುರುದರ್ಶನಾಭಿಲಾಷಿಯಾಗಿ ಅವರಲ್ಲಿಗೆ ಬಂದನು. ಅವನಿಗೆ ಶ್ರೀಗುರುವು ಸನ್ಯಾಸ ಕೊಟ್ಟು , ಅದ್ವೈತವನ್ನು ಉಪದೇಶಿಸಿದರು. ಅವರ ಶಿಷ್ಯಗಣದಲ್ಲಿ, ಶ್ರೀಗುರುವಿಗೆ ಮಾಧವನನ್ನು ಕಂಡರೆ ಅತಿಶಯ ಪ್ರೀತಿ. ಶಿಷ್ಯರೆಲ್ಲರನ್ನೂ ಹಿಂದಿಟ್ಟುಕೊಂಡು ಶ್ರೀಗುರುವು ಪ್ರಯಾಗವನ್ನು ಬಿಟ್ಟು ಹೊರಟರು.”

ಇಲ್ಲಿಗೆ ಹನ್ನೆರಡನೆಯ ಅಧ್ಯಾಯ ಮುಗಿಯಿತು.
[07/01 6:24 AM] S. Bhargav: ||ಶ್ರೀ ಗುರು ಚರಿತ್ರೆ – ಹದಿಮೂರನೆಯ ಅಧ್ಯಾಯ||

ನಾಮಧಾರಕ ವಿನಯದಿಂದ ಕೈಜೋಡಿಸಿ ಸಿದ್ಧಮುನಿಯನ್ನು, “ಯೋಗೀಶ್ವರ, ಭವಾರ್ಣವ ತಾರಕರು ನೀವು. ನೀವು ಹೇಳುತ್ತಿರುವ ಗುರುಕಥಾಮೃತವನ್ನು ಕೇಳಿದಷ್ಟೂ, ಇನ್ನೂ ಇನ್ನೂ ಕೇಳಬೇಕೆಂಬ ಅಭಿಲಾಷೆ ಉಂಟಾಗುತ್ತಿದೆ. ಗುರುಚರಿತ್ರೆ ಎನ್ನುವುದು ಕಾಮಧೇನುವು. ಹಸುವಿಗೆ ಹುಲ್ಲು ಕೊಟ್ಟಷ್ಟೂ ಅದರ ಹಸಿವು ಹೆಚ್ಚಾಗುವ ಹಾಗೆ, ನನಗೆ ಗುರುಕಥೆಗಳನ್ನು ಕೇಳುವುದರಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ. ಕನಸಿನಲ್ಲೂ ಮಜ್ಜಿಗೆ ಸಿಕ್ಕದಿದ್ದವನಿಗೆ ಎಚ್ಚರದಲ್ಲಿ ಹಾಲಿನಸಮುದ್ರ ದೊರೆತರೆ ಅವನು ಅದನ್ನು ಬಿಟ್ಟು ಹೋಗುತ್ತಾನೆಯೇ? ಹಾಗೆಯೇ ಅಲ್ಪಜ್ಞನಾದ ನನಗೆ ಗುರುಕೀರ್ತಿ ಇದುವರೆಗೆ ತಿಳಿದಿರಲಿಲ್ಲ. ಅವಿದ್ಯೆಯಿಂದ ಭ್ರಷ್ಟನಾದ ನಾನು ಕಷ್ಟಗಳಿಗೀಡಾಗಿದ್ದೆ. ಮೋಹಾಂಧಕಾರದಲ್ಲಿ ಮುಳುಗಿ ಅಜ್ಞನಾಗಿದ್ದ ನನಗೆ ನೀವು ಶ್ರೀಗುರುವೆಂಬ ಆತ್ಮಜ್ಯೋತಿಯನ್ನು ತೋರಿಸಿದಿರಿ. ನೀವು ಮಾಡಿರುವ ಉಪಕಾರಕ್ಕೆ ನಾನು ಎಂತಹ ಪ್ರತ್ಯುಪಕಾರ ಮಾಡಬೇಕೆಂದು ತಿಳಿಯದ ಮೂಢ ನಾನು. ಕಲ್ಪವೃಕ್ಷವನ್ನು ಕೊಟ್ಟವನಿಗೆ ಭೂದಾನ ಮಾಡಿದರೆ ಅದು ಪ್ರತ್ಯುಪಕಾರವಾಗುವುದೇ? ಚಿಂತಾಮಣಿಯನ್ನು ಕೊಟ್ಟವನಿಗೆ ಬದಲಾಗಿ ಏನನ್ನು ತಾನೇ ಕೊಡಬಲ್ಲೆವು? ಅಂತಹ ಕೃಪಾಮೂರ್ತಿಯಾದ ನಿಮಗೆ ನಾನೇನು ಕೊಡಬಲ್ಲೆ? ಭವತಾಪವನ್ನು ಹರಿಸಿದಿರಿ. ನೀವು ಹೇಳಿದ ಧರ್ಮ ನನ್ನನ್ನು ಉದ್ಧರಿಸುತ್ತದೆ. ಸರ್ವಾರ್ಥಗಳನ್ನೂ ಕೊಡಬಲ್ಲ ಗುರುಭಕ್ತಿ ನನ್ನಲ್ಲಿ ನೆಲೆಯಾಯಿತು. ಶ್ರೀಗುರುವು ಪ್ರಯಾಗದಲ್ಲಿ ಮಾಧವನಿಗೆ ದೀಕ್ಷೆ ಕೊಟ್ಟ ಮೇಲೆ ನಡೆದ ವಿಷಯಗಳನ್ನು ವಿವರಿಸಬೇಕೆಂದು ಕೋರುತ್ತೇನೆ” ಎಂದು ವಿನಮ್ರನಾಗಿ ಬಿನ್ನವಿಸಿಕೊಂಡನು.

ಅವನ ಮಾತುಗಳನ್ನು ಕೇಳಿದ ಸಿದ್ಧಮುನಿ, ಅವನ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿ ಹೇಳಿದರು. “ಶಿಷ್ಯೋತ್ತಮ. ನಿನಗೆ ಗುರುಪದ ಲಭ್ಯವಾಯಿತು. ಧನ್ಯನಾದೆ. ಸಂಸಾರಸಾಗರದಿಂದ ಪಾರಾಗುವೆ. ಗುರುವೆಂದರೇನೆಂಬುದು ನಿನಗೆ ತಿಳಿಯಿತು. ಪುಣ್ಯಶ್ರವಣವಾದ ಗುರುಚರಿತ್ರೆಯನ್ನು ಹೇಳುತ್ತೇನೆ. ಮನಸ್ಸಿಟ್ಟು ಕೇಳು.

ಸ್ವಲ್ಪಕಾಲ ಶ್ರೀಗುರುವು ಪ್ರಯಾಗದಲ್ಲಿದ್ದು, ಅಲ್ಲಿ ಲೋಕೋದ್ಧಾರ ಕಾರ್ಯಗಳನ್ನು ಮಾಡಿದರು. ಮಾಧವನಿಗೆ ದೀಕ್ಷೆ ಕೊಟ್ಟು ಪ್ರಸಿದ್ಧರಾಗಿದ್ದ ಗುರುವಿನ ಬಳಿಗೆ ಅನೇಕರು ಬಂದು, ಅವರಿಗೆ ಶಿಷ್ಯರಾಗಿ, ಅವರ ಸೇವೆಯಲ್ಲಿ ನಿಂತರು. ಅವರಲ್ಲೆಲ್ಲಾ ಮಾಧವನು ಮುಖ್ಯನು. ಅವರಲ್ಲಿ ಪ್ರಮುಖರಾದ ಏಳುಜನ ಶಿಷ್ಯರ ಹೆಸರನ್ನು ಮಾತ್ರ ಹೇಳುತ್ತೇನೆ. ಮೊದಲನೆಯವನು ಬಾಲಸರಸ್ವತಿ. ನಂತರ ಕೃಷ್ಣ ಸರಸ್ವತಿ, ಉಪೇಂದ್ರ, ಮಾಧವ ಸರಸ್ವತಿ, ಸದಾನಂದ, ಆರನೆಯವನು ಜ್ಞಾನಜ್ಯೋತಿ ಸರಸ್ವತಿ. ಸಿದ್ಧನಾದ ನಾನು ಏಳನೆಯವನು. ನಮ್ಮೆಲ್ಲರನ್ನೂ ಹಿಂದಿಟ್ಟುಕೊಂಡು ಶ್ರೀಗುರುವು ದಕ್ಷಿಣ ದೇಶದಲ್ಲಿನ ತೀರ್ಥಗಳನ್ನು ಪವಿತ್ರ ಮಾಡುತ್ತಾ, ಕಾರಂಜಿ ನಗರವನ್ನು ಸೇರಿದರು.

ಅಲ್ಲಿ ತಮ್ಮ ಪೂರ್ವಾಶ್ರಮದ ತಂದೆತಾಯಿಗಳನ್ನು ಸಂತುಷ್ಟರನ್ನಾಗಿ ಮಾಡಿ, ತಮ್ಮ ತಮ್ಮಂದಿರನ್ನು ಆದರಿಸಿದರು. ಪುರಜನರು ಶ್ರೀಗುರುವನ್ನು ಕಂಡು ಬಹಳ ಆನಂದದಿಂದ ಅವರ ಪೂಜಾರ್ಚನೆಗಳನ್ನು ಮಾಡಿದರು. ಅಲ್ಲಿನ ವಿಪ್ರರೆಲ್ಲರೂ ಅವರವರ ಮನೆಗಳಿಗೆ ಭಿಕ್ಷೆಗೆಂದು ಅಹ್ವಾನಿಸಿದರೆ, ಶ್ರೀಗುರುವು ಬಹುರೂಪಿಯಾಗಿ ಎಲ್ಲರ ಮನೆಗಳಿಗೂ ಒಂದೇಕಾಲದಲ್ಲಿ ಹೋಗಿ ಭಿಕ್ಷೆ ಸ್ವೀಕರಿಸಿದರು. ಅದನ್ನು ಕೇಳಿದವರೆಲ್ಲರೂ ವಿಸ್ಮಿತರಾಗಿ ತ್ರಿಮೂರ್ತಿಗಳೇ ಈ ಯತಿಯ ವೇಷದಲ್ಲಿ ಬಂದಿದ್ದಾನೆಂದುಕೊಂಡರು. ಶ್ರೀಗುರುವು ತಮ್ಮ ಮಾತಾಪಿತರಿಗೆ ಪೂರ್ವಸ್ಮರಣೆಯುಂಟಾಗುವಂತೆ ಶ್ರೀಪಾದಶ್ರೀವಲ್ಲಭರೂಪದಲ್ಲಿ ದರ್ಶನವಿತ್ತರು. ತಾಯಿ ಆ ಶ್ರೀಪಾದರೂಪವನ್ನು ಕಂಡು, ಅವರ ಪಾದಗಳಲ್ಲಿ ತಲೆಯಿಟ್ಟು, “ನನ್ನ ಪ್ರದೋಷಪೂಜೆ ಫಲಕೊಟ್ಟಿತು. ಚಂದ್ರಮೌಳಿ ಸತ್ಯಸಂಕಲ್ಪನು” ಎಂಬ ಭಾವನೆಯಿಂದ, ತನ್ನ ಗಂಡನಿಗೆ ತನ್ನ ಗತ ಜನ್ಮದ ವೃತ್ತಾಂತವನ್ನೆಲ್ಲ ಹೇಳಿ, “ಗತಜನ್ಮದಲ್ಲಿ ಶ್ರೀಪಾದರಾಗಿದ್ದ ಈ ವಿಶ್ವವಂದ್ಯನನ್ನು ಮಗನಾಗಿ ಪಡೆಯಲು ನಾನು ಮಹಾದೇವನನ್ನು ಆರಾಧಿಸಿದೆ. ಈ ಜನ್ಮದಲ್ಲಿ ನನ್ನ ಅಂದಿನ ಕೋರಿಕೆ ಸಫಲವಾಯಿತು” ಎಂದು ಆನಂದದಿಂದ ಹೇಳಿದಳು. ಅವರಿಬ್ಬರೂ ಶ್ರೀಗುರುವಿಗೆ ಶರಣಾಗಿ, “ಯತಿರಾಜ, ಜಗನ್ನಾಥ, ನಮ್ಮನ್ನು ಈ ಸಂಸಾರಸಾಗರದಿಂದ ಉದ್ಧರಿಸು” ಎಂದು ಬೇಡಿಕೊಂಡರು. ಅದಕ್ಕೆ ಶ್ರೀಗುರುವು, ಸನ್ಯಾಸಿಯಾದವನು ತನ್ನ ನಲವತ್ತೆರಡು ತಲೆಮಾರುಗಳನ್ನು ಉದ್ಧರಿಸುತ್ತಾನೆ. ಅವನ ವಂಶಕ್ಕೆ ಶಾಶ್ವತ ಬ್ರಹ್ಮಲೋಕ ಪ್ರಾಪ್ತಿಯಾಗುವುದು. ಆ ಕುಲದಲ್ಲಿ ಜನಿಸಿದವರೆಲ್ಲರೂ ಶಾಶ್ವತವಾದ ಬ್ರಹ್ಮಪದ ಪಡೆಯುವರು. ಅವರ ಸಂತತಿಗೆ ಯಮನಿಂದಲೂ ಸಹ ಭಯ ದುಃಖಗಳುಂಟಾಗಲಾರವು. ಅವರ ಕುಲದಲ್ಲಿ ಅದಕ್ಕೆ ಮುಂಚೆ ನರಕಕ್ಕೆ ಹೋದವರೂ ಕೂಡಾ ಬ್ರಹ್ಮಲೋಕವನ್ನು ಸೇರಿಕೊಳ್ಳುತ್ತಾರೆ. ಇದಕ್ಕಿಂತ ಹೆಚ್ಚಾಗಿ ನಿಮಗೇನು ಹೇಳಲಿ? ನಿಮ್ಮಿಬ್ಬರಿಗೂ ಅಂತಕನ ಭಯವಿರುವುದಿಲ್ಲ. ಬ್ರಹ್ಮಪದವನ್ನು ಪಡೆಯುತ್ತೀರಿ. ನಿಮ್ಮ ಮಕ್ಕಳು ಶತಾಯುಷಿಗಳಾಗಿ, ಅಷ್ಟೈಶ್ವರ್ಯದಿಂದ ಕೂಡಿ, ಪುತ್ರಪೌತ್ರಾದಿಗಳೊಡನೆ ನಿಮ್ಮೊಡನೆ ಇದ್ದುಕೊಂಡು ನಿಮ್ಮನ್ನು ಸಂತೋಷಗೊಳಿಸುತ್ತಾರೆ. ನಿಮಗೆ ನಿಮ್ಮ ಅಂತ್ಯಕಾಲದಲ್ಲಿ ಕಾಶಿಕ್ಷೇತ್ರ ನಿವಾಸ ಲಭಿಸುವುದು. ಕಾಶಿಕ್ಷೇತ್ರ ಮೋಕ್ಷಸ್ಥಾನವೆಂದು ವೇದಾದಿಗಳಲ್ಲಿ ಪ್ರಸಿದ್ಧವಾಗಿದೆ. ಇನ್ನು ಮುಂದೆ ನೀವು ನಿಮ್ಮ ಚಿಂತೆಗಳನ್ನೆಲ್ಲಾ ಬಿಟ್ಟು ಸಂತೋಷದಿಂದ ಬಾಳ್ವೆ ಮಾಡಿ” ಎಂದು ಹೇಳಿದರು.

ಅದೇ ಸಮಯಕ್ಕೆ ಅವರ ಪೂರ್ವಾಶ್ರಮದ ತಂಗಿಯಾದ ರತ್ನ ಅಲ್ಲಿಗೆ ಬಂದು, ಶ್ರೀಗುರುವಿಗೆ ನಮಸ್ಕರಿಸಿ, ವಿನೀತಳಾಗಿ, “ಸ್ವಾಮಿ, ನನ್ನನ್ನು ಉದ್ಧರಿಸಬೇಕು. ಸಂಸಾರಸಾಗರದಲ್ಲಿ ಮುಳುಗಿಹೋಗಿದ್ದೇನೆ. ತಾಪತ್ರಯಗಳೆಂಬ ಬಡಬಾಗ್ನಿ ನನ್ನನ್ನು ದಹಿಸುತ್ತಿದೆ. ಕಾಮಾದಿಗಳೆಂಬ ಮೊಸಳೆಗಳು ನನ್ನನ್ನು ಭಯಪಡಿಸುತ್ತಿವೆ. ಈ ದುರ್ಭರವಾದ ಸಂಸಾರಸಾಗರದಿಂದ ನನ್ನನ್ನು ಉದ್ಧರಿಸಿ” ಎಂದು ಕಳಕಳಿಯಿಂದ ಬೇಡಿಕೊಂಡಳು. ಅದಕ್ಕೆ ಶ್ರೀಗುರುವು, “ಅಮ್ಮಾ, ಸ್ತ್ರೀಯರಿಗೆ ಪತಿಸೇವೆಯೇ ತಪಸ್ಸು. ಬೇರೆ ತಪಸ್ಸೇಕೆ? ಅವರನ್ನು ಭವಾರ್ಣವದಿಂದ ಉದ್ಧರಿಸಬಲ್ಲವನು ಆ ಶಿವನೊಬ್ಬನೇ! ಅವನೇ ಪತಿವ್ರತೆಯರಿಗೆ ಸರ್ವಾಭೀಷ್ಟಗಳನ್ನೂ ದಯಪಾಲಿಸುವವನು. ಇದರಲ್ಲಿ ಸಂಶಯವಿಲ್ಲ. ಭವಸಾಗರವನ್ನು ದಾಟಲು ಪತಿಯೇ ದೈವವೆಂದು ಸ್ಮೃತಿಗಳು ಘೋಷಿಸುತ್ತಿವೆ. ಆದ್ದರಿಂದ ನೀನು ನಿನ್ನ ಮನಸ್ಸನ್ನು ಸ್ಥಿರಗೊಳಿಸಿ ಶಿವಸಮಾನನಾದ ನಿನ್ನ ಪತಿಯನ್ನು ಶ್ರದ್ಧಾಭಕ್ತಿಗಳಿಂದ ಸೇವಿಸು. ವೇದೋಕ್ತಿಗಳು ಹೇಳುವಂತೆ ಅವನೇ ನಿನಗೆ ಗತಿ. ನಿನ್ನನ್ನುದ್ಧರಿಸಬಲ್ಲವನು ಅವನೇ! ನಿನ್ನ ಅಂತಃಕರಣದಲ್ಲಿ ದುಃಖಬೇಡ” ಎಂದು ಅವಳಿಗೆ ಶ್ರೀಗುರುವು ಉಪದೇಶಿಸಿದರು. ರತ್ನಾದೇವಿ ಮತ್ತ್ತೊಮ್ಮೆ ಶ್ರೀಗುರುವಿಗೆ ನಮಸ್ಕರಿಸಿ, “ಸ್ವಾಮಿ, ಗುರುಮೂರ್ತಿಯಾದ ನಿಮಗೆ ನಮಸ್ಕಾರಗಳು. ನೀವು ಬ್ರಹ್ಮಜ್ಞಾನಿಗಳು. ಭೂತಭವಿಷ್ಯತ್ತುಗಳನ್ನರಿತವರು. ನನ್ನ ಪ್ರಾರಬ್ಧ ಹೇಗಿದೆಯೋ ತಿಳಿಸಿ. ನನ್ನ ಗತಿ ಎಂತಹುದು ಎಂಬುದನ್ನು ಹೇಳಿ” ಎಂದು ಕೇಳಿದಳು. ಅವಳ ಪ್ರಾರ್ಥನೆಯನ್ನು ಕೇಳಿ ಶ್ರೀಗುರುವು, “ರತ್ನ, ನಿನ್ನ ಮಾತುಗಳು ತಾಮಸಗುಣದಿಂದ ಕೂಡಿದ್ದು. ನೀನು ಪಾಪಗಳನ್ನು ಸಂಚಯಮಾಡಿದ್ದೀಯೆ. ಅನುಭವಿಸದೇ ಅವು ತೀರುವವಲ್ಲ. ಹಿಂದಿನ ಜನ್ಮದಲ್ಲಿ ನೀನು ಗೋವೊಂದನ್ನು ಕೋಲಿನಿಂದ ಹೊಡೆದಿದ್ದೀಯೆ. ನಿನಗೆ ಹತ್ತಿರವಾಗಿದ್ದ ದಂಪತಿಗಳಲ್ಲಿ ವಿರಸವನ್ನುಂಟು ಮಾಡಿದ್ದೀಯೆ. ಹೀಗೆ ನೀನು ಮಾಡಿರುವ ದೋಷಗಳು ಈ ಜನ್ಮದಲ್ಲಿ ಪರಿಪಾಕಗೊಳ್ಳುತ್ತವೆ. ಹಸುವನ್ನು ಹೊಡೆದ ಪಾಪಕ್ಕೆ ನೀನು ಕುಷ್ಠುರೋಗ ಅನುಭವಿಸಬೇಕು. ದಂಪತಿಗಳ ನಡುವೆ ವಿರಹ ಉಂಟುಮಾಡಿದ್ದಕ್ಕೆ ನಿನ್ನ ಗಂಡ ಸನ್ಯಾಸಿಯಾಗಿ ನಿನ್ನನ್ನು ಬಿಟ್ಟುಹೋಗುತ್ತಾನೆ. ನಿನ್ನ ಪೂರ್ವ ದೋಷಗಳಿಂದ ನಿನಗೆ ಇಂತಹ ಫಲಗಳು ದೊರೆಯಲಿವೆ” ಎಂದು ಹೇಳಿದರು. ಅದನ್ನು ಕೇಳಿ, ಆಕೆ ಅತ್ಯಂತ ದುಃಖಿತಳಾಗಿ, “ಗುರುನಾಥ, ನೀನೇ ನನ್ನನ್ನುದ್ಧರಿಸಬೇಕು” ಎಂದು ಅವರ ಪಾದಗಳನ್ನು ಹಿಡಿದು ಬೇಡಿಕೊಂಡಳು. ಅದಕ್ಕೆ ಅವರು, “ಮಗು, ಸ್ವಲ್ಪ ಕಾಲ ಸುಖವನ್ನನುಭವಿಸು. ನಿನ್ನ ಗಂಡ ವಯಸ್ಸಾದಮೇಲೆಯೇ ಸನ್ಯಾಸಿಯಾಗುತ್ತಾನೆ. ಆ ನಂತರದಲ್ಲಿಯೇ ನಿನಗೆ ಕುಷ್ಠುರೋಗ ಪ್ರಾಪ್ತಿಯಾಗುತ್ತದೆ. ಪಾಪಫಲಗಳನ್ನನುಭವಿಸಿದ ಮೇಲೆ ನಿನಗೆ ಸದ್ಗತಿಯಾಗುತ್ತದೆ. ಕುಷ್ಠುರೋಗವು ಆರಂಭವಾದ ಮೇಲೆ ನಿನಗೆ ನನ್ನ ದರ್ಶನವಾಗುತ್ತದೆ. ನಿನ್ನ ಪಾಪ ಪರಿಹಾರಕ್ಕಾಗಿ ಅನುಗುಣವಾದ ಕ್ಷೇತ್ರವು ಭೀಮಾತಟದ ದಕ್ಷಿಣಕ್ಕಿರುವ ಪಾಪವಿನಾಶನವೆಂಬ ತೀರ್ಥವು. ಕುಷ್ಠುರೋಗ ಬಂದೊಡನೆ ನೀನು ಆ ಕ್ಷೇತ್ರಕ್ಕೆ ಹೋಗು. ಗಂಧರ್ವನಗರವು ಭೀಮಾ-ಅಮರಜಾ ನದಿಗಳ ಸಂಗಮದಲ್ಲಿದೆ. ಅದು ಭೂಮಂಡಲದಲ್ಲಿಯೇ ಅತಿ ಪ್ರಸಿದ್ಧವಾದದ್ದು” ಎಂದು ಆದೇಶ ಕೊಟ್ಟು, ಶಿಷ್ಯರೊಡನೆ ಶ್ರೀಗುರುವು ಅಲ್ಲಿಂದ ಹೊರಟು ತ್ರ್ಯಂಬಕ ಕ್ಷೇತ್ರಕ್ಕೆ ಬಂದರು. ಅದು ಗೌತಮಿ ನದಿಯ ಉಗಮ ಸ್ಥಾನ. ತ್ರ್ಯಂಬಕದಿಂದ ಶ್ರೀಗುರುವು ನಾಸಿಕಕ್ಕೆ ಬಂದರು. ಅಲ್ಲಿ ಪುರಾಣೋಕ್ತವಾದ ಅನೇಕ ಪುಣ್ಯ ಕ್ಷೇತ್ರಗಳಿವೆ. ಅವುಗಳೆಲ್ಲದರ ಮಹಿಮೆಯನ್ನು ವಿಸ್ತರಿಸಿ ಹೇಳಲು ಸಾಧ್ಯವಿಲ್ಲ. ಸಂಕ್ಷೇಪವಾಗಿ ಹೇಳುತ್ತೇನೆ ಕೇಳು. ಗೋದಾವರಿ ಲೋಕದಲ್ಲಿ ಅಪಾರವಾದ ಮಹಿಮೆಯುಳ್ಳ ನದಿ. ಅದನ್ನು ವೃದ್ಧಗಂಗಾ ಎಂದೂ ಕರೆಯುತ್ತಾರೆ. ಅದರಲ್ಲಿ ಅನೇಕ ತೀರ್ಥಗಳಿವೆ. ಆ ನದಿ ಮಹೇಶ್ವರನ ಜಟೆಯಿಂದ ಅವತರಿಸಿದ ನದಿ. ಹಿಂದೆ ಋಷೀಶ್ವರನಾದ ಗೌತಮ ಮಹರ್ಷಿಯು ಪ್ರತಿದಿನವೂ ಧಾನ್ಯವನ್ನು ಹರಡಿ, ತಪಸ್ಸು ಮಾಡುತ್ತಿದ್ದನು. ಅಂದುಹರಡಿದ ಧಾನ್ಯ ಅಂದೇ ಮೊಳೆತು ಫಲಕೊಡುತ್ತಿತ್ತು. ಗೌತಮ ಮಹರ್ಷಿಯ ತಪೋ ಮಹಿಮೆ ಅಂತಹುದು. ಒಂದುಸಲ ಅಲ್ಲಿದ್ದ ಇತರ ಋಷಿಗಳೆಲ್ಲರೂ ಕೂಡಿ, “ಈ ಗೌತಮ ಮಹರ್ಷಿ ಶಿವಭಕ್ತ. ಈತ ಗಂಗೆಯನ್ನು ಇಲ್ಲಿಯ ಭೂಮಿಗೆ ತಂದರೆ ನಮಗೆ ಇಲ್ಲೇ ಗಂಗಾಸ್ನಾನವಾಗುತ್ತದೆ. ಯೋಗಯುಕ್ತರು, ಊರ್ಧ್ವರೇತಸ್ಸು ಗಳಾದ ಮುನಿಗಳಿಗೆ ಲಭಿಸುವ ಸದ್ಗತಿ ಈ ನದಿಯ ತೀರಗಳಲ್ಲಿ ವಾಸಿಸುವ ತಿರ್ಯಗ್ಜಂತುಗಳಿಗೂ ಲಭಿಸುತ್ತದೆ. ಮಹಾಮುನಿಗಳು ಕೋಟಿ ವರ್ಷಗಳು ತಪಸ್ಸು ಮಾಡಿ ಪಡೆಯುವ ತಪೋಫಲಕ್ಕೆ ಸಮನಾದ ಫಲ ಗಂಗಾಸ್ನಾನದಿಂದ ಸಿದ್ಧಿಸುತ್ತದೆ. ಈ ಗೌತಮ ಮುನಿ ಗಂಗೆಯನ್ನು ಭೂಮಿಗೆ ತರುವಂತಹ ಪ್ರಯತ್ನ ಮಾಡಬಹುದಾದ ಪ್ರಯತ್ನಶೀಲನು. ಆದ್ದರಿಂದ ಅವನಿಗೆ ಯಾವುದಾದರೂ ಸಂಕಟವನ್ನುಂಟು ಮಾಡಿದರೆ ನಮಗೆ ಗಂಗಾ ಸ್ನಾನ ಲಭ್ಯವಾಗುತ್ತದೆ” ಎಂದು ಯೋಚಿಸಿ, ದರ್ಭೆಗಳಿಂದ ಒಂದು ಗೋವು ಕರುವನ್ನು ಸೃಷ್ಟಿಸಿ ಅವನ್ನು ಗೌತಮ ಮಹರ್ಷಿ ಧಾನ್ಯ ಹರಡುತ್ತಿದ್ದ ಭೂಮಿಯಲ್ಲಿ ಬಿಟ್ಟರು. ಅವನ್ನು ಕಂಡ ಅ ಮುನಿ ಅವುಗಳನ್ನು ಒಂದು ಧರ್ಭೆಯಿಂದ ಅಟ್ಟಿದನು. ಆ ಧರ್ಭೆಯೇ ವಜ್ರಾಯುಧದಂತೆ ಆ ಪಶುಗಳನ್ನು ಮುಟ್ಟಿತು. ತಕ್ಷಣವೇ ಆ ಗೋವು ಕರುಗಳು ಅಲ್ಲಿಯೇ ಸತ್ತು ಬಿದ್ದವು. ಗೌತಮನಿಗೆ ಗೋಹತ್ಯಾ ಪಾಪ ಉಂಟಾಯಿತು. ಋಷಿಗಳೆಲ್ಲರೂ ಸೇರಿ, ಆ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಗಂಗೆಯನ್ನು ಭೂಮಿಗೆ ತಂದು, ಅದನ್ನು ಆ ಪಶುಗಳ ಮೇಲೆ ಹರಿಯುವಂತೆ ಮಾಡಿದರೆ ಅವನು ಪಾಪರಹಿತನಾಗುತ್ತಾನೆ ಎಂದು ಹೇಳಿದರು. ಹಾಗೇ ಆಗಲೆಂದು ಒಪ್ಪಿ, ಗೌತಮ ಮುನಿಯು, ಸಾವಿರ ವರ್ಷಗಳು ತಪಸ್ಸು ಮಾಡಿದನು. ಸದಾಶಿವನು ಪ್ರತ್ಯಕ್ಷನಾಗಿ, ವರ ಕೇಳೆಂದು ಹೇಳಲು, ಗೌತಮನು, ” ಸ್ವಾಮಿ ನೀನು ನನ್ನಲ್ಲಿ ಪ್ರಸನ್ನನಾಗಿದ್ದರೆ ಚರಾಚರಗಳನ್ನೆಲ್ಲ ಉದ್ಧರಿಸಲು ಗಂಗೆಯನ್ನು ಲೋಕಕ್ಕೆ ಕಳುಹಿಸು” ಎಂದನು. ಅವನ ಮಾತಿಗೆ ಒಪ್ಪಿ ಮಹೇಶ್ವರನು ಗಂಗೆಯನ್ನು ಬಿಟ್ಟನು. ಭೂಲೋಕದಲ್ಲಿ ಸರ್ವಹಿತಕ್ಕಾಗಿ, ಗಂಗೆ, ಉತ್ತರದಲ್ಲಿನ ಭಾಗೀರಥಿಯಂತೆ, ದಕ್ಷಿಣದಲ್ಲಿ ಹರಿದು ಬಂದಳು. ಅದೇ ಗೌತಮಿ ನದಿ. ಗೋದಾವರಿ ಎಂಬ ಹೆಸರಿನಿಂದ ಪ್ರಸಿದ್ಧವಾದದ್ದು. ಅದರ ಮಹಿಮೆ ವರ್ಣಿಸಲಸಾಧ್ಯವಾದದ್ದು. ಅದರಿಂದಲೇ, ನಾಮಧಾರಕ, ಶ್ರೀಗುರುವು ಅಲ್ಲಿಗೆ ಬಂದರು. ಅಲ್ಲಿಂದ ಸರ್ವತೀರ್ಥಗಳನ್ನು ಪರ್ಯಟಿಸುತ್ತಾ ಅವರು ಮಂಜರೀ ಕ್ಷೇತ್ರಕ್ಕೆ ಬಂದರು.

ಅಲ್ಲಿ ಮಾಧವಾರಣ್ಯನೆಂಬ ನರಸಿಂಹ ಸ್ವಾಮಿಯ ಅರ್ಚಕನೊಬ್ಬನು ತನ್ನ ಮಾನಸ ಪೂಜೆಯಲ್ಲಿ ಶ್ರೀಗುರುವಿನ ದರ್ಶನಮಾಡುತ್ತಿದ್ದನು. ತಾನು ಮನಸ್ಸಿನಲ್ಲಿ ಧ್ಯಾನಿಸುವ ಶ್ರೀಗುರುವನ್ನು ಪ್ರತ್ಯಕ್ಷವಾಗಿ ಕಂಡ ಆ ಅರ್ಚಕನು ಆಶ್ಚರ್ಯಪಟ್ಟು, ಶ್ರೀಗುರುವನ್ನು ಸ್ತ್ರೋತ್ರಗಳಿಂದ ಸ್ತುತಿಸುತ್ತಾ, “ಶ್ರೀಪಾದರ ಪಾದಯುಗ್ಮಗಳು ದಿವ್ಯನದೀ ತೀರದಲ್ಲಿ ಸ್ಥಾಪಿತವಾಗಿವೆ. ಉತ್ತರ ತೀರ ನಿವಾಸಿಯಾದ ಶ್ರೀನರಸಿಂಹನು ಲಕ್ಷ್ಮೀಸಮೇತನಾಗಿ ಅಲ್ಲಿ ನೆಲೆಸಿದ್ದಾನೆ” ಎಂದು ಹೇಳುತ್ತಾ, ಬಹಳ ಸಂತೋಷದಿಂದ ಶ್ರೀಗುರುವಿಗೆ ನಮಸ್ಕರಿಸಿದನು. ಅದಕ್ಕೆ ಶ್ರೀಗುರುವು, “ಸೇವಾ ಮಾರ್ಗವನ್ನು ಹಿಡಿದು ನೀನು ಸನ್ಮಾರ್ಗದಲ್ಲಿ ಹೆಜ್ಜೆಯಿಟ್ಟಿದ್ದೀಯೆ. ನನ್ನ ದರ್ಶನದಿಂದ ನೀನು ಸಂಸಾರಮಾರ್ಗವನ್ನು ಬಿಟ್ಟು ನನ್ನ ರೂಪವನ್ನು ದರ್ಶನ ಮಾಡಿಕೊಂಡಿರು” ಎಂದು ಹೇಳಿ, ಹರ್ಷಪೂರ್ಣರಾಗಿ ಆ ಅರ್ಚಕನಿಗೆ ತಮ್ಮ ನಿಜ ರೂಪವನ್ನು ತೋರಿಸಲು, ಆ ಅರ್ಚಕನು ಆನಂದ ತುಂಬಿದವನಾಗಿ, ಅವರನ್ನು ಮತ್ತೆ ಮತ್ತೆ ಅನೇಕ ಸ್ತೋತ್ರಗಳಿಂದ ಸ್ತುತಿಸಿದನು.

“ಜಗದ್ಗುರು, ಲೋಕದೃಷ್ಟಿಯಲ್ಲಿ ಮಾನವರಾದರೂ, ನೀವು ಆ ತ್ರಿಮೂರ್ತ್ಯವತಾರವಾದ ಜಗಜ್ಜ್ಯೋತಿಯೇ! ಪರಮಪುರುಷನು. ವಿಶ್ವವನ್ನೇ ಉದ್ಧರಿಸುವಂತಹವನು. ಭೂಲೋಕದಲ್ಲಿ ಅವತರಿಸಿದ ದತ್ತದೇವರು. ನನ್ನನ್ನು ಕೃತಾರ್ಥರನ್ನಾಗಿ ಮಾಡಿ ನಿಮ್ಮ ಚರಣ ದರ್ಶನ ಭಾಗ್ಯವನ್ನು ಕೊಟ್ಟಿರಿ.” ಎಂದು ಅನೇಕ ರೀತಿಯಲ್ಲಿ ಸ್ತುತಿಸಿದ, ಅವನ ಸ್ತೋತ್ರಕ್ಕೆ ಹರ್ಷಿತರಾದ ಶ್ರೀಗುರುವು ಅವನಿಗೆ, “ಮಾಧವಾರಣ್ಯ, ನಿನಗೆ ಮಂತ್ರ ಸಿದ್ಧಿಯಾಗಿದೆ. ಅದರಲ್ಲಿ ಸಂಶಯವಿಲ್ಲ. ಸದ್ಗತಿ ಪಡೆದು ಬ್ರಹ್ಮಲೋಕವನ್ನು ಸೇರುತ್ತೀಯೆ. ದಿನವೂ ನೃಸಿಂಹಮೂರ್ತಿರೂಪದಲ್ಲಿ ನಮ್ಮನ್ನೇ ಮನಸಾ ಪೂಜೆಮಾಡಿದೆ. ಅದರಿಂದಲೇ ನಿನಗೆ ಪ್ರತ್ಯಕ್ಷ ದರ್ಶನ ಕೊಟ್ಟೆವು” ಎಂದು ಹೇಳಿ, ಅವನಿಂದ ಬೀಳ್ಕೊಂಡು, ಶ್ರೀಗುರುವು ಅಲ್ಲಿಂದ ಹೊರಟು ವಾಸರ ಬ್ರಹ್ಮಕ್ಷೇತ್ರವನ್ನು ಸೇರಿದರು. ಅಲ್ಲಿ ಶಿಷ್ಯರೊಡನೆ ಸ್ನಾನಕ್ಕೆಂದು ನದಿಗೆ ಬಂದಾಗ, ಸಾಯಲು ಸಿದ್ಧನಾಗಿ ಬಂದಿದ್ದ ಬ್ರಾಹ್ಮಣನೊಬ್ಬನನ್ನು ಕಂಡರು. ಅವನು ಹೊಟ್ಟೆನೋವಿನಿಂದ ಬಹಳವಾಗಿ ನರಳುತ್ತಾ, ಆ ವೇದನೆಯನ್ನು ಸಹಿಸಲಾರದೆ ಪ್ರಾಣಬಿಡಬೇಕೆಂದು ಬಂದಿದ್ದನು. ಅವನಿಗೆ ಊಟ ಮಾಡಿದರೆ ಪ್ರಾಣಾಂತಿಕವಾದ ನೋವುಂಟಾಗುತ್ತಿತ್ತು. ಆ ನೋವನ್ನು ಸಹಿಸಲಾಗದೆ ಅವನು ಊಟ ಮಾಡುವುದನ್ನೇ ಬಿಟ್ಟಿದ್ದನು. ಅನ್ನ ದ್ವೇಷವಾಗಿದ್ದುದರಿಂದ ಅವನು ಪಕ್ಷಕ್ಕೋ, ತಿಂಗಳಿಗೋ ಒಂದುಸಲ ಊಟ ಮಾಡುತ್ತಿದ್ದನು. ಹೀಗೆ, ಕಷ್ಟವನ್ನನುಭವಿಸುತ್ತಾ ಅವನು ಮಹಾನವಮಿಗೆ ಮುಂಚಿನ ದಿನ ಊಟ ಮಾಡಿದನು. ಅದರಿಂದುಂಟಾದ ನೋವನ್ನು ಭರಿಸಲಾರದೆ ಪ್ರಾಣತ್ಯಾಗಮಾಡಲುದ್ಯುಕ್ತನಾಗಿ, “ಈ ಪ್ರಪಂಚದಲ್ಲಿ ನನ್ನಂತಹ ಪಾಪಾತ್ಮ ಬದುಕಿರಬಾರದು. ಅನ್ನವಿಲ್ಲದೆ ಬದುಕುವುದಾದರೂ ಹೇಗೆ ಸಾಧ್ಯ? ಅನ್ನಕ್ಕೆ ನಾನು ದ್ವೇಷಿಯಾದೆ. ಅದಕ್ಕಿಂತ ಮರಣವೇ ಲೇಸು” ಎಂದು ನಿಶ್ಚಯ ಮಾಡಿಕೊಂಡು, ಕತ್ತಿಗೆ ದೊಡ್ಡ ಕಲ್ಲೊಂದನ್ನು ಕಟ್ಟಿಕೊಂಡು ನದಿಯಲ್ಲಿ ಮುಳುಗಿ ಸಾಯಲು ಬಂದಿದ್ದ ಆ ಬ್ರಾಹ್ಮಣ, ಶಿವ ಸ್ಮರಣೆ ಮಾಡುತ್ತಾ, “ಹಿಂದಿನ ಜನ್ಮದಲ್ಲಿ ನಾನು ಅನ್ನದಾನವೇ ಮುಂತಾದ ಪುಣ್ಯಕಾರ್ಯಗಳನ್ನು ಮಾಡಲಿಲ್ಲವೆಂದು ತೋರುತ್ತದೆ. ಅಥವಾ ಬ್ರಾಹ್ಮಣನ ಭೋಜನವನ್ನೋ ಇಲ್ಲ ಗೋಗ್ರಾಸವನ್ನೋ ಅಪಹರಿಸಿದ್ದಿರಬೇಕು. ಇಲ್ಲವೇ ವಿಶ್ವಾಸಘಾತ ಮಾಡಿದ್ದೆನೋ ಏನೋ? ಅದಕ್ಕೇ ಇಂತಹ ಫಲ ಉಂಟಾಗಿದೆ. ಸದ್ಗುರುವನ್ನು ನಿಂದಿಸಿದ್ದೆನೇನೋ? ಅತಿಥಿಗಳನ್ನು ಆದರಿಸಿ ಭೋಜನವಿಡಲಿಲ್ಲವೇನೋ? ಮಾತಾಪಿತರನ್ನು ಆದರದಿಂದ ಕಾಣದೆ, ಅವರನ್ನು ಹಸಿವಿಟ್ಟು ನಾನು ಮೃಷ್ಟಾನ್ನ ಭೋಜನಮಾಡಿ, ಅವಮಾನಿಸಿದ್ದೆನೇನೋ? ಅಂತಹ ಯಾವುದೋ ಅಕಾರ್ಯ ಮಾಡಿದ್ದಿದುದರಿಂದಲೇ ಈ ಜನ್ಮದಲ್ಲಿ ನಾನು ಇಂತಹ ಯಾತನೆಯನ್ನನುಭವಿಸುತ್ತಿದ್ದೇನೆ” ಎಂದು ವ್ಯಥೆಪಡುತ್ತಾ ನದಿಯಲ್ಲಿ ಪ್ರವೇಶಮಾಡಿದನು. ಅದನ್ನು ಕಂಡ ಶ್ರೀಗುರುವು ಶಿಷ್ಯರನ್ನು ಕರೆದು ತಕ್ಷಣವೇ ಅವನನ್ನು ಕರೆತರಲು ಹೇಳಿದರು. ಶಿಷ್ಯರು ಬೇಗನೇ ಹೋಗಿ ನೀರಿನಲ್ಲಿಳಿದಿದ್ದ ಆ ಬ್ರಾಹ್ಮಣನನ್ನು ಗುರುವಿನ ಬಳಿಗೆ ಕರೆದುತಂದರು. ದುಃಖಿತರಿಗೆ ದಯಾಳುವಾದ ಆ ಗುರುವು, “ಹೇ ಬ್ರಾಹ್ಮಣ, ನೀನೇಕೆ ಪ್ರಾಣತ್ಯಾಗ ಮಾಡಲು ಹೊರಟಿದ್ದೀಯೆ? ಆತ್ಮಹತ್ಯೆ ಮಹಾಪಾಪವಲ್ಲವೇ?” ಎಂದು ಕೇಳಲು, ಆ ಬ್ರಾಹ್ಮಣ, “ಯತೀಶ್ವರ, ನಾನು ಹೇಳಿದ್ದನ್ನು ಕೇಳಿ ನೀವೇನು ಮಾಡಬಲ್ಲಿರಿ? ನನ್ನ ಜನ್ಮವೇ ವ್ಯರ್ಥವಾಗಿದೆ. ಪಕ್ಷಕ್ಕೊಂದುಸಲವೋ ಮಾಸಕ್ಕೊಂದುಸಲವೋ ಊಟಮಾಡಿದರೂ ತಡೆಯಲಾಗದ ಉದರ ಶೂಲೆಯುಂಟಾಗುತ್ತದೆ. ಅದನ್ನು ಸಹಿಸಲಾಗದೆ ಪ್ರಾಣತ್ಯಾಗಮಾಡಲು ನಿಶ್ಚಯಿಸಿದೆ. ಶರೀರವು ಅನ್ನಮಯವು. ಅಂತಹ ಅನ್ನವೇ ನನಗೆ ವೈರಿಯಾಗಿದೆ. ಗುರುನಾಥ, ಅನ್ನವಿಲ್ಲದೆ ಜೀವಿಸುವ ರೀತಿಯನ್ನು ನೀವೇ ತಿಳಿಸಿ” ಎಂದನು. ಅದನ್ನು ಕೇಳಿದ ಶ್ರೀಗುರುವು, “ನಿನ್ನ ಬಾಧೆಯನ್ನು ಒಂದು ನಿಮಿಷದಲ್ಲಿ ಹೊರಗಟ್ಟುವಂತಹ ಔಷಧವನ್ನು ಹೇಳುತ್ತೇನೆ. ಸಂಶಯಪಡಬೇಡ. ನಿನ್ನ ವ್ಯಾಧಿ ಭೂಮಿಯಲ್ಲಿ ಕಲೆತುಹೋಯಿತೆಂದು ತಿಳಿ. ನಿನಗಿಷ್ಟವಾದ ಮೃಷ್ಟಾನ್ನ ಭೋಜನ ಮಾಡು” ಎಂದರು. ಅವರ ಮಾತನ್ನು ಕೇಳಿದ ಆ ಬ್ರಾಹ್ಮಣ ದಿಕ್ಕು ತೋರದೆ, ಮೌನವಾಗಿ ಶ್ರೀಗುರುವಿನ ಪಾದಗಳಲ್ಲಿ ಶಿರವಿಟ್ಟು ನಮಸ್ಕರಿಸಿದನು.

ಆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಅಲ್ಲಿನ ಗ್ರಾಮಾಧಿಕಾರಿ ಸ್ನಾನಕ್ಕೆ ಬಂದನು. ಶ್ರೀಗುರುವನ್ನು ನೋಡಿದ ತಕ್ಷಣವೇ ಅ ಬ್ರಾಹ್ಮಣ. ಅವರ ಬಳಿಗೆ ಬಂದು ಶ್ರೀಗುರುವಿನ ಪಾದಗಳಿಗೆ ನಮಸ್ಕಾರ ಮಾಡಿ, ಭಕ್ತಿಯುಕ್ತನಾಗಿ ಅವರನ್ನು ಪ್ರಾರ್ಥಿಸುತ್ತಾ ನಿಂತನು. ಅವನನ್ನು ಕಂಡು ಶ್ರೀಗುರುವು ಆದರದಿಂದ, “ಅಯ್ಯಾ, ನೀನು ಎಲ್ಲಿಯವನು? ನಿನ್ನ ಹೆಸರೇನು? ಎಲ್ಲವನ್ನು ತಿಳಿಸು” ಎಂದರು. ಅದಕ್ಕೆ ಅವನು, “ನಾನು ಆಪಸ್ತಂಭ ಶಾಖೀಯನು. ಕೌಂಡಿನ್ಯಸ ಗೋತ್ರದವನು. ನನ್ನನ್ನು ಸಾಯಂದೇವನೆನ್ನುವರು. ಕಾಂಚಿಪುರ ನನ್ನ ನಿವಾಸಸ್ಥಾನ. ಉದರಭರಣಕ್ಕಾಗಿ ಯವನೇಶ್ವರನಿಗೆ ಸೇವಕನಾಗಿ, ಇಲ್ಲಿ ಗ್ರಾಮಾಧಿಕಾರಿಯಾಗಿ ಒಂದು ವರ್ಷದಿಂದ ಇದ್ದೇನೆ. ಇಂದು ನಾನು ಧನ್ಯನಾದೆ. ನಿಮ್ಮ ದರ್ಶನವನ್ನು ಮಾಡಿದವನಾದೆ. ಕೃತಾರ್ಥನಾದೆ. ನೀವು ವಿಶ್ವೋದ್ಧಾರಕರು. ಜನ್ಮಜನ್ಮಾಂತರಗಳಲ್ಲಿ ನಾನು ಮಾಡಿದ ಪಾಪಫಲಗಳೆಲ್ಲವೂ ಇಂದು ನಾಶವಾದವು. ನಿಮ್ಮ ಅನುಗ್ರಹ ಪಡೆದವನು ಭವಸಾಗರವನ್ನು ದಾಟುತ್ತಾನೆ. ಅಪ್ರಯತ್ನವಾಗಿ ನಿಮ್ಮ ದರ್ಶನ ನನಗೆ ಲಭ್ಯವಾಯಿತು. ಗಂಗೆ ಪಾಪಗಳನ್ನು, ಚಂದ್ರ ತಾಪವನ್ನು, ಕಲ್ಪವೃಕ್ಷ ದೈನ್ಯವನ್ನು ಹೋಗಲಾಡಿಸುತ್ತವೆ. ಆದರೆ ಶ್ರೀಗುರು ದರ್ಶನವು ಪಾಪ ತಾಪ ದೈನ್ಯಗಳನ್ನು ತಕ್ಷಣವೇ ಪರಿಹರಿಸುತ್ತದೆ. ಗಂಗೆಯಲ್ಲಿ ಸ್ನಾನಮಾಡಿದರೇನೇ ಪಾಪ ಪರಿಹಾರವಾಗುತ್ತದೆ. ಚಂದ್ರನು ರಾತ್ರಿಹೊತ್ತಿನಲ್ಲಿ ಮಾತ್ರ ತಾಪವನ್ನು ಕಳೆಯುತ್ತಾನೆ. ಕಲ್ಪವೃಕ್ಷ ತನ್ನ ನೆರಳಿಗೆ ಬಂದವನಿಗೆ ಮಾತ್ರವೇ ದೈನ್ಯ ಪರಿಹಾರಕವಾಗುತ್ತದೆ. ಹಾಗಲ್ಲದೆ ನಿಮ್ಮ ದರ್ಶನ ಮಾತ್ರದಿಂದಲೇ ಪಾಪ, ತಾಪ, ದೈನ್ಯಗಳು ನಶಿಸಿಹೋಗುತ್ತವೆ. ಚತುರ್ವರ್ಗಫಲಪ್ರದವಾದ ನಿಮ್ಮ ದರ್ಶನವಂತಹದು” ಎಂದು ಸ್ತೋತ್ರಮಾಡುತ್ತಾ ಮತ್ತೆ ಅವರ ಕಾಲಿಗೆರಗಿದನು.

ಶ್ರೀಗುರುವು ಅವನನ್ನು ಮೇಲಕ್ಕೆತ್ತಿ, ಪಕ್ಕದಲ್ಲಿ ಕೂಡಿಸಿಕೊಂಡು, “ಅಯ್ಯಾ, ನನ್ನ ಮಾತು ಕೇಳು. ಈ ಬ್ರಾಹ್ಮಣ ಉದರಶೂಲೆಯಿಂದ ನರಳುತ್ತಿದ್ದಾನೆ. ವ್ಯಾಧಿ ಉಪಶಮನವಾಗಲು ಇವನಿಗೆ ಒಂದು ಔಷಧವನ್ನು ಹೇಳಿದ್ದೇನೆ. ಇವನನ್ನು ನಿನ್ನ ಮನೆಗೆ ಕರೆದುಕೊಂಡು ಹೋಗಿ ಅವನಿಗೆ ಬಹು ಇಷ್ಟವಾದ ಭೋಜನವನ್ನು ನೀಡು. ಅನ್ನ ಊಟಮಾಡುವುದರಿಂದ ಅವನ ವ್ಯಾಧಿಪೀಡೆ ನಾಶವಾಗಿಹೋಗುವುದು. ಇವನು ಹಸಿದುಗೊಂಡಿದ್ದಾನೆ. ಆದ್ದರಿಂದ ತ್ವರೆಯಾಗಿ ಅವನನ್ನು ಕರೆದುಕೊಂಡುಹೋಗಿ ಊಟಮಾಡಿಸು” ಎಂದು ಹೇಳಿದರು. ಅವರ ಮಾತುಗಳನ್ನು ಕೇಳಿದ ಸಾಯಂದೇವ, ವಿನಯದಿಂದ, “ಸ್ವಾಮಿ, ಇವನು ಊಟಮಾಡಿ ಪ್ರಾಣ ಬಿಡುತ್ತಾನೇನೋ? ತಿಂಗಳಿಗೊಂದು ಸಲದಂತೆ ನಿನ್ನೆ ಊಟಮಾಡಿ ಆ ಬಾಧೆ ತಡೆಯಲಾರದೆ ಪ್ರಾಣ ತ್ಯಾಗಕ್ಕೆ ಸಿದ್ಧನಾದನು. ಇವನಿಗೆ ಅನ್ನ ದಾನಮಾಡಿದರೆ ನನಗೆ ಬ್ರಹ್ಮಹತ್ಯಾ ಪಾಪ ಬರುವುದು” ಎಂದು ಸಂದೇಹ ಪೂರ್ವಕವಾಗಿ ಹೇಳಿದನು. ಅದಕ್ಕೆ ಶ್ರೀಗುರುವು, “ಅಯ್ಯಾ, ಇವನಿಗೆ ಔಷಧವನ್ನು ಹೇಳುತ್ತೇನೆ. ಮಾಷಾನ್ನ, ಪರಮಾನ್ನ, ಕಜ್ಜಾಯಗಳು ಇವನಿಗೆ ಪರಮೌಷಧ. ಅವನ್ನು ತಿಂದರೆ ಇವನ ವ್ಯಾಧಿ ನಾಶವಾಗುತ್ತದೆ. ಸಂದೇಹಪಡದೆ ತಕ್ಷಣವೇ ಕರೆದುಕೊಂಡು ಹೋಗಿ, ಅತಿತ್ವರೆಯಾಗಿ ಇವನಿಗೆ ಭೋಜನ ಮಾಡಿಸು” ಎಂದು ಆದೇಶಕೊಟ್ಟರು. ಸಾಯಂದೇವನು ಓಂ ಎಂದು ಹೇಳುತ್ತಾ, ಶ್ರೀಗುರುವನ್ನೂ ಶಿಷ್ಯರೊಡನೆ ತನ್ನ ಮನೆಗೆ ಭಿಕ್ಷೆಗೆ ಬರಬೇಕೆಂದು ಪ್ರಾರ್ಥಿಸಿಕೊಂಡನು. ಶ್ರೀಗುರುವು ಅವನ ಪ್ರಾರ್ಥನೆಯನ್ನು ಮನ್ನಿಸಿದರು. ಸಾಯಂದೇವನು ಬಹಳ ಸಂತೋಷಗೊಂಡನು. ನಾನು, ಇತರಶಿಷ್ಯರು, ಅ ರೋಗಿಯಾಗಿದ್ದ ಬ್ರಾಹ್ಮಣ, ಎಲ್ಲರೂ ಶ್ರೀಗುರುವಿನೊಡನೆ ಸಾಯಂದೇವನ ಮನೆಗೆ ಹೋದೆವು. ಪತಿವ್ರತೆಯಾದ ಅವನ ಪತ್ನಿ, ಬಹಳ ಸಂತೋಷದಿಂದ ನಮ್ಮನ್ನು ಸ್ವಾಗತಿಸಿದಳು. ಶಿಷ್ಯರ ಸಹಿತ, ಆ ದಂಪತಿಗಳು, ಗುರುವಿಗೆ ಷೋಡಶೋಪಚಾರಗಳಿಂದ ಸತ್ಕರಿಸಿದರು. ಅವರು ಮಾಡಿದ ಗುರುಪೂಜಾ ವಿಧಾನವೇ ನನಗೆ ವಿಚಿತ್ರವಾಗಿ ತೋರಿತು. ರಂಗವಲ್ಲಿಯಿಂದ ಒಂದು ಮಂಟಪವನ್ನು ರಚಿಸಿ, ನಾನಾ ವರ್ಣಗಳಿಂದ ಅಷ್ಟದಳಪದ್ಮಗಳನ್ನು ಬರೆದು, ಐದು ಬಣ್ಣಗಳಿಂದ ಚಿತ್ರಚಿತ್ರವಾಗಿ ಆ ಸ್ಥಳವನ್ನು ಅಲಂಕರಿಸಿ, ನಂತರ ಸಂಕಲ್ಪ ಮಾಡಿ, ಸಾಷ್ಟಾಂಗ ನಮಸ್ಕಾರ ಮಾಡಿ, ಸಾಯಂದೇವ ವಿನಯದಿಂದ, ಶಾಸ್ತ್ರೀಯವಾಗಿ ಚಿತ್ರಾಸನದಲ್ಲಿ ಶ್ರೀಗುರುವನ್ನೂ, ಶಿಷ್ಯರನ್ನೂ ಒಂದೊಂದು ಮಂಡಲದಲ್ಲಿ ಕೂಡಿಸಿ, ಕ್ರಮವಾಗಿ ಉಪಚಾರಗಳನ್ನು ಮಾಡಿ, ಪಂಚಾಮೃತವೇ ಮುಂತಾದುವುಗಳಿಂದ, ರುದ್ರಸೂಕ್ತಗಳನ್ನು ಹೇಳುತ್ತಾ ಅವರೆಲ್ಲರ ಪಾದಗಳಿಗೆ ಅಭಿಷೇಕ ಮಾಡಿದರು. ಭಕ್ತಿಯಿಂದ ಮಾಲ್ಯಾದಿಗಳನ್ನು ಶ್ರೀಗುರುವಿಗೆ ಅರ್ಪಿಸಿ, ಜ್ಞಾನಿಯಾದ ಸಾಯಂದೇವನು ಗುರುಪಾದೋದಕವನ್ನು ಒಂದು ಪಾತ್ರೆಯಲ್ಲಿ ಸ್ವೀಕರಿಸಿದನು. ಅ ಪಾದೋದಕಕ್ಕೆ ಮತ್ತೆ ಪೂಜಾದಿಗಳನ್ನು ಮಾಡಿ, ಸದ್ಗುರುವಿಗೆ ನೀರಾಜನ ಕೊಟ್ಟು, ಗೀತವಾದ್ಯಗಳಿಂದ ಸಂತಸಗೊಳಿಸಿದನು. ನಂತರ ಶಿಷ್ಯರಿಗೂ ಅದೇವಿಧದಲ್ಲಿ ಷೋಡಶೋಪಚಾರ ಪೂಜಾದಿಗಳನ್ನು ಮಾಡಿದರು. ವೇದಮಂತ್ರಘೋಷಗಳಿಂದ ಪುಷ್ಪಾಂಜಲಿಯನ್ನು ಕೊಟ್ಟು ಶ್ರೀಗುರುವನ್ನು ಗೀತೋಪಚಾರ ನಮಸ್ಕಾರಗಳಿಂದ ಸಂತೋಷಗೊಳಿಸಿದರು. ಪತಿವ್ರತೆಯಾದ ಪತ್ನಿಯೊಡನೆ ಸಾಯಂದೇವನು ಈ ರೀತಿಯಾಗಿ ಗುರುವನ್ನು ಪೂಜಿಸಿ, ಪರಮಾದರದಿಂದ ಎಲ್ಲರಿಗೂ ನಮಸ್ಕರಿಸಿದನು. ಅವನ ಪೂಜಾದಿಗಳಿಂದ ಸಂತುಷ್ಟನಾದ ಶ್ರೀಗುರುವು, “ನಿನ್ನ ಸಂತತಿಯೆಲ್ಲವೂ ನನ್ನಲ್ಲಿ ಭಕ್ತಿಯಿಂದಿದ್ದು ನಿನ್ನ ಕುಲವನ್ನು ವೃದ್ಧಿಗೊಳಿಸುತ್ತಾರೆ. ನಿನಗೆ ಗುರುಮಹಿಮೆಯ ಅರಿವಾಗಿದೆ. ಪುತ್ರಪೌತ್ರಾದಿಗಳಿಂದ ಕೂಡಿ ನಿನ್ನ ವಂಶವು ವೃದ್ಧಿಯಾಗಲಿ” ಎಂದು ಅವನನ್ನು ಅನುಗ್ರಹಿಸಿದರು. ಆ ನಂತರ ಸಾಯಂದೇವನು ಮಂಡಲಗಳನ್ನು ರಚಿಸಿ, ಪಾತ್ರೆಗಳನ್ನಿಟ್ಟು, ಕ್ರಮವಾಗಿ ಪಾಯಸಾನ್ನ, ಪಕ್ವಾನ್ನ, ಮಾಷಾನ್ನ, ವಿಧವಿಧವಾದ ಭಕ್ಷ್ಯಗಳು, ಸಿಹಿಪದಾರ್ಥಗಳು, ನಾನಾ ವಿಧವಾದ ಪಲ್ಯಗಳು, ಉತ್ತಮವಾಗಿ ತಯಾರಿಸಿದ ವ್ಯಂಜನಗಳು ಮುಂತಾದುವೆಲ್ಲವನ್ನೂ ಬಡಿಸಿ, ಎಲ್ಲರಿಗೂ ಸಾದರವಾಗಿ ಭೋಜನ ಮಾಡಿಸಿದನು. ಉದರಶೂಲೆಯಿಂದ ನರಳುತ್ತಿದ್ದ ಬ್ರಾಹ್ಮಣನು ಯಥೇಷ್ಟವಾಗಿ ಊಟಮಾಡಿದನು. ಆಗ ಒಂದು ವಿಚಿತ್ರವಾಯಿತು. ಸದ್ಗುರು ಕೃಪಾದೃಷ್ಟಿಯಿಂದ ಅವನ ರೋಗವು ಆ ಕ್ಷಣದಲ್ಲೇ ಮಾಯವಾಗಿ ಹೋಯಿತು. ಚಿಂತಾಮಣಿಯ ಸ್ಪರ್ಶಮಾತ್ರದಿಂದ ಕಬ್ಬಿಣ ಚಿನ್ನವಾಗುವಂತೆ ಆ ಉದರಶೂಲಾ ಬಾಧಿತನಾದ ಬ್ರಾಹ್ಮಣ ರೋಗವಿಹೀನನಾದನು. ಸೂರ್ಯೋದಯದಿಂದ ಅಂಧಕಾರವು ತೊಲಗಿ ಹೋಗುವಂತೆ, ಶ್ರೀಗುರುವಿನ ಕೃಪೆಯಿದ್ದರೆ ದೈನ್ಯವೇಕುಂಟಾಗುವುದು? ಶ್ರೀಗುರು, ಅವರ ಶಿಷ್ಯರೊಡನೆ ಸಹಪಂಕ್ತಿ ಭೋಜನ ಮಾಡಿದ ಆ ವಿಪ್ರ ಬಹು ಸಂತುಷ್ಟನಾದನು. ಆ ವಿಚಿತ್ರವನ್ನು ಕಂಡ ಎಲ್ಲರೂ ವಿಸ್ಮಿತರಾದರು. ಆಹಾ! ಅವನಿಗೆ ಶತ್ರುವಾಗಿದ್ದ ಆನ್ನವೇ ಅವನಿಗೆ ದಿವ್ಯೌಷಧವಾಗಿ ಅವನ ರೋಗವು ನಾಶವಾಯಿತು!

ನಾಮಧಾರಕ, ಏನು ಹೇಳಲಿ? ಗುರುಕೃಪೆಯಿಂದ ಜನ್ಮಾಂತರ ಪಾಪಗಳೂ ಕೂಡಾ ನಾಶವಾಗಬಲ್ಲವು. ಇದೊಂದು ವ್ಯಾಧಿಯ ವಿಷಯವೇನು ದೊಡ್ಡದು? ಗುರುಚರಿತ್ರೆಯಲ್ಲಿನ ಈ ಪವಿತ್ರವಾದ ಆಖ್ಯಾನವನ್ನು ಭಕ್ತಿಯಿಂದ ಪಠಿಸಿದವನು, ಕೇಳುವವನು ಇಬ್ಬರಿಗೂ, ಅವರವರ ಮನೆಗಳಲ್ಲಿ ರೋಗ ಭಯವಿರುವುದಿಲ್ಲ.”

ಇಲ್ಲಿಗೆ ಹದಿಮೂರನೆಯ ಅಧ್ಯಾಯ ಮುಗಿಯಿತು.
[08/01 7:50 AM] S. Bhargav: ||ಶ್ರೀ ಗುರು ಚರಿತ್ರೆ – ಹದಿನಾಲ್ಕನೆಯ ಅಧ್ಯಾಯ||

ಸಚ್ಛಿಷ್ಯನಾದ ನಾಮಧಾರಕನು ಸಿದ್ಧಮುನಿಯನ್ನು, “ಯೋಗೀಶ್ವರ, ಜ್ಞಾನಸಾಗರ, ನಿನಗೆ ಜಯವಾಗಲಿ. ಹೊಟ್ಟೆನೋವಿನಿಂದ ನರಳುತ್ತಿದ್ದ ಬ್ರಾಹ್ಮಣನ ರೋಗವನ್ನು ಹೋಗಲಾಡಿಸಿದ ನಂತರದ ವೃತ್ತಾಂತವನ್ನು ಹೇಳಿ” ಎಂದು ಕೇಳಿದನು. ಅದಕ್ಕೆ ಸಿದ್ಧಮುನಿಯು, “ಶ್ರೀಗುರುವು, ಭಿಕ್ಷೆಯನ್ನಿಟ್ಟ ಬ್ರಾಹ್ಮಣ ಸಾಯಂದೇವನನ್ನು ಕರೆದು, “ನಿನ್ನಲ್ಲಿ ಪ್ರಸನ್ನನಾಗಿದ್ದೇವೆ. ನಿನ್ನ ವಂಶಸ್ಥರು ನಮ್ಮ ಭಕ್ತರಾಗುತ್ತಾರೆ” ಎಂದರು. ಅದಕ್ಕೆ ಸಾಯಂದೇವನು ಗುರುವಿಗೆ ಸಾಷ್ಟಾಂಗ ನಮಸ್ಕಾರಮಾಡಿ, “ಸ್ವಾಮಿ, ನೀವು ಮನುಷ್ಯ ರೂಪದಲ್ಲಿರುವ ತ್ರಿಮೂರ್ತಿಗಳ ಅವತಾರವೇ! ನಿಮ್ಮ ಮಹಿಮೆಯನ್ನು ವೇದಗಳೂ ಅರಿಯಲಾರವು. ವಿಶ್ವವ್ಯಾಪಕರಾದ ಬ್ರಹ್ಮ, ವಿಷ್ಣು, ಮಹೇಶ್ವರ ರೂಪಗಳನ್ನು ಮುಚ್ಚಿಟ್ಟು ಈ ರೂಪದಲ್ಲಿ ಭಕ್ತರನ್ನುದ್ಧರಿಸಲು ಬಂದಿದ್ದೀರಿ. ನಿಮ್ಮ ಮಹಿಮೆಯನ್ನು ವರ್ಣಿಸಲು ನನಗೆ ಸಾಧ್ಯವೇ? ನನ್ನದೊಂದು ಪ್ರಾರ್ಥನೆಯಿದೆ. ನನ್ನ ವಂಶದಲ್ಲಿ ಹುಟ್ಟಿದವರಿಗೆ ನಿಮ್ಮಲ್ಲಿ ಭಕ್ತಿ, ಪುತ್ರಪೌತ್ರಾದಿಗಳಿಂದ ಕೂಡಿದ ಸುಖಸಂತೋಷಗಳನ್ನು ಕೊಟ್ಟು, ಕೊನೆಯಲ್ಲಿ ಅವರಿಗೆ ಸದ್ಗತಿಯನ್ನು ಪ್ರಸಾದಿಸಿ. ಕ್ರೂರವಾದ ಯವನನಲ್ಲಿ ಸೇವೆ ಮಾಡುತ್ತಿದ್ದೇನೆ. ಅವನು ರಾಕ್ಷಸನಂತೆ ಪ್ರತಿವರ್ಷವೂ ಒಬ್ಬ ಬ್ರಾಹ್ಮಣನನ್ನು ಸಂಹರಿಸುತ್ತಾನೆ. ಇಂದು ನನ್ನನ್ನು ಸಂಭ್ರಮಾದರಗಳಿಂದ ಆಹ್ವಾನಿಸಿದ್ದಾನೆ. ಅವನ ಬಳಿಗೆ ಹೋದರೆ ಅವನು ನನ್ನನ್ನು ತಪ್ಪದೇ ಸಂಹರಿಸುತ್ತಾನೆ. ನಿಮ್ಮ ಚರಣಗಳನ್ನಾಶ್ರಯಿಸಿದ ನನಗೆ ಅಂತಹ ಮರಣವು ಉಂಟಾಗಬಾರದು” ಎಂದು ಬಿನ್ನವಿಸಿಕೊಳ್ಳಲು, ಶ್ರೀಗುರುವು ಅವನ ತಲೆಯಮೇಲೆ ಕೈಯಿಟ್ಟು, ಅಭಯ ನೀಡಿ, “ಚಿಂತಿಸಬೇಡ. ಕ್ರೂರನಾದ ಆ ಯವನನ ಕಡೆಗೆ ದುಃಖಪಡದೆ ಹೋಗು. ಅವನು ಪ್ರೇಮದಿಂದ ನಿನ್ನನ್ನು ಮತ್ತೆ ನನ್ನೆಡೆಗೆ ಕಳುಹಿಸುತ್ತಾನೆ. ಅಲ್ಲಿಯವರೆಗೂ ನಾವು ಇಲ್ಲಿಯೇ ಇರುತ್ತೇವೆ. ನೀನು ಹಿಂತಿರುಗಿದ ಮೇಲೆ ನಾವು ಸಂತೋಷದಿಂದ ಇಲ್ಲಿಂದ ಹೊರಡುತ್ತೇವೆ. ನಿನ್ನಂತೆಯೇ ನಿನ್ನ ವಂಶಸ್ಥರೆಲ್ಲರೂ ನಮ್ಮ ಭಕ್ತರಾಗುತ್ತಾರೆ. ಪುತ್ರಪೌತ್ರಾದಿಗಳೆಲ್ಲರೂ ಸುಖಸಂತೋಷಗಳುಳ್ಳವರಾಗುವರು. ನಿನ್ನ ಕುಲದಲ್ಲಿ ಎಲ್ಲರಿಗೂ ಆಯುರಾರೋಗ್ಯಗಳು ಇರುತ್ತವೆ” ಎಂದು ಹೇಳಿ ಸಾಯಂದೇವನನ್ನು ಕಳುಹಿಸಿಕೊಟ್ಟರು.

ಅಲ್ಲಿಂದ ಹೊರಟ ಸಾಯಂದೇವನು, ಆ ಯವನ ರಾಜನ ಬಳಿಗೆ ಹೋದನು. ಕಾಲಾಂತಕ ಸದೃಶನಾದ ಆ ಯವನನು ಸಾಯಂದೇವನನ್ನು ನೋಡುತ್ತಲೇ ಅವನಿಗೆ ವಿಮುಖನಾಗಿ, ತನ್ನ ಅಂತರ್ಗೃಹಕ್ಕೆ ಹೊರಟು ಹೋದನು. ಭಯಗೊಂಡ ಸಾಯಂದೇವನು ಮನಸ್ಸಿನಲ್ಲಿಯೇ ಶ್ರೀಗುರುವನ್ನು ಧ್ಯಾನಿಸಿಕೊಂಡನು. ಗುರು ಕೃಪೆಯಿರುವನನ್ನು ಯವನನು ಏನುತಾನೇ ಮಾಡಬಲ್ಲನು? ಹಾವು ಕೄರವಾದರೂ ಗರುಡನನ್ನು ಭಕ್ಷಿಸಬಲ್ಲದೇ? ಐರಾವತವನ್ನು ಸಿಂಹವು ನುಂಗಬಲ್ಲದೇ? ಗುರು ಕೃಪೆಯಿರುವವನಿಗೆ ಕಲಿಯ ಭಯವೂ ಇರುವುದಿಲ್ಲ. ಸದಾ ಮನಸ್ಸಿನಲ್ಲಿ ಗುರು ಧ್ಯಾನಮಾಡುತ್ತಿರುವವನಿಗೆ ಯಾವುದೇ ಭಯವೂ ಇರುವುದಿಲ್ಲ. ಕಾಲಮೃತ್ಯುವು ಕೂಡ ಗುರುಭಕ್ತನನ್ನು ಮುಟ್ಟಲಾರದು. ಅಪಮೃತ್ಯುಭಯವೆಂಬುದು ಅವನಿಗೆ ಇರುವುದಿಲ್ಲ. ಮೃತ್ಯುವಿನ ಭಯವೇ ಇಲ್ಲದವನಿಗೆ ಯವನನ ಭಯ ಹೇಗೆ ಉಂಟಾಗುತ್ತದೆ? ಸಾಯಂದೇವನನ್ನು ಕಂಡ ಆ ಯವನನು ಕಾರಣವೇ ಇಲ್ಲದೆ ಭೀತನಾಗಿ, ಅಂತಃಪುರವನ್ನು ಸೇರಿ, ದುಃಖಿತನಾಗಿ ಗಾಢನಿದ್ರೆಯಲ್ಲಿ ಮುಳುಗಿಹೋದನು. ಎಚ್ಚರಗೊಂಡು, ಹೃದಯವೇದನೆಯಿಂದ ಪ್ರಾಣಾಂತಿಕವಾದ ಬಾಧೆಪಡುತ್ತಾ, ಸ್ವಪ್ನದಲ್ಲಿ ಕಂಡ ದೃಶ್ಯಗಳ ನೆನಪುಗಳು ಬರುತ್ತಿರಲು, “ಆ ಬ್ರಾಹ್ಮಣ ಶಸ್ತ್ರಗಳಿಂದ ನನ್ನ ಅಂಗಾಂಗಗಳನ್ನು ಕತ್ತರಿಸುತ್ತಿದ್ದಾನೆ” ಎಂದು ಹೇಳುತ್ತಾ, ಸಾಯಂದೇವನ ಬಳಿಗೆ ಓಡಿಬಂದು, ನಡುಗುತ್ತಾ, “ಸ್ವಾಮಿ, ನೀನೆ ದಿಕ್ಕು. ನಿನ್ನನ್ನು ಇಲ್ಲಿಗೆ ಯಾರು ಕರೆದರು? ತಕ್ಷಣವೇ ನೀನು ನಿನ್ನ ಮನೆಗೆ ಹಿಂತಿರುಗು” ಎಂದು ಹೇಳಿ, ಅವನಿಗೆ ವಸ್ತ್ರಾದಿಗಳನ್ನು ಅರ್ಪಿಸಿ ಕಳುಹಿಸಿಕೊಟ್ಟನು.

ಸಂತೋಷಗೊಂಡ ಸಾಯಂದೇವನು, ಹಿಂತಿರುಗಿ ಶ್ರೀಗುರುದರ್ಶನ ಕಾತುರನಾಗಿ, ಶ್ರೀಗುರುವು ಇದ್ದ ಗಂಗಾತೀರಕ್ಕೆ ಬಂದನು. ಶ್ರೀಗುರುವನ್ನು ಕಂಡು ಅವರಿಗೆ ನಮಸ್ಕರಿಸಿ, ಸ್ತೋತ್ರಾದಿಗಳಿಂದ ಅವರನ್ನು ಸ್ತುತಿಸಿ, ಅವರಿಗೆ ನಡೆದದ್ದನ್ನೆಲ್ಲಾ ತಿಳಿಸಿದನು. ಶ್ರೀಗುರುವು ಸಂತೃಪ್ತನಾಗಿ, “ನಾವು ದಕ್ಷಿಣದಿಕ್ಕಿನಲ್ಲಿ ಹೊರಟು ಮಾರ್ಗದಲ್ಲಿನ ತೀರ್ಥಗಳನ್ನು ಸಂದರ್ಶಿಸುತ್ತೇವೆ” ಎಂದು ಹೇಳಲು, ಸಾಯಂದೇವನು ವಿನಯದಿಂದ ಕೈಜೋಡಿಸಿ, “ನಾನು ನಿಮ್ಮಪಾದಸೇವಕ. ಪಾಪಹರವಾದ ನಿಮ್ಮ ಚರಣಗಳನ್ನು ಬಿಟ್ಟು ಒಂದು ಕ್ಷಣವೂ ಇರಲಾರೆ. ಸಗರರನ್ನುದ್ಧರಿಸಲು ಗಂಗೆ ಬಂದಂತೆ ನೀವು ನನಗೆ ದರ್ಶನಕೊಡಲೆಂದೇ ಇಲ್ಲಿಗೆ ದಯಮಾಡಿಸಿದಿರಿ. ಭಕ್ತವತ್ಸಲ, ನಿಮ್ಮ ಕೀರ್ತಿ ಯಾರಿಗೆ ಸಂಪೂರ್ಣವಗಿ ತಿಳಿದಿದೆ? ನನ್ನನ್ನು ಬಿಟ್ಟು ಹೋಗಬೇಡಿ. ನಿಮ್ಮಜೊತೆಯಲ್ಲಿಯೇ ಬರುತ್ತೇನೆ” ಎಂದು ಅವರ ಚರಣಗಳಲ್ಲಿ ಬಿದ್ದನು. ಅವನು ವಿನಯದಿಂದ ಮಾಡಿದ ಆ ಪ್ರಾರ್ಥನೆಯನ್ನು ಕೇಳಿದ ಗುರುವು ಸಂತೋಷದಿಂದ, “ಕಾರ್ಯನಿಮಿತ್ತವಾಗಿ ದಕ್ಷಿಣದೇಶಕ್ಕೆ ಹೋಗುತ್ತಿದ್ದೇವೆ. ನಿನಗೆ ಮತ್ತೆ ಹತ್ತು ವರ್ಷಗಳ ನಂತರ ನಮ್ಮ ದರ್ಶನವಾಗುತ್ತದೆ. ಆಗ ನಿನ್ನ ಗ್ರಾಮದ ಹತ್ತಿರದಲ್ಲೇ ಇರುತ್ತೇವೆ. ಆಗ ನೀನು ನಿನ್ನ ಹೆಂಡತಿ ಮಕ್ಕಳೊಡನೆ ಬಂದು ನಮ್ಮನ್ನು ಕಾಣು. ಚಿಂತಿಸಬೇಡ. ನಿನ್ನ ದುರಿತಗಳೆಲ್ಲಾ ನಾಶವಾದವು. ಸುಖವಾಗಿರು” ಎಂದು ಅನುಗ್ರಹ ಮಾಡಿ, ತಲೆಯಮೇಲೆ ಕೈಯಿಟ್ಟು ಆಶೀರ್ವದಿಸಿದರು. ಅಲ್ಲಿಂದ ಹೊರಟ ಶ್ರೀಗುರುವು ಶಿಷ್ಯರೊಡನೆ ವೈದ್ಯನಾಥ ಕ್ಷೇತ್ರವನ್ನು ಸೇರಿದರು. ಅಲ್ಲಿ ಆರೋಗ್ಯಭವಾನಿ ಇದ್ದಾಳೆ. ಶಿಷ್ಯರೊಡನೆ ಕ್ಷೇತ್ರ ಸಂದರ್ಶನ ಮಾಡುತ್ತಾ, ಪ್ರಸಿದ್ಧವಾದ ವೈದ್ಯನಾಥದಲ್ಲಿ ಗುರುವು ರಹಸ್ಯವಾಗಿ ನಿಂತರು” ಎಂದು ಹೇಳಿದ ಸಿದ್ಧಮುನಿಯ ಮಾತನ್ನು ಕೇಳಿ, ನಾಮಧಾರಕ, “ಸ್ವಾಮಿ, ಅಲ್ಲಿ ಶ್ರೀಗುರುವು ರಹಸ್ಯವಾಗಿ ಏಕೆ ನಿಂತರು? ಶಿಷ್ಯರೆಲ್ಲರೂ ಎಲ್ಲಿದ್ದರು?” ಎಂದು ಕೇಳಲು, ಸಿದ್ಧರು ಮುಂದಿನ ಕಥೆಯನ್ನು ಹೇಳಲು ಉಪಕ್ರಮಿಸಿದರು.

ಇಲ್ಲಿಗೆ ಹದಿನಾಲ್ಕನೆಯ ಅಧ್ಯಾಯ ಮುಗಿಯಿತು.
[09/01 6:37 AM] S. Bhargav: ||ಶ್ರೀ ಗುರು ಚರಿತ್ರೆ – ಹದಿನೈದನೆಯ ಅಧ್ಯಾಯ||

“ಅಯ್ಯಾ, ಶಿಷ್ಯಶಿಖಾಮಣಿ, ನೀನು ಹೇಳುತ್ತಿರುವುದು ಧರ್ಮಯುಕ್ತವಾಗಿದೆ. ಗುರು ಚರಣಗಳಲ್ಲಿ ನಿನ್ನ ಮನಸ್ಸು ಧೃಢವಾಗಿ ನಿಂತಿದೆ. ಶ್ರೀಗುರುವು ರಹಸ್ಯವಾಗಿರಲು ಕಾರಣವನ್ನು ಹೇಳುತ್ತೇನೆ. ಕೇಳು. ಶ್ರೀಗುರುವಿನ ಮಹಿಮೆ ಲೋಕದಲ್ಲಿ ಪ್ರಖ್ಯಾತವಾಗಿದ್ದರಿಂದ ಬಹಳ ಜನ ದೂರದೂರಗಳಿಂದ ಅವರ ದರ್ಶನಕ್ಕಾಗಿ ಬರುತ್ತಿದ್ದರು. ಕಲಿಯುಗವಾದದ್ದರಿಂದ, ಸಾಧುಗಳು, ಸಾಧುಗಳಲ್ಲದವರು, ಧೂರ್ತರು ಮುಂತಾದ ಬಹಳ ಜನ ಶಿಷ್ಯರಾಗುತ್ತೇವೆಂದು ಅವರಲ್ಲಿಗೆ ಬರುತ್ತಿದ್ದರು. ಪರಶುರಾಮನು ಕ್ಷತ್ರಿಯರನ್ನೆಲ್ಲ ಸಂಹಾರ ಮಾಡಿ ಗೆದ್ದ ಭೂಮಿಯನ್ನೆಲ್ಲಾ ಬ್ರಾಹ್ಮಣರಿಗೆ ದಾನಮಾಡಿ ತಾನು ಲವಣ ಸಮುದ್ರದ ಪಶ್ಚಿಮ ತೀರ ಸೇರಿದನು. ಅಲ್ಲಿ ತಪಸ್ಸು ಮಾಡುತ್ತಿರುವಾಗ ಅಲ್ಲಿಯೂ ಕೂಡ ಮತ್ತೆ ಕೆಲವರು ಬಂದು ಅವನನ್ನು ಯಾಚಿಸಲಾರಂಭಿಸಿದರು. ಅಷ್ಟೇ ಅಲ್ಲ ಕೆಲವರು, “ಈ ಭೂಮಿಯನ್ನೆಲ್ಲಾ ನಮಗೆ ಕೊಟ್ಟುಬಿಟ್ಟಮೇಲೆ, ನಮಗೆ ಕೊಟ್ಟ ಭೂಮಿಯಲ್ಲಿ ನೀವು ಇರುವುದು ಸಮಂಜಸವಲ್ಲ” ಎಂದೂ ಹೇಳಿದರು. ಅದರಿಂದ ಭಾರ್ಗವನು ಸಹ್ಯಪರ್ವತದ ದಕ್ಷಿಣಕ್ಕಿರುವ ಕೊಂಕಣವೆಂದು ಕರೆಯುವ ಪ್ರದೇಶವನ್ನು ಬಿಟ್ಟು, ಯಾಚಕರಿಂದ ತಪ್ಪಿಸಿಕೊಳ್ಳಲು ಸಮುದ್ರದ ಒಳಗೆ ರಹಸ್ಯವಾಗಿ ನಿಂತನು. ಅದರಂತೆಯೇ ಶ್ರೀಗುರುವು ಕೂಡಾ ಈ ಜನಗಳು ಕೇಳುವ ಅನೇಕ ವರಗಳು ಸಾಧುವಲ್ಲ ಎಂದು ಯೋಚಿಸಿ ರಹಸ್ಯವಾಗಿರಲು ನಿರ್ಧರಿಸಿದರು. ಶ್ರೀಗುರುವು ಜಗದ್ವ್ಯಾಪಕನು. ಕೇಳಿದ ವರದಾನ ಸಮರ್ಥನಾದರೂ, ಅನಿತ್ಯವಾದ ವರಗಳಿಂದ ಪ್ರಯೋಜನವಿಲ್ಲ ಎಂದು ಯೋಚಿಸಿ, ತನ್ನದೇ ಮಾಯೆಯಿಂದ ಅದೃಶ್ಯನಾಗಲು ನಿರ್ಧರಿಸಿದನು.

ಹಾಗೆ ನಿರ್ಧಾರಮಾಡಿ, ಒಂದು ದಿನ ಶ್ರೀಗುರುವು, ತನ್ನ ಶಿಷ್ಯರೆಲ್ಲರನ್ನೂ ಕರೆದು, “ನೀವೆಲ್ಲರೂ ತೀರ್ಥಯಾತ್ರೆಗಳಿಗೆ ಹೊರಡಿ. ಮತ್ತೆ ನಿಮಗೆ ಶ್ರೀಶೈಲದಲ್ಲಿ ನಮ್ಮ ದರ್ಶನವಾಗುತ್ತದೆ” ಎಂದರು. ಶಿಷ್ಯರೆಲ್ಲರೂ, ಶ್ರೀಗುರುವಿನ ಚರಣಗಳನ್ನು ಹಿಡಿದು, “ಹೇ ಕೃಪಾನಿಧಿ, ಗುರುರಾಯ, ನಮ್ಮನ್ನೇಕೆ ಹೀಗೆ ಉಪೇಕ್ಷಿಸುತ್ತಿದ್ದೀರಿ? ನಿಮ್ಮ ಪಾದ ದರ್ಶನವೇ ನಮಗೆ ಸರ್ವತೀರ್ಥ ದರ್ಶನವಲ್ಲವೇ? ನಿಮ್ಮ ಚರಣಗಳನ್ನು ಬಿಟ್ಟು ನಾವು ಇನ್ನೆಲ್ಲಿಗೆ ಹೋಗಬೇಕೋ ನಮಗೆ ತಿಳಿಯದು. ಶ್ರೀಗುರುವಿನ ಪಾದಗಳಲ್ಲಿ ಸರ್ವತೀರ್ಥಗಳೂ ಇವೆ ಎಂಬುದು ಶೃತಿವಾಕ್ಯವಲ್ಲವೇ? ಸರ್ವ ಶಾಸ್ತ್ರಗಳ ಸಿದ್ಧಾಂತವೂ ಅದೇ ಅಲ್ಲವೇ? ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಅಲೆದಾಡುತ್ತಾರೆಯೇ? ಕಲ್ಪವೃಕ್ಷವನ್ನು ಬಿಟ್ಟು ದೂರದ ಮುಳ್ಳುಗಿಡಕ್ಕೆ ಕೈನೀಡುತ್ತಾರೆಯೇ?” ಎಂದು ಕಳಕಳಿಯಿಂದ ಕೇಳಿದರು.

ಅದಕ್ಕೆ ಶ್ರೀಗುರುವು, “ಶಿಷ್ಯರೇ, ನಾವು ಸನ್ಯಾಸಿಗಳು. ಒಂದೇಸ್ಥಳದಲ್ಲಿ ಐದು ದಿನಗಳಿಗಿಂತ ಹೆಚ್ಚುಕಾಲ ನಿಲ್ಲಬಾರದು. ಸನ್ಯಾಸಾಶ್ರಮವನ್ನು ಸ್ವೀಕರಿಸಿ ಭೂಲೋಕದಲ್ಲಿನ ತೀರ್ಥಗಳನ್ನೆಲ್ಲಾ ದರ್ಶಿಸಬೇಕು. ಹಾಗೆ ಮಾಡುವುದರಿಂದ ನಿಮ್ಮ ಚಿತ್ತವು ಸ್ಥಿರವಾಗಿ, ಏಕಾಂತ ವಾಸವೂ ಪ್ರಶಸ್ತವಾಗುತ್ತದೆ. ನನ್ನ ಮಾತನ್ನು ಕೇಳಿ, ನಿಮ್ಮ ಆಶ್ರಮ ಧರ್ಮವನ್ನು ಪಾಲಿಸಿ. ತೀರ್ಥ ಸ್ನಾನಗಳನ್ನು ಮಾಡಿ ಶುದ್ಧರಾಗಿ, ಮತ್ತೆ ನನ್ನನ್ನು ಸೇರಿಕೊಳ್ಳಿ. ಬಹುಧಾನ್ಯ ಸಂವತ್ಸರದಲ್ಲಿ ಶ್ರೀಶೈಲವನ್ನು ಸೇರಿ ಅಲ್ಲಿ ನನ್ನ ದರ್ಶನ ಮಾಡಿಕೊಳ್ಳಿ” ಎಂದರು. ಶಿಷ್ಯರು ಧೃಢಮನಸ್ಕರಾಗಿ, ಅವರ ಆದೇಶವನ್ನು ಸ್ವೀಕರಿಸಿ, ದೈನ್ಯಭಾವದಿಂದ ಶ್ರೀಗುರುವನ್ನು, “ಸ್ವಾಮಿ, ನಿಮ್ಮ ಮಾತುಗಳೇ ನಮಗೆ ಪ್ರಮಾಣ. ಈ ಭೂತಲದಲ್ಲಿರುವ ತೀರ್ಥಗಳನ್ನು ದರ್ಶಿಸಿ ಕೃತಾರ್ಥರಾಗುತ್ತೇವೆ. ಗುರು ವಾಕ್ಯವನ್ನು ಉಲ್ಲಂಘಿಸಿದವನು ರೌರವನರಕವನ್ನು ಸೇರುತ್ತಾನೆಯಲ್ಲವೇ? ಅಂತಹವನಿಗೆ ಯಮಲೋಕವೇ ಮನೆಯಾಗುವುದು. ಹೇ ಗುರುಸಾರ್ವಭೌಮ, ಯಾವಯಾವ ತೀರ್ಥಗಳನ್ನು ನಾವು ಸಂದರ್ಶಿಸಬೇಕು ಎಂಬುದನ್ನು ಹೇಳಿ. ನೀವು ಅಪ್ಪಣೆ ಕೊಟ್ಟ ಹಾಗೆ ನಾವು ನಡೆದುಕೊಳ್ಳುತ್ತೇವೆ. ನಿಮ್ಮ ಮಾತೇ ನಮಗೆ ಸರ್ವಸಿದ್ಧಿಗಳನ್ನು ತಂದುಕೊಡುವುದು” ಎಂದು ಬೇಡಿಕೊಂಡರು. ಅವರ ಮಾತುಗಳಿಂದ ಪ್ರಸನ್ನನಾದ ಶ್ರೀಗುರುವು ಯಾವ ರೀತಿಯಲ್ಲಿ ತೀರ್ಥಯಾತ್ರೆಗಳನ್ನು ಮಾಡಬೇಕು ಎಂಬುದನ್ನು ವಿಸ್ತಾರವಾಗಿ ತಿಳಿಸಿದರು.

“ಈ ಬ್ರಹ್ಮಾಂಡದಲ್ಲಿ ವಿಶೇಷವಾದ, ಪ್ರಸಿದ್ಧವಾದ ತೀರ್ಥರಾಜನು ಕಾಶಿಕ್ಷೇತ್ರವು. ಅಲ್ಲಿಗೆ ಹೋಗಿ ಶುಭಪ್ರದವಾದ, ಭಾಗೀರಥಿಯ ಸೇವೆ ಮಾಡಿ. ಭಾಗೀರಥಿ ತೀರ್ಥಯಾತ್ರೆ (ತಟಯಾತ್ರೆ) ಅರವತ್ತು ಯೋಜನಗಳ ವಿಸ್ತೀರ್ಣವಾದ ಪವಿತ್ರ ಪ್ರದೇಶ. ಅರವತ್ತು ಪಾಪಗಳು ಪರಿಹಾರವಾಗುತ್ತವೆ. ಗಂಗಾ ದ್ವಾರವು ಅದರ ಎರಡರಷ್ಟು ಫಲವನ್ನು ಕೊಡುವುದು. ಯಮುನಾ ತಟಯಾತ್ರೆ ಇಪ್ಪತ್ತು ಯೋಜನಗಳುಳ್ಳದ್ದು. ಅದರಿಂದ ಇಪ್ಪತ್ತು ಪಾಪಗಳು ಪರಿಹಾರಗೊಳ್ಳುತ್ತವೆ. ಮಹಾಗಂಗ ಎನ್ನಿಸಿಕೊಳ್ಳುವ ಸರಸ್ವತಿ, ಕುಮಾರಿಯಾಗಿ, ಭೂಮಿಯಲ್ಲಿ ಅಂತರ್ವಾಹಿನಿಯಾಗಿದ್ದಾಳೆ. ಇಪತ್ತನಾಲ್ಕು ಯೋಜನಗಳಿಂದ ಇಪ್ಪತ್ತನಾಲ್ಕು ಪಾಪಗಳನ್ನು ನಾಶಮಾಡಬಲ್ಲಳು. ತೀರ್ಥಕ್ಷೇತ್ರಗಳು ಎಷ್ಟು ಯೋಜನಗಳೋ ಅಷ್ಟು ಪಾಪಗಳು ಪರಿಹರಿಸಲ್ಪಡುತ್ತವೆ. ಪಿತೃತ್ವ, ಯಜ್ಞಫಲ, ಶಾಶ್ವತ ಬ್ರಹ್ಮಲೋಕ ಪ್ರಾಪ್ತಿಯಾಗುತ್ತದೆ.

ವರುಣ, ಕುಶಾವರ್ತ, ಶತದ್ರು, ವಿಪಾಶಕ, ಶರಾವತಿ, ವಿತಸ್ತ, ಅಸಿಕ್ನಿ, ಮರುಧ್ವದ, ಮಧುಮತಿ, ಪಯಸ್ಥಿತ, ಘೃತವತಿ ಎನ್ನುವ ನದೀತೀರಗಳ ಯಾತ್ರೆಯು ಶುಭಪ್ರದವು. ಭೂಮಂಡಲದಲ್ಲಿ ದೇವನದಿ ಎಂದು ಪ್ರಖ್ಯಾತವಾದ ನದಿತಟಯಾತ್ರೆ ಹದಿನೈದು ಯೋಜನಗಳಷ್ಟು ವಿಸ್ತಾರವಾಗಿದೆ. ಇದು ಪಂಚದಶ ಪಾಪಗಳನ್ನು ಹೋಗಲಾಡಿಸುತ್ತದೆ. ಚಂದ್ರಭಾಗ, ರೇವತಿ, ಸರಯು, ಗೋಮತಿ, ವೇದಿಕ, ಕೌಶಿಕ, ನಿತ್ಯಜಲ, ಮಂದಾಕಿನಿ, ಸಹಸ್ರವಕ್ತ್ರ, ಪೂರ್ಣ, ಬಾಹುದ ಎನ್ನುವ ನದಿಗಳು ಹದಿನಾರು ಯೋಜನಗಳ ವಿಸ್ತಾರವುಳ್ಳದ್ದು. ಅವುಗಳ ಸಂಗಮ ಸ್ಥಾನದಲ್ಲಿ ಸ್ನಾನವು ಬಹು ಪುಣ್ಯ ಫಲವು. ನದಿ ಸಂಗಮದಲ್ಲಿ ಮಾಡಿದ ಸ್ನಾನಕ್ಕೆ ತ್ರಿವೇಣಿ ಸ್ನಾನಫಲ ಉಂಟಾಗುತ್ತದೆ. ವೈರೋಚಿನಿ, ಉತ್ತಮ ತೀರ್ಥವಾದ ಪುಷ್ಕರ, ಫಲ್ಗುನದಿ, ಗಯಾ ಕ್ಷೇತ್ರಗಳು ಬಹು ಫಲದಾಯಕವಾದದ್ದು. ಬದರಿನಾರಾಯಣ, ಅಲಕನಂದ, ಅತಿ ಪುಣ್ಯ ಪ್ರದವಾದವು. ಕುರುಕ್ಷೇತ್ರ, ಶ್ರೀಶೈಲ, ಅನಂತ, ಸೇತು ಬಂಧದಲ್ಲಿ ರಾಮೇಶ್ವರ, ಶ್ರೀರಂಗ, ಪದ್ಮನಾಭ, ನೈಮಿಶಾರಣ್ಯ, ಮನೋಹರವಾದ ಪುರುಷೋತ್ತಮ ತೀರ್ಥಗಳು. ಸೇವೆ ಮಾಡ ತಕ್ಕಂಥ ಕ್ಷೇತ್ರಗಳು. ಮಹಾಲಯತೀರ್ಥ ಪಿತೃಗಳಿಗೆ ತೃಪ್ತಿದಾಯಕವು. ಅಲ್ಲಿ ಸ್ನಾನ ಮಾಡುವುದರಿಂದ ಹನ್ನೆರಡು ತಲೆಮಾರಿನವರು ಸ್ವರ್ಗವನ್ನು ಸೇರಿಕೊಳ್ಳುತ್ತಾರೆ. ಕೇದಾರ, ಕೋಟಿರುದ್ರ, ನರ್ಮದ ಮಹಾಫಲದಾಯಕವಾದವು. ಮಾತೃಕೇಶ, ಕುಬ್ಜತೀರ್ಥ, ಕೋಕಾಮುಖಿ, ಪ್ರಸಾದತೀರ್ಥ, ವಿಜಯತೀರ್ಥ, ಚಂದ್ರತೀರ್ಥ, ಗೋಕರ್ಣ, ಶಂಖಕರ್ಣ, ಈ ಸ್ಥಳಗಳಲ್ಲಿ ಮಾಡಿದ ಸ್ನಾನವು ಮನೋಹರವು.

ಅಯೋಧ್ಯ, ಮಧುರ, ಮಾಯ, ದ್ವಾರವತಿ, ಕಂಚಿ, ಪುರಿ, ಸಾಲಗ್ರಾಮ, ಶಬಲ ಗ್ರಾಮಗಳು ಮುಕ್ತಿದಾಯಕಗಳು. ಗೋದಾವರಿ ತೀರಯಾತ್ರೆ ಆರು ಯೋಜನಗಳ ವಿಸ್ತೀರ್ಣವುಳ್ಳದ್ದು. ಅದು ಅನಂತ ಫಲವನ್ನು ಕೊಡುವಂತಹುದು. ವಾಜಪೇಯ ಯಾಗಪಲವನ್ನು ಕೊಡುವಂತಹುದು. ಗೋದಾವರಿ ತಟಯಾತ್ರೆಯನ್ನು ಮೂರುಸಲ ಮಾಡಿದವರು ಸರ್ವಪಾಪಗಳಿಂದ ಮುಕ್ತಿಪಡೆದು ಜ್ಞಾನಿಗಳಾಗುತ್ತಾರೆ. ಭೀಮೇಶ್ವರ, ಪಂಜರ ಎನ್ನುವ ಎರಡು ಸಂಗಮ ಸ್ಥಾನಗಳು ಪ್ರಯಾಗಕ್ಕೆ ಸಮನಾದವು. ಕುಶ ತರ್ಪಣ ತೀರ್ಥ ದ್ವಾದಶ ಯೋಜನ ಪರಿಮಿತವಾದದ್ದೆಂದು ಪ್ರಸಿದ್ಧಿ. ಇದು ಗೋದಾವರಿ ಸಮುದ್ರ ಸಂಗಮ ಸ್ಥಾನ. ಮುವ್ವತ್ತಾರು ಪಾಪಗಳ ಪರಿಹಾರಕವು. ಪೂರ್ಣಾನದಿ ತಟಯಾತ್ರೆ ಮುವ್ವತ್ತು ಯೋಜನಗಳ ಪ್ರಮಾಣವಿರುವುದು. ಮುವ್ವತ್ತು ಪಾಪಗಳನ್ನು ಹೊರಗಟ್ಟಿ ಪುಣ್ಯವನ್ನು ನೀಡುತ್ತದೆ. ಕೃಷ್ಣವೇಣಿ ಹದಿನೈದು ಪಾಪಗಳನ್ನು ನಾಶಮಾಡುತ್ತದೆ. ತುಂಗಭದ್ರಾ ಯಾತ್ರೆ ಇಪ್ಪತ್ತು ಪಾಪಗಳನ್ನು ನಾಶಮಾಡುತ್ತದೆ. ಪವಿತ್ರವಾದ ಪಂಪಾ ಸರಸ್ಸಿನ ಮಹಿಮೆ ಅನಂತವಾದದ್ದು. ಹಾಗೆಯೇ ಎರಡೂ ಹರಿಹರ ಕ್ಷೇತ್ರಗಳು ಸರ್ವಪಾಪ ಪರಿಹಾರಕಗಳು. ಭೀಮಾ ತಟಯಾತ್ರೆ ಮಾಡಿದವರಿಗೆ ಹತ್ತು ಪಾಪಗಳು ನಿವಾರಣೆಯಾಗಿ, ಪುಣ್ಯ ಲಭ್ಯವಾಗುತ್ತದೆ. ಪಾಂಡುರಂಗ, ಮಾತುಲಿಂಗ, ಗಂಧರ್ವಪುರಗಳಲ್ಲಿ ಅನೇಕ ತೀರ್ಥಗಳಿವೆ. ಅಲ್ಲಿ ದೇವತೆಗಳು ಜನರ ಕೋರಿಕೆಗಳನ್ನು ತೀರಿಸುತ್ತಾರೆ. ಭೀಮಾ ಅಮರಜಾ ನದಿಗಳ ಸಂಗಮದಲ್ಲಿ ಕೋಟಿತೀರ್ಥವಿದೆ. ಅಲ್ಲಿ ಕಲ್ಪವೃಕ್ಷಕ್ಕ್ಕೆ ಸಮಾನವಾದ ಅಶ್ವತ್ಥ ವೃಕ್ಷವಿದೆ. ಅದು ಸರ್ವಕಾಮದಾಯಕ. ಆ ಅಶ್ವತ್ಥದ ಎದುರಿಗೆ ನೃಸಿಂಹ ತೀರ್ಥವಿದೆ. ಅದಕ್ಕೆ ಉತ್ತರದಲ್ಲಿನ ಪ್ರದೇಶ ಕಾಶಿ-ವಾರಣಾಸಿಗಳಿಗೆ ಸಮಾನವಾದ ಪಾಪಹರವಾದ ಪ್ರದೇಶ. ಅದರ ಪೂರ್ವದಲ್ಲಿ ಪರಮ ಪಾವನವಾದ ಪಾಪವಿನಾಶ ತೀರ್ಥವಿದೆ. ಅದೂ ಸರ್ವಪಾಪಹಾರಿಣಿ.

ಚಕ್ರತೀರ್ಥದಲ್ಲಿ ದೇವ ನಾಯಕನಾದ ಕೇಶವನಿದ್ದಾನೆ. ಆ ನಂತರ ಕೋಟಿತೀರ್ಥ ಮನ್ಮಥತೀರ್ಥಗಳಿವೆ. ಕಲ್ಲೇಶ್ವರನಿರುವ ಸ್ಥಳ ಸಾಕ್ಷಾತ್ತು ಗೋಕರ್ಣವೇ ಎನ್ನುತ್ತಾರೆ. ಗಂಧರ್ವಪುರ ಸಿದ್ಧಭೂಮಿ. ಅದಕ್ಕೆ ಸಮಾನವಾದದ್ದು ಯಾವುದೂ ಇಲ್ಲ. ಅಲ್ಲಿ ಅನುಷ್ಠಾನ ಮಾಡಿದವರಿಗೆ ಬಹು ಶೀಘ್ರವಾಗಿ ಇಷ್ಟ ಸಿದ್ಧಿಯಾಗುವುದು. ಕಲ್ಪವೃಕ್ಷವಿರುವೆಡೆಯಲ್ಲಿ ಏನುತಾನೇ ಸಿದ್ಧಿಯಾಗುವುದಿಲ್ಲ? ಕಾಕಿಣಿ ಸಂಗಮವು ಅತ್ಯಂತ ಪುಣ್ಯಫಲದಾಯಕವು. ಅದು ಪ್ರಯಾಗ ಸಂಗಮಕ್ಕೆ ಸಮಾನವಾದುದು. ಹಾಗೆಯೇ ಭೀಮಾನದಿಯೂ ಮಹಾಫಲದಾಯಕವಾದದ್ದು. ತುಂಗಭದ್ರೆಯು ವರದಾಯಿನಿ. ಈ ನದಿಯ ಸಂಗಮಸ್ಥಳವೂ ಬಹು ಫಲಗಳನ್ನು ನೀಡುವಂತಹುದು. ಮಲಾಪಹಾ ಸಂಗಮವು ನೂರುಜನ್ಮಗಳ ಪಾಪವನ್ನು ನಾಶಮಾಡಬಲ್ಲದು. ನಿವೃತ್ತಿ ಸಂಗಮವು ಬ್ರಹ್ಮಹತ್ಯೆಯಂತಹ ಪಾಪವನ್ನು ನಿವಾರಿಸುವಂತಹುದು. ಶಿಷ್ಯರೇ, ಪ್ರೀತಿ, ಭಕ್ತಿ, ಶ್ರದ್ಧೆಗಳಿಂದ ಈ ತೀರ್ಥಗಳೆಲ್ಲವನ್ನೂ ದರ್ಶಿಸಿ. ಪಾಪಗಳೆಲ್ಲವೂ ನಾಶವಾಗುವುವು.

ಬೃಹಸ್ಪತಿ ಸಿಂಹರಾಶಿಯಲ್ಲಿದ್ದಾಗ ಗಂಗೆ ಗೋದಾವರಿಯಲ್ಲಿ ಒಂದುವರ್ಷಕಾಲ ಇರುತ್ತಾಳೆ. ಗುರುವು ಕನ್ಯಾರಾಶಿಯಲ್ಲಿರುವಾಗ ತುಂಗಭದ್ರೆಯಲ್ಲಿ ಗಂಗೆಯಿರುತ್ತಾಳೆ. ಬೃಹಸ್ಪತಿಯು ಕರ್ಕಾಟಕದಲ್ಲಿರುವಾಗ ಗಂಗೆ ಮಲಾಪಹಾ ನದಿಯಲ್ಲಿರುತ್ತಾಳೆ. ಆ ಸಮಯದಲ್ಲಿ ಮಲಾಪಹಾ ನದಿಯಲ್ಲಿ ಸ್ನಾನಮಾಡಿದವರಿಗೆ ಬ್ರಹ್ಮಹತ್ಯಾದಿ ಪಾಪಗಳೂ ತೊಲಗಿಹೋಗುತ್ತವೆ. ಭೀಮಾ ಕೃಷ್ಣಾ ಸಂಗಮದಲ್ಲಿ ಸ್ನಾನಮಾಡಿದವನು ಶುದ್ಧನಾಗಿ ಅರವತ್ತು ಜನ್ಮಗಳಲ್ಲಿ ಸದ್ಬ್ರಾಹ್ಮಣ ವಂಶದಲ್ಲಿಯೇ ಹುಟ್ಟುತ್ತಾನೆ. ತುಂಗಭದ್ರಾ ಸಂಗಮವು ಅದಕ್ಕೆ ಮೂರರಷ್ಟು ಪುಣ್ಯವನ್ನು ಕೊಡುವುದು. ನಿವೃತ್ತಿ ಸಂಗಮವು ನಾಲ್ಕರಷ್ಟುಫಲ ನೀಡುವುದು. ಪಾತಾಳಗಂಗ ಸ್ನಾನ, ಮಲ್ಲಿಕಾರ್ಜುನ ದರ್ಶನ ಆರರಷ್ಟು ಪುಣ್ಯ ನೀಡಿ ಪುನರ್ಜನ್ಮವಿಲ್ಲದಂತೆ ಮಾಡುವುದು. ಯುಗಾಲಯವು ಎರಡರಷ್ಟು ಪುಣ್ಯದಾಯಕವು. ಕಾವೇರಿ ಸಾಗರ ಸಂಗಮ, ಕೃಷ್ಣಾ ಸಮುದ್ರ ಸಂಗಮ ಅದರ ಹದಿನೈದರಷ್ಟು ಪುಣ್ಯಫಲವನ್ನು ಕೊಡುವುದು.

ಮಹಾನದಿ, ತಾಮ್ರಪರ್ಣಿಗಳಲ್ಲಿ ಸ್ನಾನಮಾಡುವವರಿಗೆ ಮಹಾಪುಣ್ಯವು ಲಭಿಸುತ್ತದೆ. ಕೃತಮಾಲಾ ನದಿ ಸರ್ವಪಾಪ ಪರಿಹಾರಕವಾದದ್ದು. ಪಯಸ್ವಿನಿ ನದಿ ಭವನಾಶಿನಿ. ಸಮುದ್ರಸ್ಕಂದ ದರ್ಶನವು ಸಕಲ ಪಾಪನಾಶಕವು. ಶೇಷಾದ್ರಿ, ಶ್ರೀರಂಗನಾಥ, ಪದ್ಮನಾಭ, ಶ್ರೀಮಂತನಾದ ಅನಂತ, ಮಲ್ಲಿಕಾರ್ಜುನ ಪೂಜ್ಯರು. ಕುಂಭಕೋಣವು, ಸಮಸ್ತ ತೀರ್ಥಗಳಿಗೂ ಸಮಾನವಾದ ಪುಣ್ಯಪ್ರದಾಯಿನಿ. ಕನ್ಯಾಕುಮಾರಿಯಲ್ಲಿ, ಮತ್ಸ್ಯತೀರ್ಥಗಳಲ್ಲಿ ಮಾಡಿದ ಸ್ನಾನ ಭವತಾರಿಣಿ. ಪಕ್ಷಿತೀರ್ಥ, ರಾಮೇಶ್ವರ, ಧನುಷ್ಕೋಟಿ, ರಂಗನಾಥನ ಸಮೀಪದಲ್ಲಿನ ಕಾವೇರಿತೀರ್ಥ, ಉತ್ತಮವಾದ ಪುರುಷೋತ್ತಮ ತೀರ್ಥ, ಚಂದ್ರಕುಂಡ, ಮಹಾಲಕ್ಷ್ಮೀಪುರಗಳು ಹೆಸರಾದವು. ಕರವೀರಪುರವು ದಕ್ಷಿಣ ಕಾಶಿಯೇ! ಕೃಷ್ಣಾನದಿ ಉದ್ಭವವಾದ ಪ್ರದೇಶದಲ್ಲಿರುವ ಮಹಾಬಲೇಶ್ವರನು ಶ್ರೇಷ್ಠನಾದವನು. ಕೃಷ್ಣಾತೀರದಲ್ಲಿ ಪವಿತ್ರವಾದ ರಾಮೇಶ್ವರ ಸ್ನಾನ ಪುಣ್ಯಪ್ರದವು. ನೃಸಿಂಹ ದೇವನಿರುವ ಕೋಲ್ಹಾ ಗ್ರಾಮವು ಮಹಾ ಪುಣ್ಯಪ್ರದವಾದದ್ದು ಆ ನೃಸಿಂಹನು ಸದಾಶಿವನೇ! ಪ್ರತ್ಯಕ್ಷವಾಗಿ ಕಾಣಬರುವ ಈಶ್ವರನು. ಕೃಷ್ಣಾತೀರದಲ್ಲಿ ಭಿಲ್ಲವಟಿಯಲ್ಲಿ ಭುವನೇಶ್ವರಿ ಎನ್ನುವ ಶಕ್ತಿರೂಪಿಣಿ ಇದ್ದಾಳೆ. ಅಲ್ಲಿ ತಪವನ್ನಾಚರಿಸಿದವರು ಈಶ್ವರ ಕಳೆಯನ್ನು ಹೊಂದುತ್ತಾರೆ. ಅದಕ್ಕೆ ಮುಂದೆ ವರುಣಾ ಸಂಗಮವಿದೆ. ಅದು ಪಾಪಘ್ನವಾದದ್ದು. ಅಲ್ಲಿ ಮಾಡಿದ ಸ್ನಾನ ಮಾತ್ರದಿಂದಲೇ ಮಾರ್ಕಂಡೇಯ ಸಮಾನತ್ವ ಉಂಟಾಗುತ್ತದೆ. ಆದ್ದರಿಂದ ಆ ಪ್ರದೇಶವನ್ನು ತಪ್ಪದೇ ದರ್ಶನ ಮಾಡಿ.

ಕೃಷ್ಣಾತೀರದಲ್ಲಿ ಅತ್ಯುತ್ತಮವಾದ ಋಷ್ಯಾಶ್ರಮ ಒಂದಿದೆ. ಅಲ್ಲಿ ಕೃಷ್ಣಾನದಿಯಲ್ಲಿ ಸ್ನಾನ ಮಾಡುವವರು ಜ್ಞಾನಿಗಳಾಗುವುದರಲ್ಲಿ ಎಂತಹ ಸಂಶಯವೂ ಇಲ್ಲ. ಅಮರಪುರ ಕೃಷ್ಣವೇಣಿ ನದಿಗಳ ಸಂಗಮ ಸ್ಥಳ. ಪಂಚನದೀ ಸಂಗಮ ಸ್ಥಳವೆಂದು ಪ್ರಸಿದ್ಧಿಯಾಗಿದೆ. ಮಾಘ ಮಾಸದಲ್ಲಿ ಅಲ್ಲಿ ಸ್ನಾನ ಮಾಡಿದರೆ ಪ್ರಯಾಗದಲ್ಲಿ ಮಾಡಿದ ಸ್ನಾನಕ್ಕೂ ಮಿಂಚಿದ ಪುಣ್ಯ ಲಭಿಸುತ್ತದೆ. ಅದು ನಿತ್ಯ ಸತ್ಯ! ಅಲ್ಲಿ ಅನೇಕ ಮುನಿಗಳು ತಪಸ್ಸು ಮಾಡಿ ಸಿದ್ಧಿ ಪಡೆದರು. ಆ ಕ್ಷೇತ್ರಕ್ಕೆ ಸಮನಾದದ್ದು ಬೇರೊಂದಿಲ್ಲ. ಅಲ್ಲಿ ಸರ್ವ ತೀರ್ಥಗಳೂ ಇವೆ ಎಂದು ಪ್ರಖ್ಯಾತಿ. ಅಲ್ಲಿ ಮೂರು ದಿನಗಳು ಅನುಷ್ಠಾನ ಮಾಡಿದವನು ಸರ್ವಾಭೀಷ್ಟಗಳನ್ನೂ ಸಿದ್ಧಿಸಿಕೊಂಡು, ಶೀಘ್ರವಾಗಿ ಪರಮಾರ್ಥವನ್ನು ಪಡೆಯುತ್ತಾನೆ. ನಂತರ ಇರುವ ಯುಗಾಲಯವೆಂಬ ತೀರ್ಥವು ದರ್ಶನ ಮಾತ್ರದಿಂದಲೇ ಮುಕ್ತಿಯನ್ನು ಕೊಡುವುದು. ಅದಾದ ಮೇಲೆ ಶೂರ್ಪಾಲಯ ತೀರ್ಥ. ಇದು ಪರಮ ಪಾವನವಾದದ್ದು. ವಿಶ್ವಾಮಿತ್ರನ ಆಶ್ರಮಕ್ಕೆ ಸಮಾನವಾದ ಮಲಾಪಹಾರ ತೀರ್ಥವು. ಕೃಷ್ಣಾ ಸಂಗಮದಿಂದಾಗಿ ಸರ್ವದೋಷ ಪರಿಹಾರಿಣಿ. ಕಪಿಲಮಹರ್ಷಿ ಸಾಕ್ಷಾದ್ವಿಷ್ಣುವೇ! ಆ ಮುನಿಯ ಆಶ್ರಮವು ಮಹಾತೀರ್ಥವು. ಅಲ್ಲಿ ಕೃಷ್ಣಾ ನದಿ ಉತ್ತರ ವಾಹಿನಿಯಾಗಿದೆ. ಆ ಮಹಾತೀರ್ಥದಲ್ಲಿ ಒಂದುಸಲ ಮಾಡಿದ ಜಪವು ಕೋಟಿ ಜಪದ ಫಲವನ್ನು ನೀಡುತ್ತದೆ. ಅಲ್ಲಿಂದ ಮುಂದೆ ಕೇದಾರೇಶ್ವರ ತೀರ್ಥವಿದೆ.

ನಂತರ ಪೀಠಾಪುರವಿದೆ. ಅದು ಸನಾತನವಾದ ದತ್ತಾತ್ತ್ರೇಯಸ್ವಾಮಿಯ ಶಾಶ್ವತ ನೆಲೆ. ಆ ನಂತರ ಪ್ರಸಿದ್ಧವಾದ ಮಹಾತೀರ್ಥ ಮಣಿಗಿರಿ. ಆಲಿ ಸಪ್ತರ್ಷಿಗಳು ನಿರ್ಮಲರಾಗಿ ತಪವನ್ನಾಚರಿಸಿ ಧನ್ಯರಾದರು. ಮಹಾ ಪುಣ್ಯದಾಯಕವಾದ ಋಷಭಾದ್ರಿಯೂ ಕಲ್ಯಾಣನಗರವೂ ಇವೆ. ಕಲ್ಯಾಣ ನಗರದಲ್ಲಿರುವ ತೀರ್ಥವನ್ನು ಸೇವಿಸುವವನು ಪುನರ್ಜನ್ಮ ರಹಿತನಾಗುತ್ತಾನೆ. ಅಹೋಬಲ ದರ್ಶನದಿಂದ ಮಾನವರು ಅರವತ್ತು ಯಜ್ಞಗಳನ್ನು ಮಾಡಿದ ಪುಣ್ಯಫಲವನ್ನು ಪಡೆಯುತ್ತಾರೆ. ಶ್ರೀರಂಗ ದರ್ಶನದಿಂದಲೂ ಸಹ ಮಾನವರಿಗೆ ಪುನರ್ಜನ್ಮವಿರುವುದಿಲ್ಲ.

ಶಿಷ್ಯರೇ, ನಾನು ಹೇಳಿದ ಸರ್ವ ತೀರ್ಥಗಳನ್ನೂ ವಿಧ್ಯುಕ್ತವಾಗಿ ಸೇವಿಸಿರಿ. ನದಿ ರಜಸ್ವಲೆಯಾಗಿರುವಾಗ ಅದರಲ್ಲಿ ಸ್ನಾನ ಮಾಡುವುದು ದೋಷಕರವು. ರವಿ ಕರ್ಕಾಟಕ ಸಂಕ್ರಾಂತಿಯಿಂದ ಎರಡು ತಿಂಗಳು ನದಿಸ್ನಾನಗಳನ್ನು ಬಿಟ್ಟುಬಿಡಬೇಕು. ನದೀ ತೀರದಲ್ಲಿ ವಾಸಿಸುವವರಿಗೆ ಮಾತ್ರ ಈ ದೋಷವಿರುವುದಿಲ್ಲ ಎಂಬುದು ವಿಶೇಷ. ಮಳೆಗಾಲದಲ್ಲಿ ಸರ್ವನದಿಗಳೂ ರಜಸ್ವಲೆಯರಾಗೇ ಇರುತ್ತವೆ. ರಜೋದೋಷವು ಉಂಟಾದಾಗ ಮೂರುದಿನ ನದಿಗಳಲ್ಲಿ ಸ್ನಾನಾದಿಗಳು ಮಾಡುವುದನ್ನು ಬಿಟ್ಟುಬಿಡಬೇಕು. ಭಾಗೀರಥಿ, ಚಂದ್ರಭಾಗ, ಸಿಂಧು, ಗೌತಮಿ, ಸರಯು, ನರ್ಮದ, ನದಿಗಳಿಗೆ ರಜೋದೋಷವು ಬಂದಾಗಲೂ ಮೂರುದಿನ ಸ್ನಾನಾದಿಗಳು ನಿಷಿದ್ಧ. ಗ್ರೀಷ್ಮ ಋತುವು ಮುಗಿದನಂತರ ಸರ್ವ ನದಿಗಳೂ ಹತ್ತು ದಿನಗಳ ಕಾಲ ರಜಸ್ವಲೆಯಾಗಿರುತ್ತವೆ. ವಾಪಿ ಕೂಪ ತಟಾಕಾದಿಗಳು ಸರ್ವ ಕಾಲದಲ್ಲೂ ರಜಸ್ವಲ್ವೆಗಳೇ! ಹೊಸನೀರು ಬಂದಾಗ ನದಿಗಳು ರಜಸ್ವಲೆಯರೆಂದು ತಿಳಿಯಬೇಕು. ಆಗ ಸ್ನಾನಾದಿಗಳನ್ನು ಮಾಡುವುದು, ಮುಂಚೆಯೇ ಹೇಳಿದಂತೆ, ಮಹಾದೋಷ. ಆದ್ದರಿಂದ ಆ ಕಾಲದಲ್ಲಿ ನದಿಗಳನ್ನು ಬಿಡಬೇಕು. ಅಂತಹ ಸಮಯದಲ್ಲಿ ತೀರ್ಥ ದರ್ಶನವಾದರೆ, ವಿಧ್ಯುಕ್ತವಾಗಿ ಸ್ನಾನ ಕ್ಷೌರ ಉಪವಾಸಗಳನ್ನು ಆಚರಿಸಬೇಕು” ಎಂದು ಶ್ರೀಗುರುವು ಅವರಿಗೆ ವಿವರಿಸಿ, ಹೊರಡಲು ಅಪ್ಪಣೆ ಕೊಟ್ಟರು. ಶಿಷ್ಯರೆಲ್ಲರೂ, ಗುರುವಚನಗಳನ್ನು ಮನಸ್ಸಿನಲ್ಲಿಟ್ಟು, ಅವರಿಗೆ ನಮಸ್ಕರಿಸಿ, ತೀರ್ಥಯಾತ್ರೆಗಳಿಗೆ ಹೊರಟರು. ಶ್ರೀಗುರುವು ಮಾತ್ರ ಅಲ್ಲಿಯೇ ರಹಸ್ಯವಾಗಿ ನಿಂತರು. ಶ್ರೀಗುರುವಿನ ಸೇವೆಗೆಂದು ನಾನು ಅವರ ಜೊತೆಯಲ್ಲಿಯೇ ಇದ್ದೆ” ಎಂದು ಸಿದ್ಧಮುನಿ ನಾಮಧಾರಕನಿಗೆ ಹೇಳಿದರು.

ಇಲ್ಲಿಗೆ ಹದಿನೈದನೆಯ ಅಧ್ಯಾಯ ಮುಗಿಯಿತು.
[09/01 8:54 PM] S. Bhargav: ||ಶ್ರೀ ಗುರು ಚರಿತ್ರೆ – ಹದಿನಾರನೆಯ ಅಧ್ಯಾಯ||

ಶಿಷ್ಯನಾದ ನಾಮಧಾರಕನು ವಿನಯದಿಂದ, “ಸ್ವಾಮಿ, ಆ ನಂತರದ ಗುರುಚರಿತ್ರೆಯನ್ನು ಹೇಳಿ. ಯಾವ ಯಾವ ಶಿಷ್ಯರು ತೀರ್ಥಯಾತ್ರೆಗಳಿಗೆ ಹೊರಟರು? ಯಾರು ಯಾರು ಅವರ ಸೇವೆಯಲ್ಲಿ ನಿಂತರು? ಎಲ್ಲವನ್ನೂ ತಿಳಿಸಿ” ಎಂದು ಕೇಳಲು, ಸಿದ್ಧಮುನಿ ಹೇಳಿದರು. “ಅಯ್ಯಾ, ನಾಮಧಾರಕ, ಬಹಳ ಕಾಲದಿಂದ ಗುರುಚರಿತ್ರೆಯ ಬಗ್ಗೆ ಮಾತನಾಡದೆ ನನ್ನ ಮನಸ್ಸು ಜಡವಾಗಿತ್ತು. ನೀನು ಅದರ ಬಗ್ಗೆ ಕೇಳಿದ್ದರಿಂದ ನನ್ನ ಮನಸ್ಸು ಈಗ ಉಲ್ಹಾಸಗೊಂಡಿದೆ. ನೀನು ನನ್ನ ಪ್ರಾಣಸಖನಾದೆ. ನಿನ್ನನ್ನು ಕಲೆತಾಗಿನಿಂದಲೂ ಗುರುಚರಿತ್ರೆಯು ನನ್ನ ನೆನಪಿಗೆ ಬರುತ್ತಿದೆ. ಇತರ ಯೋಚನೆಗಳಲ್ಲಿ ಮುಳುಗಿ ಹೋಗಿದ್ದ ನಾನು, ಈಗ ನಿನ್ನಿಂದಾಗಿ ಗುರುಚರಿತ್ರೆ ಎಂಬುವ ಅಮೃತವನ್ನು ಕುಡಿಯುವುದರಲ್ಲಿ ಮಗ್ನನಾಗಿ, ಮನಸ್ಸು ಶಾಂತಿಗೊಂಡಿದೆ. ನೀನು ನನಗೆ ಇಂತಹ ಉಪಕಾರ ಮಾಡಿ ಸಂತೋಷವನ್ನು ತಂದುಕೊಟ್ಟೆ. ನಿನ್ನ ಕುಲ ಉದ್ಧಾರವಾಗುತ್ತದೆ. ನೀನು ಪುತ್ರ ಪೌತ್ರರಿಂದ ಕೂಡಿ ಆನಂದಪಡುವೆ. ನಿನ್ನ ಮನೆಯಲ್ಲಿ ದೈನ್ಯವೆಂಬುದು ಇರುವುದಿಲ್ಲ. ಗುರುವಿನ ಅನುಗ್ರಹದಿಂದ ನೀನು ಈ ಲೋಕದಲ್ಲಿ ಮಾನ್ಯನಾಗುತ್ತೀಯೆ. ಸಂಶಯಪಡಬೇಡ. ನನ್ನನ್ನು ನಂಬು. ನಿನಗೆ ಸರ್ವ ಸಂಪದಗಳೂ ಸಿದ್ಧಿಸುತ್ತವೆ. ಗುರುಚರಿತ್ರೆಯನ್ನು ವಿಸ್ತಾರವಾಗಿ ಹೇಳುತ್ತೇನೆ. ಸಾವಧಾನ ಚಿತ್ತನಾಗಿ ಕೇಳು.

ಶ್ರೀಗುರುವು ವೈದ್ಯೇಶ್ವರ ಸನ್ನಿಧಿಯಲ್ಲಿ ರಹಸ್ಯವಾಗಿದ್ದರು. ಶಿಷ್ಯರೆಲ್ಲರೂ ಗುರುವಿನೆ ಆಜ್ಞೆಯಂತೆ ತೀರ್ಥಾಟನೆಗೆಂದು ಹೊರಟು ಹೋಗಿದ್ದರು. ನಾನು ಗುರುದೇವರ ಸೇವೆಗೆಂದು ಅವರ ಜೊತೆಯಲ್ಲಿ ಇದ್ದೆ. ಒಂದು ವರ್ಷಕಾಲ ಶ್ರೀಗುರುವು ವೈದ್ಯನಾಥದಲ್ಲಿ ರಹಸ್ಯವಾಗಿದ್ದರು. ಅಲ್ಲಿ ಆರೋಗ್ಯಭವಾನಿ ಮಾತೆ ಇದ್ದಾಳೆ. ಅದೊಂದು ಮನೋಹರವಾದ ಸ್ಥಳ. ಅವರು ಅಲ್ಲಿದ್ದಾಗ ಒಬ್ಬ ಬ್ರಾಹ್ಮಣ ಬಂದು ಸದ್ಗುರುವಿಗೆ ನಮಸ್ಕಾರಮಾಡಿ, “ಅಜ್ಞಾನವೆನ್ನುವ ಕತ್ತಲೆಯಲ್ಲಿ ಬಿದ್ದಿರುವ ನನ್ನನ್ನು ಉದ್ಧರಿಸಿ. ಬಹಳ ಕಾಲ ತಪಸ್ಸು ಮಾಡಿದರೂ ನನ್ನ ಮನಸ್ಸು ಇನ್ನೂ ಸ್ಥಿರವಾಗಿಲ್ಲ. ಸನ್ಮಾರ್ಗವು ಯಾವುದೆಂದು ತಿಳಿಯುತ್ತಿಲ್ಲ. ಜ್ಞಾನವಿಲ್ಲದ ತಪಸ್ಸು ವ್ಯರ್ಥವಲ್ಲವೇ? ಈಗ ನಿಮ್ಮ ದರ್ಶನ ಮಾತ್ರದಿಂದಲೇ ನನ್ನ ಮನಸ್ಸು ಶಾಂತಗೊಂಡಿದೆ. ಬಹಳಕಾಲ ಗುರುಸೇವೆ ಮಾಡಲಿಲ್ಲವೆಂದೋ ಅಥವಾ ಇನ್ನಾವುದಾದರೂ ಕಾರಣಕ್ಕಾಗಿಯೋ ನನ್ನ ಮನಸ್ಸು ಸ್ಥಿರವಾಗುತ್ತಿಲ್ಲ. ನೀವೇ ಲೋಕೋದ್ಧಾರಕರು. ನನಗೆ ಉಪದೇಶಕೊಟ್ಟು ಜ್ಞಾನೋದಯವಾಗುವಂತೆ ಮಾಡಿ” ಎಂದು ಪ್ರಾರ್ಥಿಸಿಕೊಂಡನು. ಅವನ ಮಾತು ಕೇಳಿ ಗುರುವು ಅವನನ್ನು, “ಅಯ್ಯಾ, ಗುರುವಿಲ್ಲದೆ ನೀನು ಹೇಗೆ ತಪಸ್ಸು ಮಾಡಿದೆ?” ಎಂದು ಕೇಳಿದರು.

ಅದಕ್ಕೆ ಆ ಬ್ರಾಹ್ಮಣ, ಕಣ್ಣೀರು ಸುರಿಸುತ್ತಾ, “ಸ್ವಾಮಿ, ಗುರುನಾಥ, ನನಗೆ ಗುರುವೊಬ್ಬರಿದ್ದರು. ಆತ ಶೀಘ್ರಕೋಪಿ. ಬಹಳ ನಿಷ್ಠೂರವಾದ ಮಾತುಗಳನ್ನಾಡುತ್ತಾ, ನನ್ನಾನ್ನು ದುಷ್ಕರವಾದ ಸೇವೆಯಲ್ಲಿ ನಿಯಮಿಸಿ ಬಹಳವಾಗಿ ಪೀಡಿಸುತ್ತಿದ್ದರು. ವೇದ, ಶಾಸ್ತ್ರ, ತರ್ಕ, ವ್ಯಾಕರಣಗಳೇನನ್ನೂ ಬೋಧಿಸಲಿಲ್ಲ. ಬರಿಯ ಸೇವೆ ಮಾಡಿಸುತ್ತಿದ್ದರು. ನನ್ನ ಮೇಲೆ ಸದಾ ಕೋಪಿಸಿಕೊಳ್ಳುತ್ತಿದ್ದರು. ಅದರಿಂದ ನನ್ನ ಮನಸ್ಸು ಸ್ಥಿರಗೊಳ್ಳಲಿಲ್ಲ. ಅಂತಹ ನಿಷ್ಠುರಗಳನ್ನಾಡುವ ಗುರುವನ್ನು ಬಿಟ್ಟು ಬಂದೆ” ಎಂದು ಹೇಳಿದನು.

ಅದನ್ನು ಕೇಳಿ, ಶ್ರೀಗುರುವು, “ಅಯ್ಯಾ ಬ್ರಾಹ್ಮಣ, ನೀನು ಆತ್ಮಘಾತಕನಾದೆ. ಮೂಢನೊಬ್ಬ ದೇವಾಲಯದೊಳಗೆ ಮಲವಿಸರ್ಜನೆ ಮಾಡುತ್ತಿದ್ದನು. ಅದನ್ನು ಕಂಡ ಇನ್ನೊಬ್ಬ ಅವನನ್ನು ನಿಂದಿಸಿದನು. ಅದಕ್ಕೆ ಆ ಮೂಢ ತನ್ನನ್ನು ನಿಂದಿಸಿದವನನ್ನು ಹಿಂತಿರುಗಿಸಿ ಬೈದನು. ಹಾಗೆ ನೀನು ಕಿವಿ ಮೂಗುಗಳನ್ನು ಕತ್ತರಿಸಿಕೊಂಡು ಹೋಗುತ್ತಿದ್ದೀಯೆ. ಅದೇನೆಂದು ಕೇಳಿದವನನ್ನು ನಿಂದಿಸುತ್ತಿದ್ದೀಯೆ. ನಿನ್ನ ಅವಗುಣಗಳನ್ನು ತಿಳಿದುಕೊಳ್ಳದೆ ನಿನಗೆ ಜ್ಞಾನ ಹೇಗೆ ಲಭ್ಯವಾಗುತ್ತದೆ? ಅಷ್ಟೇ ಆಲ್ಲದೆ ಗುರುನಿಂದೆ ಮಾಡಿ ದುರ್ಬುದ್ಧಿಯಾದ ನೀನು ಗುರು ದ್ರೋಹಿಯಾದೆ. ಮನೆಯನ್ನು ಬಿಟ್ಟು ಕಾಡಿನಲ್ಲಿ ಅಲೆಯುತ್ತಿರುವೆ. ಕಾಮಧೇನುವಂತಹ ಗುರುವನ್ನು ಬಿಟ್ಟು ಓಡಿಹೋಗುತ್ತಿದ್ದೀಯೇಕೆ? ನೀನೇ ನಿನ್ನ ಗುರುವಿನ ದೋಷಗಳನ್ನು ಎತ್ತಿತೋರಿಸಿ ಆಡಿಕೊಳ್ಳುತ್ತಿದ್ದೀಯೆ. ನಿನಗೆ ಮನಸ್ಸು ಹೇಗೆ ಸ್ಥಿರವಾಗಬಲ್ಲದು? ಜ್ಞಾನ ಹೇಗೆ ಉಂಟಾಗುತ್ತದೆ? ಗುರುದ್ರೋಹಿಗೆ ಇಹಪರಗಳೆರಡರಲ್ಲೂ ಸುಖವಿರಲಾರದು. ಅಜ್ಞಾನಾಂಧಕಾರದಲ್ಲಿ ಮುಳುಗಿದವನಿಗೆ ಜ್ಞಾನ ಹೇಗೆ ಲಭಿಸುವುದು? ಗುರುಸೇವಾ ಪದ್ಧತಿಯನ್ನು ಅರಿತವನಿಗೆ ಮಾತ್ರವೇ ವೇದಾದಿಗಳು ತಿಳಿಯುತ್ತವೆ. ಸದ್ಗುರುವು ಸಂತುಷ್ಟನಾದರೆ ಸರ್ವಜ್ಞತ್ವ ಲಭ್ಯವಾಗುತ್ತದೆ. ಸದ್ಗುರುವನ್ನು ಸಂತೋಷಗೊಳಿಸಿದವನು ಅಷ್ಟಸಿದ್ಧಿಗಳನ್ನೂ ಪಡೆಯುತ್ತಾನೆ. ಕ್ಷಣಮಾತ್ರದಲ್ಲಿ ವೇದಶಾಸ್ತ್ರಗಳೆಲ್ಲ ಸುಲಭವಾಗುತ್ತವೆ” ಎಂದು ಹೇಳಿದರು. ಅದನ್ನು ಕೇಳಿದ ಆ ಬ್ರಾಹ್ಮಣ, ಗುರುವಿನ ಚರಣಗಳಲ್ಲಿ ತಲೆಯಿಟ್ಟು, ವಿನೀತನಾಗಿ, ದೀನನಾಗಿ, “ಜ್ಞಾನಸಾಗರ, ನೀವು ನಿರ್ಗುಣರು. ದುರ್ಬುದ್ಧಿಯಾದ ನನ್ನನ್ನು ಉದ್ಧರಿಸಿ. ಮಾಯಾ ಮೋಹಿತನಾದ ನಾನು ಸದ್ಗುರುವನ್ನು ಗುರುತಿಸಲಾರದೆ ಹೋದೆ. ನನ್ನಲ್ಲಿ ದಯೆತೋರಿ ಜ್ಞಾನದಾನ ಮಾಡಿ. ಗುರುಸೇವಾ ರೀತಿ ಹೇಗೆ? ನನ್ನ ಮನಸ್ಸು ಸ್ಥಿರವಾಗಿ, ಹೇಗೆ ಗುರುವನ್ನು ತಿಳಿದುಕೊಳ್ಳಬೇಕು? ಹೇ ವಿಶ್ವವಂದ್ಯ, ಎಲ್ಲವನ್ನೂ ವಿಸ್ತರಿಸಿ ಹೇಳಿ, ನನಗೆ ಉಪಕಾರ ಮಾಡಿ” ಎಂದು ಪ್ರಾರ್ಥಿಸಿಕೊಂಡನು.

ಅವನ ಮಾತುಗಳನ್ನು ಕೇಳಿದ ಗುರುವು ಅವನಲ್ಲಿ ಕೃಪೆಮಾಡಿ, “ಅಯ್ಯಾ, ಗುರುವೇ ತಂದೆ, ತಾಯಿ, ಹಿತಕರ್ತ, ಉದ್ಧರಿಸುವವನು. ಅವನೇ ತ್ರಿಮೂರ್ತಿ ಸ್ವರೂಪನು. ಅದರಲ್ಲಿ ಸಂಶಯಬೇಡ. ಮನಸ್ಸನ್ನು ಸ್ಥಿರಮಾಡಿ ಕಷ್ಟಪಟ್ಟಾದರೂ, ಗುರುಸೇವೆಯನ್ನು ಮಾಡಬೇಕು. ಮಹಾಭಾರತದ ಆದಿಪರ್ವದಲ್ಲಿ ಗುರುಸೇವೆಯ ಬಗ್ಗೆ ವಿಶೇಷವಾಗಿ ಹೇಳಲ್ಪಟ್ಟಿದೆ. ಅದಕ್ಕೆ ನಿದರ್ಶನವಾಗಿ ಒಂದು ಕಥೆಯನ್ನು ಹೇಳುತ್ತೇನೆ. ಸಮಾಧಾನಚಿತ್ತನಾಗಿ ಕೇಳು.

ದ್ವಾಪರಯುಗದಲ್ಲಿ ಧೌಮ್ಯನೆಂಬ ಋಷಿವರ್ಯನೊಬ್ಬನಿದ್ದನು. ಆತ ಮಹಾಜ್ಞಾನಿ. ಆತನಿಗೆ ಅರುಣ, ಬೈದ, ಉಪಮನ್ಯು ಎಂಬ ಮೂರು ಜನ ಗುರುಸೇವಾ ಪರಾಯಣರಾದ ಶಿಷ್ಯರಿದ್ದರು. ಶಿಷ್ಯನ ಸೇವೆಯನ್ನು ಸ್ವೀಕರಿಸಿ, ಅವನ ಅಂತಃಕರಣ ಶುದ್ಧಿಗಾಗಿ ಅವನನ್ನು ಪರೀಕ್ಷಿಸಿ, ಅವನಲ್ಲಿ ಭಕ್ತಿ ಧೃಢವಾಗಿ ನೆಲೆಗೊಂಡಿದೆ ಎಂಬುದನ್ನು ಖಚಿತ ಮಾಡಿಕೊಂಡ ನಂತರ ಅವನ ಅಭೀಷ್ಟಗಳನ್ನು ನೆರವೇರಿಸುವುದು, ಅವನನ್ನು ಅನುಗ್ರಹಿಸುವುದು ಪ್ರಾಚೀನ ಗುರು ಸಂಪ್ರದಾಯ. ಅದರಂತೆ ಧೌಮ್ಯನು ಅವರನ್ನು ಪರೀಕ್ಷಿಸಲು ನಿರ್ಧರಿಸಿಕೊಂಡನು.

ಅದರಂತೆ, ಒಂದು ದಿನ ಧೌಮ್ಯನು ಅರುಣನನ್ನು ಕರೆದು, “ಅರುಣ, ಹೊಲದಲ್ಲಿ ಧಾನ್ಯವನ್ನು ಹಾಕಿದ್ದೇವೆ. ನೀರಿಲ್ಲದಿದ್ದರೆ ಅದು ಒಣಗಿಹೋಗುತ್ತದೆ. ನೀನು ಹೋಗಿ ಕೆರೆಯಿಂದ ನೀರು ಹಾಯಿಸಿ ಹೊಲದಲ್ಲಿ ನೀರು ತುಂಬಿಸಿ ಬಾ” ಎಂದನು. ಗುರುವಿನ ಆಜ್ಞೆಯಂತೆ ಅರುಣ ಹೊಲಕ್ಕೆ ಹೋಗಿ ನದಿಯಿಂದ ಹೊಲಕ್ಕೆ ಕಾಲುವೆ ಮಾಡಿದನು. ಆದರೆ ನೀರಿನ ಪ್ರವಾಹವು ಕಾಲುವೆಯೊಳಕ್ಕೆ ಬಹಳ ವೇಗವಾಗಿದ್ದುದರಿಂದ ಕಾಲುವೆಯ ಪಕ್ಕಗಳು ಕುಸಿದು ನೀರು ಅಕ್ಕ ಪಕ್ಕಗಳಿಗೆ ಹರಿದು ಹೋಗಿ, ಹೊಲ ಸ್ವಲ್ಪ ಎತ್ತರದಲ್ಲಿದ್ದುದರಿಂದ, ಹೊಲದೊಳಕ್ಕೆ ಹೋಗುತ್ತಿರಲಿಲ್ಲ. ನೀರನ್ನು ಹೊಲದೊಳಕ್ಕೆ ಹರಿಸಲು ಮಾಡಿದ ಅವನ ಎಲ್ಲ ಪ್ರಯತ್ನಗಳೂ ವಿಫಲವಾದವು. ನೀರನ್ನು ಸರಿಯಾದ ದಾರಿಗೆ ತರಲು ಅವನು ದೊಡ್ಡ ದೊಡ್ಡ ಕಲ್ಲುಗಳನ್ನು ಅಡ್ಡ ಇಟ್ಟನು. ಆದರೆ ನೀರು ಹೋಗ ಬೇಕಾದ ದಾರಿಯನ್ನೇ ಬಿಟ್ಟು ಬೇರೆ ದಾರಿ ಹಿಡಿಯಿತು. ಹೊಲದೊಳಕ್ಕೆ ನೀರು ಹರಿಯಲಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಅವನು ನೀರನ್ನು ಹೊಲದೊಳಕ್ಕೆ ತರಲಾಗಲಿಲ್ಲ. ಅದರಿಂದ ಬಹಳ ನಿರಾಶನಾದ ಅರುಣ, ದೇವರನ್ನು ಸ್ಮರಿಸುತ್ತ, ನೀರು ಹೊಲದೊಳಕ್ಕೆ ಹೋಗದಿದ್ದರೆ ನಾನು ಪ್ರಾಣತ್ಯಾಗ ಮಾಡುತ್ತೇನೆ ಎಂದು ನಿರ್ಧರಿಸಿ, ಶ್ರೀಗುರುವಿನ ಧ್ಯಾನಮಾಡುತ್ತಾ, ಕಲ್ಲುಗಳಿಟ್ಟುದದರಿಂದ ಅಡ್ಡ ದಾರಿಯನ್ನು ಹಿಡಿದಿದ್ದ ನೀರಿನ ಎದುರಿಗೆ ತನ್ನ ದೇಹವನ್ನೇ ಇಟ್ಟು ನೀರಿನ ಪ್ರವಾಹವನ್ನು ತಡೆದನು. ಆಗ ನೀರು ಸರಿಯಾದ ದಾರಿಯನ್ನು ಹಿಡಿದು ಹೊಲದೊಳಕ್ಕೆ ಹೊರಟಿತು. ಆ ಪ್ರಯತ್ನದಿಂದ ಅವನ ದೇಹವು ನೀರಿನಲ್ಲಿ ಮುಳುಗಿ ಹೋಯಿತು. ಹಾಗೆ ಅವನು ಗುರುವಿನ ಆಜ್ಞೆಯನ್ನು ಪಾಲಿಸಿದನು. ಬಹಳ ಹೊತ್ತಾದರೂ ಅರುಣ ಹಿಂತಿರುಗಿ ಬರಲಿಲ್ಲವೆಂದು ಆತಂಕಗೊಂಡ ಗುರುವು ಅಲ್ಲಿಗೆ ಬಂದು ಹೊಲದಲ್ಲಿ ನೀರು ತುಂಬಿರುವುದನ್ನು ನೋಡಿ ಬಹಳ ಸಂತೋಷಗೊಂಡನು. ಆದರೆ ಶಿಷ್ಯನಾದ ಅರುಣ ಎಲ್ಲಿಯೂ ಕಾಣಲಿಲ್ಲವಾದ್ದರಿಂದ ಅವನನ್ನು ಹುಡುಕುತ್ತಾ, “ಹೇ ಅರುಣ ಎಲ್ಲಿದ್ದೀಯೆ?” ಎಂದು ಗಟ್ಟಿಯಾಗಿ ಕೂಗುತ್ತಾ, ಅವನ ಜಾಡನ್ನು ಹುಡುಕಲು ಆರಂಭಿಸಿದನು. ಗುರುವಿನ ಕೂಗು ಅರುಣನ ಕಿವಿಗೆ ಬಿದ್ದು, ಅವನು ಪ್ರಯತ್ನಮಾಡಿ ಮೆಲ್ಲಮೆಲ್ಲಗೆ ಎದ್ದುಬಂದು ಗುರುವಿನ ಪಾದಗಳಿಗೆ ನಮಸ್ಕರಿಸಿ, ಭಕ್ತಿಯಿಂದ ಗುರುವಿನ ಎದುರಿಗೆ ನಿಂತನು. ಅವನಿಂದ ಎಲ್ಲವನ್ನೂ ಕೇಳಿಸಿಕೊಂಡ ಗುರುವು, ಅವನನ್ನು ಆಲಂಗಿಸಿಕೊಂಡು, “ನೀನು ನನ್ನ ಶಿಷ್ಯರಲ್ಲಿ ಉತ್ತಮನು. ನೀನು ವೇದಶಾಸ್ತ್ರ ನಿಪುಣನಾಗು” ಎಂದು ಆಶೀರ್ವದಿಸಿದನು. ಮತ್ತೊಮ್ಮೆ ತನ್ನ ಪಾದಗಳಿಗೆ ನಮಸ್ಕರಿಸಿದ ಅರುಣನನ್ನು, ಕೃಪಾನಿಧಿಯಾದ ಧೌಮ್ಯನು, “ಮಗು ನೀನು ಇನ್ನು ನಿನ್ನ ಮನೆಗೆ ಹೋಗಿ, ಅನುರೂಪಳಾದ ಕನ್ಯೆಯನ್ನು ವಿವಾಹ ಮಾಡಿಕೊಂಡು ಕೃತಾರ್ಥನಾಗು” ಎಂದು ಮತ್ತೊಮ್ಮೆ ಅಶೀರ್ವದಿಸಿ ಕಳುಹಿಸಿದನು. ಗುರ್ವಾಜ್ಞೆಯನ್ನು ಶಿರಸಾವಹಿಸಿ ಅರುಣ ತನ್ನ ಮನೆಗೆ ಹಿಂತಿರುಗಿ ವಿದ್ವದ್ವೇತ್ತನಾಗಿ ಸುಖವಾಗಿ ಜೀವಿಸಿದನು.

ಅರುಣ ಹೊರಟುಹೋದಮೇಲೆ ಧೌಮ್ಯನಿಗೆ ಇನ್ನೂ ಇಬ್ಬರು ಶಿಷ್ಯರಿದ್ದರು. ಅವರಲ್ಲಿ ಬೈದನನ್ನು ಪರೀಕ್ಷಿಸಲು ಧೌಮ್ಯನು ಅವನನ್ನು ಕರೆದು, “ಬೈದ, ಹೊಲಕ್ಕೆ ಹೋಗಿ ಅಲ್ಲಿ ದಿನಪೂರ್ತಿ ಕಾವಲಿದ್ದು ಬೆಳೆಯನ್ನು ಕಾಪಾಡಿ, ಅದು ಪಕ್ವವಾದ ಮೇಲೆ ಕೊಯ್ದು, ಧಾನ್ಯವನ್ನೆಲ್ಲಾ ಮನೆಗೆ ತೆಗೆದುಕೊಂಡು ಬಾ” ಎಂದು ಹೇಳಿದನು. ಗುರುವಿನ ಆಜ್ಞೆಯನ್ನು ಶಿರಸಾವಹಿಸಿ, ಬೈದನು ಸಂತೋಷದಿಂದ ಹೊಲಕ್ಕೆ ಹೋಗಿ ಫಸಲು ಪಕ್ವವಾಗುವವರೆಗೂ ಅದನ್ನು ಕಾಯುತ್ತಿದ್ದು, ಪಕ್ವವಾದಮೇಲೆ ಅದನ್ನು ಕೊಯ್ದು ಧಾನ್ಯವನ್ನೆಲ್ಲಾ ಬೇರೆಮಾಡಿ, ಗುರುವಿನ ಸನ್ನಿಧಿಗೆ ಬಂದು, “ಧಾನ್ಯವನ್ನೆಲ್ಲಾ ಬೇರೆಮಾಡಿ, ರಾಶಿಮಾಡಿದ್ದೇನೆ. ಅದನ್ನು ಮನೆಗೆ ತರಲು ಅನುಮತಿ ಕೊಡಿ” ಎಂದು ಹೇಳಿದನು. ಧೌಮ್ಯನು ಅವನಿಗೆ ಗಾಡಿಯೊಂದನ್ನು ಕೊಟ್ಟು, “ಬೇಗ ಹೋಗಿ ಧಾನ್ಯವನ್ನೆಲ್ಲ ತಂದು ಮನೆಗೆ ಸೇರಿಸು” ಎಂದು ಹೇಳಿದನು. ಆ ಗಾಡಿಗೆ ಎರಡು ಎಮ್ಮೆಗಳ ಬದಲಾಗಿ ಒಂದೇ ಎಮ್ಮೆಯಿತ್ತು. ಬೈದನು, ಗಾಡಿಯಲ್ಲಿ ಧಾನ್ಯವನ್ನೆಲ್ಲ ತುಂಬಿ, ಒಂದೇ ಎಮ್ಮೆ ಇದ್ದದ್ದರಿಂದ ಅದನ್ನು ಒಂದು ಕಡೆ ಕಟ್ಟಿ, ಇನ್ನೊಂದು ಕಡೆ ತಾನೇ ನೊಗವನ್ನು ಹಿಡಿದು ಗಾಡಿಯನ್ನು ಎಳೆದು ತರುತ್ತಿರುವಾಗ, ದಾರಿಯಲ್ಲಿ ಎಮ್ಮೆ ಒಂದು ಹಳ್ಳದಲ್ಲಿ ಬಿದ್ದು ಹೋಯಿತು. ಬೈದನು ಆ ಎಮ್ಮೆಯನ್ನು ನೊಗದಿಂದ ಬಿಡಿಸಿ, ತಾನೊಬ್ಬನೇ ಗಾಡಿಯನ್ನು ಎಳೆಯಲು ಪ್ರಯತ್ನಿಸಿದನು. ತನ್ನ ಬಲವನ್ನೆಲ್ಲ ಬಿಟ್ಟು ಬಹು ಭಾರವಾದ ಆ ಗಾಡಿಯನ್ನು ಎಳೆಯುತ್ತಿರಲು, ಉಸಿರುಕಟ್ಟಿ ಮೂರ್ಛಿತನಾಗಿ ಬಿದ್ದುಬಿಟ್ಟನು. ಬಹಳ ಸಮಯವಾದರೂ ಮನೆಗೆ ಬೈದನು ಬರಲಿಲ್ಲವೆಂದು ಅವನನ್ನು ಹುಡುಕುತ್ತಾ ಬಂದ ಧೌಮ್ಯನು, ಅವನು ಮೂರ್ಛಿತನಾಗಿ ಬಿದ್ದಿದ್ದುದನ್ನು ಕಂಡು, ಅವನನ್ನು ಎಬ್ಬಿಸಿ, ಆಲಂಗಿಸಿಕೊಂಡು, “ನೀನು ವೇದಶಾಸ್ತ್ರವೇತ್ತನಾಗು” ಎಂದು ಆಶೀರ್ವದಿಸಿದನು, ಕ್ಷಣದಲ್ಲಿಯೇ ಸರ್ವವಿದ್ಯಾ ವಿಶಾರದನಾಗಿ ಬೈದನು, ಗುರುವಿನ ಅನುಮತಿ ಪಡೆದು, ತನ್ನ ಮನೆಗೆ ಹಿಂತಿರುಗಿ ಪ್ರಖ್ಯಾತನಾದನು.

ಮೂರನೆಯವನು ಉಪಮನ್ಯುವು. ಅವನೂ ಗುರುಸೇವಾ ಪರಾಯಣನೇ! ಆದರೆ ಅವನು ಆಹಾರ ಪ್ರಿಯನಾದದ್ದರಿಂದ ಅವನಿಗೆ ವಿದ್ಯಾಭ್ಯಾಸದಲ್ಲಿ ಮನಸ್ಸು ಸ್ಥಿರವಾಗಲಿಲ್ಲ. ಅದರ ಬಗ್ಗೆ ಚಿಂತಿಸಿ ಧೌಮ್ಯನು ಒಂದು ಉಪಾಯವನ್ನು ಮಾಡಿದನು. ಒಂದು ದಿನ ಧೌಮ್ಯನು ಉಪಮನ್ಯುವನ್ನು ಕರೆದು, “ಮಗು, ಹಸುಗಳನ್ನು ಪ್ರತಿದಿನವೂ ಕಾಡಿಗೆ ಕರೆದುಕೊಂಡು ಹೋಗಿ ಅವನ್ನು ಮೇಯಿಸಿಕೊಂಡು ಬಾ” ಎಂದು ಹೇಳಿದನು. ಉಪಮನ್ಯುವು ಗುರುವಾಜ್ಞೆಯನ್ನು ಶಿರಸಾವಹಿಸಿ, ಹಸುಗಳನ್ನು ಕರೆದುಕೊಂಡು ಹೋಗುತ್ತಿದ್ದನು. ಆದರೆ ಅವನಿಗೆ ಹಸಿವು ಹೆಚ್ಚಾಗಿದ್ದುದರಿಂದ ಅವನು ಹಸಿವೆಯನ್ನು ತಾಳಲಾರದೆ, ಬಹಳ ಬೇಗ ಮನೆಗೆ ಹಿಂತಿರುಗುತ್ತಿದ್ದನು. ಅದನ್ನು ಗಮನಿಸಿದ ಗುರುವು, ಕೋಪಗೊಂಡು, “ನೀನೇಕೆ ಹಸುಗಳನ್ನು ಬೇಗನೆ ಮನೆಗೆ ಕರೆದುಕೊಂಡು ಬರುತ್ತಿದ್ದೀಯೆ? ಸೂರ್ಯಾಸ್ತಮದವರೆಗೂ ಅವುಗಳನ್ನು ಮೇಯಿಸಿಕೊಂಡು ಬರಬೇಕು” ಎಂದು ಆಜ್ಞೆ ಮಾಡಿದನು. ಹಾಗೇ ಆಗಲೆಂದು ಹೇಳಿ, ಉಪಮನ್ಯುವು ಹಸುಗಳನ್ನು ಕರೆದುಕೊಂಡು ಹೋಗಿ, ಹಸಿವೆಯನ್ನು ತಾಳಲಾರದೆ, ಅಲ್ಲಿ ನದಿಯಲ್ಲಿ ಸಂಧ್ಯಾ ಕರ್ಮಗಳನ್ನಾಚರಿಸಿ, ಹತ್ತಿರದಲ್ಲಿದ್ದ ಗ್ರಾಮದಲ್ಲಿ ಬ್ರಾಹ್ಮಣರ ಮನೆಗಳಲ್ಲಿ ಭಿಕ್ಷೆಯೆತ್ತಿ, ಭಿಕ್ಷಾನ್ನವನ್ನುಂಡು, ಸಾಯಂಕಾಲದವೇಳೆಗೆ ಹಸುಗಳನ್ನು ಮನೆಗೆ ಕರೆತರುತ್ತಿದ್ದನು. ಅವನನ್ನು ಗಮನಿಸುತ್ತಿದ್ದ ಧೌಮ್ಯನು ಶಿಷ್ಯನು ಹಸಿವೆಯಿಂದ ಒದ್ದಾಡದೇ ಇರುವುದನ್ನು ಕಂಡು, “ಶಿಷ್ಯ, ನೀನು ಕಾಡಿನಲ್ಲಿ ಉಪವಾಸ ಇರುತ್ತೀಯೆ ಅಲ್ಲವೇ? ಆದರೂ ನಿನ್ನ ಶರೀರವು ಪುಷ್ಟಿಯಾಗಿಯೇ ಕಾಣುತ್ತಿದೆ. ಅದಕ್ಕೆ ಕಾರಣವೇನು?” ಎಂದು ಕೇಳಿದನು. ಉಪಮನ್ಯುವು, “ಗುರುದೇವ, ನಾನು ವಿಪ್ರರ ಮನೆಗಳಲ್ಲಿ ಭಿಕ್ಷೆಯೆತ್ತಿ ಹಸಿವೆ ತೀರಿಸಿಕೊಂಡು ಹಸುಗಳನ್ನು ಮೇಯಿಸುತ್ತಿದ್ದೇನೆ” ಎಂದು ಹೇಳಿದನು. ಅದನ್ನು ಕೇಳಿ ಧೌಮ್ಯನು ಕೋಪದಿಂದ, “ನನಗೆ ನಿವೇದಿಸದೆ ಹೇಗೆ ನೀನು ಭಿಕ್ಷಾನವನ್ನು ತಿನ್ನುತ್ತೀಯೆ? ಇನ್ನುಮೇಲೆ, ಪ್ರತಿದಿನವೂ ಭಿಕ್ಷೆಮಾಡಿದ ನಂತರ ಅದನ್ನು ನನಗೆ ತಂದುಕೊಟ್ಟು ಮತ್ತೆ ಕಾಡಿಗೆ ಹೋಗಿ ಹಸುಗಳನ್ನು ಮೇಯಿಸಿಕೊಂಡು ಬಾ” ಎಂದು ಆಜ್ಞೆ ಮಾಡಿದನು. ಹಾಗೇ ಆಗಲೆಂದು ಹೇಳಿ, ಉಪಮನ್ಯುವು, ಪ್ರತಿದಿನ ಭಿಕ್ಷಾನ್ನವನ್ನು ತಂದು ಗುರುವಿಗೆ ಅರ್ಪಿಸಿ ಕಾಡಿಗೆ ಹಿಂತಿರುಗಿ, ಎರಡನೆಯ ಸಲ ಭಿಕ್ಷೆಯೆತ್ತಿ ತಿಂದು ಹಸುಗಳನ್ನು ಕಾಯಲು ಹೋಗುತ್ತಿದ್ದನು. ಹೀಗೇ ಸ್ವಲ್ಪ ಕಾಲವಾದಮೇಲೆ ಅವನು ಇನ್ನೂ ಪುಷ್ಟಿಯಾಗಿಯೇ ಇರುವುದನ್ನು ಕಂಡ ಧೌಮ್ಯನು, ಮತ್ತೆ ಅವನನ್ನು ಅದಕ್ಕೆ ಕಾರಣವೇನೆಂದು ಕೇಳಿದನು. ಉಪಮನ್ಯುವು ತನ್ನ ಹಸಿವಿನ ಉಪಶಮನಕ್ಕಾಗಿ ತಾನು ಎರಡನೆಯ ಸಲ ಭಿಕ್ಷೆ ಎತ್ತುತ್ತಿರುವುದಾಗಿ ಹೇಳಿದನು. ಅದಕ್ಕೆ ಧೌಮ್ಯನು ಕ್ರುದ್ಧನಾಗಿ, “ಎರಡನೆಯ ಸಲ ಮಾಡಿದ ಭಿಕ್ಷೆಯನ್ನೂ ನನಗೇ ತಂದು ಕೊಡಬೇಕು” ಎಂದು ಆಜ್ಞೆ ಮಾಡಿದನು. ಉಪಮನ್ಯುವು ಗುರುವಿನ ಆಜ್ಞೆಯಂತೆ ಎರಡನೆಯಸಲ ಮಾಡಿದ ಭಿಕ್ಷೆಯನ್ನೂ ತಂದು ಗುರುವಿಗೆ ಅರ್ಪಿಸಿ ಮತ್ತೆ ಕಾಡಿಗೆ ಹಸುಗಳನ್ನು ಕಾಯಲು ಹೋಗುತ್ತಿದ್ದನು. ಆದರೆ ತಾಳಲಾರದ ಹಸಿವಿನಿಂದ ಅವನು ಕರುಗಳು ಹಾಲು ಕುಡಿದಾದಮೇಲೆ ಹಾಲು ಸುರಿಯುವುದನ್ನು ಕಂಡು, ಅ ಎಂಜಲು ಹಾಲನ್ನು ಕುಡಿಯಬಹುದೆಂದು ತಿಳಿದು ಅದನ್ನು ಕುಡಿದು ಹಸಿವೆ ತೀರಿಸಿಕೊಳ್ಳುತ್ತಿದ್ದನು. ಹೀಗೆ ದಿನವೂ ಹಾಲು ಕುಡಿದು ಪುಷ್ಟಿಯಾಗಿದ್ದ ಅವನನ್ನು ಕಂಡು ಧೌಮ್ಯನು ಅವನನ್ನು ಕಾರಣ ಕೇಳಲು, ತಾನು ಕರುಗಳು ಕುಡಿದು ಬಿಟ್ಟ ಹಾಲನ್ನು ಕುಡಿಯುತ್ತಿದ್ದೇನೆಂದು ನಿಜವನ್ನು ನುಡಿದನು. ಅದಕ್ಕೆ ಗುರುವು, “ಎಂಜಲು ಹಾಲು ಕುಡಿಯುವುದರಿಂದ ಅನೇಕ ದೋಷಗಳುಂಟಾಗುತ್ತವೆ. ಅದರಿಂದ ಅದನ್ನು ಕುಡಿಯಬೇಡ” ಎಂದು ಆಣತಿಯಿತ್ತನು. ಆ ಆಣತಿಯನ್ನೂ ಪಾಲಿಸಿದ ಉಪಮನ್ಯುವು ಹಸಿವಿನಿಂದ ಕಂಗೆಟ್ಟು, ಚಿಂತಾಕುಲನಾಗಿ, ಹಸುಗಳನ್ನು ಮೇಯಿಸುತ್ತಾ, ದಾರಿಯಲ್ಲಿ ಎಕ್ಕದ ಗಿಡವೊಂದರಿಂದ ಹಾಲು ಸುರಿಯುತ್ತಿರುವುದನ್ನು ಕಂಡನು. ಈ ಹಾಲು ಎಂಜಲಲ್ಲ. ಇದನ್ನು ಕುಡಿಯಬಹುದು ಎಂದು ಯೋಚಿಸಿ, ಒಂದು ಎಲೆಯಲ್ಲಿ ಆ ಹಾಲನ್ನು ಹಿಡಿದು ಕುಡಿಯುತ್ತಿರುವಾಗ ಆ ಹಾಲು ಅವನ ಕಣ್ಣಲ್ಲಿ ಬಿದ್ದು ಅವನಿಗೆ ಕಣ್ಣು ಕಾಣದೇ ಹೋಯಿತು. ಕಣ್ಣಿಲ್ಲದವನಾಗಿ, ದಾರಿ ತಿಳಿಯದೆ, ಎಲ್ಲಿ ಹೋಗುತ್ತಿದ್ದೇನೆಂಬ ಅರಿವಿಲ್ಲದೆ, ಚಿಂತಾ ಕ್ರಾಂತನಾಗಿ ಹಸುಗಳನ್ನು ಹುಡುಕುತ್ತಾ ಹೋಗುತ್ತಿರುವಾಗ ದಾರಿಯಲ್ಲಿ ಒಂದು ಭಾವಿಯಲ್ಲಿ ಬಿದ್ದುಹೋದನು.

ಹಿಂತಿರುಗಿದ ಹಸುಗಳ ಜೊತೆಗೆ ಉಪಮನ್ಯುವು ಬರದಿದ್ದುದನ್ನು ಕಂಡ ಗುರುವು ಅವನೇನಾದನೋ ಎಂದು ಚಿಂತೆಗೊಂಡು, ಅವನನ್ನು ಹುಡುಕಲು ಕಾಡಿಗೆ ಹೋಗಿ, ಅವನ ಹೆಸರು ಕೂಗುತ್ತಾ, ಹುಡುಕಾಡಿದನು. ಗುರುವಿನ ಕೂಗನ್ನು ಕೇಳಿದ ಉಪಮನ್ಯುವು ಭಾವಿಯೊಳಗಿಂದಲೇ ಕ್ಷೀಣವಾದ ಧ್ವನಿಯಿಂದ ಉತ್ತರಿಸಿದನು. ಅದನ್ನು ಕೇಳಿ ಗುರುವು ಅಲ್ಲಿಗೆ ಬಂದು ನಡೆದದ್ದೆಲ್ಲವನ್ನೂ ಅವನಿಂದ ತಿಳಿದುಕೊಂಡು ಅವನಿಗೆ ಅಶ್ವಿನಿದೇವತೆಗಳನ್ನು ಪ್ರಾರ್ಥಿಸಿಕೊಳ್ಳುವಂತೆ ಹೇಳಿದನು. ಉಪಮನ್ಯುವು ಅದೇ ರೀತಿ ಪ್ರಾರ್ಥಿಸಿಕೊಳ್ಳಲು, ಅಶ್ವಿನಿ ದೇವತೆಗಳ ಅನುಗ್ರಹದಿಂದ ಅವನಿಗೆ ಹಿಂದಿನಂತೆ ದೃಷ್ಟಿ ಬಂತು. ಭಾವಿಯಿಂದ ಮೇಲಕ್ಕೆ ಬಂದು ಅವನು ಗುರು ಪಾದಗಳಿಗೆ ನಮಸ್ಕರಿಸಿ, ಸ್ತೋತ್ರಮಾಡಿದನು. ಅದರಿಂದ ಸಂತೋಷಗೊಂಡ ಧೌಮ್ಯನು, “ಶಿಷ್ಯೋತ್ತಮ ನಿನ್ನ ಭಕ್ತಿಗೆ ಮೆಚ್ಚಿದೆ” ಎಂದು ಹೇಳಿ ಅವನ ತಲೆಯಮೇಲೆ ಕೈಯಿಟ್ಟು ಅಶೀರ್ವದಿಸಿದನು. ತಕ್ಷಣವೇ ಉಪಮನ್ಯುವು ವೇದಶಾಸ್ತ್ರನಿಪುಣನಾದನು. ಗುರುವು, “ಮಗು, ನೀನು ನಿನ್ನ ಮನೆಗೆ ಹಿಂತಿರುಗಿ, ನಿನಗೆ ಅನುರೂಪಳಾದ ಕನ್ಯೆಯನ್ನು ಮದುವೆಯಾಗಿ ಸುಖವಾಗಿ ಜೀವನಮಾಡು. ನಿನ್ನ ಕೀರ್ತಿ ನಾಲ್ಕೂ ದಿಕ್ಕುಗಳಲ್ಲಿ ಹರಡಿ, ನಿನ್ನ ಶಿಷ್ಯರೂ ನಿನ್ನಂತಹವರೇ ಆಗುತ್ತಾರೆ. ಅವರಲ್ಲಿ ಉದಂಕನೆಂಬುವನೊಬ್ಬನು ಪ್ರಸಿದ್ಧಿಯಾಗುತ್ತಾನೆ. ನಾಗರನ್ನು ಜಯಿಸಿ ನಿನಗೆ ದಕ್ಷಿಣೆಯೆಂದು ಅವನು ನಾಗಕುಂಡಲಗಳನ್ನು ತಂದುಕೊಡುತ್ತಾನೆ. ಜನಮೇಜಯನ ಸರ್ಪಯಾಗದಲ್ಲಿ ಸರ್ಪಗಳಹೋಮ ಮಾಡಿ ಸರ್ಪಗಳ ನಾಶಮಾಡುತ್ತಾನೆ” ಎಂದು ಅವನನ್ನು ಆಶೀರ್ವದಿಸಿ ಕಳುಹಿಸಿದರು. ಉಪಮನ್ಯುವು ಮನೆಗೆ ಹಿಂತಿರುಗಿ ಗುರುವು ಹೇಳಿದಂತೆ ಮಾಡಿ ಪ್ರಖ್ಯಾತನಾದನು.

ಉಪಮನ್ಯುವಿನ ಶಿಷ್ಯ ಉದಂಕನು ಇಂದ್ರ ರಕ್ಷಿತ ತಕ್ಷಕನನ್ನು ಕೂಡ, ಗುರುಕೃಪಾ ಸಾಮರ್ಥ್ಯದಿಂದ, ಯಾಗದಲ್ಲಿ ಕರೆಯಲು ಸಮರ್ಥನಾದನು. ಗುರುದ್ರೋಹಿಗೆ ಇಹಪರಗಳಲ್ಲಿ ಸುಖವಿಲ್ಲ. ಗುರುದ್ರೋಹಿಯಾದ ಶಿಷ್ಯನು ಕುಂಭೀಪಾಕ ನರಕದಲ್ಲಿ ಬೀಳುತ್ತಾನೆ. ಗುರುವು ಸಂತುಷ್ಟನಾದರೆ ಸಾಧಿಸಲಸಾಧ್ಯವೆನ್ನುವುದು ಯಾವುದೂ ಇರುವುದಿಲ್ಲ. ಗುರುವು ಸಂತೋಷಗೊಂಡರೆ ಕ್ಷಣದಲ್ಲಿ ಶಿಷ್ಯನಿಗೆ ವೇದಶಾಸ್ತ್ರಾದಿಗಳು ಲಭ್ಯವಾಗುತ್ತವೆ. ಇದನ್ನು ತಿಳಿಯದೆ ನೀನು ಭ್ರಮೆಯಲ್ಲಿ ಬಿದ್ದಿದ್ದೀಯೆ. ಈಗಲಾದರೂ ಗುರುವಿನ ಬಳಿಗೆ ಹೋಗು. ಅವನೇ ನಿನ್ನನ್ನು ಉದ್ಧರಿಸಬಲ್ಲವನು. ನಿನ್ನ ಗುರುವು ಸಂತೋಷಗೊಂಡರೆ ನಿನಗೆ ಮಂತ್ರಸಿದ್ಧಿ ಶೀಘ್ರವಾಗಿ ಆಗುವುದು. ಈ ವಿಷಯವನ್ನು ನಿನ್ನ ಮನಸ್ಸಿನಲ್ಲಿ ನಿಶ್ಚಯಮಾಡಿಕೊಂಡು ನೀನು ನಿನ್ನ ಗುರುವಿನ ಬಳಿಗೆ ಹೋಗು” ಎಂದು ಶ್ರೀಗುರುವು ಆ ಬ್ರಾಹ್ಮಣನಿಗೆ ಹೇಳಲು, ಅವನಿಗೆ ನಿಜದ ಅರಿವುಂಟಾಗಿ, ಶ್ರೀಗುರುವಿನ ಪಾದಗಳಲ್ಲಿ ತಲೆಯಿಟ್ಟು, “ಹೇ ಗುರುದೇವ, ಪರಾರ್ಥ ಸಾಧನವು ನೀವೇ! ಕೃಪೆಯಿಟ್ಟು ನನಗೆ ತತ್ತ್ವಬೋಧೆ ಮಾಡಿದಿರಿ. ನಿಜವಾಗಿಯೂ ನಾನು ಗುರುದ್ರೋಹಿಯೇ! ನನ್ನ ಅಪರಾಧಗಳಿಗೆ ಕೊನೆಯಿಲ್ಲ. ನನ್ನ ಗುರುವಿನ ಮನಸ್ಸಿಗೆ ನೋವುಂಟುಮಾಡಿದೆ. ಅವನು ನನ್ನಲ್ಲಿ ಹೇಗೆ ಪ್ರಸನ್ನನಾಗುತ್ತಾನೆ? ಚಿನ್ನ ಬೆಳ್ಳಿ ಮುಂತಾದ ಲೋಹಗಳು ಮುರಿದರೆ ಅವನ್ನು ಸರಿಮಾಡಬಹುದು. ಆದರೆ ಮುತ್ಯವು ಒಡೆದರೆ ಅದನ್ನು ಸರಿಮಾಡಲಾಗುವುದೇ? ಹಾಗೆ ನಾನು ನನ್ನ ಗುರುವಿನ ಅಂತಃಕರಣವನ್ನು ಒಡೆದು ಬಿಟ್ಟಿದ್ದೇನೆ. ಅದನ್ನು ಸರಿಪಡಿಸಲಾಗುವುದಿಲ್ಲ. ಈ ಗುರುದ್ರೋಹಿಯ ಶರೀರವು ಇನ್ನು ಇರಬಾರದು. ಗುರ್ವಾರ್ಪಣವೆಂದು ಈ ಶರೀರವನ್ನು ತ್ಯಾಗಮಾಡುತ್ತೇನೆ” ಎಂದು ಹೇಳಿ, ಶ್ರೀಗುರುವಿಗೆ ನಮಸ್ಕಾರಮಡಿ, ಪಶ್ಚಾತ್ತಾಪ ದಗ್ಧನಾದ ಆ ಬ್ರಾಹ್ಮಣನು ಪ್ರಾಣ ತ್ಯಾಗಮಾಡಲು ಉದ್ಯುಕ್ತನಾದನು. ಹಾಗೆ ಪಶ್ಚಾತ್ತಾಪ ದಗ್ಧವಾದ ಬ್ರಾಹ್ಮಣನ ಮನಸ್ಸು ನಿಷ್ಕಲ್ಮಷವಾಯಿತು. ನಿಜವಾದ ಪಶ್ಚಾತ್ತಾಪದಿಂದ ನೂರು ಜನ್ಮಗಳಲ್ಲಿ ಮಾಡಿದ್ದ ಪಾಪಗಳೂ ಕೂಡಾ ನಾಶವಾಗಿ ಹೋಗಬಲ್ಲವು.

ಹೀಗೆ ವಿರಕ್ತನಾಗಿ ದೇಹತ್ಯಾಗಕ್ಕೆ ಸಿದ್ಧನಾಗುತ್ತಿದ್ದ ಬ್ರಾಹ್ಮಣನನ್ನು ಕರೆದು, “ಅಯ್ಯಾ ವಿಪ್ರ. ಚಿಂತಿಸಬೇಡ. ನಿನ್ನ ದುರಿತಗಳೆಲ್ಲ ನಾಶವಾದವು. ನಿನಗೆ ವೈರಾಗ್ಯವುಂಟಾಗಿದೆ. ಈಗ ನಿನ್ನ ಗುರುವನ್ನು ಸಮಾಧಾನ ಚಿತ್ತನಾಗಿ ಸ್ಮರಿಸಿಕೋ” ಎಂದು ಅಪ್ಪಣೆ ಮಾಡಿದರು. ತಕ್ಷಣವೇ ಅವನು, “ಸ್ವಾಮಿ, ನೀವು ತ್ರಿಮೂರ್ತ್ಯವತಾರರು. ಜಗದ್ಗುರುವು. ಭವತಾರಕರು. ನಿಮ್ಮ ಕೃಪೆ ನನ್ನ ಮೇಲೆ ಸರ್ವವಿಧದಲ್ಲೂ ಇರಲು ನನಗೆ ಪಾತಕಗಳಿನ್ನೆಲ್ಲಿಯದು?” ಎಂದು ಶ್ರೀಗುರುವನ್ನು ಭಕ್ತಿಯಿಂದ ಸ್ತುತಿಸಿ, ಪುಲಕಿತನಾಗಿ, ನಿರ್ಮಲ ಮನಸ್ಕನಾಗಿ, ಕಣ್ಣೀರುಸುರಿಸುತ್ತಾ, ವಿನಯ ವಿನಮ್ರತೆಗಳಿಂದ, “ಉದ್ಧರಿಸು, ಉದ್ಧರಿಸು” ಎಂದು ಮತ್ತೆ ಮತ್ತೆ ಪ್ರಾರ್ಥಿಸುತ್ತಾ, ಸಾಷ್ಟಾಂಗನಮಸ್ಕಾರ ಮಾಡಿದನು.

ಅವನು ನಮಸ್ಕಾರಮಾಡಿ ಏಳುತ್ತಿದ್ದಹಾಗೆಯೇ, ವೇದಶಾಸ್ತ್ರ ನಿಪುಣನಾಗಿ, ಶ್ರೀಗುರುವಿನಿಂದ ಉದ್ಧರಿಸಲ್ಪಟ್ಟನು. ಶಂಕರನೇ ಪ್ರಸನ್ನನಾದಮೇಲೆ ಬೇರೆ ದೇವತೆಗಳ ಅವಶ್ಯಕತೆಯಾದರೂ ಏನು? ಗುರುಪಾದ ಸ್ಪರ್ಶದಿಂದ ಆ ಬ್ರಾಹ್ಮಣನು ಜ್ಞಾನಿಯಾಗಿ ಆನಂದ ತುಂಬಿದವನಾದನು. ಆಗ ಶ್ರೀಗುರುವು ಅವನನ್ನು ನೋಡಿ, “ಅಯ್ಯಾ, ನನ್ನ ಮಾತು ಕೇಳಿ, ಈಗ ನೀನು ನಿನ್ನ ಗುರುಸನ್ನಿಧಿಯನ್ನು ಸೇರು. ನಿನ್ನ ಹಿಂತಿರುಗುವಿಕೆಯಿಂದ ಆತನು ಸಂತುಷ್ಟನಾಗುತ್ತಾನೆ. ನೀನು ಆತನಿಗೆ ನಮಸ್ಕರಿಸುತ್ತಲೂ ಆತ ಇನ್ನೂ ಹೆಚ್ಚಿನ ಸಂತೋಷದಿಂದ ನಿನ್ನನ್ನು ಆದರಿಸುತ್ತಾನೆ. ಆತನೇ ನಾನೆಂದು ತಿಳಿದುಕೋ. ಇದರಲ್ಲಿ ನಿನಗೆ ಸಂದೇಹಬೇಡ” ಎಂದು ಹೇಳಿ ಆ ಬ್ರಾಹ್ಮಣನನ್ನು ಕಳುಹಿಸಿಕೊಟ್ಟರು. ಆ ಬ್ರಾಹ್ಮಣ ತನ್ನ ಗುರುಸನ್ನಿಧಿಯನ್ನು ಸೇರಿ ಮುಕ್ತನಾದನು.

ನಂತರ ಶ್ರೀಗುರುವು ಕೃಷ್ಣಾನದೀ ತೀರ ಯಾತ್ರೆಮಾಡುತ್ತಾ ಭಿಲ್ಲವಟಿ ಎಂಬ ಊರನಲ್ಲಿರುವ ಭುವನೇಶ್ವರಿಯನ್ನು ಸೇರಿದರು. ಕೃಷ್ಣವೇಣಿಯ ಪಶ್ಚಿಮತೀರದಲ್ಲಿ ಔದುಂಬರ ವೃಕ್ಷವಿದೆ. ಅದರ ಮೂಲದಲ್ಲಿ ಶ್ರೀಗುರುವು ನಿಂತರು. ಆ ಸ್ಥಳದಲ್ಲಿ ಸರ್ವಸಿದ್ಧಿಗಳೂ ಇವೆ. ಆ ಪ್ರದೇಶದ ಮಹಿಮೆಯನ್ನು ಕೇಳಿದರೂ ಸಾಕು ಮೋಕ್ಷ ಪ್ರಾಪ್ತಿಯಾಗುತ್ತದೆ.”

ಇಲ್ಲಿಗೆ ಹದಿನಾರನೆಯ ಅಧ್ಯಾಯ ಮುಗಿಯಿತು.
[11/01 5:17 AM] S. Bhargav: ||ಶ್ರೀ ಗುರು ಚರಿತ್ರೆ – ಹದಿನೇಳನೆಯ ಅಧ್ಯಾಯ||

ಸಿದ್ಧಮುನಿಯು ನಾಮಧಾರಕನಿಗೆ ಮತ್ತೆ, “ನಿನಗೆ ಗುರು ಪಾದಗಳಲ್ಲಿ ಧೃಢಭಕ್ತಿಯುಂಟಾಗಿದೆ. ಗುರು ಕಥೆಗಳಲ್ಲಿ ನೀನು ತೋರಿಸುತ್ತಿರುವ ಅಭಿರುಚಿ ನಿನ್ನ ಗುರು ಭಕ್ತಿಯನ್ನು ತೋರಿಸುತ್ತಿದೆ. ಕಾಮಧೇನುವಿನಂತೆ ಕೋರಿದ್ದನ್ನು ಕೊಡುವ ಗುರುಚರಿತ್ರೆಯನ್ನು ಆಲಿಸು.

ಕೃಷ್ಣಾನದಿಯ ಪಶ್ಚಿಮ ತೀರದಲ್ಲಿರುವ ಭುವನೇಶ್ವರಿಯಲ್ಲಿ ಶ್ರೀಗುರುವು ರಹಸ್ಯವಾಗಿ ನಿಂತರು. ಆ ಸ್ಥಳವು ಔದುಂಬರ ವೃಕ್ಷಮೂಲವು. ಕಲ್ಪವೃಕ್ಷ ಸಮಾನವಾದ ಪರಿಶುದ್ಧ ಪ್ರದೇಶವದು. ಶ್ರೀಗುರುವು ಅಲ್ಲಿ ಅನುಷ್ಠಾನ ಪರರಾಗಿ ಚಾತುರ್ಮಾಸ್ಯ ವ್ರತವನ್ನು ಅಚರಿಸಿದರು. ಶ್ರೀಗುರುವು ಆ ಪ್ರದೇಶದಲ್ಲಿ ನಿಂತಿದ್ದರಿಂದ ಅದರ ಮಹಿಮೆ ಅಧಿಕವಾಯಿತು” ಎಂದು ಹೇಳಿದ ಸಿದ್ಧಮುನಿಯ ಮಾತನ್ನು ಕೇಳಿ, ನಾಮಧಾರಕ, “ಸ್ವಾಮಿ, ಪರಮಾತ್ಮನೇ ಆದ ಶ್ರೀಗುರುವು ಅಲ್ಲಿ ರಹಸ್ಯವಾಗಿ ಏಕೆ ನಿಂತರು? ಶ್ರೀಗುರುವಿಗೆ ತಪೋನುಷ್ಠಾನ, ಭಿಕ್ಷೆಗಳೇತಕ್ಕೆ?” ಎಂದು ಕೇಳಿದನು.

ಅದಕ್ಕೆ ಸಿದ್ಧಮುನಿ, “ಮಗು, ನಾಮಧಾರಕ, ಈಶ್ವರ ಭಿಕ್ಷೆ ಬೇಡಿದನು. ದತ್ತಾತ್ತ್ರೇಯರು ತಪವನ್ನಾಚರಿಸಿದರು. ಭಕ್ತಾನುಗ್ರಹಕ್ಕಾಗಿ ತ್ರಿಮೂರ್ತ್ಯವತಾರ ಧರಿಸಿ, ಭಿಕ್ಷುರೂಪದಲ್ಲಿ ತೀರ್ಥಯಾತ್ರೆಗಳನ್ನು ಮಾಡುತ್ತಾ, ಭಿಕ್ಷೆ ಬೇಡಿದರು. ಅವೆಲ್ಲವೂ ಕೇವಲ ಭಕ್ತರಿಗೆ ಬೋಧಿಸುವುದಕ್ಕಾಗಿಯೇ! ಕಾಲವಶವಾಗಿ ತೀರ್ಥಗಳೆಲ್ಲಾ ಗುಪ್ತವಾಗಿ ಹೋದವು. ಅವನ್ನು ಮತ್ತೆ ಭಕ್ತಾನುಕೂಲಕ್ಕಾಗಿ ಶ್ರೀಗುರುವು ವ್ಯಕ್ತಗೊಳಿಸಿದನು. ಶ್ರೀಗುರುವು ನಮಗೆ ಉಪಕಾರ ಮಾಡಲೆಂದು ಸ್ವಯಂ ಗುಪ್ತವಾಗಿ ತೀರ್ಥಯಾತ್ರೆಗಳನ್ನು ಮಾಡಿದರು. ದುಷ್ಟರಿಂದ ದೂರವಿರಲು ಅವರು ಗುಪ್ತರಾಗಿದ್ದಾರೆಯೇ ಹೊರತು ಭಕ್ತರ ವಾಂಛೆಗಳನ್ನು ನೆರವೇರಿಸುತ್ತಲೇ ಇದ್ದಾರೆ. ಅವರು ಅಲ್ಲಿ ಹಾಗಿರಲು ನಡೆದ ಒಂದು ವಿಚಿತ್ರವನ್ನು ಹೇಳುತ್ತೇನೆ ಕೇಳು. ಅದರಿಂದ ಶ್ರೀಗುರುವಿನ ಮಹಿಮೆ ಮತ್ತೆ ಭೂಮಿಯಲ್ಲಿ ಪ್ರಕಟಗೊಂಡಿತು.

ಕರವೀರವೆಂಬ ಊರಿನಲ್ಲಿ ಕಣ್ವ ಶಾಖೀಯನಾದ ಸಕಲವಿದ್ಯಾ ಪಾರಂಗತನಾದ ಉತ್ತಮ ಚರಿತನಾದ ಬ್ರಾಹ್ಮಣನೊಬ್ಬನಿದ್ದನು. ಅವನಿಗೊಬ್ಬ ಮಗನಾದನು. ಆದರೆ ವಿಧಿವಶಾತ್ ಅವನಿಗೆ ಹುಟ್ಟಿದ ಮಗ ಮಂದಮತಿ. ಅವನಿನ್ನೂ ಸಣ್ಣವನಾಗಿದ್ದಾಗಲೇ ಆ ಬ್ರಾಹ್ಮಣನು ಮರಣಿಸಿದನು. ಹುಡುಗನಿಗೆ ಏಳು ವರ್ಷವಾದಾಗ ಆ ಊರಿನ ಬ್ರಾಹ್ಮಣರು ಅವನಿಗೆ ಉಪನಯನ ಮಾಡಿದರು. ಆ ಹುಡುಗನಿಗೆ ಸ್ನಾನ, ಸಂಧ್ಯಾವಂದನೆ, ಗಾಯತ್ರಿಜಪ ಮುಂತಾದುವುಗಳಲ್ಲಿ ಆಸ್ತೆ ಇರಲಿಲ್ಲ. ಹಾಗಾಗಿ ಅವನು ವೇದಾಧ್ಯಯನವನ್ನೂ ಮಾಡಲಿಲ್ಲ. ಅವನೊಬ್ಬ ಓದಿದ್ದನ್ನು ತಕ್ಷಣವೇ ಮರೆಯುತ್ತಿದ್ದ ಮಹಾ ಮೂರ್ಖ. ಆ ಊರಿನ ವಿದ್ವಾಂಸರು ಆ ಮೂರ್ಖನನ್ನು, “ವಿದ್ವಾಂಸನಾದ ಬ್ರಾಹ್ಮಣನೊಬ್ಬನಿಗೆ ಮಗನಾಗಿ ಹುಟ್ಟಿದರೂ ಮೂರ್ಖನಾದೆ. ನಿನ್ನ ತಂದೆ ವೇದ ಶಾಸ್ತ್ರ ಪುರಾಣಗಳನ್ನೆಲ್ಲಾ ಬಲ್ಲ ಜ್ಞಾನಿಯಾಗಿದ್ದನು. ಅವನಿಗೆ ಕಲ್ಲುಬಂಡೆಯಂತಹ ನೀನು ಹೇಗೆ ಜನಿಸಿದೆ? ನಿನ್ನ ಹುಟ್ಟು ವ್ಯರ್ಥ. ನಿನ್ನ ತಂದೆಯ ಹೆಸರು, ಕೀರ್ತಿ ನಿನ್ನಿಂದ ಕಲಂಕಿತವಾಯಿತು. ಕಲ್ಲು ಕಟ್ಟಿಕೊಂಡು ನೀರಿನಲ್ಲಿ ಮುಳುಗಿ ಸಾಯಿ. ಯಾವುದಾದರೂ ಕೆರೆಯೋ ಭಾವಿಯೋ ನೋಡಿ ಅದರಲ್ಲಿ ಹೋಗಿ ಬೀಳು. ಇಲ್ಲಿ ಹಂದಿಯಂತೆ ಏಕೆ ಬಾಳುತ್ತಿರುವೆ? ವಿದ್ಯೆಯುಳ್ಳವನು ಮನುಷ್ಯರಲ್ಲಿ ಅಧಿಕನೆನಿಸುತ್ತಾನೆ. ವಿದ್ಯಾವಿಹೀನನು ವಯಸ್ಸಿನಲ್ಲಿ ದೊಡ್ಡವನಾದರೂ ಪೂಜಿತನಾಗುವುದಿಲ್ಲ. ವಿದ್ಯಾವಂತನು ವಯಸ್ಸಿನಲ್ಲಿ ಸಣ್ಣವನಾದರೂ ಎಲ್ಲರೂ ಅವನನ್ನು ಗೌರವಿಸುತ್ತಾರೆ. ಒಡಹುಟ್ಟಿದವರಿಲ್ಲದವರಿಗೆ ವಿದ್ಯೆಯೇ ಸಹೋದರ. ಎಲ್ಲಕಡೆಗಳಲ್ಲೂ ವಿದ್ವಾಂಸನು ಗೌರವಿಸಲ್ಪಡುತ್ತಾನೆ. ರಾಜರೂ ಕೂಡಾ ವಿದ್ವಾಂಸರನ್ನು ಆದರದಿಂದ ಕಂಡು ಪೂಜಿಸುತ್ತಾರೆ. ಅಧನನಿಗೆ ವಿದ್ಯೆಯೇ ಮಹಾಧನ. ಅದರಿಂದಲೇ ವಿದ್ಯಾರ್ಜನೆ ಮಾಡಬೇಕು. ವಿದ್ಯೆಯಿಲ್ಲದವನು ಪಶು ಸಮಾನನು” ಏಂದು ಅವನಿಗೆ ಬುದ್ಧಿ ಮಾತುಗಳನ್ನು ಹೇಳಿದರು.

ಅವರ ಮಾತುಗಳನ್ನು ಕೇಳಿದ ಆ ಹುಡುಗ, ಅವರಿಗೆ ನಮಸ್ಕರಿಸಿ, “ಅಯ್ಯಾ, ನೀವು ಹೇಳುವುದೆಲ್ಲ ನಿಜವೇ! ವಿದ್ಯಾವಂತನು ಪ್ರಶಸ್ತಿ ಪಡೆಯುತ್ತಾನೆ. ನಾನು ಹಿಂದಿನ ಜನ್ಮಗಳಲ್ಲಿ ವಿದ್ಯಾದಾನ ಮಾಡಲಿಲ್ಲ. ಅದರಿಂದಲೇ ಈಗ ನನಗೆ ವಿದ್ಯೆ ಹತ್ತುತ್ತಿಲ್ಲ. ನಾನೇನು ಮಾಡಲಿ? ನೀವೇ ಕೃಪೆಮಾಡಿ ನನ್ನನ್ನು ಉದ್ಧರಿಸಿ. ವಿದ್ಯೆ ಕಲಿಯಲು ಯಾವುದಾದರೂ ಉಪಾಯವನ್ನು ಹೇಳಿ” ಎಂದು ಕೇಳಿಕೊಂಡನು. ಅದಕ್ಕೆ ಆ ಬ್ರಾಹಣರು, “ನಿನಗಿನ್ನು ಈ ಜನ್ಮದಲ್ಲಿ ವಿದ್ಯೆ ಲಭಿಸುವುದಿಲ್ಲ. ಮುಂದಿನ ಜನ್ಮದಲ್ಲಿಯಾದರೂ ವಿದ್ಯಾವಂತನಾಗಲು ಕೃಷಿ ಮಾಡು. ವಿದ್ಯೆಯಿಲ್ಲದ ನೀನು ಪಶು ಸಮಾನನು. ಭಿಕ್ಷೆಯೆತ್ತಿ ಹೊಟ್ಟೆ ತುಂಬಿಸಿಕೊಳ್ಳುತ್ತಾ ನೀನು ಕುಲನಾಶಕನಾಗಿದ್ದೀಯೆ. ವಿದ್ವಾಂಸನ ಮಗನಾಗಿಯೂ ನೀನು ಮತಿಹೀನನಾಗಿದ್ದೀಯೆ” ಎಂದು ನಿಂದಿಸಿದರು. ಆ ಬ್ರಾಹ್ಮಣರ ನಿಂದೆಗಳನ್ನು ಕೇಳಿದ ಅವನಿಗೆ ಒಂದು ತರಹೆಯ ವೈರಾಗ್ಯವುಂಟಾಗಿ, ಹತ್ತಿರದಲ್ಲೇ ಇದ್ದ ಅರಣ್ಯಕ್ಕೆ ಹೋದನು.

ಅಲ್ಲಿಗೆ ಹೋಗಿ, “ನನ್ನನ್ನೆಲ್ಲರೂ ದೂಷಿಸುತ್ತಿದ್ದಾರೆ. ಇನ್ನು ನಾನು ಪ್ರಾಣದಿಂದಿದ್ದೇನು ಪ್ರಯೋಜನ? ನನಗಿಂತಲೂ ನಾಯಿ ಜನ್ಮ ಒಳ್ಳೆಯದು. ಇನ್ನು ಈ ಜೀವನ ಸಾಕು” ಎಂದು ಆಲೋಚಿಸುತ್ತಾ, ಭಿಲ್ಲವಟಿಯನ್ನು ಸೇರಿ, ದೈವವಶಾತ್ ಕೃಷ್ಣಾ ನದಿಯ ಪೂರ್ವ ತೀರದಲ್ಲಿರುವ ಭುವನೇಶ್ವರಿಯ ಗುಡಿಗೆ ಹೋದನು. ಅಲ್ಲಿ ದೇವಿಯ ದರ್ಶನ ಮಾಡಿ, ಪ್ರಾಯೋಪವೇಶ ಮಾಡಲು ನಿರ್ಧರಿಸಿ ಕೂತನು. ಹೀಗೆ ನಿರ್ವಿಣ್ಣ ಮನಸ್ಕನಾದ ಅವನು ಮೂರು ದಿನ ಉಪವಾಸ ಮಾಡುತ್ತಾ ಜಗನ್ಮಾತೆಯನ್ನು ಧ್ಯಾನಿಸುತ್ತಿದ್ದನು. ದೇವಿಯು ಅವನಿಗೆ ಸ್ವಪ್ನ ದರ್ಶನವನ್ನೂ ಕೊಡಲಿಲ್ಲ ಎಂಬ ದುಃಖದಿಂದ, ದೇವಿ ನನ್ನನ್ನು ಉಪೇಕ್ಷಿಸುತ್ತಿದ್ದಾಳೆ ಎಂದು ಆಗ್ರಹಗೊಂಡು, ತನ್ನ ನಾಲಗೆಯನ್ನು ಕತ್ತರಿಸಿ ದೇವಿಯ ಪಾದಗಳಲ್ಲಿಟ್ಟು, “ಅಮ್ಮಾ, ಇನ್ನೂ ನೀನು ನನ್ನನ್ನು ಅನುಗ್ರಹಿಸದಿದ್ದರೆ, ನಾನು ನಾಳೆ ನನ್ನ ತಲೆಯನ್ನು ಕತ್ತರಿಸಿ ನಿನಗೆ ಒಪ್ಪಿಸುತ್ತೇನೆ” ಎಂದು ಘೋರವಾದ ಹರಕೆಯನ್ನು ಮಾಡಿದನು. ಹಾಗೆ ದೃಢವಾದ ಮನಸ್ಸಿನಿಂದ ತನ್ನ ತಲೆಯನ್ನೂ ಅರ್ಪಿಸಲು ಸಿದ್ಧನಾದ ಅವನಿಗೆ ದೇವಿ ಪ್ರತ್ಯಕ್ಷಳಾಗಿ, “ಅಯ್ಯಾ ಬಾಲಕ, ಅನವಶ್ಯಕವಾಗಿ ನನ್ನ ಮೇಲೆ ಏಕೆ ಕೋಪಗೊಳ್ಳುತ್ತೀಯೆ? ನದಿಯ ಪಶ್ಚಿಮ ತೀರದಲ್ಲಿ, ಔದುಂಬರ ವೃಕ್ಷದ ಛಾಯೆಯಲ್ಲಿ ಒಬ್ಬ ಯತಿಯಿದ್ದಾನೆ. ನೀನು ಅವನ ಬಳಿಗೆ ಹೋಗು. ತಪಸ್ಸು ಮಾಡುತ್ತಿರುವ ಆ ಯತಿ ಸಾಕ್ಷಾತ್ತು ಈಶ್ವರನ ಅವತಾರವೇ! ಅವನು ನಿನ್ನ ಇಚ್ಚೆಯನ್ನು ಪೂರೈಸುತ್ತಾನೆ” ಎಂದು ಹೇಳಿದಳು. ಅದರಿಂದ ಸಂತೋಷಗೊಂಡ ಆ ಹುಡುಗ ತಕ್ಷಣವೇ ದೇವಿ ಹೇಳಿದ ಜಾಗಕ್ಕೆ ಹೋಗಿ, ಅಲ್ಲಿ ನೆಲೆಸಿದ್ದ ಶ್ರೀಗುರುವಿನ ದರ್ಶನ ಮಾಡಿ ಅವರನ್ನು ಮನಸ್ಸಿನಲ್ಲಿಯೇ ಸ್ತುತಿಸಿದನು. ಅವನ ಸ್ತುತಿಯಿಂದ ಸಂತುಷ್ಟರಾದ ಶ್ರೀಗುರುವು, ಅವನಿಗೆ ಸಾಂತ್ವನದ ಮಾತುಗಳನ್ನು ಹೇಳುತ್ತಾ ಅವನ ತಲೆಯ ಮೇಲೆ ಕೈಯಿಟ್ಟು ಅನುಗ್ರಹಿಸಿದರು. ತಕ್ಷಣವೇ ಕತ್ತರಿಸಿಕೊಂಡಿದ್ದ ಅವನ ನಾಲಗೆ ಬಂದುದಲ್ಲದೆ, ಅವನು ಸಕಲ ವಿದ್ಯಾ ಪಾರಂಗತನೂ ಆದನು. ಹಾಗೆ ಆ ಮಂದಮತಿ ಮಹಾಜ್ಞಾನಿಯಾಗಿ ಪರಿವರ್ತಿತನಾದನು. ಗುರು ಸ್ಪರ್ಶ ಮಾತ್ರದಿಂದಲೇ ಆ ಮೂಢ ವಿದ್ವಾಂಸನಾದನು. ನಾಮಧಾರಕ, ನೋಡಿದೆಯಾ ಶ್ರೀಗುರುವಿನ ಮಹಿಮೆಯನ್ನು! ಅದನ್ನು ಅರಿತವರಾರು? ಆ ಗುರುವಿಗೇ ಅದು ಗೊತ್ತು” ಎಂದು ಸಿದ್ಧರು ತಾವು ಕಂಡ ವಿಚಿತ್ರ ವಿಶೇಷವನ್ನು ನಾಮಧಾರಕನಿಗೆ ಹೇಳಿದರು.

ಇಲ್ಲಿಗೆ ಹದಿನೇಳನೆಯ ಅಧ್ಯಾಯ ಮುಗಿಯಿತು.

Leave a comment

Filed under ಶ್ರೀ ಗುರು ಚರಿತ್ರೆ

ಶ್ರೀ ಗುರು ಚರಿತ್ರೆ (ಅಧ್ಯಾಯ -೪)

||ಶ್ರೀ ಗುರು ಚರಿತ್ರೆ – ಸಿದ್ಧನಾಮಧಾರಕ ಸಂವಾದೇ ಶ್ರೀದತ್ತಾವತಾರೋ ನಾಮ ಚತುರ್ಥೋಧ್ಯಾಯಃ||

ಸಿದ್ಧಮುನಿ ನಾಮಧಾರಕನ ಮಾತನ್ನು ಕೇಳಿ, ” ಮಗು, ನೀನು ಕೇಳಿದ ಪ್ರಶ್ನೆ ಬಹಳ ಯೋಗ್ಯವಾಗಿದೆ. ನಿನಗೆ ಗುರುಚರಣಗಳಲ್ಲಿ ಭಕ್ತಿಯುಂಟಾಗಿದೆ. ಮಾನ್ಯವಾದ ನಿನ್ನ ಮಾತುಗಳನ್ನು ಕೇಳಿ ನನಗೆ ಗುರುಲೀಲೆಗಳೆಲ್ಲ ಆರಂಭದಿಂದ ನೆನಪಿಗೆ ಬರುತ್ತಿವೆ. ಬಹು ತಗುನಾದ ಪ್ರಶ್ನೆಯನ್ನು ಕೇಳಿದೆ. ಸೃಷ್ಟ್ಯಾದಿಯಿಂದ ಅತ್ರಿಜನ್ಮದವರೆಗೆ ನೀನು ಕೇಳಿದ್ದೀಯೆ. ಇನ್ನು ಮುಂದೆ ಕೇಳು.

ಹಿಂದಿನ ಕಲ್ಪದಲ್ಲಿನ ಸೃಷ್ಟಿಯೆಲ್ಲವೂ ಸಮುದ್ರದಲ್ಲಿ ಲೀನವಾಗಿ ಹೋದವು. ಆಗ ವೇದ ಸಮ್ಮತನಾದ ನಾರಾಯಣ ಆ ಸಮುದ್ರದ ಮೇಲೆ ಪವಡಿಸಿದ್ದನು. ಆ ದೇವಾಧಿದೇವ ತನ್ನ ಮನಸ್ಸಂಕಲ್ಪದಿಂದ ತೇಜೋರೂಪವಾದ ಅಂಡವನ್ನು ಸೃಷ್ಟಿಸಿದನು. ಹಿಂದಿನ ಕಲ್ಪದ ಪ್ರಾಣವಾಸನೆಗಳೆಲ್ಲಾ ಅದರಲ್ಲಿ ಅಡಗಿದ್ದವು. ಹಿರಣ್ಯಗರ್ಭನ ಸಂಕೇತವಾದ ಆ ಬ್ರಹ್ಮಾಂಡವು ಒಂದು ದೇವ ಸಂವತ್ಸರದವರೆಗೂ ಅಂಡ ರೂಪದಲ್ಲಿದ್ದು ನಂತರ ಭಿನ್ನವಾಯಿತು. ಹಾಗೆ ಭಿನ್ನವಾದ ಬ್ರಹ್ಮಾಂಡದಲ್ಲಿ ಶೃತ್ಯೋಕ್ತವಾದಂತೆ ಸೃಷ್ಟಿಯಾಗಿ, ಸರ್ವ ಜೀವಿಗಳ ಉತ್ಪನ್ನವಾಯಿತು. ಸ್ವರ್ಗ-ಭೂತಲಗಳೆಂದು ಎರಡು ಭಾಗಗಳಲ್ಲಿ ಬ್ರಹ್ಮಾಂಡವನ್ನು ನಿರ್ಮಿಸಿದನು. ಭೂಮಿಯ ಕೆಳಗೆ ಏಳು ಲೋಕಗಳು, ಭೂಮಿಯ ಮೇಲೆ ತೇಜೋರೂಪಗಳಾದ ಸಪ್ತಲೋಕಗಳು ಏರ್ಪಾಡಾದವು. ವಿಷ್ಣುವಿನ ನಾಭಿಯಿಂದ ಹೊರಬಿದ್ದ ಬ್ರಹ್ಮ ಚತುರ್ದಶ ಲೋಕಗಳನ್ನು ಸೃಷ್ಟಿಸಿದನು. ಅವನು ಮಾನಸಿಕವಾಗಿಯೂ, ದೈಹಿಕವಾಗಿಯೂ ದಿಕ್ಕಾಲಗಳನ್ನು ಸೃಜಿಸಿದನು. ವಿಷ್ಣುವಿನ ಆಜ್ಞೆಯಂತೆ ಸೃಷ್ಟಿಯನ್ನು ಬೆಳೆಸುವುದಕ್ಕೆ ತಪವನ್ನಾಚರಿಸಿ ಸನಕಾದಿ ನಾಲ್ವರು ಪುತ್ರರನ್ನೂ, ಮರೀಚಿ, ಅತ್ರಿ, ಆಂಗೀರಸ, ಪುಲಸ್ತ್ಯ, ಪುಲಹ, ಕ್ರತು, ವಸಿಷ್ಠರೆನ್ನುವ ಮಾನಸ ಪುತ್ರರಾದ ಸಪ್ತರ್ಷಿಗಳನ್ನು ಸೃಷ್ಟಿಮಾಡಿದನು. ಬ್ರಹ್ಮ ಸಂತಾನವಾಗಿ ಶತರೂಪ, ಮನು ಎಂಬ ಇಬ್ಬರು ಜನಿಸಿದರು. ಅವರ ಮಗಳು ದೇವಹೂತಿ. ಛಾಯಾ ಪುತ್ರನಾದ ಕರ್ದಮ ಆ ದೇವಹೂತಿಯ ಕೈ ಹಿಡಿದನು. ಅವರ ಪುತ್ರಿಯರು ಬ್ರಹ್ಮ ಸುತರನ್ನು ಮದುವೆಯಾದರು. ವಿಧಾತನ ನೇತ್ರದಿಂದ ಜನಿಸಿದ ಅತ್ರಿ ಮಹಷಿಗೆ ಅನಸೂಯ ಪತ್ನಿಯಾದಳು. ಆಕೆ ಮಹಾ ಪತಿವ್ರತೆ. ಜಗದಂಬೆಯೇ ಆಕೆ! ಸುಲಕ್ಷಣೆಯಾದ ಆಕೆಯ ಸೌಂದರ್ಯವನ್ನು ವರ್ಣಿಸಲು ಯಾರಿಗೂ ಸಾಧ್ಯವಿಲ್ಲ. ವೇದಗಳೂ ಅಕೆಯ ಪ್ರಶಂಸೆ ಮಾಡಿದವು. ಆಕೆಯ ಮಗನಾದ ಚಂದ್ರನು ನಕ್ಷತ್ರರಾಜನಾಗಿ ಪ್ರಸಿದ್ಧನಾದನು.

ಆ ಸಾಧ್ವಿ ಅನಸೂಯ ಪತಿಸೇವಾಪರಾಯಣಳು. ಆಕೆಯ ಮಹಿಮೆಯನ್ನರಿತ ಇಂದ್ರಾದಿ ದೇವತೆಗಳು ಆಕೆಯಿಂದ ತಮಗೆ ಸ್ವರ್ಗ ಸಂಪದ ಹರಣವಾಗುವುದೇನೋ ಎಂದು ಹೆದರಿ ತ್ರಿಮೂರ್ತಿಗಳಲ್ಲಿ ಶರಣು ಬೇಡಿ, ಆ ಸಾಧ್ವೀಮಣಿಯ ಮಹಿಮೆಯನ್ನು ನಿವೇದಿಸಿದರು. ” ಹೇ ತ್ರಿಮೂರ್ತಿಗಳೇ, ಅತ್ರಿಪತ್ನಿ ಮಹಾಪತಿವ್ರತೆ. ಆಕೆಯ ಸದಾಚಾರಗಳು ನಮಗೆ ಭಯವನ್ನುಂಟು ಮಾಡುತ್ತಿವೆ. ನಾವು ಸ್ಥಾನಭ್ರಷ್ಠರಾಗುತ್ತೇವೇನೋ ಎಂಬ ಸಂದೇಹ ಬರುತ್ತಿದೆ. ಆಕೆ ಕಾಯಾ, ವಾಚಾ, ಮನಸಾ, ಶ್ರದ್ಧಾ ಭಕ್ತಿಯುಕ್ತವಾಗಿ ಕೂಡಿ ಮಾಡಿದ ಕರ್ಮಗಳಿಂದ, ತನ್ನ ಪತಿಸೇವೆಯನ್ನು ಮಾಡುತ್ತಿದ್ದಾಳೆ. ಅತಿಥಿಗಳನ್ನು ಆದರಿಸುವುದರಲ್ಲಿ ಕನಸಿನಲ್ಲಿಯೂ ಆಕೆ ವಿಮುಖಳಾಗುವುದಿಲ್ಲ. ಸೂರ್ಯನು ತನ್ನ ಕಿರಣತಾಪದಿಂದ ಅಕೆಗೆ ತಪನವಾಗುವುದೇನೋ ಎಂದು ಹೆದರಿ ಅವರ ಆಶ್ರಮ ಪ್ರದೇಶದಲ್ಲಿ ತನ್ನ ತಾಪವನ್ನು ತಗ್ಗಿಸಿ ಬೆಳಗುತ್ತಾನೆ. ಅಗ್ನಿಯೂ ಭೀತನಾಗಿ ತನ್ನ ಶಾಖವನ್ನು ತಗ್ಗಿಸಿಕೊಂಡು ಜ್ವಲಿಸುತ್ತಾನೆ. ವಾಯುವು ಮಂದಮಾರುತನಾಗಿ ಚಲಿಸುತ್ತಾನೆ. ಆಕೆಯ ಪಾದಗಳಿಗೆ ನೋವುಂಟಾಗುವುದೇನೋ ಎಂಬ ಭಯದಿಂದ ಭೂಮಿ ಮೃದುವಾಗುತ್ತದೆ. ಆಕೆ ನಮಗೆ ಶಾಪಕೊಟ್ಟಾಳು ಎಂಬ ಭೀತಿಯಿಂದ ನಾವೆಲ್ಲರೂ ಆಕೆಯಲ್ಲಿ ವಿನಯ ವಿಧೇಯತೆಗಳಿಂದ ನಡೆದುಕೊಳ್ಳುತ್ತಿದ್ದೇವೆ. ಆಕೆ ತನ್ನ ತಪಃಪ್ರಭಾವದಿಂದ ನಮ್ಮಲ್ಲಿನ ಯಾರ ಸ್ಥಾನವನ್ನಾದರೂ ಆಕ್ರಮಿಸಬಲ್ಲಳು. ಆಕೆಯಿಂದ ಅನುಗ್ರಹಿಸಲ್ಪಟ್ಟ ದರಿದ್ರನೂ ಕೂಡಾ ನಮ್ಮನ್ನು ಜಯಿಸಬಲ್ಲನು. ಹೇ ತ್ರಿಮೂರ್ತಿಗಳೇ, ನೀವು ನಮ್ಮ ಈ ಭಯವನ್ನು ನಿವಾರಿಸುವ ಯಾವುದಾದರೂ ಉಪಾಯವನ್ನು ಯೋಚಿಸಿ ನಮ್ಮನ್ನು ಅಪಾಯದಿಂದ ಪಾರುಮಾಡಿ. ನೀವು ನಮ್ಮನ್ನು ಅನುಗ್ರಹಿಸದಿದ್ದರೆ ನಾವೆಲ್ಲರೂ ಆಕೆಯ ಆಶ್ರಮದ ಬಾಗಿಲಲ್ಲಿ ದಾಸರಾಗಿ ನಿಲ್ಲಬೇಕಾಗುತ್ತದೆ.”

ಇಂದ್ರನಾಡಿದ ಮಾತುಗಳನ್ನು ಕೇಳಿ ತ್ರಿಮೂರ್ತಿಗಳು ಕೃದ್ಧರಾಗಿ, “ಆಹಾ, ಆ ಪತಿವ್ರತೆ ಅಂತಹ ಮಹಿಮಾನ್ವಿತಳೇ? ನಾವು ಈಗಲೇ ಹೋಗಿ, ಆಕೆಯ ವ್ರತಭಂಗಮಾಡಿಯೋ, ಇಲವೇ ಮೃತ್ಯು ಸದನಕ್ಕೆ ಕಳುಹಿಸಿಯೋ ಏನಾದರೂ ಮಾಡಿ ಹಿಂತಿರುಗುತ್ತೇವೆ. ನೀವು ಹೋಗಿ.”ಎಂದು ದೇವತೆಗಳನ್ನು ಕಳುಹಿಸಿಕೊಟ್ಟು. ತಕ್ಷಣವೇ ಅತ್ರಿ ಮಹರ್ಷಿಯ ಆಶ್ರಮಕ್ಕೆ ಅತಿಥಿಗಳ ರೂಪದಲ್ಲಿ ಬಂದರು. ಆಗ ಅತ್ರಿಮುನಿ ಅನುಷ್ಠಾನಕ್ಕೆಂದು ನದಿಗೆ ಹೋಗಿದ್ದರು. ಆ ಅತಿಥಿವೇಷದಲ್ಲಿ ಬಂದ ಮೂವರೂ ಆಶ್ರಮ ಪ್ರವೇಶಮಾಡಿ, ಅನಸೂಯಾದೇವಿಯನ್ನು ಕಂಡು, “ಹೇ ಮಾತೆ, ನಾವು ಹಸಿದುಕೊಂಡು ಬಂದಿದ್ದೇವೆ. ಬೇಗ ನಮಗೆ ಅನ್ನವನ್ನು ನೀಡು. ಅನ್ನ ನೀಡಲು ಸಾಧ್ಯವಿಲ್ಲದಿದ್ದರೆ ಹೇಳು. ನಾವು ಇನ್ನೆಲ್ಲಿಯಾದರೂ ಹೋಗುತ್ತೇವೆ. ಪ್ರತಿನಿತ್ಯವೂ ನಿಮ್ಮ ಈ ಆಶ್ರಮದಲ್ಲಿ ಅತಿಥಿಗಳಿಗೆ ಅದ್ಧೂರಿಯಾದ ಆತಿಥ್ಯ ನಡೆಯುತ್ತದೆ ಎಂಬ ಕೀರ್ತಿ ಕೇಳಿ, ನಾವು ಕೋರಿದಹಾಗೆ ಆತಿಥ್ಯ ದೊರೆಯುತ್ತದೆ ಎಂಬ ಆಸೆಯಿಂದ ಬಹಳ ದೂರದಿಂದ ಬಳಲಿ ಇಲ್ಲಿಗೆ ಬಂದಿದ್ದೇವೆ. ನೀನು ಅತಿಥಿ ಪರಾಯಣಳು ಎಂಬ ನಿನ್ನ ಯಶಸ್ಸನ್ನು ಬಹಳವಾಗಿ ಕೇಳಿದ್ದೇವೆ.” ಎಂದು ಹೇಳಿದರು. ಅವರು ಹೇಳಿದ್ದನ್ನೂ ಕೇಳಿ ಅನಸೂಯಾಮಾತೆ, ಅವರಿಗೆ ನಮಸ್ಕರಿಸಿ, ಅವರ ಪಾದಗಳನ್ನು ತೊಳೆದು, ಪೀಠಗಳಮೇಲೆ ಕೂಡಿಸಿ, ಅರ್ಘ್ಯ ಕೊಟ್ಟು, ಗಂಧ ಪುಷ್ಪಾದಿಗಳಿಂದ ಪೂಜಿಸಿ, “ನೀವು ನಿಮ್ಮ ಆಹ್ನೀಕವನ್ನು ಮುಗಿಸಿ. ಅಷ್ಟರಲ್ಲಿ ನಾನು ನಿಮ್ಮ ಭೋಜನಕ್ಕೆ ಏರ್ಪಾಡುಮಾಡುತ್ತೇನೆ.” ಎಂದಳು. ಅದಕ್ಕೆ ಆ ವೇಷಧಾರಿಗಳು, “ಮಹರ್ಷಿಗಳು ಅನುಷ್ಠಾನಕ್ಕೆ ಹೋಗಿರುವಂತೆ ಕಾಣುತ್ತದೆ. ಅವರು ಬರುವುದು ತಡವಾಗಬಹುದು. ನಮಗೆ ಈಗಲೇ ಭೋಜನವಿಡು.” ಎಂದರು. ಅದಕ್ಕೆ ಒಪ್ಪಿ ಆಕೆ ಅವರನ್ನು ಭೋಜನಗೃಹಕ್ಕೆ ಕರೆದುಕೊಂಡುಹೋಗಿ, ಆಸನಗಳನ್ನು ಕೊಟ್ಟು, ಎಲೆ ಹಾಕಿ, ರಂಗೋಲಿಯಿಟ್ಟು, ಅಭಿಗಾರಮಾಡಿ, ಅನ್ನವನ್ನು ಬಡಿಸಲು ಸಿದ್ಧಳಾದಳು. ಆಗ ಅತಿಥಿವೇಷದಲ್ಲಿ ಬಂದಿದ್ದ ಆ ತ್ರಿಮೂರ್ತಿಗಳು, “ಹೇ ಸಾಧ್ವಿಮಣಿ, ನೀನು ನಮ್ಮ ಅಭೀಷ್ಟವನ್ನು ಪಾಲಿಸುವುದಾರೆ ನಮ್ಮ ಯಾಚನೆಯನ್ನೂ ಪಾಲಿಸಬೇಕು. ಅದೇನೆಂದರೆ ನೀನು ದಿಗಂಬರೆಯಾಗಿ ನಮಗೆ ಅನ್ನವನ್ನು ಬಡಿಸಬೇಕು. ಅದು ಸಾಧ್ಯವಾಗದಿದ್ದರೆ ಹೇಳು. ನಾವು ಮತ್ತೊಂದೆಡೆಗೆ ಹೋಗುತ್ತೇವೆ.” ಎಂದರು. ಅವರ ಮಾತುಗಳನ್ನು ಕೇಳಿದ ಆ ಪತಿವ್ರತೆ, ತನ್ನಲ್ಲಿ ತಾನು “ಈ ಅತಿಥಿಗಳು ನಮ್ಮ ಆಶ್ರಮದಿಂದ ವಿಮುಖರಾಗಿ ಹೊರಟುಹೋದರೆ ಈ ಗೃಹ ವನವಾಗಿಹೋಗುತ್ತದೆ. ಅವರ ಮಾತನ್ನು ಪಾಲಿಸಬೇಕೆಂದರೆ ನನ್ನ ಪಾತಿವ್ರತ್ಯಕ್ಕೆ ಭಂಗಬರುತ್ತದೆ. ಆದರೆ ನನ್ನ ಮನಸ್ಸು ನಿರ್ಮಲವಾಗಿದೆ. ಇವರ ಕಾಮದಾಟ ನನಗೇಕೆ? ನನ್ನ ಭರ್ತೃವಿನ ತಪೋಬಲವೇ ನನ್ನನ್ನು ಈ ಆಪತ್ತಿನಿಂದ ಪಾರುಮಾಡುತ್ತದೆ. ನನಗೆ ಯಾವ ಚಿಂತೆಯೂ ಬೇಡ.” ಎಂದು ಯೋಚಿಸಿ, ಆ ಪತಿವ್ರತೆ ಅನಸೂಯದೇವಿ, “ಆಗಲಿ. ನೀವು ಕೇಳಿದಂತೆ ನಿಮಗೆ ಭೋಜನವಿಡುತ್ತೇನೆ. ಸಾವಧಾನಚಿತ್ತರಾಗಿ ನೀವು ಊಟಮಾಡಿ.” ಎಂದು ಹೇಳಿ, ಪೂಜಾಗೃಹದೊಳಕ್ಕೆ ಹೋಗಿ ಅತ್ರಿಮಹರ್ಷಿಯ ಪಾದಗಳಿಗೆ ನಮಸ್ಕರಿಸಿ, “ಹೇ ಪತಿದೇವ, ಈ ಐವರೂ ನನ್ನ ಮಕ್ಕಳೇ ಅಲ್ಲವೇ?” ಎಂದು ಬಿನ್ನವಿಸಿಕೊಂಡು ವಿವಸ್ತ್ರಳಾಗಿ ಅನ್ನವನ್ನು ಹಿಡಿದು ಬರುವಷ್ಟರಲ್ಲಿ, ಆ ತ್ರಿಮೂರ್ತಿಗಳೂ, ಜಗನ್ನಾಥರೇ ಆದರೂ, ಹಸುಗೂಸುಗಳಾಗಿ ಹೋದರು. ಆ ಮಕ್ಕಳನ್ನು ನೋಡಿ, ಆಕೆಗೆ ಸ್ವಲ್ಪ ಭಯ ಎನಿಸಿದರೂ, ಅವರ ಬಳಿಗೆ ಬಂದು ಆ ಮಾತೆ ಅವರನ್ನೆತ್ತಿಕೊಂಡು ಮುದ್ದಾಡಿ ಸಂತಸಪಟ್ಟಳು. ಅಳುತ್ತಿದ್ದ ಆ ಮಕ್ಕಳನ್ನು ಬಾರಿಬಾರಿಗೂ ಎತ್ತಿ ಮುದ್ದಾಡಿ ಹಸಿದಿದ್ದಾರೆ ಎಂದುಕೊಳ್ಳುವಷ್ಟರಲ್ಲಿ ಆಕೆಯ ಸ್ತನಗಳಿಂದ ಹಾಲು ಸುರಿಯಲು ಮೊದಲಾಯಿತು. ಒಬ್ಬೊಬ್ಬರಾಗಿ ಆ ಮೂವರಿಗೂ ಆಕೆ ಸ್ತನ್ಯಪಾನ ಮಾಡಿಸಿದಳು. ಅನೇಕ ಯಜ್ಞಗಳಿಂದ ತೃಪ್ತಿಗೊಳ್ಳದ ಆ ಮೂವರೂ ಆಕೆಯ ಸ್ತನ್ಯಪಾನದಿಂದ ತೃಪ್ತಿಗೊಂಡು ಸುಪ್ತರಾದರು.

ಅತ್ರಿಪತ್ನಿಯಾದ ಆ ಅನಸೂಯೆಯ ಭಾಗ್ಯವೆಂತಹುದೋ! ಆಕೆಯ ತಪಃಫಲವೆಂತಹುದೋ! ತ್ರಿಮೂರ್ತಿಗಳು ಆಕೆಯ ಸ್ತನ್ಯಪಾನದಿಂದ ತೃಪ್ತರಾಗಿ ಹೋದರು. ಚತುರ್ದಶ ಭುವನಗಳನ್ನು ತನ್ನ ಉದರದಲ್ಲಿಟ್ಟುಕೊಂಡು ಪಾಲಿಸಿ ಅಲಸಿಹೋದವನಂತೆ ಆ ಮಹಾವಿಷ್ಣುವು ಆಕೆಯ ಸ್ತನ್ಯಪಾನಮಾಡಿ ತೃಪ್ತಿಯಿಂದ ಮಲಗಿದನು. ಹಗಲು ರಾತ್ರಿಯೆನ್ನದೆ ಸೃಷ್ಟಿಕಾರ್ಯದಲ್ಲಿ ನಿರತನಾದ ಬ್ರಹ್ಮನು ವಿಶ್ರಾಂತಿಯಿಲ್ಲದೆ ಬಳಲಿಹೋದವನಂತೆ ಆಕೆಯ ಸ್ತನಕ್ಷೀರಪಾನಮಾಡಿ ನಿದ್ರಾಪರವಶನಾದನು. ಕರ್ಪೂರದಂತೆ ಧವಳವರ್ಣನೂ, ಪಂಚಮುಖನೂ, ಫಾಲಾಕ್ಷನೂ ಆದ ರುದ್ರ ಆ ಸಾಧ್ವಿಯ ಸ್ತನಗಳಿಂದ ಹಾಲು ಕುಡಿದು ತೃಪ್ತನಾಗಿ ಸುಪ್ತ ಚೇತನನಾದನು. ಆ ಮಹಾಸತಿಗೆ ಸಮಾನರಾದ ಮತ್ತೊಬ್ಬರು ಭುವನತ್ರಯಗಳಲ್ಲಿ ಯಾರೂ ಇಲ್ಲ. ತ್ರಿಮೂರ್ತಿಗಳಿಗೆ ಮಾತೆಯಾಗಿ ಆಕೆ ಪ್ರಖ್ಯಾತಳಾದಳು.

ಅನಸೂಯ ಮಕ್ಕಳನ್ನು ಎತ್ತಿ ಲಾಲಿಸಿ ಪಕ್ಕದಲ್ಲಿ ಮಲಗಿಸಿಕೊಂಡು ಮಧುರವಾಗಿ, ಸರ್ವೋಪನಿಷತ್ತುಗಳ ಸಾರಭೂತವಾದ ಗೀತೆಗಳನ್ನು ಸಪ್ತಸ್ವರಗಳದೊಡನೆ ಮೇಳವಿಸಿ, ತ್ರಿಮೂರ್ತಿಗಳ ಯಶಸ್ಸನ್ನು ಸುಶ್ರಾವ್ಯವಾಗಿ ಹಾಡಿದಳು. ಅಷ್ಟರಲ್ಲಿ ಮಧ್ಯಾಹ್ನವಾಯಿತು. ತಪೋನುಷ್ಠಾನ ಪೂರ್ಣಗೊಳಿಸಿ ಅತ್ರಿ ಮಹರ್ಷಿ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಆಶ್ರಮಕ್ಕೆ ಹಿಂತಿರುಗಿದರು. ಮನೋಹರವಾಗಿ ಅನಸೂಯ ಗಾನಮಾಡುತ್ತಿರುವುದನ್ನು ಕೇಳುತ್ತಾ, ಮಕ್ಕಳು ಮಲಗಿರುವುದನ್ನು ನೋಡಿದರು. ಅದನ್ನು ಕಂಡು ತಮ್ಮ ಗೃಹಿಣಿಯನ್ನು ತಾನು ನೋಡುತ್ತಿರುವುದೇನು ಎಂದು ಸಾದರೋಕ್ತಿಗಳಿಂದ ಪ್ರಶ್ನಿಸಿದರು. ಆಕೆ ಆರಂಭದಿಂದ ನಡೆದದ್ದೆಲ್ಲವನ್ನೂ ವಿಸ್ತಾರವಾಗಿ ಹೇಳಿದಳು. ಅದೆಲ್ಲವನ್ನೂ ಕೇಳಿದ ಅತ್ರಿ ಮಹರ್ಷಿ ಸ್ವಲ್ಪಹೊತ್ತು ಧ್ಯಾನದಲ್ಲಿದ್ದು, ತನ್ನ ತಪಃಪ್ರಭಾವದಿಂದ ಅಲ್ಲಿ ಮಲಗಿರುವ ಮಕ್ಕಳು ತ್ರಿಮೂರ್ತಿಗಳು ಎಂದು ಗುರುತಿಸಿ ಅವರಿಗೆ ನಮಸ್ಕರಿಸಿದರು. ಆ ದಂಪತಿಯರ ಅಂತರ್ಭಾವವನ್ನು ತಿಳಿದ ತ್ರಿಮೂರ್ತಿಗಳು ಪ್ರಸನ್ನರಾಗಿ ಸ್ವಸ್ವರೂಪದಿಂದ ಪ್ರತ್ಯಕ್ಷರಾದರು. ಆ ದಂಪತಿಗಳು ಹರ್ಷಿತರಾಗಿ ಅವರನ್ನು ಸ್ತೋತ್ರ ಮಾಡಿದರು. ತ್ರಿಮೂರ್ತಿಗಳು “ನಿಮ್ಮ ಭಕ್ತಿಗೆ ಮೆಚ್ಚಿಕೊಂಡಿದ್ದೇವೆ. ನಿಮ್ಮ ವಾಂಛೆಯೇನೋ ಹೇಳಿ. ನೆರವೇರಿಸುತ್ತೇವೆ.” ಎಂದರು. ಅತ್ರಿ ಮಹರ್ಷಿಯು ತನ್ನ ಪತ್ನಿಯನ್ನು ಆಕೆಗೆ ನಿನಗೇನು ಬೇಕೋ ಕೇಳಿಕೋ ಎಂದು ಅನುಮತಿ ಕೊಟ್ಟರು. ಆಕೆ, “ಸ್ವಾಮಿ, ನಿಮ್ಮ ಭಕ್ತಿ ಸಾಮರ್ಥ್ಯಗಳಿಂದಲೇ ಪ್ರಾದುರ್ಭವಿಸಿದ ಈ ಸುತಸದೃಶರನ್ನು ನಿಜಸುತರನ್ನಾಗಿ ಪಡೆಯಲು ಇಚ್ಚಿಸುತ್ತೇನೆ.” ಎಂದಳು. ಆ ಮುನಿವರ್ಯ ತನ್ನ ಪತ್ನಿಯ ಕೋರಿಕೆಗೆ ಸಮ್ಮತಿಸಿ, ತ್ರಿಮೂರ್ತಿಗಳನ್ನು ತಮ್ಮ ಸುತರಾಗಿ ಬರುವಂತೆ ಕೋರಿದನು.

“ಹೇ ಮುನೀಶ್ವರ, ನಿನ್ನ ಅಭೀಷ್ಟ ಸಿದ್ಧಿಸುತ್ತದೆ. ನಮ್ಮ ಅಂಶಗಳಿಂದ ಜನಿಸಿದ ಬಾಲರು ನಿನ್ನ ಗೃಹಕ್ಕೆ ಬರುತ್ತಾರೆ. ನಮಗೆ ಹೊರಡಲು ಅಪ್ಪಣೆ ಕೊಡು.” ಎಂದು ಹೇಳಿ, ಆ ತ್ರಿಮೂರ್ತಿಗಳು, ತಮ್ಮ ತಮ್ಮ ಧಾಮಗಳಿಗೆ ಹಿಂತಿರುಗಿದರು. ನಂತರದಲ್ಲಿ ಅತ್ರಿ ಮಹರ್ಷಿಯ ಆಶ್ರಮದಲ್ಲಿ ತ್ರಿಮೂರ್ತ್ಯಂಶರಾದ ಮೂವರು ಬಾಲರಾದರು. ಅನಸೂಯೆ ಮಾತೆಯಾಗಿ ಆ ಬಾಲರನ್ನು ಪೋಷಿಸಿ ಬೆಳೆಸಿದಳು. ಆ ಮೂವರೂ ಶ್ರೀದತ್ತ, ಚಂದ್ರ, ದೂರ್ವಾಸರೆಂಬ ನಾಮಧೇಯಗಳಿಂದ ಪ್ರಸಿದ್ಧರಾದರು.

ಪ್ರಜ್ಞಾವಂತರಾದ ಚಂದ್ರ ದೂರ್ವಾಸರು ತಮ್ಮ ಗೃಹವನ್ನು ಬಿಟ್ಟು ಹೋಗಲು ನಿಶ್ಚಯಿಸಿ, ತಮ್ಮ ಮಾತೆಯಾದ ಅನಸೂಯೆಯ ಅನುಮತಿ ಬೇಡಿದರು. ದೂರ್ವಾಸ, ” ಅಮ್ಮ, ನಾನು ತಪಸ್ಸನ್ನಾಚರಿಸುತ್ತಾ ತೀರ್ಥ ಪರ್ಯಟನೆ ಮಾಡಬೇಕೆಂದಿದ್ದೇನೆ. ಅನುಜ್ಞೆಕೊಡು.” ಎಂದು ಹೇಳಿ, ಆಕೆಯ ಅನುಜ್ಞೆ ಪಡೆದು ಹೊರಟುಹೋದನು. ಚಂದ್ರನು, “ನಾನು ಚಂದ್ರಮಂಡಲದಲ್ಲಿ ನೆಲಸುತ್ತೇನೆ. ನನ್ನ ದರ್ಶನ ನಿನಗೆ ನಿತ್ಯವೂ ಆಗುತ್ತದೆ. ದುಃಖಿಸಬೇಡ.” ಎಂದು ಹೇಳಿ, ” ಈ ಶ್ರೀದತ್ತ ತ್ರಿಮೂರ್ತಿಸ್ವರೂಪನು. ನಿಮ್ಮೊಡನೆ ಸದಾಕಾಲವೂ ಇರುತ್ತಾನೆ. ಅವನೇ ವಿಷ್ಣು ಭಗವಾನನು. ಈ ಜಗತ್ತಿನಲ್ಲಿರುವುದೆಲ್ಲವೂ ವಿಷ್ಣುಮಯವೇ! ನಿಮಗೆ ಇವನ ವಿಯೋಗವಿರುವುದಿಲ್ಲ. ನಿಮ್ಮ ಚಿತ್ತಾನುಸಾರವಾಗಿ ಶ್ರೀದತ್ತನು ನಿಮ್ಮೊಡನಿರುತ್ತಾನೆ.” ಎಂದು ಹೇಳಿ, ಚಂದ್ರನು ಮಾತೆಯ ಅಪ್ಪಣೆ ಪಡೆದು ಚಂದ್ರಮಂಡಲ ಸೇರಿದನು. ಚಂದ್ರನು ಹೇಳಿದಂತೆ ಶ್ರೀದತ್ತನು ತನ್ನ ತಾಯಿಯೊಡನೆ ಗೃಹದಲ್ಲೇ ನಿಂತನು. ಗುರುಪರಂಪರೆಯ ಮೂಲವಿದೇ!” ಎಂದು ಸಿದ್ಧಮುನಿ ನಾಮಧಾರಕನಿಗೆ ಅತ್ರಿ ವೃತ್ತಾಂತವನ್ನು ಹೇಳಿದರು.

ನಾಮಧಾರಕ ಸಿದ್ಧಮುನಿಗೆ ಸಾದರವಾಗಿ ನಮಸ್ಕರಿಸಿ, “ಯೋಗೀಶ್ವರ, ಭಕ್ತ ಮನೋಹರ, ಕೃಪಾಮೂರ್ತಿ, ಭವತಾರಕ, ಸಿದ್ಧಪುರುಷ, ನಿನಗೆ ಜಯವಾಗಲಿ. ನಿನ್ನ ಪ್ರಸಾದದಿಂದ ಅನಸೂಯ ಸಾಧ್ವಿಯ ಕಥೆ ತಿಳಿಯಿತು. ನೀನೆ ಉದ್ಧರಿಸಬಲ್ಲ ಯೋಗಿಪುಂಗವ. ನನ್ನ ಪ್ರಾರ್ಥನೆಯನ್ನು ಕೇಳು. ದತ್ತಾತ್ರೇಯರ ಅವತಾರ ಕಥೆಯನ್ನು ನನಗೆ ವಿಸ್ತಾರವಾಗಿ ಹೇಳಿದೆ. ಈ ಮಹೀತಲದಲ್ಲಿ ಶ್ರೀದತ್ತನ ಅವತಾರ ಹೇಗಾಯಿತು? ನನ್ನ ಮೇಲೆ ಪ್ರೇಮವಿಟ್ಟು ವಿಸ್ತರಿಸಿ ಹೇಳು. ತ್ರಿಮೂರ್ತ್ಯವತಾರ ಲೀಲೆಗಳನ್ನು ಎಷ್ಟು ಕೇಳಿದರೂ ಸಾಲದಲ್ಲವೇ?” ಎಂದು ಬಿನ್ನವಿಸಿಕೊಂಡನು. ಅವನ ಮಾತನ್ನು ಕೇಳಿದ ಸಿದ್ಧಮುನಿ ಮತ್ತೆ ಹೇಳಿದರು.

||ಇತಿ ಶ್ರೀಗುರುಚರಿತ್ರ ಪರಮಕಥಾಕಲ್ಪತರೌ ಶ್ರೀ ನೃಸಿಂಹಸರಸ್ವತ್ಯುಪಾಖ್ಯಾನೇ ಜ್ಞಾನಕಾಂಡೇ ಸಿದ್ಧನಾಮಧಾರಕ ಸಂವಾದೇ ಶ್ರೀದತ್ತಾವತಾರೋ ನಾಮ ಚತುರ್ಥೋಧ್ಯಾಯಃ ಸಂಪೂರ್ಣಂ||

Leave a comment

Filed under ಶ್ರೀ ಗುರು ಚರಿತ್ರೆ

ಕಗ್ಗ-೮

ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ?

ಭ್ರಮಿಪುದೇನಾಗಾಗ ಕರ್ತೃವಿನ ಮನಸು?

ಮಮತೆಯುಳ್ಳವನಾತನಾದೊಡೀ ಜೀವಗಳು

ಶ್ರಮಪಡುವುದೇಕಿಂತು -ಮಂಕುತಿಮ್ಮ ?

ಕ್ರಮವು ಒಂದು ಲಕ್ಷ್ಯವು ಒಂದು ಉಂಟೇನು ಸೃಷ್ಟಿಯಲಿ ಭ್ರಮಿಪುದು ಅದೇನು ಆಗಾಗ ಕರ್ತೃವಿನ ಮನಸು

ಮಮತೆಯುಳ್ಳವನು ಆತನು ಆದೊಡೆ ಜೀವಗಳು ಶ್ರಮಪದುವುದೇಕೆ ಇಂತು – ಮಂಕುತಿಮ್ಮ

ಕ್ರಮವು= ರೀತಿ, ಲಕ್ಷ್ಯವು = ಗುರಿ(purpose ), ಭ್ರಮಿಪುದು = ವಿಕಾರಗೊಳ್ಳುವುದು ಅಥವಾ ವಿಚಲಿತವಾಗುವುದು,

ಕರ್ತೃ= ಜಗತ್ತನ್ನು ಸೃಷ್ಟಿದವ , ಆದೊಡೆ= ಆದರೆ, ಶ್ರಮ = ಕಷ್ಟ .

ಇಲ್ಲಿ ಗುಂಡಪ್ಪನವರು ಕೇಳುವ ಪ್ರಶ್ನೆ ಹೀಗಿದೆ

” ಈ ಭಗವಂತನ ಸೃಷ್ಟಿಯಲ್ಲಿ ಒಂದು ಕ್ರಮ ಅಥವಾ ಗುರಿ ಏನಾದರೂ ಇದೆಯೇ? ಈ ಸೃಷ್ಟಿಕರ್ತನ ಮನಸ್ಸು ಏಕೆ ಆಗಾಗ ವಿಚಲಿತವಾಗಿ ಎಲ್ಲೆಲ್ಲೋ ಹರಿದಾಡುತ್ತದೆ. ?

ತಾನು ಸೃಷ್ಟಿಸಿದ ಜೀವಿಗಳ ಮೇಲೆ ಅವನಿಗೆ ಪ್ರೀತಿ ವಾತ್ಸಲ್ಯಗಳು ಇರುವುದಾದರೆ ಈ ಜೀವಿಗಳು ಏತಕ್ಕಾಗಿ ಈ ರೀತಿಯ ಕಷ್ಟಗಳನ್ನು ಅನುಭವಿಸುತ್ತವೆ?

ಗುಂಡಪ್ಪನವರ ಮನಕರಗಿ ಇಂತಹ ಪ್ರಶ್ನೆಗಳನ್ನು ತಮ್ಮನ್ನು ತಾವೇ ಕೇಳಿಕೊಳ್ಳುತ್ತಾ, ಓದುಗರ ಮುಂದಿಡುತ್ತಾರೆ. ಇಡೀ ಜಗತ್ತಿನ ಆಗು ಹೋಗುಗಳಿಗೆ ಏನಾದರೂ ಒಂದು ಕ್ರಮವಿದೆಯೇ ಎಂದು ಅವರ ಪ್ರಶ್ನೆ. ಇದೆ ಎಂದು ಹೇಳಬಹುದು. ಹಗಲು ರಾತ್ರಿಗಳು ಭೂಮಿಯ ಸುತ್ತುವಿಕೆಯಿಂದ ಆಗುತ್ತದೆ. ಭೂಮಿಯೂ ಒಂದು ಲೆಕ್ಕಾಚಾರದಲ್ಲೇ ಸುತ್ತುತ್ತದೆ. ಹಾಗೆ ಸುತ್ತುವುದರಿಂದ ಋತುಮಾನಗಳು. ಬಿಸಿಲು, ಮಳೆ, ಚಳಿ ಮತ್ತು ಗಾಳಿ ಕಾಲಗಳು. ಬೆಳೆಗಳು, ಹೂ, ಹಣ್ಣುಗಳಿಗೂ ಒಂದೊಂದು ಕಾಲ.

ಆದರೂ ಆಗಾಗ ನಮಗರಿಯದಂತ ವ್ಯತ್ಯಾಸಗಳು ಆಗುತ್ತವೆ. ಅತೀವೃಷ್ಟಿ- ಅನಾವೃಷ್ಟಿಗಳು, ಜ್ವಾಲಾಮುಖಿಗಳು, ಭೂಕಂಪಗಳು, ಯುದ್ಧಗಳು, ಹೀಗೆ ಮಾನವನಿಗೆ ಮತ್ತು ಜೀವಿಗಳಿಗೆ ಮಾರಕವಾದ ನೈಸರ್ಗಿಕ ವಿಧ್ಯಮಾನಗಳು ನಡೆಯುವಾಗ , ಏಕೆ ಈ ಭಗವಂತನ ಸೃಷ್ಟಿಯಲಿ ಒಂದು ಕ್ರಮವೇ ಇಲ್ಲವೇ ಮತ್ತು ಇದನ್ನೆಲ್ಲಾ ಆಗಗೊಡುವ ಆ ಪರಮಾತ್ಮನ ಮನಸ್ಸು ಏಕೆ ವಿಚಲಿತಗೊಳ್ಳುತ್ತದೆ ಎಂಬ ಪ್ರಶ್ನೆ ಸಹಜವಾಗೇ ಮೂಡುತ್ತದೆ. ಅಂತಹ ಪ್ರಶ್ನೆಯನ್ನೇ ಡಿ.ವಿ.ಜಿ. ಯವರು ಕೇಳುತ್ತಾರೆ.

ಆದರೆ ಈ ಜಗತ್ತಿನಲ್ಲಿ ನಡೆಯುವ ಜೀವನದ ನಾಟಕದಲ್ಲಿ ಒಬ್ಬೊಬ್ಬರು ಒಂದು ರೀತಿ. ಒಬ್ಬರಂತೆ ಒಬ್ಬರಿಲ್ಲ, ಒಬ್ಬರ ಯೋಚನೆಯಂತೆ ಮತ್ತೊಬ್ಬರದಿಲ್ಲ, ಪ್ರತಿಯೊಬ್ಬರ ಆಸೆ ಆಕಾಂಕ್ಷೆಗಳೂ ಭಿನ್ನ ಭಿನ್ನ ಅಲ್ಲವೇ? ಅವನ ಬುದ್ಧಿ ಏಕೆ ಹಾಗೆ ಭಿನ್ನ ಭಿನ್ನ ಎನ್ನುವುದಕ್ಕೆ ವಿಜ್ಞಾನಿಗಳು, ಶಾಸ್ತ್ರಜ್ಞರೂ, ತತ್ವವೇತ್ತರೂ ಸಹ ಭಿನ್ನ ಭಿನ್ನವಾದ ವ್ಯಾಖ್ಯಾನಮಾಡುತ್ತಾರೆ. ಹಾಗಾಗಿ ಭಿನ್ನತೆಯೇ ಜೀವನದ ಲಕ್ಷಣ ಅಥವಾ ಗುಣ.

ಈ ಭಿನ್ನತೆಗೂ ಆ ಪರಮಾತ್ಮನೇ ಕಾರಣನೋ? ಎಂದರೆ. ಅಹುದು ಮತ್ತು ಅಲ್ಲ. ಇಲ್ಲಿ ಎರಡು ವಿಚಾರಗಳಿವೆ. ಒಂದು ” ಎಲ್ಲವೂ ಪರಮಾತ್ಮನ ಇಚ್ಚೆಯಂತೆ ನಡೆಯುತ್ತದೆ” ಎಂದರೆ ಈ ಭಿನ್ನತೆಯೂ ಅವನ ಇಚ್ಚೆಯಂತೆಯೆ ಎಂದು ಆಯಿತು. ” ಪ್ರತಿ ಜೀವಿಯೂ ಅವನವನ ಕರ್ಮಕ್ಕನುಗುಣವಾಗಿ ಫಲಾಫಲಗಳನ್ನು ಪಡೆದು ಜೀವಿಸುತ್ತಾನೆ ” ಎಂದಾದರೆ ಇಲ್ಲಿ, ಪರಮಾತ್ಮನ ಪ್ರಮೇಯ ಕಡಿಮೆ. ಆದರೆ “ಇದೋ” ಅಥವಾ “ಅದೋ” ಎನ್ನುವ ದ್ವಂದ್ವ ಸಹ ಸದಾ ಮಹಾ ಮಹಾ ಪಂಡಿತರನ್ನೇ ಕಾಡಿದೆ, ಮತ್ತು ಇಂದಿಗೂ ಇತ್ಯರ್ಥವಾಗದೆ ಉಳಿದಿದೆ.

ಈ ಕಗ್ಗಕ್ಕೆ ಮತ್ತು ಈ ಕಗ್ಗದ ಹಿಂದಿನ ನಾಲ್ಕು ಕಗ್ಗಗಳಿಗೂ ಮತ್ತು ಮುಂದೆ ಬರುವ ಕಗ್ಗಗಳಿಗೂ ಒಂದು ಹಿನ್ನೆಲೆಯುಂಟು. ಗುಂಡಪ್ಪನವರು ಈ ಕಗ್ಗವನ್ನು ಮೊದಲು ಪ್ರಕಟಿಸಿದ್ದು ೧೯೪೨ರಲ್ಲಿ. ಆಗ ಜಗತ್ತಿನೆಲ್ಲೆಲ್ಲೂ ಬರ, ಅನಾವೃಷ್ಟಿ ೨ನೆ ವಿಶ್ವ ಯುದ್ಧದ ಕಾಲ. ಎಲ್ಲೆಲ್ಲೂ ಹಾಹಾಕಾರ, ಆಕ್ರಂದನ, ಬಡತನ ಆಹಾರದ ಕೊರತೆ, ರೋಗ ರುಜಿನಗಳ ಮಹಾಪೂರ ಹೀಗೆ ಹತ್ತು ಹಲವಾರು ಪ್ರಕೊಪಗಳಿಗೆ ಬಲಿಯಾಗಿ ಜನರು ತೊಳಲಾಡುತ್ತಿದ್ದರು. ಹಾಗಾಗಿ ಡಿ.ವಿ.ಜಿ. ಯವರು ಅಂದಿನ ಪರಿಸ್ತಿತಿಗೆ ಪ್ರತಿಕ್ರಿಯೆಯ ರೂಪದಲ್ಲಿ, ಆ ಪರಮಾತ್ಮನು ಎಲ್ಲರನ್ನೂ ಸೃಷ್ಟಿಸಿ, ಎಲ್ಲರಲ್ಲೂ ಸಮಾನವಾದ ಪ್ರೀತಿ ಇದ್ದರೆ ಈ ರೀತಿಯ ಸಂಕಷ್ಟಗಳು ಜನರಿಗೆ ಏಕೆ ಎಂಬಂತಹ ಕರುಣಾ ಪೂರಿತವಾದ ಪ್ರಶ್ನೆಗಳನ್ನು ತಮ್ಮನ್ನು ತಾವೇ ಕೇಳಿಕೊಳ್ಳುತ್ತಾರೆ.

ಆದರೆ ವಾಚಕ ಮಿತ್ರರೇ, ಅಂದಿನ ಸ್ಥಿತಿಗೂ ಇಂದಿನ ಸ್ಥಿತಿಗೂ ಏನೂ ವ್ಯತ್ಯಾಸವಿಲ್ಲ. ಪ್ರಪಂಚದಲ್ಲಿ ಮಾನವನ ಜೀವನ ಇನ್ನಷ್ಟು ಕ್ಲಿಷ್ಟವಾಗಿದೆ, ಇನ್ನಷ್ಟು ಹದಗೆಟ್ಟಿದೆ, ಸ್ವಾರ್ಥದ ಬುದ್ಧಿ ಇನ್ನಷ್ಟು ಬಲವಾಗಿದೆ, ದೇಶ ದೇಶಗಳನಡುವೆ ದ್ವೇಷದ ಭಾವ ಇನ್ನೂ ಹಾಗೆ ಇದೆ. ಹಳೆಯದನ್ನು ಮರೆತು, ಪ್ರೀತಿ ವಿಶ್ವಾಸದಲಿ, ತೃಪ್ತಿ ಸಂತೋಷದಲಿ ಬದುಕಿ ಪ್ರಗತಿಯತ್ತ ಹೋಗಲು ಯಾರಿಗೂ ಇಷ್ಟವಿಲ್ಲ. ಹಾಗಾಗಿ ಮಾನ್ಯ ಗುಂಡಪ್ಪನವರು ಅಂದು ಕೇಳಿದ ಪ್ರಶ್ನೆಗಳು ಇಂದಿಗೂ ಪ್ರಸ್ತುತ.

ಹಾಗಾಗಿ ಅವರ ವಿಚಾರಗಳನ್ನು ನಮ್ಮ ಮನಸ್ಸುಗಳಲ್ಲೂ ವಿಚಾರದ ಓರಗೆ ಹಚ್ಚಿ ನೋಡೋಣ ಬನ್ನಿ ಮಿತ್ರರೇ.

Leave a comment

Filed under ಕಗ್ಗದ ಹುಗ್ಗಿ

ಕಗ್ಗ-೭

ಕಗ್ಗ-೭

ಬದುಕಿಗಾರ್ ನಾಯಕರು, ಏಕನೋ ಅನೇಕರೋ?

ವಿಧಿಯೋ ಪೌರುಷವೋ ಧರುಮವೋ ಅಂಧಬಲವೋ?

ಕುದುರುವುದೆಂತು ಈಯವ್ಯವಸ್ಥೆಯ ಪಾಡು?

ಅದಿಗುದಿಯೆ ಗತಿಯೇನೋ? – ಮಂಕುತಿಮ್ಮ ||

ಬದುಕಿಗಾರ್= ಬದುಕಿಗೆ=ಯಾರ್, ಧರುಮವೋ= ಧರ್ಮವೋ, ಅಂಧಬಲವೋ= ಅಂಧ ಶ್ರದ್ಧೆಯೋ, ಈಯವ್ಯವಸ್ಥೆಯ = ಈ + ಅವ್ಯವಸ್ಥೆಯ, ಅದಿಗುದಿ = ಸಂದೇಹ ಅಥವಾ ತಳಮಳ.

ಈ ಬದುಕಿಗೆ ಯಾರು ನಾಯಕರು? ಒಬ್ಬನೇ ಒಬ್ಬನೋ ಅಥವಾ ಅನೇಕರಿದ್ದಾರೆಯೋ? ಅಥವಾ ಈ ಬದುಕಿಗೆ ನಾಯಕ, ವಿಧಿಯೋ,ಧರ್ಮವೋ,ಅಥವಾ ಅಂಧ ಶ್ರದ್ಧೆಯೋ? ಹಿಂದಿನ ಕಗ್ಗದಲ್ಲಿ ಉಲ್ಲೇಖಿಸಿರುವ ಅವ್ಯವಸ್ಥೆ ಸರಿಯಾಗುವುದೋ ಇಲ್ಲವೋ? ಅಥವಾ ಇವೆಲ್ಲರದರ ವಿಚಾರದ ತಳಮಳದಲ್ಲಿಯೇ ನಾವು ಯಾವಾಗಲೂ ಇರಬೇಕೆ? ಈ ರೀತಿಯ ಪ್ರಶ್ನೆಗಳನ್ನು ಸನ್ಮಾನ್ಯ ಡಿ ವಿ ಗುಂಡಪ್ಪನವರು ತಮ್ಮನ್ನೇ ತಾವು ಕೇಳಿಕೊಳ್ಳುತ್ತಾ, ಓದುಗರ ಮುಂದೆ ಪ್ರಸ್ತಾಪಿಸುತ್ತಾರೆ.

ಈ ರೀತಿಯ ಸಂದೇಹಗಳು ಎಲ್ಲ ಕಾಲಕ್ಕೂ ಎಲ್ಲ ವಿಚಾರವಂತರಿಗೂ ಮನದಲ್ಲಿ ಉದ್ಭವವಾಗುತ್ತದೆ. ” ಕಿಮೇಕಂ ದೈವತಂ ಲೋಕೆ? ಕಿಂ ವಾಪ್ಯೇಕಂ ಪರಾಯಣಂ? ಸ್ತುವನ್ತಃ ಕಂಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಂ? ಕೋ ಧರ್ಮಃ ಸರ್ವ ಧರ್ಮಾಣಾಂ ಭವತಃ ಪರಮೌ ಮತಃ ? ಕಿಂ ಜಪನ್ಮುಚ್ಯತೇರ್ಜ೦ತುರ್ ಜನ್ಮ ಸಂಸಾರ ಬಂಧನಾತ್ ” ಇವು ಮಹಾಭಾರತದಲ್ಲಿ ಧರ್ಮರಾಯನು ಭೀಷ್ಮರು ಶರ ಶಯ್ಯೆಯಲ್ಲಿರುವಾಗ, ಸಂಜೆ ನಡೆಯುವ ಸತ್ಸಂಗದಲ್ಲಿ ಕೇಳುವ ಪ್ರಶ್ನೆ. ಒಬ್ಬನೇ ದೇವನಾರು? ಎಲ್ಲಕ್ಕಿಂತ ಮಿಗಿಲಾದ ಧರ್ಮವಾವುದು? ಎಂಬ ಸಂದೇಹಗಳು ಧರ್ಮರಾಯನಿಗೇ ಬರುವುದಾದರೆ, ಇನ್ನು ನಮಗೆ ಎಂತಹ ಸಂದೇಹಗಳು ಬರಬೇಕು ಹೇಳಿ? ಇದು ಸಹಜ. ಈ ಸೃಷ್ಟಿಯ ರಹಸ್ಯವನ್ನು ಛೇಧಿಸಲು ಅಷ್ಟು ಸುಲಭವೇ?

ದೇವನೊಬ್ಬ ನಾಮ ಹಲವು ಎಂಬ ಮಾತು ಎಲ್ಲರಿಗೂ ಗೊತ್ತಿರುವುದೇ. ಆದರೆ ಆ ದೇವನಾರು? ಮೂರ್ತರೂಪದಲ್ಲಿಹನೆ ಅಥವಾ ಅಮೂರ್ಥನೆ ಅಂದರೆ ಆಕಾರ ಉಂಟೆ ಇಲ್ಲವೇ? ಆ ಜಗತ್ತಿಗೆ ಮತ್ತು ಜಗತ್ತಿನ ಜೀವಿಗಳಿಗೆ ಅವನು ನಾಯಕನೇ? ಧರ್ಮಕ್ಕೆ ನಮ್ಮಲ್ಲಿ ಬಹಳ ಪ್ರಾಧಾನ್ಯವಿದೆ. ಧರ್ಮವೆಂದರೆ ಒಂದು ವಸ್ತುವಿನ ಸ್ವಭಾವ ಎನ್ನುವ ಅರ್ಥವೂ ಇದೆ. ಹಾಗೆಯೆ ಧರ್ಮಕ್ಕೆ ಬೇರೆ ಬೇರೆಯವರು ಬೇರೆ ಬೇರೆ ರೀತಿಯಲ್ಲಿ ವ್ಯಾಕ್ಯಾನ ಮಾಡಿದ್ದಾರೆ .ಹಾಗಾಗಿ ಜಗತ್ತಿನಲ್ಲಿ ಇಷ್ಟೊಂದು ಭಿನ್ನ ಭಿನ್ನ ಮತಗಳು. ಅಂತ ಧರ್ಮವೇ ಈ ಜಗತ್ತಿನ ನಾಯಕನೇ ? ವಿಧಿ ಎಂದರೆ ಪೂರ್ವ ನಿಯಮಿತ ಕ್ರಮ ಎಂದು ಅರ್ಥ. ಮೊದಲೇ ವಿಧಿಸಿದ ಬಗೆ. ಹಣೆಯ ಬರಹವೆಂದೂ ಅನ್ನುತ್ತಾರೆ. ನಮ್ಮ ಬದುಕನ್ನು ನಡೆಸುವುದು ಈ ಹಣೆಯ ಬರಹವೇ ? ಯಾವುದಾದರೂ ಆಗಲಿ ಅಥವಾ ಇರಲಿ, ಈ ಜಗತ್ತಿನ ಅಸಮತೆ, ಅಸಮಾನತೆ, ವೈಚಿತ್ರ್ಯ, ಅಥವಾ ಅವ್ಯವಸ್ಥೆಯು ಸರಿಯಾಗುವ ಬಗೆ ಇದೆಯೋ ಇಲ್ಲವೋ ? ಅಥವಾ ಇದನ್ನು ಅರಿಯುವ ಮತ್ತು ನಿರ್ಧರಿಸುವ ತಳಮಳದಲ್ಲಿಯೇ ನಾವು ಎಂದಿಗೂ ಇರಬೇಕೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ

ದೇವರನ್ನೇ ನಂಬುವ, ದೇವರನ್ನು ಮತ್ತು ಧರ್ಮವನ್ನು ನಂಬುವ (ಇಲ್ಲಿ ಧರ್ಮ ಬೇರೆಯಲ್ಲ ದೇವರು ಬೇರೆಯಲ್ಲ ಎಂಬ ವಾದ ಮಾಡುವವರೂ ಉಂಟು) ದೇವರನ್ನು ಮತ್ತು ವಿಧಿಯನ್ನುಎಂದರೆ ಹಣೆಬರಹವನ್ನೇ ನಂಬುವ ಮತ್ತು ತಮ್ಮ ಸ್ವಶಕ್ತಿಯನ್ನೇ ನಂಬುವ ಎಲ್ಲ ರೀತಿಯ ಜನರು ಜಗತ್ತಿನ ಎಲ್ಲೆಡೆಯಲ್ಲೂ, ಎಲ್ಲ ಮತಗಳಲ್ಲೂ ಇದ್ದಾರೆ. ಕಾರಣವೇ ತಿಳಿಯದ, ಈಜಗತ್ತಿನ ಅಸಮಾನತೆ ಜಗತ್ತಿನಲ್ಲಿ ಎಲ್ಲೆಲ್ಲೂ ಇದೆ ಅಲ್ಲವೆ ಇದು ಏಕೆ ಹೀಗೆ, ಇದು ಸರಿಯಾಗುವುದೋ ಇಲ್ಲವೋ ಎನ್ನುವ ನೆನೆಗುದಿಯಲ್ಲೇ ಮಾನವರು ಬದುಕು ದೂಡುತ್ತಿದ್ದಾರೆ. ಇಂತಹ ಭಾವಗಳನ್ನೇ ವ್ಯಕ್ತಪಡಿಸುತ್ತಾರೆ ಮಾನ್ಯ ಗುಂಡಪ್ಪನವರು.

ಇಂತಹ ಸಂದೇಹಗಳು ನಮ್ಮ ನಿಮ್ಮ ಮತ್ತು ಸಕಲರಲ್ಲೂ ಉಂಟಾಗುತ್ತದಲ್ಲವೇ?

Leave a comment

Filed under ಕಗ್ಗದ ಹುಗ್ಗಿ

ಕಗ್ಗ-೬

ಕಗ್ಗ-೬

ಒಗಟೆಯೇನೀ ಸೃಷ್ಟಿ? ಬಾಳಿನರ್ಥವೇನು ?
ಬಗೆದು ಬಿಡಿಸುವರಾರು ಸೋಜಿಗವನಿದನು ?
ಜಗವ ನಿರವಿಸಿದ ಕೈಯೊಂದಾದೊಡೇಕಿಂತು
ಬಗೆ ಬಗೆಯ ಜೀವಗತಿ ? – ಮಂಕುತಿಮ್ಮ

ಒಗಟೆಯೇನೀ (ಒಗಟೇ+ ಏನು+ ಈ) ಸೃಷ್ಟಿ? ಬಾಳಿನ ಅರ್ಥವೇನು. ಬಗೆ ಬಿಡಿಸುವವರು ಯಾರು ಸೋಜಿಗವ ಇದನು.
ಜಗವ ನಿರವಿಸಿದ ( ನಿರ್ಮಿಸಿದ) ಕೈ ಒಂದು ಆಡೋದೇ ( ಆದರೆ ) ಏಕೆ ಇಂತು( ಹೀಗೆ) ಬಗೆ ಬಗೆಯ ಜೀವಗತಿ – ಮಂಕುತಿಮ್ಮ.

ಈ ಸೃಷ್ಟಿಯು ಒಗಟೇ? ಈ ಬಾಳಿಗೆ ಅರ್ಥವೇನು ?. ಆದರೆ ಈ ಒಗಟನ್ನು ಬಿಡಿಸುವವರು ಯಾರು. ಈ ಜಗತ್ತನ್ನು ಸೃಷ್ಟಿಮಾಡಿದ ಕೈ ಒಂದೇ ಆದರೆ , ಸೃಷ್ಟಿಯಲ್ಲಿ ಸಮಾನತೆಯೇಕಿಲ್ಲ ?
ಬೇರೆ ಬೇರೆಯಾದ ಜೀವಗತಿ ಏಕೆ? ಎನ್ನುವ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳುವ ರೀತಿಯಲ್ಲಿ ಶ್ರೀ ಗುಂಡಪ್ಪನವರು, ನಮ್ಮೆಲ್ಲರ ಮುಂದೆ ಈ ಕಗ್ಗದ ರೂಪದಲ್ಲಿ ಇಟ್ಟಿದ್ದಾರೆ.

ಎಲ್ಲ ಜೀವಿಗಳಲ್ಲೂ ಇರುವ ಆ ಚೇತನವು ಜ್ಞಾನ ಸ್ವರೂಪ. ಆದರೆ ಕೆಲವರು ಜ್ಞಾನಿಗಳು ಮತ್ತೆ ಕೆಲವರು ಏಕಿಲ್ಲ ಎಂದರೆ, ಕೆಲವರ ಕನ್ನಡಿ ಒರೆಸಿ ಶುದ್ಧವಾಗಿದೆ.
ಕೆಲವರ ಕನ್ನಡಿಯ ಮೇಲೆ ಧೂಳು ಕೂತಿದೆ. ದೂಳನ್ನು ಒರೆಸಿದರೆ ಅದೂ ಸಹ ಪ್ರಕಾಶಿಸುತ್ತಾ, ಶುದ್ಧ ಬಿಂಬವನ್ನು ಪ್ರತಿಫಲಿಸುತ್ತದೆ.

ಆದರೂ ಏನಿದು ಪ್ರಪಂಚ ಎಂಬ ಪ್ರಶ್ನೆ ಮತ್ತು ಅರ್ಥವೇ ಆಗುವುದಿಲ್ಲವಲ್ಲ ಅಥವಾ ನಮಗೆ ಅರ್ಥವಾಗಿರುವುದು ಪೂರ್ಣವಲ್ಲ ಎಂಬ ಭಾವ ಎಲ್ಲರಿಗೂ ಬರುತ್ತದೆ. ಇದು ಅರ್ಥವಾಗದ ಗಂಟಾದರೆ ಯಾರಾದರೂ ಬಿಡಿಸಬಹುದಲ್ಲ ಎನ್ನುವ ಪ್ರಶ್ನೆಯೂ ಉದ್ಭವವಾಗುತ್ತದೆ.
ಈ ಜಗತ್ತನ್ನು ನಿರ್ಮಿಸದ ಅಥವಾ ಸೃಷ್ಟಿಸಿದ “ಕೈ” ಒಂದೇ ಎಂದಾದರೆ, ವಿಧವಿದವಾದ ಅಸಮತೆಯಿಂದ ಏಕೆ ಕೂಡಿದೆ ಎನ್ನುವ ಸಂದೇಹ, ಪ್ರಶ್ನೆ ವಿಚಾರವಂತರಾದ ಎಲ್ಲರ ಮನಸ್ಸಲ್ಲೂ ಉದ್ಭವವಾಗುತ್ತದೆ ಅಲ್ಲವೇ, ಹಾಗೆಯೆ ಇದೆ ಈ ಕಗ್ಗದ ಭಾವ.

ನಾ ಹಿಂದೆಯೇ ಹೇಳಿದಂತೆ, ಈ ಜಗತ್ತಿನ ಗುಟ್ಟನ್ನು ಚೇಧಿಸಲು ಈ ವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ. ಪ್ರಯತ್ನಪಟ್ಟವರಿಗೆಲ್ಲ ಒಂದೊಂದು ರೂಪದಲ್ಲಿ ಕಾಣುವ ಈ ಜಗತ್ತಿನ ನಿಜ ರೂಪ ಕಂಡುಕೊಳ್ಳುವಲ್ಲಿ ಯಾರೂ ಪೂರ್ಣ ಸಫಲರಲ್ಲ. ಹಾಗೆಯೇ ಈ ಜಗತ್ತಿನ ಎಲ್ಲ ಜೀವರಾಶಿಗಳಲ್ಲೂ ಹೇರಳವಾದ ವೈವಿಧ್ಯತೆ. ಒಬ್ಬ ಮನುಷ್ಯನಿದ್ದಂತೆ ಇನ್ನೊಬ್ಬನಿಲ್ಲ. ಒಬ್ಬನ ಮನಸ್ಸು ಬುಧ್ಧಿಗಳಿದ್ದಂತೆ ಮತ್ತೊಬ್ಬರದ್ದಿಲ್ಲ. ಅವರವರ ಜೀವನ ಅವರವರದ್ದು. ಅವರವರ ಭಾಗ್ಯ ಅವರವರದ್ದು. ಒಬ್ಬರ ನೋವು ಮತ್ತು ಆ ನೋವಿಗೆ ಕಾರಣ ಮತ್ತೊಬ್ಬರ ನೋವು ಮತ್ತು ಅದರ ಕಾರಣದಂತಿಲ್ಲ.

ಒಬ್ಬರ ಸುಖ ಮತ್ತದರ ಕಾರಣ ಇನ್ನೊಬ್ಬರಿಗಿಲ್ಲ. ಒಬ್ಬನ ಸುಖದ ಕಾರಣವು ಮತ್ತೊಬ್ಬರ ದುಃಖಕ್ಕೆ ಕಾರಣವಾಗಬಹುದು.ಇದರ ಗುಟ್ಟನ್ನು ಬಿಡಿಸುವವರಾರು? ಈ ಎಲ್ಲವೂ ಮಾನವನಿಗಷ್ಟೆ ಅಲ್ಲ ಸಕಲ ಪ್ರಾಣಿಗಳಿಗೂ ಅನ್ವಯಿಸಿದ್ದತೆ. ನಮ್ಮ ಮನೆಯ ಬೀದಿಯಲ್ಲಿ ಒಂದು ಮುದಿ ನಾಯಿ ಹೊತ್ತು ಹೊತ್ತಿನ ಊಟಕ್ಕೆ ಹೋರಾಡುವಾಗ, ಹಾಕಿದ್ದ ಯಾವುದನ್ನೂ ತಿನ್ನಲಾಗದೆ ಮುದಿತನ, ಸಾವು, ಬದುಕಗಳ ಮಧ್ಯದಲ್ಲಿನರಳುವಾಗ , ಅಥವಾ ಬಹಳ ದಿನಗಳಿಂದ ಬೆಳೆದು ಹೆಮ್ಮರವಾಗಿ ಎಲ್ಲರಿಗೂ ನೆರಳನ್ನೂ ಪ್ರಾಣಿ ಪಕ್ಷಿಗಳಿಗೆ ಆಹಾರವನ್ನೂ ಆಶ್ರಯವನ್ನೂ ನೀಡಿದ ಒಂದು ಮರವನ್ನು ಯಾವುದೋ ಕಾರಣಕ್ಕೆ ಕಡಿದಾಗಲೂ ಹೇ! ಪರಮಾತ್ಮ ಏನಿದು ಈ ಜೇವಿಯ ಅವಸ್ಥೆ ಎಂದು ನನ್ನ ಮನಸ್ಸು ಕರಗುತ್ತದೆ.ಆದರೆ ಅದರ ಅವಸ್ಥೆಗೆ ಉತ್ತರ ಖಂಡಿತ ನನಗೆ ಸಿಗುವುದಿಲ್ಲ. ಇದು ಎಲ್ಲ ಪ್ರಾಣಿಗಳ ಪರಿಸ್ತಿತಿ.

ಅಷ್ಟೇ ಅಲ್ಲ ಇಂದು ಸುಖ ನಾಳೆ ದುಖ, ಇಂದು ಆರೋಗ್ಯ ನಾಳೆ ಅನಾರೋಗ್ಯ, ಇಂದು ಮಿತ್ರ ನಾಳೆ ಶತ್ರು, ಇಂದು ಸಂತೋಷ ನಾಳೆ ಬೇಸರ ಹೀಗೆ ಇಂದು ನಾಳೆಗಳಲ್ಲಿ ಮತ್ತು ದಿನದಿನಕ್ಕೆ ಬೇರೆಬೇರೆಯೇ ಭಾವಗಳು ಈ ರೀತಿಯ ವೈವಿಧ್ಯಕ್ಕೆ ಕಾರಣರಾರು ಅಥವಾ ಕಾರಣವೇನು? ನಾವೆಷ್ಟು ಕಾರಣ? ಪರರೆಷ್ಟು ಕಾರಣ? ವಿಧಿಯೆಷ್ಟು ಕಾರಣ? ವಿಧಾತನೆಷ್ಟು ಕಾರಣ? ಹೇಗೆ ಹತ್ತು ಹಲವಾರು ಪ್ರಶ್ನೆಗಳ ಭಾವವೇ ಈ ಆರನೆಯ ಕಗ್ಗ. ಈ ಕಗ್ಗದಲ್ಲಿ ಬರುವ ಸೂಕ್ತ ಪ್ರಶ್ನೆಗಳು ನಮ್ಮ ನಿಮ್ಮಲ್ಲಿಯೂ ಸಹ ಎಂದಾದರೂ ಉದ್ಭವಿಸಿರಬಹುದು ಉತ್ತರ ಸಿಕ್ಕಿಲ್ಲ ದಿರಬಹುದು.

Leave a comment

Filed under ಕಗ್ಗದ ಹುಗ್ಗಿ

ಶ್ರೀ ಗುರು ಚರಿತ್ರೆ (ಅಧ್ಯಾಯ -೨)

ಶ್ರೀ ಗುರು ಚರಿತ್ರೆ – ಶಿಷ್ಯದೀಪಕಾಖ್ಯಾನಂ ನಾಮ ದ್ವಿತಿಯೋಧ್ಯಾಯಃ||

||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ|| ||ಶ್ರೀಗುರುಭ್ಯೋನಮಃ||ಶ್ರೀಕುಲದೇವತಾಯೈನಮಃ|| ||ಶ್ರೀದತ್ತಾತ್ರೇಯ, ಶ್ರೀಪಾದ ಶ್ರೀವಲ್ಲಭ, ಶ್ರೀನರಸಿಂಹ ಸರಸ್ವತಿ ಗುರುಭ್ಯೋ ನಮಃ||
||ಶ್ರೀಗುರುಭ್ಯೋನಮಃ||

ಕೃಷ್ಣಾತೀರದಲ್ಲಿ ತ್ರಿಮೂರ್ತಿ ರಾಜನಾದ, ಜನ್ಮ ರಹಿತನಾದ ನಮ್ಮ ಗುರುದೇವನು ಕಾಂತಿಗೋಳದಲ್ಲಿ ರಾರಾಜಿಸುತಿದ್ದಾನೆ. ಅಲ್ಲಿನ ಭಕ್ತರು ಆತನ ಆನಂದ ಲೀಲೆಗಳನ್ನು ಅನುಭವಿಸುತ್ತಿದ್ದಾರೆ. ಭಕ್ತರಲ್ಲದ ಸುರರೂ ಕೂಡಾ ಅಂತಹ ಲೀಲೆಗಳನ್ನು ಸ್ವರ್ಗದಲ್ಲಿ ಅನುಭವಿಸಬೇಕೆಂದು ಕೋರಿಕೊಳ್ಳುತ್ತಿದ್ದಾರೆ.

ಖಿನ್ನನಾಗಿದ್ದ ನಾಮಧಾರಕನು ಗುರುಲೀಲೆಗಳನ್ನು ಧ್ಯಾನಮಾಡಿಕೊಂಡು ಹೋಗುತ್ತಾ, ದಾರಿಯಲ್ಲಿ ಬಳಲಿದವನಾಗಿ, ಒಂದು ವೃಕ್ಷಮೂಲದಲ್ಲಿ ಕುಳಿತು ಮೂರ್ಛೆಗೊಂಡವನಾಗಿ ನಿದ್ರಾವಶನಾದನು. ನಿದ್ರೆಯಲ್ಲೂ ಕೂಡಾ ಅವನು ಗುರುಧ್ಯಾನವನ್ನೇ ಮಾಡುತ್ತಿದ್ದನು. ಹಾಗೆ ಧ್ಯಾನಮಗ್ನನಾದ ಅವನಿಗೆ ದಯಾಪೂರ್ಣನೂ. ಅನಂತನೂ ಆದ ಆ ಶ್ರೀ ಗುರುವು ಸ್ವಪ್ನದಲ್ಲಿ ತನ್ನ ಸ್ವರೂಪವಾದ ಭಸ್ಮೋದ್ಧೂಳಿತ ಶರೀರ, ಜಟಾಧಾರಿ, ವ್ಯಾಘ್ರಚರ್ಮಾಂಬರಧಾರಿಯಾಗಿ ದರ್ಶನವಿತ್ತನು. ನಾಮಧಾರಕನಿಗೆ ಲಲಾಟದಲ್ಲಿ ಭಸ್ಮವನ್ನಿಟ್ಟು, ಅವನನ್ನು ಆದರಿಸಿ, ಅವನ ತಲೆಯಮೇಲೆ ತನ್ನ ಅಭಯಹಸ್ತವನ್ನಿಟ್ಟನು. ಇಂತಹ ಅಪರೂಪ ಸ್ವಪ್ನವನ್ನು ಕಂಡ ನಾಮಾಧಾರಕ ಎಚ್ಚರಗೊಂಡು, ಸುತ್ತಲೂ ನೋಡುತ್ತಾ ಏನನ್ನೂ ಕಾಣದೆ ಆಶ್ಚರ್ಯಗೊಂಡನು.

ಆ ಸ್ವಪ್ನದಲ್ಲಿ ಕಂಡ ಆ ಮೂರ್ತಿಯನ್ನೇ ನೆನಸಿಕೊಳ್ಳುತ್ತಾ ಮುಂದಕ್ಕೆ ಸಾಗುತ್ತಿದ್ದ ನಾಮಧಾರಕನಿಗೆ ಅಂತಹ ಮೂರ್ತಿಯೇ ಪ್ರತ್ಯಕ್ಷವಾಗಿ ಎದುರಿಗೆ ಕಾಣಿಸಿಕೊಂಡನು. ಯೋಗೀಶ್ವರನಾದ ಅವನನ್ನು ಕಂಡ ನಾಮಧಾರಕ ಅವನಿಗೆ ಸಾಷ್ಟಾಂಗ ನಮಸ್ಕಾರಮಾಡಿ ಅತನ ಚರಣಗಳಲ್ಲಿ ಮಸ್ತಕವನ್ನಿಟ್ಟು, ” ಹೇ ಕೃಪಾಸಾಗರ, ಕೃಪೆಮಾಡು. ನೀನೇ ನನ್ನ ತಾಯಿ ತಂದೆ. ಹೇ ಯೋಗಾಧೀಶ ನಿನಗೆ ಜಯವಾಗಲಿ. ಅಜ್ಞಾನವೆನ್ನುವ ಕತ್ತಲನ್ನು ಹೊರದೂಡುವವನು ನೀನೇ! ಆತ್ಮಜ್ಯೋತಿಯು. ಸ್ವಪ್ರಕಾಶನು. ಸಿದ್ಧಯೋಗಿಯು. ಕೃಪಾನಿಧಿ. ನಿನ್ನ ದರ್ಶನಮಾತ್ರದಿಂದಲೇ ನನ್ನ ದುರಿತಗಳೆಲ್ಲವೂ ಮಾಯವಾಗಿ ಹೋದವು. ನೀನೇ ನನ್ನನ್ನು ಉದ್ಧರಿಸಬಲ್ಲವನು. ಹೇ ಸ್ವಾಮಿ, ನನ್ನ ಕಷ್ಟಕಾಲದಲ್ಲಿ ಕೃಪೆಯಿಟ್ಟು ಈ ದೀನನಾದ ಭಕ್ತನನ್ನು ಕಾಣಲು ಬಂದಿದ್ದೀಯೆ. ನಿನ್ನ ಹೆಸರೇನು? ನಿನ್ನ ನಿವಾಸವೆಲ್ಲಿ? ಎಲ್ಲವನ್ನೂ ದಯೆಯಿಟ್ಟು ಹೇಳು.” ಎಂದು ಪ್ರಾರ್ಥಿಸಿದನು.

ಆ ಯೋಗೀಶ್ವರ ನಾಮಧಾರಕನಿಗೆ ” ಅಯ್ಯಾ ನಾನು ಸಿದ್ಧನು. ಯೋಗಿ. ಭೂಲೋಕದಲ್ಲಿ ಆಸಕ್ತಿಯಿಂದ ತೀರ್ಥಾಟನೆಗಳನ್ನು ಮಾಡುತ್ತಿದ್ದೇನೆ. ನಮ್ಮ ಗುರುವು ಪ್ರಸಿದ್ಧರಾದ ಶ್ರೀ ನೃಸಿಂಹ ಸರಸ್ವತಿಯವರು. ಭೀಮಾ ಅಮರಜಾ ನದಿಗಳ ಸಂಗಮಸ್ಥಾನದಲ್ಲಿ ಗಂಧರ್ವನಗರವಿದೆ. ಅದು ತ್ರಿಮೂರ್ತಿಸ್ವರೂಪನಾದ ಶ್ರೀ ನೃಸಿಂಹ ಸರಸ್ವತಿಯವರ ನಿವಾಸ ಸ್ಥಾನವು. ಭಕ್ತರ ರಕ್ಷಣೆಗೆಂದು ತ್ರಿಮೂರ್ತಿಗಳ ಅವತಾರವಾಗಿ ಅಲ್ಲಿ ಆತ ನೆಲಸಿದ್ದಾರೆ. ಲೋಕದಲ್ಲಿನ ಯೋಗಿಗಳೆಲ್ಲರೂ ಭವಸಾಗರವನ್ನು ದಾಟುವಂತೆ ಮಾಡುವ ಆ ಸ್ವಾಮಿಯನ್ನೇ ಸದಾ ಧ್ಯಾನಮಾಡುತ್ತಿರುತ್ತಾರೆ. ಆ ಸದ್ಗುರುವು ಕೃಪಾಸಾಗರನು. ಭಕ್ತರಿಗೆ ಸದಾ ವರದಾತನು. ಅವರಿಗೆ ಸರ್ವ ಸೌಖ್ಯಗಳನ್ನೂ, ಸಂಪದಗಳನ್ನೂ, ಸಂತೋಷವನ್ನೂ ಆತ ಪ್ರಸಾದಿಸುತ್ತಾನೆ. ಆ ಸ್ವಾಮಿಯ ಭಕ್ತರಿಗೆ ದೈನ್ಯವೆಂಬುದಿರುವುದಿಲ್ಲ. ಗೋ ಧನ ಧಾನ್ಯಾದಿಗಳಿಂದ ಕೂಡಿ ಸಂಪದ್ಭರಿತರಾಗಿರುತ್ತಾರೆ. ಅಷ್ಟಸಿದ್ಧಿಗಳಿಂದ ಕೂಡಿ ಅವರು ಸಂತುಷ್ಟರಾಗಿರುತ್ತಾರೆ.” ಎಂದು ತಮ್ಮ ಗುರುವಿಗೆ ಗೌರವವನ್ನು ಸೂಚಿಸುತ್ತಾ ಹೇಳಿದರು.

ಆ ಮಾತುಗಳನ್ನು ಕೇಳಿದ ನಾಮಧಾರಕ, “ಸ್ವಾಮಿ, ನಾನು ಸದಾಕಾಲವೂ ಆ ಗುರುವನ್ನೇ ಧ್ಯಾನಿಸುತ್ತಾ ಇರುತ್ತೇನೆ. ಗುರುವಿನ ಬಿರುದಾವಳಿಗಳನ್ನೂ ಕೀರ್ತಿಯನ್ನೂ ಬಹಳವಾಗಿ ಕೇಳಿದ್ದೇನೆ. ಅವರಲ್ಲಿ ಪರಂಪರೆಯಾಗಿ ಬಂದಿರುವ ಭಕ್ತಿಯಿಂದ ಕೂಡಿರುವ, ಕಷ್ಟಕೋಟಲೆಗಳಲ್ಲಿ ಸಿಕ್ಕಿಕೊಂಡಿರುವ ನನ್ನ ಮೇಲೆ ಏಕೆ ಆ ಗುರುವಿನ ಅನುಗ್ರಹ ಇನ್ನೂ ಆಗಿಲ್ಲ ಎಂಬುದನ್ನು ನಿಶ್ಚಿತವಾಗಿ ಹೇಳಿ.” ಎಂದು ಕೇಳಿಕೊಂಡನು. ಅದಕ್ಕೆ ಸಿದ್ಧರು, “ಹೇ ಬ್ರಾಹ್ಮಣ, ಸಾವಧಾನದಿಂದ ಲಾಲಿಸು. ಸದ್ಗುರುವು ಭಕ್ತವತ್ಸಲನು. ಆ ಸ್ವಾಮಿಯ ಕೃಪೆಯನ್ನು ವಿಸ್ತರಿಸಿ ಹೇಳುತ್ತೇನೆ. ಸ್ವಾಮಿಯ ದಯೆಯಿದ್ದವರಿಗೆ ದೈನ್ಯವೆಂಬುದು ಇರುವುದಿಲ್ಲ. ಅವರ ವಂಶದಲ್ಲಿಯೇ ದೈನ್ಯವು ಕಾಣಬರುವುದಿಲ್ಲ. ಅಂತಹವನಿಗೆ ದೇವತೆಗಳೂ ವಶರಾಗಿರುತ್ತಾರೆ. ಅವನು ಕಲಿಕಾಲವನ್ನು ಜಯಿಸುತ್ತಾನೆ. ಅಂತಹ ಗುರುವನ್ನು ಪೂಜಿಸಿಯೂ ನೀನು ದೈನ್ಯವೆಂದೇಕೆ ಹೇಳುತ್ತಿದ್ದೀಯೆ? ನಿನ್ನ ಮನಸ್ಸು ಸಂಶಯಾತ್ಮಕವಾಗಿದೆ ಎನ್ನಿಸುತ್ತದೆ. ಅದರಿಂದಲೇ ನಿನಗೆ ಈ ಕಷ್ಟಗಳು ಉಂಟಾಗಿವೆ. ಶ್ರೀ ಗುರುವೇ ತ್ರಿಮೂರ್ತಿಯೆಂದು ಶ್ರದ್ಧೆಯಿಟ್ಟವನಿಗೆ ಇಷ್ಟಪ್ರಾಪ್ತಿಯಾಗುವುದು. ಗುರುವಿನಲ್ಲೇ ಮನಸ್ಸನ್ನು ನಿಲ್ಲಿಸಿದ ಭಕ್ತನಿಗೆ ಶ್ರೀಗುರುವು ಸಕಲ ವರಗಳನ್ನೂ ತಪ್ಪದೇ ದಯಪಾಲಿಸುತ್ತಾನೆ. ಮಹಾವಿಷ್ಣು ಮಹೇಶ್ವರರು ಭಕ್ತನಮೇಲೆ ಕೃದ್ಧರಾದರೂ ತನಗೆ ಸನ್ನಿಹಿತನಾದ ಭಕ್ತನನ್ನು ಶ್ರೀ ಗುರುವು ತಪ್ಪದೇ ರಕ್ಷಿಸುತ್ತಾನೆ. ಆದರೆ ಶ್ರೀ ಗುರುವು ಯಾರಲ್ಲಿ ಕೃದ್ಧನಾಗುತ್ತಾನೋ ಅವನನ್ನು ಹರಿ ಹರರೂ ರಕ್ಷಿಸಲಾರರು.” ಎಂದು ಖಂಡಿತವಾಗಿ ನುಡಿದರು.

ಅವರ ಮಾತುಗಳನ್ನು ಕೇಳಿದ ನಾಮಧಾರಕ, ಅವರ ಚರಣಗಳನ್ನು ಹಿಡಿದು, ನಮಸ್ಕರಿಸಿ, ವಿನಯದಿಂದ, “ಸ್ವಾಮಿ, ನಿಮ್ಮ ಈ ಮಾತುಗಳನ್ನು ಕೇಳಿದ ನನಗೆ ಇನ್ನೊಂದು ಸಂದೇಹ ಉಂಟಾಗುತ್ತಿದೆ. ಶ್ರೀ ಗುರುವು ತ್ರಿಮೂರ್ತಿ ಸ್ವರೂಪನು ಹೇಗಾದನು? ಬ್ರಹ್ಮ ವಿಷ್ಣು ಮಹೇಶ್ವರರೇ ಶ್ರೀ ಗುರುವು ಎನ್ನುವುದು ಎಷ್ಟು ಸಮಂಜಸವಾದುದು? ದೇವರು ಕೋಪಿಸಿಕೊಂಡಾಗ ಗುರುವು ರಕ್ಷಿಸುತ್ತಾನೆ. ಆದರೆ ಗುರುವೇ ಕೋಪಿಸಿಕೊಂಡರೆ ರಕ್ಷಿಸುವವರು ಯಾರೂ ಇಲ್ಲವೇ? ಇಂತಹ ಮಾತುಗಳನ್ನು ಯಾರು ಹೇಳಿದರು? ಎಂಬುದನ್ನು ತಿಳಿಸಿ, ಡೋಲಾಯಮಾನವಾಗಿರುವ ನನ್ನ ಮನಸ್ಸನ್ನು ಸ್ಥಿರಗೊಳಿಸಿ.” ಎಂದು ಪ್ರಾರ್ಥಿಸಿದನು.

ಆಗ ಕೃಪಾಮೂರ್ತಿಯಾದ ಆ ಸಿದ್ಧಮುನಿಯು, ನಾಮಧಾರಕನ ಮಾತುಗಳನ್ನು ಪ್ರಶಂಸಿಸಿ, “ಅಯ್ಯಾ, ಬುದ್ಧಿವಂತನೆ, ಒಳ್ಳೆಯ ಪ್ರಶ್ನೆಯನ್ನೇ ಕೇಳಿದೆ. ನಾನು ಹೇಳುವುದನ್ನು ಮನಸ್ಸಿಟ್ಟು ಕೇಳು. ಈ ವಿಷಯದಲ್ಲಿ ವೇದವಾಕ್ಯಗಳೇ ಪ್ರಮಾಣವು. ಆರಂಭದಿಂದ ಹೇಳುತ್ತೇನೆ. ಶ್ರೀ ಮಹಾವಿಷ್ಣುವಿನ ನಾಭಿಯಿಂದ ಚತುರಾನನನಾದ ಬ್ರಹ್ಮನು ಹುಟ್ಟಿದನು. ಆ ಬ್ರಹ್ಮನ ಮುಖದಿಂದ ಚತುರ್ವೇದಗಳು ಹೊರಬಂದವು. ನಂತರ ಪುರಾಣಗಳು ಬಂದವು. ಅಷ್ಟಾದಶ ಪುರಾಣಗಳಲ್ಲಿ ಬ್ರಹ್ಮ ವೈವರ್ತ ಪುರಾಣವೆನ್ನುವುದು ಬಹು ವಿಸ್ತಾರವಾಗಿದೆ. ಇದು ಲೋಕ ಪ್ರಸಿದ್ಧವಾದದ್ದು. ದ್ವಾಪರ ಯುಗಾಂತದಲ್ಲಿ ಮಹಾವಿಷ್ಣುವೇ ವ್ಯಾಸನಾಗಿ ಭೂಲೋಕದಲ್ಲಿನ ಜನರೆಲ್ಲರಿಗೂ ಶುಭವಾಗಲೆಂಬ ಸುಯೋಚನೆಯಿಂದ ಪುರಾಣಗಳೆಲ್ಲವನ್ನೂ ಪ್ರಕಾಶಗೊಳಿಸಿದನು. ಅವು ವ್ಯಾಸನ ಶಿಷ್ಯರ ಮೂಲಕ ಈ ಲೋಕದಲ್ಲಿ ಪ್ರಚಾರಗೊಂಡವು. ಆ ಪುರಾಣಗಳಲ್ಲಿನ ಕಥೆಯೊಂದನ್ನು ನನಗೆ ತಿಳಿದಮಟ್ಟಿಗೆ ನಿನಗೆ ಹೇಳುವೆನು.

ಲೋಕೇಶ್ವರನಾದ ಬ್ರಹ್ಮನನ್ನು ಗುರುಕಥೆಯನ್ನು ವಿಸ್ತಾರವಾಗಿ ಹೇಳಬೇಕೆಂದು ಕಲಿ ಒಂದುಸಲ ಕೇಳಿದನು. ಆಗ ಬ್ರಹ್ಮನು ಅವನಿಗೆ ಗುರು ಮಹಿಮೆಯನ್ನು ಹೇಳಿದನು.” ಎಂದು ಹೇಳಲು, ಮತ್ತೆ ನಾಮಧಾರಕ ಸಿದ್ಧನಿಗೆ ನಮಸ್ಕರಿಸಿ ವಿನಮ್ರನಾಗಿ ಕೇಳಿದನು. “ಮಹಾಯೋಗಿ, ಸಿದ್ಧಪುರುಷ, ನಿನಗೆ ಜಯವಾಗಲಿ. ಅಂಧಕಾರವನ್ನು ಹೊಡೆದೋಡಿಸುವ ಸೂರ್ಯನಂತಹವನು ನೀನು. ಕೃಪಾಸಾಗರ. ಸಂಸಾರ ಸಾಗರವನ್ನು ದಾಟಿಸುವವನು. ಬ್ರಹ್ಮದೇವನು ಕಲಿಗೆ ಗುರುಮಹಿಮೆಯನ್ನು ತಿಳಿಸಬೇಕಾಗಿ ಬಂದ ಸಂದರ್ಭವನ್ನು ವಿಶದವಾಗಿ ತಿಳಿಸು.” ಅದಕ್ಕೆ ಸಿದ್ಧಮುನಿ, “ಬ್ರಹ್ಮ ಶಯನಕಾಲದಲ್ಲಿ ಅವ್ಯಕ್ತವನ್ನು ಸೇರುತ್ತಾನೆ. ಅದು ಅವನಿಗೆ ರಾತ್ರಿ. ಆ ಅವ್ಯಕ್ತ ನಿಮಿತ್ತವಾಗಿ ಉಂಟಾದ ಕಲ್ಪವನ್ನು ನೈಮಿತ್ತಿಕ ಕಲ್ಪ ಎನ್ನುತ್ತಾರೆ. ಆಗ ಕಲ್ಪಸಾಗರದಲ್ಲಿ ವಿಷ್ಣುವು ವಟಪತ್ರ ಶಾಯಿಯಾಗಿ ಇರುತ್ತಾನೆ. ಅವ್ಯಕ್ತ ಮೂರ್ತಿಯಾದ ವಿಷ್ಣುವು ವರಾಹಕಲ್ಪದಲ್ಲಿ, ಕರ್ಮಫಲಭೋಗಕ್ಕಾಗಿ ಬ್ರಹ್ಮನಲ್ಲಿ ಲಯವಾಗಿದ್ದ ಜೀವಿಗಳ ಸೃಷ್ಟಿಯನ್ನು ಮತ್ತೆ ಪ್ರಾರಂಭಿಸುತ್ತಾನೆ. ಆದ್ದರಿಂದ ಸೃಷ್ಟಿಕಾರ್ಯವನ್ನು ಪ್ರಾರಂಭಿಸಲು ತನ್ನ ಯೋಗನಿದ್ರೆಯನ್ನು ಬಿಟ್ಟೇಳುತ್ತಾನೆ. ಹಿಂದಿನ ಸೃಷ್ಟಿಯನ್ನು ತಿಳಿದವನಾದದ್ದರಿಂದ ಮತ್ತೆ ಸೃಷ್ಟಿಕಾರ್ಯಾರಂಭಮಾಡುವ ಮನಸ್ಸಿನಿಂದ ನಾಭಿಕಮಲವನ್ನು ವಿಕಸಿತಗೊಳಿಸಿದನು. ಅದರಿಂದ ಉದ್ಭವಿಸಿದ ಬ್ರಹ್ಮನು ನಾಲ್ಕೂ ದಿಕ್ಕುಗಳನ್ನು ನೋಡುತ್ತಾ ಸಂಕಲ್ಪ ಮಾಡಿದುದರಿಂದ ಚತುರ್ಮುಖನಾದನು. ಆ ಚತುರ್ಮುಖನಾದ ಬ್ರಹ್ಮ ತನ್ನಲ್ಲಿಯೇ ಯೋಚಿಸಿದನು. ” ನನಗಿಂತ ಬಲವಾದವರು ಯಾರಿದ್ದಾರೆ? ಇಲ್ಲಿ ಯಾರೂ ಕಾಣುವುದಿಲ್ಲ. ಆದ್ದರಿಂದ ನಾನೇ ಸರ್ವ ಸಮರ್ಥನು. ನಾನೇ ಬಲವಂತನು.” ತತ್ಕ್ಷಣವೇ ನಾರಾಯಣನು ಗಹಗಹಿಸಿ ನಕ್ಕು ಹೇಳಿದನು. “ನಾನು ಮಹಾವಿಷ್ಣುವು. ನಿನ್ನ ತಂದೆ. ನನ್ನನ್ನು ಭಜಿಸು.” ವಿಷ್ಣುವಿನ ಆ ಮಾತುಗಳನ್ನು ಕೇಳಿದ ಬ್ರಹ್ಮ, ಅವನನ್ನು ಕಂಡು, ನಮಸ್ಕರಿಸಿ ಸ್ತುತಿಸಿದನು. ಅವನ ಸ್ತುತಿಗೆ ಸಂತುಷ್ಟನಾದ ವಿಷ್ಣುವು ಅವನನ್ನು ಕುರಿತು, “ಮಗನೆ, ನನ್ನ ಆಜ್ಞೆಯಂತೆ ಸೃಷ್ಟಿಕಾರ್ಯಾರಂಭ ಮಾಡು.” ಎಂದು ಹೇಳಿದನು. ಅವನ ಮಾತುಗಳನ್ನು ಕೇಳಿದ ಬ್ರಹ್ಮ, “ತಂದೆಯೇ, ಸೃಷ್ಟಿರಚನಾವಿಧಾನಗಳು ನನಗೆ ತಿಳಿಯದು. ನಾನು ಇದುವರೆಗೂ ಸೃಷ್ಟಿರಚನಾ ರೀತಿಯನ್ನು ನೋಡಿಲ್ಲ.” ಎಂದನು. ಅದಕ್ಕೆ ವಿಷ್ಣುವು ಅವನ ಸ್ಪಷ್ಟ ಮಾತುಗಳಿಂದ ಸಂತೋಷಗೊಂಡು, “ವೇದಗಳನ್ನು ಗ್ರಹಿಸಿ, ಅದರಲ್ಲಿ ಹೇಳಿರುವ ರೀತಿಯಲ್ಲಿ ಸೃಷ್ಟಿಮಾಡು. ವೇದಗಳಲ್ಲಿ ಸೃಷ್ಟಿರಚನಾವಿಧಾನಗಳೆಲ್ಲಾ ಇವೆ. ಅದನ್ನು ಸರಿಯಾಗಿ ತಿಳಿದು ಅದರಂತೆ ಸಕಲ ಸೃಷ್ಟಿಯನ್ನೂ ಮಾಡು. ವೇದಗಳು ಅನಾದಿಯಾದವು. ಸೃಷ್ಟಿಗೆ ಮಾರ್ಗದರ್ಶಕವಾದವು. ಕನ್ನಡಿಯಂತೆ ಎಲ್ಲವನ್ನೂ ಸ್ಪಷ್ಟವಾಗಿ ತೋರಿಸಬಲ್ಲವು. ಹಾಗೆ ವೇದೋಕ್ತವಾದ ರೀತಿಯಲ್ಲಿ ಅವಿಶ್ರಾಂತನಾಗಿ, ಸೃಷ್ಟಿಕಾರ್ಯವನ್ನು ನೆರವೇರಿಸು.” ಎಂದನು.

ಅದರಂತೆ ಬ್ರಹ್ಮನು, ಪ್ರಜೆಗಳನ್ನೂ, ಸಕಲ ಚರಾಚರಗಳನ್ನು ಸೃಷ್ಟಿಸಿದನು. ಉದ್ಭಿಜ, ಅಂಡಜ, ಸ್ವೇದಜ, ಜರಾಯುಜಗಳನ್ನೆಲ್ಲಾ ಅಶೇಷವಾಗಿ ಸೃಷ್ಟಿಸಿದನು. ವ್ಯಾಸಮುನಿಯು ವರ್ಣಿಸಿದಂತೆ ಈ ತ್ರಿಲೋಕಗಳೂ ಈಶ್ವರಶಕ್ತಿಯಿಂದ ಕೂಡಿ ಏರ್ಪಾಡಾಗಿವೆ. ನಾರಾಯಣನೇ ವೇದವ್ಯಾಸನಾಗಿ, ಅಷ್ಟಾದಶ ಪುರಾಣಗಳು ಭೂತಲದಲ್ಲಿ ವಿಸ್ತರಿಸುವಂತೆ ಮಾಡಿದನು. ಆ ಪುರಾಣಗಳಲ್ಲಿ ಬ್ರಹ್ಮವೈವರ್ತ ಪುರಾಣವನ್ನು ಸೂತನು ಶೌನಕಾದಿ ಮುನಿಗಳಿಗೆ ಹೇಳಿದನು. ಅದರಲ್ಲಿ ಸದ್ಗುರುವಿನ ಕಥೆ ಅಡಕವಾಗಿದೆ. ಬ್ರಹ್ಮನಿಷ್ಠರಾದ ಸನಕಾದಿಗಳನ್ನೂ, ಸೃಷ್ಟಿವರ್ಧಕರಾದ ಮರೀಚಾದಿಗಳನ್ನು ಚತುರ್ಮುಖನು ಮನಸ್ಸಂಕಲ್ಪದಿಂದ ಸೃಷ್ಟಿಸಿದನು. ಅನಂತರ ದ್ರುಹಿಣನು ಸುರಾಸುರರನ್ನು ಸೃಷ್ಟಿಸಿದನು. ತಮ್ಮ ತಮ್ಮ ವರ್ಣಾಶ್ರಮಧರ್ಮಗಳಲ್ಲಿ ಆಸಕ್ತರಾದ ಬ್ರಾಹ್ಮಣಾದಿಗಳನ್ನು ಬ್ರಹ್ಮ ಸೃಷ್ಟಿಸಿದನು. ಅದ್ದಮೇಲ್ವೆ ಬ್ರಹ್ಮ ಕೃತ, ದ್ವಾಪರ, ತ್ರೇತಾ, ಕಲಿ ಯುಗಗಳನ್ನು ಸೃಷ್ಟಿಮಾಡಿ ಅವರನ್ನು ಒಬ್ಬೊಬ್ಬರಾಗಿ ಕರೆದು ಅವರಿಗೆ ಹೇಳಿದನು. “ನನ್ನ ಆಜ್ಞೆಯಂತೆ ನೀವು ಭೂಲೋಕವನ್ನು ಸೇರಿ ಅಲ್ಲಿ ನಿಮ್ಮ ನಿಮ್ಮ ಗುಣಗಳನ್ನು ಪ್ರಕಟಗೊಳಿಸಿ.” ಅವರಲ್ಲಿ ಸತ್ಯನಿಷ್ಠವಾದ ಕೃತಯುಗವು ಮೊದಲು ಭೂಲೋಕವನ್ನು ಸೇರಲು ಅಣಿಯಾಯಿತು.

ಕೃತಯುಗದ ಲಕ್ಷಣಗಳನ್ನು ಹೇಳುತ್ತೇನೆ ಕೇಳು. ಅದರ ಬಳಿ ಅಸತ್ಯವೆನ್ನುವುದು ಯಾವಾಗಲೂ ಇರುವುದಿಲ್ಲ. ವೈರಾಗ್ಯದಿಂದ ಕೂಡಿರುತ್ತದೆ. ಯಜ್ಞೋಪವೀತವೇ ಆಭರಣವಾಗಿ, ಅಕ್ಷಮಾಲೆ ಕೈಕಂಕಣವಾಗಿರುವ ಕೃತಯುಗ, ತನ್ನ ಪೂರ್ವ ಶರೀರವನ್ನು ಧರಿಸಿ, ಭೂಲೋಕವನ್ನು ಸೇರುವ ಮುಂಚೆ ಬ್ರಹ್ಮನನ್ನು ಕೇಳಿದನು. “ಬ್ರಹ್ಮದೇವ, ನನ್ನನ್ನು ಈಗ ಭೂತಲಕ್ಕೆ ಹೋಗು ಎಂದು ಏಕೆ ಹೇಳುತ್ತಿದ್ದೀಯೆ? ಅಲ್ಲಿನ ಮಾನವರೆಲ್ಲರು ಸದಾಕಾಲ ಅಸತ್ಯವಾದಿಗಳೇ! ನಿಂದಾಪವಾದಗಳಲ್ಲಿಯೇ ಅವರು ಮುಳುಗಿಹೋಗಿರುತ್ತಾರೆ. ಶಠರು. ಅವರನ್ನು ಕಂಡರೆ ನನಗೆ ಭಯವಾಗುತ್ತದೆ.” ಅದಕ್ಕೆ ಬ್ರಹ್ಮನು, “ಕೃತಯುಗ, ನೀನು ಅಲ್ಲಿಗೆ ಹೋಗಿ ೧೭,೨೮,೦೦೦ ವರ್ಷಗಳು ಸಾವಧಾನ ಚಿತ್ತನಾಗಿ ಅಲ್ಲಿರು. ನಿನಗೆ ಯಾವ ಕಷ್ಟಗಳೂ ಬರುವುದಿಲ್ಲ. ಆ ನಂತರ ಇನ್ನೊಂದು ಯುಗವನ್ನು ಅಲ್ಲಿಗೆ ಹೋಗುವಂತೆ ಏರ್ಪಡಿಸುತ್ತೇನೆ.” ಎಂದನು. ಅವನ ಮಾತಿನಂತೆ ಕೃತಯುಗವು ಹೊರಟು ಭೂತಲವನ್ನು ಸೇರಿತು.

ಕೃತಯುಗದ ಕಾಲವು ಮುಗಿದಾಗ, ಬ್ರಹ್ಮನು ವೃಷಧರನಾದ ತ್ರೇತಾಯುಗವನ್ನು ಕರೆದು ಹೇಳಿದನು. “ನೀನು ಭೂತಲಕ್ಕೆ ಹೋಗಿ ನಿನ್ನ ಧರ್ಮವನ್ನಾಚರಿಸುತ್ತ, ೧೨,೯೬,೦೦೦ ವರ್ಷಗಳ ಕಾಲ ಇದ್ದು ಬಾ.” ತ್ರೇತಾಯುಗದ ಲಕ್ಷಣಗಳನ್ನು ಹೇಳುತ್ತೇನೆ ಕೇಳು. ಭೋಗದಿಂದಾಗಿ ಅದರ ಶರೀರವು ಪುಷ್ಟಿಯಾಗಿರುತ್ತದೆ. ಕೈಯಲ್ಲಿ ಯಜ್ಞ ಸಾಮಗ್ರಿಗಳನ್ನು ಧರಿಸಿರುವುದರಿಂದ ಆ ಯುಗದಲ್ಲಿ ದ್ವಿಜರೆಲ್ಲರೂ ಧರ್ಮಶಾಸ್ತ್ರವೇತ್ತರಾಗಿ, ಸದಾಕಾಲ ಯಾಗ ಯಜ್ಞಗಳಲ್ಲಿ ನಿರತರಾಗಿರುತ್ತಾರೆ. ಸದಾ ಕರ್ಮಮಾರ್ಗವನ್ನನುಸರಿಸುವವರು.

ಆ ನಂತರದಲ್ಲಿ ಬ್ರಹ್ಮ ಮಿಶ್ರರೂಪನಾದ ದ್ವಾಪರಯುಗವನ್ನು ಕರೆದನು. ದ್ವಾಪರ ಯುಗದ ಲಕ್ಷಣಗಳನ್ನು ಕೇಳು. ಖಡ್ಗ, ಖಟ್ವಾಂಗ, ಚಾಪ, ಬಾಣ ಶಸ್ತ್ರಗಳನ್ನು ಹಿಡಿದು, ಉಗ್ರ-ಶಾಂತಿ-ದಯೆ-ನಿಷ್ಠುರತೆಗಳಿಂದ ಕೂಡಿ, ಪುಣ್ಯ ಪಾಪಗಳೆರಡನ್ನೂ ಹೊಂದಿರುವುದು. ಬ್ರಹ್ಮ ದ್ವಾಪರಯುಗವನ್ನು ಕುರಿತು, “ನೀನು ಭೂಮಿಯಲ್ಲಿ ಸ್ವಲ್ಪ ಕಾಲವಿದ್ದು ಬಾ.” ಎಂದನು. ದ್ವಾಪರವು ೮,೬೪,೦೦೦ ವರ್ಷಗಳ ಕಾಲ ಭೂಮಿಯಲ್ಲಿತ್ತು.

ಅದಾದನಂತರ ಬ್ರಹ್ಮ ಕಲಿಯುಗವನ್ನು ಕರೆದನು. ಅಯ್ಯಾ ಬ್ರಾಹ್ಮಣ, ಕಲಿಯುಗದ ಲಕ್ಷಣಗಳನ್ನು ಕೇಳು. ಮಲಿನನಾದ ಆ ಕಲಿ, ಕಲಹ ಪ್ರಿಯ. ವಿಚಾರ ಹೀನ. ಅಧೋಮುಖಿ. ಅಶುದ್ಧ. ಖಲಪ್ರಿಯ. ಕ್ರೂರ. ವಿರಾಗರಹಿತ. ಕಲಹದ್ವೇಷಗಳಿಂದ ಕೂಡಿದವನು. ಹೆಜ್ಜೆಹೆಜ್ಜೆಗೂ ಓಲಾಡುತ್ತಾ, ತನ್ನ ಜನನಾಂಗವನ್ನು ಎಡಕೈಯಲ್ಲಿ ಗಟ್ಟಿಯಾಗಿ ಹಿಡಿದು, ಬಲಗೈಯಲ್ಲಿ ನಾಲಗೆಯನ್ನು ಹಿಡಿದು, ನೃತ್ಯಮಾಡುತ್ತಾ, ದೋಷಪೂರಿತವಾದ ಸ್ತುತಿಗಳನ್ನು ಹೇಳುತ್ತಾ, ಪಾಪಿಗಳಲ್ಲಿ ಒಂದಾಗಿ, ಆಗಾಗ ಅಟ್ಟಹಾಸ ಮಾಡುತ್ತಾ, ಅಳುತ್ತಾ, ಮಾತುಮಾತಿಗೂ ಕೋತಿಯಂತೆ ಚೇಷ್ಟೆಗಳನ್ನು ಮಾಡುತ್ತಾ, ಬ್ರಹ್ಮನೆದುರಿಗೆ ಬಂದು ನಿಂತು, “ಏನಾಜ್ಞೆ?” ಎಂದನು.

ಆ ಪಿಶಾಚರೂಪನನ್ನು ಕಂಡ ಬ್ರಹ್ಮ, ನಗುತ್ತಾ, “ಕಲಿ, ನಿನ್ನ ಕೈಗಳಲ್ಲಿ ಜಿಹ್ವಾ ಜನನಾಂಗಗಳನ್ನು ಹಿಡಿದಿದ್ದೀಯೇಕೆ?” ಎಂದು ಕೇಳಲು, ಕಲಿ, “ಈಜಿಹ್ವೆ ಜನನಾಂಗಗಳಿಂದ ನಾನು ಸರ್ವರನ್ನೂ ಜಯಿಸಬಲ್ಲೆ ಎಂಬುದು ನನ್ನ ಪ್ರತಿಜ್ಞೆ ಪ್ರಭು. ಇದೇ ನನ್ನ ಸ್ವಭಾವ. ಜಿಹ್ವಾ ಸುಖ-ಉಪಸ್ಥ ಸುಖಗಳಲ್ಲಿನ ಆಸಕ್ತಿಯಿಂದಲೇ ಎಲ್ಲರನ್ನೂ ಜಯಿಸಬಲ್ಲೆ. ಅದರಿಂದಲೇ ಜಿಹ್ವಾಲಿಂಗಗಳನ್ನು ಹಿಡಿದು ಈರೀತಿ ಓಡಾಡಲು ನನಗೇತರ ಭಯವೂ ಇಲ್ಲ. ಅದೇ ನನ್ನ ಸ್ವಭಾವ.” ಎಂದನು. ಬ್ರಹ್ಮ ಅವನಿಗೆ, “ಸ್ವಲ್ಪ ಕಾಲ ಭುವಿಗೆ ಹೋಗಿ ನಿನ್ನ ಸ್ವಭಾವವನ್ನು ಪ್ರಕಟಗೊಳಿಸಿ ಬಾ.” ಎಂದು ಆಜ್ಞೆ ಮಾಡಿದನು.

ಅದನ್ನು ಕೇಳಿದ ಕಲಿ, “ಬ್ರಹ್ಮದೇವ, ಭೂಮಿಗೆ ಹೋಗಲು ನನಗೇಕೆ ಹೇಳುತ್ತಿದ್ದೀಯೆ? ನಾನು ಎಂಥಹವನೆಂದು ಹೇಳುತ್ತೇನೆ ಕೇಳು. ನಾನು ನಿರ್ಲಜ್ಜನು. ನಿರಂಕುಶನು. ನನ್ನೆದುರಿಗೆ ಸದಾ ನಿದ್ರೆ, ಶೋಕ, ಕಲಹ ಮುಂತಾದುವು ತಾಂಡವವಾಡುತ್ತಿರುತ್ತವೆ. ಪರದ್ರವ್ಯಾಪಹಾರಿ, ಅನ್ಯಭಾರ್ಯಾಪಹಾರಿ, ನನ್ನ ಸೋದರರು. ಡಂಭ ಮಾತ್ಸರ್ಯಗಳನ್ನು ಬೆಳೆಸುವವನು ನನ್ನ ಪ್ರಾಣಸಖ. ಡಾಂಭಿಕರಾಗಿ ಬಕಧ್ಯಾನವನ್ನು ಮಾಡುವ ಯತಿಗಳು ನನ್ನ ಪ್ರಾಣ. ಮೋಸದಿಂದ ಸಹೋದರರಿಗೆ ದ್ರೋಹವೆಸಗಿ ಜೀವಿಸುವವನು ನನ್ನ ಆತ್ಮ. ಮಿಕ್ಕವರು ಯಾರೂ ನನ್ನ ಮಿತ್ರರಲ್ಲ. ಯಾವುದೇ ಪುಣ್ಯ ಕಾರ್ಯಗಳನ್ನೆಸಗುವವರೆಲ್ಲಾ ನನ್ನ ಶತ್ರುಗಳೇ!’ ಎಂದು ತನ್ನ ದುಷ್ಟ ಸ್ವಭಾವಗಳನ್ನೆಲ್ಲಾ ಪ್ರಕಟಗೊಳಿಸಿದನು.

ಅದಕ್ಕುತ್ತರವಾಗಿ ಬ್ರಹ್ಮನು, “ಕಲಿಪುರುಷ, ನೀನು ನನ್ನ ಆದೇಶವನ್ನು ಪಾಲಿಸಬೇಕು. ಕಲಿಯುಗದಲ್ಲಿ ಮನುಷ್ಯರಿಗೆ ಆಯುಸ್ಸು ೧೦೦ ವರ್ಷಗಳು ಮಾತ್ರವೇ. ಇತರ ಯುಗಗಳಲ್ಲಿ ಆಯುಸ್ಸು ದೀರ್ಘವಾಗಿರುವುದರಿಂದ ಮಾನವರು ತಪಾನುಷ್ಠಾನಗಳನ್ನು ಹೆಚ್ಚು ಕಷ್ಟಪಟ್ಟು ದೀರ್ಘಕಾಲ ಮಾಡಿದಲ್ಲದೆ ಅವರಿಗೆ ಬ್ರಹ್ಮಜ್ಞಾನ ಪ್ರಾಪ್ತಿಯಾಗುವುದಿಲ್ಲ. ನಿನ್ನ ಯುಗದಲ್ಲಿ ಮಾನವರು ಅಲ್ಪಾಯುಷಿಗಳಾದದ್ದರಿಂದ ಭಕ್ತಿಯಿಂದ ಮಾಡಿದ ಪರಮೇಶ್ವರನ ಭಜನೆಯಿಂದಲೇ ಕೃತಕೃತ್ಯರಾಗುತ್ತಾರೆ. ಇತರ ಯುಗಗಳಲ್ಲಿ ಕಷ್ಟಪಟ್ಟರೇನೇ ಸಿದ್ಧಿಯಾಗುವಂತಹುದು ನಿನ್ನ ಯುಗದಲ್ಲಿ ಸುಲಭವಾಗಿ ಸಿದ್ಧಿಯಾಗುವುದು. ಬ್ರಹ್ಮಜ್ಞಾನಿಗಳು, ಪುಣ್ಯಾತ್ಮರು, ದೇವಸೇವಾನಿರತರು ಆದವರಿಗೆ ನೀನು ಕಷ್ಟಕಾರಕನಾಗಬೇಡ. ಅವರಿಗೆ ಸಹಾಯಕನಾಗಿರು.” ಎಂದು ಹೇಳಿದನು. ಬ್ರಹ್ಮನ ಮಾತುಗಳನ್ನು ಆಲಿಸಿ, ಅವನಿಗೆ ನಮಸ್ಕರಿಸಿ, ಕಲಿ ಮತ್ತೆಯೂ ಹೇಳಿದನು. “ಸ್ವಾಮಿ ನೀವು ಹೇಳಿದವರೆಲ್ಲರೂ ನನಗೆ ಶತ್ರುಗಳು. ಅಂತಹ ಶತ್ರುಗಳಿರುವ ಭೂಮಿಗೆ ನಾನು ಹೇಗೆ ಹೋಗಬಲ್ಲೆ? ಅವರ ವಿಷಯ ಕೇಳಿದರೇನೇ ನನಗೆ ಭಯದಿಂದ ನಡುಕ ಹುಟ್ಟುತ್ತದೆ. ಭೂಮಿಯಲ್ಲಿ, ಅದರಲ್ಲೂ ಭಾರತದೇಶದಲ್ಲಿ, ಪುಣ್ಯಾತ್ಮರೇ ಬಹಳವಾಗಿದ್ದಾರೆ. ಅವರು ನನ್ನನ್ನು ಕೊಂದುಹಾಕುತ್ತಾರೆ. ನಾನು ಅಂತಹ ಪ್ರದೇಶಕ್ಕೆ ಹೇಗೆ ತಾನೇ ಹೋಗಲಿ?” ಎಂದು ಕಳಕಳಿಯಿಂದ ಹೇಳಿದ.

ಅವನ ಮಾತನ್ನು ಕೇಳಿದ ಬ್ರಹ್ಮ ನಕ್ಕು, “ಕಲಿಪುರುಷ, ನೀನು ಕಾಲ ಸ್ವರೂಪನನ್ನು ಆಶ್ರಯಿಸಿ ಭೂತಲದಲ್ಲಿರು. ಆ ಕಾಲನೇ ತನ್ನ ಸ್ವಭಾವದಿಂದ ಜನರ ಧರ್ಮವಾಸನೆಗಳನ್ನು ಬೇಧಿಸುತ್ತಾನೆ. ಆಗ ಪುಣ್ಯಾತ್ಮರಿಗೂ ಮನಸ್ಸಿನಲ್ಲಿ ಮಹಾಪಾಪಗಳನ್ನು ಮಾಡಬೇಕೆಂಬ ಬುದ್ಧಿಯುಂಟಾಗುತ್ತದೆ.” ಎಂದು ಹೇಳಿದನು.

ಅದಕ್ಕೆ ಮತ್ತೆ ಕಲಿ, “ಬ್ರಹ್ಮನ್, ನನ್ನ ಶತ್ರುಗಳೇ ವಿಶೇಷವಾಗಿರುವ ಭೂಮಂಡಲದಲ್ಲಿ ಎಲ್ಲರೂ ಸ್ವಚ್ಚವಾದ ತೀರ್ಥಗಳಲ್ಲಿ ನಿವಾಸ ಮಾಡುತ್ತಾರೆ. ಶಿವೋಪಾಸಕರು, ವಿಷ್ಣುಧ್ಯಾನ ನಿಷ್ಠರು, ಧಾರ್ಮಿಕರು ನನಗೆ ಉಪದ್ರವ ಕೊಡುತ್ತಾರೆ. ಅವರಲ್ಲಿ ನನಗೆ ದಯೆ ಇರುವುದಿಲ್ಲ. ಗಂಗಾತೀರದಲ್ಲಿ ವಿಹರಿಸುವ ಶತ್ರುಗಳು ನನ್ನ ಕೋಪವನ್ನು ಬಲ್ಲರು. ವಾರಣಾಸಿಯಲ್ಲಿರುವ ಧರ್ಮತತ್ಪರರು, ಪುರಾಣಶ್ರವಣಾಸಕ್ತರು, ಆದ ಕೆಲವರು ತೀರ್ಥಾಟನೆಗಳನ್ನು ಮಾಡುತ್ತಾರೆ. ಕೆಲವರು ಧ್ಯಾನನಿಷ್ಠರಾಗಿ ಧ್ಯಾನದಲ್ಲಿ ನಿಮಗ್ನರಾಗಿರುತ್ತಾರೆ. ಅವರೆಲ್ಲರೂ ನನ್ನ ಶತ್ರುಗಳು. ಹೇ ಪ್ರಜಾಪತಿ, ಮನಸ್ಸಿನಲ್ಲಿ ಶಾಂತರಾಗಿರುವವರೂ ನನ್ನ ಶತ್ರುಗಳೇ! ಡಾಂಭಿಕರಲ್ಲದ ಪುಣ್ಯಶಾಲಿಗಳನ್ನು ಕಂಡರೆ ನನಗೆ ಹೆದರಿಕೆಯಾಗುತ್ತದೆ. ನಾಸಾಗ್ರದಲ್ಲಿ ದೃಷ್ಟಿಯನ್ನಿಟ್ಟು ಜಪಾನುಷ್ಠಾನಗಳಲ್ಲಿ ನಿರತರಾಗಿರುವವರೂ ನನಗೆ ಹಗೆಗಳೇ! ಅವರನ್ನು ನೋಡುತ್ತಿಂದಂತೆಯೆ ನನಗೆ ಪ್ರಾಣಹೋದಂತಾಗುತ್ತದೆ. ಹೆಂಡತಿ, ಮಕ್ಕಳು ಎಂಬ ಮಾಯಾಜಾಲದಲ್ಲಿ ಬಿದ್ದಿರುವವರು ನನಗೆ ಬಃಅಳ ಪ್ರಿಯರಾದವರು. ಅವರು ನನ್ನ ಇಷ್ಟರು. ಹರಿಹರರಲ್ಲಿ ಬೇಧಭಾವದಿಂದ ಶೃತಿ, ಸ್ಮೃತಿ ಪುರಾಣಾದಿಗಳನ್ನು ದೂಷಣೆ ಮಾಡುವವರು ನನಗೆ ಪರಮಾಪ್ತರು. ರಾಗದ್ವೇಷರಹಿತರಾದವರನ್ನು ಕಂಡರೆ ನನಗೆ ಭಯ.” ಎಂದು ಹೇಳಿದ್ದಕ್ಕೆ ಬ್ರಹ್ಮ ಮತ್ತೆ ಹೇಳಿದನು. “ಹೇ ಕಲಿ, ಭೂಮಿಯಲ್ಲಿ ನೀನು ತಪ್ಪದೇ ಪ್ರಕಾಶಿಸುತ್ತೀಯೆ. ಪ್ರಜೆಗಳೆಲ್ಲರೂ ನಿನ್ನ ಇಚ್ಛೆಯಂತೆ ನಡೆದುಕೊಳ್ಳುತ್ತಾರೆ. ಕೆಲವರು ಮಾತ್ರವೇ ಪುಣ್ಯಾತ್ಮರಿರುತ್ತಾರೆ. ಅವರಿಗೆ ನೀನು ಯಾವ ರೀತಿಯ ಸಂಕಟವನ್ನೂ ಉಂಟುಮಾಡದೆ ಭೂಮಿಯಲ್ಲಿ ಸಂಚರಿಸಿಕೊಂಡಿರು.”

ಆ ಮಾತುಗಳನ್ನು ಕೇಳಿದ ಕಲಿ, “ಸ್ವಾಮಿ, ಸ್ವಭಾವಸಿದ್ಧವಾದ ದುಶ್ಚರಿತಗಳು ಹೇಗೆ ಬದಲಾಗುತ್ತವೆ? ಧರ್ಮದೊಡನೆ ನನ್ನ ಸಾಂಗತ್ಯ ಹೇಗೆ ಸಾಧ್ಯವಾಗುವುದು? ಹೇಳಿ.” ಎನ್ನಲು, ಬ್ರಹ್ಮ “ಕಲಿ. ಭೂಮಿಯಲ್ಲಿ ನೀನು ವಾಸಿಸಲು ಅನುಕೂಲವಾಗುವಂತಹ ಉಪಾಯವನ್ನು ಹೇಳುವನು ಕೇಳು. ಮಲಿನವಾದ ಕಾಲದ ಸಹಾಯದಿಂದ ಅಧರ್ಮದ ಜೊತೆಯಲ್ಲಿ ಭೂಮಿಯನ್ನು ಸೇರು. ಆ ನಂತರ ನಿನ್ನ ಮಾರ್ಗ ಸುಗಮವಾಗುವುದು. ನೀನು ನಿರ್ಭಯವಾಗಿ ಓಡಾಡಬಹುದು. ಅಲ್ಲಲ್ಲಿರುವಂತಹ ನಿರ್ಮಲಾಂತಃಕರಣರಾದವರು ನಿನಗೆ ವೈರಿಗಳಾಗೇ ಇರುತ್ತಾರೆ. ಪಾಪದೂಷಿತರಾದವರು ನಿನಗಿಷ್ಟದವರಾಗಿರುತ್ತಾರೆ. ಪಾಪಿಗಳ ನಡುವೆ ಒಬ್ಬನೇ ಧರ್ಮಾತ್ಮನಿದ್ದರೂ ನಿನ್ನನ್ನು ಜಯಿಸಬಲ್ಲನು. ಕ್ರಮಕ್ರಮಮವಾಗಿ ಭೂಮಂಡಲದ ಜನರೆಲ್ಲರೂ ನಿನ್ನ ವಶವರ್ತಿಗಳಾಗುತ್ತಾರೆ.” ಎಂದನು. ಬ್ರಹ್ಮ ಅಷ್ಟು ಹೇಳಿದರೂ ಕಲಿ ಮತ್ತೆ ಕೈಜೋಡಿಸಿ, ನಮಸ್ಕರಿಸಿ ಹೇಳಿದನು. “ಸ್ವಾಮಿ ನೀನು ಇಷ್ಟೆಲ್ಲಾ ಹೇಳಿದರೂ ನನಗೆ ಭೂಲೋಕಕ್ಕೆ ಹೋಗಬೇಕೆಂಬ ಬುದ್ಧಿ ಹುಟ್ಟುತ್ತಿಲ್ಲ.” ಎಂದನು.

“ಹೇ ನಾಮಧಾರಕ, ಕಲಿಗೆ ಉಂಟಾದ ಸಂದೇಹಗಳನ್ನೆಲ್ಲ ಪರಿಹರಿಸುವ ರೀತಿಯಲ್ಲಿ ಬ್ರಹ್ಮ ಹೇಳಿದ ಮಾತುಗಳನ್ನು ಕೇಳು. ಮನಸ್ಸಿನಲ್ಲಿ ಪರಿಶುದ್ಧರಾಗಿ, ಸುಬುದ್ಧಿಗಳಾಗಿ, ಲೋಭವಿಲ್ಲದವರಾಗಿ ಇರುವವರಾರನ್ನೂ ಕಲಿ ದೋಷಗಳು ಸೋಕಲಾರವು. ಅಬೇಧಬುದ್ಧಿಯಿಂದ ಶಿವ ಕೇಶವರನ್ನು ಅರ್ಚಿಸುವವರಿಗೆ, ಭಜಿಸುವವರಿಗೆ, ಗುರುಸೇವೆಯಲ್ಲಿ ನಿರತರಾದವರಿಗೆ, ಕಾಶಿ ಕ್ಷೇತ್ರದಲ್ಲಿ ನಿವಾಸಮಾಡುವವರಿಗೆ ಕಲಿ ದೋಷಪ್ರಭಾವಗಳು ಅಂಟಲಾರವು. ಲೋಕದಲ್ಲಿ ಬ್ರಾಹ್ಮಣರನ್ನು ಆರಾಧಿಸುವವರು, ಮಾತಾಪಿತೃ ಸೇವೆಯಲ್ಲಿ ನಿರತರಾದವರು, ಕಪಿಲಗೋವನ್ನು ಸೇವಿಸುವವರು ಮುಂತಾದವರಿಗೆ ಕಲಿದೋಷ ಸ್ಪರ್ಶವಾಗುವುದಿಲ್ಲ. ಶೈವರನ್ನು, ವೈಷ್ಣವರನ್ನು, ತುಳಸಿ ಪೂಜೆಮಾಡುವವರನ್ನು ನನ್ನ ಆಜ್ಞೆಯಂತೆ ಯಾವಾಗಲೂ ಪೀಡಿಸಬೇಡ. ಗುರುಸೇವಾ ನಿರತರನ್ನು, ವಿವೇಕಯುಕ್ತರಾಗಿ ವರ್ತಿಸುವವರನ್ನು, ಗುರುಭಕ್ತರನ್ನು ನೀನು ಯಾವುದೇ ಕಾರಣಕ್ಕಾಗಿಯೂ ಬಾಧಿಸಲೇಬಾರದು.” ಬ್ರಹ್ಮನ ಆ ಮಾತುಗಳನ್ನು ಕೇಳಿ ಕಲಿ, “ಭಗವನ್, ಗುರುಸ್ವರೂಪವನ್ನು ವಿಸ್ತರಿಸಿ ಹೇಳಿ ನನಗೆ ಅನುಗ್ರಹ ಮಾಡಿ.”ಎಂದನು.

ಕಲಿಯ ಮಾತುಗಳನ್ನು ಆಲಿಸಿದ ಬ್ರಹ್ಮ, ” ಹೇ ಕಲಿಪುರುಷ, ಉತ್ತಮವಾದ ಗುರುಮಾಹಾತ್ಮೆಯನ್ನು ಕುರಿತು ಹೇಳುವೆನು, ಕೇಳು. ಗ ಕಾರವು ಸಿದ್ಧಿ ಪ್ರದಾಯಕ. ರ ಕಾರವು ಪಾಪ ಪರಿಹಾರಕ. ಉ ಕಾರವು ಅವ್ಯಕ್ತ ವಿಷ್ಣು ಸ್ವರೂಪ. ಈ ಮೂರೂ ಸೇರಿದ ಸ್ವರೂಪವೇ ಗುರುವು. ಗ ಕಾರವು ಗಣೇಶನಿಗೆ ಚಿಹ್ನೆ. ರ ಕಾರವು ಅಗ್ನಿಗೆ ಚಿಹ್ನೆ. ಉ ಕಾರವು ವಿಷ್ಣುವಿಗೆ ಚಿಹ್ನೆ. ಹೀಗೆ ಗಣೇಶ ಅಗ್ನಿಯುಕ್ತನಾಗಿ, ವಿಷ್ಣುಸಮನ್ವಿತನಾದ, ವರ್ಣದ್ವಯಾತ್ಮಕವಾದ ಗುರುಮಂತ್ರವು ಚತುರ್ವರ್ಗಕ್ಕೂ ಫಲಪ್ರದವು. ಗುರುವೇ ತಾಯಿ ತಂದೆ ಪರಮೇಶ್ವರ. ಈಶ್ವರ ಕೋಪಿಸಿಕೊಂಡರೆ ಗುರುವು ರಕ್ಷಿಸುತ್ತಾನೆ. ಆದರೆ ಯಾವಾಗಲಾದರೂ ಗುರುವೇ ಶಿಷ್ಯನ ಮೇಲೆ ಕೋಪಿಸಿಕೊಂಡರೆ ಆ ಶಿಷ್ಯನನ್ನು ರಕ್ಷಿಸಲು ಶಂಕರನಿಗೂ ಸಾಮರ್ಥ್ಯವಿಲ್ಲ. ಗುರುವೇ ಬ್ರಹ್ಮ, ವಿಷ್ಣು, ಮಹೇಶ್ವರ. ಅವನೇ ಪರಬ್ರಹ್ಮವೂ ಕೂಡಾ. ಅದರಿಂದ ಸದಾ ಗುರುವನ್ನೇ ಆಶ್ರಯಿಸಬೇಕು. ಶ್ರೀ ಹರಿಯು ಪ್ರಸನ್ನನಾದರೆ ವೈಷ್ಣವರು ಅವ್ಯಯವಾದ ಗುರುಭಕ್ತಿಯನ್ನೇ ಬೇಡುತ್ತಾರೆ. ಗುರುವು ಪ್ರಸನ್ನನಾದರೆ ಜಗದೀಶ್ವರನಾದ ಜನಾರ್ದನನು ಸಂತೋಷಗೊಂಡು ಸರ್ವಾರ್ಥ ಸಿದ್ಧಿಯಾಗಲೆಂದು ವರ ಪ್ರಸಾದಿಸುತ್ತಾನೆ. ಈಶ್ವರನು ಪ್ರಸನ್ನನಾದರೆ ಗುರುವು ಸಂತಸಪಡದೇ ಇರಬಹುದು. ಆದರೆ ಗುರುವು ಪ್ರಸನ್ನನಾದ ಧೀಮಂತನಿಗೆ ಈಶ್ವರನು ಸದಾ ಸನ್ನಿಹಿತನಾಗಿರುತ್ತಾನೆ. ಆದ್ದರಿಂದ ಗುರುವನ್ನು ಶ್ರದ್ಧಾ ಭಕ್ತಿಗಳಿಂದ ಶಾಸ್ತ್ರಗಳಲ್ಲಿ ಹೇಳಿರುವ ರೀತಿಯಲ್ಲಿ ಸೇವಿಸಬೇಕು. ಅಂತಹವನು ಜ್ಯೋತಿಸ್ವರೂಪನಾಗಿ ತೀರ್ಥಯಾತ್ರೆ, ವ್ರತ, ಯೋಗ, ತಪಃಫಲಗಳನ್ನು ಹೊಂದಬಲ್ಲನು. ಗುರುಮಹಿಮೆ ಅನಂತವು. ಗುರುವು ಶಿಷ್ಯನಿಗೆ ವರ್ಣಾಶ್ರಮಧರ್ಮಗಳನ್ನೂ. ಆಚಾರಗಳನ್ನೂ, ಸದ್ವಿವೇಕವನ್ನು ಪಡೆಯುವ ಮಾರ್ಗವನ್ನೂ, ಭಕ್ತಿ-ಮುಕ್ತಿ-ವಿರಕ್ತಿ ಮರ್ಗಗಳನ್ನೂ ತೋರಿಸಿಕೊಡಬಲ್ಲನು.

ಬ್ರಹ್ಮನ ಆ ಮಾತುಗಳನ್ನು ಕೇಳಿದ ಕಲಿ, ಪ್ರಣೀತನಾಗಿ ಬ್ರಹ್ಮನನ್ನು ಪ್ರಶ್ನಿಸಿದನು. “ಸರ್ವದೇವನಾದ ಗುರುಜನ್ಮ ಹೇಗೆ ಪ್ರಾಪ್ತಿಯಾಗುತ್ತದೆ?” ಅದಕ್ಕೆ ಬ್ರಹ್ಮ, “ಸವಿಸ್ತಾರವಾಗಿ ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು. ಗುರುವಿನ ಅನುಗ್ರಹವಿಲ್ಲದೆ ಮಾನವನು ಯಾವುದೇ ವಿಷಯವನ್ನೂ ಗ್ರಹಣಮಾಡಲಾರನು. ಯಾರಿಗೇ ಆಗಲಿ ಗುರುವಿನ ಅನುಗ್ರಹವಿಲ್ಲದೆ ’ಶ್ರವಣ’ ಸಾಧ್ಯವಾಗಲಾರದು. ಸಚ್ಛಾಸ್ತ್ರ ’ಶ್ರವಣ’ವಿಲ್ಲದೆ ಭವ ಭಯವು ಹೇಗೆ ಹೋಗಬಲ್ಲದು? ಸ್ವಬುದ್ಧಿಯಿಂದ ಯತಾರ್ಥತತ್ತ್ವವು ನಿಲುಕಲಾರದು. ’ಶ್ರವಣ’ಸಿದ್ಧಿಸಿದರೆ ಶಾಸ್ತ್ರಗಳು ಸುಲಭವಾಗುತ್ತವೆ. ಶಾಸ್ತ್ರಾರ್ಥಗಳು ಅವಗತವಾದರೆ ಸಂಸಾರ ತಾರಣವು ಸುಲಭವಾಗುತ್ತದೆ. ಗುರುವೇ ಶಾಸ್ತ್ರಾರ್ಥಗಳನ್ನು ತೋರಿಸಿಕೊಟ್ಟು ಜ್ಯೋತಿಸ್ವರೂಪವನ್ನು ಪ್ರಕಾಶಗೊಳಿಸುತ್ತಾನೆ. ಪೂರ್ವದಲ್ಲಿ ಗುರುಸೇವೆಯಿಂದಲೇ ಸರ್ವ ಸಿದ್ಧಿಗಳೂ ಕೈಗೂಡುತ್ತಿದ್ದವು. ಗುರು ಶಿಷ್ಯರ ಕಥೆಯೊಂದನ್ನು ಹೇಳುತ್ತೇನೆ, ಕೇಳು.

ಪೂರ್ವದಲ್ಲಿ ಗೋದಾವರಿ ತೀರದಲ್ಲಿ ಆಂಗೀರಸ ಮುನಿಯ ಆಶ್ರಮವಿತ್ತು.ಅದು, ಅದು ನಾನಾ ವೃಕ್ಷಲತಾದಿಗಳಿಂದಲೂ, ಮೃಗಪಕ್ಷಿಗಳಿಂದಲೂ ಕೂಡಿ ಅರಣ್ಯದಿಂದ ಸುತ್ತುವರೆಯಲ್ಪಟ್ಟು, ಮನೋಹರವಾಗಿತ್ತು. ಅಲ್ಲಿ ಬ್ರಹ್ಮರ್ಷಿಗಳೂ, ಸುವ್ರತರೂ ಆದ ಅನೇಕ ತಾಪಸಿಗಳಿದ್ದರು. ಅವರಲ್ಲಿ ಧರ್ಮವೇತ್ತನಾದ ಪೈಲನ ಪುತ್ರ ವೇದಧರ್ಮನೆಂಬುವವನೊಬ್ಬನಿದ್ದನು. ಅವನ ಶಿಷ್ಯರು ಸ್ಮೃತಿ, ಶೃತಿ ಪುರಾಣಾದಿಗಳನ್ನು ಪಾಠಮಾಡುತ್ತಿದ್ದರು. ಗುರುತತ್ಪರರಾಗಿದ್ದ ಅವರಲ್ಲಿ ದೀಪಕನೆಂಬುವ ಒಬ್ಬ ಶಿಷ್ಯನಿದ್ದನು. ಅವನು ವೇದಧರ್ಮನ ಮುಖ್ಯ ಶಿಷ್ಯನು.

ವೇದಧರ್ಮನು ಒಂದುದಿನ ತನ್ನ ಶಿಷ್ಯರನ್ನು ಪರೀಕ್ಷಿಸಲು ಎಲ್ಲರನ್ನೂ ಕರೆದು, “ನಿಮ್ಮೆಲ್ಲರನ್ನೂ ಪ್ರಶ್ನಿಸುತ್ತಿದ್ದೇನೆ. ನನ್ನಲ್ಲಿ ಪ್ರೀತಿಯಿರುವವವರೆಲ್ಲರೂ ನನ್ನ ಮಾತುಗಳನ್ನು ಸಾವಧಾನ ಚಿತ್ತರಾಗಿ ಆಲಿಸಿ.”

ಆ ಮಾತುಗಳನ್ನು ಕೇಳಿದ ತಕ್ಷಣವೇ ಶಿಷ್ಯರೆಲ್ಲರೂ “ಗುರುವೇ, ನೀವೇ ನಮ್ಮನ್ನು ಉದ್ಧರಿಸುವವರು. ನಿಮ್ಮ ಆಜ್ಞೆ ಏನಿದ್ದರೂ ಅದನ್ನು ಶಿರಸಾವಹಿಸಿ ನಡೆಸುತ್ತೇವೆ. ಅದರಲ್ಲಿ ಸಂದೇಹ ಬೇಡ. ಗುರುವಾಕ್ಯವನ್ನು ಮೀರುವವನು ರೌರವ ನರಕಕ್ಕೆ ಹೋಗುತ್ತಾನೆ. ಗುರುವಾಕ್ಯವನ್ನು ನಡೆಸದವನು ಈ ಮಾಯಾಪ್ರಪಂಚದಲ್ಲಿ ಮುಳುಗಿ ಹೋಗುತ್ತಾನೆ. ಅಂತಹ ಅಧಮನು ದುರ್ಗತಿಯ ಪಾಲಾಗುತ್ತಾನೆ. ಭಕ್ತರಿಗೆ ಗುರುವೇ ತಾರಕನು ಎಂದು ಶೃತಿಯು ಹೇಳುತ್ತದೆ.” ಎಂದು ಎಲ್ಲರೂ ಏಕಗ್ರೀವರಾಗಿ ನುಡಿದರು. ಅವರ ಮಾತನ್ನು ಕೇಳಿದ ವೇದಧರ್ಮನು ಬಹು ಸಂತೋಷಗೊಂಡವನಾಗಿ ದೀಪಕನೇ ಮುಂತಾದ ಶಿಷ್ಯರಿಗೆ ಹೇಳಿದನು.

“ಶಿಷ್ಯರೇ, ನನ್ನ ಮಾತುಗಳನ್ನು ಚಿತ್ತಕೊಟ್ಟು ಆಲಿಸಿ. ನನಗೆ ಪೂರ್ವಾರ್ಜಿತವಾದ ಪಾಪವಿದೆ, ಅದು ಸಾವಿರ ವರ್ಷಗಳಿಂದಲೂ ಕೂಡಿಕೊಂಡು ಬಂದಿದೆ. ನನ್ನ ತಪಾನುಷ್ಠಾನಗಳಿಂದ ಅದನ್ನು ಬಹಳಷ್ಟು ಕಳೆದುಕೊಂಡಿದ್ದೇನೆ. ಆದರೆ ಮಿಕ್ಕಿರುವ ಪ್ರಾರಬ್ಧವನ್ನು ಅನುಭವಿಸಿಯೇ ತೀರಿಸಬೇಕು. ಇಲ್ಲದಿದ್ದರೆ ಅದು ನಾಶವಾಗುವುದಿಲ್ಲ. ತಪಸ್ಸಿನಿಂದ ಅದನ್ನು ನಾಶಗೊಳಿಸಿದರೆ ಅದು ನನ್ನ ಮೋಕ್ಷಹಾದಿಗೆ ಅಡ್ಡವಾಗುತ್ತದೆ. ಆ ಘೋರಪಾಪವನ್ನು ಇನ್ನು ಉಪೇಕ್ಷಿಸಬಾರದು ಎಂದು ನನಗೆ ತೋರುತ್ತಿದೆ. ನಾನು ಕಾಶಿಕ್ಷೇತ್ರಕ್ಕೆ ಹೋಗಿ ಅಲ್ಲಿ ನನ್ನ ಈ ದೇಹದಿಂದ ಅದನ್ನು ಅನುಭವಿಸಿ ತೀರಿಸಿಕೊಳ್ಳಬೇಕೆಂದು ನಿರ್ಧರಿಸಿದ್ದೇನೆ. ಕಾಶಿಕ್ಷೇತ್ರವು ಸರ್ವ ಪಾಪಹಾರಿಯೆಂದು ಪ್ರಸಿದ್ಧವಾಗಿದೆ. ನೀವು ಅಲ್ಲಿಗೆ ನನ್ನನ್ನು ಶೀಘ್ರವಾಗಿ ಕರೆದುಕೊಂಡು ಹೋಗಿ ಅಲ್ಲಿ ನನ್ನ ರಕ್ಷಣೆ ಮಾಡಬೇಕು. ಹಾಗೆ ನನ್ನ ರಕ್ಷಣೆ ಮಾಡುವ ಸಮರ್ಥನು ನಿಮ್ಮಲ್ಲಿ ಯಾರಿದ್ದಾನೆ? ಬಹು ದುಃಖವನ್ನುಂಟುಮಾಡುವ ನನ್ನ ಈ ಮಾತುಗಳನ್ನು ಅಂಗೀಕರಿಸುವವನು ಯಾರು?”

ಅವನ ಮಾತುಗಳನ್ನು ಕೇಳಿದ, ಗುರುಸಮ್ಮತನೂ, ಶಿಷ್ಯೋತ್ತಮನೂ, ಗುರುಸೇವಾನಿರತನೂ ಆದ ದೀಪಕನು, ಗುರುವಿಗೆ ಪ್ರಣಾಮ ಮಾಡಿ, “ಗುರುವೆ, ಸ್ವಯಂಕೃತಪಾಪಾವಶೇಷವನ್ನು ಉಳಿಸಿಕೊಳ್ಳಬಾರದು. ದೇಹ ನಾಶಕ್ಕೆ ಕಾರಣವಾಗುವ ಅಂತಹ ಪಾಪಕ್ಕೆ ತ್ವರೆಯಾಗಿ ಪ್ರತಿಕ್ರಿಯೆಮಾಡಬೇಕು.” ಎಂದು ಹೇಳಿದನು.

ಅದಕ್ಕೆ ವೇದಧರ್ಮನು, “ಶಿಷ್ಯ, ನೀನು ಹೇಳುವುದು ನಿಜ. ಈ ದೇಹವು ಇನ್ನೂ ಧೃಢವಾಗಿರುವಾಗಲೇ ಪಾಪಕ್ಷಯವನ್ನು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅದು ಮುಂದೆ ವಿಷಸಮಾನವಾಗಿ ಬಹಳ ಬಾಧಿಸುತ್ತದೆ. ತೀರ್ಥಸೇವನೆ, ಕೃಚ್ಛಾದಿಗಳಂತಹ ಪ್ರಾಯಶ್ಚಿತ್ತಕರ್ಮಗಳನ್ನು ಮಾಡಿಯೋ, ಇಲ್ಲವೇ ರೋಗಗಳನ್ನನುಭವಿಸಿಯೋ ಪಾಪನಾಶನ ಮಾಡದಿದ್ದರೆ ಇನ್ನಾವ ರೀತಿಯಲ್ಲಿಯೂ ಅದು ನಾಶವಾಗುವುದಿಲ್ಲ. ತಾನು ಮಾಡಿದ ಪಾಪವನ್ನು ತಾನೇ ಅನುಭವಿಸಿ ತೀರಿಸಬೇಕು. ದೇವರಾಗಲೀ, ಋಷಿಯಾಗಲೀ, ಜ್ಞಾನಿಯಾಗಲೀ ಪಾಪಾನುಭವವಾಗದೆ ಪಾಪತ್ಯಾಗವಾಗುವುದಿಲ್ಲ.” ಎಂದು ಹೇಳಿದನು. ಅದಕೆ ದೀಪಕನು, “ನೀವು ಆಜ್ಞೆ ನೀಡಿ. ನನ್ನ ಶಕ್ತಿಯಿದ್ದಷ್ಟು ನಾನು ನಿಮ್ಮ ಸೇವೆ ಮಾಡುತ್ತೇನೆ. ನೀವು ಹೇಳಿದಹಾಗೆ ಪಾಪವನ್ನು ಅನುಭವಿಸಿಯೇ ತೀರಿಸಬೇಕು. ಇಲ್ಲದಿದ್ದರೆ ಪಾಪಕ್ಷಾಳನವಾಗುವುದಿಲ್ಲ ಎಂಬುದು ಸತ್ಯ.” ಎಂದನು. ಅದಕ್ಕೆ ವೇದಧರ್ಮನು, “ನನ್ನ ಪಾಪಫಲವಾಗಿ ನಾನು ಕುಷ್ಠುರೋಗಿಯಾಗಿ, ಕುಂಟಕುರುಡನಾಗಿ ಇಪ್ಪತ್ತೊಂದು ವರ್ಷಗಳು ಕಳೆಯಬೇಕು. ಅಂತಹ ನನ್ನನ್ನು ಆ ಸಮಯದಲ್ಲಿ ಕಾಪಾಡುವ ಶಕ್ತಿಯಿದ್ದರೆ ಹೇಳು.” ಎನ್ನಲು, ದೀಪಕನು “ನಿಮ್ಮ ಪಾಪಗಳನ್ನು ನಾನೇ ಅನುಭವಿಸಿ ತೀರಿಸುತ್ತೇನೆ. ನನಗೆ ಅನುಜ್ಞೆ ಕೊಡಿ.” ಎಂದನು. ಆ ಮಾತನ್ನು ಕೇಳಿ ಸಂತುಷ್ಟನಾದ ವೇದಧರ್ಮನು “ಶಿಷ್ಯ, ನನ್ನ ಪಾಪಗಳು ಹೇಗಿವೆಯೆಂದರೆ ಅದನ್ನು ನಾನೇ ಅನುಭವಿಸಿ ತೀರಿಸಬೇಕು. ಇತರ ಯಾರಿಂದಲೂ ಆ ಪಾಪವು ಕ್ಷಯವಾಗುವುದಿಲ್ಲ. ಆದ್ದರಿಂದ ಆ ಪಾಪವನ್ನು ನನ್ನ ದೇಹದಿಂದಲೇ ಅನುಭವಿಸುತ್ತೇನೆ. ನಿನಗಿಷ್ಟವಿದ್ದರೆ ಆ ಇಪ್ಪತ್ತೊಂದು ವರ್ಷಗಳು ನನ್ನೊಡನೆ ಇದ್ದು ನನ್ನ ರಕ್ಷಣೆ ಮಾಡು. ನಿನಗೆ ಆ ಶಕ್ತಿಯಿದ್ದರೆ ನನ್ನನ್ನು ಕಾಶಿಕ್ಷೇತ್ರಕ್ಕೆ ಸೇರಿಸಿ ಕಾಪಾಡು. ನಿನ್ನ ಉಪಕಾರದಿಂದ ನಾನು ಕಾಶಿಕ್ಷೇತ್ರದಲ್ಲಿ ನಾನು ನನ್ನ ಪಾಪವನ್ನನುಭವಿಸಿ ಅದನ್ನು ಕಳೆದುಕೊಂಡು ಪಾಪರಹಿತನಾಗಿ, ಅವ್ಯಯವಾದ ಶಾಶ್ವತಪದವನ್ನು ಪಡೆಯುತ್ತೇನೆ.” ಎಂದನು. ಅದಕ್ಕೆ “ನೀವು ವಿಶ್ವನಾಥ ಸಮಾನರು. ನಿಮ್ಮನ್ನು ಕಾಶಿಗೆ ಕರೆದುಕೊಂಡುಹೋಗಿ ನಿಮ್ಮ ಸೇವೆಮಾಡುತ್ತೇನೆ.” ಎಂದು ಧೃಢವಾಗಿ ಹೇಳಿದ ದೀಪಕನು ಗುರುವನ್ನು ಕಾಶಿಗೆ ಕರೆದುಕೊಂಡುಹೋಗಿ ಅಲ್ಲಿ ಅವರ ನಿವಾಸಕ್ಕೆ ಏರ್ಪಾಡುಮಾಡಿದನು.

ದೀಪಕನು ಮಾಡಿದ ಏರ್ಪಾಡುಗಳಿಂದ ಸಂತುಷ್ಟನಾದ ವೇದಧರ್ಮನು ಮಣಿಕರ್ಣಿಕೆಗೆ ನಮಸ್ಕರಿಸಿ, ಗಂಗೆಯಲ್ಲಿ ಮಿಂದು, ವಿಶ್ವನಾಥನನ್ನು ಪೂಜಿಸಿ, ತನ್ನ ಪಾಪವನ್ನನುಭವಿಸಲು ಸಿದ್ಧನಾದನು. ಕುಷ್ಠುವ್ಯಾಧಿಪೀಡಿತನಾಗಿ, ನೇತ್ರಹೀನನಾಗಿ, ಬಹುಕಷ್ಟವನ್ನನುಭವಿಸುತ್ತಿದ್ದ ವೇದಧರ್ಮನ ಸೇವೆಯಲ್ಲಿ ದೀಪಕನು ನಿರತನಾದನು. ದೇಹದಲ್ಲೆಲ್ಲಾ ಕುಷ್ಠುರೋಗ ವ್ಯಾಪಿಸಿ ವೇದಧರ್ಮನ ದೇಹವು ದುರ್ಗಂಧಮಯವಾಯಿತು. ಕೀವು ರಕ್ತಗಳು ಸೋರಲಾರಂಭವಾಯಿತು. ಕ್ರಿಮಿಗಳೂ ಕಾಣಿಸಿಕೊಂಡವು. ಇಂತಹ ಸ್ಥಿತಿಗೆ ಸೇರಿದ ಅವನಿಗೆ ಸ್ಮೃತಿಭ್ರಮಣೆಯೂ ಉಂಟಾಯಿತು. ಸೇವಾ ಭಾವನೆಯಿಂದ ದೀಪಕ ಭಿಕ್ಷೆಮಾಡಿ ಗುರುವಿಗೆ ಅನ್ನವೇ ಮುಂತಾದ ಆಹಾರಪದಾರ್ಥಗಳನ್ನು ತಂದಿಡುತ್ತಿದ್ದನು. ಗುರುವನ್ನು ವಿಶ್ವನಾಥನರೂಪದಲ್ಲಿ ಕಾಣುತ್ತಾ ಅವನನ್ನು ಶ್ರದ್ಧಾಭಕ್ತಿಗಳಿಂದ ಸೇವಿಸುತ್ತಿದ್ದನು. ರೋಗಪೀಡಿತರಾದವರು, ಅದಕ್ಕೆ ಮುಂಚೆ ಸಾಧುಸ್ವಭಾವವುಳ್ಳವರಾಗಿದ್ದರೂ, ರೋಗಿಷ್ಠರಾದಮೇಲೆ ಅವರು ನಾಚಿಕೆ, ಮಾನ, ಮರ್ಯಾದೆಗಳನ್ನು ತೊರೆದು ತಮ್ಮ ಸ್ವಭಾವಕ್ಕೆ ವಿರುದ್ಧ ರೀತಿಯಲ್ಲಿ ವರ್ತಿಸುತ್ತಾರೆ. ಕ್ರೂರರಾಗಿ ವರ್ತಿಸುವುದೂ ಉಂಟು. ಅಂತೆಯೇ ವೇದಧರ್ಮನೂ ಸ್ವಭಾವತಃ ಶಾಂತರೂಪನೇ ಆಗಿದ್ದರೂ ರೋಗಗ್ರಸ್ತನಾದಮೇಲೆ ಕ್ರೂರವಾಗಿ ನಡೆದುಕೊಳ್ಳುತ್ತಿದ್ದನು. ದೀಪಕನು ಭಿಕ್ಷೆಮಾಡಿ ತಂದ ಆಹಾರವನ್ನು ಶ್ರದ್ಧಾಭಕ್ತಿಗಳಿಂದ ಅರ್ಪಿಸಿದರೆ, ಅದನ್ನು ತಿನ್ನದೆ ಇಷ್ಟು ಕಡಮೆ ತಂದಿದ್ದೀಯೆ ಎಂದು ಎಸೆದು, ಕೋಪಗೊಳ್ಳುವನು. ಮರುದಿನ ಹೆಚ್ಚಾಗಿ ತಂದರೆ ಸ್ವಲ್ಪ ತಿಂದು ರುಚಿಯಾಗಿಲ್ಲವೆಂದು ಬಿಸುಟು, ರುಚಿಕರವಾದ ಪದಾರ್ಥಗಳನ್ನು ತರುವಂತೆ ಕಾಡುವನು. ವಿಧವಿಧವಾದ ಶಾಕಾಹಾರಗಳನ್ನು ತರುವಂತೆ ಪೀಡಿಸುವನು. ಗುರುವಿನ ಇಷ್ಟದಂತೆ ಅಹಾರವನ್ನು ತಂದರೆ ಅದನ್ನು ಮುಟ್ಟದೆ, ಶಿಷ್ಯನನ್ನು ಹೊಡೆದು, ದುರ್ಭರ ಮಾತುಗಳನ್ನಾಡಿ ಮನ ನೋಯುವಂತೆ ಮಾಡುವನು.

ಒಂದೊಂದುಸಲ ಗುರುವು ಸಂತೋಷದಲ್ಲಿರುವಂತೆ ಕಾಣಿಸಿಕೊಂಡು, “ದೀಪಕ, ನೀನು ನನ್ನ ಶಿಷ್ಯಶಿಖಾಮಣಿ. ಜ್ಞಾನರಾಶಿ. ನನಗೋಸ್ಕರವಾಗಿ ಇಷ್ಟೊಂದು ದುಃಖವನ್ನನುಭವಿಸುತ್ತಿದ್ದೀಯೆ.” ಎಂದು ಪ್ರಶಂಸೆ ಮಾಡಿ, ಮರುಕ್ಷಣವೇ “ನೀನು ನನಗೆ ಬಹಳ ನೋವುಂಟುಮಾಡುತ್ತಿದ್ದೀಯೆ. ದುರ್ವಾಸನೆ ಹೋಗುವಂತೆ ನನ್ನನ್ನು ತೊಳೆಯುತ್ತಿಲ್ಲ. ನೊಣಗಳು ಮುಸುರುತ್ತಿದ್ದರೆ, ಅವನ್ನು ನಿವಾರಿಸುತ್ತಲೂ ಇಲ್ಲ. ನೀನು ಈ ಕ್ಷಣವೇ ಮನೆಬಿಟ್ಟು ಹೊರಟು ಹೋಗು.” ಎಂದು ಕೋಪಗೊಳ್ಳುವನು. ನೊಣಗಳನ್ನು ನಿವಾರಿಸಲು ಮುಂದಾದರೆ ಅನ್ನವನ್ನು ತಂದಿಡಲಿಲ್ಲ ಎಂದು ಗದ್ದರಿಸುವನು. ಈ ರೀತಿಯಲ್ಲಿ, ಪಾಪಸಂಭೂತವಾದ ರೋಗಪೀಡಿತನಾದ ಗುರುವು ತನ್ನ ಸ್ವಭಾವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದನು. ಪಾಪಗತಿ ಹೀಗೆಯೇ ಇರುವುದು. ಅಧಿಕಪಾಪವಿದ್ದಲ್ಲಿ ದೈನ್ಯ, ಕೋಪ, ದುಷ್ಟತನಗಳುತುಂಬಿರುತ್ತವೆ. ಪಾಪದಲ್ಲಿ ನರಳುವವನಿಗೆ ಶುಭಾಶುಭಗಳ ವಿವೇಚನೆಯಿರುವುದಿಲ್ಲ. ಕೆಲವುಸಲ ದುಃಖಿಯಾಗಿ ದೈನ್ಯದಿಂದ ವರ್ತಿಸುವನು. ಮತ್ತೆ ಕೆಲವುಸಲ ಕೋಪದಿಂದ ದುರ್ಭರ ಮಾತುಗಳನ್ನಾಡುವನು. ಹಾಗೆ ಉನ್ಮತ್ತನಂತೆ ನಡೆಯುವನು ಎನ್ನುವುದರಲ್ಲಿ ಸಂಶಯವಿಲ್ಲ.

ಕುಷ್ಠುರೋಗವು ೧೮ ಬಗೆಗಳಲ್ಲಿರುವುದು. ಇವೆಲ್ಲವೂ ಬಾಧಾಕರವೇ ಆದರೂ ಅದರಲ್ಲಿ ’ಗಳತ್ಕುಷ್ಠು’ರೋಗವು ಎಲ್ಲದಕ್ಕಿಂತ ಬಹಳ ಹೆಚ್ಚು ಬಾಧೆಯನ್ನು ಕೊಡುವಂತಹುದು. ಹೆಚ್ಚು ದುಸ್ಸಹನವಾದದ್ದು. ವೇದಧರ್ಮನಿಗೆ ಅಂತಹ ಗಳತ್ಕುಷ್ಠು ರೋಗವು ಬಂದಿತ್ತು. ದೀಪಕನು ಆ ರೋಗದಿಂದುಂಟಾದ ಲೋಪದೋಷಗಳನ್ನು ಲೆಕ್ಕಿಸದೆ ಗುರುವು ತನ್ನನ್ನು ಕೋಪಗೊಂಡು ಬೈದರೂ, ಹೊಡೆದರೂ, ಅಪ್ಪಿತಪ್ಪಿ ಯವಾಗಲಾದರೊಮ್ಮೆ ಒಂದು ಒಳ್ಳೆಯ ಮಾತನ್ನಾಡಿದರೂ, ಎಲ್ಲವನ್ನೂ ಮರೆತು ಗುರುವೇ ಈಶ್ವರನೆಂಬ ಒಂದೇ ದೃಢನಂಬಿಕೆಯಿಂದ ಗುರುವಿನ ಸೇವೆಯಲ್ಲಿ ನಿರತನಾಗಿದ್ದನು. ಅವನಿಗೆ ಶಿವ ಕೇಶವರು ಇಬ್ಬರೂ ಗುರುವಿನಲ್ಲೇ ಇದ್ದಾರೆ ಎಂಬ ನಿಶ್ಚಿತವಾದ ಮನಸ್ಸಿತ್ತು. ಕಾಶಿಕ್ಷೇತ್ರದಲ್ಲಿನ ತೀರ್ಥಗಳನ್ನು ದರ್ಶಿಸಲಿಲ್ಲ. ಗುರುಸೇವೆಯಲ್ಲಿ ತಲ್ಲೀನನಾಗಿ ವಿಶ್ವೇಶ್ವರನ ದರ್ಶನವನ್ನೂ ಮಾಡಲಿಲ್ಲ. ತನ್ನ ದೇಹ ರಕ್ಷಣೆ ಪೋಷಣೆಯ ಕಡೆಗೂ ಗಮನ ಕೊಡದೆ ಗುರುಸೇವೆಯಲ್ಲಿ ಮುಳುಗಿಹೋಗಿದ್ದನು. ಗುರುವೇ ತ್ರಿಮೂರ್ತಿಸ್ವರೂಪನೆಂಬ ಧೃಢಬಾವನೆಯಿಂದ , ಅನ್ಯರಲ್ಲಿ ಬೆರೆಯದೆ, ಗುರುವಿನ ನಿಷ್ಠೂರವಾದ ಮಾತುಗಳನ್ನು ಸಂತೋಷದಿಂದ ಸ್ವೀಕರಿಸುತ್ತಾ, ಗುರುವಿನ ಮನಸ್ಸಿಗೆ ಹಿತವಾಗುವ ಹಾಗೆ ನಡೆದುಕೊಳ್ಳುತ್ತಾ ಗುರುಸೇವೆಯಲ್ಲಿ ತಲ್ಲೀನನಾಗಿ ಹೋಗಿದ್ದನು.

ಅಂತಹ ಗುರುಸೇವೆಯಲ್ಲಿ ಮುಳುಗಿಹೋಗಿದ್ದ ದೀಪಕನಲ್ಲಿ ಪ್ರಸನ್ನನಾದ ವಿಶ್ವೇಶ್ವರನು ಅವನಿಗೆ ಪ್ರತ್ಯಕ್ಷನಾಗಿ, “ಮಗು, ದೀಪಕ, ನಿನ್ನ ಗುರುಸೇವೆಯಿಂದ ನಾನು ಬಹು ಸಂತುಷ್ಟನಾಗಿದ್ದೇನೆ. ನಿನಗೆ ಬೇಕಾದ ವರ ಕೇಳಿಕೋ. ಅದನ್ನು ನಾನು ನಿನಗೆ ಈಗಲೇ ಕೊಡುತ್ತೇನೆ. ನೀನು ಸದ್ಭಕ್ತ. ಮಹಾಜ್ಞಾನಿ. ದೀಪಕನಷ್ಟೇ ಅಲ್ಲ. ಕುಲದೀಪಕನೂ ಅಹುದು. ನಿನ್ನಲ್ಲಿ ಪ್ರಸನ್ನನಾಗಿದ್ದೇನೆ.” ಎಂದನು. ಅದಕ್ಕೆ ದೀಪಕ “ವಿಶ್ವೇಶ್ವರ, ಪರಮೇಶ, ಮೃತ್ಯುಂಜಯ, ಗುರುವಿನ ಅನುಮತಿಯಿಲ್ಲದೆ ನಾನು ಯಾವ ವರವನ್ನೂ ಕೇಳಲಾರೆ.” ಎಂದು ಹೇಳಿ ಗುರುವಿನ ಬಳಿಗೆ ಹೋಗಿ, ವಿನಮ್ರನಾಗಿ ಗುರುವಿನಲ್ಲಿ, “ಗುರುದೇವ, ವಿಶ್ವನಾಥನು ನನ್ನಲ್ಲಿ ಪ್ರಸನ್ನನಾಗಿ ನನಗೆ ವರ ಕೊಡಲು ಬಂದಿದ್ದಾನೆ. ನಿಮ್ಮ ಅನುಜ್ಞೆಯಾದರೆ ನಿಮ್ಮ ರೋಗವು ಸಂಪೂರ್ಣ ಗುಣವಾಗಲೆಂದು ಅವನಲ್ಲಿ ವರ ಬೇಡುತ್ತೇನೆ. ಅದರಿಂದ ನಿಮಗೆ ರೋಗ ಶಾಂತಿಯಾಗುವುದು.” ಎಂದು ಬಿನ್ನವಿಸಿಕೊಂಡನು. ಅದನ್ನು ಕೇಳಿದ ಗುರುವು ಕೋಪಾವಿಷ್ಟನಾಗಿ, “ದೀಪಕ, ನನ್ನ ಸೇವೆಮಾಡಿ ನೀನು ಅಲಸಿಹೋಗಿರುವಂತೆ ಕಾಣುತ್ತದೆ. ನನ್ನ ವ್ಯಾಧಿನಿವಾರಣೆಗಾಗಿ ನೀನು ವಿಶ್ವೇಶ್ವರನಲ್ಲಿ ವರ ಬೇಡಿಕೊಳ್ಳಬೇಕಾದ ಅವಶ್ಯಕತೆಯಿಲ್ಲ. ಅನುಭವಿಸದೆ ಈ ರೋಗ ನಿವಾರಣೆಯಾಗುವುದಿಲ್ಲ ಎಂದು ನಿನಗೆ ನಾನು ಈ ಮುಂಚೆಯೇ ಹೇಳಲಿಲ್ಲವೇ? ವರದಿಂದ ಅದನ್ನು ನಿವಾರಿಸಿಕೊಂಡರೆ ಇನ್ನೊಮ್ಮೆ ಅದನ್ನು ಅನುಭವಿಸಬೇಕಾಗುತ್ತದೆ ಎಂದು ಶಾಸ್ತ್ರಗಳು ಘೋಷಿಸುತ್ತ್ತಿವೆ. ಪಾಪದಿಂದ ಹುಟ್ಟಿದ ಈ ರೋಗವನ್ನು ಈ ಜನ್ಮದಲ್ಲೇ ಅನುಭವಿಸಿ ನಿವಾರಿಸಿಕೊಳ್ಳದಿದ್ದರೆ ಉಳಿದಿರುವ ಪಾಪ ಮೋಕ್ಷಕ್ಕೆ ಅಡ್ಡವಾಗುತ್ತದೆ.” ಎಂದನು. ಅದನ್ನು ಕೇಳಿದ ದೀಪಕನು ಗುರುವಾಕ್ಯವೇ ಆಜ್ಞೆಯೆಂದು ಈಶ್ವರನ ಬಳಿಗೆ ಹಿಂತಿರುಗಿ, “ದೇವ, ನಿನ್ನ ವರ ನನಗೆ ಬೇಕಾಗಿಲ್ಲ. ಗುರುವಿಗೆ ಇಷ್ಟವಾಗದಿರುವುದನ್ನು ನಾನು ನಿನ್ನಿಂದ ಸ್ವೀಕರಿಸಲಾರೆ.” ಎಂದು ವಿನಯವಾಗಿ ಹೇಳಿದನು.

ಅದನ್ನು ಕೇಳಿದ ವಿಶ್ವನಾಥ ಚಕಿತನಾಗಿ, ಅಲ್ಲಿಂದ ನೇರವಾಗಿ ಮೋಕ್ಷಮಂಟಪಕ್ಕೆ ಹೋಗಿ, ಅಲ್ಲಿ ಸೇರಿದ್ದ ವಿಷ್ಣುವೇ ಮೊದಲಾದ ದೇವತೆಗಳಿಗೆ ಈ ವಿಷಯವನ್ನು ತಿಳಿಸಿದನು. ಅದನ್ನು ಕೇಳಿದ ವಿಷ್ಣುವು, “ಈಶ್ವರ, ನೀನು ಹೇಳುತ್ತಿರುವುದು ಬಹಳ ಆಶ್ಚರ್ಯಕರವಾಗಿದೆ. ಆ ಗುರು ಶಿಷ್ಯರು ಯಾರು? ಅವರೆಲ್ಲಿರುತ್ತಾರೆ? ಎಲ್ಲವನ್ನೂ ವಿವರಿಸಿ ಹೇಳು.” ಎಂದನು. ಅದಕ್ಕೆ ವಿಶ್ವನಾಥನು, “ದೀಪಕನೆಂಬ ಈ ಹುಡುಗ ಪರಮ ಗುರುಭಕ್ತ. ಗೋದಾವರಿ ತೀರದಲ್ಲಿ ನೆಲೆಸಿರುವ ವೇದಧರ್ಮನೆಂಬುವವನ ಶಿಷ್ಯ. ದೀಪಕನು ಗುರುಸೇವೆಯಲ್ಲೇ ಮುಳುಗಿಹೋಗಿದ್ದಾನೆ ಎಂದರೆ ಅದರಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ. ಅಂತಹ ಗುರುಭಕ್ತಿಪರಾಯಣನನ್ನು ನಾನು ಇನ್ನೆಲ್ಲಿಯೂ ನೋಡಿಲ್ಲ. ಅವನ ಗುರುಭಕ್ತಿಯನ್ನು ಮೆಚ್ಚಿಕೊಂಡ ನಾನು ವರಕೊಡಬೇಕೆಂದು ಸಂಕಲ್ಪಿಸಿ ಅವನ ಬಳಿಗೆ ಹೋದೆ. ಅವನಿಗೆ ನಾನು ವರವನ್ನು ನೀಡಿದರೂ ಅದು ತನ್ನ ಗುರುವಿಗೆ ಒಪ್ಪಿಗೆಯಾಗಲಿಲ್ಲವೆಂದು ನನ್ನ ವರವನ್ನು ನಿರಾಕರಿಸಿಬಿಟ್ಟ. ನಿನ್ನ ವರಾಪೇಕ್ಷಿಗಳಾಗಿ ಸಾವಿರಾರು ವರ್ಷಗಳಿಂದ ತಪಸ್ಸು ಮಾಡುತ್ತಿರುವ ಅನೇಕ ಋಷಿಗಳನ್ನು ಉಪೇಕ್ಷಿಸಿ ನನಗೇಕೆ ವರಕೊಡಬೇಕೆಂದು ಬಂದಿದ್ದೀಯೆ ಸ್ವಾಮಿ? ನಿನ್ನ ವರದ ಅವಶ್ಯಕತೆ ನನಗಿಲ್ಲ.” ಎಂದು ಹೇಳಿ ನನ್ನಿಂದ ವರ ಪಡೆಯದೆ ಹೊರಟುಹೋದ. ಮನೋವಾಕ್ಕಾಯಗಳನ್ನು ಗುರುವಿಗೆ ಅರ್ಪಿಸಿ, ಗುರುವೇ ತ್ರಿಮೂರ್ತಿ ರೂಪನು ಎನ್ನುವ ದೃಢಬಾವನೆಯಿಂದ, ಗುರುವಿನ ಸೇವೆಯಲ್ಲಿ ನಿಮಗ್ನನಾಗಿಹೋಗಿದ್ದಾನೆ. ಗುರುವೇ ತಾಯಿ ತಂದೆ ಸಕಲವೂ ಎಂಬ ನಿಶ್ಚಯದಿಂದ ಗುರುಸೇವೆಯಲ್ಲಿ ನಿರತನಾಗಿ ಹೋಗಿದ್ದಾನೆ. ತನ್ನ ದೇಹಕ್ಕೆ ಬೇಕಾದ ರಕ್ಷಣೆ ಪೋಷಣೆಗಳ ಅವಶ್ಯಕತೆಯನ್ನೂ ಅವನು ಮರೆತಿದ್ದಾನೆ. ಅವನ ಸುಗುಣಗಳನ್ನು ನಾನು ಎಷ್ಟೆಂದು ವರ್ಣಿಸಲಿ? ಅವಿದ್ಯಾಂಧಕಾರಕ್ಕೆ ಅವನೇ ದೀಪವನ್ನು ಹಿಡಿಯುವವನು. ಧರ್ಮ, ಜ್ಞಾನ, ಯಶಸ್ಸು ಎಲ್ಲವೂ ಗುರುವೇ ಎಂಬ ದೃಢನಿಶ್ಚಯದಿಂದ ಅವನು ಗುರು ಭಜನೆಯನ್ನು ಮಾಡುತ್ತಿದ್ದಾನೆ.” ಎಂದು ಆ ಗುರುಶಿಷ್ಯರ ಸಂಬಂಧವನ್ನು ವಿವರಿಸಿ ಹೇಳಿದನು.

ಅದನ್ನು ಕೇಳಿದ ವಿಷ್ಣುವು ಆ ಗುರುಶಿಷ್ಯರನ್ನು ಕಾಣಬೇಕೆಂದು ಅವರಿದ್ದಲ್ಲಿಗೆ ಬಂದನು. ಅಲ್ಲಿ ತಾನು ಕೇಳಿದ್ದಕ್ಕಿಂತ ಅತಿಶಯವಾದ ಶ್ರದ್ಧಾ ಭಕ್ತಿಗಳಿಂದ ಗುರುಸೇವೆಯನ್ನು ಮಾಡುತ್ತಿದ್ದ ದೀಪಕನನ್ನು ಕಂಡನು. ಅದನ್ನು ಕಂಡು ಮೆಚ್ಚಿಕೊಂಡ ಭಕ್ತವತ್ಸಲನಾದ ವಿಷ್ಣುವು ದೀಪಕನನ್ನು ಹತ್ತಿರಕ್ಕೆ ಕರೆದು, ” ಮಗು, ನಿನ್ನ ಗುರುಭಕ್ತಿಗೆ ಮೆಚ್ಚಿದೆ. ನಿನಗೇನು ಬೇಕೋ ಕೇಳು. ಕೊಡುತ್ತೇನೆ.” ಎಂದನು. ಅದಕ್ಕೆ ದೀಪಕ, ” ಹೇ ಹೃಷೀಕೇಶ, ನಾನು ನಿನ್ನನ್ನು ವರ ಕೋರಲಿಲ್ಲ. ಕೋರದಿದ್ದವರಿಗೆ ನೀನು ವರವನ್ನೇಕೆ ಕೊಡುತ್ತಿದ್ದೀಯೆ? ಸ್ವಾಮಿ, ನಾರಯಣ, ನಾನು ನಿನ್ನ ಸ್ಮರಣೆ ಮಾಡಲಿಲ್ಲ. ನಿನ್ನ ಸೇವೆ ಮಾಡಲಿಲ್ಲ. ತಪಸ್ವಿಗಳನೇಕರು ನಿನಗಾಗಿ ಸಾವಿರಾರು ವರ್ಷಗಳಿಂದ ತಪಸ್ಸು ಮಾಡುತ್ತಿದ್ದಾರೆ. ಅವರನ್ನೆಲ್ಲ ಉಪೇಕ್ಷಿಸಿ ನನಗೇಕೆ ವರ ನೀಡಲು ಬಂದಿದ್ದೀಯೆ ಸ್ವಾಮಿ? ಬೇಡದೆ ನೀನಾಗಿ ಕೊಡುವ ವರವನ್ನು ಸ್ವೀಕರಿಸಲು ನನಗೆ ಯೋಗ್ಯತೆ ಇಲ್ಲ.” ಎಂದನು.

ದೀಪಕನು ದೃಢಮನಸ್ಕನಾಗಿ ಆಡಿದ ಆ ಮಾತುಗಳನ್ನು ಕೇಳಿದ ವಿಷ್ಣುವು ಬಹು ಸಂತೋಷಗೊಂಡು, ಅವನ ಗುರುಭಕ್ತಿಯಿಂದ ಮೋಹಗೊಂಡವನಾಗಿ, “ದೀಪಕ, ನೀನು ಮೋಕ್ಷದಾಯಕವಾದ ಗುರುಭಕ್ತಿ ಏನೆಂಬುದನ್ನು ತೋರಿಸಿದ್ದೀಯೆ. ಅದರಿಂದ ನಾನು ಬಹಳ ಸಂತೋಷಗೊಂಡಿದ್ದೇನೆ. ಗುರು ಭಕ್ತರು ನನ್ನ ಭಕ್ತರು. ಅವರ ಗುರುಭಕ್ತಿ ನನ್ನಲ್ಲೇ ಪರ್ಯವಸನವಾಗುತ್ತದೆ. ಅದರಲ್ಲಿ ಸಂದೇಹವಿಲ್ಲ. ನಾನು ಭಕ್ತರಿಗೆ ಅಧೀನ. ಅದರಿಂದ ಅವರು ಗುರುವಿನಲ್ಲಿ ಕೇಳುವ ವರವನ್ನು ನಾನೇ ಕೊಡುತ್ತೇನೆ. ಮಾತಾಪಿತರ ಸೇವಾನಿರತರು, ಪತಿಸೇವಾಪರಾಯಣೆಯಾದ ಸಾಧ್ವಿ, ವಿದ್ವಾಂಸರು, ವಿಪ್ರರು, ತಪಸ್ವಿಗಳು, ಯತಿಗಳು ಯೋಗಿಗಳು ಮುಂತಾದವರನ್ನು ಸೇವಿಸುವವರೆಲ್ಲರೂ ನನ್ನ ಭಕ್ತರೇ!” ಎಂದು ಹೇಳಿದ ವಿಷ್ಣುವಿನ ಮಾತನ್ನು ಕೇಳಿದ ದೀಪಕ, “ಹೇ ಹೃಷೀಕೇಶ, ನನ್ನ ಮನೋನಿಶ್ಚಯವನ್ನು ಹೇಳಲಿಚ್ಛಿಸುತ್ತೇನೆ. ವೇದ ಶಾಸ್ತ್ರಗಳನ್ನು ಬೋಧಿಸುವವನು ಗುರುವೇ ಅಲ್ಲವೆ? ಜ್ಞಾನ ವಿಜ್ಞಾನ ಸರ್ವವೂ ಗುರುವಿಗೆ ಅವಗತವಲ್ಲವೇ? ತ್ರಿಮೂರ್ತಿ ಸ್ವರೂಪನೇ ಅದದ್ದರಿಂದ ಅವರೂ ಅವನಿಗೆ ಅಧೀನರೇ ಅಲ್ಲವೆ? ಹಾಗಿರುವಾಗ ನನಗೆ ಇತರ ದೇವತೆಗಳಿಂದ ಆಗಬೇಕಾದದ್ದರೂ ಏನಿದೆ? ನನಗೆ ಗುರುವೇ ಎಲ್ಲ ದೇವತೆಗಳೂ! ದೈವ, ತೀರ್ಥಗಳು ಸರ್ವವೂ ಅವರೇ ಎಂಬುದು ಪರಮಸತ್ಯ! ಗುರುವಿನಿಂದಾಗಿಯೇ ಪರಮಾರ್ಥವೆನ್ನುವುದೂ ನನಗೆ ಸನ್ನಿಹಿತವಾಗಿದೆ. ಗುರುವಲ್ಲದೆ ನನಗೆ ಅನ್ಯರಾರೂ ಇಲ್ಲ. ಗುರುವಿನಿಂದಾಗಿಯೇ ಈಶ್ವರನೂ ನನಗೆ ಸನ್ನಿಹಿತನಾದನು. ಹೇ ನಾರಾಯಣ, ನೀನು ಕೊಡಬಲ್ಲ ವರವನ್ನು ನನ್ನ ಗುರುವೇ ಕೊಡಬಲ್ಲನಲ್ಲವೆ? ಹಾಗಿರುವಾಗ ಗುರುವನ್ನು ಬಿಟ್ಟು ಬೇರೆ ಆಶ್ರಯವನ್ನೇಕೆ ಹುಡುಕಬೇಕು?” ಎಂದು ಬಹು ವಿಧೇಯನಾಗಿ ನುಡಿದನು. ದೀಪಕನ ಮಾತುಗಳನ್ನು ಆಲಿಸಿದ ವಿಷ್ಣುವು, ಅತ್ಯಂತ ಸಂತೋಷಗೊಂಡು, “ಮಗು, ದೀಪಕ, ಶಿಷ್ಯೋತ್ತಮ, ನೀನು ಬಹಳ ಧನ್ಯ. ನನಗೆ ಅತ್ಮೀಯನಾದೆ. ನಿನ್ನ ಭಕ್ತಿಗೆ ನಾನು ಬದ್ಧನಾಗಿದ್ದೇನೆ. ಅದರಿಂದಲೇ ನಾನೇ ನಿನ್ನ ಬಳಿಗೆ ಬಂದೆ. ಏನು ವರವನ್ನು ಬೇಕಾದರೂ ಕೇಳು. ನಾನು ಸಂತೋಷದಿಂದ ಕೊಡುತ್ತೇನೆ. ಇದಕ್ಕೆ ಮುಂಚೆ ವಿಶ್ವೇಶ್ವರನೂ ನಿನಗೆ ವರಕೊಡಲು ಬಂದಿದ್ದನಲ್ಲವೇ? ನಮ್ಮಿಬ್ಬರಲ್ಲಿ ಯಾವ ಬೇಧವೂ ಇಲ್ಲ. ನಮ್ಮ ಸಂತೋಷಕ್ಕಾಗಿ ವರ ಕೇಳು. ನಿನಗೆ ನಾನು ವಶನಾಗಿದ್ದೇನೆ.” ಎಂದು ಹೇಳಿದನು. ಅದಕ್ಕೆ ದೀಪಕ, “ಸ್ವಾಮಿ, ಶ್ರೀಹರಿ, ವರವನ್ನು ಕೊಡಲೇಬೇಕೆಂದುಕೊಂಡರೆ, ನನ್ನ ಗುರುಭಕ್ತಿ ಅನನ್ಯವಾಗಿ, ಅಚಂಚಲವಾಗಿ ವೃದ್ಧಿಯಾಗಲಿ ಎಂಬ ವರವನ್ನು ಕೊಡು. ಅದನ್ನು ಬಿಟ್ಟು ಬೇರೆ ನನಗೆ ಎಂತಹ ವರವೂ ಬೇಡ.” ಎಂದು ಹೇಳಿ ಶ್ರೀಹರಿಯ ಪಾದಗಳಿಗೆ ನಮಸ್ಕರಿಸಿದನು.

ಶ್ರೀಹರಿಯು ಅವನನ್ನು ಹಿಡಿದೆತ್ತಿ, “ದೀಪಕ, ನೀನು ನಿನ್ನ ಗುರುಭಕ್ತಿಯಿಂದ ಧನ್ಯನಾದೆ. ಗುರುಭಕ್ತಿಯೇ ಪರಬ್ರಹ್ಮ. ಬೇರೊಂದಿಲ್ಲ. ನಾನು ಹೇಳುವುದನ್ನು ಚಿತ್ತವಿಟ್ಟು ಕೇಳು. ಪರಿಶುದ್ಧವಾದ ಮನಸ್ಸಿನಿಂದ ಗುರುವನ್ನು ಸೇವಿಸು. ಭಕ್ತಿ ತುಂಬಿ ಅವನನ್ನು ಭಜಿಸು. ಅವನ ಸ್ತೋತ್ರ ಮಾಡು. ಅದರಿಂದ ನಾನು ಸಂತೋಷಗೊಳ್ಳುತ್ತೇನೆ. ಆ ಸ್ತುತಿಯು ನನಗೇ ಸೇರುತ್ತದೆ. ಲೋಕದಲ್ಲಿ ಶ್ರದ್ಧಾ ಭಕ್ತಿಗಳಿಂದ ವೇದವೇದಾಂಗ ಶೃತಿ ಸ್ಮೃತಿಗಳಲ್ಲಿ ನಿರತರಾದವರೆಲ್ಲರೂ ಗುರುಸೇವಾ ನಿರತರೇ! ಅವರೆಲ್ಲರೂ ನನ್ನ ಪ್ರೀತಿಪಾತ್ರರೇ! ವೇದ ಸಿದ್ಧಾಂತದಲ್ಲಿ ಪರಬ್ರಹ್ಮನೇ ಸದ್ಗುರುವು. ಆದುದರಿಂದ ಗುರುವನ್ನೇ ಸೇವಿಸು. ಭಜಿಸು. ಹಾಗೆ ಮಾಡಿದರೆ ದೇವತೆಗಳೆಲ್ಲರೂ ನಿನ್ನ ವಶರಾಗುತ್ತಾರೆ. ಗುರು ಎನ್ನುವ ಎರಡು ಅಕ್ಷರಗಳು ಅಮೃತ ಸಾಗರವೇ! ಆ ಸಮುದ್ರದಲ್ಲಿ ಮುಳುಗಿದವನನ್ನು ತಾಪತ್ರಯಗಳು ಮುಟ್ಟಲಾರವು. ಸದ್ಗುರುವಿನಲ್ಲಿ ಚಿತ್ತವನ್ನು ಸದಾ ನಿಲ್ಲಿಸಿಕೊಂಡಿರುವವನು ಪೂಜಾರ್ಹನು. ಗುರುನಾಮಾಮೃತವನ್ನು ಸದಾ ಪಾನಮಾಡುವವನು ಸುರನೇ ಆಗಬಲ್ಲನು. ನಾನು, ಬ್ರಹ್ಮ, ಬ್ರಹ್ಮಜ್ಞಾನ ಸಂಪನ್ನನಾದವನು ಯಾರನ್ನು ಅನುಗ್ರಹಿಸುತ್ತೇವೋ ಅವನಿಗೆ ಸದ್ಗುರುವು ಲಭ್ಯನಾಗುತ್ತಾನೆ. ನಾವು ತ್ರಿಮೂರ್ತಿಗಳು ಕೊಡಬಲ್ಲ ವರವನ್ನು ಸದ್ಗುರುವೇ ಕೊಡಬಲ್ಲನು. ಅದರಿಂದಲೇ ಗುರುವು ತ್ರಿಮೂರ್ತ್ಯಾತ್ಮಕನು.” ಎಂದು ಹೇಳಿ ಅದೃಶ್ಯನಾದನು.

ಕಲಿಪುರುಷ, ಸದ್ಗುರು ಸೇವಾನಿರತನಾದ ಮಹಾತ್ಮನ ಮಾಹಾತ್ಮ್ಯೆ ಎಂತಹುದು ಎಂಬುದನ್ನು ಕೇಳು. ವಿಷ್ಣುವಿನಿಂದ ವರ ಪಡೆದ ದೀಪಿಕ ತನ್ನ ಗುರುವಿನ ಬಳಿಗೆ ಬಂದು ಗುರುವಿಗೆ ನಮಸ್ಕರಿಸಿದನು. ಸರ್ವಜ್ಞನಾದ ಆ ಗುರುವು ಅವನನ್ನು “ಶಿಷ್ಯ, ನಾರಾಯಣನು ನಿನ್ನೊಡನೆ ಏನು ಮಾತನಾಡಿದ? ನೀನು ಅವನಲ್ಲಿ ನನಗೆ ಆತಂಕ ತರುವಂತಹುದನ್ನು ಏನು ಬೇಡಿದೆ? ಅವನು ನಿನಗೆ ಏನನ್ನು ಕೊಟ್ಟ?” ಎಂದು ಕೇಳಲು, ದೀಪಕನು, “ಗುರುವೇ ನಾನು ವಿಷ್ಣುವನ್ನು ನಿಮ್ಮ ಪಾದಗಳಲ್ಲಿ ಅಚಂಚಲವಾದ ಭಕ್ತಿಯಿರುವಂತೆ ವರ ಬೇಡಿದೆ. ವಿಷ್ಣುವು ಇನ್ನೂ ಹೆಚ್ಚು ದೃಢಭಕ್ತಿಯಿಂದ ನಿಮ್ಮ ಪಾದ ಸೇವೆಮಾಡಿಕೊಳ್ಳುವಂತೆ ನನಗೆ ವರ ನೀಡಿದನು.” ಎಂದು ಹೇಳಿದನು. ದೀಪಕನ ಮಾತುಗಳನ್ನು ಕೇಳಿದ ಗುರುವು ಬಹು ಸಂತುಷ್ಟನಾಗಿ, ಪ್ರಸನ್ನನಾಗಿ ಕಾಶಿಕ್ಷೇತ್ರದಲ್ಲಿ ಚಿರಂಜೀವಿಯಾಗಿ ನಿವಾಸಮಾಡು. ಅಷ್ಟಸಿದ್ಧಿಗಳೂ, ನವನಿಧಿಗಳೂ ನಿನ್ನ ವಶವರ್ತಿಗಳಾಗಿರುತ್ತಾರೆ. ಕಾಶಿ ವಿಶ್ವನಾಥನೂ ನಿನಗೆ ಅಧೀನನಾಗಿರುತ್ತಾನೆ. ನಿನ್ನ ಸ್ಮರಣ ಮಾತ್ರದಿಂದಲೇ ಜನಗಳ ಕಷ್ಟಗಳು ದೂರವಾಗುತ್ತವೆ. ಪುತ್ರಪೌತ್ರರಿಂದ ಕೂಡಿ ಸುಖ ಸೌಖ್ಯಗಳಿಂದ ಜೀವನ ಮಾಡುತ್ತಾರೆ.” ಎಂದು ದೀಪಕನನ್ನು ಆಶೀರ್ವದಿಸಿ ವೇದಧರ್ಮನು ಪಾಪರಹಿತನಾಗಿ ನಿರೋಗಿಯಾಗಿ ದಿವ್ಯ ದೇಹದಿಂದ ಪ್ರಕಾಶಿಸಿದನು. ಶಿಷ್ಯನ ಗುರುಭಕ್ತಿಯನ್ನು ಪರೀಕ್ಷಿಸಲೆಂದೇ ಶ್ರೀ ಗುರುವು ಕುಷ್ಟುರೋಗಿಯಾದನೇ ಹೊರತು, ಆ ಮಹಾಜ್ಞಾನಮೂರ್ತಿಯಾದ ಮುನಿ ವೇದಧರ್ಮನಿಗೆ ಪಾಪ ಹೇಗೆ ಆವರಿಸಬಲ್ಲುದು? ಅನೇಕ ಜನ್ಮ ಸಂಚಿತವಾದ ಪಾಪರಾಶಿಯನ್ನು ನಾಶಮಾಡುವಂತಹ ಕಾಶಿಕ್ಷೇತ್ರ ಮಹಿಮೆಯನ್ನು ಪ್ರಕಟಗೊಳಿಸಲು ಆತ ಹಾಗೆ ಮಾಡಿದರೇ ಅಲ್ಲದೆ ಶ್ರೀ ಗುರುವಿಗೆ ಪಾಪವೆಲ್ಲಿಂದ ಬಂತು? ಕಾಶಿಯಲ್ಲಿ ಸದಾ ನಿವಾಸಮಾಡುವವರು ಅಧರ್ಮಿಗಳಾಗಿದ್ದರೂ ಅವರನ್ನು ಪಾಪಫಲಗಳು ಅಂಟಲಾರವು.”

ಬ್ರಹ್ಮನ ಮಾತುಗಳನ್ನು ಕೇಳಿದ ಕಲಿ ಅವನಿಗೆ ನಮಸ್ಕರಿಸಿ ಬ್ರಹ್ಮನ ಆಜ್ಞೆಯನ್ನು ಶಿರಸಾವಹಿಸಿ, ನೀನು ಹೇಳಿದಂತೆ ನನ್ನ ಧರ್ಮವನ್ನು ನೆರವೇರಿಸುತ್ತೇನೆ ಎಂದು ಬ್ರಹ್ಮನಿಗೆ ಆಶ್ವಾಸನೆ ಕೊಟ್ಟು ಹೊರಟು ಹೋದನು. ಎಂದು ಹೇಳಿ ಸಿದ್ಧಮುನಿಯು, “ನಾಮಧಾರಕ, ಗುರುಭಕ್ತಿ ಬಹು ಶೀಘ್ರವಾಗಿ ಸಂಸಾರಸಾಗರವನ್ನು ದಾಟಿಸಿ ಸದ್ಗತಿಯನ್ನು ಕೊಡುವುದು. ದೃಢವಾದ ಗುರುಭಕ್ತಿಯುಳ್ಳವನು ನೆಲೆಸಿರುವ ಎಡೆಯಲ್ಲಿ ಈಶ್ವರನು ನೆಲೆಸಿರುತ್ತಾನೆ. ಗುರುವಿನಲ್ಲಿ, ಹರಿಹರರಲ್ಲಿ ಸ್ಥಿರಭಕ್ತಿಯುಳ್ಳವನಿಗೆ, ಮನೋವಾಕ್ಕಾಯಗಳಿಂದ ಗುರುಸೇವೆಯಲ್ಲಿ ನಿರತನಾದವನಿಗೆ, ದೀಪಕನಿಗೆ ಲಭಿಸಿದಂತೆ ಈಶ್ವರಾನುಗ್ರಹ ಮೊದಲಾದವು ಸಿದ್ಧಿಸುವುವು. ಸದ್ಗುರುವು ಅಂತಹ ಸನ್ನಿಹಿತ ಭಕ್ತರ ಬುದ್ಧಿಯನ್ನು ವಿಕಾಸಗೊಳಿಸಿ ಅವರನ್ನು ಸದಾ ಋಜುಮಾರ್ಗದಲ್ಲಿ ನಡೆಸುತ್ತಾನೆ.” ಎಂದು ಹೇಳಿದನು.

||ಇತಿ ಶ್ರೀಗುರುಚರಿತ್ರ ಪರಮಕಥಾಕಲ್ಪತರೌ ಶ್ರೀ ನೃಸಿಂಹಸರಸ್ವತ್ಯುಪಾಖ್ಯಾನೇ ಜ್ಞಾನಕಾಂಡೇ ಶಿಷ್ಯದೀಪಕಾಖ್ಯಾನಂ ನಾಮ ದ್ವಿತಿಯೋಧ್ಯಾಯಃ ಸಂಪೂರ್ಣಂ||

Leave a comment

Filed under ಶ್ರೀ ಗುರು ಚರಿತ್ರೆ

ಶ್ರೀ ಗುರು ಚರಿತ್ರೆ-ಅಧ್ಯಾಯ ೧

||ಶ್ರೀ ಗುರು ಚರಿತ್ರೆ – ಇಷ್ಟವಂದನ ನಾಮಧಾರಕ ಸಂದರ್ಶನೇ ನಾಮ ಪ್ರಥಮೋಧ್ಯಾಯಃ||

||ಜ್ಞಾನ ಕಾಂಡ||

||ಶ್ರೀ ಗಣೇಶಾಯ ನಮಃ||ಶ್ರೀ ಸರಸ್ವತ್ಯೈ ನಮಃ||
||ಶ್ರೀಗುರುಭ್ಯೋನಮಃ||ಶ್ರೀಕುಲದೇವತಾಯೈನಮಃ||
||ಶ್ರೀದತ್ತಾತ್ರೇಯ, ಶ್ರೀಪಾದ ಶ್ರೀವಲ್ಲಭ, ಶ್ರೀನರಸಿಂಹ ಸರಸ್ವತಿ ಗುರುಭ್ಯೋ ನಮಃ||

ವಿಘ್ಹಹರ್ತಾ ಗಣಾಧಿಪತಿ, ಪಾರ್ವತೀಪುತ್ರ ಲಂಬೋದರಾ, ನಿನಗೆ ನಮಸ್ಕಾರ. ಓ ಏಕದಂತಾ! ನಿನಗೆ ಜಯವು ಜಯವು. ನಿನ್ನ ಮೊರದಂತಹ ಕಿವಿಗಳನ್ನ್ನು ಕದಲಿಸಿದಾಗ ಬರುವ ಗಾಳಿಗೆ ವಿಘ್ನಗಳೆಲ್ಲವೂ ಓಡಿಹೋಗುತ್ತವೆ. ನಿನ್ನ ಮುಖವು ಸ್ಫುಟವಿಟ್ಟ ಬಂಗಾರದಂತೆ ಹೊಳೆಯುತ್ತಿದೆ. ಉದಯಸೂರ್ಯನಂತೆ ಕಾಂತಿ ತೋರುತ್ತಿದೆ ನಿನ್ನ ತೇಜಸ್ಸು. ವಿಘ್ನಗಳೆಂಬ ಅರಣ್ಯಗಳನ್ನು ನಾಶಮಾಡಲು ನಿನ್ನ ಕೈಯಲ್ಲಿ ಪರಶುವನ್ನು ಧರಿಸಿದ್ದೀಯೆ. ನಿನ್ನ ನಡುವಿನಲ್ಲಿ ನಾಗಬಂಧವಿದೆ. ಸರ್ಪಗಳನ್ನೇ ಉಪವೀತವಾಗಿ ಹಾಕಿಕೊಂಡಿದ್ದೀಯೆ. ನಾಲ್ಕು ಭುಜಗಳ ವಿನಾಯಕಾ, ನಿನ್ನ ಕಣ್ಣುಗಳು ವಿಶಾಲವಾಗಿ ಕಾಣುತ್ತಿವೆ. ನೀನು ವಿಘ್ನ ಸಮೂಹಗಳನ್ನು ತೊಲಗಿಸಿ ವಿಶ್ವವನ್ನೆಲ್ಲಾ ರಕ್ಷಿಸುತ್ತೀಯೆ. ನಿನ್ನ ಧ್ಯಾನ ಮಾಡುವವರನ್ನು ವಿಘ್ನಗಳು ಬಾಧಿಸಲಾರವು. ಇಷ್ಟಾರ್ಥಗಳೆಲ್ಲವೂ ತ್ವರಿತವಾಗಿ ಈಡೇರುತ್ತವೆ. ಶುಭಕಾರ್ಯಗಳಲ್ಲಿ ಎಲ್ಲರಿಗಿಂತಲೂ ಮೊದಲು ನಿನ್ನನ್ನೇ ಪೂಜಿಸುತ್ತಾರೆ. ಓ ಲಂಬೋದರಾ, ನೀನೇ ಹದಿನಾಲ್ಕು ವಿದ್ಯೆಗಳನ್ನು ನೀಡುವವನು. ಅದರಿಂದಲೇ ಬ್ರಹ್ಮಾದಿ ದೇವತೆಗಳೆಲ್ಲರೂ ನಿನ್ನನ್ನೇ ಪೂಜಿಸಿದರು. ಶಂಕರನೂ ಕೂಡಾ ತ್ರಿಪುರಾಸುರನನ್ನು ಸಂಹರಿಸುವುದಕ್ಕೆ ಮುಂಚೆ ನಿನ್ನನ್ನೇ ಪೂಜೆಮಾಡಿದನು. ವಿಷ್ಣುವು ಕೂಡಾ ನಿನ್ನನ್ನು ಸ್ತೋತ್ರಮಾಡಿದ್ದರಿಂದಲೇ ದೈತ್ಯರನ್ನು ತ್ವರೆಯಾಗಿ ಸಂಹರಿಸಲು ಶಕ್ತನಾದನು. ಓ ಗಣಪತಿ, ವಿಷ್ಣುವೇ ಮೊದಲಾದ ದೇವತೆಗಳೆಲ್ಲರೂ ನಿನ್ನನ್ನು ಮೊದಲು ನಮಸ್ಕರಿಸಿ ಕೆಲಸಗಳನ್ನು ಪ್ರಾರಂಭಿಸಿದ್ದರಿಂದಲೇ ಅವರವರ ಇಷ್ಟಾರ್ಥಸಿದ್ಧಿಗಳನ್ನು ಪಡೆದರು. ಓ ಗಣನಾಥಾ, ದಯಾಸಾಗರಾ, ರಾಕ್ಷಸಾಂತಕಾ, ವಿಘ್ನಹರ್ತಾ, ನನ್ನ ಭಯವನ್ನೆಲ್ಲಾ ನೀಗಿ, ನನ್ನ ಮನಸ್ಸನ್ನು ಸ್ವಚ್ಛಗೊಳಿಸು. ಓ ಗಣನಾಯಕಾ, ವಿಘ್ನಹಂತಾ, ನಿನ್ನನ್ನು ನಮಸ್ಕರಿಸಿದರೆ ಸಾಕು. ಲೋಕದಲ್ಲಿ ಕಾರ್ಯಸಿದ್ಧಿಯಾಗುತ್ತದೆ. ನೀನೇ ಸರ್ವಕಾರ್ಯಗಳಿಗೂ ಆಧಾರ. ದಯಾಸಮುದ್ರ. ಗೌರಿಪುತ್ರ. ನನ್ನ ಬುದ್ಧಿಯನ್ನು ಸ್ವಚ್ಛಗೊಳಿಸು. . ಓ ಗಜಾನನ, ನನ್ನ ಮನೋವಾಸನೆಗಳನ್ನೇಲ್ಲಾ ಪೂರಯಿಸು. ನನಗೆ ವಿದ್ಯಾದಾನ ಮಾಡು. ಗುರುಚರಿತ್ರೆಯನ್ನು ಬರೆಯಬೇಕೆಂಬ ನನ್ನ ಹಂಬಲವನ್ನು ನಿನ್ನ ಕರುಣಾದೃಷ್ಟಿ ಹಾಯಿಸಿ ಪೂರ್ಣಗೊಳಿಸು. ಸರ್ವವಿದ್ಯಾನಿಧಿಯಾದ ನೀನೇ ನಿನ್ನ ಶರಣು ಬಂದವರಿಗೆ ವರದಾತ. ನಿನಗೆ ಅನಂತ ನಮಸ್ಕಾರಗಳು.

ವಾಗ್ದೇವಿ ಸರಸ್ವತಿಗೆ ನಮಸ್ಕರಿಸುತ್ತಿದ್ದೇನೆ. ತಾಯಿ, ಶಾರದಾಂಬೆ, ನಿನ್ನ ಎರಡು ಕೈಗಳಲ್ಲ್ಲಿ ವೀಣೆ ಪುಸ್ತಕಗಳನ್ನು ಹಿಡಿದ್ದಿದ್ದೀಯೆ. ಹಂಸ ನಿನ್ನ ವಾಹನ. ವೇದ ಶಾಸ್ತ್ರ ವಿದ್ಯೆಗಳನ್ನು ಕಲಿಯಬೇಕೆಂದಿರುವವರಿಗೆ ಸಂತೋಷದಿಂದ ನೀನು ಅಧಿಕಾರವನ್ನು ನೀಡುತ್ತೀಯೆ. ನಿನ್ನನ್ನು ನಮಸ್ಕರಿಸಿದವರಿಗೆ ಸದಾಕಾಲದಲ್ಲೂ ಜ್ಞಾನ ಲಭ್ಯವಾಗುತ್ತದೆ. ನಿನ್ನ ಪಾದಗಳನ್ನು ಹಿಡಿದು ಬೇಡಿಕೊಳ್ಳುತ್ತಿದ್ದೇನೆ. ನನ್ನ ನಾಲಗೆಯ ತುದಿಯಲ್ಲಿನಿಂತು ಈ ಗ್ರಂಥ ಸಿದ್ಧಿಗೊಳ್ಳುವಂತೆ ಮಾಡು. ಹೇ ಮಾತೆ! ನನ್ನ ಪ್ರಾರ್ಥನೆಯನ್ನು ಮನ್ನಿಸಿ ನನಗೆ ಸುಮತಿಯನ್ನು ಕೊಡು. ಸನ್ಮತಿಯನ್ನು ಕೊಟ್ಟು ಈ ಗುರು ಚರಿತ್ರೆ ಪ್ರಸಿದ್ಧಿಗೆ ಬರುವಂತೆ ಮಾಡು. ಹೇ ವಾಗ್ದೇವಿ, ಜಗನ್ಮಾತೆ ನಿನಗೆ ಜಯವಾಗಲಿ. ನಿನಗೆ ನಮಸ್ಕರಿಸುತ್ತಿದ್ದೇನೆ. ಸಕಲ ವೇದಶಾಸ್ತ್ರಗಳೂ ನಿನ್ನನ್ನೇ ಹೊಗಳುತ್ತಿವೆ. ಷಡ್ದರ್ಶನಗಳು ನಿನ್ನಿಂದಲೇ ಬಂದವಲ್ಲವೇ! ನನ್ನ ಗುರುದೇವರು ಶ್ರೀ ನರಸಿಂಹ ಸರಸ್ವತಿಗಳು ನೀನೇ ಎಂದು ಲೋಕ ಪ್ರಸಿದ್ಧಿ. ಅವರಿಗೆ ಅಂಕಿತನಾದ ನನ್ನಲ್ಲಿ ನಿನ್ನ ಪ್ರೀತಿಯನ್ನು ತೋರಿಸು. ಸೂತ್ರಧಾರನು ನಡೆಸಿದಂತೆ ಗೊಂಬೆಗಳು ನಾಟ್ಯಮಾಡುತ್ತವೆ. ಆ ಗೊಂಬೆಗಳು ನಿಜವಲ್ಲ. ಜಡ. ಅವಕ್ಕೆ ಸ್ವಾತಂತ್ರ್ಯವೆಲ್ಲಿ? ಹಾಗೆಯೇ ನಿನ್ನ ಇಷ್ಟವನ್ನನುಸರಿಸಿ ನನ್ನ ಮಾತುಗಳನ್ನು ಹೊರಡಿಸು. ಹೇ ತಾಯಿ ದಯಾನಿಧಿ, ವಾಗ್ದೇವಿ, ಜ್ಞಾನಹೀನನಾದ ನಾನು ಪ್ರಾರ್ಥಿಸುತ್ತಿದ್ದೇನೆ. ನನ್ನ ಭಯವನ್ನು ಹೋಗಲಾಡಿಸು. ತಾಯಿ, ಭಾರತಿ, ನಿನ್ನ ಪಾದಗಳನ್ನು ಆಶ್ರಯಿಸಿದ್ದೇನೆ. ನನ್ನಲ್ಲಿ ಪ್ರಸನ್ನಳಾಗಿ ಈ ಗುರುಚರಿತ್ರೆ ವಿಕಾಸಗೊಳ್ಳುವಂತೆ ಅನುಗ್ರಹಮಾಡು. ತ್ರಿಗುಣಸ್ವರೂಪಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಪ್ರಣಾಮಗಳು. ವಿದ್ಯಾಪ್ರವರ್ತಕರಾದ ಅವರನ್ನು ಒಬ್ಬೊಬ್ಬರಾಗಿ ಬೇಡಿಕೊಳ್ಳುತ್ತಿದ್ದೇನೆ. ಚತುರ್ಮುಖನಾದ ಆ ಬ್ರಹ್ಮ ಜಗತ್ಸೃಷ್ಟಿಕರ್ತ. ಆ ಪರಮೇಷ್ಠಿಯ ನಾಲಕ್ಕು ಮುಖಗಳಿಂದ ನಾಲಕ್ಕು ವೇದಗಳು ಹೊರಬಂದವು. ಆ ವಿರಂಚಿಯ ಪಾದಗಳು ನನಗೆ ಶರಣ್ಯವು. ಸರ್ವೇಂದ್ರಿಯಗಳನ್ನು ಪ್ರೇರೇಪಿಸುವ ಆ ಮಹಾವಿಷ್ಣುವು ಹೃಷೀಕೇಶನೆಂದು ಹೆಸರುಗೊಂಡಿದ್ದಾನೆ. ಅವನೇ ವಿಶ್ವನಾಥ. ಶ್ರೀ ಮಹಾಲಕ್ಷ್ಮಿಯೊಡನೆ ಕೂಡಿ ಆ ದೇವದೇವನು ಕ್ಷೀರಸಾಗರದಲ್ಲಿ ನೆಲಸಿದ್ದಾನೆ. ಅವನು ಚತುರ್ಭುಜ. ಶಂಖ ಚಕ್ರ ಗದಾಧಾರಿ. ಮುರವೈರಿ. ಪದ್ಮಹಸ್ತ. ಪದ್ಮನಾಭನಾದ ಅವನು ನನ್ನ ಅಭೀಷ್ಟವನ್ನು ನೆರವೇರಿಸಲಿ. ಆ ನಾರಾಯಣ ಪೀತಾಂಬರಧಾರಿ. ಲೋಕಗಳನ್ನೆಲ್ಲಾ ಬೆಳಗಿಸುವ ವೈಜಯಂತಿಮಾಲೆಯನ್ನು ಧರಿಸಿರುವವನು. ಅಂತಹ ಮಹಾವಿಷ್ಣು ನನಗೆ ಹಿತವನ್ನುಂಟುಮಾಡಲಿ. ಅವನು ಶರಣಾಗತರ ಕೋರಿಕೆಗಳನ್ನು ನೆರವೇರಿಸುವವನು.

ಸರ್ವಸುರಶ್ರೇಷ್ಲರೂ, ಯಕ್ಷಗಂಧರ್ವಕಿನ್ನರರು, ಪರಮಾತ್ಮನ ಅಂಶವೇ ಆದ ಸಿದ್ಧ ಸಾಧ್ಯರು, ಋಷಿಸಮೂಹಕ್ಕೆಲ್ಲ ನಮಸ್ಕರಿಸುತ್ತಿದ್ದೇನೆ. ಸುಚರಿತ್ರರೂ, ನಿರ್ಮಲರೂ ಆದ ಕವಿಕುಲಸಮೂಹಕ್ಕೆಲ್ಲ ನನ್ನ ನಮಸ್ಕಾರ. ಪರಾಶರ, ವ್ಯಾಸ, ವಾಲ್ಮೀಕಿ ಮುಂತಾದ ಕವೀಶ್ವರರಿಗೆಲ್ಲ ನನ್ನ ನಮಸ್ಕಾರ. ಸಾಹಿತ್ಯವನ್ನರಿಯದ ನಾನು ಕವಿತಾರೀತಿನೀತಿಗಳನ್ನರಿಯದವನು. ಆದರೂ ನನ್ನನ್ನು ತಮ್ಮ ಸೇವಕನೆಂದೆಣಿಸಿ ನನ್ನನ್ನೂ ಕವಿಯೆಂದು ಕರೆಯಿರಿ. ನಾನು ಎಂದೂ ಗ್ರಂಥರಚನೆಯನ್ನು ಮಾಡಿಲ್ಲ. ಭಾಷಾ ಪ್ರವೀಣನಲ್ಲ. ಶಾಸ್ತ್ರಗಳನ್ನು ಅರಿತವನಲ್ಲ. ಹೇ ಕವೀಂದ್ರರೇ! ನಿಮಗೆಲ್ಲಾ ನಮಸ್ಕಾರಗಳು. ನೀವೆಲ್ಲರೂ ಕೂಡಿ ನನಗೆ ಒತ್ತಾಸೆಯಾಗಿ ನಿಲ್ಲಿ. ಕವಿತ್ವನ್ನರಿಯದ ನನ್ನನ್ನು ಕವಿಕುಲವೇ ಕಾಪಾಡಬೇಕು. ಹೀಗೆಂದು ಕವಿಕುಲಕ್ಕೆಲ್ಲಾ ನಮಸ್ಕರಿಸಿ ನನ್ನ ಪೂರ್ವೀಕರು, ಮಹಾಭಾಗರಾದ ಜನನೀಜನಕರುಗಳನ್ನು ಧ್ಯಾನಿಸುತ್ತೇನೆ.

ಆಪಸ್ತಂಭಶಾಖೆಗೆ ಸೇರಿದ ಕೌಂಡಿನ್ಯಗೋತ್ರೋದ್ಭವರಾದ ಸಾಖರೆ ಎಂಬ ಮನೆತನದ ಹೆಸರುಳ್ಳ ಗುರುದೇವರಾದ ಸಾಯಂದೇವರೆಂಬುವವರೊಬ್ಬರಿದ್ದರು . ಅವರ ಮಗ ನಾಗನಾಥ. ಆತನ ಮಗ ದೇವರಾಜು. ಅವರ ಪುತ್ರ ಗುರುಭಕ್ತನಾದ ಗಂಗಾಧರ. ಅವರು ನನ್ನ ತಂದಯವರು. ಶರಣ್ಯರಾದ ಅವರ ಪಾದಗಳಿಗೆ ನನ್ನ ನಮಸ್ಕಾರಗಳು. ನನ್ನ ತಾಯಿಯ ಪೂರ್ವೀಕರು ಆಶ್ವಲಾಯನ ಶಾಖೆಗೆ ಸೇರಿದವರು. ಆ ಶಾಖೆಯಲ್ಲಿ ಕಾಶ್ಯಪಗೋತ್ರೀಯರೂ ಇದ್ದಾರೆ. ನನ್ನ ಮಾತಾಮಹ ಗಂಗಾನದಿಗೆ ಜನಕರಾದ ಜಹ್ನುಮಹರ್ಷಿ, ಭಗೀರಥರಂತಹವರು. ಅವರ ಮಗಳು ಪಾರ್ವತಿಯಂತೆ ಪತಿವ್ರತೆ, ಸುಶೀಲೆ. ಆಕೆಯ ಹೆಸರು ಚಂಪ. ಆಕೆ ನನ್ನ ತಾಯಿ. ಜನನೀ ಜನಕರ ಪಾದಪದ್ಮಗಳಿಗೆ ನಮಸ್ಕಾರಮಾಡಿದ್ದುದರಿಂದಲೇ ನನ್ನ ಗುರುಭಕ್ತಿ ವಿಕಾಸಗೊಂಡಿದೆ. ಸದ್ಗುರು ಸ್ಮರಣೆಮಾಡುತ್ತಾ ಸದಾ ಏಕಾಗ್ರತೆಯಿಂದ ಸದ್ಗುರು ಚರಣಗಳಲ್ಲಿ ಸೇವೆಮಾಡುತ್ತಿದ್ದ. ನನಗೆ ಜನ್ಮ ಕೊಟ್ಟ ಗಂಗಾಧರರಿಗೆ ನನ್ನ ನಮಸ್ಕಾರಗಳು. ನಾನು ಸರಸ್ವತಿ ಎಂದು ಹೆಸರಾದವನು. ಸತ್ಪುರುಷರು ನನ್ನನ್ನು ಕ್ಷಮಿಸಬೇಕು. ಏಕೆಂದರೆ ನಾನು ಸಜ್ಜನರ ಪಾದಧೂಳಿಯಂತಹವನು. ವೇದಾಧ್ಯಯನ ತತ್ಪರರು, ಯತಿಗಳು, ಯೋಗೀಶ್ವರರು, ತಾಪಸಿಗಳು ಸದ್ಗುರುವನ್ನು ಬಹಳ ಪ್ರೇಮದಿಂದ, ಭಕ್ತಿಯಿಂದ ಭಜಿಸುತ್ತಾರೆ. ಅಂತಹವರಿಗೆ ನನ್ನಂತಹ ಅಲ್ಪಬುದ್ಧಿ ಪ್ರಾರ್ಥಿಸುತ್ತಿದ್ದಾನೆ. ನಾನು ಕಾವ್ಯ ರಚನೆಗೆ ತಕ್ಕ ಪಾಂಡಿತ್ಯವಿಲ್ಲದವನು. ಆದರೂ ಈ ಗುರುತರ ಕಾರ್ಯಕ್ಕೆ ಕೈಹಾಕಿದ್ದೇನೆ. ನಮ್ಮ ವಂಶದಲ್ಲಿ ದತ್ತ ಪ್ರಸನ್ನವಾಗುವುದು ಪರಂಪರೆಯಾಗಿ ಬಂದಿದೆ. ತನ್ನ ಕಥೆಯನ್ನು ಕೀರ್ತಿಸಲು ಆ ದತ್ತಸ್ವಾಮಿಯೇ ನನಗೆ ಪ್ರಚೋದನೆ ಕೊಟ್ಟಿದ್ದಾರೆ. “ದತ್ತ ಚರಿತ್ರೆ ಎಂಬ ಅಮೃತ ಭಾಂಡಾರವನ್ನು ನಿನಗೆ ಕೊಟ್ಟಿದ್ದೇನೆ. ಆದ್ದರಿಂದ ನೀನು ನನ್ನ ಕಥೆಯನ್ನು ರಚಿಸು. ಅದರಿಂದ ನಿನಗೂ, ನಿನ್ನ ವಂಶಕ್ಕೂ ಇಷ್ಟಾರ್ಥ ಸಿದ್ಧಿ ಆಗುತ್ತದೆ.” ಎಂದು ಶ್ರೀ ಗುರುವು ನನಗೆ ಆಣತಿಕೊಟ್ಟರು. ಗುರುವಾಕ್ಯ ಕಾಮಧೇನುವಿನಂತಹುದು. ಅದರಲ್ಲಿ ಯಾವ ಸಂಶಯವೂ ಇಲ್ಲ. ಆದ್ದರಿಂದ ದತ್ತ ಚರಿತ್ರೆ ರಚಿಸಿದೆ. ನೃಸಿಂಹ ಸರಸ್ವತಿಗಳು ತ್ರಿಮೂರ್ತ್ಯವತಾರರು. ಅವರ ಚರಿತ್ರೆಯನ್ನು ಸಾಂತವಾಗಿ ತಿಳಿದುಕೊಳ್ಳಲು ದೇವತಾಯುಸ್ಸು ಆದರೂ ಶಕ್ಯವಿಲ್ಲ. ಅನಂತವಾದ ಅವರ ಚರಿತ್ರೆ ಎಲ್ಲಿ? ಜಡಬುದ್ಧಿಯಾದ ನಾನೆಲ್ಲಿ? ಆದರೂ ಆ ಗುರುವಿನ ಪ್ರೇರಣೆ ಪ್ರೋತ್ಸಾಹಗಳಿಂದ ನನ್ನ ಬುದ್ಧಿಗೆ ಎಷ್ಟು ತಿಳಿಯುವುದೋ ಅಷ್ಟು ಹೇಳ ಬಯಸುತ್ತೇನೆ. ಪುತ್ರ,ಪೌತ್ರ, ಇಹ, ಪರ ಸುಖಗಳನ್ನು ಬಯಸುವಂತಹ ಮಾನವರಿಗೆ ಈ ಕಥೆಗಳು ರುಚಿಸುತ್ತವೆ. ಅಂತಹವರ ಮನೆಗಳಲ್ಲಿ ಲಕ್ಷ್ಮಿ ಸದಾ ನೆಲಸಿರುತ್ತಾಳೆ. ಈ ರಮಣೀಯ ಕಥೆಗಳನ್ನು ನಿತ್ಯವೂ ಓದುವವರ ಮನೆಗಳಲ್ಲಿ ಶ್ರೀದೇವಿ ನಲಿದಾಡುತ್ತಾಳೆ. ಅಂತಹ ಮನೆಗಳಲ್ಲಿ ವಾಸಮಾಡುವವರ ಕುಲ ಸುಶೀಲವಾಗಿ, ನಿರ್ಮಲವಾಗಿರುತ್ತದೆ. ಶ್ರೀ ಗುರುವಿನ ಕೃಪೆಯಿಂದ ಆ ಮನೆಗಳಲ್ಲಿ ರೋಗಪೀಡೆಗಳಿರುವುದಿಲ್ಲ. ದೀಕ್ಷೆಯಿಂದ ಗುರುಚರಿತ್ರೆಯ ಸಪ್ತಾಹ ಮಾಡಿದರೆ ಆದು ಮನೋರಥಗಳನ್ನೆಲ್ಲಾ ತೀರಿಸುವುದು. ಕಾರ್ಯಸಿದ್ಧಿ ಅನಾಯಾಸವಾಗಿ ತಪ್ಪದೇ ಆಗುವುದು. ಅಪ್ರಯತ್ನವಾಗಿ ಇಂತಹ ನಿಧಿ ದೊರೆತಿರುವಾಗ ಬೇರೆ ಶ್ರಮಗಳೇಕೆ? ನನ್ನ ಮಾತಿನಲ್ಲಿ ನಂಬಿಕೆಯಿದ್ದರೆ ತಕ್ಷಣವೇ ಫಲ ಅನುಭವಿಸಬಹುದು. ನಾನು ಅಂತಹ ಫಲವನ್ನು ಅನುಭವಿಸಿಯೇ ಕೇಳುಗರಲ್ಲಿ ಈ ರೀತಿ ಪ್ರಾರ್ಥಿಸುತ್ತಿದ್ದೇನೆ.. ಶ್ರೀ ದತ್ತ ಸ್ಮರಣೆ ತಕ್ಷಣವೇ ಇಷ್ಟಸಿದ್ಧಿಯನ್ನು ಕೊಡುವಂತಹುದು. ಹೊಟ್ಟೆ ತುಂಬಾ ತಿಂದವನಿಗೆ ತೃಪ್ತಿಯಿಂದ ತೇಗು ಬಂದಂತೆ ದತ್ತ ಸ್ಮರಣೆ ತೃಪ್ತಿಯನ್ನು ಉಂಟು ಮಾಡುತ್ತದೆ. ದತ್ತಾತ್ರೇಯ ಕಥೆ ಎನ್ನುವ ಅಮೃತವನ್ನು ಆಸ್ವಾದನೆಮಾಡಿ ನಾನು ತೇಗುತ್ತಿದ್ದೇನೆ. ನನ್ನ ಮಾತನ್ನು ಎಂದೂ ಉಪೇಕ್ಷೆ ಮಾಡಬೇಡಿ. ಜೇನುಹುಳುವಿನ ಮುಖದಲ್ಲಿ ರುಚಿಕರವಾದ ಮಧುವಿರುತ್ತದೆ., ಅಂದವಿಲ್ಲದ ಚಿಪ್ಪಿನಲ್ಲಿ ಅಂದವಾದ ಮುತ್ತು ದೊರೆಯುತ್ತದೆ. ಅಸ್ಪೃಶ್ಯವಾದ ಕಾಗೆಯ ಮಲದಿಂದ ಪೂಜನೀಯವಾದ ಅಶ್ವತ್ಥವೇ ಮುಂತಾದ ವೃಕ್ಷಗಳು ಹುಟ್ಟುತ್ತವೆ. ಮಲಿನವಾದ ಕಬ್ಬು ಮಧುರವಾದ ರಸ ನೀಡುತ್ತದೆ. ಅದರಂತೆಯೇ ಗುರುಸ್ಮರಣೆಯಲ್ಲಿ ಪ್ರೀತಿಯಿರುವವರು, ಅಲ್ಪನಾದ ನನ್ನಿಂದ ಹೊರಬಿದ್ದ ಈ ರಚನೆಯಿಂದ, ಉದಾಸೀನ ಮಾಡದೆ ಗುರುಕಥಾರಸವನ್ನು ಗ್ರಹಿಸಿ, ಸ್ವೀಕರಿಸಿ, ಆಸ್ವಾದಿಸಿ. ಈ ಕಥೆಯಿಂದ ಬ್ರಹ್ಮಾನಂದರಸಾಸ್ವಾದಫಲವನ್ನು ಗ್ರಹಿಸಿ ಆಸ್ವಾದಿಸಿ. ನನ್ನ ಈ ಮಾತುಗಳಲ್ಲ್ಲಿ ನಂಬಿಕೆಯಿರುವವರಿಗೆ ತಕ್ಷಣವೇ ಅದರ ಅನುಭವವಾಗುತ್ತದೆ. ಗುರುಕಥೆಯಿಂದ ಜ್ಞಾನ ಉಂಟಾಗುತ್ತದೆ. ಕಾಮಧೇನುವಿನಂತೆ ಕಾಮಿತಾರ್ಥಗಳನ್ನು ನೀಡುತ್ತದೆ. ನಾನು ಹೇಳುತ್ತಿರುವುದು ವ್ಯರ್ಥವಾದ ಮಾತುಗಳಲ್ಲ. ಕೇಳುಗರು ಶ್ರದ್ಧೆಯಿಂದ ಕೇಳಿ. ಶ್ರೀ ನೃಸಿಂಹ ಸರಸ್ವತಿ ಅವರು ಗಂಧರ್ವನಗರಿಯಲ್ಲಿ ಇದ್ದಾರೆ. ಅವರ ಮಹಿಮೆ ಅದ್ಭುತವಾದದ್ದು. ಮೂರುಲೋಕಗಳಲ್ಲೂ ವಿಖ್ಯಾತವಾದದ್ದು.

ಶ್ರೀ ದತ್ತ ಮಹಿಮೆಯನ್ನು ಮಾಹಾತ್ಮ್ಯವನ್ನು ಕೇಳಿದ ಸಹೃದಯರು ದೂರದೂರಗಳಿಂದಬಂದು ಆ ಸ್ವಾಮಿಯನ್ನು ಸೇವಿಸಿ ತ್ವರಿತವಾಗಿ ಫಲ ಪಡೆಯುತ್ತಿದ್ದಾರೆ. ಶ್ರೀಗಳ ಸೇವೆಯಿಂದ ಸ್ತ್ರೀಯರಿಗೆ ಪುತ್ರೋತ್ಪತ್ತಿ, ಧನಧಾನ್ಯಾದಿಗಳು ಮುಂತಾದ ಕಾಮಿತಾರ್ಥಗಳು ಲಭಿಸುತ್ತಿವೆ. ಗುರುದರ್ಶನದ ಸಂಕಲ್ಪದಿಂದಲೂ ಕೂಡ ಕಾಮಿತಾರ್ಥಗಳು ಈಡೇರುತ್ತಿವೆ. ಇದನ್ನೆಲ್ಲಾ ಕೇಳಿದ ನಾಮಧಾರಕನೆಂಬ ಬ್ರಾಹ್ಮಣಶ್ರೇಷ್ಠನೊಬ್ಬನು ಶ್ರೀಗುರುಚರಣಗಳನ್ನು ದರ್ಶಿಸಬೇಕೆಂಬ ಅಭಿಲಾಷೆಯಿಂದ ಕೂಡಿ, ಚಿಂತಾನ್ವಿತನಾಗಿ, ನಿರ್ವಿಣ್ಣನಾಗಿ , ಕಷ್ಟವ್ಯಾಕುಲಮನಸ್ಕನಾಗಿ, ನಾನು ಈ ಕರ್ತವ್ಯವನ್ನು ಸಾಧಿಸುವೆನು ಇಲ್ಲವೇ ಈ ಶರೀರವನ್ನು ವಿಸರ್ಜಿಸುವೆನು ಎಂದು ನಿಶ್ಚಯಮಾಡಿಕೊಂಡು ಮನೆಯಿಂದ ಹೊರಟನು. ಶ್ರೀಗುರುವಿನ ಪಾದದರ್ಶನಮಾಡದ ಈ ಜಡ ಶರೀರವಿದ್ದರೇನು? ಇಲ್ಲದಿದ್ದರೇನು? ಎಂದುಕೊಳ್ಳುತ್ತಾ ಗುರುಚರಣಗಳನ್ನು ಧ್ಯಾನಮಾಡುತ್ತಾ ಹಸಿವು ನೀರಡಿಕೆಗಳನ್ನು ಮರೆತು ಗುರು ಅಶ್ರಮವನ್ನು ಸೇರುವ ಸಂಕಲ್ಪದಿಂದ ಹೊರಟನು.

ಗುರುನಾಮ ಸ್ಮರಣೆಯಿಂದ ಮಾನವರ ದೈನ್ಯಗಳು ನಶಿಸಿಹೋಗಬೇಕಲ್ಲವೇ? ಆದರೂ ನನ್ನ ದೈನ್ಯತೆ ಏಕೆ ನಾಶವಾಗಲಿಲ್ಲ? ದೈವವೇ ಪ್ರತಿಕೂಲವಾದರೆ ನನ್ನ ಭಕ್ತಿಯಿಂದ ಆಗುವ ಪ್ರಯೋಜನವಾದರೂ ಏನು? ನಾನು ಹೀನ. ಪಾಪಿ. ಸ್ಪರ್ಶವೇದಿಯನ್ನು ಮುಟ್ಟಿದ ಲೋಹವು ಬಂಗಾರವಾಗುತ್ತದೆಯಲ್ಲವೇ? ನಿನ್ನ ನಾಮವೇ ಪಾಪಿಗಳ ತಾಪವನ್ನು ಹೋಗಲಾಡಿಸಬೇಕಲ್ಲವೇ? ನಿನ್ನ ನಾಮ ನನ್ನಲ್ಲಿರುವಾಗ ನನಗೆ ಏಕೆ ಕಷ್ಟಗಳು ಬರಬೇಕು? ಹೇ ಸದಾಶಿವಸ್ವರೂಪಾ, ಗುರುಮೂರ್ತಿ, ನನ್ನ ಮಾತುಗಳನ್ನು ಕೇಳಿ ನನಗೆ ನಿನ್ನ ದರ್ಶನ ಕೊಟ್ಟು ನಿನ್ನ ಪ್ರೀತಿಯನ್ನು ನಿರೂಪಿಸು. ನೀನು ಸರ್ವಭೂತ ದಯಾಳುವು. ಎಂದು ವ್ಯಾಕುಲಚಿತ್ತನಾಗಿ, ಭಕ್ತಿಯಿಂದ ಕೂಡಿದ ಗದ್ಗದವಚನಗಳಿಂದ ಗುರುವನ್ನು ಸ್ತುತಿಸಲುದ್ಯುಕ್ತನಾದನು. ಪಾಂಡುರಂಗ ವಿಘ್ನೇಶ್ವರ ಶಾರದೆಯರನ್ನು ನಮಸ್ಕರಿಸಿ ನಾಮಧಾರಕ ಶ್ರೀಗುರುವನ್ನು ಸ್ತುತಿಸಲುಪಕ್ರಮಿಸಿದನು.

ಶ್ರೀನಾಥನೆಂದು, ಶ್ರೀಗುರುವೆಂದು ಶ್ರುತಿಸ್ಮೃತಿಗಳು ಹೊಗಳುತ್ತವೆ. ಕಲಿಯುಗದಲ್ಲಿ ನೀನೇ ತಕ್ಷಣಫಲದಾತನು ಎನ್ನುತ್ತಾರೆ. ಕಲಿಯುಗದಲ್ಲ್ಲಿ ಶ್ರೀ ನೃಸಿಂಹ ಸರಸ್ವತಿ ನೀನೇ ಎಂದು ಖ್ಯಾತನಾಗಿದ್ದೀಯೆ. ಹೇ ಕೃಪಾನಿಧಿ, ನೀನು ಭಕ್ತಸಾರಥಿಯೆಂದು ಪ್ರಸಿದ್ಧಿ ಪಡೆದಿದ್ದೀಯೆ. ಕೃಪಾಸಿಂಧು, ಭಕ್ತಬಂಧು, ವೇದಗಳು ನಿನ್ನನ್ನು ಹೊಗಳುತ್ತವೆ. ನೀನು ಗುರುನಾಥ. ಪುಣ್ಯಚರಿತ. ತ್ರಿಗುಣಸ್ವರೂಪ. ನೀನೇ ನನ್ನ ರಕ್ಷಕ. ನೀನು ತ್ರಿಗುಣಾತ್ಮಕನಾದರೂ ಒಬ್ಬನೇ! ನೀನೇ ಅವ್ಯಯವಾದ ಬೀಜ. ಹೇ, ದಯಾನಿಧಿ, ಭಕ್ತರ ಸಂಕಟಹರಿಸಿ ರಕ್ಷಿಸುವವನೂ ನೀನೇ! ನೀನೇ, ಯತಿರಾಜ, ಶ್ರೀನಾಥಾ, ನಿನ್ನಲ್ಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ. ಅಷ್ಟಸಾತ್ವಿಕ ಚಿಹ್ನೆಗಳನ್ನು ನನ್ನ ಮನಸ್ಸಿನಲ್ಲಿ ಏಕೆ ನಿಲಿಸುತ್ತಿಲ್ಲ?ನನ್ನ ಮನಸ್ಸು ಚಂಚಲವಾಗಿದೆ. ಸ್ಥಿರವಾಗಿ ನಿಲ್ಲುತ್ತಿಲ್ಲ. ಬಾ, ತಂದೆ, ಬೇಗ ಬಂದು ನನ್ನನ್ನು ರಕ್ಷಿಸು.

“ಹೇ ನರಹರಿ, ಅನಂತಾ, ಸರ್ವವ್ಯಾಪಿ, ತ್ವರೆಮಾಡು. ನನ್ನಲ್ಲಿ ದಯೆತೋರು. ಅಳುತ್ತಿರುವ ಮಗುವನ್ನು ಕಂಡ ಕೂಡಲೇ ತಾಯಿ ಓಡಿ ಬರುತ್ತಾಳೆಯಲ್ಲವೆ? ನೀನೇ ನನ್ನ ತಾಯಿ, ತಂದೆ, ಸಖ, ನನ್ನ ವಂಶವೆನ್ನುವುದು ಲೌಕಿಕ ವ್ಯವಹಾರಕ್ಕೆ ಮಾತ್ರವೇ. ನೀನೇ ನನ್ನ ಕುಲದೈವ. ಹಾಗೆಂದೇ ಭಕ್ತಿಯಿಂದ ನಿನ್ನನ್ನು ಭಜಿಸುತ್ತಿದ್ದೇನೆ. ನೀನು ಸರ್ವಗತನು. ನೀನೇ ನೃಸಿಂಹ ಸರಸ್ವತಿ. ಸರಸ್ವತಿ ಎನ್ನುವ ಹೆಸರೇ ನನ್ನನ್ನು ನಿನಗೆ ಅರ್ಪಿತಮಾಡಿಕೊಂಡಿದ್ದು. ನೀನೇ ನನ್ನ ಆಶ್ರಯದಾತ. ನಿನ್ನ ದ್ವಾರಸ್ಥನಾದ ನನಗೇಕೆ ಇಷ್ಟು ದೈನ್ಯ? ಇಷ್ಟು ಸಂಕಟ? ಈ ಚಿಂತೆ ಸಂಕಟಗಳನ್ನು ನನಗೇಕೆ ಉಂಟುಮಾಡಿದ್ದೀಯೋ ಹೇಳು ಭಕ್ತವತ್ಸಲನೆಂದು ನೀನು ಪ್ರಸಿದ್ಧನಲ್ಲವೇ? ಕೃಪಾನಿಧಿ, ದೀನಬಂಧು, ಅನಂತ ಸದ್ಗುಣಗಳ ಮೂರ್ತಿ. ಹೇ ಅನಂತ, ನೀನೇ ಪರಮಾತ್ಮ. ತ್ರಿನಾಥ. ದಯಮಾಡು. ನನ್ನನ್ನು ಬಿಡಬೇಡ. ಹೇ ವಿಶ್ವಪಾಲಕಾ, ನೀನು ದಯಾಳುವೆಂದು ಖ್ಯಾತಿಪಡೆದವನಲ್ಲವೇ? ದೇವತೆಗಳಲ್ಲೆಲ್ಲ ನೀನೇ ಬಹುದಾತನು. ದೇವತೆಗಳಿಗೂ ನೀನೇ ಬಹುದಾತ. ಹೇ ಸದ್ಗುರು, ನಿನ್ನನ್ನು ಬಿಟ್ಟು ನಾನು ಇನ್ನಾರನ್ನು ಯಾಚಿಸಲಿ? ನೀನೇ ನನ್ನ ದಾತ. ನೀನೇ ನನ್ನ ಪರದೈವವಲ್ಲವೇ? ನಿನಗಿಂತ ಬೇರೆ ದಾತರಿನ್ನಾರಿದ್ದಾರೆ? ಈ ವಿಶ್ವಕ್ಕೆಲ್ಲಾ ನೀನೇ ನಿತ್ಯಪೋಷಕ. ನೀನೇ ಸರ್ವವೇತ್ತ, ಸರ್ವಜ್ಞ ಎಂದು ಶ್ರುತಿಗಳು ಸಾರುತ್ತಿವೆ. ಸರ್ವಜ್ಞನಾದ ನಿನಗೆ ನಾನು ಸಾಕ್ಷಿ ಹೇಗೆ ಆಗಬಲ್ಲೆ? ಸರ್ವಸಾಕ್ಷಿತ್ವವೆನ್ನುವ ಲಕ್ಷಣ ನಿನ್ನಲ್ಲೇ ಇದೆ. ಅದರಿಂದ ನೀನು ನನ್ನನ್ನು ಉಪೇಕ್ಷಿಸಲಾಗದು. ಯಾರು, ಎಲ್ಲಿ, ಹೇಗೆ ಎನ್ನುವುದೆಲ್ಲಾ ನಿನಗೆ ತಿಳಿಯುತ್ತದೆಯಲ್ಲವೇ? ಹಾಗಿರುವಾಗ, ಹೇ ದಯಾಳು ಈ ಉಪೇಕ್ಷೆಯಾಕೆ? ನೀನು ಸರ್ವವೇತ್ತನಾದದ್ದರಿಂದ ನನ್ನ ಸ್ಥಿತಿ ಹೇಗೆ ಎನ್ನುವುದು ತಿಳಿಯುತ್ತದೆಯಲ್ಲವೇ? ಹೇ ತಂದೆ, ಈ ಬಾಲಕ ಹಸಿದುಗೊಂಡಿದ್ದಾನೆ ಎಂಬುದು ನಿನಗೆ ತಿಳಿಯದೇ? ತನ್ನ ಮಗು ಹಸಿದುಗೊಂಡು ಅಳುತ್ತಿದೆ ಎಂಬುದನ್ನು ತಿಳಿದ ಮಾನವಮಾತ್ರಳಾದ ಯಾವ ತಾಯಿತಾನೇ ಅದನ್ನು ಉಪೇಕ್ಷಿಸುತ್ತಾಳೆ? ದೇವನಾದ ನೀನು ಸುಮ್ಮನೇಕಿದ್ದೀಯಾ? ನನಗೆ ಇವನೇನೂ ಕೊಟ್ಟಿಲ್ಲ ಎಂದು ನನ್ನನ್ನು ಉಪೇಕ್ಷಿಸುತ್ತಿದ್ದೀಯ ಹೇಳು? ಹೇ ಬಹುಪ್ರದ, ನನ್ನಿಂದ ಸ್ವಲ್ಪ ಗ್ರಹಿಸಿ ನನಗೆ ಅಧಿಕವಾಗಿ ಕೊಡಬೇಕೆಂದುಕೊಂಡಿದ್ದೀಯಾ? ನೀನು ಬಲಿಚಕ್ರವರ್ತಿಯಿಂದ ಸಮಸ್ತಭುವನವನ್ನು ಗ್ರಹಿಸಿ ಅವನಿಗೆ ಸ್ವರ್ಗರಾಜ್ಯ ನೀಡಿ ಪ್ರಸಿದ್ಧಿಯಾದೆ ಎಂದು ಹೇಳುತ್ತಾರೆ. ಇನ್ನೊಂದು ಮಾತು. ನೀನು ವಿಭೀಷಣನಿಗೆ ಸ್ವರ್ಣಮಯವಾದ ಲಂಕೆಯನ್ನು ಕೊಟ್ಟೆಯಲ್ಲವೇ? ಹೇ ಈಶ್ವರಾ, ಅವನು ಅದಕ್ಕೆ ಮುಂಚೆ ನಿನಗೇನು ಕೊಟ್ಟಿದ್ದ? ಹಿಂದೆ ನೀನು ಧ್ರುವನಿಗೆ ಧೃವಸ್ಥಾನವನ್ನು ಕೊಟ್ಟೆಯಲ್ಲವೆ? ಆ ಧ್ರುವ ನಿನಗೇನು ಕೊಟ್ಟಿದ್ದ? ಇಷ್ಟೆಲ್ಲಾ ಇದ್ದರೂ ನನ್ನನ್ನು ಏನಾದರೂ ಕೊಡು ಎಂದು ಏಕೆ ಕೇಳುತ್ತೀಯೆ? ನೀನು ಸೇವಕರ ಪರಿಪಾಲಕ. ಕ್ಷತ್ರಿಯರನ್ನು ನಿಶ್ಶೇಷಮಾಡಿ ಗೆದ್ದ ಭೂಮಿಯನ್ನೆಲ್ಲಾ ಬ್ರಾಹ್ಮಣರಿಗೆ ಪರಶುರಾಮನಾಗಿ ಹಂಚಿದೆ. ಆ ವಿಪ್ರರು ನಿನಗೇನು ಕೊಟ್ಟರು? ಹೇ ಪೋಷಕಾ, ನಿನಗೆ ನಾನೇನು ಕೊಡಬಲ್ಲೆ? ಸರ್ವಸೃಷ್ಟಿಗೂ ನೀನೇ ಪೋಷಕ. ಹೇ ಲಕ್ಶ್ಮೀಪತಿ, ದರಿದ್ರನಾದ ನಾನು ನಿನಗೇನು ಕೊಡಬಲ್ಲೆ? ನಾನು ಮಶಕದಂತೆ ದುರ್ಬುದ್ಧಿಯುಳ್ಳವನು. ಪರಾಧೀನನಾದ ನಾನೆಲ್ಲಿ? ಶ್ರೀಮಂತನಾದ ನೀನೆಲ್ಲಿ? ಮಹಾಲಕ್ಷ್ಮಿ ವಿಲಾಸದಿಂದ ನಿನ್ನೆದುರಿಗೆ ನರ್ತನಮಾಡುತ್ತಾಳೆ. ಹೇ ಸದಾನಂದಾ, ಇದಕ್ಕಿಂತ ಹೆಚ್ಚಾಗಿ ಏನನ್ನುತಾನೇ ಕೊಡಬಲ್ಲೆ ನೀನೇ ಹೇಳು. ಹೇ ಹೃಷೀಕೇಶ, ನಾನೊಬ್ಬ ಗರ್ವಗಂಧಿ. ನಿನ್ನ ಮಗು. ಮಗು ತಾಯಿಯ ಉಡಿಸೇರಿ ಕ್ಷುಧಾತುರನಾಗಿ, ದೀನನಾಗಿ ಹಾಲು ಕೇಳುವಂತೆ ಮುಖ ತೋರಿಸಿದಾಗ ಆ ತಾಯಿ ಮಗುವನ್ನು ಮೊದಲು ಏನಾದರೂ ಕೊಡು ಎಂದು ಕೇಳುತ್ತಾಳೆಯೇ? ಹೇ ಗುರುನಾಥಾ, ಆದರೆ ನೀನೀಗ ಕೇಳುತ್ತಿದ್ದೀಯೆ. ನಾನೇನು ಕೊಡಬಲ್ಲೆ? ಏನಾದರು ತೆಗೆದುಕೊಂಡು ಕೊಡುವವನು, ಸೇವೆ ಮಾಡಿಸಿಕೊಂಡು ಕೊಡುವವನು ದಾತ ಹೇಗಾಗುತ್ತಾನೆ?
ಹೇ ದಯಾರ್ದ್ರಹೃದಯಾ, ಸದ್ಗುರು, ದಯಾನಿಧಿ, ನಿನ್ನೆದುರಿಗೆ ನಾನು ಹೇಳುವುದು ತಾನೇ ಏನಿದೆ?”

“ಹೇ ಕೊಡುಗೈದಾತ, ಸದ್ಗುರು, ದಯಾನಿಧೇ, ನಿನ್ನ ಮುಂದೆ ನಾನೇನು ಹೇಳಬಲ್ಲೆ? ಈಗ ನನ್ನನ್ನು ಕೊಡು ಎಂದು ಕೇಳುವುದು ನಿನಗೆ ತರವಲ್ಲ. ಹೇ ಪ್ರಭು, ಹದಿನಾಲ್ಕು ಲೋಕಗಳ ರಕ್ಷಕ ನೀನು. ’ಸೇವೆ ಮಾಡಿಸಿಕೊಂಡೇ ನೀಡುವುದು ನನ್ನ ಇಚ್ಛೆ. ಆದ್ದರಿಂದ ನಿನ್ನ ಅಭೀಷ್ಟವನ್ನು ತೀರಿಸಲು ಸಾಧ್ಯವಿಲ್ಲ.’ ಎಂದು ನೀನು ಹೇಳಬಾರದು. ಸೇವೆಯನ್ನಿಚ್ಛಿಸಿ ಕೊಡುವವನು ಹೊಡುಗೈದಾತ ಹೇಗಾದಾನು? ಸೇವ್ಯ-ಸೇವಕ ಎಂಬ ಭಾವವಿರುವೆಡೆಯಲ್ಲಿ ದಾತೃತ್ವಕ್ಕೆಲ್ಲಿದೆ ಜಾಗ? ಹೇ ಭಗವಂತ, ಭಕ್ತಿಯೋಗವನ್ನು ತಿಳಿದವನು ನೀನು. ಅಕಾಶದಲ್ಲಿನ ಮೇಘಗಳು ಭೂಮಿಯಲ್ಲಿ ವಾಪಿಕೂಪಗಳಿರುವ ಕಡೆ ಯಾವ ಅಪೇಕ್ಷೆಯೂ ಇಲ್ಲದೆ ನೀರು ಸುರಿಸುತ್ತವೆ. ಹಾಗೆ ನೀರು ಸುರಿಸುವ ಮೇಘಗಳಿಗೆ ವಾಪಿಕೂಪಗಳು ಯಾವ ಸೇವೆಯನ್ನೂ ಮಾಡುವುದಿಲ್ಲ ಎಂಬುದು ತಥ್ಯವಲ್ಲವೇ? ನೀನು ಈಶ್ವರ. ವೇತನ ಗ್ರಾಹಿಯಲ್ಲ. ಸೇವೆಯನ್ನಪೇಕ್ಷಿಸುವವನು ದಾತ ಹೇಗಾದಾನು? ನೀನು ಉದಾರನೆಂದು ಹೇಗೆ ಶ್ಲಾಘಿಸಲಿ? ಹೇ ಸ್ವಾಮಿ, ಸೇವೆ ಮಾಡಬಾರದೆಂಬ ಹಠವೇನೂ ನನ್ನಲ್ಲಿಲ್ಲ. ಸೇವೆ ಹೇಗೆ ಮಾಡಬೇಕೆಂಬುದು ನನಗೆ ತಿಳಿಯದು.

ದೇವ ದೇವ, ನನ್ನ ಪೂರ್ವಿಕರೆಲ್ಲರು ನಿನ್ನ ಸೇವಕರೇ ಆಗಿದ್ದರಲ್ಲವೇ? ನಾನು ಸೇವಕ ವಂಶದಲ್ಲಿ ಹುಟ್ಟಿದವನು. ನಾನೊಬ್ಬ ಆಲಸಿ. ದುಷ್ಟಬುದ್ಧಿಯವನು. ಆದರೂ ಈ ದರಿದ್ರನನ್ನು ನಿನ್ನ ಸೇವಕನೆಂದು ತಿಳಿದುಕೊ. ಹೇ ಸ್ವಾಮಿ, ಸೇವಕನ ವಂಶದಲ್ಲಿ ಜನಿಸಿದವರನ್ನು ಈ ಲೋಕದಲ್ಲಿ ರಾಜನಾದವನು ಪುತ್ರವತ್ ರಕ್ಷಿಸುತ್ತಾನೆಂಬುದು ಪ್ರಸಿದ್ಧವಲ್ಲವೇ? ಆ ನ್ಯಾಯದಿಂದಲಾದರೂ ನಾನು ಈಗ ಸೇವಕನಲ್ಲದಿದ್ದರೂ ನನ್ನನ್ನು ರಕ್ಷಿಸು. ನಿನ್ನ ಸೇವಕರಾದ ನನ್ನ ಪೂರ್ವಿಕರು ನಿನ್ನ ಪಾದಗಳಲ್ಲಿ ನಿರಪೇಕ್ಷೆಯಿಂದ ಸೇವೆ ಮಾಡಿದ್ದಾರೆ. ಆದ್ದರಿಂದ ನೀನು ನನಗೆ ಋಣಪಟ್ಟಿದ್ದೀಯೆ. ಆ ನನ್ನ ಋಣವನ್ನು ತೀರಿಸುವುದಕ್ಕಾದರೂ ನನ್ನನ್ನು ರಕ್ಷಿಸು.

ಹೇ ಕೃಪಾನಿಧಿ, ನಮ್ಮಿಂದ ಪಡೆದ ಋಣವನ್ನು ನಮಗೇ ಕೊಡಬೇಕು. ನೀನು ನನ್ನ ಋಣವನ್ನು ತೀರಿಸದಿದ್ದರೆ ಸಾಲಗಾರನೆಂದು ನಿನ್ನನ್ನು ತಪ್ಪಿತಸ್ಥನನ್ನಾಗಿ ಎಣಿಸುತ್ತೇನೆ. ಹೇ ಪರಮೇಶ್ವರ, ನೀನು ಕಾಠಿಣ್ಯವನ್ನು ತೋರಿಸುತ್ತಿರುವಂತಿದೆ. ಈ ಸನಾತನ ಸೇವಕನಲ್ಲಿ ಕಾಠಿಣ್ಯವೇಕೆ ತಂದೆ? ಹೇ ಸ್ವಾಮಿ, ಸೇವಕನಲ್ಲಿ ಸ್ವಾಮಿಗೆ ಸ್ಪರ್ಧೆಯೇಕಯ್ಯ? ಸ್ಪರ್ಧೆ ಎನ್ನುವುದು ಸಮಾನರ ಮಧ್ಯೆ ಮಾತ್ರ ಸಮಂಜಸವಲ್ಲವೇ? ಹೇ ಈಶ್ವರ, ನಾನೆಲ್ಲಿ, ನೀನೆಲ್ಲಿ. ಭಕ್ತವತ್ಸಲನಾದ ನಿನ್ನ ಮನಸ್ಸು ಇದಕ್ಕೆ ಮುಂಚೆ ಬಹಳ ಮೃದುವಾಗಿತ್ತು. ದೈತ್ಯರು ಹಿಂಸಿಸಿದ ಪ್ರಹ್ಲಾದನಲ್ಲಿ ನೀನು ತೋರಿಸಿದ ವಾತ್ಸಲ್ಯ ಬಹಳ ಪ್ರಸಿದ್ಧಿಯಾದುದಲ್ಲವೇ? ದಯನೀಯನಾದ ಸೇವಕ ಅಪರಾಧ ಮಾಡಿದರೆ ದಯಾಳುವಾದ ಸ್ವಾಮಿ ಅವನ ಮೇಲೆ ಕಠಿಣನಾಗುವುದು ಅವನಿಗೆ ಶೋಭೆ ತರುವಂತಹುದೇ? ನನ್ನ ಅಪರಾಧದಿಂದ ನಿನ್ನ ಮನಸ್ಸು ನನ್ನ ಮೇಲೆ ಕ್ರೋಧಗೊಂಡಿದೆಯೇ/ ಅಸಂಗತ ಮಾತುಗಳನ್ನಾಡಿದ ಈ ಬಾಲಕನನ್ನು ಕರುಣೆಯಿಂದ ನೋಡುವುದಿಲ್ಲವೇ? ಅಸಂಬದ್ಧಮಾತುಗಳನ್ನಾಡುತ್ತಾ ತೊಡೆಯಮೇಲೆ ಕುಳಿತ ತನ್ನ ಮಗುವನ್ನು. ಮಾತುಮಾತಿಗೂ ಹೊಡೆಯುತ್ತಿದ್ದರೂ, ಮಾನವ ಮಾತ್ರಳಾದ ತಾಯಿಯು ಆ ಬಾಲಕನ ಮೇಲೆ ಕೋಪಗೊಂಡು ಬಿಟ್ಟುಬಿಡುತ್ತಾಳೆಯೇ? ಹಾಗಲ್ಲದೆ ಅವಳು ಆ ಮಗುವನ್ನು ಅಪ್ಪಿಕೊಂಡು ಮುದ್ದುಮಾಡುತ್ತಾಳೆಯಲ್ಲವೇ?

ದೇವದೇವ ಏಕೆ ಮೌನವಾಗಿದ್ದೀಯೆ? ನಾನು ಮಾಡಿದ ತಪ್ಪಾದರೂ ಏನು? ಇನ್ನೂ ಏನೆಂದು ನಿನ್ನನ್ನು ಪ್ರಾರ್ಥಿಸಲಿ? ಹೃಷೀಕೇಶ, ನೀನೇ ನನ್ನ ತಂದೆ. ಪರಮೇಶ್ವರ, ತಂದೆ ತನ್ನ ಮಗನಮೇಲೆ ಕೋಪಗೊಳ್ಳುತ್ತಾನೆಯೇ? ತಂದೆ ಮಗನ ಮೇಲೆ ಕೋಪಗೊಂಡರೆ ತಾಯಿ ಅವನನ್ನು ಸಮಾಧಾನ ಮಾಡುತ್ತಾಳೆ. ಮತ್ತೊಮ್ಮೆ, ಅಪರಾಧವೆಸಗಿದ ಮಗನಮೇಲೆ ತಾಯಿ ಕೋಪಗೊಂಡರೆ ತನ್ನ ದುಃಖವನ್ನು ಹೇಳಿಕೊಳ್ಳಲು ಬಂದ ಮಗನನ್ನು ತಂದೆ ಸಮಾಧಾನಗೊಳಿಸುತ್ತಾನೆ. ನನಗೆ ತಾಯಿ ತಂದೆ ಇಬ್ಬರೂ ನೀನೇ ಅಲ್ಲವೇ? ನಿಮಿತ್ತ-ಉಪಾದಾನ ಕಾರಣದಿಂದ ಜನನಿ ಜನಕರಿಗಿಂತ ನೀನು ಭಿನ್ನನಲ್ಲ. ಸದ್ಗುರು ನೀನೇ ಕೃದ್ಧನಾದರೆ ಕ್ಷಮಿಸೆಂದು ಯಾರನ್ನು ಕೇಳಿಕೊಳ್ಳಲಿ? ಸ್ವಾಮಿ, ನನ್ನ ಮೇಲೆ ದಯೆತೋರು. ದೀನವತ್ಸಲ. ಅನಾಥಬಂಧು. ನಿನ್ನ ಮುಂದೆ ಸಾಷ್ಟಾಂಗವೆರಗುತ್ತಿರುವ ನಾನು ನಿನ್ನ ದಾಸ. ದೀನ. ನನ್ನನ್ನು ರಕ್ಷಿಸು ತಂದೆ. ನೀನು ಅನಾಥರಕ್ಷಕನೆಂದು ಹೇಳುತ್ತಾರೆ. ಹೇ ಅನಾಥನಾಥ, ನಾನೊಬ್ಬ ಅನಾಥ. ನನ್ನನು ಕಾಪಾಡು. ಕೃಪಾಳು, ನೀನು ದೀನರ ರಕ್ಷಕನೆಂದು ವೇದಗಳು ವರ್ಣಿಸುತ್ತಿವೆ. ನೀನು ಏಕೆ ನನ್ನ ಬಿನ್ನಪವನ್ನು ಕಿವಿಯಲ್ಲಿ ಹಾಕಿಕೊಳ್ಳುತ್ತಿಲ್ಲ? ಯಾವ ಕಾರಣಕ್ಕಾಗಿ ನನ್ನ ಈ ದೀನಾಲಾಪಗಳು ನಿನ್ನ ಕಿವಿಯನ್ನು ಸೇರುತ್ತಿಲ್ಲ? ಗುರುರಾಜ, ನೀನು ವಿಮನಸ್ಕನಾದರೆ ಹೇಗೆ ಸ್ವಾಮಿ? ನೀನು ನಿರ್ದಯತ್ವವನ್ನು ವಹಿಸಿದ್ದೀಯೆ ಎಂದು ನನಗೆ ತೋರುತ್ತಿದೆ. ಏಕೆಂದರೆ ನನ್ನ ಈ ಬಿನ್ನಪಗಳನ್ನು ಕೇಳಿದರೆ ಕಲ್ಲೂ ಕೂಡಾ ಕರಗುತ್ತದೆ. ನಿನ್ನ ದಯೆ ಎಲ್ಲಿ ಅಡಗಿಹೋಗಿದೆ ತಂದೆ? ಜನ ನಿನ್ನನ್ನು ಹೇಗೆ ಕರುಣಾಕರ ಎನ್ನುತ್ತಾರೆ? ಹೇ ಸ್ವಾಮಿ, ನೀನು ದಯಾಘನನೆನ್ನುವುದೇ ನಿಜವಾದರೆ ಈಗಲೇ ನನ್ನ ಮೇಲೆ ದಯೆ ತೋರಿಸು.” ಎಂದು ಹೇಳುತ್ತಾ ಮೂರ್ಛಿತನಾದನು. ದಯಾಸಿಂಧುವಾದ ಆ ಗುರುನಾಥ, ಭಯಗೊಂಡ ತನ್ನ ಕರುವಿನಮೇಲೆ ವಾತ್ಸಲ್ಯವನ್ನು ತೋರುವ ಹಸು ಓಡಿ ಬರುವಂತೆ, ತಕ್ಷಣವೇ ನಾಮಧಾರಕನಿಗೆ ಸ್ವಪ್ನದಲ್ಲಿ ಸಾಕ್ಷಾತ್ಕರಿಸಿದನು.

ಸ್ವಪ್ನದಲ್ಲಿ ನಾಮಧಾರಕನು ಎದ್ದು, ಬಂದಿದ್ದ ಗುರುವಿನ ಪಾದಗಳಲ್ಲಿ ಸಾಷ್ಟಾಂಗವೆಸಗಿ, ಗುರುವಿನ ಪಾದಗಳನ್ನು ಹಿಡಿದುಕೊಂಡನು. ಪಾದಗಳ ಮೇಲಿದ್ದ ಧೂಳನ್ನು ತನ್ನ ಕೂದಲಿನಿನಂದ ಒರೆಸಿ, ಆನಂದದಿಂದ ಸುರಿಯುತ್ತಿದ್ದ ಬಾಷೊಅಜಲಿಗಳಿಂದ ತೊಳೆದನು. ಉಪಚಾರಗಳನ್ನೆಲ್ಲಾ ಮಾಡಿ, ಶುಭವಾದ ಗಂಧಾಕ್ಷತೆಗಳಿಂದ ಅಲಂಕರಿಸಿ, ಆ ಈಶ್ವರನನ್ನು ತನ್ನ ಹೃದಯಮಂದಿರದಲ್ಲಿ ಪ್ರತಿಷ್ಠಿಸಿಕೊಂಡು, ಆನಂದಭರಿತನಾದ ಆ ನಾಮಧಾರಕ ಗುರುವಿಗೆ ಸದ್ಭಕ್ತನಾದನು.

ಆ ಭಕ್ತನನ್ನು ನೋಡಿದ ಗುರುವು ಅವನ ಮನಸ್ಸಿನಲ್ಲಿ ಸಿದ್ಧಮುನಿಯಾಗಿ ನಿಂತನು. ಸಂತೋಷದಿಂದ ಗುರುನಾಥನು ತನ್ನ ನಿಜಭಕ್ತನ ಹೃದಯದಲ್ಲಿ ನೆಲೆನಿಂತದ್ದರಿಂದ ಉಂಟಾದ ಆನಂದವು ತನಗೂ ಉಂಟಾಗಲೆಂದು ಸರಸ್ವತಿಯು ಮೋದಿತಳಾದಳು.

||ಇತಿ ಶ್ರೀಗುರುಚರಿತ್ರ ಪರಮಕಥಾಕಲ್ಪತರೌ ಶ್ರೀ ನೃಸಿಂಹಸರಸ್ವತ್ಯುಪಾಖ್ಯಾನೇ ಜ್ಞಾನಕಾಂಡೇ ಇಷ್ಟವಂದನ ನಾಮಧಾರಕ ಸಂದರ್ಶನೇ ನಾಮ ಪ್ರಥಮೋಧ್ಯಾಯಃ ಸಂಪೂರ್ಣಂ||

Leave a comment

Filed under ಶ್ರೀ ಗುರು ಚರಿತ್ರೆ